ಶರಣ ಅಲ್ಲಮ ಪ್ರಭುಗಳ ವಚನಗಳು

ಅಂಕಿತ: ಗುಹೇಶ್ವರಾ

ಕಾಯಕ: todo

ವಿವರಣೆ : todo

  1. ಅಂಗ ಅಂಗನೆಯ ರೂಪಲ್ಲದೆ,
    ಮನ ವಸ್ತುಭಾವದಲ್ಲಿ ಬೆಚ್ಚಂತಿಪ್ಪುದು.
    ಬಂದ ಕಥನದಲ್ಲಿ ಬಂದು ಹಿಂಗಿದೆಯಲ್ಲಾ ಅಕ್ಕಾ !
    ಗುಹೇಶ್ವರಲಿಂಗದಲ್ಲಿ ಉಭಯನಾಮವಳಿದೆ ಎನ್ನಕಾ/1

  2. ಅಂಗ ಅನಂಗವೆಂಬೆರಡೂ ಅಳಿದು ನಿಜದಲ್ಲಿ ನಿಂದ ಲಿಂಗೈಕ್ಯನ
    ಅಂಗದಲುಳ್ಳ ಕ್ರೀಗಳೆಲ್ಲವೂ ಲಿಂಗಕ್ರೀಗಳು ನೋಡಾ.
    ಮನೋಲಯವಾಗಿಪ್ಪ ಲಿಂಗೈಕ್ಯನ ಅನುಭಾವವೆಲ್ಲವೂ
    ಜ್ಞಾನನಷ್ಟ ಶಬ್ದ ನೋಡಾ. ಳ
    ತನ್ನಲ್ಲಿ ತಾನು ತದ್ಗತವಾಗಿಪ್ಪ ಶಿವಯೋಗಿಗೆ
    ಬಿನ್ನವಿಲ್ಲ ನೋಡಾ- ಗುಹೇಶ್ವರ ಸಾಕ್ಷಿಯಾಗಿ/2

  3. ಅಂಗ ಉಳ್ಳನ್ನಬರ ಲಿಂಗಪೂಜೆಯ ಬೇಕು.
    ಲಿಂಗವೆಂಬ ಮೂರ್ತಿ ಉಳ್ಳನ್ನಬರ ಸಂದಿಲ್ಲದೆ ಅರ್ಪಿಸಬೇಕು.
    ಅಂಗವಳಿದ ಮತ್ತೆ ಲಿಂಗವೆಂಬ ಭಾವ ಹಿಂಗದಿರಬೇಕು.
    ಅದು ಗುಹೇಶ್ವರಲಿಂಗದ ಇರವು ಚಂದಯ್ಯಾ./3

  4. ಅಂಗ ಮೂವತ್ತಾರರ ಮೇಲೆ ಲಿಂಗ.
    ನಿಸ್ಸಂಗವೆಂಬ ಕರದಲ್ಲಿ ಹಿಡಿದು ಅಂಗವಿಸಿ,
    ಅಹುದು ಆಗದು ಎಂಬ ನಿಸ್ಸಂಗದ ಅರ್ಪಣವ ಮಾಡಿ
    ಸುಸಂಗ ಪ್ರಸಾದವ ಕೊಳಬಲ್ಲವಂಗೆ
    ಗುಹೇಶ್ವರಾ, ಮುಂದೆ ಬಯಲು ಬಯಲು ಬಟ್ಟ ಬಯಲು !/4

  5. ಅಂಗ ಲಿಂಗದಲ್ಲಿ ತರಹರವಾಗಿ, ಸಮತೆ ಶಾಂತಿಯಲ್ಲಿ ತರಹರವಾಗಿ,
    ಮನ ಜ್ಞಾನದಲ್ಲಿ ತರಹರವಾಗಿ, ಭಾವ ನಿರ್ಭಾವದಲ್ಲಿ ತರಹರವಾಗಿ ಇರಬಲ್ಲಡೆ,
    ಆತನೆ ಅಚ್ಚಶರಣನು ಕಾಣಾ ಗುಹೇಶ್ವರಾ./5

  6. ಅಂಗಕ್ಕೆ ಆಚಾರವಾಗಿ ಕಳೆಗಳುಳ್ಳನ್ನಕ್ಕ
    ಸಕಲ ಪದಾರ್ಥವ ಲಿಂಗಕ್ಕೆ ಕೊಟ್ಟಲ್ಲದೆ ಕೊಳಲಾಗದು.
    ಲಿಂಗವ ಬಿಟ್ಟು ಕಳೆ ಹಿಂಗಿದ ಬಳಿಕ ಅಂಗವೇನು ಬಲ್ಲುದೊ ?
    ಕಪ್ಪಡಿಯ ಸಂಗಮನಾಥನಲ್ಲಿ ಐಕ್ಯವಾದಂದಿಂಗೆ ನಿಜವ ಮರೆ.
    ಗುಹೇಶ್ವರಲಿಂಗ ಸಾಕ್ಷಿಯಾಗಿ,
    ಸಂಗನಬಸವಣ್ಣಾ ಅರ್ಪಿತವಿಲ್ಲದೆ ಕೊಳದಿರು ಅನರ್ಪಿತವ./6

  7. ಅಂಗಕ್ಕೆಂದಡೆ ಹಿರಿಯ ಹರಿವಾಣವ ತುಂಬಿ ಬೋನವ ತಾ ಎಂಬರು.
    ಲಿಂಗಕ್ಕೆಂದಡೆ ಚಿಕ್ಕ ಗಿಣ್ಣಿಲು ತುಂಬಿ ಬೋನವ ತಾ ಎಂಬರು.
    ಅಂಗವ ಹಿರಿದು ಮಾಡಿ ಲಿಂಗವ ಕಿರಿದು ಮಾಡಿ
    ಮನೆಯಲ್ಲಿ ಮಡಕೆ ತುಂಬಿ ಬೋನವ ಮಾಡಿ,
    ಚಿಕ್ಕ ಕುಡಿಕೆ ಗಿಣ್ಣಿಲು ಲಿಂಗಕ್ಕೆ ಬೋನವ ಹಿಡಿವ
    ಈ ಮಡಕೆಮಾರಿಗಳನೇನೆಂಬೆ ಗುಹೇಶ್ವರಾ./7

  8. ಅಂಗಜಂಗುಳಿಗಳೆಲ್ಲಾ ಅಶನಕ್ಕೆ ನೆರೆದರು.
    ಲಿಂಗದ ಹವಣನಿವರೆತ್ತ ಬಲ್ಲರು ?
    ಕಾಯಜೀವಿಗಳು ಕಳವಳಧಾರಿಗಳು,
    ದೇವರ ಸುದ್ದಿಯನಿವರೆತ್ತ ಬಲ್ಲರು ?
    ಮದ್ಯಪಾನವನುಂಡು ಮದವೆದ್ದ ಜೋಗಿಯಂತೆ ನುಡಿವರು.
    ಗುಹೇಶ್ವರನ ನಿಲವನಿವರೆತ್ತ ಬಲ್ಲರು./8

  9. ಅಂಗಜೀವಿಗಳೆಲ್ಲಾ ಅಶನಕ್ಕೆ ನೆರೆದು, ಲಿಂಗವಾರ್ತೆಯ ನುಡಿವರಯ್ಯಾ.
    ಕಾಯಜೀವಿಗಳೆಲ್ಲಾ ಕಳವಳಿಸಿ ನುಡಿವರಯ್ಯಾ.
    ಮನಬಂದ ಪರಿಯಲ್ಲಿ ನುಡಿವಿರಿ,
    ಗುಹೇಶ್ವರಲಿಂಗ ನಿಮಗೆಲ್ಲಿಯದೊ ?/9

  10. ಅಂಗದ ಕಳೆ ಲಿಂಗದಲ್ಲಿ ಅರತ ಬಳಿಕ,
    ಅಂಗವೆಂಬ ಶಂಕೆಯಿಲ್ಲ ನೋಡಾ ಶರಣಂಗೆ.
    ಪ್ರಾಣದ ಕಳೆ ಅರಿವಿನಲ್ಲಿ ಅರತ ಬಳಿಕ,
    ಶಬ್ದಸಂದಣಿಗೆ ಹಂಗಿಲ್ಲ ನೋಡಾ.
    ಶರಣ ನಡೆದಡೆ ನಿರ್ಗಮನಿ ನುಡಿದಡೆ ನಿಶ್ಶಬ್ದಿ !
    ಗುಹೇಶ್ವರನ ಶರಣಂಗೆ ಕುರುಹಿಲ್ಲ ಕೇಳಾ ಎಲೆ ಅವ್ವಾ./10

  11. ಅಂಗದ ಕಳೆಯಲೊಂದು ಲಿಂಗವ ಕಂಡೆ.
    ಲಿಂಗದ ಕಳೆಯಲೊಂದು ಅಂಗವ ಕಂಡೆ.
    ಅಂಗ ಲಿಂಗ[ದ]ಸಂದಣಿಯನರಸಿ ಕಂಡೆ, ನೋಡಿರೆ.
    ಇಲ್ಲಿಯೆ ಇದಾನೆ ಶಿವನು ! ಬಲ್ಲಡೆ ಇರಿಸಿಕೊಳ್ಳಿರೆ;
    ಕಾಯವಳಿಯದ ಮುನ್ನ ನೋಡಬಲ್ಲಡೆ.
    ಗುಹೇಶ್ವರಲಿಂಗಕ್ಕೆ ಬೇರೆಠಾವುಂಟೆ ಹೇಳಿರೆ ?/11

  12. ಅಂಗದ ಕೈಯಲ್ಲಿ ಲಿಂಗ, ಮನದ ಕೈಯಲ್ಲಿ ಸಂಸಾರ,
    ಎಂತಯ್ಯಾ ನಿನ್ನ ಪ್ರಾಣಲಿಂಗವೆಂಬೆ ?
    ಹೊರಗೆ ಕುರುಹಾಗಿ ತೋರುತ್ತಿದೆ.
    ತನುವಿಗೆ ತನು ಸಯವಾಗದು ಮನಕ್ಕೆ ಮನ ಸಯವಾಗದು
    ಎಂತಯ್ಯಾ ನಿನ್ನ ಪ್ರಾಣಲಿಂಗವೆಂಬೆ ಗುಹೇಶ್ವರಾ./12

  13. ಅಂಗದ ಕೊನೆಯ ಮೇಲಣ ಕೋಡಗ ಕೊಂಬಿಗೆ ಹಾರಿತ್ತು,
    ಅಯ್ಯಾ ಇದು ಸೋಜಿಗ !-
    ಕಯ್ಯ ನೀಡಲು ಮೈಯೆಲ್ಲವನು ನುಂಗಿತ್ತು
    ಒಯ್ಯನೆ ಕರೆದಡೆ ಮುಂದೆ ನಿಂತಿತ್ತು
    ಮುಯ್ಯಾಂತಡೆ ಬಯಲಾಯಿತ್ತು-ಗುಹೇಶ್ವರಾ !/13

  14. ಅಂಗದ ಧರೆಯ ಮೇಲೆ ಮೂರು ಬಾವಿಯುಂಟು:
    ಮೊದಲ ಬಾವಿಯ ಮುಟ್ಟಿದಾತ ಅಂಗಸಂಗಿಯಾದನು.
    ನಡುವಡ ಬಾವಿಯ ಮುಟ್ಟಿದಾತ ಉತ್ಪತ್ಯ-ಸ್ಥಿತಿ-ಲಯಕ್ಕೊಳಗಾದನು.
    ಮೇಲಣ ಬಾವಿಯ ಮುಟ್ಟಿದಾತ ಜೀವನ್ಮುಕ್ತನಾದನು.-
    ಇವ ತಟ್ಟದೆ ಮುಟ್ಟದೆ ಹೋದರು ನೋಡಾ, ಪರಬ್ರಹ್ಮವ ದಾಂಟಿ,
    ಗುಹೇಶ್ವರಲಿಂಗದಲ್ಲಿ ಹಂಗು ಹರಿದ ಶರಣರು/14

  15. ಅಂಗದ ಮೇಲಣ ಲಿಂಗವ ಹಿಂಗಿ ಸ್ಥಾವರಲಿಂಗಕ್ಕೆರಗುವ
    ಭಂಗಿತರ ಮುಖವ ನೋಡಲಾಗದು.
    ಅದೆಂತೆಂದಡೆ;
    ತನ್ನ ಗಂಡನ ಬಿಟ್ಟು ಅನ್ಯ ಗಂಡರಿಗೆರಗುವ
    ಹಾದರಗಿತ್ತಿಯಂತೆ ಅವಂದಿರ ಭಕ್ತಿ.
    ಅಂತಪ್ಪ ಪಂಚಮಹಾಪಾತಕರ
    ಮುಖದತ್ತ ತೋರದಿರಾ ಗುಹೇಶ್ವರಾ/15

  16. ಅಂಗದ ಮೇಲಣ ಲಿಂಗವ ಹಿಂಗಿದಾತನ ಭವಿಯೆಂಬರು,
    ಅಂಗದ ಮೇಲಣ ಲಿಂಗವು ಇಪ್ಪಾತನ ಭಕ್ತನೆಂಬರು,
    ಅಂಗದೊಳಗೆ ಬೆರಸಿಪ್ಪ ಲಿಂಗದ ಹೊಲಬನರಿಯದೆ.
    ಲಿಂಗವಿಲ್ಲದೆ ಒಂದು ಕ್ಷಣ ಒಂದಂಗ ಸುಳಿದುದುಂಟೆ ಜಗದೊಳಗೆ ?
    ಅಂಗದೊಳಗಣ ಲಿಂಗವನು ಹಿಂಗಿದವರಿಗೆ
    ಭವಮಾಲೆಯುಂಟು,
    ಹಿಂಗದವರಿಗೆ ಭವಮಾಲೆಯಿಲ್ಲ ಗುಹೇಶ್ವರಾ./16

  17. ಅಂಗದ ಮೇಲೆ ಲಿಂಗ, ಲಿಂಗದ ಮೇಲೆ ಅಂಗವಿದೇನೊ ?
    ಮನದ ಮೇಲೆ ಅರಿವು, ಅರಿವಿನ ಮೇಲೆ ಕುರುಹು ಇದೇನೊ ?
    ನೀನೆಂಬಲ್ಲಿ ನಾನು, ನಾನೆಂಬಲ್ಲಿ ನೀನು.
    <code>ನೀ'</code>ನಾ’ ಎಂಬುದೆ?-ತೆರಹಿಲ್ಲ ಗುಹೇಶ್ವರಾ./17

  18. ಅಂಗದ ಮೇಲೆ ಲಿಂಗವರತು, ಲಿಂಗದ ಮೇಲೆ ಅಂಗವರತು
    ಭಾವತುಂಬಿ ಪರಿಣಾಮವರತು,
    ನಾಮವಿಲ್ಲದ ದೇವರಿಗೆ ನೇಮವೆಲ್ಲಿಯದೊ ಗುಹೇಶ್ವರಾ./18

  19. ಅಂಗದ ಮೇಲೆ ಲಿಂಗಸಂಬಂಧವಾದ ಬಳಿಕ,
    ಪ್ರಾಣದ ಮೇಲೆ ಜ್ಞಾನ ನಿಧರ್ಾರವಾಯಿತ್ತು ನೋಡಾ.
    ಒಳಹೊರಗೆಂಬ ಉಭಯವು ಏಕಾರ್ಥವಾಯಿತ್ತು,
    ಗುಹೇಶ್ವರಾ ನಿಮ್ಮ ನೆನೆದೆನಾಗಿ./19

  20. ಅಂಗದ ಲಿಂಗವೆ ಮನದ ಲಿಂಗ, ಮನದ ಲಿಂಗವೆ ಭಾವದ ಲಿಂಗ,
    ಭಾವದ ಲಿಂಗವೆ ಜಂಗಮದಾಸೋಹ,
    ದಾಸೋಹವೆಂಬುದು ಸಂದಿಲ್ಲದ ನಿಜ ನೋಡಾ.
    ಅದರಂದವನೆ ತಿಳಿದು ನಿಂದ ನಿಲುಕಡೆಯ ಭೇದವ
    ಕೇಳಬೇಕೆಂದು ಬಂದಲ್ಲಿಯೆ ತಿಳುಹಬೇಕಯ್ಯಾ.
    ಇಂತೀ ಪ್ರಕಾರದಲ್ಲಿ ಸಂದ ಸೌಖ್ಯದ ಭೇದವನು,
    ಸಂದಿಲ್ಲದ ಲಿಂಗದ ನಿಜವನು,
    ಇಂದು ನಮ್ಮ ಗುಹೇಶ್ವರಲಿಂಗದಲ್ಲಿ
    ಚಂದಯ್ಯಂಗೆ ತಿಳುಹಿ ಕೊಡಾ ಚೆನ್ನಬಸವಣ್ಣಾ./20

  21. ಅಂಗದಲಪ್ಪಿದೆನೆಂದಡೆ ಸಿಲುಕದು,
    ಪ್ರಾಣದಲಪ್ಪಿದೆನೆಂದಡೆ ಸಿಲುಕದು,
    ಭಾವದಲಪ್ಪಿದೆನೆಂದಡೆ ಸಿಲುಕದು,
    ಸೂಕ್ಷ್ಮತನುವಿನ ಮನದ ಕೊನೆಯ ಮೇಲೆ
    ಅಪ್ಪಿದೆನೆಂದಡೆ ಸಿಲುಕದು.
    ಭಾವಾತೀತವಾದ ನಿರಾಕಾರದ ಘನವು
    ಸುಜ್ಞಾನದ ಮುಖಕ್ಕೆ ಅಸಾಧ್ಯ ನೋಡಾ !
    ಗುಹೇಶ್ವರನ ಶರಣರನಿನ್ನಾವ ಪರಿಯಲ್ಲಿ
    ತಡೆದು ನಿಲ್ಲಿಸುವೆ ಹೇಳಾ- ಸಿದ್ಧರಾಮಯ್ಯಾ ?/21

  22. ಅಂಗದಲಳವಟ್ಟ ಲಿಂಗೈಕ್ಯನ ಸಂಗವನಾರಿಗೂ ಕಾಣಬಾರದು ನೋಡಾ.
    ಪ್ರಾಣದ ಕೊನೆಯ ಮೊನೆಯ ಮೇಲೆ, ಭಾವಸೂತಕದ ಹೊದಕೆಯ ಕಳೆದು,
    ನಿರ್ಭಾವ ನಿಸ್ಸೂತಕಿಯಾಗಿಪ್ಪ ನಿಜಲಿಂಗ ಸಮಾದಿಯ ಘನವನು
    ಆರಿಗೆಯೂ ಕಾಣಬಾರದು ನೋಡಾ.
    ಗುಹೇಶ್ವರಲಿಂಗದಲ್ಲಿ ಸಂಗನಬಸವಣ್ಣನ ನಿಲವ ಕಂಡು
    ನಾನು ಬದುಕಿದೆನು ಕಾಣಾ ಚೆನ್ನಬಸವಣ್ಣಾ. /22

  23. ಅಂಗದಲ್ಲಿ ಅಳವಟ್ಟಿಪ್ಪ ಆಚಾರವೆ ಲಿಂಗವೆಂದರಿದನು,
    ಮನದಲ್ಲಿ ಬೆಳಗುತ್ತಿಪ್ಪ ಅರಿವೆ ಜಂಗಮವೆಂದರಿದನು,
    ಈ ಎರಡರ ಸಂಗವೆ ತಾನೆಂದರಿದನು
    ಮಾಡುವ ದಾಸೋಹವೆ ಲಿಂಗಜಂಗಮವೆಂದರಿದನು
    ನಮ್ಮ ಗುಹೇಶ್ವರಲಿಂಗದಲ್ಲಿ,
    ಸಂಗನಬಸವಣ್ಣನ ನಿಲವನರಿಯಬೇಕು ಕೇಳಾ ಚಂದಯ್ಯಾ./23

  24. ಅಂಗದಲ್ಲಿ ಆಚಾರವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು.
    ಆಚಾರದಲ್ಲಿ ಪ್ರಾಣವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು.
    ಪ್ರಾಣದಲ್ಲಿ ಲಿಂಗವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು.
    ಲಿಂಗದಲ್ಲಿ ಜಂಗಮವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು.
    ಜಂಗಮದಲ್ಲಿ ಪ್ರಸಾದವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು.
    ಪ್ರಸಾದದಲ್ಲಿ ನಿತ್ಯವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು.
    ನಿತ್ಯದಲ್ಲಿ ದಾಸೋಹವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು.
    ದಾಸೋಹದಲ್ಲಿ ತನ್ನ ಮರೆದು,
    ನಿಶ್ಚಿಂತನಿವಾಸಿಯಾಗಿ ಐದಾನೆ ಗುಹೇಶ್ವರಲಿಂಗದಲ್ಲಿ.
    ಸಂಗನಬಸವಣ್ಣನ ಶ್ರೀಪಾದಕ್ಕೆ ಶರಣೆಂದು
    ಧನ್ಯರಾಗಬೇಕು ನಡೆಯಾ- ಸಿದ್ಧರಾಮಯ್ಯಾ/24

  25. ಅಂಗದಲ್ಲಿ ಮಾಡುವ ಸುಖ, ಲಿಂಗಕ್ಕದು ಭೂಷಣವಾಯಿತ್ತು.
    ಕಾಡುಗಿಚ್ಚಿನ ಕೈಯಲ್ಲಿ ಕರಡ ಕೊಯಿಸುವಂತೆ-
    ಹಿಂದೆ ಮೆದೆಯಿಲ್ಲ ಮುಂದೆ ಹುಲ್ಲಿಲ್ಲ.
    ಅಂಗ ಲಿಂಗವೆಂಬನ್ನಕ್ಕರ ಫಲದಾಯಕ.
    ಲಿಂಗೈಕ್ಯವದು ಬೇರೆ ಗುಹೇಶ್ವರಾ. /25

  26. ಅಂಗದೊಳಗಣ ಲಿಂಗ, ಲಿಂಗದೊಳಗಣ ಅಂಗ;
    ಅಂಗ-ಲಿಂಗ ಸಂಗ ಹಿಂಗದಂತೆ ಮಾಡಿರೆ.
    ದೇವ ದೇವ ಎಂಬಿರಿ ಬಲ್ಲವರು,
    ಲಿಂಗವ, ಬಲ್ಲವರು ಹಿಡಿದುಕೊಳ್ಳಿರೆ !
    ತಾ ಸತ್ತು ಲಿಂಗವ ಕೂಡಿಹೆನೆಂದಡೆ
    ಗುಹೇಶ್ವರಂಗೆ ಬೇರೊಂದುಠಾವುಂಟೆ ಹೇಳಿರೆ ?/26

  27. ಅಂಗದೊಳಗಣ ಸವಿ, ಸಂಗದೊಳಗಣ ರುಚಿ,
    ಅಂಗನೆಯ ನಖದೊಳಗೆ ಬಂದು ಮೂರ್ತಿಯಾಯಿತ್ತು !
    ಚಂದ್ರಕಾಂತದ ಗಿರಿಗೆ ಬಿಂದುತೃಪ್ತಿಯ ಸಂಚ !
    ಅದರಂದದೊಳಗಣ ಭ್ರಮೆಯ ಪಿಂಡದಾಹುತಿ ನುಂಗಿತ್ತು.
    ಚಂದ್ರಮನ ಷೋಡಶಕಳೆಯ ಇಂದ್ರನ ವಾಹನ ನುಂಗಿ,
    ಗುಹೇಶ್ವರನೆಂಬ ನಿಲವ ನಖದ ಮುಖ ನುಂಗಿತ್ತು/27

  28. ಅಂಗದೊಳಗೆ ಮಹಾಲಿಂಗವಿರಲು,
    ಕೈಯ ಲಿಂಗ ಬಿದ್ದಿತ್ತೆಂದು ನೆಲದೊಳಗಂಗವ ಹೂಳಿ
    ಭಂಗಪಡುವರಲ್ಲಾ,
    ಗುಹೇಶ್ವರಲಿಂಗವನರಿಯದ ಜಡರು./28

  29. ಅಂಗದೊಳಗೆ ಲಿಂಗ ಲಿಂಗದೊಳಗೆ ಅಂಗ !
    ಅಂಗವಿಲ್ಲದೆ ಬೇರೆ ಸಂಗವಿಲ್ಲ ಕಾಣಿರೆ.
    ಅದೆಂತೆಂದಡೆ;
    “ಲಿಂಗಸ್ಥಲಂ ಶಿವಃ ಸಾಕ್ಷಾತ್ ಜೀವಾತ್ಮಾಂಗಸ್ಥಲಂ ಭವೇತ್
    ಲಿಂಗಾಂಗಸ್ಥಲಯೋರೈಕ್ಯಂ ಶಿವಜೀವೈಕ್ಯಮೇವಹಿ ” ಎಂದುದಾಗಿ.
    ಲಿಂಗವಿದ್ದೆಡೆಯ ನೀವು ತಿಳಿದು ನೋಡಿ ಕೂಡಿಕೊಳ್ಳಿ.
    ಕಾಯವಳಿಯದ ಮುನ್ನವೆ ಕೂಡಿಕೊಳ್ಳಬಲ್ಲಡೆ,
    ಗುಹೇಶ್ವರನು ಬೇರಿಲ್ಲ ಕಾಣಿರೆ./29

  30. ಅಂಗನೆಯ ಮೊಲೆ ಲಿಂಗವೆ ? ಬಳ್ಳ ಲಿಂಗವೆ ?
    ಕಿತ್ತು ಬಹ ಸಾಣೆ ಲಿಂಗವೆ ? ಆಡಿನ ಹಿಕ್ಕಿ ಲಿಂಗವೆ ?
    ಮೆಚ್ಚುವರೆ ಪ್ರಮಥರು ? ಮೆಚ್ಚುವರೆ ಪುರಾತನರು, ನಿಮ್ಮ ಭಕ್ತರು ?
    ಭಾವಭ್ರಮೆಯಳಿದು, ಗುಹೇಶ್ವರಾ
    ನಿಮ್ಮಲ್ಲಿ ಅನಾದಿಸಂಸಿದ್ಧವಾದ ಜಂಗಮವನರಿದಾತ
    ಬಸವಣ್ಣನೊಬ್ಬನೆ./30

  31. ಅಂಗವಿಕಾರ ಆಚಾರದೊಳಡಗಿ, ಆಚಾರಕ್ರೀಗಳು ಗುರುವಿನೊಳಡಗಿ,
    ಗುರುವೆನ್ನ ಅಂಗದೊಳಗಡಗಿ; ಅಂಗ ಲಿಂಗನಿಷ್ಠೆಯೊಳಡಗಿ,
    ಲಿಂಗನಿಷ್ಠೆ ಅಂಗದಾಚರಣೆಯ ಆಚಾರವಾವರಸಿ,
    ಆಚಾರದ ನಿಲವ ಗುರುಮೂರ್ತಿಯಾವರಸಿ,
    ಗುರುಮೂರ್ತಿಯ ಸರ್ವಾಂಗವಾವರಸಿ,
    ಸರ್ವಾಂಗವ ಲಿಂಗನಿಷ್ಠೆಯಾವರಿಸಿ, ಲಿಂಗನಿಷ್ಠೆಯ ಸಾವಧಾನವಾವರಿಸಿ,
    ಸಾವಧಾನವ ಸುವಿಚಾರವಾವರಿಸಿ, ಸುವಿಚಾರವ ಮಹಾಜ್ಞಾನವಾವರಿಸಿ,
    ಮಹಾಜ್ಞಾನದೊಳಗೆ ಪರಮಾನಂದನಿಜನಿಂದು
    ನಿಜದೊಳಗೆ ಪರಮಾಮೃತ ತುಂಬಿ-
    ಮೊದಲ ಕಟ್ಟೆಯನೊಡೆದು, ನಡುವಣ ಕಟ್ಟೆಯನಾಂತು ನಿಂದು,
    ನಡುವಣ ಕಟ್ಟೆಯೂ ಮೊದಲ ಕಟ್ಟೆಯೂ ಕೂಡಿ ಬಂದು,
    ಕಡೆಯಣ ಕಟ್ಟೆಯನಾಂತುದು.
    ಈ ಮೂರುಕಟ್ಟೆಯೊಡೆದ ಮಹಾಜಲವನು ಪರಮಪದವಾಂತುದು.
    ಆ ಪದದಲ್ಲಿ ನಾನು ಎರಗಿ, ಪಾದೋದಕವ ಕೊಂಡು
    ಎನ್ನ ನಾನರಿಯದಾದೆ ಕಾಣಾ ಗುಹೇಶ್ವರಾ./31

  32. ಅಂಗವಿಕಾರಿ ಲಿಂಗವಿಕಾರಿಯನರಿಯ.
    ಲಿಂಗವಿಕಾರಿ ಅಂಗವಿಕಾರಿಯನರಿಯ.
    ಅಂಗವೇ ದಿಂಡುನಾಳ ಲಿಂಗವೇ….. ನವ ಸುರಾಳ
    ಕಳಚಿದಡೆ ತೋರಲಿಲ್ಲ, ತೋರಿದಡೆ ಬೆಚ್ಚಲಿಲ್ಲ.
    ಸುರುಳಿನೊಳಗೆ ಸುತ್ತಿ ಹೊರಗಿರಿಸಿದೆನು ಕಾಣಾ-ಗುಹೇಶ್ವರಾ. /32

  33. ಅಂಗವಿಡಿದಂಗಿಯನೇನೆಂಬೆ ?
    ಆರನೊಳಕೊಂಡ ಅನುಪಮನು ನೋಡಾ !
    ಮೂರರ ಹೊಲಿಗೆಯ ಬಿಚ್ಚಿ, ಎಂಟಾತ್ಮ ಹರಿಗಳ
    ತನ್ನಿಚ್ಛೆಯೊಳ್ ನಿಲಿಸಿದ ನಿಜಸುಖಿಯು ನೋಡಾ.
    ತತ್ತ್ವ ಮೂವತ್ತಾರ ಮೀರಿ,
    ಅತ್ತತ್ತವೆ ತೋರ್ಪ ಆಗಮ್ಯನು ನೋಡಾ !
    ನಮ್ಮ ಗುಹೇಶ್ವರನ ಶರಣ ಅಲ್ಲಯ್ಯನ ಇರವನೊಳಕೊಂಡ
    ಪರಮಪ್ರಸಾದಿ ಮರುಳಶಂಕರದೇವರ ನಿಲವ
    ಬಸವಣ್ಣನಿಂದ ಕಂಡೆ ನೋಡಾ ಸಿದ್ಧರಾಮಯ್ಯಾ./33

  34. ಅಂಗವಿಡಿದು, ಅಂಗ ಅನಂಗವೆಂಬೆರಡನೂ ಹೊದ್ದದ
    ಮಹಿಮನ ನೋಡಾ !
    ಅಂಗವೆ ಆಚಾರವಾಗಿರಬಲ್ಲ, ಆಚಾರವೆ ಅಂಗವಾಗಿರಬಲ್ಲನಾಗಿ
    ಅಂಗವಿಲ್ಲದಪ್ರತಿಮ ನೋಡಾ !
    ಆಚಾರವೆ ಸ್ವಾಯತ, ಆಚಾರವೆ ಪ್ರಾಣ !
    ಗುಹೇಶ್ವರಲಿಂಗದಲ್ಲಿ ನಿನ್ನ ಆಚಾರಬಿಕ್ಷವನಿಕ್ಕಾ ಚನ್ನಬಸವಣ್ಣಾ./34

  35. ಅಂಗವಿಲ್ಲದ ಅನುಭಾವಕ್ಕೆ ನೇಮವಿಲ್ಲದ ನೆನಹು
    ತಾಗು ತಡೆಯಿಲ್ಲದ ಸುಮ್ಮಾನದ ಸುಖ.
    ಗುಹೇಶ್ವರ ನಿರಾಳ ಕಂಡಾ !/35

  36. ಅಂಗವಿಲ್ಲಾಗಿ ಅನ್ಯಸಂಗವಿಲ್ಲ, ಅನ್ಯಸಂಗವಿಲ್ಲಾಗಿ ಮತ್ತೊಂದ ವಿವರಿಸಲಿಲ್ಲ.
    ಮತ್ತೊಂದ ವಿವರಿಸಲಿಲ್ಲಾಗಿ ನಿಸ್ಸಂಗವಾಯಿತ್ತಯ್ಯಾ.
    ಗುಹೇಶ್ವರಾ ನಿಮ್ಮ ನಾಮವಿಂತುಟಯ್ಯಾ/36

  37. ಅಂಗವೆಂಬ ಸಂಸಾರದೊಳಗೆ ಸವೆದವರೆಲ್ಲರೂ ಶಿವನನರಿವರೆ ?
    ಮನವೆಂಬ ಸಂಕಲ್ಪದ ಕುಣಿಕೆಗೊಳಗಾದವರೆಲ್ಲರೂ
    ಮಾಯದ ಹೊಡೆಗಿಚ್ಚ ಗೆಲ್ಲಬಲ್ಲರೆ ?
    ಗುಹೇಶ್ವರಲಿಂಗದಲ್ಲಿ ಸರ್ವಸಂದೇಹವ ಕಳೆದಿಪ್ಪ
    ಚನ್ನಬಸವಣ್ಣಂಗೆ ನಮೋ ನಮೋ ಎಂಬೆನು./37

  38. ಅಂಗಸಂಸಾರ ಲಿಂಗದಲ್ಲಿತ್ತು ಅರತು
    ಕಾಯವೆಂಬ ಸಂಬಂಧ ಸಂಶಯವಳಿದು
    ನಿಸ್ಸಂದೇಹಿಯಾಗಿಪ್ಪನು ನೋಡಾ ಬಸವಣ್ಣನು.
    ಪ್ರಾಣ ಭಾವವೆಂಬ ಶಂಕೆ ತಲೆದೋರದೆ
    ನಿಶ್ಶಂಕನಿಜೈಕ್ಯನಾಗಿಪ್ಪನು ನೋಡಾ ಬಸವಣ್ಣನು.
    ಆ ಬಸವಣ್ಣನ ಅಂತರಂಗದಲ್ಲಿ ನಿಶ್ಚಿಂತನಿವಾಸಿಯಾಗಿದ್ದೆನು.
    ಆ ಬಸವಣ್ಣನ ಅಂತರಂಗದಲ್ಲಿ ನಿರಾಲಂಬಜ್ಞಾನಿಯಾಗಿದ್ದೆನು.
    ಆ ಬಸವಣ್ಣನೊಳಗೆ ನಾನು ಅಳಿದುಳಿದೆನು.
    ಬಸವಣ್ಣನೆನ್ನ ಅಂತರಂಗದೊಳಗೆ ನಿಜನಿವಾಸಿಯಾಗಿದ್ದನು.
    ಇದು ಕಾರಣ:ಒಂದಕ್ಕೊಂದ ಬಿಚ್ಚಿ ಬೇರು(ರೆ?) ಮಾಡಬಾರದು ನೋಡಾ.
    ಗುಹೇಶ್ವರಲಿಂಗದಲ್ಲಿ `ಸಂಗನಬಸವ-ಪ್ರಭು’ವೆಂಬ ಎರಡು ಭಾವಭ್ರಾಂತಿಯಳಿದು,
    ನಿಭ್ರಾಂತಿ ಎಡೆಗೊಂಡಿತ್ತು ನೋಡಾ ಚನ್ನಬಸವಣ್ಣಾ/38

  39. ಅಂಗಸೋಂಕೆಂಬುದು ಅಧಮವು.
    ಉರಸೆಜ್ಜೆಯೆಂಬುದು ಎದೆಯ ಗೂಂಟ.
    ಕಕ್ಷೆಯೆಂಬುದು ಕವುಚಿನ ತವರುಮನೆ.
    ಅಮಳೋಕ್ಯವೆಂಬುದು ಬಾಯ ಬಗದಳ.
    ಮುಖಸೆಜ್ಜೆಯೆಂಬುದು ಪಾಂಡುರೋಗ.
    ಕರಸ್ಥಳವೆಂಬುದು ಮರವಡದ ಕುಳಿ.
    ಉತ್ತಮಾಂಗವೆಂಬುದು ಸಿಂಬಿಯ ಕಪ್ಪಡ.
    ಎಲ್ಲರಿಗೆಯೂ ಸೋಂಕಾಯಿತ್ತು !
    ಈ ಹಸಿಯ ಗೂಂಟದಲ್ಲಿ ಕಟ್ಟಿ, ಒಣಗಿದ ಗೂಂಟದಲ್ಲಿ ಬಿಡುವ
    ಬಾಲಭಾಷೆಯ ಭಂಡರ ನುಡಿಯ ಕೇಳಲಾಗದು ಗುಹೇಶ್ವರಾ./39

  40. ಅಂಗಳ[ದ] ಬಾಗಿಲ ನೆಲೆಯಲ್ಲಿ ನಿಂದಿದ್ದ ಲಿಂಗವನರಿದುದಿಲ್ಲವೆ ?
    ಸುಸಂಗಿ ನಿರಂಗಿ ನಿಷ್ಕಲಬ್ರಹ್ಮ ಮರುಳಶಂಕರಲಿಂಗ !
    ಪ್ರಸಾದದ ಕುಳಿಯಲ್ಲಿ ನಿಜನಿವಾಸದ ಅಂಗವ ನೋಡು,
    ಗುಹೇಶ್ವರಲಿಂಗದಲ್ಲಿ ಬಸವಣ್ಣಾ./40

  41. ಅಂಗೈಯ ಲಿಂಗದಲ್ಲಿ ಕಂಗಳ ನೋಟ ಸ್ವಯವಾದ ಇರವ ನೋಡಾ !
    ತನ್ನ ಸ್ವಾನುಭಾವದ ಉದಯದಿಂದ ತನ್ನ ತಾನರಿದ ನಿಜಶಕ್ತಿಯ ನೋಡಾ !
    ಬಿನ್ನವಿಲ್ಲದರಿವು, ಮನ್ನಣೆಯ ಮಮಕಾರವ ಮೀರಿದ ಭಾವ !
    ತನ್ನಿಂದ ತಾನಾದಳು !
    ನಮ್ಮ ಗುಹೇಶ್ವರಲಿಂಗದಲ್ಲಿ ಸ್ವಯಲಿಂಗವಾದ
    ಮಹಾದೇವಿಯಕ್ಕಗಳ ನಿಲವಿಂಗೆ
    ನಮೋ ನಮೋ ಎನುತಿರ್ದೆನು ಕಾಣಾ ಚನ್ನಬಸವಣ್ಣ./41

  42. ಅಂಗೈಯೊಳಗಣ ನಾರಿವಾಳದ ಸಸಿ,
    ಅಂಬರದೆರಳೆಯ ನುಂಗಿತ್ತಲ್ಲಯ್ಯಾ.
    ಕಂಭದೊಳಗಣ ಮಾಣಿಕ್ಯದ ಬಿಂದು
    ನವಕೋಟಿ ಬ್ರಹ್ಮರ ನುಂಗಿತ್ತಲ್ಲಯ್ಯಾ.
    ಅಂಡಜವೆಂಬ ತತ್ತಿ ಹಲವು ಪಕ್ಷಿಯ ನುಂಗಿ
    ನಿರ್ವಯಲಾಗಿತ್ತು ಗುಹೇಶ್ವರಾ ! /42

  43. ಅಂಗೈಯೊಳಗಣ ಸಿಂಹಾಸನವಿದೇನೊ?
    ಅಂಗೈಯ ಮೇಲೆ ಸಿಂಹಾಸನವೆಂದೇನೊ?
    ಧೂಪ ದೀಪ ನಿವಾಳಿಯೆಂದೇನೊ?
    ಶರಣಂಗೆ ಕಳಸದ ಮೇಲೆ ನೆಲೆಗಟ್ಟೆಯೆಂಬುದೇನೊ?
    ಗುಹೇಶ್ವರನೆಂಬ ನಿರಾಳ !/43

  44. ಅಂಗೈಯೊಳಗೊಂದು ಅರಳ್ದ ತಲೆಯ ಹಿಡಿದುಕೊಂಡು
    ಕಂಗಳ ಮುತ್ತ ಪವಣಿಸುವಾಕೆ ನೀನಾರು ಹೇಳಾ ?
    ಸಂದ ಸಂಪಿಗೆಯರಳ ತುಂಬಿ ಬಂದುಂಬ ಭೇದವನರಿಯದೆ
    ಹಂಬಲಿಸುವ ಪರಿತಾಪವೇನು ಹೇಳಾ ?
    ಒಂದೆಂಬೆನೆ ಎರಡಾಗಿದೆ ಎರಡೆಂಬೆನೆ ಒಂದಾಗಿದೆ
    ಅರಿವಿನೊಳಗಣ ಮರಹಿದೇನು ಹೇಳಾ ?
    ದುಃಖವಿಲ್ಲದ ಅಕ್ಕೆ, ಅಕ್ಕೆಯಿಲ್ಲದ ಅನುತಾಪ
    ನಮ್ಮ ಗುಹೇಶ್ವರಲಿಂಗದಲ್ಲಿ ತೋರುತ್ತಿದೆ.
    ನೀನಾರೆಂದು ಹೇಳಾ ಎಲೆ ಅವ್ವಾ ?/44

  45. ಅಂಜಬೇಡ ಅಳುಕಬೇಡ;
    ಹೋದವರಾರು ಇದ್ದವರಾರು ? ಎಲೆ ಮರುಳೆ !
    ಒಂದು ಮುಖದಲ್ಲಿಪ್ಪ ದೇವನೊಬ್ಬನೆ.
    ಹಲವು ಮುಖದಲ್ಲಿಪ್ಪ ದೇವನೊಬ್ಬನೆ.
    ನಾಮ ಹಲವಲ್ಲದೆ ಕಾರ್ಯ ಒಂದೇ ನೋಡಾ !
    ಮನದೊಳಗಣ ಘನವು ತನುವನಗಲುವುದೆ ?
    ಗುಹೇಶ್ವರಲಿಂಗದಲ್ಲಿ ವಿಯೋಗಕ್ಕೆ ತೆರಹಿಲ್ಲ ಕೇಳಾ, ಸಂಗನಬಸವಣ್ಣ./45

  46. ಅಂಡಜ ಒಡೆಯದರಿಂದ ಮುನ್ನ,
    ದ್ವೀಪಾದ್ವೀಪವಿಲ್ಲದ ಮುನ್ನ,
    ಅನಲಪವನರಿಲ್ಲದ ಮುನ್ನ,
    ರವಿಚಂದ್ರರಿಲ್ಲದ ಮುನ್ನ,
    ಗುಹೇಶ್ವರಲಿಂಗವಲ್ಲಿಂದ ಮುನ್ನ./46

  47. ಅಂಡಜವಳಯವಿಲ್ಲದ ಮುನ್ನ,
    ದ್ವೀಪಂಗಳೇಳೂ ಇಲ್ಲದ ಮುನ್ನ,
    ರವಿಚಂದ್ರರಿಲ್ಲದ ಮುನ್ನ,
    ತ್ರಿದೇವತೆಗಳಿಲ್ಲದ ಮುನ್ನ,
    ಗುಹೇಶ್ವರನು ಉಲುಹಡಗಿರ್ದನಂದು ಅನಂತಕಾಲ !/47

  48. ಅಂಡಜವೆಂಬ ತತ್ತಿಯೊಡೆದು ಪಿಂಡ ಪಲ್ಲಟವಾಗಿ
    ಗಂಡಗಂಡರನರಸಿ ತೊಳಲುತ್ತೈದಾರೆ.
    ಖಂಡಮಂಡಲದೊಳಗೆ ಕಂಡೆನೊಂದು ಚೋದ್ಯವ:
    ಕಂದನ ಕೈಯ ದರ್ಪಣವ ಪ್ರತಿಬಿಂಬ ನುಂಗಿತ್ತು.
    ದಿವರಾತ್ರಿಯುದಯದ ಬೆಳಗನು ಕತ್ತಲೆ ನುಂಗಿತ್ತು.
    ಗುಹೇಶ್ವರನಲ್ಲಿಯೆ ನಿರ್ವಯಲಾಗಿತ್ತು./48

  49. ಅಂಡವ ಮೇಲು ಮಾಡಿ ಪಿಂಡಿಯಾಗಿ,
    ಆ ಅಂಡದೊಳಗೆ ನಾಲ್ಕು ಕೈಕರಣ ಅನೇಕ ಉದ್ದವಾದವು !
    ಆ ಕೈಕರಣದೊಳಗೊಬ್ಬ ಶರಣ, ದಾಸೋಹಮೆನಲು,
    ಆ ಕ್ಷಣ ಒಂದು ಸೋಜಿಗ ಮೂಡಿತ್ತ ಕಂಡೆ ಗುಹೇಶ್ವರಾ/49

  50. ಅಂತರಂಗ ಸನ್ನಹಿತ, ಬಹಿರಂಗ ನಿಶ್ಚಿಂತವೊ ಅಯ್ಯಾ.
    ತನು ತನ್ನ ಸುಖ, ಮನ ಪರಮ ಸುಖವೊ,
    ಅದು ಕಾರಣ ಕಾಯ ವಾಯವೊ, ಗುಹೇಶ್ವರ ನಿರಾಳವೊ ಅಯ್ಯಾ./50

  51. ಅಂತರಂಗದಲ್ಲಿ ಅಡಗಿತ್ತೆಂದಡೆ ಭಾವಕ್ಕೆ ಪೂಜ್ಯವಲ್ಲ.
    ಬಹಿರಂಗದಲ್ಲಿ ಅಡಗಿತ್ತೆಂದಡೆ ಕ್ರಿಯಾಬದ್ಧವಲ್ಲ.
    ಅರಿವಿನೊಳಗೆ ಅಡಗಿತ್ತೆಂದಡೆ ಮತಿಗೆ ಹವಣಲ್ಲ.
    ಭಾವ ನಿರ್ಭಾವ ನಿಶ್ಶೂನ್ಯವನು ಕಾಂಬ ಪರಿ ಎಂತು ಹೇಳಾ ?
    ಕಂಡು ತನ್ನೊಳಗಿಂಬಿಟ್ಟುಕೊಂಬ ಪರಿ ಎಂತು ಹೇಳಾ ?
    ಗುಹೇಶ್ವರನೆಂಬ ಲಿಂಗವನರಿದು ಕೂಡಿ
    ಸುಖಿಯಹ ಪರಿ ಎಂತು ಹೇಳಾ ಸಂಗನಬಸವಣ್ಣ ?/51

  52. ಅಂತರಂಗದಲ್ಲಿ ಭವಿಯನೊಳಕೊಂಡು, ಬಹಿರಂಗದಲ್ಲಿ ಭಕ್ತಿಯನೊಳಕೊಂಡು,
    ಆತ್ಮಸಂಗದಲ್ಲಿ ಪ್ರಸಾದವನೊಳಕೊಂಡು, ಇಪ್ಪ ಭಕ್ತರ ಕಾಣೆನಯ್ಯಾ ನಾನು,
    ಇಂತಪ್ಪ ಲಿಂಗೈಕ್ಯರ ಕಾಣೆನಯ್ಯಾ.
    ಅಂತರಂಗದಲ್ಲಿ ಸುಳಿದಾಡುವ ತನುಗುಣಾದಿಗಳ, ಮನಗುಣಾದಿಗಳ,
    ಪ್ರಾಣಗುಣಾದಿಗಳ ಕಳೆದಲ್ಲಿ ಶರಣರಹರೆ ?
    ತನು ಮನ ಧನವ ಕೊಟ್ಟಲ್ಲಿ ಭಕ್ತರಹರೆ ?
    ಉಂಬವರ ಕಂಡು ಕೈನೀಡಿದಡೆ ಪ್ರಸಾದಿಗಳಹರೆ ?
    ಅಂತರಂಗ ಬಹಿರಂಗ ಆತ್ಮಸಂಗ-ಈ ತ್ರಿವಿಧದ ಭೇದವ
    ಗುಹೇಶ್ವರಾ ನಿಮ್ಮ ಶರಣ ಬಲ್ಲ. /52

  53. ಅಂತರಂಗದೊಳಗಿಲ್ಲ ಬಹಿರಂಗದೊಳಗಿಲ್ಲ
    ಮತ್ತಾವ ದೆಶೆ ದಿಕ್ಕಿನೊಳಗೆಯೂ ಇಲ್ಲ.
    ಏನಾಯಿತ್ತೆಂದರಿಯೆ ಎಂತಾಯಿತ್ತೆಂದರಿಯೆ
    ಅದೆಂತೆಂದರೆ:
    “ಅಂತಃ ಶೂನ್ಯಂ ಬಹಿಃಶೂನ್ಯಂ ಶೂನ್ಯಂ ಶೂನ್ಯಂ ದಿಶೌ ದಿಶೌ!
    ಸರ್ವಶೂನ್ಯಂ ನಿರಾಲಂಬಂ ನಿದ್ರ್ವಂದ್ವಂ ಪರಮಂ ಪದಂ
    ಎಂಬುದಾಗಿ-ಅಲ್ಲಿ ಇಲ್ಲಿ ಎಲ್ಲಿಯೂ ಇಲ್ಲ.
    ಗುಹೇಶ್ವರ ಬಯಲು./53

  54. ಅಂದಂದಿಗೆ ಬಂದ ಧನವನಂದಂದಿಂಗೆ ವೆಚ್ಚವ ಮಾಡಿ
    ಹಿಂದು ಮುಂದ ಸಮವ ಮಾಡಿ,
    ಮಧ್ಯ ನಿರಾಳ ಊಧ್ರ್ವ ತಾನಾಗಿದ್ದು ಇಲ್ಲದಂತಿಪ್ಪಡೆ
    ಇದೇ ತೆರನು ಕಂಡಯ್ಯಾ.
    ಆರ ವಶವಲ್ಲದ ಪುರುಷನೊಬ್ಬನ ಸಾದಿಸಿಕೊಳಬಲ್ಲಡೆ
    ಆ ಹಿರಿಯರಿಬ್ಬರೂ ತನ್ನ ವಶರಪ್ಪರು.
    ಆ ಹಿರಿಯರಿಬ್ಬರೂ ತನ್ನವರಾದಡೆ ಸರ್ವವೂ ಸಾಧ್ಯವಪ್ಪುದು.
    ಸರ್ವವೂ ಸಾಧ್ಯವಾದಡೆ ತಾನಿಲ್ಲ.
    ಬಯಲಹುದಕ್ಕೆ ಇದೇ ಚಿಹ್ನ ನೋಡಾ-
    ಹೀಗೆಂದು ನಂಬುವುದು
    ನಂಬದಿದ್ದಡೆ ಚೆನ್ನಬಸವಣ್ಣನ ಹೊಣೆಯ ಕೊಡುವೆ ಕಾಣಾ ಗುಹೇಶ್ವರಾ./54

  55. ಅಂದಂದಿನ ಮಾತನು ಅಂದಂದಿಗೆ ಅರಿಯಬಾರದು.
    ಹಿಂದೆ ಹೋದ ಯುಗಪ್ರಳಯಂಗಳ ಬಲ್ಲವರಾರಯ್ಯಾ ?
    ಮುಂದೆ ಬಪ್ಪ ಯುಗಪ್ರಳಯಂಗಳ ಬಲ್ಲವರಾರಯ್ಯಾ ?
    ಬಸವಣ್ಣನು ಆದಿಯಲ್ಲಿ ಲಿಂಗಶರಣನೆಂಬುದ
    ಭೇದಿಸಿ ನೋಡಿ ಅರಿವರಿನ್ನಾರಯ್ಯಾ ?
    ಲಿಂಗ ಜಂಗಮ ಪ್ರಸಾದದ ಮಹಾತ್ಮೆಗೆ
    ಬಸವಣ್ಣನೆ ಆದಿಯಾದನೆಂಬುದನರಿದ ಸ್ವಯಂಭು ಜ್ಞಾನಿ,
    ಗುಹೇಶ್ವರಲಿಂಗದಲ್ಲಿ ಚನ್ನಬಸವಣ್ಣನೊಬ್ಬನೆ./55

  56. ಅಂದಾದಿಬಿಂದುವಿಲ್ಲದಂದು ಅಂದಾ ಜೀವನೆಲ್ಲಿಪ್ಪುದೊ ?
    ಪಿಂಡ ರೂಪಿಸುವಲ್ಲಿ ಆ ಜೀವ ಬಂದು ಪರಿಯೆಂತುಟೊ ?
    ಇದನರಿದಡೆ ಗುರುವೆಂಬೆ, ಲಿಂಗವೆಂಬೆ, ಜಂಗಮವೆಂಬೆ,
    ಅಲ್ಲದಿದ್ದಡೆ ನರನೆಂಬೆ ಕಾಣಾ ಗುಹೇಶ್ವರಾ/56

  57. ಅಂದಿನ ದಿನವನಂತಿರಿಸಿ, ಇಂದಿನ ದಿನವನಿಂತಿರಿಸಿ,
    ತಾ ಬೇರೆ ಮತ್ತೊಂದು ಪರಿಯಾದ ಅಪ್ಪಣ್ಣನು.
    ಅಂದಿನವನಂತಾಗದೆ ಇಂದಿನವನಂತಾಗದೆ, ಅಂತಿಂತುವ ಕೆಡಿಸಿ
    ಮತ್ತೊಂದಾದನು(ನ?)ವ.
    ಶ್ರುತಿಗೆಟ್ಟು ಮತಿಗೆಟ್ಟು ಹದಗೆಟ್ಟು ಹವಣುಗೆಟ್ಟು,
    ಬಿಮ್ಮುಗೆಟ್ಟು ಬೆಮಳ ವಿಮಳನಾದ ಅಪ್ಪಣ್ಣನು.
    ಗಣಿತ ಗುಣಿತವನಳಿದುಳಿದು,
    ಅಗಣಿತನಚಳಿತನಾದ ಅಪ್ಪಣ್ಣನು.
    ಅಮಳೋಕ್ಯವಾದ ಘನವ, ಅಮಳೋಕ್ಯವಾದ ಮಹವ,
    ಅಮಳೋಕ್ಯವಾದ ನಿಜದ ನಿಲವ ;
    ಕುಲಗೆಟ್ಟ, ಛಲಗೆಟ್ಟ, ಲಜ್ಜೆಗೆಟ್ಟ, ಭವಗೆಟ್ಟ
    ಗುಹೇಶ್ವರನ ಶರಣ ಸಂಗಮೇಶ್ವರದ ಅಪ್ಪಣ್ಣನು./57

  58. ಅಂದು ನೀ ಬಂದ ಬೆಂಬಳಿಯಲ್ಲಿ ನಾ ಬಂದೆ.
    ಅಂದಂದಿನ ಸಂದೇಹ ಹರಿಯಿತ್ತು.
    ನೀ ಭಕ್ತನಾಗಿ ನಾ ಜಂಗಮವಾಗಿ,
    ಗುಹೇಶ್ವರಲಿಂಗವೆಂಬುದಕ್ಕೆ ಅಂಗವಾಯಿತ್ತು./58

  59. ಅಂದೊಮ್ಮೆ ಧರೆಯ ಮೇಲೆ ಉದಕವಿಲ್ಲದಂದು
    ಕೆಳಯಿಂಕೆ ಪಾದವ ನೀಡಿದೆಯಲ್ಲಾ ಬಸವಣ್ಣ
    ಧರೆಯ ತಾಗಿದ ಪಾದವ ದಿಗಿಲನೆ ಎತ್ತಲು
    ಭುಗಿಲೆನೆ ಉದಕವೆದ್ದು ನಿಮ್ಮ ಉರಸ್ಥಲಕೆ ಬಾರದೆ ?
    ಕನಲಿ ಎದ್ದು ಅಂಕೆಗೆ (ಆಚೆಗೆ ?) ನಿಂದು ನೋಡಲು
    ಸಪ್ತ ಸಾಗರಂಗಳೆಲ್ಲವು ನಿಮ್ಮ ಕಿರುಪಾದದಲ್ಲಿ ಅಡಗವೆ ಬಸವಣ್ಣಾ ?
    ಅದನೆಂತು ಕೊಡಬಹುದು, ಅದನೆಂತು ಕೊಳಬಹುದು ?
    ನಮ್ಮ ಗುಹೇಶ್ವರಲಿಂಗಕ್ಕೆ
    ನಿಮ್ಮ ಪಾದೋದಕವೆ ಮಜ್ಜನ ಕಾಣಾ ಸಂಗನಬಸವಣ್ಣ./59

  60. ಅಂಬರದೊಳಗೊಂದು ಅಡವಿ ಹುಟ್ಟಿತ್ತು.
    ಆ ಅಡವಿಯೊಳಗೊಬ್ಬ ವ್ಯಾಧನೈದಾನೆ.
    ಆ ವ್ಯಾಧನ ಕೈಯಲ್ಲಿ ಸಿಕ್ಕಿತ್ತು ಒಂದು ಮೃಗವು.
    ಆ ಮೃಗವ ಕೊಂದಲ್ಲದೆ ವ್ಯಾಧ ಸಾಯನು !
    ಅರಿವು ಬರಿದುಂಟೆ ಗುಹೇಶ್ವರಾ ?/60

  61. ಅಂಬರವಿಲ್ಲದ ಮೇರು, ಅಂಬುದಿಯಿಲ್ಲದ ಗುಂಪ
    ತಂದವರಿಲ್ಲದೆ ಬಂದಿತ್ತು, ನಿಜವನೊಳಕೊಂಡಿತ್ತು
    ಸಾಧನವಿಲ್ಲದ ಓಗರವ ಭಾಜನವಿಲ್ಲದೆ ಗಡಣಿಸಿ
    ಭೋಜನವಿಲ್ಲದೆ ತೃಪ್ತಿಯಾಯಿತ್ತು ನೋಡಾ.
    ಕ್ರಿಯಾವಿರಹಿತಯೋಗ ಫಲದಾಯಕ ಹೀನಭಕ್ತಿ,
    ಆಯತ ಸ್ವಾಯತವರಿಯದೆ ಹೋಯಿತ್ತು ಗುಹೇಶ್ವರಾ./61

  62. ಅಂಬುದಿಯೊಳಗಾದ ನದಿಗಳು ಮರಳುವುವೆ ?
    ಉರಿಯೊಳಗಾದ ಕರ್ಪುರ ರೂಪಿಂಗೆ ಬಪ್ಪುದೆ ?
    ಮರುತನೊಳಗಾದ ಪರಿಮಳ ಲೇಪನಕ್ಕೆ ಬಪ್ಪುದೆ ?
    ಲಿಂಗವನರಿದು ಲಿಂಗೈಕ್ಯವಾದ ಶರಣ
    ಮರಳಿ ಹುಟ್ಟುವನೆ ಗುಹೇಶ್ವರಾ ?/62

  63. ಅಂಬುಧಿ ಉರಿಯಿತ್ತು ಅವನಿಯ ಮೇಲನರಿಯಲು.
    ಕೋಡೆರಡರೊಳೊಂದ ತಿಳಿದು, ವಾಯುವ ಬೈಯುತ್ತ, ತುಂಬಿ
    ಅಮೃತವ ಕಂಡು ಪ್ರಾಣನಾಥಂಗೆ ಅರ್ಪಿತವ ಮಾಡಿ,
    ಆ ಪ್ರಸಾದದಿಂದ ಸುಖಿಯಾದೆನಯ್ಯಾ-ಗುಹೇಶ್ವರಾ./63

  64. ಅಕಟಕಟಾ ದೇಹಾರ ಅಭ್ಯಾಸವಾಯಿತ್ತಲ್ಲಾ !
    ಅಕಟಕಟಾ ಓಗರ ಉಪಹಾರವಾಯಿತ್ತಲ್ಲಾ !
    ಅಕಟಕಟಾ ಅನುಭಾವ ಹೊಲಬುಗೆಟ್ಟು ಹೋಯಿತ್ತಲ್ಲಾ !
    ಅಕಟಕಟಾ ಷೋಡಶೋಪಚಾರವನರಿಯದೆ
    ಕೆಟ್ಟರಲ್ಲಾ ಗುಹೇಶ್ವರಾ./64

  65. ಅಕಲ್ಪಿತ ನಿತ್ಯ ನಿರಂಜನ ನಿಃಸೀಮ ನಿರವಯ
    ಅಖಂಡ ಪರಿಪೂರ್ಣ ಪರಂಜ್ಯೋತಿಯಾದ
    ಮಹಾ ಘನವಸ್ತುವಿನಲ್ಲಿ ಪರಮಾತ್ಮನುತ್ಪತ್ತಿ.
    ಆ ಪರಮಾತ್ಮನಿಂದ ಅಂತರಾತ್ಮನುತ್ಪತ್ತಿ.
    ಆ ಅಂತರಾತ್ಮನಿಂದ ಜೀವಾತ್ಮನುತ್ಪತ್ತಿ.
    ಈ ತ್ರಯಾತ್ಮರೊಳಗೆ ಜೀವ-ಅಂತರಾತ್ಮಾದಿಗಳೆ ಪಾಶಬದ್ಧರು
    ಪರಮಾತ್ಮನೆ ಪಾಶಮುಕ್ತನು.
    ಈ ಸಂಚವನರಿದ ದ್ವಂದ್ವರಹಿತ ತಾನೆ
    ನಮ್ಮ ಗುಹೇಶ್ವರಲಿಂಗದಲ್ಲಿ ಯಂತ್ರವಾಹಕನೆನಿಸುವನು./65

  66. ಅಕಲ್ಪಿತ ನಿತ್ಯ ನಿರಂಜನ ನಿರವಯ ನಿರಾಕಾರ ಪರಂಜ್ಯೋತಿ ಲಿಂಗದಲ್ಲಿ
    ಅಂತರಾತ್ಮಲಿಂಗ ಉತ್ಪತ್ತಿಯಾಯಿತ್ತು.
    ಆ ಅಂತರಾತ್ಮಲಿಂಗದಲ್ಲಿ ಜೀವಾತ್ಮಲಿಂಗ ಉತ್ಪತ್ತಿಯಾಯಿತ್ತು.
    ಆ ಅಂತರಾತ್ಮನೆ ಗುರು ಜೀವಾತ್ಮನೆ ಶಿಷ್ಯ, ಪರಮಾತ್ಮನೆ ಲಿಂಗ-
    ಇದು ಪ್ರಸಿದ್ಧವಾಕ್ಯ ನೋಡಯ್ಯಾ.
    ಲಿಂಗದೊಳಗಣ ಬೀಜ ಜಂಗಮ,
    ಆ ಜಂಗಮದ ಪ್ರಕಾಶವೆ ಗುರು,
    ಆ ಜಂಗಮದ ನಿರಾಕಾರವೆ ಲಿಂಗ,
    ಪರಮಾತ್ಮನೆ ಪ್ರಾಣಸ್ವರೂಪವೆಂಬ ಜಂಗಮ.
    ಈ ಗುರುಲಿಂಗಜಂಗಮವೆಂಬ ತ್ರಿವಿಧವು, ಏಕವೆಂದರಿಯದ ಕಾರಣ,
    ಬ್ರಹ್ಮ ಮುಂದುಗಾಣ, ಹರಿ ಹೊಲಬುಗೆಟ್ಟ, ರುದ್ರ ಧ್ಯಾನಾರೂಢನಾದ.
    ಇವರಂಡಜದೊಳಗಣ ಬಾಲಕರೆತ್ತ ಬಲ್ಲರು ಗುಹೇಶ್ವರಾ,
    ನಿಮ್ಮ ಮಹತ್ವವ ?/66

  67. ಅಕಲ್ಪಿತನೆಂಬ ಭಕ್ತ ಮಾಡಿದ ಸೈದಾನವ ನೋಡಾ !
    ಅನಂತಕೋಟಿ ಅಜಾಂಡಂಗಳೆ ಸೈದಾನವಾಗಿ,
    ಸವಿಕಲ್ಪಿತ ಸುಖಂಗಳೆಂಬವೆ ಶಾಕವಾಗಿ,
    ಸರ್ವಸ್ವಾದವೆಂಬುದೆ ಅಬಿಗಾರವಾಗಿ,
    ಇವೆಲ್ಲವನು ಸಹಜವೆಂಬ ಭಾಜನದಲ್ಲಿ ಎಡೆ ಮಾಡುತ್ತಿರಲು
    ಉಣಬಂದ ಹಿರಿಯರು ಉಣುತ್ತಿದ್ದರು ನೋಡಾ !
    ನಿರ್ವಿಕಲ್ಪವೆಂಬ ಮಹಂತ ಬರಲು ಸೈದಾನವಡಗಿತ್ತು ಭಾಜನ ಉಳಿಯಿತ್ತು.
    ಆ ಭಾಜನವ ಉತ್ತರನಿರಾಳದಲ್ಲಿ ಅಳವಡಿಸಿಕೊಳಲು
    ನಿಶ್ಚಳ ಘನಪ್ರಸಾದವಾಯಿತ್ತು ಗುಹೇಶ್ವರಾ./67

  68. ಅಕಾರದಾದಿಯನರಿ, ಕ್ಷಕಾರದಂತ್ಯವ ತಿಳಿ.
    ಅಕಾರ ಉಕಾರ ಮಕಾರದೊಳಗಣ ಓಂಕಾಪ್ರಭೆಯ ತಿಳಿ.
    ವೇದಾದಿ ಪಂಚಕದಾದಿಯನರಿ.
    ಐಶ್ವರ್ಯ ಮೊದಲಾದೈದು ನಾಮವನುಳ್ಳ
    ವಿಭೂತಿ ಭಸಿತ ಭಸ್ಮ ಕ್ಷಾರ ರಕ್ಷೆ ಎಂಬೈದು
    ನಿನ್ನಬಿಮುಖದಿಂದ ಜನನವೆ ಹೇಳು ಗುಹೇಶ್ವರಾ ?/68

  69. ಅಕ್ಕಟಾ ಜೀವನ ತ್ರಿವಿಧವೆ,
    ಮೂರಕ್ಕೆ ಮುಟ್ಟದೆ ಹೋದೆಯಲ್ಲಾ!
    ಬಿಂದುವಿನ ಕೊಡನ ಹೊತ್ತುಕೊಂಡು,
    ಅಂದಚಂದಗೆಟ್ಟು ಆಡುವರಯ್ಯಾ!
    ಗುಹೇಶ್ವರ ನಿರಾಳವೆ, ಐದರಿಂದ ಕೆಟ್ಟಿತ್ತು ಮೂರು ಲೋಕ/69

  70. ಅಕ್ಷರದಲಭ್ಯಾಸವ ಮಾಡಿ ಬರೆವ ತೊಡೆವ ಪರಿಯಿನ್ನೆಂತೊ?
    ಸ್ವರೂಪವೆಂಬುದಾವುದು ನಿರೂಪವೆಂಬುದಾವುದು ಅರಿಯರಾಗಿ,
    ಆದಿನಿರಾಳ ಮಧ್ಯನಿರಾಳ ಊಧ್ರ್ವನಿರಾಳ ಗುಹೇಶ್ವರ./70

  71. ಅಕ್ಷರವ ನೋಡಿ ಅಭ್ಯಾಸವ ಕಲಿತು,
    ನಾನಾವರ್ಣವನಿಟ್ಟು (ಕಳೆವಿರಿ?)ಭೋ,
    ಸ್ವರೂಪಾದಿಕನಲ್ಲ ನಿರೂಪಾದಿಕನಲ್ಲ,
    ಮಹಾಘನವು ಕಾಣಿ ಭೋ.
    ಆದಿನಿರಾಳ ಮಧ್ಯನಿರಾಳ ಊಧ್ರ್ವನಿರಾಳ ಗುಹೇಶ್ವರಯ್ಯನು ತಾನೆ./71

  72. ಅಕ್ಷರವ ಬಲ್ಲೆನೆಂ(ವೆಂ?)ದು ಅಹಂಕಾರವೆಡೆಗೊಂಡು, ಲೆಕ್ಕಗೊಳ್ಳರಯ್ಯಾ.
    ಗುರು ಹಿರಿಯರು ತೋರಿದ ಉಪದೇಶದಿಂದ;
    ವಾಗದ್ವೈತವನೆ ಕಲಿತು ವಾದಿಪರಲ್ಲದೆ
    ಆಗು-ಹೋಗೆಂಬುದನರಿಯರು.
    ಭಕ್ತಿಯನರಿಯರು ಯುಕ್ತಿಯನರಿಯರು, [ಮುಕ್ತಿಯನರಿಯರು]
    ಮತ್ತೂ ವಾದಕೆಳಸುವರು.
    ಹೋದರು ಗುಹೇಶ್ವರಾ ಸಲೆ ಕೊಂಡಮಾರಿಗೆ./72

  73. ಅಗ್ಗಣಿತಹೈಸಕ್ಕೆ ಅನಂತಯುಗಂಗಳು ಹೋಗುತ್ತಿವೆಯಯ್ಯಾ.
    ಪುಷ್ಪತಹೈಸಕ್ಕೆ ಅನಂತಯುಗಂಗಳು ಹೋಗುತ್ತಿವೆಯಯ್ಯಾ.
    ಲಿಂಗಾರ್ಚನೆ ಘನಲಿಂಗಕ್ಕೆಡೆಯಿಲ್ಲ !
    ಗುಹೇಶ್ವರಾ ಸಿದ್ಧರಾಮಯ್ಯದೇವರಿಗೆ ಆರೋಗಣೆಯಿಲ್ಲ,
    ಶರಣರಿಗೆ ಪ್ರಸಾದವಿಲ್ಲ./73

  74. ಅಗ್ಘವಣಿಯ ತಂದು ಮಜ್ಜನವ ಮರೆದವನ,
    ಪುಷ್ಪವ ತಂದು ಪೂಜೆಯ ಮರೆದವನ,
    ಓಗರವ ತಂದು ಅರ್ಪಿತವ ಮರೆದವನ,
    ಲಿಂಗವ ಕಂಡು ತನ್ನ ಮರೆದವನ,
    ಮಹಾಘನವ ಒಳಕೊಂಡಿತ್ತು ಗುಹೇಶ್ವರ./74

  75. ಅಗ್ನಿ ಮುಟ್ಟಲು ತೃಣ, ಭಸ್ಮವಾದುದನೆಲ್ಲರೂ ಬಲ್ಲರು.
    ತೃಣದೊಳಗೆ ಅಗ್ನಿಯುಂಟೆಂಬುದ ತಿಳಿದು ನೋಡಿರೆ.
    ಅಗ್ನಿ ಜಲವ ನುಂಗಿತ್ತು, ಜಲ ಅಗ್ನಿಯ ನುಂಗಿತ್ತು.
    ಪೃಥ್ವಿ ಎಲ್ಲವ ನುಂಗಿತ್ತು, ಆಕಾಶವನೆಯ್ದೆ ನುಂಗಿತ್ತು.
    ಅರಿದೆನೆಂಬ ಜಡರುಗಳು ನೀವು ತಿಳಿದು ನೋಡಿರೆ-
    ತಿಳಿಯಬಲ್ಲಡೆ ಗುಹೇಶ್ವರನ ನಿಲವು ತಾನೆ ! /75

  76. ಅಗ್ನಿ ಮುಟ್ಟಿದುದುವೊ, ಆಕಾಶದಲದೆವೊ
    ಉದಕ ಮುಟ್ಟಿದುದುವೊ, ನಿರಾಳದಲದೆವೊ
    ಬ್ರಹ್ಮರಂಧ್ರದಲದೆವೊ-ಭ್ರಮಿಸದೆ ನೋಡಾ !
    ಆವಂಗೆಯೂ ಅಸದಳ, ಆವಂಗೆಯೂ ಅರಿಯಬಾರದು!
    ಇದೇನು ಮಾಯೆ ಹೇಳಾ ಗುಹೇಶ್ವರಾ ?/76

  77. ಅಗ್ನಿಗೆ ತಂಪುಂಟೆ? ವಿಷಕ್ಕೆ ರುಚಿಯುಂಟೆ ಹೇಳಾ ?
    ಕಂಗಳಿಗೆ ಮರೆಯುಂಟೆ ಹೇಳಾ ಲಿಂಗವೆ ?
    ದಾಳಿಕಾರಂಗೆ ಧರ್ಮವುಂಟೆ ? [ಕನ್ನಗಳ್ಳಂಗೆ] ಕರುಳುಂಟೆ ?
    ಗುಹೇಶ್ವರಾ, ನಿಮ್ಮ ಶರಣರು,
    ಮೂರು ಲೋಕವರಿಯೆ ನಿಶ್ಚಟರಯ್ಯಾ./77

  78. ಅಗ್ನಿಯ ಒಡಲೊಳಗೊಬ್ಬ ಆಕಾಶವರ್ಣದ ಸೂಳೆ;
    ಆ ಸೂಳೆಗೆ ಮೂವರು ಮಕ್ಕಳು ನೋಡಾ !
    ಆ ಮಕ್ಕಳ ಕೈ ಬಾಯಲ್ಲಿ ಮೂರುಲೋಕ ಮರುಳಾಗಿ
    ಅಚ್ಚುಗಬಡುತ್ತಿರ್ದಡೇನು ಚೋದ್ಯವೊ ?
    ಕರಿಯ ಬಣ್ಣದ ಮುಸುಕನುಗಿದು ಬೆರೆಸಬಲ್ಲ ಶರಣಂಗಲ್ಲದೆ
    ಪರಮತತ್ವ(ಪರತತ್ವ ?)ವೆಂಬುದು ಸಾಧ್ಯವಾಗದು ಗುಹೇಶ್ವರಾ./78

  79. ಅಗ್ನಿಯ ಸುಡುವಲ್ಲಿ ಉದಕವ ತೊಳೆವಲ್ಲಿ
    ವಾಯುವ ಮೆಟ್ಟಿ ಆಕಾಶವ ಹಿಡಿವಲ್ಲಿ
    ಯೋಗದ ಹೊಲಬ ನೀನೆತ್ತ ಬಲ್ಲೆ?
    ಕದಳಿಯ ಬನವ ನಿನ್ನಲ್ಲಿ ನೀನು ತಿಳಿದು ನೋಡು,
    ಮದ ಮತ್ಸರ ಬೇಡ. ಹೊದಕುಳಿಗೊಳಬೇಡ.
    ಗುಹೇಶ್ವರನೆಂಬ ಲಿಂಗವು ಕಲ್ಪಿತವಲ್ಲ ನಿಲ್ಲೊ./79

  80. ಅಗ್ನಿಸ್ತಂಭದ ರಕ್ಷೆಯಿದ್ದು ಮನೆ ಬೆಂದಿತ್ತಯ್ಯಾ.
    ಬಲಮುರಿಯ ಶಂಖವಿದ್ದು ಪದ ಹೋಯಿತ್ತಯ್ಯಾ.
    ಏಕಮುಖ ರುದ್ರಾಕ್ಷಿಯಿದ್ದು ವಿಘ್ನವಾಯಿತ್ತಯ್ಯಾ.
    ಇವೆಲ್ಲವ ಸಾದಿಸಿದಡೆ,
    ಏನೂ ಇಲ್ಲದಂತಾಯಿತ್ತು ಕಾಣಾ ಗುಹೇಶ್ವರಾ./80

  81. ಅಘಟಿತ ಘಟಿತನೆ ವಿಪರೀತ ಚರಿತ್ರನೆ,
    ಸಾವರ ಕೈಯಲ್ಲಿ ಪೂಜೆಗೊಂಬರೆ ಲಿಂಗಯ್ಯಾ ?
    ಸಾವರ ನೋವರ ಕೈಯಲ್ಲಿ ಪೂಜೆಗೊಂಬುದು
    ಲಜ್ಜೆ ಕಾಣಾ – ಗುಹೇಶ್ವರಾ./81

  82. ಅಚಲಸಿಂಹಾಸನವನಿಕ್ಕಿ;
    ನಿಶ್ಚಲ ಮಂಟಪದ ಸಂಚದೋವರಿಯೊಳಗೆ;
    ರುಚಿಗಳೆಲ್ಲವ ನಿಲಿಸಿ-
    ಪಂಚರತ್ನದ ಶಿಖರ, ಮಿಂಚುಕೋಟಿಯ ಕಳಸ,
    ವಚನ ವಿಚಿತ್ರದ ಪುಷ್ಪದ ರಚನೆ[ಯ] ನವರಂಗದಲ್ಲಿ,
    ಖೇಚರಾದಿಯ ಗಮನ.
    ವಿಚಾರಿಪರ ನುಂಗಿ.-ಗುಹೇಶ್ವರ ನಿಂದ ನಿಲುವು
    ಸಚರಾಚರವ ನುಂಗಿತ್ತು/82

  83. ಅಚ್ಚಪ್ರಸಾದಿ ಅಚ್ಚಪ್ರಸಾದಿ ಎಂಬಿರಿ ಕೇಳಿರಯ್ಯಾ;
    ನಿಚ್ಚಕ್ಕೆ ನಿಚ್ಚ ಹುಸಿವ ಹುಸಿಗಳ ಕಂಡೆವಯ್ಯಾ [ನಿಮ್ಮಲ್ಲಿ].
    ವಾಯು ಬೀಸದ ಮುನ್ನ, ಆಕಾಶ ಬಲಿಯದ ಮುನ್ನ,
    ಲಿಂಗಕ್ಕೆ ಅರ್ಪಿತಮುಖವ ಮರೆದಿರಯ್ಯಾ.
    ಭೋಜನವ ಮಾಡಿ ಭಾಜನವನಿಕ್ಕಿಟ್ಟು ಹೋಹ ಹಿರಿಯರಿಗೆ
    ಭಂಗ ನೋಡಾ ಗುಹೇಶ್ವರಾ./83

  84. ಅಚ್ಚಪ್ರಸಾದಿ ನಿಚ್ಚಪ್ರಸಾದಿಯೆಂಬ ಮುಚ್ಚಟ ಮುದಿಹೊಲೆಯರಿರಾ
    ನೀವು ಕೇಳಿರೊ.
    ಮುಟ್ಟುವ ಯೋನಿ ಮೆಟ್ಟುವ ಪಾದರಕ್ಷೆ ಈ ಎರಡೆಂಬ ಉಭಯಭ್ರಷ್ಟರಿಗೆ
    ಎಲ್ಲಿಯದೊ ಪ್ರಸಾದ ಗುಹೇಶ್ವರಾ ?/84

  85. ಅಜ್ಞಾನ ಸುಜ್ಞಾನಗಳೆರಡೂ ಶಿವನೆಂದಡೆ
    ಶಿವಜ್ಞಾನಿಗಳು ಮೆಚ್ಚುವರೆ ?
    ಶಿವ ಶಕ್ತಿಗಳೆರಡೂ ನೀನೇ ಎಂದಡೆ
    ಮಹಾನುಭಾವಿಗಳು ಪರಿಣಾಮಿಸುವರೆ ?
    ತನ್ನ ತಾನಾರೆಂಬುದನರಿಯದೆ, ಅನ್ಯವೆಲ್ಲವೂ ಬೊಮ್ಮವೆಂಬ,
    ಈ ಕರ್ಮದ ನುಡಿಯ ಮೆಚ್ಚುವನೆ ನಮ್ಮ ಗುಹೇಶ್ವರಲಿಂಗವು ?/85

  86. ಅಜ್ಞಾನವೆಂಬ ತೊಟ್ಟಿಲೊಳಗೆ, ಜ್ಞಾನವೆಂಬ ಶಿಶುವ ಮಲಗಿಸಿ,
    ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ,
    ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ !
    ತೊಟ್ಟಿಲು ಮುರಿದು ನೇಣು ಹರಿದು, ಜೋಗುಳ ನಿಂದಲ್ಲದೆ,
    ಗುಹೇಶ್ವರನೆಂಬ ಲಿಂಗವ ಕಾಣಬಾರದು/86

  87. ಅಜ್ಞಾನಿಯಾದವಂಗೆ ಅರಿವು ತಾನೆಲ್ಲಿಯದೊ ?
    ಸುಜ್ಞಾನಿಯಾದವಂಗೆ ಮರಹು ತಾನೆಲ್ಲಿಯದೊ ?
    ನಾನರಿದೆನೆಂಬಾತ ಇದಿರ ಕೇಳಲುಂಟೆ ?
    ಭ್ರಾಂತಿನ ಭ್ರಮೆಯೊಳಗೆ ಬಳಲುತ್ತಿರಲು
    ಮಾತಿನ ಮಾತಿನೊಳಗೆ ಅರಿವೆಂಬುದುಂಟೆ ?
    ಸೂತಕ ಹಿಂಗದೆ ಸಂದೇಹವಳಿಯದೆ,
    ಮುಂದಣ ಸೂಕ್ಷ್ಮವ ಕಾಬ ಪರಿಯೆಂತೊ?
    ಜ್ಯೋತಿಯ ಬಸಿರೊಳಗೆ ಜನಿಸಿದ
    ಕಾಂತಿಯೂಥ(ಯುತ?) ಬೆಳಗು ಗುಹೇಶ್ವರಾ ನಿಮ್ಮ ಶರಣ ! /87

  88. ಅಟ್ಟದ ಮೇಲೆ ಹರಿದಾಡುವ ಇಲಿ
    ಕಾದಿರ್ದ ಬೆಕ್ಕ ತಪ್ಪಿಸಿ,
    ಬೆಕ್ಕಿನ ಕಣ್ಣೊಳಡಗಿತ್ತು !
    ಕಣ್ಣೂ ಇಲಿಯೂ ಕೂಡೆ
    ಗುಹೇಶ್ವರಲಿಂಗವ ಕಂಡುದಿಲ್ಲ./88

  89. ಅಟ್ಟಿ ಮುಟ್ಟಲಿಲ್ಲ, ಮುಟ್ಟಿ ಮರಳಲಿಲ್ಲ,
    ಏನೆಂಬೆ ಲಿಂಗವೆ, ಎಂತೆಂಬೆ ಲಿಂಗಯ್ಯಾ ?
    ನಿಜವನರಿದ ಬಳಿಕ ಮರಳಿ ಹುಟ್ಟಲಿಲ್ಲ, ಕಾಣಾ ಗುಹೇಶ್ವರಾ./89

  90. ಅಟ್ಟಿತ್ತೊಂದು, ಓಡಿತ್ತೊಂದು, ಮುಟ್ಟಿ ಹಿಡಿಯಿತ್ತೊಂದು.
    ಅಟ್ಟಾಟಿಕೆಯಲಿ ಅರಿದಾವುದು !
    ಹಸು ಮಾಣಿಕ್ಯವ ನುಂಗಿ ಬ್ರಹ್ಮೇತಿಗೊಳಗಾಯಿತ್ತು.
    ಮೂರ್ತಿಯಾದುದೆ ಅಮೂರ್ತಿಯಾದತ್ತು,
    ಅಮೂರ್ತಿಯಾದುದೆ ಮೂರ್ತಿಯಾದತ್ತು.
    ಇದನೆಂತು ತೆಗೆಯಬಹುದು ? ಇದನೆಂತು ಕೊಳಬಹುದು !
    ಅಗಮ್ಯ, ಅಗೋಚರ.
    ಕಾಯವು ಲಿಂಗದೊಳಡಗಿ, ಪ್ರಾಣವು ಲಿಂಗದೊಳಗಿದ್ದು,
    ನೀನೆನ್ನ ಕರಸ್ಥಲದೊಳಗೆ ಮೂರ್ತಿಗೊಂಡು,
    ಕಾರುಣ್ಯವ ಮಾಡು ಗುಹೇಶ್ವರಾ./90

  91. ಅಟ್ಟಿಮುಟ್ಟಿತ್ತು ಮನ,
    ದೃಷ್ಟಿ ಲಿಂಗದ ಮೇಲೆ,
    ತನ್ನ ತಾನರಿದಾತ ತಾನೆ ಮರೆದ
    ಗುಹೇಶ್ವರ ಅಲ್ಲಯ್ಯ ನಿಶ್ಶಬ್ದ ಲಿಂಗದಲ್ಲಿ./91

  92. ಅಟ್ಟುದನಡಲುಂಟೆ ? ಸುಟ್ಟುದ ಸುಡಲುಂಟೆ ?
    ಜ್ಞಾನಾಗ್ನಿಯಲ್ಲಿ ದಗ್ಧವಾದ ಪರಮಶಿವಯೋಗಿಗೆ
    ಹುಟ್ಟು ಹೊಂದೆಂಬ ಉಭಯ ಜಡತೆಯುಂಟೆ ?
    ಅದೆಂತೆಂದಡೆ:
    “ದಗ್ಧಸ್ಯ ದಹನಂ ನಾಸ್ತಿ ಪಾಕಸ್ಯ ಪಚನಂ ನ ಹಿ
    ಜ್ಞಾನಾಗ್ನಿರ್ದಗ್ಧದೇಹಸ್ಯ ನ ಚ ದಾಹೋ ನ ಚ ಕ್ರಿಯಾ ”
    ಎಂದುದಾಗಿ-
    ನಮ್ಮ ಗುಹೇಶ್ವರಲಿಂಗವನೊಡಗೂಡಿ, ಎರಡಳಿದು ನಿಂದ,
    ಮಹಾಮಹಿಮಂಗೆ ಪರಿಭವವಿಲ್ಲ ಕಾಣಿರೊ./92

  93. ಅಡವಿಯಲೊಂದು ಮನೆಯ ಮಾಡಿ,
    ಆಶ್ರಯವಿಲ್ಲದಂತಾಯಿತ್ತು.
    ನಡುನೀರಿನ ಜ್ಯೋತಿಯ, ವಾಯುವಿನ ಕೈಯಲ್ಲಿ ಕೊಟ್ಟಂತಾಯಿತ್ತು.
    ಗುಹೇಶ್ವರಾ ನಿಮ್ಮ ಶರಣರು ಎರವಿನ ಲಿಂಗ ಮೂರು ಲೋಕಕ್ಕೆ !/93

  94. ಅಡವಿಯೊಳಗೆ ಕಳ್ಳರು ಕಡವಸಿದ್ಧ (ಕಡವಸದ?) ಸ್ವಾಮಿಯನು
    ಹುಡುಕಿ ಹುಡುಕಿ ಅರಸುತ್ತೈದಾರೆ.-ಸೊಡರು ನಂದಿ ಕಾಣದೆ !
    ಅನ್ನ ಪಾನದ ಹಿರಿಯರೆಲ್ಲರು ತಮ್ಮತಾವರಿಯದೆ,
    ಅಧರಪಾನವನುಂಡು ತೇಗಿ, ಸುರಾಪಾನವ ಬೇಡುತ್ತೈದಾರೆ.
    ಅರಿದ ಹಾರುವನೊಬ್ಬನು ಅರಿದ ತಲೆಯ ಹಿಡಿದುಕೊಂಡು,
    ಆಧ್ಯಾತ್ಮವಿಕಾರದ ನೆತ್ತರ ಕುಡಿದನು ನೋಡಾ-ಗುಹೇಶ್ವರಾ./94

  95. ಅಡಿಗಡಿಗೆ ತೊಳೆದು ಕುಡಿವಡೆ ಹೊಟ್ಟೆಯ ಜಲಗರಕುತ್ತ ಬೆಳೆಯಿತ್ತೆ ?
    ಅಚ್ಚ ಪ್ರಸಾದಿಯಾದಡೆ ಹಿಂದೆ ಪರಿಯಾಣ ಉಳಿವುದೆ ?
    ಇವರೆಲ್ಲರು ನಿಮ್ಮ ಪೂಜಿಸಿ ವ್ರತಗೇಡಿಗಳಾದರು.
    ನಾ ನಿಮ್ಮ ಪೂಜಿಸಿ ಬದುಕಿದೆನು ಗುಹೇಶ್ವರಾ !/95

  96. ಅಣುವಿಂಗೆ ಅಣು ಮಹತ್ತಿಂಗೆ ಮಹತ್ತು ಆದಲ್ಲಿ
    ಮರದೊಳಗಣ ಪತ್ರ-ಫಲಂಗಳು
    ಕಾಲವಶದಲ್ಲಿ ತೋರುವಂತೆ
    ಹರನೊಳಗಣ ಲೀಲಾಪ್ರಕೃತಿಸ್ವಭಾವ
    ಹರಲೀಲಾವಶದಲ್ಲಿ ತೋರುವುದು
    ಶಿವನೆ ಚೈತನ್ಯಾತ್ಮನು ಚಿತ್ಸ್ವರೂಪನೆಂದರಿಯಬಲ್ಲರೆ
    ಬಿನ್ನವೆಲ್ಲಿಯದೊ ಗುಹೇಶ್ವರಾ./96

  97. ಅಣೋರಣೀಯಾನ್ ಮಹತೋ ಮಹೀಯಾನ್” ಎಂಬ ಶ್ರುತಿ ಹುಸಿ.
    ಲಿಂಗವಿದ್ದಠಾವಿಂಗೆೆ(ಠಾವಿನಲ್ಲಿ?) ಪ್ರಳಯವುಂಟೆ?
    ಭಕ್ತರ ಭಾವದಲ್ಲಿರ್ಪನಲ್ಲದೆ, ಮತ್ತೆಲ್ಲಿಯೂ ಇಲ್ಲ ಗುಹೇಶ್ವರನು./97

  98. ಅತಿರಥ ಸಮರಥರೆನಿಪ ಹಿರಿಯರು,
    ಮತಿಗೆಟ್ಟು ಮರುಳಾದರಲ್ಲಾ !
    ದೇವಸತ್ತ ಬ್ರಹ್ಮ ಹೊತ್ತ, ವಿಷ್ಣು ಕಿಚ್ಚ ಹಿಡಿದ.
    ಗಂಗೆಗೌರಿಯರಿಬ್ಬರು ಬರು ಮುಂಡೆಯರಾದರು.
    ಇದ ಕಂಡು ಬೆರಗಾದೆ ಗುಹೇಶ್ವರಾ. /98

  99. ಅತ್ತಲಿಂದ ಒಂದು ಪಶುವು ಬಂದು,
    ಇತ್ತಲಿಂದ ಒಂದು ಪಶುವು ಬಂದು,
    ಒಂದರ ಮೋರೆಯನೊಂದು ಮೂಸಿ ನೋಡಿದಂತೆ,
    ಗುರುವು ಗುರುವಿನೊಳಗೆ ಸಂಬಂಧವಿಲ್ಲ ಶಿಷ್ಯರು ಶಿಷ್ಯರೊಳಗೆ ಸಂಬಂಧವಿಲ್ಲ,
    ಭಕ್ತರಲಿ ಭಕ್ತರಲಿ ಸಂಬಂಧವಿಲ್ಲ.
    ಈ ಕಲಿಯುಗದೊಳಗುಪದೇಶವ ಮಾಡುವ ಹಂದಿಗಳಿರಾ ನೀವು ಕೇಳಿರೊ,
    ಗಂಡಗೆ ಗುರುವಾದಡೆ ಹೆಂಡತಿಗೆ ಮಾವನೆ ?
    ಹೆಂಡತಿಗೆ ಗುರುವಾದಡೆ ಗಂಡಂಗೆ ಮಾವನೆ ?
    ಗಂಡ ಹೆಂಡತಿಗೆ ಗುರುವಾದಡೆ ಇವರಿಬ್ಬರೇನು ಒಡಹುಟ್ಟಿದರೆ ?
    ಈ ಭೇದವನರಿಯದೆ ದೀಕ್ಷೆ ಕಾರಣವ ಮಾಡುವಾತ ಗುರುವಲ್ಲ.
    ಈ ಕಳೆಯ ಕುಲವನರಿಯದಾತ ಶಿಷ್ಯನಲ್ಲ.
    ಈ ಭೇದವನರಿದು ಕಾರಣವ ಮಾಡುವ ಗುರುಶಿಷ್ಯ ಸಂಬಂಧವೆಲ್ಲ
    ಉರಿ ಕರ್ಪುರ ಸಂಯೋಗದಂತಹುದು ಕಾಣಾ ಗುಹೇಶ್ವರಾ./99

  100. ಅತ್ತಲಿತ್ತಲು ಕಾಣಲಿಲ್ಲ, ಬಯಲ ಧಾಳಿ ಮುಟ್ಟಿತ್ತಲ್ಲಾ !
    ಸರಳಮಂಡಲ ಮಂಜಿನ ಕಾಳಗತ್ತಲೆ ಕವಿಯಿತ್ತು.
    ರವಿಯ ರಥದಚ್ಚು ಮುರಿಯಿತ್ತು !
    ಶಶಿ ಅಂಶದ ನಿಲವನು ರಾಯ (ರಾಹು ?) ಗೆದ್ದುದ ಕಂಡು
    ಹಿರಿಯರು ಹೊಲಬುಗೆಟ್ಟರು ಗುಹೇಶ್ವರಾ./100

  101. ಅದೃಷ್ಟಕರಣದ ಮೇಲಣ ಪೂರ್ವಾಶ್ರಯವ ಕಳೆದು
    ಗುರುವಿನ ಹಸ್ತ ಮುಟ್ಟಿತ್ತೆಂಬ ಸಂದಣಿಯಲ್ಲಿ ಹೋಗದು.
    ಪಂಚೇಂದ್ರಿಯ ಲಿಖಿತವ ತೊಡೆದು, ಲಿಂಗಲಿಖಿತವ ಬರೆವುದು
    ಶಿಷ್ಯನ ಕೈಯಲ್ಲಲ್ಲದೆ ಗುರುವಿನ ಕೈಯಲಾಗದು.
    ಭವಿ ಮಾಡುವ ಬೋನವ,
    ಭಕ್ತ ಕಾಣದ ಹಾಗೆ ಅರ್ಪಿಸುವ ಭೇದವರಿದು,
    ಪ್ರಸಾದದ ಪೂರ್ವಾಶ್ರಯವ ಕಳೆದು,
    ರೂಪಿಸಬಲ್ಲೆವೆಂದಡೆ ಹರಿಯದು.
    ಗುರುವಿಲ್ಲದ ಶಿಷ್ಯ ಶಿಷ್ಯನಿಲ್ಲದ ಗುರು-
    ಇಂತೀ ಒಂದಕ್ಕೊಂದು ಇಲ್ಲದೆ
    ಗುಹೇಶ್ವರಲಿಂಗದಲ್ಲಿ ಸಹಜದುದಯವಾದ
    ನಮ್ಮ ಚನ್ನಬಸವಣ್ಣಂಗೆ ನಮೋ ನಮೋ ಎಂಬೆನು./101

  102. ಅದ್ಭುತವೆಂಬ ಪಿಶಾಚಿ ಮೂರುಲೋಕವನವಗ್ರಹಿಸಿತ್ತಯ್ಯಾ!
    ಆ ಅದ್ಭುತದೊಳಗೊಂದು ಗ್ರಹ, ನಿರಂತರ ನಲಿದಾಡುತ್ತಿದ್ದಿತ್ತಯ್ಯಾ!
    ವಜ್ರಯೋಗಿ ಖಗರಂಧ್ರಪುರದಲ್ಲಿ,
    ಗುಹೇಶ್ವರಲಿಂಗವು ತಾನೇ ನೋಡಾ./102

  103. ಅದ್ವೈತನ ಕರಸ್ಥಲದೊಳಗೆ, ಅನಂತನೆಂಬ ಗಿಳಿ ಮೂರ್ತಗೊಂಡು
    ಅತೀತ ಅನಾಗತ ವರ್ತಮಾನವೆಂಬ ಕೊರೆಕೂಳನುಂಡು
    ಓದಿತ್ತು ಅಗಣಿತ ಪುರಾಣ(ವ), ಅನಾಮಯ ಶಾಸ್ತ್ರವನು,
    ಅನುಪಮ ವೇದವೆಂದು.-
    ನಿಃಸ್ಥಲವ ಸ್ಥಲವಿಡಲು,
    ನಿರ್ಮಳಾತ್ಮಂಗೆ ಇಹವಿಲ್ಲ ಪರವಿಲ್ಲ !
    ಆದಿ ಮಧ್ಯಾಂತ ನಿರಾಳ ಗುಹೇಶ್ವರನ ಅನುಭವಿಗೆ
    ಸರ್ವಾಂಗ ಲಿಂಗವು !/103

  104. ಅದ್ವೈತವ ನುಡಿದು ಅಹಂಕಾರಿಯಾದೆನಯ್ಯಾ.
    ಬ್ರಹ್ಮವ ನುಡಿದು ಭ್ರಮಿತನಾದೆನಯ್ಯಾ.
    ಶೂನ್ಯವ ನುಡಿದು ನಾನು ಸುಖದುಃಖಕ್ಕೆ ಗುರಿಯಾದೆನಯ್ಯಾ.
    ಗುಹೇಶ್ವರಾ ನಿಮ್ಮ ಶರಣ ಸಂಗನಬಸವಣ್ಣನ ಸಾನ್ನಿಧ್ಯದಿಂದ
    ನಾನು ಸದ್ಭಕ್ತನಾದೆನಯ್ಯಾ./104

  105. ಅದ್ವೈತವೆಂಬ ಶಿಶುವೆನ್ನ ಕರಸ್ಥಲವ ಸೋಂಕಲೊಡನೆ
    ಎನ್ನ ತನ್ನಂತೆ ಮಾಡಿತ್ತಾಗಿ,
    ಎನ್ನ ನಾನೆಂಬ ವಿಚಾರವು ಅರತು ಹೋಯಿತ್ತು ಕೇಳಾ.
    ಮತ್ತೆ ಅನ್ಯವಿಚಾರವನೆಂತೂ ಅರಿಯೆನು.
    ಎನ್ನ ಪೂರ್ವಾಪರವ ನಿಮ್ಮಿಂದಲರಿಯಲೆಂದು ಬಂದು
    ನಿಮ್ಮ ಮರೆಹೊಕ್ಕೆನಾಗಿ,
    ಸಂಗನಬಸವಣ್ಣನ ಮಹಿಮೆಯ ನಾನೆತ್ತ ಬಲ್ಲೆನು ?
    ಗುಹೇಶ್ವರನ ಸಾಕ್ಷಿಯಾಗಿ
    ಸಂಗನಬಸವಣ್ಣ ನಿನ್ನ ಅಂತರಂಗದೊಳಗೆ ಬೆಳಗುತ್ತೈದಾನೆ.
    ಎನಗೊಮ್ಮೆ ಬಸವಣ್ಣನ ಘನವ ತಿಳುಹಿ ಕೊಡಾ ಚೆನ್ನಬಸವಣಾ/105

  106. ಅಧರ ತಾಗಿದ ರುಚಿಯ, ಉದರ ತಾಗಿದ ಸುಖವ,
    ಲಿಂಗಾರ್ಪಿತವ ಮಾಡಿದಡೆ ಕಿಲ್ಬಿಷ ನೋಡಿರೆ.
    ಓಗರ ಪ್ರಸಾದವಲ್ಲ; ಪ್ರಸಾದ ಅರ್ಪಿತವಲ್ಲ.
    ಇದನರಿದ ಶರಣಂಗೆ ಆಚಾರವಿಲ್ಲ, ಆಚಾರವಿಲ್ಲದ ಶರಣಂಗೆ ಲಿಂಗವಿಲ್ಲ.
    ಲಿಂಗವಿಲ್ಲದ ಶರಣನ ನಿಲವು;
    ಶಿವಸಂಪತ್ತಿನಲಾದ ಉದಯ, ವಿಪರೀತ ಸುಳುಹು !
    ಪ್ರಕಟಸಂಸಾರದ ಬಳಕೆಯ ಹೊಡಕಟ್ಟಿ ಹಾಯ್ದು
    ನಿಬ್ಬೆರಗು ಎಸೆವುದು ಅರಿವಿನ (ಎರವಿನ?) ಘಟದಲ್ಲಿ !
    ಅರ್ಪಿಸಿದ ಪ್ರಸಾದವನು ಭೇದದಿಂದ ರುಚಿಸುವನಲ್ಲ ಕೇಳಿರಯ್ಯಾ.
    ದಿಟವ ಬಿಟ್ಟು ಸಟೆಯಲ್ಲಿ ನಡೆಯ ನೋಡಾ.
    ಇಲ್ಲದ ಲಿಂಗವನುಂಟುಮಾಡಿ ಪೂಜಿಸುವ,
    ಬರಿಯ ಬಣ್ಣಕರೆಲ್ಲ ನೀವು ಕೇಳಿರೆ.
    ನೀವು ಪೂಜಕರಪ್ಪಿರಲ್ಲದೆ,
    ಗುಹೇಶ್ವರಲಿಂಗವಿಲ್ಲೆಂಬ ಶಬುದ ಸತ್ತು ಹುಟ್ಟುವರಿಗೆಲ್ಲಿಯದೊ ?/106

  107. ಅನಂತಕೋಟಿ ಪ್ರಕಾಶವೆಂದು ಗಣಿಸಬಾರದ ಬ್ರಹ್ಮದಾ ಬೆಳಗು,
    ನೋಡಬಾರದ ಘನವು ತೆರಹಿಲ್ಲದ ಬೆಳಗು, ಮಹಾಬೆಳಗು !
    ತನ್ನಿಂದ ತಾನಾದ ಸ್ವಯ ಸುಖದ ನಿಜ, ನಿತ್ಯ ನಿಜ;
    ರೂಪು ನಿರಂಜನ, ನಿಗಮಕ್ಕತೀತ !
    ಹರಿಯಜರಿಗೆಟುಕದ ಜ್ಯೋತಿರ್ಮಯ ತಾನೆ
    ಲೀಲೆಗೆ ಮೂಲವಾದ.
    ಗುಹೇಶ್ವರಲಿಂಗ ಘನಕ್ಕೆ, ಘನವಾದುದು !/107

  108. ಅನಲನಾರಣ್ಯದೊಳಗೆ ಎದ್ದಲ್ಲಿ;
    ದೂ(ಧು?)ರದೆಡೆಯಲಾರನೂ ಕಾಣೆವು,
    ಸಂಗ್ರಾಮದಿರರೆಲ್ಲರೂ ನೆಲೆಗೆಟ್ಟರಾಗಿ !
    ಮಾಯಾಮಂಜಿನ ಕೋಟೆಗೆ, ರಂಜನೆಯ ಕೊತ್ತಳ, ಅಂಜನೆಯ ಕಟ್ಟಳೆ.
    ಗುಹೇಶ್ವರನು ಶರಣ ಐಕ್ಯಸ್ಥಲವ ಮೆಟ್ಟಲೊಡನೆ,
    ಸರ್ವವೂ ಸಾಧ್ಯವಾಯಿತ್ತು./108

  109. ಅನಾದಿ ಶರಣನ ಹೃತ್ಕಮಲ ಮಧ್ಯದ
    ತೇಜೋಮಯವನೇನೆಂದುಪಮಿಸಯ್ಯಾ ?
    ಜಲವೆ ಪಾದಶಿಲೆ, ಪೃಥ್ವಿಯೆ ಪಿಂಡಿಗೆ
    ಆಕಾಶವೆ ಲಿಂಗ, ಸಪ್ತಸಮುದ್ರಗಳೆ ಪಂಚಾಮೃತ,
    ಮೇಘವೆ, ಅಗ್ಘವಣಿಯ ಬಿಂದಿಗೆ, ಮಳೆಗಾಲವೆ ಮಜ್ಜನ,
    ಚಂದ್ರಮನೆ ನೊಸಲ ಗಂಧ, ನಕ್ಷತ್ರವೆ ಅಕ್ಷತೆ,
    ತರುಮರಾದಿಗಳೆ ಪತ್ರೆಪುಷ್ಪ, ಮೊಳಗೆ ಪಂಚಮಹಾವಾದ್ಯ !
    ಮಾಗಿಯೆಂಬ ಪರಿಯಾಣವ ಬೆಳಗಿ, ಬೇಸಗೆಯೆಂಬ ಓಗರವ ಗಡಣಿಸಿ
    ಸರ್ವಪರಿಮಳವೆಂಬ ತುಪ್ಪವನೆರೆದು, ಪರವೆಂಬ ಮೇಲೋಗರವನಿಕ್ಕಿ
    ಬೆಳಗು ಕತ್ತಲೆಯೆಂಬ ಕನ್ನಡವ ಕಟ್ಟಿ,
    ಲಿಂಗವ ಆರೋಗಣೆಯ ಮಾಡಿಸಿ
    ಸುಜ್ಞಾನದಲ್ಲಿ ಕೈಗೆರೆದು
    ಭಾವವೆಂಬ ವೀಳೆಯವ ಕೊಟ್ಟು,
    ಅನು ನೀನೆಂಬ ಅನುಲೇಪಗಂಧವ ಪೂಸಿ
    ವಾಯುವೆಂಬ ವಸ್ತ್ರವನುಡಿಸಿ,
    ಗುಹೇಶ್ವರನೆಂಬ ಲಿಂಗ ಪರಿಪೂರ್ಣವಾಗಿದ್ದ ಬಳಿಕ,
    ಮಜ್ಜನಕ್ಕೆರೆವಠಾವಾವುದೈ ಸಂಗನಬಸವಣ್ಣಾ ?/109

  110. ಅನಾದಿಗಣನಾಥನ ಶಿಷ್ಯನು ಆದಿಗಣನಾಥನು.
    ಆದಿಗಣನಾಥನ ಶಿಷ್ಯನು ಅಧ್ಯಾತ್ಮಗಣನಾಥನು.
    ಅಧ್ಯಾತ್ಮಗಣನಾಥನ ಶಿಷ್ಯನು ಆತ್ಮಗಣನಾಥನು.
    ಆತ್ಮಗಣನಾಥನ ಶಿಷ್ಯನು ವ್ಯೋಮಸಿದ್ಧಗಣನಾಥನು
    ವೋಮಸಿದ್ಧಗಣನಾಥನ ಶಿಷ್ಯನು ಬಸವನೆಂಬ ಗಣನಾಥನು.
    ಬಸವನೆಂಬ ಗಣನಾಥನ ಶಿಷ್ಯನು ಅನಿಮಿಷನೆಂಬ ಗಣನಾಥನು.
    ಅನಿಮಿಷನೆಂಬ ಗಣನಾಥನ ಶಿಷ್ಯನು ಅಲ್ಲಮಪ್ರಭುವೆಂಬ ಗಣನಾಥನು.
    ಇಂತು ಅನಾದಿವಿಡಿದು ಬಂದ ಅನುಪಮಲಿಂಗವು,
    ಗುಹೇಶ್ವರನೆಂಬ ಹೆಸರನೊಳಕೊಂಡು,
    ಎನ್ನ ಕರಸ್ಥಲಕ್ಕೆ ಸಾಧ್ಯವಾಯಿತ್ತು ಕಾಣಾ ಸಿದ್ಧರಾಮಯ್ಯಾ./110

  111. ಅನಾದಿಪುರುಷ ಬಸವಣ್ಣಾ,
    ಕಾಲ ಮಾಯೆಗಳೆರಡೂ ನಿಮ್ಮ ಮುಂದಿರ್ದು,
    ನಿಮ್ಮ ಕಾಣೆವೆನುತ್ತಿಹವು.
    ಆದಿಪುರುಷ ಬಸವಣ್ಣಾ;
    ಸುರಾಸುರರು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹರು.
    ನಾದಪುರುಷ ಬಸವಣ್ಣಾ,
    ನಾದ ಮಂತ್ರಗಳು ಪಂಚಮಹಾವಾದ್ಯಂಗಳು
    ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹವು.
    ವೇದಪುರುಷ ಬಸವಣ್ಣಾ,
    ವೇದಶಾಸ್ತ್ರಾಗಮ ಪುರಾಣಂಗಳು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹವು.
    ಆಗಮ್ಯಪುರುಷ ಬಸವಣ್ಣಾ,
    ಅಂಗಾಲ ಕಣ್ಣವರು ಮೈಯೆಲ್ಲ ಕಣ್ಣವರು ನಂದಿವಾಹನರು
    ಗಂಗೆವಾಳುಕರೆಲ್ಲರು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹರು.
    ಅಗೋಚರಪುರುಷ ಬಸವಣ್ಣಾ,
    ಈ ಗೋಚರಿಸಿದ ಮನುಮುನಿ ದೇವದಾನವ ಮಾನವರೆಲ್ಲರು
    ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹರು.
    ಅಪ್ರಮಾಣಪುರುಷ ಬಸವಣ್ಣ,
    ಈ ಪ್ರಮಾಣರೆಲ್ಲರು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹರು.
    ಸರ್ವಜ್ಞಪುರುಷ ಬಸವಣ್ಣಾ,
    ಈ ಸರ್ವರು ನಿಮ್ಮ ಬಳಸಿರ್ದು ನಿಮ್ಮ ಕಾಣೆವೆನುತ್ತಿಹರು.
    ಇಂತೀ ಸರ್ವಪ್ರಕಾರದವರೆಲ್ಲರೂ
    ನಿಮ್ಮ ಸಾದಿಸಿ ಭೇದಿಸಿ ಪೂಜಿಸಿ ತರ್ಕಿಸಿ ಹೊಗಳಿ ಕಾಣದೆ
    ನಿಮ್ಮಿಂದವೆ ಉತ್ಪತ್ತಿ ಸ್ಥಿತಿಲಯಂಗಳಾಗುತ್ತಿಹರು.
    ಅದು ಕಾರಣ,-ನಮ್ಮ ಗುಹೇಶ್ವರಲಿಂಗದಲ್ಲಿ ಭಕ್ತಿವಡೆದ
    ಅನಂತ ಭಕ್ತರೆಲ್ಲ
    ಬಸವಣ್ಣ ಬಸವಣ್ಣ ಬಸವಣ್ಣ ಎನುತ್ತ ಬದುಕಿದರಯ್ಯಾ./111

  112. ಅನಾದಿಯ ಭ್ರೂಮಧ್ಯದಲ್ಲಿ, ಐದು ಕುದುರೆಯ ಕಟ್ಟಿದ ಕಂಬ, ಮುರಿಯಿತ್ತು !
    ಎಂಟಾನೆ ಬಿಟ್ಟೋಡಿದವು !
    ಹದಿನಾರು ಪ್ರಜೆ ಬೊಬ್ಬಿಡುತಿರ್ದರು.
    ಶತಪತ್ರಕಮಲಕರ್ಣಿಕೆಯ ಮಧ್ಯದಲ್ಲಿ
    ಗುಹೇಶ್ವರಲಿಂಗ ಶಬ್ದ ಮುಗ್ಧವಾಗಿರ್ದನು./112

  113. ಅನಾದಿಯ ಮಗನು ಆದಿ, ಆದಿಯ ಮಗನತೀತ,
    ಅತೀತನ ಮಗನು ಆಕಾಶ,. ಆಕಾಶನ ಮಗನು ವಾಯು,
    ವಾಯುವಿನ ಮಗನಗ್ನಿ, ಅಗ್ನಿಯ ಮಗನು ಅಪ್ಪು,
    ಅಪ್ಪುವಿನ ಮಗನು ಪೃಥ್ವಿ.
    ಪೃಥ್ವಿಯಿಂದ ಸಕಲ ಜೀವರೆಲ್ಲರು ಉದ್ಭವಿಸಿದರು ಗುಹೇಶ್ವರಾ/113

  114. ಅನಾದಿಯಲೊಬ್ಬ ಶರಣ;
    ಆಹ್ವಾನ ವಿಸರ್ಜನವಿಲ್ಲದ ಪರತತ್ವವ ಸ್ಥಾಪಿಸಿ ಪ್ರತಿಷ್ಠೆಯ ಮಾಡುವಲ್ಲಿ
    ಷಡುವರ್ಣಾತ್ಮಕ ಮೃಗಿ ಹುಟ್ಟಿದಳು ನೋಡಾ !
    ಆ ಮೃಗಿಯೊಳು ಪಂಚಾಂಗ ಪಂಚತಂಡದವರೆಲ್ಲ ಹುಟ್ಟಿ ವರ್ತಿಸಿ ಲಯವಾಗಿ,
    ಮತ್ತೆ ಪಲ್ಲವಿಸುತಿರ್ದರು ನೋಡಾ !
    ಆ ಪರತತ್ವದ ಲೀಲೆಯನು ಆ ಶರಣನೆ ಬಲ್ಲ ಗುಹೇಶ್ವರಾ/114

  115. ಅನು ನೀನೆಂಬುದು ತಾನಿಲ್ಲ, ತಾನರಿದ ಬಳಿಕ ಏನೂ ಇಲ್ಲ ಇಲ್ಲ.
    ಇಲ್ಲದ ಇಲ್ಲವೆ ಎಲ್ಲಿಂದ ಬಪ್ಪುದೊ?
    ಅನುವರಿದು, ತನುವ ಮರೆದ ಭಾವರಹಿತ ಗುಹೇಶ್ವರ./115

  116. ಅನುಭವ ಅನುಭವವೆಂಬ ಅಣ್ಣಗಳು ನೀವು ಕೇಳಿರೆ,
    ಅನುಭವವೆಂಬುದೊಂದು ಎತ್ತು, ಕೆಟ್ಟಿತ್ತು.
    ಎತ್ತು ಗೇಣುದ್ದ, ಕೊಂಬು ಮೊಳದುದ್ದ.
    ಕೆಟ್ಟೆಂಟು ದಿನ, ಕಂಡು ಹದಿನಾರುದಿನ
    ನಿನ್ನೆ ಮೆಟ್ಟಿದ ನಾಟಿಯ ಮೊನ್ನೆ ಮೇವುದ ಕಂಡೆ
    ಗುಹೇಶ್ವರನೆಂಬ ಎತ್ತು ನಿಮ್ಮೊಳಗೈದಾನೆ; ಅರಸಿಕೊಳ್ಳಿರೊ./116

  117. ಅನುಭವ ಪ್ರಾಣಲಿಂಗ ಪರಾತ್ಪರವೆಂದರಿದು,
    <code>ಅಣೋರಣೀಯಾನ್ ಮಹತೋ ಮಹೀಯಾನ್'' ಎಂದು ಅಣುರೇಣು ತೃಣಕಾಷ್ಠದೊಳ್ಕೂಡಿ, </code>ತೇನ ವಿನಾ ತೃಣಾಗ್ರಮಪಿ ನ ಚಲತಿ”-
    ಎಂದು ಪರಿಪೂರ್ಣ ಸದಾಶಿವನೆಂದರಿದು-
    ಇಂತು ಕ್ಷಣವೇದಿ ಅಂತರಂಗವ ವೇದಿಸಲ್ಕೆ, ಅಗಣಿತ ಅಕ್ಷೇಶ್ವರ ತಾನೆಂದು
    ಪ್ರಣಮಪ್ರಭೆಯ ಮೇಲಣ ಪರಂಜ್ಯೋತಿ ತಾನೆಂದರಿದ ಕಾರಣ
    ಗುಹೇಶ್ವರಾ ನಿಮ್ಮ ಶರಣನುಪಾಮಾತೀತನು./117

  118. ಅನುಭಾವದಿಂದ ಹುಟ್ಟಿತ್ತು ಲಿಂಗ,
    ಅನುಭಾವದಿಂದ ಹುಟ್ಟಿತ್ತು ಜಂಗಮ,
    ಅನುಭಾವದಿಂದ ಹುಟ್ಟಿತ್ತು ಪ್ರಸಾದ.
    ಅನುಭಾವ ಅನುವಿನಲ್ಲಿ ಗುಹೇಶ್ವರಲಿಂಗವನುಪಮ ಸುಖಿ./118

  119. ಅನುವನರಿಯದೆ, ಆದಿಯ ವಿಚಾರಿಸದೆ
    ಅನಾದಿಯಲ್ಲಿ ತಾನೆರೆಂಬುದ ನೋಡದೆ
    ಸ್ತೋತ್ರವ ಮಾಡಿ ಫಲವೇನು ?
    `ನಿಶ್ಶಬ್ದಂ ಬ್ರಹ್ಮ ಉಚ್ಯತೇ’ ಎಂಬ ಘನವು
    ಹೊಗಳತೆಗೆ ಸಿಕ್ಕುವುದೆ ಎಲೆ ಮರುಳುಗಳಿರಾ ?
    ಅನಾದಿಯಲ್ಲಿ ಬಸವಣ್ಣನು ಏಳುನೂರೆಪ್ಪತ್ತು ಅಮರಗಣಂಗಳು ಸಹಿತ
    ಮತ್ರ್ಯಕ್ಕೆ ಬಂದನೊಂದು ಕಾರಣದಲ್ಲಿ.
    ಬಂದ ಮಣಿಹ ಪೂರೈಸಿತ್ತು-ಸಂದ ಪುರಾತರೆಲ್ಲರೂ ಕೇಳಿ,
    ಇಂದು ನೀವೆಲ್ಲರು ನಿಮ್ಮ ನೀವು ತಿಳಿದು ನೋಡಿ
    ನಿಜವನೈದುವುದು.
    ಇನ್ನು ನಮ್ಮ ಗುಹೇಶ್ವರಲಿಂಗಕ್ಕೆ
    ಸುರಾಳದ ಸುಳುಹಿಲ್ಲ./119

  120. ಅನ್ನಬರ ಹಾಗೆನ್ನದಿರು ಸಂಗನಬಸವಣ್ಣಾ.
    ನಿನಗೆ ಬೇರೆ ಅಡಗುವ ಕುರುಹೆಂಬುದೊಂದೊಡಲುಂಟು
    ಎನಗೆ ಅಂಗೈಯ ನಾಮ, ಕಾಯವೆಂಬ ಕದಳಿ,
    ಗುಹೇಶ್ವರನೆಂಬ ಭ್ರಮೆ ಬಿಡದು./120

  121. ಅನ್ನವನಿಕ್ಕಿ ನನ್ನಿಯ ನುಡಿದು
    ಅರವಟ್ಟಿಗೆಯನಿಕ್ಕಿ ಕೆರೆಯ ಕಟ್ಟಿಸಿದಡೆ
    ಮರಣದಿಂದ ಮೇಲೆ ಸ್ವರ್ಗ ಉಂಟಲ್ಲದೆ
    ಶಿವನ ನಿಜವು ಸಾಧ್ಯವಾಗದು.
    ಗುಹೇಶ್ವರನನರಿದ ಶರಣಂಗೆ ಆವ ಫಲವೂ ಇಲ್ಲ/121

  122. ಅನ್ಯ ರಜವ ಸೋಂಕದೆ, ತನ್ನ ರಜವ ಬಾದಿಸದೆ,
    ರವಿಯ ಬೆಳಸ ಬಳಸದೆ ಲಿಂಗದಲ್ಲಿ ಬೆಳೆದ ಬೆಳಸ ತಂದು,
    ಜಂಗಮದಲ್ಲಿ ಸವೆಸುತಿಪ್ಪ[ನು] ಲಿಂಗಭಕ್ತ.
    ಆ ಭಕ್ತನಲ್ಲಿ ಗುಹೇಶ್ವರಲಿಂಗವಿಪ್ಪನು./122

  123. ಅಪರಿಮಿತ ಕತ್ತಲೆಯೊಳಗೆ ಪರಿಮಿತದ ಬೆಳಗನಿಕ್ಕಿದಡೆ
    ಬೆಳಕೂ ಅದೆ, ಕತ್ತಲೆಯೂ ಅದೆ !
    ಇದೇನು ಚೋದ್ಯವೊ? ಒಂದಕ್ಕೊಂದಂಜದು !
    ಆನೆಯೂ ಸಿಂಹವೂ ಒಂದಾಗಿ ಉಂಬುದ ಕಂಡು
    ಬೆರಗಾದೆನು ಕಾಣಾ – ಗುಹೇಶ್ವರಾ./123

  124. ಅಪ್ಪುವಿನ ಬಾವಿಗೆ ತುಪ್ಪದ ಘಟ;
    ಸಪ್ಪಗೆ, ಸಿಹಿ ಎಂಬ ಎರಡಿಲ್ಲದ ರುಚಿ,
    ಪರುಷ ಮುಟ್ಟದ ಹೊನ್ನು!
    ಕರೆಸದ ಬೊಜಗನು ಬೆರಸದೆ ಬಸುರಾಯಿತ್ತ ಕಂಡೆನಾಹಾ!
    ಅರುವಿನ ಆಪ್ಯಾಯನ ಮರಹಿನ ಸುಖವೊ!
    ಇದು ಕಾರಣ ಮೂರು ಲೋಕವಳಿಯಿತ್ತು ಗುಹೇಶ್ವರಾ./124

  125. ಅಭ್ಯಾಸದ ಮಾತಲ್ಲ, ಶ್ರೋತ್ರದ ಸುಖವಲ್ಲ,
    ಶಾಸ್ತ್ರದ ಅನುಭಾವದ ಮಾತಲ್ಲ.
    ಒಳಗಣ ಮಾತಲ್ಲ ಹೊರಗಣ ಮಾತಲ್ಲ.
    ಇದರಂಗ (ತು?) ವನರಿಯರೆ,
    ಅನುಭಾವವ ಮಾಡಿ ಫಲವೇನಯ್ಯಾ ?
    ಗುಹೇಶ್ವರಲಿಂಗವು ಉಪಮಾತೀತ ನೋಡಯ್ಯಾ ಸಿದ್ಧರಾಮಯ್ಯ !/125

  126. ಅಭ್ಯಾಸವ ಮಾಡುವ ಕೋಲಿಂಗೆ ಶರಣೆಂದಡೆ
    ಮುಂದಣ ಬವರಕ್ಕಾಗಬಲ್ಲುದೆ ಅಯ್ಯಾ ?
    ಇಷ್ಟಲಿಂಗವೆಂದು ಮುಟ್ಟಿ ಪೂಜಿಸುತ್ತಿದ್ದಡೆ
    ಮುಂದಣ ಶಂಕೆಗಿನ್ನೆಂತೊ ?
    ಲಿಂಗವೆಂದಡೆ ನಿಸ್ಸಂಗದಲ್ಲಿದೆ,
    ಜಂಗಮವೆಂದಡೆ ಆಶ್ರಯದಲ್ಲಿದೆ
    ಈ ಲಿಂಗಜಂಗಮವನೊಂದೆಂದಡೆ ಮುಂದಣ ಲಯಕ್ಕಿನ್ನೆಂತೊ ?
    ಎಲೆ ಗುಹೇಶ್ವರಾ,
    ನಿಮ್ಮ ಶರಣ ಚತುರ್ವಿಧಪದವಿಗಳಿಗೆ ಹೊರಗು./126

  127. ಅಮರದ ಹೊಲಬನರಿಯದೆ ಜಗ ಬರಡಾಯಿತ್ತು.
    ಅಂಗದ ಹೊಲಬನರಿಯದೆ ಯೋಗ ಭಂಗವಾಯಿತ್ತು.
    ಸಂಗದ ಹೊಲಬನರಿಯದೆ ಶರಣರು ಭಂಗಿತರಾದರು.
    ಲಿಂಗದ ಹೊಲಬನರಿಯದೆ ಭಕ್ತ ಶೀಲವಂತನಾದ.
    ಆದಿ ಮಧ್ಯಾವಸಾನದಲ್ಲಿ ಗುಹೇಶ್ವರನೆಂಬ ಲಿಂಗವು,
    ಅರಿವಿನ ಮರೆಯಲ್ಲಿಹುದನಾರೂ ಅರಿಯರಲ್ಲಾ !/127

  128. ಅಮರದ ಹೊಲಬನರಿಯದೆ ಜಗವೆಲ್ಲ ಬರಡಾಯಿತ್ತು.
    ಅಂಗದ ಹೊಲಬನರಿಯದೆ ಯೋಗಿಗಳೆಲ್ಲ ಭಂಗಿತರಾದರು
    ಸಂಗದ ಹೊಲಬನರಿಯದೆ ಶರಣರು ಭಂಗಿತರಾದರು
    ಲಿಂಗದ ಹೊಲಬನರಿಯದೆ ಭಕ್ತ ಶೀಲವಂತನಾದ.
    ಆದಿ ಮಧ್ಯಾವಸಾನದಲ್ಲಿ ಗುಹೇಶ್ವರನೆಂಬ ಲಿಂಗವು
    ಅರಿವಿನ ಮರೆಯಲ್ಲಿಹುದನಾರೂ ಅರಿಯರಲ್ಲಾ ?/128

  129. ಅಮರಾವತಿಯ ಪಟ್ಟಣದೊಳಗೆ,
    ದೇವೇಂದ್ರನಾಳುವ ನಂದನವನವಯ್ಯಾ.
    ಅತ್ತ ಸಾರಲೆ ಕಾಮಯ್ಯಾ, ಮೋಹವೆ ನಿನಗೆ?
    ಲೋಕಾದಿಲೋಕವೆಲ್ಲವ ಮರುಳು ಮಾಡಿದೆ.
    ಕಾಮಾ, ಗುಹೇಶ್ವರಲಿಂಗವನರಿಯೊ./129

  130. ಅಮೃತ ಸೇವನೆಯ ಮಾಡಿ ಆಪ್ಯಾಯನ ಘನವಾಯಿತ್ತು.
    ಪರುಷವೇದಿಯ ಸಾದಿಸ ಹೋದಡೆ ದಾರಿದ್ರ್ಯ ಘನವಾಯಿತ್ತು.
    ಮರುಜೇ (ಜ?)ವಣಿಯ ಹಣ್ಣ ಮೆದ್ದು, ಮರಣವಾಯಿತ್ತ ಕಂಡೆ.
    ಎಲ್ಲವನೂ ಸಾದಿಸ ಹೋದಡೆ ಏನೂ ಇಲ್ಲದಂತಾಯಿತ್ತು.
    ನಾನು ನಿಜವ ಸಾದಿಸಿ ಬದುಕಿದೆನು ಗುಹೇಶ್ವರಾ./130

  131. ಅಮೃತಕಲೆಯ ಸೂಡಿದವ ಅಂಬಲಿಯನುಂಬನೆ ?
    ಶಿವನಾರು ? ಮಾಂಸನಾರು ?
    ಚೋಳಿಯಕ್ಕನೆಂಜಲ, ಹಸಿದುಂಡನೆನಬಹುದೆ ?
    ಹಸುಳೆಯ ಕೈಯ ಹಾಲನಾರು ಕಿತ್ತುಕೊಂಬರು ?
    ಗುಹೇಶ್ವರಾ, ನೀನು ಭಕ್ತಿಪ್ರಿಯನೆಂಬುದ
    ಮೂರು ಲೋಕವರಿಯದೆ ?/131

  132. ಅಮೃತಸಾಗರದೊಳಗಿರ್ದು ಆಕಳ ಚಿಂತೆ ಏಕೆ ?
    ಮೇರುಮಧ್ಯದೊಳಗಿರ್ದು ಜರಗ ತೊಳೆವ ಚಿಂತೆ ಏಕೆ ?
    ಗುರುವಿನೊಳಗಿರ್ದು ತತ್ವವಿದ್ಯೆಯ ಚಿಂತೆ ಏಕೆ ?
    ಪ್ರಸಾದದೊಳಗಿರ್ದು ಮುಕ್ತಿಯ ಚಿಂತೆ ಏಕೆ ?
    ಕರಸ್ಥಲದೊಳಗೆ ಲಿಂಗವಿರ್ದ ಬಳಿಕ,
    ಮತ್ತಾವ ಚಿಂತೆ ಏಕೆ ಹೇಳಾ ಗುಹೇಶ್ವರಾ ?/132

  133. ಅಯ್ಯ ! ಆಗಮಿಕನಲ್ಲಿ ವೇದಪಾಠಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ತರ್ಕನಲ್ಲ ವ್ಯಾಕರಣನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಶಾಸ್ತ್ರಜ್ಞನಲ್ಲ ಪುರಾಣಿಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ವಾದಿಯಲ್ಲ ಉಪನೀತಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಮಾತಿನವನಲ್ಲ ಮಥನದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ನೀತಿಯವನಲ್ಲ ಖ್ಯಾತಿಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ರತಿಯವನಲ್ಲ ವಿರತಿಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಹೆಣ್ಣು ರೂಪನಲ್ಲ ಗಂಡು ರೂಪನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ನಾಮದವನಲ್ಲ ಸೀಮೆಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಆಕ್ರಿಯದವನಲ್ಲ ದುಃಕ್ರಿಯದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಶ್ವಾನಜ್ಞಾನಿಯಲ್ಲ ಕುಕ್ಕಟಜ್ಞಾನಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಆಶನಿಯಲ್ಲ ವ್ಯಸನಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಇಂತು ಉಭಯ ಬಿನ್ನನಾಮವಳಿದ ಸಂಗನ ಬಸವಣ್ಣನ ಕರ ನಯನ ಮುಖದಲ್ಲಿ
    ಬೆಳಗುವ ಚಿಜ್ಯೋತಿ ತಾನೆ ನೋಡ! ನಿರವಯಶೂನ್ಯಲಿಂಗಮೂರ್ತಿ ಚೆನ್ನಬಸವಣ್ಣ./133

  134. ಅಯ್ಯ ! ಏಕಮುಖನಲ್ಲ ದ್ವಿಮುಖನಲ್ಲ ನೋಡ !
    ನಿರವಯಶೂನ್ಯಲಿಂಗಮೂರ್ತಿ.
    ತ್ರಿಮುಖನಲ್ಲ ಚತುಮರ್ುಖನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಪಂಚಮುಖನಲ್ಲ ಷಣ್ಮುಖನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಸಪ್ತಮುಖನಲ್ಲ ಅಷ್ಟಮುಖನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ನವಮುಖನಲ್ಲ ದಶಮುಖನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಜೀವಾತ್ಮನಲ್ಲ ಅಂತರಾತ್ಮನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಜಾಗ್ರನಲ್ಲ ಸ್ವಪ್ನನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ವಿಶ್ವನಲ್ಲ ತೈಜಸನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಖೇಚರನಲ್ಲ ಭೂಚರನಲ್ಲ
    ನಿರವಯಶೂನ್ಯಲಿಂಗಮೂರ್ತಿ.
    ಜಾರನಲ್ಲ ಚೋರನಲ್ಲ ನೋಡ !
    ಹಮ್ಮಿನವನಲ್ಲ ಬಿಮ್ಮಿನವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಭುಕ್ತನಲ್ಲ ಮುಕ್ತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ-
    ಇಂತು ಉಭಯವಳಿದ ಸಂಗನಬಸವಣ್ಣನ
    ಬೆಳಗಿನೊಳಗೆ ಮಹಾ ಬೆಳಗಾಗಿರ್ಪುದು ನೋಡ ! ಗುಹೇಶ್ವರಲಿಂಗವು
    ಚೆನ್ನಬಸವಣ್ಣ./134

  135. ಅಯ್ಯ ! ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ,
    ಕ್ಷುತ್ತು, ಪಿಪಾಸೆ, ಶೋಕ, ಮೋಹ, ಜನನ ಮರಣಂಗಳ, ಅಡಿಮೆಟ್ಟಿ ನಿಂದು,
    ಅಷ್ಟವಿಧಾರ್ಚನೆ-ಷೋಡಶೋಪಚಾರಂಗಳ ಮಾಡಿ ಶಿವನನಂತ ಲೀಲೆಗಳನರ್ಚಿಸಿ
    ಫಲ-ಪದ-ಮೋಕ್ಷಂಗಳ ಪಡೆಯಬೇಕೆಂಬ ಬಯಕೆಯನುಳಿದು,
    ಅಂತರಂಗದ ಜ್ಞಾನ, ಬಹಿರಂಗದ ಸತ್ಕ್ರಿಯಾಚಾರಂಗಳಲ್ಲಿ
    ದೃಢ ಚಿತ್ತದಿಂದ ನಿಂದು, ಹಿಂದೆ ಹೇಳಿದ
    ಸದ್ಭಕ್ತ-ಮಹೇಶ್ವರ-ಪ್ರಸಾದಿ-ಪ್ರಾಣಲಿಂಗಿ-ಶರಣಸ್ಥಲಂಗಳನೊಳಗು
    ಮಾಡಿಕೊಂಡು,
    ಪರಾತ್ಪರ ನಿತ್ಯತೃಪ್ತಾನಂದ ಮೂರ್ತಿಯಾಗಿ,
    ಝಗಝಗಿಸುವ ನಿಜೈಕ್ಯನಂತರಂಗದಲ್ಲಿ ಚಿದ್ರೂಪಲೀಲೆಯಿಂ
    ಸಾಕಾರ-ನಿರಾಕಾರ; ಸಕಲ-ನಿಃಕಲತತ್ತ್ವಂಗಳನೊಳಕೊಂಡು,
    ಹದಿಮೂರು ಸ್ಥಲಂಗಳ ಗರ್ಬಿಕರಿಸಿಕೊಂಡು,
    ಎಂಟುನೂರ ಆರುವತ್ತನಾಲ್ಕು ಮಂತ್ರಮಾಲಿಕೆಗಳ ಪಿಡಿದುಕೊಂಡು,
    ಇಪ್ಪತ್ತುನಾಲ್ಕು ಸಕೀಲಗರ್ಭದಿಂ
    ಜ್ಯೋತಿ ಜ್ಯೋತಿ ಕೂಡಿ ಬಿನ್ನ ದೋರದ ಹಾಂಗೆ ಏಕಸ್ವರೂಪಿನಿಂದ
    ವೇದಸ್ವರೂಪ ಮಹಾಲಿಂಗವಾಗಿ ನೆಲಸಿರ್ಪುದು ನೋಡ !
    ನಿರವಯಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು
    ಚೆನ್ನಬಸವಣ್ಣ. /135

  136. ಅಯ್ಯ ! ಕಾರ್ಯನಲ್ಲ ಕಾರಣನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಭೇದಕನಲ್ಲ ಸಾಧಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಪಾತಕನಲ್ಲ ಸೂತಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ದ್ವೈತನಲ್ಲ ಅದ್ವೈತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಕಾಟಕನಲ್ಲ ಕೀಟಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಎನ್ನವನಲ್ಲ ನಿನ್ನವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಸಂಕಲ್ಪನಲ್ಲ ವಿಕಲ್ಪನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಒಮ್ಮೆ ಆಚಾರದವನಲ್ಲ ಒಮ್ಮೆ ಅನಾಚಾರದವನಲ್ಲ ನೋಡ !
    ನಿರವಯಶೂನ್ಯಲಿಂಗಮೂರ್ತಿ.
    ಕುಂಟಣಿಯಲ್ಲ ನೆಂಟಣಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ದುಶ್ಶೀಲನಲ್ಲ ದುರ್ಮಾಗರ್ಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಜಾತಿಯವನಲ್ಲ ಅಜಾತಿಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಇಂದು ಉಭಯವಳಿದು ಬೆಳಗುವ ಸಂಗನಬಸವಣ್ಣನ
    ಉನ್ಮನಾಗ್ರದಲಿ ಹೊಳೆವಾತ ತಾನೆ ನೋಡ ! ಗುಹೇಶ್ವರಲಿಂಗವು
    ಚೆನ್ನಬಸವಣ್ಣ./136

  137. ಅಯ್ಯ ! ಗಮನಿಯಲ್ಲ ನಿರ್ಗಮನಿಯಲ್ಲ ನೋಡ !
    ನಿರವಯ ಶೂನ್ಯಲಿಂಗಮೂರ್ತಿ
    ಸುಚಿಂತನಲ್ಲ, ದುಶ್ಚಿಂತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಕುಟಿಲನಲ್ಲ ಕುಹಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಬೂಟಕನಲ್ಲ ಚಾಟಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ದಿಟದವನಲ್ಲ ಸಟೆಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಸಂಚಲನಲ್ಲ ವಂಚಲನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಪ್ರಪಂಚನಲ್ಲ ಪ್ರಮಾಣನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಗಣಿತನಲ್ಲ ಅಗಣಿತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಖಂಡಿತನಲ್ಲ ಅಖಂಡಿತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಚರಿತನಲ್ಲ ಅಚರಿತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಭರಿತನಲ್ಲ ಸುರಿತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಚಾಡಿಯಲ್ಲ ಚಿತಾಲನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಗಾರುಡನಲ್ಲ (ಗಾಡಿಗನಲ್ಲ?) ಕುರೂಪನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಮರುಳನಲ್ಲ ದುರುಳನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಆಶಕನಲ್ಲ ಪಾಶಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಇಂತು ಉಭಯವಳಿದುಳಿದು ಸಂಗನ ಬಸವಣ್ಣನ
    ಅರುವಿನ ಮಧ್ಯದಲಿ ಬೆಳಗುವ ಜ್ಯೋತಿ ತಾನೆ ನೋಡ ! ಗುಹೇಶ್ವರಲಿಂಗವು
    ಚೆನ್ನಬಸವಣ್ಣ./137

  138. ಅಯ್ಯ ! ಜ್ಞಾನೇಂದ್ರಿಯ, ಕಮರ್ೆಂದ್ರಿಯ, ವಿಷಯಂಗಳು,
    ಕರಣ ಮುಂತಾದವರ ಆಶಾಪಾಶಂಗಳನುಳಿದು
    ನುಡಿಯಂತೆ ನಡೆ, ನಡೆಯಂತೆ ನುಡಿ-ದೃಢಚಿತ್ತದಿಂದ ಘಟ್ಟಿಗೊಂಡು,
    ಹಿಂದೆ ಹೇಳಿದ ಸದ್ಭಕ್ತ-ಮಹೇಶ್ವರ-ಪ್ರಸಾದಿ-ಪ್ರಾಣಲಿಂಗಿ
    ಸ್ಥಲಂಗಳ ನೊಳಗುಮಾಡಿಕೊಂಡು,
    ಪರಮಪರಿಣಾಮಿ ಅಚಲಾನಂದಮೂರ್ತಿಯಾಗಿ,
    ಝಗಝಗಿಸಿ ನೆಲಸಿರ್ಪ ಶಿವಶರಣನಂತರಂಗದಲ್ಲಿ,
    ಚಿನ್ಮಯಪರನಾದ ಸ್ವಯಂಭು ಲೀಲೆಯಿಂ,
    ಮಿಶ್ರಾಮಿಶ್ರಂಗಳೊಡನೆ ಕೂಡಿದ, ಸಕಲ ತತ್ತ್ವಂಗಳನೊಳಕೊಂಡು,
    ಹದಿಮೂರುಸ್ಥಲಂಗಳ ಗರ್ಬಿಕರಿಸಿಕೊಂಡು,
    ಆರುಸಾವಿರದ ಒಂಬೈನೂರ ಹನ್ನೆರಡು ಮಂತ್ರ ಮಾಲೆಗಳ ಪಿಡಿದುಕೊಂಡು,
    ಇಪ್ಪತ್ತುನಾಲ್ಕು ಸಕೀಲಗರ್ಭದಿಂ
    ಕ್ಷೀರಕ್ಷೀರ ಬೆರದು ಬಿನ್ನದೋರದ ಹಾಂಗೆ, ಏಕರೂಪಿನಿಂದೆ
    ಈಳನಸ್ವರೂಪ ಪ್ರಸಾದಲಿಂಗಮೂರ್ತಿಯಾಗಿ [ನೆಲಸಿರ್ಪುದು] ನೋಡ !
    ನಿರವಯಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು
    ಚೆನ್ನಬಸವಣ್ಣ. /138

  139. ಅಯ್ಯ ! ದರಿದ್ರನಲ್ಲ ಧನಿಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಕುಚಿತ್ತದವನಲ್ಲ ಸುಚಿತ್ತದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಕುಬುದ್ಧಿಯವನಲ್ಲ ಸುಬುದ್ಧಿಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಅಹಂಕಾರಿಯಲ್ಲ ನಿರಹಂಕಾರಿಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಕುಮನದವನಲ್ಲ ಸುಮನದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಅಜ್ಞಾನದವನಲ್ಲ ಸುಜ್ಞಾನದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ದುರ್ಭಾವದವನಲ್ಲ ಸದ್ಭಾವದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಸಕಲನಲ್ಲ ನಿಃಕಲನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಅರ್ಪಿತನಲ್ಲ ಅನರ್ಪಿತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಆಹ್ವಾನನಲ್ಲ ವಿಸರ್ಜನನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಇಂತು ಉಭಯವಳಿದು ಬೆಳಗುವ ಸಂಗನಬಸವಣ್ಣನ
    ಕರನಯನದಲ್ಲಿ ಝಗಝಗಿಸುವ ಗುಹೇಶ್ವರಲಿಂಗವು ತಾನೆ ನೋಡ !
    ಚೆನ್ನಬಸವಣ್ಣ./139

  140. ಅಯ್ಯ ! ದೀಕ್ಷಾಗುರು, ಶಿಕ್ಷಾಗುರು, ಜ್ಞಾನಗುರುಗಳೆಂಬ ತ್ರಿವಿಧ ಗುರುಗಳು:
    ಕ್ರಿಯಾಲಿಂಗ, ಜ್ಞಾನಲಿಂಗ, ಭಾವಲಿಂಗವೆಂಬ ತ್ರಿವಿಧ ಲಿಂಗಗಳು:
    ಸ್ವಯ, ಚರ, ಪರವೆಂಬ ತ್ರಿವಿಧ ಜಂಗಮವು-
    ಈ ಒಂಬತ್ತು ಆಚಾರಲಿಂಗದಲ್ಲಿ ಸಂಬಂಧವು.
    ಕ್ರಿಯಾಗಮ, ಭಾವಾಗಮ, ಜ್ಞಾನಾಗಮವೆಂಬ ತ್ರಿವಿಧ ಲಿಂಗಗಳು,
    ಸಕಾಯ, ಆಕಾಯ, ಪರಕಾಯವೆಂಬ ತ್ರಿವಿಧ ಗುರುಗಳು:
    ಧರ್ಮಾಚಾರ, ಭಾವಾಚಾರ, ಜ್ಞಾನಾಚಾರವೆಂಬ ತ್ರಿವಿಧ ಜಂಗಮವು-
    ಈ ಒಂಬತ್ತು ಗುರುಲಿಂಗದಲ್ಲಿ ಸಂಬಂಧವು.
    ಕಾಯಾನುಗ್ರಹ, ಇಂದ್ರಿಯಾನುಗ್ರಹ, ಪ್ರಾಣಾನುಗ್ರಹವೆಂಬ ತ್ರಿವಿಧ ಗುರುಗಳು
    ಕಾಯಾರ್ಪಿತ, ಕರಣಾರ್ಪಿತ, ಭಾವಾರ್ಪಿತವೆಂಬ ತ್ರಿವಿಧ ಲಿಂಗಗಳು:
    ಶಿಷ್ಯ, ಶುಶ್ರೂಷ, ಸೇವ್ಯವೆಂಬ ತ್ರಿವಿಧ ಜಂಗಮವು-
    ಈ ಒಂಬತ್ತು ಶಿವಲಿಂಗದಲ್ಲಿ ಸಂಬಂಧವು.
    ಈ ಮೂರು ಸ್ಥಲವು ಅನಾದಿಭಕ್ತನ ಮಾರ್ಗಕ್ರಿಯಾ ಸ್ವರೂಪು.
    ಜೀವಾತ್ಮ, ಅಂತರಾತ್ಮ, ಪರಮಾತ್ಮವೆಂಬ ತ್ರಿವಿಧಲಿಂಗಗಳು:
    ನಿರ್ದೆಹಾಗಮ, ನಿರ್ಭಾವಾಗಮ, ನಷ್ಟಾಗಮವೆಂಬ ತ್ರಿವಿಧ ಗುರುಗಳು;
    ಆದಿಪ್ರಸಾದಿ, ಅಂತ್ಯಪ್ರಸಾದಿ, ಸೇವ್ಯ ಪ್ರಸಾದಿಯೆಂಬ ತ್ರಿವಿಧ ಜಂಗಮವು-
    ಈ ಒಂಬತ್ತು ಜಂಗಮಲಿಂಗದಲ್ಲಿ ಸಂಬಂಧವು-
    ದೀಕ್ಷಾಪಾದೋದಕ, ಶಿಕ್ಷಾಪಾದೋದಕ, ಜ್ಞಾನಪಾದೋದಕವೆಂಬ
    ತ್ರಿವಿಧ ಲಿಂಗಂಗಳು,
    ಕ್ರಿಯಾನಿಷ್ಪ, ಭಾವನಿಷ್ಪ, ಜ್ಞಾನನಿಷ್ಪಯೆಂಬ ತ್ರಿವಿಧ ಗುರುಗಳು;
    ಪಿಂಡಾಕಾಶ, ಬಿಂದ್ವಾಕಾಶ, ಮಹದಾಕಾಶವೆಂಬ ತ್ರಿವಿಧ ಜಂಗಮವು-
    ಈ ಒಂಬತ್ತು ಪ್ರಸಾದಲಿಂಗದಲ್ಲಿ ಸಂಬಂಧವು.
    ಕ್ರಿಯಾಪ್ರಕಾಶ, ಭಾವಪ್ರಕಾಶ, ಜ್ಞಾನಪ್ರಕಾಶವೆಂಬ ತ್ರಿವಿಧ ಲಿಂಗಗಳು
    ಕೊಂಡದ್ದು ಪ್ರಸಾದ, ನಿಂದದ್ದು ಓಗರ,
    ಚರಾಚರನಾಸ್ತಿಯೆಂಬ ತ್ರಿವಿಧ ಗುರುಗಳು;
    ಬಾಂಢಸ್ಥಲ, ಭಾಜನಸ್ಥಲ, ಅಂಗಲೇಪನಸ್ಥಲವೆಂಬ ತ್ರಿವಿಧ ಜಂಗಮವು-
    ಈ ಒಂಬತ್ತು ಮಹಾಲಿಂಗದಲ್ಲಿ ಸಂಬಂಧವು.
    ಈ ಮೂರು ಸ್ಥಲವು ಅನಾದಿ ಜಂಗಮದ ಮೀರಿದ ಕ್ರಿಯಾ ಸ್ವರೂಪವು.
    ಈ ಉಭಯಂ ಕೂಡಲು ಐವತ್ತುನಾಲ್ಕು ಸ್ಥಲಂಗಳಾದವು. ಮುಂದುಳಿದ
    ಮೂರು ಸ್ಥಲಂಗಳಲ್ಲಿ ಭಾವಾಭಾವನಷ್ಟಸ್ಥಲವೆ ಮೂಲ ಗುರುಸ್ವರೂಪವಾಗಿ
    ಹದಿನೆಂಟು ಗುರುಸ್ಥಲಂಗಳನೊಳಕೊಂಡು
    ಕ್ರಿಯಾಗುರುಲಿಂಗ ಜಂಗಮ ಸ್ವರೂಪವಾದ
    ಇಷ್ಟಮಹಾಲಿಂಗದ ಅಧೋಪೀಠಿಕೆಯೆಂಬ ಹಲ್ಲೆಯಲ್ಲಿ
    ಸ್ಪರ್ಶನೋದಕ, ಅವಧಾನೋದಕ, ಗುರುಪಾದೋದಕ,
    ಅಪ್ಯಾಯನಪ್ರಸಾದ, ಸಮಯಪ್ರಸಾದ, ಗುರುಪ್ರಸಾದ
    ಆದಿ ಪ್ರಸಾದ, ನಿಚ್ಚಪ್ರಸಾದವಾಗಿ ತೆರಹಿಲ್ಲದೆ ಒಪ್ಪುತ್ತಿರ್ಪುದು ನೋಡ !
    ಜ್ಞಾನಶೂನ್ಯಸ್ಥಲವೆ ಮೂಲ ಜಂಗಮಸ್ವರೂಪವಾಗಿ
    ಹದಿನೆಂಟು ಚರಸ್ಥಲಂಗಳನೊಳಕೊಂಡು
    ಮಹಾಜ್ಞಾನಗುರುಲಿಂಗಜಂಗಮ ಸ್ವರೂಪವಾದ
    ಇಷ್ಟಮಹಾಲಿಂಗದ ಜಲರೇಖೆಯನ್ನುಳ್ಳ ಪಾನಿವಟ್ಟಲಲ್ಲಿ
    ಪರಿಣಾಮೋದಕ, ನಿರ್ನಾಮೋದಕ, ಜಂಗಮಪಾದೋದಕ, ನಿತ್ಯೋದಕ,
    ಸಮತಾಪ್ರಸಾದ, ಪ್ರಸಾದಿಯ ಪ್ರಸಾದ, ಜಂಗಮ ಪ್ರಸಾದ, ಸದ್ಭಾವ ಪ್ರಸಾದ,
    ಜ್ಞಾನಪ್ರಸಾದ, ಸೇವ್ಯ ಪ್ರಸಾದ,
    ಅಚ್ಚ ಪ್ರಸಾದವಾಗಿ ತೆರಹಿಲ್ಲದೆ ಒಪ್ಪುತಿರ್ಪುದು ನೋಡ !
    ಸ್ವಯ ಪರವರಿಯದ ಸ್ಥಲವೆ ಮೂಲಲಿಂಗಸ್ವರೂಪವಾಗಿ
    ಹದಿನೆಂಟು ಲಿಂಗಸ್ಥಲಂಗಳನೊಳಕೊಂಡು
    ಜ್ಞಾನಗುರುಲಿಂಗ ಜಂಗಮ ಸ್ವರೂಪವಾದ
    ಇಷ್ಟಮಹಾಲಿಂಗದ ಉನ್ನತವಾದ ಗೋಲಕದಲ್ಲಿ
    ಅಪ್ಯಾಯನೋದಕ, ಹಸ್ತೋದಕ, ಲಿಂಗಪಾದೋದಕ,
    ಪಂಚೇಂದ್ರಿ[ಯ] ವಿರಹಿತಪ್ರಸಾದ,
    ಕರಣಚತುಷ್ಟಯವಿರಹಿತ ಪ್ರಸಾದ, ಲಿಂಗಪ್ರಸಾದ
    ಅಂತ್ಯಪ್ರಸಾದ ಸಮಯಪ್ರಸಾದವಾಗಿ ತೆರಹಿಲ್ಲದೆ ಒಪ್ಪುತ್ತಿರ್ಪುದು ನೋಡ !
    ಇಂತಪ್ಪ ಲಿಂಗಜಂಗಮದ ಪಾದೋದಕ ಪ್ರಸಾದವ ಸ್ವೀಕರಿಸಿದಂಥ
    ಜಂಗಮಭಕ್ತರಾದ ಸಹಜಭಕ್ತರೆ ಪ್ರಸಾದಪಾದೋದಕ ಸಂಬಂದಿಗಳು.
    ಇವರು ಸ್ವೀಕರಿಸಿದಂಥ ಪಾದೋದಕವೆ
    ನೇತ್ರದಲ್ಲಿ ಕರುಣಜಲ; ವಾಕಿನಲ್ಲಿ ವಿನಯಜಲ; ಅಂತರಂಗದಲ್ಲಿ ಸಮತಾಜಲ-
    ಇಂತೀ ತ್ರಿವಿಧೋದಕವೆ ಘಟ್ಟಿಗೊಂಡು ಸಾಕಾರವಾಗಿ,
    ತಿಳಿದುಪ್ಪ ಹೆರೆದುಪ್ಪವಾದಂತೆ
    ಇಷ್ಟ ಮಹಾಲಿಂಗಕ್ಕೆ ತ್ಯಾಗಾಂಗವಾದ ಶುದ್ಧ ಪ್ರಸಾದವಾಗಿರ್ಪುದಯ್ಯ;
    ಪ್ರಾಣಲಿಂಗಕ್ಕೆ ಭೋಗಾಂಗವಾದ ಸಿದ್ಧ ಪ್ರಸಾದವಾಗಿರ್ಪುದಯ್ಯ.
    ಭಾವಲಿಂಗಕ್ಕೆ ಯೋಗಾಂಗವಾದ ಪ್ರಸಿದ್ಧ ಪ್ರಸಾದವಾಗಿರ್ಪುದಯ್ಯ.
    ಇಂತೀ ತ್ರಿವಿಧಪ್ರಸಾದಪಾದೋದಕವೆ
    ಶರಣನ ಶುದ್ಧ ಪ್ರಸಾದವೆ ಜಿಹ್ವೆಯಲ್ಲಿ ಅಚ್ಚಪ್ರಸಾದವಾಗಿರ್ಪುದಯ್ಯ
    ಸಿದ್ಧಪ್ರಸಾದವೆ ಪಾದದಲ್ಲಿ ಸಮಯ ಪ್ರಸಾದವಾಗಿರ್ಪುದಯ್ಯ
    ಇಂತಪ್ಪ ಶರಣಸ್ವರೂಪವಾದ ಜ್ಞಾನಲಿಂಗಜಂಗಮದ
    ತೀರ್ಥಪ್ರಸಾದ ಸ್ವರೂಪವನ್ನು ಅರಿಯದೆ,
    ಕ್ರಿಯಾ `ಜಂಗಮಲಿಂಗ’ದ ತೀರ್ಥಪ್ರಸಾದವನ್ನು ತೆಗೆದುಕೊಳ್ಳಬಹುದು.
    ಜ್ಞಾನಲಿಂಗಜಂಗಮ ತೀರ್ಥಪ್ರಸಾದವನ್ನು ತೆಗೆದುಕೊಳ್ಳಲಾಗದು ಎಂಬ
    ಅಜ್ಞಾನಿಗಳ ಎನಗೆ ತೋರದಿರ ! ಗುಹೇಶ್ವರ !/140

  141. ಅಯ್ಯ ! ಧರ್ಮಿಯಲ್ಲ ಕರ್ಮಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಕಾಮಿಯಲ್ಲ ನಿಃಕಾಮಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಕ್ರೋದಿಯಲ್ಲ ನಿಃಕ್ರೋದಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಲೋಬಿಯಲ್ಲ ನಿರ್ಲೊಬಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಮೋಹಿಯಲ್ಲ ನಿರ್ಮೊಹಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಮದದವನಲ್ಲ ನಿರ್ಮದದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಮತ್ಸರದವನಲ್ಲ ನಿರ್ಮತ್ಸರದವನಲ್ಲ ನೋಡಶ! ನಿರವಯಶೂನ್ಯಲಿಂಗಮೂರ್ತಿ
    ಆದೀತೆನ್ನ ಆಗದೆನ್ನ ನೋಡ ! ನಿರವಯಶೂನ್ಯಲಿಂಗಮೂರ್ತಿ
    ರೋಗವೆನ್ನ ನಿರೋಗವೆನ್ನ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಬೇಕೆನ್ನ ಬೇಡವೆನ್ನ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಇಂತು ಉಭಯವಳಿದ ರಾಜಾದಿರಾಜ ಸಂಗನಬಸವಣ್ಣನ
    ಸರ್ವಾಂಗದಿ ಬೆಳಗುವ ಪರಂಜ್ಯೋತಿ ಗುಹೇಶ್ವರಲಿಂಗವು ತಾನೆ ನೋಡ !
    ಚೆನ್ನಬಸವಣ್ಣ./141

  142. ಅಯ್ಯ ! ನವರತ್ನ ಪ್ರಕಾಶಕ್ಕೆ ಸಮಾನವಾದ ಶಿಲಾರೂಪ
    ಪಾಷಾಣಂಗಳ ಮಧ್ಯದಲ್ಲಿ ಕ್ರಿಯಾಗ್ನಿ ಇರ್ದು ದಹನಕೃತ್ಯಂಗಳಿಗೆ ಒಳಗಾಗದಿರ್ಪಂತೆ;
    ಕುಂತಣದೇಶ ಮೊದಲಾದ ಸಮಸ್ತ ದೇಶಂಗಳಲ್ಲಿ ಸೂರ್ಯನ ಪ್ರಕಾಶ ಮರೀಚಿಕಾಜಲ;
    ಅಶ್ವ-ಗಜ-ಎರಳೆಗಳೋಪಾದಿಯಲ್ಲಿ
    ಕಣ್ಣಿಗೆ ಕಾಣಿಸಿ ಕೈವಶವಾಗದಂತೆ;
    ಒಬ್ಬಾನೊಬ್ಬ ಚಿತ್ರಕನ ಮನದ ಮಧ್ಯದಲ್ಲಿ
    ಅನಂತ ಚಿತ್ರವಿಚಿತ್ರ ಪ್ರಕಾಶಂಗಳಡಗಿರ್ಪಂತೆ;
    ಕಂಠ, ಲೆಕ್ಕಣಿಕೆ, ಬಳಹಂಗಳ ಮೊನೆಯಲ್ಲಿ ಸಮಸ್ತ ವರ್ಣಂಗಳಡಗಿರ್ಪಂತೆ;
    ಕನ್ನಡಿಯೊಳಗೆ ಅನಂತ ಬಿಂಬಂಗಳಡಗಿರ್ಪಂತೆ;
    ಪಟ್ಟ ಪಟ್ಟಾವಳಿಗಳು ಮೊದಲಾದ ಸಮಸ್ತವಸನಂಗಳ ಮಧ್ಯದಲ್ಲಿ
    ಸಮಸ್ತ ಬಣ್ಣಂಗಳಡಗಿರ್ಪಂತೆ;
    ಮೂಕನಂತರಂಗದಲ್ಲಿ ನಾಮ-ರೂಪ-ಕ್ರಿಯೆಗಳಡಗಿರ್ಪಂತೆ;
    ಕವಿತ್ವವುಳ್ಳ ಶಾಸ್ತ್ರಜ್ಞನಂತರಂಗದಲ್ಲಿ
    ಅರ್ಥ-ಅನ್ವಯ-ಆಕಾಂಕ್ಷೆಗಳಡಗಿರ್ಪಂತೆ;
    ಸಚ್ಚಿದಾನಂದ ಸ್ವರೂಪ ಸದ್ಭಕ್ತ ಶಿವಶರಣಗಣಂಗಳಲ್ಲಿ ಗೋಪ್ಯವಾಗಿರ್ದು
    ಹಠಯೋಗಿ ಮೊದಲಾದ ಬಿನ್ನಕರ್ಮಕಾಂಡಿಗಳಿಗೆ ಅಗೋಚರವಾಗಿರ್ಪುದು ನೋಡ !
    ನಿರವಯಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು
    ಚೆನ್ನಬಸವಣ್ಣ. /142

  143. ಅಯ್ಯ ! ನಾಟಕನಲ್ಲ ಬೂಟಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಶೀಲಿಗನಲ್ಲ ಕಪಟನಾಟಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ರುಂಡಮಾಲಿಗನಲ್ಲ ಗುಂಡುಗಾಸಿಗನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಪುಲಿಚರ್ಮನಲ್ಲ ಗಜಚರ್ಮನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ದಕ್ಷಾಧ್ವರಸಂಹರನಲ್ಲ ತ್ರಿಪುರಾರಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ನಂದಿವಾಹನನಲ್ಲ ಭೃಂಗಿಸ್ತುತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಸರ್ಪಧರನಲ್ಲ ಚಂದ್ರಶೇಖರನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಗಂಗಾಧರನಲ್ಲ ಗೌರಿಪ್ರಿಯನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಗಿರಿಜಾವಲ್ಲಭನಲ್ಲ ಪಾರ್ವತಿಪ್ರಿಯನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಯೋಗಿಯಲ್ಲ ಜೋಗಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಶ್ರವಣನಲ್ಲ ಸನ್ಯಾಸಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಕಾಳಾಮುಖಿಯಲ್ಲ ಪಾಶುಪತಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಇಂತು ಉಭಯವಳಿದ ಸಂಗನಬಸವಣ್ಣನ
    ಸರ್ವಾಂಗದಿ ಬೆಳಗುವ ಮಹಾಜ್ಯೋತಿ ತಾನೆ ನೋಡ ! ಗುಹೇಶ್ವರಲಿಂಗವು
    ಚೆನ್ನಬಸವಣ್ಣ./143

  144. ಅಯ್ಯ ! ನಿಜವಸ್ತು ನೆಲೆಸಿರ್ಪ ನೇತ್ರವೇ
    ಗುಹ್ಯಕ್ಕೆ ಗುಹ್ಯ, ಗೋಪ್ಯಕ್ಕೆ ಗೋಪ್ಯ
    ರಹಸ್ಯಕ್ಕೆ ರಹಸ್ಯ, ಕೂಟಕ್ಕೆ ಕೂಟ
    ನೋಟಕ್ಕೆ ನೋಟ, ಬೇಟಕ್ಕೆ ಬೇಟ.
    ಅದೆಂತೆಂದಡೆ:
    ಲಿಂಗಸ್ಯ ಸಾಯಕಂ ನೇತ್ರಂ
    ಚುಕ್ಷುರ್ಲಿಂಗಸ್ಯ ಚಕ್ಷುಸಃ
    ಇಂತೆಂದುದಾಗಿ,
    ಗುರುಕಟಾಕ್ಷೆಯಿಂದ ಇಷ್ಟ-ಪ್ರಾಣ-ಭಾವಲಿಂಗ ಸಂಬಂಧವಾದ
    ಮಹಾಘನ ಚಕ್ಷುವೆ ಗುಹೇಶ್ವರಲಿಂಗಕ್ಕೆ ಮಹಾಪ್ರಸಾದ ನೋಡಾ
    ಸಿದ್ಧರಾಮಯ್ಯಾ./144

  145. ಅಯ್ಯ ! ನಿರವಯಶೂನ್ಯಮೂರ್ತಿ ಗುಹೇಶ್ವರಲಿಂಗಕ್ಕೆ
    ಎನ್ನ ಅಷ್ಟತನುವೆ ಅಷ್ಟ ವಿಧಾರ್ಚನೆಯಾಗಿ,
    ಎನ್ನ ಅಷ್ಟಾತ್ಮ-ಅಷ್ಟಕರಣಂಗಳೆ ಷೋಡಶೋಪಚಾರವಾಗಿ,
    ಶರಣಸತಿ-ಲಿಂಗಪತಿಯೆಂಬ ಉಭಯ ಭೇದವಳಿದು ಏಕವಾಗಿ
    ಎಲೆಗಳೆದ ವೃಕ್ಷದಂತೆ ಉಲುಹಡಗಿರ್ದೆನಯ್ಯ.
    ತೆರೆಯಳಿದ ಅಂಬುದಿಯಂತೆ ಪರಮ ಚಿದ್ಘನಗುರು ಶಿವಸಾಗರದೊಳಗೆ ಮುಳುಗಿ
    ಪರಮ ಚಿದ್ಗಂಬಿರನಾಗಿರ್ದೆನಯ್ಯ
    ಘಟವನಳಿದ ಅವಕಾಶದಂತೆ
    ಬಚ್ಚಬರಿಯ ಬಯಲಾಗಿ ನಿಶ್ಚಲನಾಗಿರ್ದೆನಯ್ಯಾ
    ಪಟವನಳಿದ ಚಿತ್ರದಂತೆ ನಿರ್ಮಲ ನಿರಾವರಣನಾಗಿ
    ಶುದ್ಧ ಅಮಲಬ್ರಹ್ಮವಾಗಿ ಪ್ರತಿಯಿಲ್ಲದ ಅಪ್ರತಿಮ
    ಅನುಮಿಷ ಅನುಪಮ ಅಪ್ರಮಾಣ ಅನಾಮಯ ಅಗಣಿತ ಅಚಲಾನಂದ
    ನಿತ್ಯ ನಿಃಕಳಂಕ ನಿರ್ಮಾಯ ನಿರಾಲಂಬ ನಿರ್ಗುಣ ನಿತ್ಯಮುಕ್ತ
    ನಿತ್ಯತೃಪ್ತ ನಿಶ್ಚಿಂತ ನಿಃಕಾಮ್ಯ ನಿಜಷಡ್ಗುಣೈಶ್ವರ್ಯ
    ಮದ್ಗುರು ಸಂಗನಬಸವಣ್ಣನ ಚಿದ್ಬೆಳಗಿನ ಬಯಲೊಳಗೆ
    ಬಯಲಪ್ಪುದು ತಪ್ಪದು ! ನಿಮ್ಮ ಕೃಪೆಯಿಂದ ! ನೋಡ !
    ಚೆನ್ನಬಸವಣ್ಣ./145

  146. ಅಯ್ಯ ! ನಿರವಯಶೂನ್ಯಲಿಂಗದೇಹಿ ನಿಜಕರುಣಪ್ರಸಾದಾತ್ಮನು
    ಆ ನಿರವಯ ಶೂನ್ಯಲಿಂಗದಾಚಾರದಲ್ಲಿಯೆ ನಡೆವನಯ್ಯ !
    ಲೋಕವರ್ತಕ ಲೋಕಚಾತುರ್ಯಕ್ಕೆ, ಲೋಕವ್ಯವಹರಣೆಯನನುಕರಿಸಿ ನಡೆವನಲ್ಲ !
    ನಿಜಶಿವಜ್ಞಾನ-ನಿಜಶಿವಕ್ರಿಯಾಪ್ರಕಾಶವ ಸಂಬಂದಿಸಿಕೊಂಡು
    ಸರ್ವಾಂಗವು ನಿರವಯಶೂನ್ಯಲಿಂಗರೂಪವಾಗಿ
    ಲಿಂಗಕ್ಕೆ ಲಿಂಗವೆ ಭಾಜನ ಪದಾರ್ಥ-ಪ್ರಸಾದ-ಪರಿಣಾಮವಾಗಿರಬಲ್ಲಡೆ
    ಅದು ಲಿಂಗೈಕ್ಯ ನೋಡ !
    ನೆಲನಿಲ್ಲದ ನಿರ್ಮಲ ಚಿದ್ಭೂಮಿಯಲ್ಲಿ
    ಸ್ವಯಜ್ಞಾನಶಿಶು ಉದಯವಾಯಿತ್ತು ನೋಡ ! ಆ ಸ್ವಯಜ್ಞಾನ ಶಿಶು
    ಊಧ್ರ್ವಲೋಕಕ್ಕೆ ಹೋಗಿ ವ್ಯೋಮಾಮೃತಪ್ರಸಾದವನುಂಡು
    ನಾಮರೂಪು-ಕ್ರಿಯೆಗಳನಳಿದು, ನಿರವಯಶೂನ್ಯಲೀಲೆಯ ಧರಿಸಿ
    ಸೋಮನಾಳದಲ್ಲಿ ಶುಭ್ರ ಕಳೆ; ಪಿಂಗಳನಾಳದಲ್ಲಿ ಸುವರ್ಣಕಳೆ;
    ಸುಷುಮ್ನನಾಳದಲ್ಲಿ ಸುಜ್ಞಾನಜ್ಯೋತಿಪ್ರಕಾಶದಂತೆ
    ಏಳುನೂರ ಎಪ್ಪತ್ತುನಾಳದಲ್ಲಿ ಹೊಳೆವುತ್ತಿರ್ಪ
    ಪರಮಗುರು ಸಂಗನಬಸವಣ್ಣನ ಬೆಳಗಿನ ನಿಜಪ್ರಸಾದದೊಳಗೆ
    ಗುಹೇಶ್ವರ ಪ್ರಭುವೆಂಬ ರೂಪತಾಳಿ, ಪಕ್ವವಾದ ಮೇಲೆ
    ಮತ್ತಲ್ಲಿಯೆ ನಿರವಯಶೂನ್ಯವಪ್ಪುದು ತಪ್ಪದು ನೋಡ !
    ಚೆನ್ನಬಸವಣ್ಣ. /146

  147. ಅಯ್ಯ ! ನಿರವಯಶೂನ್ಯಲಿಂಗಮೂರ್ತಿಯ ನಿಲುಕಡೆ ಎಂತೆಂದಡೆ,-
    ಸಾಕಾರನಲ್ಲ ನಿರಾಕಾರನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಆದಿಯಲ್ಲ ಅನಾದಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಇಹದವನಲ್ಲ ಪರದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಸುಖದವನಲ್ಲ ದುಃಖದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಪುಣ್ಯದವನಲ್ಲ ಪಾಪದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಕರ್ತುವಲ್ಲ ಭೃತ್ಯನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಕಾರಣನಲ್ಲ ಕಾರ್ಯನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಧರ್ಮಿಯಲ್ಲ ಕರ್ಮಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಪೂಜ್ಯನಲ್ಲ ಪೂಜಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಇಂತು ಉಭಯವಳಿದು ಬೆಳಗುವ ಸಂಗನಬಸವಣ್ಣನ
    ಹೃತ್ಕಮಲಮಧ್ಯದಲ್ಲಿ ನೆಲಸಿರ್ಪುದು ನೋಡ ! ಗುಹೇಶ್ವರಲಿಂಗವು
    ಚೆನ್ನಬಸವಣ್ಣ./147

  148. ಅಯ್ಯ ! ನಿರಾಳ ನಿಃಶೂನ್ಯ ಪರಮ ಭಕ್ತ-ಜಂಗಮ ತಾನಾಗಲರಿಯದೆ
    ಬರಿದೆ ಅಹಂಕರಿಸಿ ಮುಂದುಗೊಂಡು ಮೂರು ಮಲಗಳ ಸ್ವೀಕರಿಸಿ,
    ನಾವೆ ಭಕ್ತ-ಜಂಗಮವೆಂದು ನುಡಿವ ಕರ್ಮಕಾಂಡಿಗಳು
    ಕಾಶಿ, ಕೇತಾರ, ಶ್ರೀಶೈಲ, ಗಯಾ, ಪ್ರಯಾಗ, ಶಿವಗಂಗೆ, ಕಂಚಿ,
    ಕಾಳಹಸ್ತಿ, ಪಂಪಾಕ್ಷೇತ್ರ,
    ವೀರಣ್ಣ, ಬಸವಣ್ಣ, ಕಲ್ಲಣ್ಣ, ಮಲ್ಲಣ್ಣ,
    ಕಂಥೆ, ಕಮಂಡಲ, ಗದ್ದಿಗೆ, ಪಾವುಗೆ, ಭಸ್ಮ, ಘಂಟಿಕೆ, ಪುರಾಣ, ದಂಡಾಗ್ರ,
    ಗಿಳಿಲು, ಶಂಖು,
    ತಿಥಿ, ವಾರ, ನಕ್ಷತ್ರ, ಹುಣ್ಣಿವೆ, ಅಮಾವಾಸ್ಯೆ, ಸೂರ್ಯ, ಚಂದ್ರಾಗ್ನಿ, ದೀಪಾರತಿ
    ಗಂಗೆ, ಗೌರಿ, ವಿಘ್ನೇಶ್ವರ ಮೊದಲಾದವು ಇವು ದೈವಂಗಳೆಂದು
    ಕಲ್ಲು, ಮಣ್ಣು, ಮರದಿಂದ ರಚಿಸಿ, ಸಂದಿ-ಗೊಂದಿ-ಮಾಡು-
    ಜಗುಲಿಯ ಮಾಡಿಟ್ಟು,
    ಅದರ ತೊಳೆದ ನೀರು, ಎಂಜಲವ ತಿಂಬವರ ದೇವ-ಭಕ್ತರೆನಬಹುದೆ ?
    ಇಂತಪ್ಪ ಅನಾಚಾರಿ ಶ್ವಪಚರ, ಭಕ್ತ-ಜಂಗಮ-ದೇವರೆಂದು ಪೂಜಿಸಲಾಗದು.
    ನಿರಾಭಾರಿ ವೀರಶೈವಾಚಾರ ಕ್ರಿಯಾಜ್ಞಾನ ವೈರಾಗ್ಯ ಸದ್ಭಕ್ತಿಯುಳ್ಳ
    ಸದ್ಭಕ್ತ ಶಿವಶರಣನ ಪೂಜಿಸಿ ಪಾದೋದಕ-ಪ್ರಸಾದವ ಕೊಂಡಡೆ
    ಭವಪಾಶಕರ್ಮಂಗಳು ಮಾಣ್ಬವು ಕಾಣಾ ಗುಹೇಶ್ವರಲಿಂಗದಲ್ಲಿ
    ಚೆನ್ನಬಸವಣ್ಣ./148

  149. ಅಯ್ಯ ! ನೀಲಮಣಿ ಮಧ್ಯಸ್ಥಾನದಲ್ಲಿ,
    ಕಾರ ಮೇಘದೊಳಗಿನ ಮಿಂಚಿನ ಪ್ರಕಾಶವಾಗಿ
    ಚಿದಾಕಾಶಸ್ವರೂಪದಿಂದ ಪೀತವರ್ಣ ಮೊದಲಾಗಿ ಅನಂತ ವರ್ಣಸ್ವರೂಪವಾಗಿ
    ಅತ್ಯಂತವಾದ ಅಣುರೂಪವಾಗಿ
    ಬದನೆಯ ಮುಳ್ಳಿನ ಹಾಗೆ
    ಅನಂತ ಪ್ರಕಾರದಿಂದ ಕಾಣಲ್ಪಡುವುದು ನಿಜಶಿವಯೋಗಿಗೆ,
    ಲಿಂಗಧ್ಯಾನಿಗಳಿಗೆ ಅನಾದಿಮೂಲ ಪ್ರಣಮಸ್ವರೂಪದಿಂದ
    ಮುಖಕಮಲದ ಮೇಲೆ ಕಾಣಲ್ಪಡುವುದು ನೋಡಾ.
    ಅದೆಂತೆಂದಡೆ:ಮುಖ ಮಧ್ಯದಲ್ಲಿ ನೇತ್ರ, ನೇತ್ರ ಮಧ್ಯದಲ್ಲಿ ಮನಸ್ಸು,
    ಮನೋಮಧ್ಯದಲ್ಲಿ ತಾನೆ ತಾನಲ್ಲದೆ ಮತ್ತೊಂದು ಸಾಧಕವಿಲ್ಲದದು
    ನಿಜತಾರಕಬ್ರಹ್ಮಶಾಂಭವಮೂರ್ತಿಯ ನೋಡ-
    ಇಂತು ನಿಜತಾರಕಬ್ರಹ್ಮಶಾಂಭವಮೂರ್ತಿಯ ಮೂರ್ತಿಗೊಂಡಿರ್ಪರು ನೋಡಾ
    ಗುಹೇಶ್ವರಲಿಂಗದ ಹೃತ್ಕಮಲಮಧ್ಯದಲ್ಲಿ ಸಿದ್ಧರಾಮಯ್ಯ./149

  150. ಅಯ್ಯ ! ಪೂರ್ವವನಳಿದು ಪುನರ್ಜಾತನಾದ
    ಸತ್ಯಸದ್ಧರ್ಮಸ್ವರೂಪ ತಚ್ಛಿಷ್ಯನು ಶ್ರೀಗುರುಲಿಂಗಜಂಗಮದ
    ವೇಧಾ-ಮಂತ್ರ-ಕ್ರಿಯಾದೀಕ್ಷೆಯ ಪಡೆದು, ಅಷ್ಟಾವರಣದ ನೆಲೆಕಲೆಗಳ ತಿಳಿದು,
    ಪಂಚಾಚಾರ ಮೊದಲಾಗಿ ಸರ್ವಾಚಾರ ಸಂಪತ್ತಿನ ವಿವರ ತಿಳಿದು,
    ನೂರೊಂದು ಸ್ಥಲದ ಆಚರಣೆ-ಇನ್ನೂರಹದಿನಾರು ಸ್ಥಲದ ಸಂಬಂಧವನರಿದು,
    ಷಟ್ಸ್ಥಲ ಮಾರ್ಗವಿಡಿದು, ಶ್ರೀಗುರುಲಿಂಗ ಜಂಗಮಕ್ಕೆ
    ತನು-ಮನ-ಧನವಂಚನೆಯಿಲ್ಲದೆ ನಿರ್ವಂಚಕನಾಗಿ,
    ಭಕ್ತಸ್ಥಲದಲ್ಲಿ ನಿಂದಡೆ ಸತ್ಯಶುದ್ಧ ಕಾಯಕ[ವ ಮಾಡಿ]
    ಮಹೇಶ್ವರಸ್ಥಲದಲ್ಲಿ ನಿಂದಡೆ ಸತ್ಯಶುದ್ಧ ಬಿಕ್ಷವ ಮಾಡಿ, (ಬೇಡಿ?)
    ಬಂದ ಪದಾರ್ಥವ ಸಮರ್ಪಿಸಿ, ಪರದ್ರವ್ಯದಲ್ಲಿ ರಿಣಭಾರನಾಗದೆ,
    ಸತ್ಯಶುದ್ಧ ನಡೆನುಡಿಯಿಂದಾಚರಿಸಿ,
    ಶ್ರದ್ಧಾದಿ ಸಮರಸಾಂತ್ಯಮಾದ ಸದ್ಭಕ್ತಿಯ ತಿಳಿದು
    ಅನಾದಿಕುಳ ಸನ್ಮತವಾದ ದಶವಿಧ ಪಾದೋದಕ, ಏಕಾದಶ ಪ್ರಸಾದದ ವಿಚಾರ
    ಮೊದಲಾದ ಅರ್ಪಿತಾವಧಾನವ,
    ಪರಿಪೂರ್ಣಮಯ ಶ್ರೀಗುರುಲಿಂಗಜಂಗಮಕರುಣಕಟಾಕ್ಷೆಯಿಂದ,
    ಅಚ್ಚ ಪ್ರಸಾದಿಸ್ಥಲದ ಶರಣತ್ವವ ಪಡೆದು,
    ಸತ್ಯಸದಾಚಾರವುಳ್ಳ ಸದ್ಗುರುಲಿಂಗಜಂಗಮದ ನಿಜನಿಷ್ಠತ್ವಮಂ ತಿಳಿದು,
    ದಂತಧಾವನಕಡ್ಡಿ ಮೊದಲು ಕಾಪ ಕಟಿಸೂತ್ರ ಕಡೆಯಾದ ಸಮಸ್ತ ಪದಾರ್ಥವ
    ಗುರು-ಲಿಂಗ-ಜಂಗಮಕ್ಕೆ ಸಮರ್ಪಿಸಿ, ಅವರೊಕ್ಕುದ ಹಾರೈಸಿ, ಕೊಂಡು
    ಇಂತು ಅಂತರಂಗ ಪರಿಪೂರ್ಣವಾಗಿ ನಿಂದ ಸಮಯದಲ್ಲಿ,
    ಸ್ವಯ-ಚರ-ಪರಲೀಲೆಯ ಧರಿಸಿ ಜಂಗಮಾಕೃತಿಯಿಂದ ಬಂದ
    ಗುರುಲಿಂಗಜಂಗಮದ ವೃತ್ತಸ್ಥಾನವಾದ ಮೊಳಪಾದ ಪರಿಯಂತರವು
    ತೊಳದು ಬಹುಗುಣಿಯಲ್ಲಿ ಮಡಗಿಕೊಂಡು,
    ಹೊಸಮನೆ, ಹೊಸಧನ, ಧಾನ್ಯ ಭಾಂಡಭಾಜನ, ಹೊಸ ಅರುವೆ-ಆಭರಣ,
    ಜನನಿಜಠರದಿಂದಾದ ಅಂಗಾಂಗ, ಕಾಯಿಪಲ್ಯ,
    ಉಚಿತಕ್ರಿಯೆ ಮೊದಲಾಗಿ ಅರಿದಾಚರಿಸುವದು ನೋಡ !
    ಆ ಮೇಲೆ ಗುರುಲಿಂಗಜಂಗಮದ ಪ್ರಕ್ಷಾಲನೆ ಮಾಡಿದ ಪಾದವನ್ನು
    ಮೂರು ವೇಳೆ ಅಡಿಪಾದವ ಸ್ಪರ್ಶನವ ಮಾಡಿ, ನಾಲ್ಕನೆಯ ವೇಳ್ಯಕ್ಕೆ
    ದಶಾಂಗುಲಿಗಳ ಒಂದು ವೇಳೆ ಸ್ಪರ್ಶನವ ಮಾಡಿದ
    ಉದಕವನ್ನು ಭಾಂಡಭಾಜನದಲ್ಲಿ ತುಂಬಿ ಸ್ವಪಾಕವ ಮಾಡುವುದು.
    ಆ ಸಮಯದಲ್ಲಿ ಬಿಂದುಮಾತ್ರ [ವಾದರೂ]
    ಇಷ್ಟಲಿಂಗ ಬಾಹ್ಯವಾದ ಭವಿಜನ್ಮಾತ್ಮರಿಗೆ ಹಾಕಲಾಗದು.
    ಇನ್ನು ಜಂಗಮದ ಅಂಗುಷ್ಠ ಎರಡು-ಅಂಗುಲಿ ಎಂಟರಲ್ಲಿ ತನ್ನ ತರ್ಜನಿ ಬೆರಳಿಂದ
    ಮೊದಲಂತೆ ಪಾದೋದಕವ ಮಾಡಿ, ಬಟ್ಟಲಲ್ಲಿ ಮಡಗಿ,
    ಪೂರ್ವದಲ್ಲಿ ಭಾಂಡದೊಳಗೆ ತುಂಬಿದ
    ಗುರುಪಾದೋದಕದಿಂದ ವಿಭೂತಿ ಘಟ್ಟಿಯ ಅಬಿಷೇಕವ ಮಾಡಿ,
    ಈ ಬಟ್ಟಲಲ್ಲಿ ಮಡಗಿದ ಲಿಂಗಪಾದೋದಕದಲ್ಲಿ ಮಿಶ್ರವ ಮಾಡಿ,
    ಇಪ್ಪತ್ತೊಂದು ಪ್ರಣಮವ ಲಿಖಿಸಿ
    ಶ್ರೀಗುರುಲಿಂಗಜಂಗಮವು ತಾನು ಮಂತ್ರಸ್ಮರಣೆಯಿಂದ
    ಸ್ನಾನ-ಧೂಳನ-ಧಾರಣವ ಮಾಡಿ, ಲಿಂಗಾರ್ಚನೆ ಕ್ರಿಯೆಗಳ ಮುಗಿಸಿಕೊಂಡು,
    ಆ ಮೇಲೆ ತೀರ್ಥವ ಪಡಕೊಂಬುವಂಥ ಲಿಂಗಭಕ್ತನು
    ಆ ಜಂಗಮಲಿಂಗಮೂರ್ತಿಯ ಸಮ್ಮುಖದಲ್ಲಿ ಗರ್ದುಗೆಯ ರಚಿಸಿಕೊಂಡು,
    ಅಷ್ಟಾಂಗಯುಕ್ತನಾಗಿ ಶರಣಾಥರ್ಿ ಸ್ವಾಮಿ ! ಜಂಗಮಲಿಂಗಾರ್ಚನೆಗೆ ಅಪ್ಪಣೆಯ
    ಪಾಲಿಸಬೇಕೆಂದು ಬೆಸಗೊಂಡು,
    ಆ ಗರ್ದುಗೆಯ ಮೇಲೆ ಮೂರ್ತವ ಮಾಡಿಕೊಂಡು
    ಆ ಕ್ರಿಯಾಜಂಗಮಮೂರ್ತಿಯ ಕರಕಮಲದಲ್ಲಿ
    ನೆಲಸಿರುವ ಪರಾತ್ಪರ ಜ್ಞಾನಜಂಗಮ ಲಿಂಗಮೂರ್ತಿಗೆ
    ಅಷ್ಟವಿಧಾರ್ಚನೆ-ಷೋಡಶೋಪಚಾರಂಗಳ ಸಮರ್ಪಿಸಿ,
    ಆ ಮೇಲೆ, ತನ್ನ ವಾಮಕರದಂಗುಲಿ ಮಧ್ಯದಲ್ಲಿ
    ಷಡಕ್ಷರಂಗಳ ಲಿಖಿಸಿಕೊಂಡು ಅರ್ಚಿಸಿ,
    ತನ್ನ ಹೃನ್ಮಂದಿರಾಲಯದಲ್ಲಿ ನೆಲಸಿರುವ
    ಜ್ಯೋತಿರ್ಮಯ ಇಷ್ಟಮಹಾಲಿಂಗವ ನಿರೀಕ್ಷಿಸಿ
    ಆ ಪರಶಿವಜಂಗಮಲಿಂಗದೇವನ ಚರಣಾಂಗುಷ್ಠವ, ತನ್ನ ವಾಮಕರಸ್ಥಲದಲ್ಲಿ
    ಸುತ್ತು ಚಿತ್ತಾನಂದ ನಿತ್ಯಪರಿಪೂರ್ಣ ಅವಿರಳ ಪರಂಜ್ಯೋತಿ ಸ್ವರೂಪವಾದ
    ಪ್ರಾಣಲಿಂಗವೆಂದು ಭಾವಿಸಿ ಅಷ್ಟವಿಧಾರ್ಚನೆ
    ಷೋಡಶೋಪಚಾರ ಕ್ರಿಯಗಳ ಮಾಡಿ,
    ಆಮೇಲೆ ಇಷ್ಟಲಿಂಗಜಪಪ್ರಣಮ ಒಂದು ವೇಳೆ
    ಪ್ರಾಣಲಿಂಗ ಜಪಪ್ರಣಮ ಒಂದು ವೇಳೆ
    ಭಾವಲಿಂಗ ಜಪಪ್ರಣಮ ಒಂದು ವೇಳೆ ಪ್ರದಕ್ಷಿಣವ ಮಾಡಿ
    ಜಂಗಮಸ್ತೋತ್ರದಿಂದ ಶರಣು ಮಾಡಿ ಪೂಜೆಯನಿಳುಹಿ, ಪಾತ್ರೆಯಲ್ಲಿರುವ
    ಗುರುಪಾದೋದಕದಲ್ಲಿ ಬಿಂದುಯುಕ್ತವಾಗಿ ಮೂಲ ಪ್ರಣಮವ ಲಿಖಿಸಿ
    ಬಲದಂಗುಷ್ಠದಲ್ಲಿ ನೀಡುವಾಗ ಷಡಕ್ಷರಿಮಂತ್ರವ ಆರು ವೇಳೆ ಸ್ಮರಿಸಿ,
    ನೀಡುವಾಗ ಅಲ್ಲಿ ಅನಾದಿಗುರುವೆಂದು ಭಾವಿಸುವುದು.
    ಎಡದಂಗುಷ್ಠದ ಮೇಲೆ ನೀಡುವಾಗ ಪಂಚಾಕ್ಷರವ ಐದು ವೇಳೆ ಸ್ಮರಿಸಿ,
    ನೀಡುವಾಗ ಅಲ್ಲಿ ಅನಾದಿಲಿಂಗವೆಂದು ಭಾವಿಸುವುದು.
    ಎರಡಂಗುಷ್ಠದ ಮಧ್ಯದಲ್ಲಿ ನೀಡುವಾಗ ಒಂಬತ್ತಕ್ಷರವ ಒಂದು ವೇಳೆ ಸ್ಮರಿಸಿ,
    ನೀಡುವಾಗ ಅಲ್ಲಿ ತ್ರಿಕೂಟಸಂಗಮ ಅನಾದಿಜಂಗಮವೆಂದು ಭಾವಿಸುವುದು.
    ಈ ಪ್ರಕಾರದಲ್ಲಿ ನೀಡಿದ ಮೇಲೆ ದ್ರವವನಾರಿಸಿ, ಭಸ್ಮಧಾರಣವ ಮಾಡಿ,
    ಒಂದೆ ಪುಷ್ಪವ ಧರಿಸಿ, ನಿರಂಜನ ಪೂಜೆಯಿಂದ ಪ್ರದಕ್ಷಣವ ಮಾಡಿ, ನಮಸ್ಕರಿಸಿ,
    ಆ ತೀರ್ಥದ ಬಟ್ಟಲೆತ್ತಿ ಆ ಜಂಗಮಲಿಂಗಕ್ಕೆ ಶರಣಾಥರ್ಿಯೆಂದು ಅಬಿವಂದಿಸಿ.
    ಅವರು ಸಲಿಸಿದ ಮೇಲೆ ತಾನು ಗರ್ದುಗೆಯ ಬಿಟ್ಟೆದ್ದು,
    ಪರಾತ್ಪರ ಬ್ರಹ್ಮಸ್ವರೂಪ ಜಂಗಮ ತೀರ್ಥದ ಸ್ತೋತ್ರವ ಮಾಡಿ,
    ಅಷ್ಟಾಂಗ ಹೊಂದಿ ಶರಣುಹೊಕ್ಕು,
    ನಿಮ್ಮ ಪ್ರಸಾದೋದಕಕ್ಕೆ ನಿರೂಪವ ಪಾಲಿಸಬೇಕು ಸ್ವಾಮಿ ! ಎಂದು ಬೇಡಿಕೊಂಡು
    ಬಂದು ಮೊದಲ ಹಾಂಗೆ ಗರ್ದುಗೆಯ ಮೇಲೆ ಮೂರ್ತವ ಮಾಡಿಕೊಂಡು
    ಆ ಜಂಗಮ ಮೂರ್ತಿಗಳು ಸಲಿಸಿದೋಪಾದಿಯಲ್ಲಿ ತಾನು ಸಲಿಸುವುದು.
    ಆಮೇಲೆ ಷಟ್ಸ್ಥಲಭಕ್ತ ಮಹೇಶ್ವರರು ಅದೇ ರೀತಿಯಲ್ಲಿ ಸಲಿಸುವುದು.
    ಉಳಿದ ಷಟ್ಸ್ಥಲಮಾರ್ಗವರಿಯದ ಲಿಂಗಧಾರಕಶಿಶುವಾಗಿಲಿ,
    ಶಕ್ತಿಯಾಗಲಿ, ದೊಡ್ಡವರಾಗಲಿ
    ಆ ಗರ್ದುಗೆಯ ತೆಗೆದು ಲಿಂಗಕ್ಕೆ ಅರ್ಪಿಸಿಕೊಳ್ಳಬೇಕಲ್ಲದೆ ಬಟ್ಟಲೆತ್ತಲಾಗದು.
    ಅದೇನು ಕಾರಣವೆಂದಡೆ, ಅವರಿಗೆ ಇಪ್ಪತ್ತೊಂದು ದೀಕ್ಷೆ, ಷಟ್ಸ್ಥಲಮಾರ್ಗ,
    ಸರ್ವಾಚಾರ ಸಂಪತ್ತಿನಾಚರಣೆ ಮುಂದಿದ್ದರಿಂದ ಅವರು ಬಟ್ಟಲೆತ್ತಲಾಗದು.
    ಹೀಂಗೆ ಸಮಸ್ತರು ಸಲಿಸಿದ ಮೇಲೆ ಕೊಟ್ಟು-ಕೊಂಡ, ಭಕ್ತ-ಜಂಗಮವು
    ಇರ್ವರು ಕೂಡಿ ಮುಕ್ತಾಯವ ಮಾಡಿದಲ್ಲಿಗೆ ದಶವಿಧ ಪಾದೋದಕವಾಗುವುದು.
    ಆ ಮೇಲೆ ಗುರುಪಾದೋದಕದಿಂದ ಪಾಕವ ಮಾಡಿದ ಭಾಂಡಭಾಜನಂಗಳು
    ತಾಂಬೂಲ ಪದಾರ್ಥ ಮುಂತಾಗಿ ಇರ್ವರು ಕೂಡಿ
    ಮೌನಮಂತ್ರ ಧ್ಯಾನದಿಂದ ಹಸ್ತಸ್ಪರ್ಶನವ ಮಾಡಿ.
    ಶುದ್ಧ ಪ್ರಸಾದವೆಂದು ಭಾವಿಸಿ, ಬಹುಸುಯಿದಾನದಿಂದ
    ಸಮಸ್ತ ಜಂಗಮಭಕ್ತ ಮಹೇಶ್ವರ ಶರಣಗಣಾರಾಧ್ಯರಿಗೆ ಎಡೆಮಾಡಿ,
    ಅಷ್ಟಾಂಗ ಹೊಂದಿ, ಎಡಬಲ ಗಣತಿಂಥಿಣಿಯ ನೋಡಿ, ನಿರೀಕ್ಷಿಸಿ,
    ಶರಣಾಥರ್ಿ ! ಸ್ವಾಮಿ ! ಮಹಾಲಿಂಗಾರ್ಪಿತವ ಮಾಡಬೇಕೆಂದು ಅಬಿವಂದಿಸಿ,
    ಪತಿವ್ರತತ್ವದಿಂದ ಜಂಗಮಕ್ಕೆ ನಿರ್ವಂಚಕನಾಗಿ,
    ಭಕ್ತ-ಜಂಗಮವೆಂಬ ಉಭಯನಾಮವಳಿದು ಕ್ಷೀರ ಕ್ಷೀರ ಬೆರೆತಂತೆ ನಿರಾಕಾರ-
    ನಿಶ್ಯಬ್ಧಲೀಲೆ ಪರಿಯಂತರವು ಶ್ರೀಗುರುಲಿಂಗಜಂಗಮಪಾದೋದಕಪ್ರಸಾದವ
    ಸಪ್ತವಿಧಭಕ್ತಿಯಿಂದ ಸಾವಧಾನಿಯಾಗಿ ಆಚರಿಸುವಾತನೆ ಜಂಗಮಭಕ್ತನಾದ
    ಅಚ್ಚಪ್ರಸಾದಿಯೆಂಬೆ ಕಾಣಾ ! ಗುಹೇಶ್ವರಲಿಂಗದಲ್ಲಿ ಚೆನ್ನಬಸವಣ್ಣ./150

  151. ಅಯ್ಯ ! ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ,
    ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯವೆಂಬ
    ದಶವಾಯು ಪ್ರಾಣಗುಣಂಗಳ ನಷ್ಟವ ಮಾಡಿ
    ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ,
    ಧಾನ್ಯ, ಧಾರಣ, ಸಮಾದಿಯೆಂಬ ಹಠಯೋಗ ಜಡಶೈವಮಾರ್ಗವನುಳಿದು,
    ನಿಭ್ರರ್ಾಂತ, ನಿಶ್ಚಿಂತ, ನಿರ್ಗುಣಾನಂದಲೀಲೆಯನರಿದು, ಹಿಂದೆ ಹೇಳಿದ
    ಸದ್ಭಕ್ತ-ಮಹೇಶ-ಪ್ರಸಾದಿಸ್ಥಲವ ಅಂಗವ ಮಾಡಿಕೊಂಡು
    ಸರ್ವಾಂಗಲೋಚನಮೂರ್ತಿಯಾಗಿ ಪ್ರಭಾವಿಸುವ
    ನಿಜಪ್ರಾಣಲಿಂಗಿಯಂತರಂಗದಲ್ಲಿ ಚಿನ್ಮಯ ಸ್ವರೂಪಲೀಲೆಯಿಂ
    ಸಮಸ್ತ ತತ್ತ್ವಾನುಭಾವವನೊಳಗು ಮಾಡಿಕೊಂಡು
    ಹದಿನಾಲ್ಕು ಸ್ಥಲಂಗಳ ಗರ್ಬಿಕರಿಸಿಕೊಂಡು
    ಐದು ಸಾವಿರದ ನೂರ ಎಂಬತ್ತುನಾಲ್ಕು ಮಂತ್ರಮಾಲೆಗಳ ಪಿಡಿದುಕೊಂಡು
    ಇಪ್ಪತ್ತುನಾಲ್ಕು ಸಕೀಲಗರ್ಭದಿಂ, ಬಂಗಾರ ಲೋಹವನೊಳಕೊಂಡಂತೆ,
    ತನ್ನ ಸೋಂಕಿದವರೆಲ್ಲ ತನ್ನಂತೆಯೆಂಬ ಗುರುವಚನೋಕ್ತಿಪ್ರಮಾಣದಿಂದೆ
    ಶಬ್ದದೊಳಗೆ ನಿಃಶಬ್ದವಡಗಿರ್ಪ ಹಾಂಗೆ ಏಕಸ್ವರೂಪಿನಿಂದೆ
    ಯಜನಸ್ವರೂಪಮೂರ್ತಿ ಜಂಗಮಲಿಂಗವಾಗಿ ನೆಲಸಿರ್ಪುದು ನೋಡ !
    ನಿರವಯಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು
    ಚೆನ್ನಬಸವಣ್ಣ./151

  152. ಅಯ್ಯ ! ಮುಂದೆ ಮರ್ತ್ಯಲೋಕದ ಮಹಾಗಣಂಗಳು
    ಸದ್ಭಕ್ತಿ, ಸದಾಚಾರ, ಸತ್ಕ್ರಿಯಾ, ಸಮ್ಯಜ್ಞಾನ,
    ಆಜ್ಞಾದೀಕ್ಷೆ ಮೊದಲಾದ ಇಪ್ಪತ್ತೊಂದು ದೀಕ್ಷೆಯ ವಿಚಾರ,
    ತ್ರಿವಿಧ ಸ್ಥಲ-ಷಟ್ಸ್ಥಲ
    ದಶವಿಧಪಾದೋದಕ, ಏಕಾದಶಪ್ರಸಾದ, ಷೋಡಶಾವರಣ,
    ನೂರೆಂಟುಸಕೀಲು ಮೊದಲಾದ ಸಮಸ್ತಸಕೀಲದ ಅರ್ಪಿತ-ಅವಧಾನಂಗಳು,
    ಮೂಲಪ್ರಣಮ ಮೊದಲಾಗಿ ಮಹಾಮಂತ್ರಗಳು,
    ಸರ್ವಾಚಾರ ಸಂಪತ್ತಿನ ಲಿಂಗಾನುಭಾವದ ನಡೆ-ನುಡಿಯ ವಿಚಾರವು
    ಷಡ್ವಿಧಶೀಲ, ಷಡ್ವಿಧವ್ರತ, ಷಡ್ವಿಧನೇಮದ ಕಲೆನೆಲೆಯ ಸನ್ಮಾರ್ಗವು,
    ಇಂತೀ ಸ್ವಸ್ವರೂಪುನಿಲುಕಡೆಯ
    ನಿಷ್ಕಲಂಕ ಪರಶಿವಮೂರ್ತಿ ಸದ್ಗುರು ಲಿಂಗಜಂಗಮದಿಂ ಪಡೆದು
    ಪರುಷಮುಟ್ಟಿದ ಲೋಹ ಬಂಗಾರವಾಗಿ ಮರಳಿ ಲೋಹವಾಗದಂತೆ,
    ಪಾವನಾರ್ಥವಾಗಿ ಸ್ವಯ-ಚರ-ಪರ, ಆದಿ-ಅಂತ್ಯ-ಸೇವ್ಯಸ್ಥಲ ಮೊದಲಾದ
    ಷಟ್ಸ್ಥಲಮಾರ್ಗವಿಡಿದಾಚರಿಸುವಲ್ಲಿ ಭಕ್ತಮಾಹೇಶ್ವರ ಶರಣಗಣಂಗಳು
    ಸಮಪಙ್ತಯಲ್ಲಿ
    ಸುಗಂಧ, ಸುರಸ, ಸುರೂಪು, ಸುಸ್ಪರ್ಶನ ಸುಶಬ್ದ, [ಸುಪರಿಣಾಮ],
    ಮಧುರ, ಒಗರು, ಕಾರ, ಹುಳಿ, ಕಹಿ, ಲವಣ, ಪಂಚಾಮೃತ
    ಮೊದಲಾದ ಪದಾರ್ಥದ
    ಪೂರ್ವಾಶ್ರಯವ ಕಳೆದು, ಮಹಾಘನಲಿಂಗಮುಖದಲ್ಲಿ
    ಶುದ್ಧ-ಸಿದ್ಧ-ಪ್ರಸಿದ್ಧ, ರೂಪು-ರುಚಿ-ತೃಪ್ತಿಗಳು ಮಹಾಮಂತ್ರ
    ಧ್ಯಾನದಿಂದ ಸಮರ್ಪಿಸಿ
    ಆ ಲಿಂಗದ ಗರ್ಭದಿ ನೆಲಸಿರ್ಪ ನಿರಂಜನಜಂಗಮದಿಂ ಮಹಾಪ್ರಸಾದವ ಪಡೆದು
    ತಾನೆ ಪ್ರಾಣಲಿಂಗವೆಂದು ಎರಡಳಿದು,
    ಪರಿಶಿವಲಿಂಗಲೀಲೆಯಿಂ ಭೋಗಿಸುವ ಸಮಪಙ್ತಯ ಮಧ್ಯದಲ್ಲಿ
    ಆವ ಗಣಂಗಳಾದರು ಸರಿಯೆ, ಪ್ರಸಾದ ನಮಗೆ ಹೆಚ್ಚಾಯಿತ್ತೆಂದು
    ತ್ರಿವಿಧದೀಕ್ಷಾಹೀನವಾದ ಉಪಾದಿಲಿಂಗಭಕ್ತಂಗೆ
    ಒಲ್ಮೆಯಿಂದ ಶರಣಾಗೆಂದು ಕೊಡುವವನೊಬ್ಬ ಅಯೋಗ್ಯನು !
    ಅಥವಾ ಗುರುಮಾರ್ಗದಾಚರಣೆಯ ತಿಳಿಯದೆ ಕೊಟ್ಟಲ್ಲಿ,
    ಇಂತು ಕೊಂಡ ಭಕ್ತನು ಬಹುನಿಜದಿಂದ ಆ ಪ್ರಸಾದವೆ-
    -ಪ್ರಾಣವಾಗಿದ್ದುದ ನೋಡಿ
    ಮುಂದೆ ಷಟ್ಸ್ಥಲಲಿಂಗಾನುಭಾವ ಸದ್ಭಕ್ತ ಶರಣಗಣಂಗಳು
    ಕೊಟ್ಟಾತಂಗೆ ಇಂತು ಕೊಡದಂತೆ ಆಜ್ಞೆಯ ಮಾಡಿ,
    ಕೊಂಡಂಥವರ ದುರ್ಗುಣಗಳ ಬಿಡಿಸಿ
    ವೇಧಾಮಂತ್ರಕ್ರಿಯೆ ಹಸ್ತಮಸ್ತಕಸಂಯೋಗ ಮೊದಲಾದ
    ಇಪ್ಪತ್ತೊಂದು ದೀಕ್ಷೆಯ ಸದ್ಗುರುವಿನಿಂ ಮಾಡಿಸಿ ಸದಾಚಾರವ ಬೋದಿಸಿ,
    ಅಷ್ಟಾವರಣದ ಗೊತ್ತ ಸರ್ವಾಂಗಲಿಂಗದಿ ತೋರಿ,
    ಅನಾದಿಜಂಗಮಪ್ರಸಿದ್ಧ ಪ್ರಸಾದ ಪಾದೋದಕವ ಕೊಟ್ಟುಕೊಂಬುದೆ
    ಸದಾಚಾರ-ಸನ್ಮಾರ್ಗ ನೋಡ ! ಗುಹೇಶ್ವರಲಿಂಗಕ್ಕೆ ಚೆನ್ನಬಸವಣ್ಣ./152

  153. ಅಯ್ಯ ! ಯಂತ್ರಗಾರನಲ್ಲ ಮಂತ್ರಗಾರನಲ್ಲ ನೋಡ !
    ನಿರವಯಶೂನ್ಯಲಿಂಗಮೂರ್ತಿ
    ಕುಳನಲ್ಲ ವ್ಯಾಕುಳನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಪಾಶನಲ್ಲ ಪಾಶಬದ್ಧನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಕಾಲನಲ್ಲ ಕರ್ಮನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಅಂಗವಿಕಾರಿಯಲ್ಲ ಮನವಿಕಾರಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಸೂಯನಲ್ಲ ಅಸೂಯನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಜಪದವನಲ್ಲ ತಪದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ವೈದಿಕನಲ್ಲ ವ್ಯವಹಾರಿಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಸಿದ್ಧನಲ್ಲ ಪ್ರಸಿದ್ಧನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಸುಖಿಯಲ್ಲ ದುಃಖಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಪಾಪಿಯಲ್ಲ ಕೋಪಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಕರ್ಮಿಯಲ್ಲ ಧರ್ಮಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಇಂತು ಉಭಯವಳಿದು ಸಂಗನಬಸವಣ್ಣನ ಪಂಚಪರುಷಮೂರ್ತಿಯಾಗಿ ಬೆಳಗುವ
    ಜ್ಯೋತಿ ತಾನೆ ನೋಡ ಗುಹೇಶ್ವರಲಿಂಗವು, ಚೆನ್ನಬಸವಣ್ಣ./153

  154. ಅಯ್ಯ ! ಶ್ವೇತ, ಪೀತ, ಹರಿತ, ಮಾಂಜಿಷ್ಠ, ಕಪೋತ, ಮಾಣಿಕ್ಯ,
    ಹಂಡಬಂಡ, ಚಿತ್ರ ವಿಚಿತ್ರ, ಮೊದಲಾದ ಪಶುಗಳ ಮಧ್ಯದಲ್ಲಿ ಕ್ಷೀರ !;
    ಕ್ಷೀರ ಮಧ್ಯದಲ್ಲಿ ದದಿ, ತಕ್ರ, ನವನೀತ, ಘೃತ, ರುಚಿ, ಚೇತನವಡಗಿರ್ಪಂತೆ,
    ಸಿಂಪಿಯ ಮಧ್ಯದಲ್ಲಿ ಚಿಜ್ಜಲ ಸ್ವಾತಿಮಿಂಚಿನ ಪ್ರಕಾಶಕ್ಕೆ ಘಟ್ಟಿಗೊಂಡು
    ಜಲರೂಪವಳಿದು ನಿರಾಕಾರವಾಗಿರ್ಪಂತೆ
    ಸಮಸ್ತ ಬೀಜಮಧ್ಯದಲ್ಲಿ ವೃಕ್ಷಂಗಳಡಗಿರ್ಪಂತೆ
    ವೃಕ್ಷಂಗಳ ಮಧ್ಯದಲ್ಲಿ ಬೀಜಂಗಳಡಗಿರ್ಪಂತೆ
    ಸದ್ಭಕ್ತ ಶಿವಶರಣಗಣಂಗಳ ಮಧ್ಯದಲ್ಲಿ ಗೋಪ್ಯವಾಗಿರ್ದು
    ಸಮಸ್ತ ಕುಲ-ಛಲ-ಮತಭ್ರಮಿತಂಗಳಿಂದ ತೊಳಲುವ
    ವೇದಾಂತಿ-ಸಿದ್ಧಾಂತಿ-ಬಿನ್ನಯೋಗಿ ಮೊದಲಾದ ಅದ್ವೈತಜಡಾತ್ಮರ ಕಣ್ಣಿಂಗೆ
    ಅಗೋಚರವಾಗಿರ್ಪುದು ನೋಡ ! ನಿರವಯಶೂನ್ಯಮೂರ್ತಿ ಗುಹೇಶ್ವರಲಿಂಗವು
    ಚೆನ್ನಬಸವಣ್ಣ./154

  155. ಅಯ್ಯ ! ಸಗುಣಿಯಲ್ಲ ನಿರ್ಗುಣಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಪರಮನಲ್ಲ ಜೀವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಅಹುದೆನ್ನ ಅಲ್ಲವೆನ್ನ ನೋಡ ! ನಿರವಯಶೂನ್ಯಲಿಂಗಮೂರ್ತಿ
    ನಾನು ಎನ್ನ ನೀನು ಎನ್ನ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಸೂಕ್ಷ್ಮನಲ್ಲ ಸ್ಥೂಲನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಯೋಗದವನಲ್ಲ ಭೋಗದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಮಾಡುವೆ [ನೆನ್ನ] ಮಾಡಿಸಿಕೊಂಬೆನೆನ್ನ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಸುಶಬ್ದದವನಲ್ಲ ಕುಶಬ್ದದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಸುಸ್ಪರ್ಶನದವನಲ್ಲ ಕುಸ್ಪರ್ಶನದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಸುರೂಪದವನಲ್ಲ ಕುರೂಪದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಸುರುಚಿಯವನಲ್ಲ ಕುರುಚಿಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಸುಗಂಧದವನಲ್ಲ ದುರ್ಗಂಧದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಇಂತು ಉಭಯವಳಿದು ಸಂಗನಬಸವಣ್ಣನ ಕರ-ಮನ-ಭಾವಂಗಳಲ್ಲಿ
    ಬೆಳಗುವ ಪರಂಜ್ಯೋತಿ ತಾನೆ ನೋಡ ! ಗುಹೇಶ್ವರಲಿಂಗವು
    ಚೆನ್ನಬಸವಣ್ಣ./155

  156. ಅಯ್ಯ ! ಸದ್ಭಕ್ತ-ಮಹೇಶ್ವರ-ಪ್ರಸಾದಿ-
    ಪ್ರಾಣಲಿಂಗಿ-ಶರಣ-ಐಕ್ಯ-ನಿರಾಲಂಬಸ್ಥಲ ಮೊದಲಾದ
    ಸಮಸ್ತಸ್ಥಲಂಗಳನರಿದು ಮರದು, ಮೇಲಾದ
    ನಿರವಯಶೂನ್ಯಸ್ಥಲದಲ್ಲಿ ಪ್ರಭಾವಿಸುವ ಮೂರ್ತಿಯ ಇರವೆಂತೆಂದಡೆ-
    ಅಜ್ಞಾನಮಾಯಾಸಂಸಾರ ಪ್ರಪಂಚೆಂಬ ಪಾಶದಲ್ಲಿ ಬಿದ್ದು ತೊಳಲುವ
    ಜಡಜೀವರಿಗೆ ಮರೆಯಾಗಿ, ಕಣ್ಣುಮನ ಭಾವಂಗಳಿಗೆ ಗೋಚರವಿಲ್ಲದೆ
    ಕ್ರಿಯಾಕಾಶ-ಜ್ಞಾನಾಕಾಶ-ಭಾವಾಕಾಶ-ಪಿಂಡಾಕಾಶ-ಬಿಂದ್ವಾಕಾಶ-
    ಚಿದಾಕಾಶ-ಮಹದಾಕಾಶಮಧ್ಯದಲ್ಲಿ ಸಿಡಿಲುಮಿಂಚು ಅಭ್ರಚ್ಛಾಯೆಯಂತೆ,
    ಇಕ್ಷು-ಲವಣ-ಸರ್ಪಿ-ದದಿ-ಕ್ಷೀರ-ಘೃತ-ಸ್ವಾದೋದಕ
    ಮೊದಲಾದ [ಸಪ್ತ] ಸಮುದ್ರಂಗಳಲ್ಲಿ
    ಉದರಾಗ್ನಿ-ಮುಂದಾಗ್ನಿ-ಕಾಮಾಗ್ನಿ-ಶೋಕಾಗ್ನಿ-
    ವಡವಾಗ್ನಿ-ಕಾಲಾಗ್ನಿ-ಚಿದಗ್ನಿ-[ಯೆಂಬ ಸಪ್ತಾಗ್ನಿ] ಇರ್ದು
    ಆ ಸಮುದ್ರಂಗಳ ಸಂಸಾರ-ಪಾಶ-ಜನ್ಮ-ಜರೆ-ಮರಣಾದಿಗಳಿಗೆ
    ಹೊರಗಾಗಿ ಇರ್ಪಂತೆ, ಶಿವಶರಣರ್ಗೆ ರೂಪಾಗಿ ಜಡಜೀವರಿಗೆ ನಿರೂಪವಾಗಿರ್ಪುದು
    ನೋಡ ! ಗುಹೇಶ್ವರಲಿಂಗವು ಚೆನ್ನಬಸವಣ್ಣ./156

  157. ಅಯ್ಯ ! ಸಪ್ತಧಾತುವಿನ ಸಪ್ತವ್ಯಸನವನಳಿದು,
    ಜೀವನ ಸಂಕಲ್ಪ-ವಿಕಲ್ಪ ಆಸೆ-ಆಮಿಷಂಗಳ ಹೊಟ್ಟುಮಾಡಿ ತೂರಿ,
    ಹಿಂದೆ ಹೇಳಿದ ಭಕ್ತಸ್ಥಲದಲ್ಲಿ ನಿಂದು ನಿರ್ವಂಚಕನಾಗಿ ಪಾತಕಸೂತಕಗಳ ಪರಿದು
    ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ಅವಿರಳಪರಂಜ್ಯೋತಿಮೂರ್ತಿಯಾಗಿ
    ಪ್ರಜ್ವಲಿಸುವ ಸದ್ವೀರಮಾಹೇಶ್ವರನಂತರಂಗದಲ್ಲಿ
    ಪರಮಾನಂದ ಲೀಲೆಯಿಂ ಇಪ್ಪತ್ತೈದು ತತ್ತ್ವಂಗಳನೊಳಕೊಂಡು
    ಹದಿನೆಂಟು ಸ್ಥಲಂಗಳ ಗರ್ಬಿಕರಿಸಿಕೊಂಡು,
    ಎರಡು ಸಾವಿರದ ಐನೂರ ತೊಂಬತ್ತೆರಡು ಮಂತ್ರಮಾಲೆಗಳ ಪಿಡಿದುಕೊಂಡು
    ಇಪ್ಪತ್ತುನಾಲ್ಕು ಸಕೀಲಗರ್ಭದಿಂ, ಗುರುಮುಟ್ಟಿ ಗುರುವಾದ ಗುರುವಿಂಗೆ ಎಂಬ
    ಎರಡೆಂಬತ್ತೆಂಟು ಕೋಟಿ ವಚನಾನುಭಾವವ ಸ್ವಾನುಭಾವಜ್ಞಾನದಿಂದರಿದು,
    ಪುಷ್ಪ ಪರಿಮಳ [ಜ್ಯೋತಿ] ಪ್ರಕಾಶದಂತೆ ಏಕರೂಪಿನಿಂದ
    ಮಂತ್ರಮೂರ್ತಿ ಗುರುಲಿಂಗವಾಗಿ [ನೆಲಸಿರ್ಪುದು] ನೋಡ
    ನಿರವಯಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು ಚೆನ್ನಬಸವಣ್ಣ./157

  158. ಅಯ್ಯ ! ಸಮಸ್ತ ಆತ್ಮರು ರತಿಸಂಯೋಗದಿಂದ ಗರ್ಭಿಣಿಯಾದಲ್ಲಿ
    ಹೆಣ್ಣು ಗಂಡೆಂಬ ನಾಮ-ರೂಪ-ಕ್ರಿಯೆಗಳು ಕಾಣಿಸಿಕೊಳ್ಳದಂತೆ;
    ಬಾಲ ಶಿಶುವಿನೊಳಗೆ ಯೌವನವಡಗಿರ್ಪಂತೆ;
    ಆ ಯೌವನದೊಳಗೆ ಮುಪ್ಪು ಅಡಗಿರ್ಪಂತೆ;
    ಆ ಮುಪ್ಪಿನೊಳಗೆ ಜನನ-ಮರಣ-ಸ್ಥಿತಿ ಅಡಗಿರ್ಪಂತೆ;
    ಆ ಜನನ ಮರಣ ಸ್ಥಿತಿಯೊಳಗೆ ಸಕಲ ಭೋಗಂಗಳಡಗಿರ್ಪಂತೆ;
    ಸರ್ವಜೀವದಯಾಪರತ್ವವುಳ್ಳ ಸದ್ಭಕ್ತ ಶಿವಶರಣಗಣಂಗಳಲ್ಲಿ
    ಮುಗಿಲ ಮರೆಯ ಸೂರ್ಯನಂತೆ ನೆಲದ ಮರೆಯ ನಿಧಾನದಂತೆ;
    ಒರೆಯ ಮರೆಯ ಅಲಗಿನಂತೆ; ಹಣ್ಣಿನ ಮರೆಯ ರಸದಂತೆ
    ಪರಮ ಪಾವನಮೂರ್ತಿ ನಿರವಯಘನವನೊಡಗೂಡಿ
    ಏಕಸ್ವರೂಪಿನಿಂದ ಗುಹೇಶ್ವರಲಿಂಗವು
    ತಾನು ತಾನಾಗಿರ್ದುದನೇನೆಂಬೆನಯ್ಯ ಚೆನ್ನಬಸವಣ್ಣ. /158

  159. ಅಯ್ಯ ! ಸಮಸ್ತಧಾನ್ಯಾದಿಗಳಲ್ಲಿ, ಸಮಸ್ತ ಫಲಾದಿಗಳಲ್ಲಿ,
    ಸಮಸ್ತಪುಷ್ಪಪತ್ರಾದಿಗಳಲ್ಲಿ
    ಮಧುರ, ಒಗರು, ಕ್ಷಾರ, ಆಮ್ಲ, ಕಹಿ, ಲವಣ ಮೊದಲಾದ
    ಸಮಸ್ತಪರಮಚಿದ್ರಸವಡಗಿರ್ಪಂತೆ,
    ಷೋಡಶಮದಗಜದಂತರಂಗದ ಮಧ್ಯದಲ್ಲಿ
    ಸಮಸ್ತ ವೈರಾಗ್ಯ, ತಿರಸ್ಕಾರಸ್ವರೂಪ ಮಹಾ [ಅ]ಜ್ಞಾನವಡಗಿರ್ಪಂತೆ,
    ಚಂದ್ರಕಾಂತದ ಶಿಲಾಮಧ್ಯದಲ್ಲಿ ಚಿಜ್ಜಲವಡಗಿರ್ಪಂತೆ,
    ಶಿಶುಗಳು `ಕಂಡ ಕನಸು’ ತಂದೆ ತಾಯಿಗಳಿಗೆ ಕಾಣಿಸಿದಂತೆ,
    ಕರವೀರ, ಸುರಹೊನ್ನೆ, ಜಾಜಿ, ಬಕುಳ, ಪಾದರಿ, ಪಾರಿಜಾತ, ಮೊಲ್ಲೆ,
    ಮಲ್ಲಿಗೆ, ತಾವರೆ, ನೈದಿಲೆ, ಸಂಪಿಗೆ, ದವನ, ಪಚ್ಚೆ, ಕಸ್ತೂರಿ,
    ಮರುಗ, ಬಿಲ್ವ ಮೊದಲಾದ ಪುಷ್ಪ ಪತ್ರಾದಿಗಳಲ್ಲಿ
    ಮಹಾಸದ್ವಾಸನಾ ಸ್ವರೂಪವಾದ ಪರಿಮಳವಡಗಿರ್ಪಂತೆ,
    ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ,
    ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯವೆಂಬ ದಶವಾಯುಗಳ ಮಧ್ಯದಲ್ಲಿ
    ಭ್ರಮರನಾದ, ವೀಣಾನಾದ, ಘಂಟಾನಾದ, ಭೇರಿನಾದ, ಮೇಘನಾದ,
    ಪ್ರಣಮನಾದ, ದಿವ್ಯನಾದ, ಸಿಂಹನಾದ, ಶರಭನಾದ, ಮಹಾನಾದಂಗಳಡಗಿರ್ಪಂತೆ,
    ಸದ್ಭಕ್ತ ಶಿವಶರಣಗಣಂಗಳ ಮಧ್ಯದಲ್ಲಿ ಅಡಗಿರ್ದು, ಜಗದ ಜಡಜೀವರಿಗೆ
    ಗೋಚರವಿಲ್ಲದಿರ್ಪುದು ನೋಡ ! ಗುಹೇಶ್ವರಲಿಂಗವು, ಚೆನ್ನಬಸವಣ್ಣ/159

  160. ಅಯ್ಯ ! ಸಮಸ್ತಲೋಕದ ಅಹಂ-ಮಮತೆಯೆಂಬ
    ಮೂಲಾಹಂಕಾರಂಗಳ ಪಾವುಗೆಯ ಮಾಡಿ ಮೆಟ್ಟಿನಿಂದು
    ಸರ್ವಾಂಗದಲ್ಲಿ ಚಿದ್ವಿಭೂತಿರುದ್ರಾಕ್ಷೆಮಂತ್ರ-
    ಜ್ಞಾನ, ಕ್ರಿಯಾಪಾದೋದಕ ಪ್ರಸಾದಭಕ್ತಿಯೆ
    ಅಂಗ ಮನ ಪ್ರಾಣ ಭಾವ ಇಂದ್ರಿಯಂಗಳಾಗಿ, ಹಿಂದೆ ಹೇಳಿದ
    ಸದ್ಭಕ್ತ-ಮಹೇಶ್ವರ-ಪ್ರಸಾದಿ-ಪ್ರಾಣಲಿಂಗ-ಶರಣ-ಐಕ್ಯಸ್ಥಲಂಗಳ
    ತನ್ನೊಳಗು ಮಾಡಿಕೊಂಡು
    ಮೇಲಾದ ನಿರಾಲಂಬಸ್ಥಲದಲ್ಲಾಚರಿಸುವ ಶರಣನಂತರಂಗದಲ್ಲಿ
    ಅಣುವಿಗೆ ಅಣುವಾಗಿ; ಮಹತ್ತಿಂಗೆ ಮಹತ್ತಾಗಿ
    ನೂರೊಂದು ಸ್ಥಲಂಗಳ ಕರತಳಾಮಳಕವಾಗಿ
    ಇಪ್ಪತ್ತೊಂದು ಸಾವಿರದಾ [ಆ]ರುನೂರು ಮಂತ್ರಮಾಲಿಕೆಗಳ ಪಿಡಿದುಕೊಂಡು
    ಇನ್ನೂರ ಹದಿನಾರು ಸಕೀಲಗರ್ಭದಿಂ
    ಪರಿಮಳ ಪರಿಮಳ ಕೂಡಿ ಬಿನ್ನದೋರದ ಹಾಂಗೆ ಏಕಸ್ವರೂಪಿನಿಂದೆ
    ದೀಕ್ಷಾ-ಶಿಕ್ಷಾ-ಮೋಕ್ಷಕಾರಣಾವತಾರಮೂರ್ತಿ ನಿಃಕಳಲಿಂಗವಾಗಿ
    ನೆಲಸಿರ್ಪುದು ನೋಡ ! ನಿರವಯಶೂನ್ಯಲಿಂಗಮೂರ್ತಿ
    ಗುಹೇಶ್ವರಲಿಂಗವು ಚೆನ್ನಬಸವಣ್ಣ./160

  161. ಅಯ್ಯ ಅಷ್ಟತನುವಿನ ಭ್ರಷ್ಟಮದಂಗಳ ತೂರಿ,
    ಅಷ್ಟಭೋಗವನಳಿದು, ಅಷ್ಟೈಶ್ವರ್ಯಗಳ ನೀಗಿ, ಅಷ್ಟಭಕ್ತಿಯನರಿದು,
    ಅಷ್ಟಾವರಣವ ತಿಳಿದು, ಅಷ್ಟವಿಧಸಕೀಲವ ಭೇದಿಸಿ ನೋಡಿ,
    ಅಷ್ಟಾಚಾರಗಳ ಕಂಡು, ನಿಷ್ಠೆ ನಿಜದಲ್ಲಿ ನಿಂದು,
    ಸಗುಣಾನಂದಲೀಲಾಮೂರ್ತಿಯಾಗಿ ಪ್ರಜ್ವಲಿಸುವ ಸದ್ಭಕ್ತ ಶರಣನಂತರಂಗದಲ್ಲಿ
    ಪರಿಪೂರ್ಣಲೀಲೆಯಿಂ ಮೂವತ್ತಾರು ತತ್ವಂಗಳನೊಳಕೊಂಡು,
    ಇಪ್ಪತ್ತು ನಾಲ್ಕು ಸ್ಥಲಂಗಳ ಗರ್ಬಿಕರಿಸಿಕೊಂಡು
    ಸಾವಿರದೇಳುನೂರ ಇಪ್ಪತ್ತೆಂಟು ಮಂತ್ರಮಾಲೆಗಳ ಪಿಡಿದು,
    ಇಪ್ಪತ್ತುನಾಲ್ಕು ಸಕೀಲ ಗರ್ಭದಿಂ
    “ಭಕ್ತದೇಹಿಕದೇವಾನಾಂ ದೇವದೇಹಿಕ ಭಕ್ತಯೋಃ”
    ಎಂಬ ವಾಂಛೆಯಿಂ ಕ್ಷೀರದೊಳು ಘೃತವಡಗಿದಂತೆ
    ಪಂಚಾಚಾರಮೂರ್ತಿ ಆಚಾರಲಿಂಗವಾಗಿ ನೆಲಸಿರ್ಪುದು ನೋಡ !
    ಗುಹೇಶ್ವರಲಿಂಗವು ಚೆನ್ನಬಸವಣ್ಣ./161

  162. ಅಯ್ಯ ಉಭಯ ಬಿನ್ನವರ್ತನಾಗುಣಂಗಳ
    ತನ್ನ ಮೂಲ ಚಿತ್ಸ್ವರೂಪವಾದ ಪರಿಪೂರ್ಣ ಮಹಾಜ್ಞಾನ ಪ್ರಕಾಶದ ಬಲದಿಂ
    ಜಳ್ಳುಮಾಡಿ ತೂರಿ, ತನ್ನನಾದಿಸನ್ಮಾರ್ಗವ ತಿಳಿದು,
    ಆ ಸನ್ಮಾರ್ಗದೊಳಗೆ ನಿರಾಭಾರಿ ವೀರಶೈವ ಅನಾದಿಶರಣಸ್ವರೂಪವ ತಿಳಿದು,
    ಆ ಶರಣನ ನಿಜಾಚರಣೆ ಸ್ವಸ್ವರೂಪದ ನಿಲುಕಡೆಯ
    ಆ ಪರಿಪೂರ್ಣಜ್ಞಾನಪ್ರಕಾಶದೊಳಗೆ ಮಹದರಿವ
    ಸ್ವಾನುಭಾವದೃಕ್ಕಿನಿಂ ಕಂಡು, ಆ ಮಹದರಿವೆ ಗುರುವಾಗಿ,
    ಆ ಪರಿಪೂರ್ಣಜ್ಞಾನವೆ ಶಿಷ್ಯನಾಗಿ, ಆ ಸ್ವಾನುಭಾವ ಪ್ರಕಾಶವೆ ಲಿಂಗವಾಗಿ,
    ತಮ್ಮ ತಮ್ಮ ನಿಜ ಪ್ರಕಾಶಕ್ಕೆ ಪ್ರಭಾವಿಸುವ
    ಪರಾತ್ಪರಂಜ್ಯೋತಿ ನಿರವಯ ಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು
    ಸಂಗನ ಬಸವಣ್ಣನ ಅಷ್ಟದಳ, ಚೌದಳ, ಷಡ್ದಳ, ದಶದಳ, ದ್ವಾದಶದಳ,
    ಷೋಡಶದಳ, ದ್ವಿದಳ, ಶತದಳ, ಸಹಸ್ರದಳ, ಲಕ್ಷದಳ, ಕೋಟಿದಳಂಗಳಿಂದ
    ಸರ್ವಾಂಗದಿ ಶೋಬಿಸುವ ಅನಂತದಂಗಳದಲ್ಲಿ
    ಅನಂತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶಕ್ಕೆ ಮಿಗಿಲಾಗಿ [ಒಪ್ಪುತ್ತಿರ್ಪುದು]
    ನೋಡ ! ಚೆನ್ನಬಸವಣ್ಣ/162

  163. ಅಯ್ಯ ಎತ್ತಿದ (ಇಕ್ಕಿದ?) ಮಣಿ ಮುಕುಟದ ಮೇಲೆ
    ಸುತ್ತಿದ ನಾಗಭೂಷಣದ ಪಡೆಯೊಂದು ಕೋಟಿ
    ಶಿವನಿಪ್ಪ ನೆಲೆಯನಾರೂ ಅರಿಯರಯ್ಯ.
    ಇಕ್ಕಿದ ಕರೋಟಿಮಾಲೆಯೊಳಗಿಪ್ಪ ರುದ್ರರು ಒಂದು ಕೋಟಿ
    ಶಿವನಿಪ್ಪ ನೆಲೆಯನಾರೂ ಅರಿಯರಯ್ಯ.
    ಇಕ್ಕಿದ ರುಂಡಮಾಲೆಯೊಳಗಿಪ್ಪ ಮುಂಡಧಾರಿಗಳು ಒಂದು ಕೋಟಿ
    ಶಿವನಿಪ್ಪ ನೆಲೆಯನಾರೂ ಅರಿಯರಯ್ಯ.
    ಉಟ್ಟ ಗಜಚರ್ಮದೊಳಗಿಪ್ಪ ಋಷಿಗಳು ಒಂದು ಕೋಟಿ
    ಶಿವನಿಪ್ಪ ನೆಲೆಯನಾರೂ ಅರಿಯರಯ್ಯ.
    ಖಟ್ವಾಂಗದೊಳಗಿಪ್ಪ ಮನುಮುನಿಗಳು ಒಂದು ಕೋಟಿ
    ಶಿವನಿಪ್ಪ ನೆಲೆಯನಾರೂ ಅರಿಯರಯ್ಯ.
    ಗಂಗೆ ಗೌರಿ ಭೃಂಗಿ ಮೊದಲಾಗಿ ಶಿವನಿಪ್ಪ ನೆಲೆಯನರಿಯರು,
    ಗುಹೇಶ್ವರ ನಿಮ್ಮ ಶರಣ ಸಂಗನಬಸವಣ್ಣ ಬಲ/163

  164. ಅಯ್ಯ ತತ್ತ್ವ ವಿತತ್ತ್ವಗಳಿಲ್ಲದಂದು, ಪ್ರಕೃತಿ ಪುರುಷರಿಲ್ಲದಂದು,
    ಜೀವ-ಪರಮರೆಂಬ ಭಾವ ತಲೆದೋರದಂದು, ಏನೂ ಏನೂ ಇಲ್ಲದಂದು
    ಬಯಲು ಬಲಿದು ಒಂದು ಬಿಂದುವಾಯಿತ್ತು ನೋಡಾ.
    ಆ ಬಿಂದು ಅಕ್ಷರತ್ರಯದ ಗದ್ದುಗೆಯಲ್ಲಿ ಕುಳ್ಳಿರಲು
    ಓಂಕಾರ ಉತ್ಪತ್ತಿಯಾಯಿತ್ತು.
    ಆ [ಓಂಕಾರದ] ನಾದದಲ್ಲಿ ಮೂರ್ತಿಗೊಂಡನೊಬ್ಬ ಶರಣ.
    ಆ ಶರಣನಿಂದಾಯಿತ್ತು ಪ್ರಕೃತಿ, ಆ ಪ್ರಕೃತಿಯಿಂದಾಯಿತ್ತು ಲೋಕ.
    ಈ ಲೋಕ ಲೌಕಿಕವನತಿಗಳೆದು ನಿಜದಲ್ಲಿ ನಿವಾಸಿಯಾಗಿಪ್ಪ,
    ಗುಹೇಶ್ವರನ ಶರಣ ಚೆನ್ನಬಸವಣ್ಣನ ಘನವನು
    ಬಸವಣ್ಣನ ಕೃಪೆಯಿಂದಲರಿದು ನಮೋ ನಮೋ ಎನುತಿರ್ದೆನು./164

  165. ಅಯ್ಯ ತನುತ್ರಯಂಗಳು, ಜೀವತ್ರಯಂಗಳು,
    ಆತ್ಮತ್ರಯಂಗಳು, ಅವಸ್ಥಾತ್ರಯಂಗಳು, ಗುಣತ್ರಯಂಗಳು,
    ಮನತ್ರಯಂಗಳು, ತಾಪತ್ರಯಂಗಳು, ಕಾಲತ್ರಯಂಗಳು,
    ಕರ್ಮತ್ರಯಂಗಳು, ಭಾವತ್ರಯಂಗಳು, ಮಲತ್ರಯಂಗಳು,
    ಕರಣತ್ರಯಂಗಳು ಮೊದಲಾದ ಪ್ರವೃತ್ತಿಮಾರ್ಗವನುಳಿದು,
    ಹಿಂದೆ ಹೇಳಿದ ಸದ್ಭಕ್ತ-ಮಹೇಶ್ವರಸ್ಥಲದಲ್ಲಿ ನಿಂದು-
    ಅಷ್ಟಾವಧಾನ ಅವಿರಳಾನಂದಮೂರ್ತಿಯಾಗಿ ಪ್ರಕಾಶಿಸುವ
    ನಿಜಪ್ರಸಾದಿಯಂತರಂಗದಲ್ಲಿ ಚಿತ್ಘನ ಸ್ವರೂಪವಲೀಲೆಯಿಂ
    ಅಂತರಂಗದಲ್ಲಿ ಅಂಗತತ್ತ್ವ, ಲಿಂಗತತ್ತ್ವ, ಶಿವತತ್ತ್ವ, ಪರತತ್ತ್ವ ಮೊದಲಾದ
    ಸಮಸ್ತ ತತ್ತ್ವಂಗಳನೊಳಕೊಂಡು,
    ಹದಿನಾರು ಸ್ಥಲಂಗಳ ಗರ್ಬಿಕರಿಸಿಕೊಂಡು,
    ನಾಲ್ಕು ಸಾವಿರದ ಮುನ್ನೂರಿಪ್ಪತ್ತು ಮಂತ್ರಮಾಲಿಕೆಗಳ ಪಿಡಿದುಕೊಂಡು
    ಇಪ್ಪತ್ತುನಾಲ್ಕು ಸಕೀಲಗರ್ಭದಿಂ ಪಾದೋದಕ ಪ್ರಸಾದವ ಕೊಂಡ
    ಅಂಗ-ಮನ-ಪ್ರಾಣ-ಭಾವ-ಇಂದ್ರಿಯಂಗಳೆಲ್ಲ
    ಪಾದೋದಕ ಪ್ರಸಾದಮಯವೆಂಬ ಹರಗುರುವಾಕ್ಯದಿಂ
    ಚಿನ್ನಬಣ್ಣ ಪ್ರಕಾಶದ ಹಾಂಗೆ ಬಿನ್ನ ಭಾವವಿಲ್ಲದೆ ಏಕರೂಪಿನಿಂದ
    ನಿರೀಕ್ಷಣಾಮೂರ್ತಿ ಶಿವಲಿಂಗವಾಗಿ ನೆಲಸಿರ್ಪುದು ನೋಡ !
    ನಿರವಯಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು
    ಚೆನ್ನಬಸವಣ್ಣ./165

  166. ಅಯ್ಯ ಲಿಂಗಾಂಗ ಸಮರಸ ಹೇಗುಂಟೆಂದರೆ:
    ಸುಚಿತ್ತಕಮಲ ಮೊದಲಾಗಿ ಆಯಾಯ ಕರಸ್ಥಲದಲ್ಲಿ ಮೂರ್ತಗೊಂಡಿರುವ
    ಸುಜ್ಞಾನಜಂಗಮ ಸ್ವರೂಪನಾದ ಇಷ್ಟ ಮಹಾಲಿಂಗದ ಗರ್ಭದಲ್ಲಿ
    ತನ್ನಂಗವ ಬಿಟ್ಟು; ಎರಡು ನೇತ್ರ ಒಂದಾದ ಲಲಾಟನೇತ್ರದಲ್ಲಿ
    ಇಷ್ಟಲಿಂಗವನು ಮುಳುಗಿಸುವುದೀಗ ಲಿಂಗಾಂಗಸಂಗಸಮರಸವು ನೋಡಾ.
    ಆ ಇಷ್ಟ ಮಹಾಲಿಂಗ ನೇತ್ರದರ್ಪಣದಲ್ಲಿ ಪ್ರತಿಬಿಂಬವಾಗಿ
    ಮನೋನೇತ್ರಕ್ಕೆ ಒಂದೆರಡಾಗಿ ಕಾಣಲ್ಪಡುವುದೀಗ ಪ್ರಾಣಲಿಂಗವು.
    ಆ ಪ್ರಾಣಲಿಂಗಹಸ್ತಂಗಳೆಂಬ ಎರಡರಲ್ಲಿ
    ನೇತ್ರದ್ವಯವೆಂಬ ಕುಚಂಗಳೆರಡ ಹಿಡಿವುದೀಗ ಲಿಂಗಾಂಗಸಂಗಸಮರಸವು [ನೋಡಾ]
    ರೂಪು ರೇಖೆವಿಭ್ರಮ ವಿಲಾಸಕಳಾಲಾವಣ್ಯಸ್ವರೂಪವಾದ ಹರಶಿವ
    ಬ್ರಹ್ಮಮೂರ್ತಿಯ
    ಮುದ್ದು ಮುಖದ ಆಧಾರದಲ್ಲಿ ಓಂಕಾರನಾದಾಮೃತವ ತಾ ಚುಂಬನ ಮಾಡಲ್ಕೆ
    ಚಿತ್ಶಕ್ತಿಸ್ವರೂಪಮಪ್ಪ ತನ್ನ ಮುದ್ದುಮುಖದ ಆಧಾರದಲ್ಲಿ ಹುಟ್ಟಿದ
    ನಕಾರಾದಿ ಪಂಚಪ್ರಣಮಂಗಳು ಆ ಪಂಚಬ್ರಹ್ಮ ಚುಂಬನವ ಮಾಡಲ್ಕೆ
    ಇದು ಲಿಂಗಾಂಗ ಸಮರಸವು. ಇದು ಶರಣಸತಿ ಲಿಂಗಪತಿ ನ್ಯಾಯವು.
    ಇದು ಶ್ರೀ (ತ್ರಿ?)ತನುವ ಲಿಂಗಕ್ಕರ್ಪಿಸುವ ಕ್ರಮವು.
    ತನ್ನಲ್ಲಿ ತನ್ನ ತೋರಿ ನನ್ನಲ್ಲಿ ನನ್ನ ತೋರಿದನಾಗಿ
    ನಾನು ನೀನೆಂಬುದಿಲ್ಲ ನೀನು ನಾನೆಂಬುದಿಲ್ಲ, ತಾನೆ ತಾನಾದುದು.
    ಬಯಲು ಬಯಲು ಕೂಡಿದ ಹಾಗೆ, ಮಾತು ಮಾತ ಕಲಿವ ಹಾಗೆ
    ಪರಶಿವಲಿಂಗದಲ್ಲಿ ನಿಜದೃಷ್ಟಿ ಕರಿಗೊಂಡ ಮೇಲೆ
    ಗುಹ್ಯಕ್ಕೆ ಗುಹ್ಯ ಗೋಪ್ಯಕ್ಕೆ ಗೋಪ್ಯ ರಹಸ್ಯಕ್ಕೆ ರಹಸ್ಯ.
    ಇದ ಗುಹೇಶ್ವರನೆ ಬಲ್ಲನಲ್ಲದೆ, ಕಣ್ಣುಗೆಟ್ಟಣ್ಣಗಳೆತ್ತ ಬಲ್ಲರು ನೋಡಾ ?/166

  167. ಅಯ್ಯ ವಿಶ್ವತೋಚಕ್ಷುರುತ’ ಎಂದುದಾಗಿ,
    ಜಗವೆಲ್ಲ ನೇತ್ರಂಗಳಾಗಿರ್ಪನು ಶಿವನು.
    ಜಗವೆಲ್ಲ ನೇತ್ರವಾಗಿದ್ದರೆ, ನೇತ್ರದೊಳಗುತ್ತಮ ಮಧ್ಯಮ ಕನಿಷ್ಠಂಗಳು
    ಏಕಾದವು ? ಎಂದಡೆ ಹೇಳಿಹೆವು ಕೇಳಿರಯ್ಯ:
    ನೇತ್ರಕ್ಕೆ ನೇತ್ರವಾದ ಜಗನೇತ್ರಕ್ಕೆ ಪ್ರಕಾಶನಾಗಿ ತನ್ನ ತೋರದೆ ಇದ್ದಂಥಾ,
    ಶ್ರೀಗುರು ಕರುಣಾಕಟಾಕ್ಷೆಯಿಂದ ಉದಯವಾದ
    ಇಷ್ಟಮಹಾಜ್ಯೋತಿರ್ಲಿಂಗವನು ನೋಡಿದ ನೇತ್ರವೆ ಲಿಂಗನೇತ್ರವು.
    ಅದೇ ಸದ್ಧರ್ಮಸ್ವರೂಪವಾದ ಉತ್ತಮವೆನಿಸುವುದು.
    ಅಯ್ಯಾ ಖಗಮೃಗ ಫಣಿಕೀಟಕಾದಿಗಳ ನೇತ್ರಂಗಳು ಉಭಯಕರ್ಮಕ್ಕೆ ಒಳಗಿಲ್ಲಾಗಿ
    ದೃಷ್ಟಿದೋಷವಿಲ್ಲಾಗಿ ಅದು ಮಧ್ಯಮವೆನಿಸುವುದು
    ಅಯ್ಯಾ ಇಷ್ಟಮಹಾಜ್ಯೋತಿರ್ಲಿಂಗಬಾಹ್ಯವಾಗಿ
    ಪಂಚಮಹಾಪಾತಕ ಸೂತಕಂಗಳಲ್ಲಿ ವರ್ತಿಸುವ
    ಅಪಾತ್ರಜೀವಿಗಳಾದ ಭವಿಗಳ ನೇತ್ರಂಗಳು ಉಭಯಕ್ಕೆ ಅನುಕೂಲವಾದ ಕಾರಣ
    ಚರ್ಮಚಕ್ಷುವೆಂದು, ತನ್ನತಾನರಿಯದ ಗಾಡಾಂಧಕಾರವೆಂದು
    ಮೀನುಗಳೆಂದು ವಿಷನೇತ್ರವೆಂದು
    ಮನ್ಮಥನ ಕೈಗೆ ಸಿಲುಕಿದ ನೀಲೋತ್ಪಲ ಬಾಣವೆಂದು, ತಾಮಸಾಗ್ನಿಯೆಂದು
    ಕುರೂಪದ ನೇತ್ರೇಂದ್ರಿಯವೆಂದು, ಶಿವಾಚಾರ ಸದ್ಧರ್ಮಿಗಳ ನಿಂದಿಸುವ
    ಮಹಾಪಾತಕ ದೃಷ್ಟಿಯೆಂದು ಹೇಳಲ್ಪಟ್ಟಿತ್ತು.
    ಇಷ್ಟಲಿಂಗವಿಲ್ಲಾದ ಕಾರಣ ಕನಿಷ್ಠಚಕ್ಷುವೆಂದುದು ನೋಡಾ ಅಯ್ಯ.
    ಅದರಿಂದ ಸದ್ಭಕ್ತ ಶರಣಗಣಂಗಳು ಅರ್ಚನೆ ಅರ್ಪಿತದ್ರವ್ಯವ ಕೊಡದೆ,
    ಅವರೊಡನೆ ಸಂಭಾಷಣೆ ದರ್ಶನ ಸ್ಪರ್ಶನವ ಮಾಡಲಿಲ್ಲ ನೋಡಾ
    ಗುಹೇಶ್ವರಲಿಂಗದಲ್ಲಿ ಸಿದ್ಧರಾಮಯ್ಯ./167

  168. ಅಯ್ಯ ಸತ್ಕ್ರಿಯಾಸಮ್ಯಜ್ಞಾನವುಂಟಾದಡೆ ಸದಾಚಾರಸದ್ಭಕ್ತಿ ಉಂಟೆಂಬೆ.
    ಸದಾಚಾರ ಸದ್ಭಕ್ತಿ ಸತ್ಕ್ರಿಯಾ ಸಮ್ಯಜ್ಞಾನ [ಸತ್ಯ]
    ನಡೆನುಡಿ ಒಂದಾದಡೆ
    ಆದಿ-ಅನಾದಿಯಿಂದತ್ತತ್ತ ಮೀರಿ ತೋರುವ,
    ಪರಿಪೂರ್ಣ ಪರಮಾನಂದ ಪರಬ್ರಹ್ಮ ಗುರುಲಿಂಗಜಂಗಮವೆಂಬೆ ನೋಡಾ.
    ಇಂತು-ಸದಾಚಾರ, ಸದ್ಭಕ್ತಿ, ಸತ್ಕ್ರಿಯಾ, ಸಮ್ಯಜ್ಞಾನ,
    ಸತ್ಯನಡೆ ನುಡಿಯಿಲ್ಲವಾದಡೆ
    ಗುಹೇಶ್ವರಲಿಂಗಕ್ಕೆ ದೂರ ಕಾಣಾ ಚೆನ್ನಬಸವಣ್ಣ./168

  169. ಅಯ್ಯ ಸದಾಚಾರ ಸದ್ಭಕ್ತಿವಿಡಿದಾಚರಿಸಿದ ಗುರುವೆ ಪರಾತ್ಪರಬ್ರಹ್ಮನೋಡಾ.
    ಆ ಗುರುವಿನಿಂದ ತ್ರಿವಿಧದೀಕ್ಷೆಯ ಪಡೆದ ಶಿಷ್ಯೋತ್ತಮನೆ ಮೋಕ್ಷಮಂದಿರನೋಡಾ.
    ಆ ಶಿಷ್ಯೋತ್ತಮನ ಕರ-ಮನ-ಭಾವದಲ್ಲಿ ಪೂಜೆಗೊಂಬ
    ಲಿಂಗ-ಜಂಗಮವೆ ನಿಷ್ಕಲ ಪರಶಿವತತ್ವನೋಡಾ.
    ಆ ಗುರು-ಶಿಷ್ಯ-ಲಿಂಗ-ಜಂಗಮದಡಿದಾವರೆಯೆ ಗುಹೇಶ್ವರಲಿಂಗ ಸಾಕ್ಷಿಯಾಗಿ
    ಎನಗೂ ನಿನಗೂ ಅವಿಮುಕ್ತ ಕ್ಷೇತ್ರ ನೋಡಾ ಚೆನ್ನಬಸವಣ್ಣ./169

  170. ಅಯ್ಯ ಸದಾಚಾರಸದ್ಭಕ್ತಿಯಿಲ್ಲದ ಗುರುವು ನರಜೀವಿ.
    ಆತನಿಂದ ಹುಟ್ಟಿದ ಲಿಂಗಾಂಗವೆರಡು ಜಡಜೀವಿ.
    ಅವರಿಬ್ಬರಲ್ಲಿ ಹೊಕ್ಕು ಕೊಟ್ಟು ಕೊಂಬುವ ಜಂಗಮ ಭೂತಪ್ರಾಣಿ.
    ಈ ನರಜೀವಿ, ಜಡಜೀವಿ, ಭೂತಪ್ರಾಣಿಗಳಿಗೆ ಕೊಟ್ಟುಕೊಂಬ ಭಕ್ತಂಗೆ
    ಏಳನೆಯ ಪಾತಕ ಬಿಡದು ಕಾಣಾ.
    ಗುಹೇಶ್ವರಲಿಂಗದ ಸದಾಚಾರಸದ್ಭಕ್ತಿಯಿಂದಲ್ಲದೆ ಮುಕ್ತಿಯಿಲ್ಲ ನೋಡಾ
    ಚೆನ್ನಬಸವಣ್ಣ./170

  171. ಅಯ್ಯ, ಅನುಭಾವವಿಲ್ಲದ ವಿರಕ್ತಿ ಆಯುಧವಿಲ್ಲದ ವೀರನಂತೆ.
    ಅನುಭಾವವಿಲ್ಲದ ಷಟ್ಸ್ಥಲವು ಕಣ್ಣಿಲ್ಲದ ಕುರುಡನಂತೆ.
    ಅನುಭಾವವಿಲ್ಲದ ಜಂಗಮವು ಕಾಲಿಲ್ಲದ ಹೆಳವನಂತೆ.
    ಅನುಭಾವವಿಲ್ಲದ ಶಿವಪೂಜೆಯ ಎಷ್ಟು ಮಾಡಿದಡೆಯು ಪ್ರಯೋಜನಕ್ಕೆಬಾರದು.
    ಅನುಭಾವವಿಲ್ಲದವನ ಲಿಂಗಪೂಜೆ ಬರಿಕೈಯಲ್ಲಿ ಹುಡಿಮಣ್ಣ ಹೊಯ್ದುಕೊಂಡಂತೆ.
    ಇದು ಕಾರಣ:
    ಭಕ್ತಿಗೆ ವಿರಕ್ತಿಗೆ ಮುಕ್ತಿಗೆ ವೀರಶೈವಕ್ಕೆ ಜಂಗಮಕ್ಕೆ ಅನುಭಾವವಿರಬೇಕು.
    ಅನುಭಾವವಿಲ್ಲದ ವಿರಕ್ತನಲ್ಲಿ ಪಾದೋದಕ-ಪ್ರಸಾದವ ಕೊಳಲಾಗದು.
    ಅನುಭಾವವುಳ್ಳ ಆಚಾರಸಂಪನ್ನನಾದ ಸದ್ಭಕ್ತನಲ್ಲಿ
    ಅನಾದಿ ಪಾದೋದಕ-ಪ್ರಸಾದವ ಕೊಂಡವರು ಪರಮಮುಕ್ತರಾದರಯ್ಯಾ
    ನಿಜಗುರು ಗುಹೇಶ್ವರಲಿಂಗದಲ್ಲಿ ಚೆನ್ನಬಸವಣ್ಣಾ./171

  172. ಅಯ್ಯ, ಆಚಾರವಿಲ್ಲದ ಜಂಗಮದಲ್ಲಿ ಪಾದೋದಕಪ್ರಸಾದವ ಕೊಳಲಾಗದು.
    ಆಚಾರವಿಲ್ಲದ ಜಂಗಮ[ವ] ದೇವರೆಂದು ಭಾವಿಸಲಾಗದು.
    `ಆಚಾರಶೂನ್ಯಂ ಚ ಭೂತಪ್ರಾಣೀ’ ಎಂದುದಾಗಿ
    ಆಚಾರವಿಲ್ಲದ ಅನಾಮಿಕರ ಕೈಯಲ್ಲಿ
    ಪಾದೋದಕ ಪ್ರಸಾದ ಉಪದೇಶವ ಕೊಂಡವಂಗೆ
    ಅಘನಾಸ್ತಿಯಾಗದು, ಮುಂದೆ ಅಘೋರನರಕ ತಪ್ಪದು
    ಕಾಣಾ ಗುಹೇಶ್ವರಾ./172

  173. ಅಯ್ಯ, ಒಂದು ಕೋಟಿ ವರುಷ ತಲೆ ಕೆಳಗಾಗಿ ತಪವ ಮಾಡಿದಕಿಂದಲು
    ಒಂದು ದಿನ ಶಿವಭಕ್ತರಲ್ಲಿ ನಿರಹಂಕಾರವಾಗಿರ್ದಡೆ ಸಾಕು ನೋಡಾ.
    ಒಂದು ಕೋಟಿ ವರುಷ ಊಧ್ರ್ವಮುಖವಾಗಿ ಸೂರ್ಯನ ನೋಡಿದ ಫಲವು
    ಒಂದು ದಿನ ಸದಾಚಾರ ಸದ್ಧರ್ಮರಪ್ಪ ಶಿವಭಕ್ತರ ನೋಡಿದುದಕ್ಕೆ
    ಸರಿಯಲ್ಲ ನೋಡಾ.
    ಒಂದು ಕೋಟಿ ವರುಷ ಅಖಿಳ ದೇವತೆಗಳ ಸ್ತೋತ್ರವ ಮಾಡಿದ ಫಲವು
    ಒಂದು ದಿನ ಶರಣರಿಗೆ ಶರಣು ಮಾಡಿದುದಕ್ಕೆ ಸರಿಯಲ್ಲ ನೋಡಾ.
    ಒಂದು ಕೋಟಿ ವರುಷ ಅರವತ್ತಾರು ಕೋಟಿ ನದಿಗಳ ಮಿಂದು
    ಮುಡಿಯಿಟ್ಟ ಫಲವು,
    ಒಂದು ದಿನ ಸದ್ಭಕ್ತ-ಜಂಗಮ-ಶರಣಗಣ ತೀರ್ಥಕ್ಕೆ ಸರಿಯಲ್ಲ ನೋಡಾ.
    ಒಂದು ಕೋಟಿ ವರುಷ ಚಾಂದ್ರಾಯಣವ್ರತ ಮೊದಲಾದ
    ಸರ್ವವ್ರತಂಗಳ ನಡಸಿದ ಫಲವು
    ಒಂದು ದಿನ ಗುರು-ಲಿಂಗ-ಜಂಗಮ-ಪ್ರಸಾದಕ್ಕೆ ಸರಿಯಲ್ಲ ನೋಡಾ.
    ಒಂದು ಕೋಟಿ ವರುಷ ವೇದಾಗಮ ಪುರಾಣಶಾಸ್ತ್ರ ಮಂತ್ರಂಗಳ ಓದಿದ ಫಲವು
    ಒಂದು ದಿನ ಶಿವಭಕ್ತಶರಣರ ಸಂಭಾಷಣಕ್ಕೆ ಸರಿಯಲ್ಲ ನೋಡಾ.
    ಒಂದು ಕೋಟಿ ವರುಷ ಮಹಾಯೋಗವ ಮಾಡಿದ ಫಲವು
    ಒಂದು ದಿನ ಶ್ರೀಗುರು-ಲಿಂಗ-ಜಂಗಮ ಧ್ಯಾನಕ್ಕೆ ಸರಿಯಲ್ಲ ನೋಡಾ.
    ಒಂದು ಕೋಟಿ ವರುಷ ಷೋಡಶ ಮಹಾದಾನಂಗಳ ಮಾಡಿದ ಫಲವು
    ಒಂದು ದಿನ ಸದ್ಧರ್ಮಿ ಶಿವಯೋಗಿಗೆ ನೀಡಿದ ತೃಪ್ತಿಯ ಮಾಡಿದುದಕ್ಕೆ
    ಸರಿಯಲ್ಲ ನೋಡಾ.
    ಅಖಿಳ ಕ್ರಿಯೆಗಳು ಲಿಂಗಜಂಗಮಾರ್ಚನೆ ಕ್ರಿಯೆಗಳೆಗೆ ಸರಿಯಲ್ಲ ನೋಡಾ.
    ಯೋಗದ ಬಲದಿಂದ ಸಮಸ್ತ ಭೋಗವ ಪಡೆದ ಫಲವು
    ಒಂದು ವೇಳೆ ಗುರು-ಲಿಂಗ-ಜಂಗಮಕ್ಕೆ ದೀರ್ಘದಂಡ ನಮಸ್ಕಾರವ ಮಾಡಿ
    ಸನ್ನಿದಿಯಲ್ಲಿ ಭೃತ್ಯನಾಗಿರ್ದುದಕ್ಕೆ ಸರಿಯಲ್ಲ ನೋಡಾ.
    ಪ್ರಾಣನ ಬ್ರಹ್ಮರಂಧ್ರದಲ್ಲಿ ಬಿಡುವ ಯೋಗವು
    ಪ್ರಾಣಲಿಂಗ ಸಂಬಂಧಕ್ಕೆ ಸರಿಯಲ್ಲ ನೋಡಾ [ಗುಹೇಶ್ವರ]/173

  174. ಅಯ್ಯ, ಕ್ರಿಯಾಚಾರದಲ್ಲಿ ಮೋಹವುಳ್ಳಾತನ ಸದ್ಗುರುವೆಂಬೆ ನೋಡ.
    ಜ್ಞಾನಾಚಾರದಲ್ಲಿ ನೈಷ್ಠೆಯುಳ್ಳಾತನ ಸಚ್ಚಿದಾನಂದಲಿಂಗವೆಂಬೆ ನೋಡ.
    ಭಾವಾಚಾರದಲ್ಲಿ ಪ್ರೇಮವುಳ್ಳಾತನ ಪರಾತ್ಪರಜಂಗಮವೆಂಬೆ ನೋಡ.
    ಈ ತ್ರಿವಿಧಾಚಾರದಲ್ಲಿ ಕಾಂಕ್ಷೆಯುಳ್ಳಾತನ ನಿಜಶರಣನೆಂಬೆ ನೋಡ.
    ಇಂತು ಆಚಾರಸನ್ಮಾರ್ಗ ಗುರುಲಿಂಗಜಂಗಮಶರಣರೆ
    ಗುಹೇಶ್ವರಲಿಂಗಕ್ಕೆ ಮೋಕ್ಷಮಂದಿರವೆಂಬೆ ನೋಡಾ, ಚೆನ್ನಬಸವಣ್ಣಾ./174

  175. ಅಯ್ಯ, ತನುವಿನಾಸೆಯನಳಿದಾತನ ಸತ್ತುಚಿತ್ತಾನಂದನ ಗುರುವೆಂಬೆ.
    ಮನದ ಕಾಂಕ್ಷೆಯನಳಿದಾತನ ಸರ್ವಾಚಾರನ ಲಿಂಗವೆಂಬೆ ನೋಡಾ.
    ಭಾವದ ಭ್ರಮೆಯ ನಳಿದಾತನ ಷಟ್ಸ್ಥಲಜಂಗಮವೆಂಬೆ ನೋಡಾ.
    ಪ್ರಾಣನ ಪ್ರಪಂಚನಳಿದಾತನ
    ನಿರಾತಂಕನಿರಾಲಂಬ ನಿಷ್ಕಳಂಕನಿಜಶರಣನೆಂಬೆ ನೋಡಾ.
    ಈ ಚತುರ್ವಿಧ ಪಾಶವ ಗೆದ್ದಾತನ ಗುಹೇಶ್ವರಲಿಂಗವೆಂಬೆ ನೋಡಾ
    ಚೆನ್ನಬಸವಣ್ಣಾ./175

  176. ಅಯ್ಯ, ಮಣ್ಣಿಂಗೆ ಹೊಡೆದಾಡುವಾತನ ಗುರುವೆಂಬೆನೆ? ಆತ ಗುರುವಲ್ಲ.
    ಹೆಣ್ಣಿಂಗೆ ಹೊಡೆದಾಡುವಂತಾ [ಗೆ?] ಲಿಂಗವೆಂಬೆನೆ ? ಅದು ಲಿಂಗವಲ್ಲ.
    ಹೊನ್ನಿಂಗೆ ಹೊಡೆದಾಡುವಾತನ ಜಂಗಮವೆಂಬೆನೆ ? ಆತ ಜಂಗಮವಲ್ಲ.
    ಈ ತ್ರಿವಿಧಮಲಕ್ಕೆ ಹೊಡೆದಾಡುವಾತನ ಶರಣನೆಂಬೆನೆ ? ಆತ ಶರಣನಲ್ಲ ನೋಡಾ.
    ಈ ವಿಚಾರವನರಿದು, ಮಲತ್ರಯಂಗಳ ಸರ್ವಾವಸ್ಥೆಯಲ್ಲಿ ಹೊದ್ದಲೀಯದೆ
    ಗೌರವ ಬುದ್ಧಿ ಲಿಂಗಲೀಯ ಜಂಗಮಾನುಭಾವ ಸರ್ವಾಚಾರಸಂಪತ್ತಿನಾಚರಣೆಯ
    ಶ್ರುತಿ-ಗುರು-ಸ್ವಾನುಭಾವದಿಂದರಿದು ಆಚರಿಸಿದಡೆ,
    ಗುಹೇಶ್ವರಲಿಂಗದಲ್ಲಿ ಪರಾತ್ಪರಗುರುಲಿಂಗಜಂಗಮಶರಣನೆಂಬೆ ನೋಡ
    ಜೆನ್ನಬಸವಣ್ಣ./176

  177. ಅಯ್ಯ, ಸತ್ಯವ ನುಡಿಯದ, ಸದಾಚಾರದಲ್ಲಿ ನಡೆಯದ
    ಸದ್ಭಕ್ತಿಯ ಹಿಡಿಯದ, ನಿಜಮುಕ್ತಿಯ ಪಡೆಯದ
    ಸತ್ಕ್ರಿಯವ ಸಾರದ ಸಮ್ಯಜ್ಞಾನವ ಮುಟ್ಟದ;
    ಸುಡು ಸುಡು-ಈ ವೇಷದ ಭಾಷೆಯ ನೋಡಿ
    ಗುಹೇಶ್ವರಲಿಂಗವು ನಗುತ್ತೈದಾನೆ ಕಾಣಾ ಚೆನ್ನಬಸವಣ್ಣಾ./177

  178. ಅಯ್ಯ, ಸದಾಚಾರಸದ್ಭಕ್ತಿಯಿಲ್ಲದ ಗುರುತ್ವ ಉಂಟೇನೊ ಮರುಳೆ ?
    ಸದಾಚಾರಸದ್ಭಕ್ತಿಯಿಲ್ಲದ ನಿಜಲಿಂಗ ಉಂಟೇನೊ ಮರುಳೆ ?
    ಸದಾಚಾರಸದ್ಭಕ್ತಿಯಿಲ್ಲದ ನಿಜಜಂಗಮತ್ವ ಉಂಟೇನೊ ಮರುಳೆ ?
    ಸದಾಚಾರಸದ್ಭಕ್ತಿಯಿಲ್ಲದ ಶರಣತ್ವ ಉಂಟೇನೊ ಮರುಳೆ?
    ಗುಹೇಶ್ವರ ಲಿಂಗ[ದಲ್ಲಿ] ಸದಾಚಾರಸದ್ಭಕ್ತಿಯಿಂದಲ್ಲದೆ ನಿಜಮೋಕ್ಷವುಂಟೆ
    ಚೆನ್ನಬಸವಣ್ಣಾ ?/178

  179. ಅಯ್ಯ, ಸಾತ್ವಿಕ ಶರಣರ ನುಡಿ ಹುಸಿಯೆ ?
    ಅದು ದಿಟ ಅದು ಆಟ.
    ಒಳಗೆಂಬುದೆ ದೇವಲೋಕ, ಹೊರಗೆಂಬುದೆ ಮರ್ತ್ಯಲೋಕ.
    ಈ ಎರಡು ಲೋಕಕ್ಕೆ ಹೊರಗಾಗಿ ನಾವಿರಲು
    ಈ ಎರಡು ಲೋಕದೊಳಗೆಯೂ ತಾವೆ ಇರಲಿ ಗುಹೇಶ್ವರಾ./179

  180. ಅಯ್ಯ, ಸ್ಥೂಲದೇಹದ ಸುಖದಲ್ಲಿ ಹೊದ್ದಿದವರು ಸೂಕರನ ಹಾಂಗೆ.
    ಸೂಕ್ಷ್ಮದೇಹದ [ಸುಖ]ದಲ್ಲಿ ಹೊದ್ದಿದವರು ಮದಗಜದಂತೆ.
    ಕಾರಣ ದೇಹದ ಸುಖದಲ್ಲಿ ಹೊದ್ದಿದವರು ರಾಜಹಂಸನ ಹಾಂಗೆ.
    ಅದೆಂತೆಂದಡೆ:
    ಸ್ಥೂಲದೇಹವೆಂದಡೆ ಸಪ್ತಧಾತುಯುಕ್ತವಾದ ಪಂಚವಿಂಶತಿತತ್ತ್ವ ಸ್ವರೂಪು,
    ಆ ದೇಹಕ್ಕೆ ಬಿಂದು ಮಾತ್ರ ಸುಖ ಪರ್ವತದಷ್ಟು ದುಃಖ ನೋಡಾ.
    ಸೂಕ್ಷ್ಮದೇಹವೆಂದಡೆ:ಪಂಚರಸಾಮೃತಸ್ವರೂಪವಾದ ಕರಣಂಗಳು.
    ಆ ದೇಹಕ್ಕೆ ಬಿಂದು ಮಾತ್ರ ದುಃಖವು, ಪರ್ವತದಷ್ಟು ಸುಖ ನೋಡಾ.
    ದಶವಿಧತತ್ತ್ವಸ್ವರೂಪವಾದ ಕಾರಣದೇಹವೆಂದಡೆ:
    ಅನಂತನಾದಸ್ವರೂಪವಾದ ಏಕತತ್ತ್ವವನ್ನುಳ್ಳ ಆತ್ಮನೆ ಕಾರಣದೇಹ,
    [ಅದು] ದಿವ್ಯ ಸುಧಾರಸಾಮೃತಸ್ವರೂಪವಾದ ಮಹಾಸದ್ಗಂಧದ
    ಪರಿಮಳದಂತಿಪ್ಪುದು ನೋಡಾ.
    ಆ ದೇಹಕ್ಕೆ ಅಣುಮಾತ್ರ ದುಃಖವಿಲ್ಲದ ಸುಖವುಂಟು ನೋಡಾ,
    ಲಿಂಗಸಂಗಿಯಾದ ಕಾರಣ.
    ಇಂತಪ್ಪ ಲಿಂಗಸಂಗದಿಂದ ಅಖಂಡಸುಖಿ ತಾನಾಗಬೇಕಾದಡೆ
    ಪಿಂಡಾದಿ ಜ್ಞಾನಶೂನ್ಯಾಂತಮಾದ ನೂರೊಂದು ಸ್ಥಳ-ಕುಳವ
    ಕರತಳಾಮಳಕವಾಗಿ ತಿಳಿದು,
    ಮೇಲಾದ ಜ್ಞಾನಶೂನ್ಯಸ್ಥಲದಲ್ಲಿ ನಿಂದು,
    ಪಿಂಡಾದಿ ಜ್ಞಾನ ಗುರುಕರುಣ ಸ್ಥಲಂಗಳೆಂಬ ಮಾರ್ಗವು ತಪ್ಪದೆ
    ನಡೆ-ನುಡಿ ಸಂಪನ್ನರಾಗಿ ನಿಜಾಚರಣೆಯಲ್ಲಿ ನಿಂದು
    ಅರು ವೈರಿ ಅಷ್ಟಮದ [ಸಪ್ತ]ವ್ಯಸನವೆಂಬ ಮಾಯಾಪಾಶಪರ್ವತಕ್ಕೆ
    ವಜ್ರಾಯುಧವಾಗಿ ನಿಂದರು ನೋಡಾ ನಮ್ಮ ಶರಣಗಣಂಗಳು.
    ಇಂತು-ಕಾರಣಸ್ವರೂಪವಾದ
    ಚಿದ್ಘನಲಿಂಗ ನಡೆ-ನುಡಿ-ಸ್ಥಳ-ಕುಳದನುಭಾವ ಸುಖವ ಪಡೆಯದ
    ಶೈವ ಜಡಕರ್ಮಿಗಳೆಲ್ಲ,
    ಅರುವೈರಿ ಅಷ್ಟಮದ ಸಪ್ತವ್ಯಸನವೆಂಬ
    ಮಾಯಾಪಾಶ ಕಾಲ ಕಾಮರ ಬಾಧೆಗೊಳಗಾಗಿ
    ಗುಹೇಶ್ವರಲಿಂಗದ ಶರಣರ ಮಾರ್ಗವನರಿಯದೆ [ಕೆಟ್ಟರು].
    ಕೆಟ್ಟಿತೀ ಲೋಕ ನೋಡಾ ಸಿದ್ಧರಾಮಯ್ಯಾ./180

  181. ಅಯ್ಯಾ ಜಲ, ಕೂರ್ಮ, ಗಜ, ಫಣಿಯ ಮೇಲೆ
    ಧರೆ ವಿಸ್ತರಿಸಿ ನಿಲ್ಲದಂದು, ಗಗನವಿಲ್ಲದಂದು,
    ಪವನನ ಸುಳುಹಿಲ್ಲದಂದು, ಅಗ್ನಿಗೆ ಕಳೆದೋರದಂದು,
    ತರು ಗಿರಿ ತೃಣ ಕಾಷ್ಠಾದಿಗಳಿಲ್ಲದಂದು,
    ಯುಗ ಜುಗ, ಮಿಗಿಲೆನಿಸಿದ ಹದಿನಾಲ್ಕು ಭುವನ ನೆಲೆಗೊಳ್ಳದಂದು,
    ನಿಜವನರಿದೆನೆಂಬ ತ್ರಿಜಗಾದಿಪತಿಗಳಿಲ್ಲದಂದು
    ತೋರುವ ಬೀರುವ ಭಾವದ ಪರಿ,
    ಭಾವದಲ್ಲಿ ಭರಿತ, ಆಗಮ್ಯ ಗುಹೇಶ್ವರ ನಿರಾಳವು !/181

  182. ಅಯ್ಯಾ ನೀನು ನಿರಾಳ ನಿರ್ಮಾಯನಾಗಿಪ್ಪೆಯಾಗಿ-
    ಆಕಾಶ ಪ್ರಕಾಶವಿಲ್ಲದಂದು, ಸಾಕ್ಷಿ ಸಭೆಗಳಿಲ್ಲದಂದು
    ಸಚರಾಚರವೆಲ್ಲ ರಚನೆಗೆ ಬಾರದಂದು;
    ಆಧಾರದೊಳಗಣ ವಿಭೂತಿಯನೆ ತೆಗೆದು, ಭೂಮಿಯ ನೆಲೆಗೊಳಿಸಿ (ಸೆ?)
    ಪಂಚಾಶತ್ಕೋಟಿ ವಿಸ್ತೀರ್ಣ ಭೂಮಂಡಲಕ್ಕೆ
    ಸುತ್ತಿ ಹರಿದವು ಸಪ್ತಸಾಗರಂಗಳು.
    ಎಂಬತ್ತಾರು ಕೋಟಿಯ (ಯುಂ?) ತೊಂಬತ್ತೇಳುಲಕ್ಷ ಕಾಲ
    ಭವನ ಮಂಡಲಕ್ಕೆ ಉದಯ ಬ್ರಹ್ಮಾಂಡ.
    ಅರುವತ್ತಾರು ಕೋಟಿ ತಾರಾಮಂಡಲವೆಂದೆಡೆ,
    ಬೆಳಗಿ ತೋರಿದ ಹನ್ನೆರಡು ಜ್ಯೋತಿಯ
    ನಿಲಿಸಿ ತೋರಿದ ಹದಿನಾಲ್ಕು ಭುವನವ-
    ಈ ಜಗದ ಜಂಗುಳಿಯ ಕಾವ ಗೋವಳ ತಾನಾಗಿ
    ಚೌರಾಸಿಲಕ್ಷ ಜೀವರಾಶಿಗಳಿಗೆ ರಾಶಿವಾಳ ತಾನಾಗಿ
    ಸಕಲದ ಅಳಿವಿನ ಉಳಿವಿನ ನಿಜದ ನಿಲವ ನೋಡಿ ಕಂಡೆನು.
    ಗುಹೇಶ್ವರಾ, ನಿಮ್ಮ ಶ್ರೀಪಾದಕೆ ನಮೋ ನಮೋ ಎನುತಿರ್ದೆನು./182

  183. ಅಯ್ಯಾ ನೀನೆನಗೆ ಗುರುವಪ್ಪಡೆ, ನಾ ನಿನಗೆ ಶಿಷ್ಯನಪ್ಪಡೆ,
    ಎನ್ನ ಕರಣಾದಿ ಗುಣಂಗಳ ಕಳೆದು,
    ಎನ್ನ ಕಾಯದ ಕರ್ಮವ ತೊಡೆದು,
    ಎನ್ನ ಪ್ರಾಣನ ಧರ್ಮವ ನಿಲಿಸಿ,
    ನೀನೆನ್ನ ಕಾಯದಲಡಗಿ, ನೀನೆನ್ನ ಪ್ರಾಣದಲಡಗಿ
    ನೀನೆನ್ನ ಭಾವದಲಡಗಿ, ನೀನೆನ್ನ ಕರಸ್ಥಲಕ್ಕೆ ಬಂದು
    ಕಾರುಣ್ಯವ ಮಾಡಾ ಗುಹೇಶ್ವರಾ/183

  184. ಅರಗಿನ ದೇಗುಲದಲ್ಲಿ ಒಂದು ಉರಿಯ ಲಿಂಗವ ಕಂಡೆ.
    ಮತ್ತೆ ದೇವರ ಪೂಜಿಸುವರಾರೂ ಇಲ್ಲ.
    ಉತ್ತರಾಪಥದ ದಶನಾಡಿಗಳಿಗೆ,
    ಸುತ್ತಿಮುತ್ತಿದ ಮಾಯೆ ಎತ್ತಲಿಕೆ ಹೋಯಿತ್ತು ?
    ಮರನೊಳಗಣ ಕಿಚ್ಚು ಮರನ ಸುಟ್ಟುದ ಕಂಡೆ !
    ಗುಹೇಶ್ವರನೆಂಬ ಲಿಂಗ ಅಲ್ಲಿಯೆ ನಿಂದಿತ್ತು/184

  185. ಅರಗಿನ ಪುತ್ಥಳಿಯನುರಿ ಕೊಂಡಡೆ, ಉದಕ ಬಾಯಾರಿ ಬಳಲುತ್ತಿದೆ
    [ಅಗೆಯಿಂ ಭೋ ಬಾವಿಯನಗೆಯಿಂ ಭೋ]
    ಬಾವಿಯನಗೆದಾತ ಸತ್ತ, ಬಾವಿ ಬತ್ತಿತ್ತು-ಇದು ಕಾರಣ,
    ಮೂರು ಲೋಕವು ಬರುಸೂರೆವೋಯಿತ್ತು ಗುಹೇಶ್ವರಾ./185

  186. ಅರಸಲಿಲ್ಲದ ಘನವ ಅರಸುವದದೇನೊ? ತಿಳಿವುದದೇನೊ?
    ತಿಳುಹಿನ ಮುಂದಣ ಸುಳುಹು ತಾನೇನೊ?
    ಸರದ ಸಮತೆಯ ಪರಿಣಾಮವ ನೋಡಾ !
    ಗುಹೇಶ್ವರನೆಂಬುದು ಅದೆ ಕಂಡಾ !/186

  187. ಅರಸಿ ಅರಸಿ ಹಾ ಹಾ ಎನುತ್ತಿದ್ದೆನು.
    ಬೆದಕಿ ಬೆದಕಿ ಬೆದಬೆದ ಬೇವುತ್ತಿದ್ದೆನು
    ಗುಹೇಶ್ವರಾ ಕಣ್ಣ ಮೊದಲಲ್ಲಿದ್ದವನ ಕಾಣೆನು/187

  188. ಅರಸುವ ಬಳ್ಳಿ ಕಾಲ ಸುತ್ತಿತ್ತೆಂಬಂತೆ,
    ಬಯಸುವ ಬಯಕೆ ಕೈಸಾರಿದಂತೆ,
    ಬಡವ ನಿಧಾನವನೆಡಹಿ ಕಂಡಂತೆ,
    ನಾನರಸುತ್ತಲರಸುತ್ತ ಬಂದು
    ಭಾವಕ್ಕಗಮ್ಯವಾದ ಮೂರ್ತಿಯ ಕಂಡೆ ನೋಡಾ.
    ಎನ್ನ ಅರಿವಿನ ಹರುಹ ಕಂಡೆ ನೋಡಾ.
    ಎನ್ನ ಒಳಹೊರಗೆ ಎಡೆದೆರಹಿಲ್ಲದೆ ಥಳಥಳಿಸಿ ಬೆಳಗಿ ಹೊಳೆವುತಿಪ್ಪ
    ಅಖಂಡಜ್ಯೋತಿಯ ಕಂಡೆ ನೋಡಾ !
    ಕರುಹಳಿದ ಕರಸ್ಥಲದ ನಿಬ್ಬೆರಗಿನ ನೋಟದ
    ಎನ್ನ ಪರಮಗುರುವ ಕಂಡು ಬದುಕಿದೆನು ಕಾಣಾ ಗುಹೇಶ್ವರಾ/188

  189. ಅರಳಿಯ ಮರದ ಮೇಲೆ,
    ಒಂದು ಹಂಸೆ ಗೂಡನ್ನಿಕ್ಕಿತ್ತ ಕಂಡೆ.
    ಆ ಗೂಡಿನೊಳಗೆ,
    ಒಬ್ಬ ಹೆಂಗೂಸು ಉಯ್ಯಾಲೆಯಾಡುತ್ತಿರ್ದಳು.
    ಉಯ್ಯಾಲೆ ಹರಿದು,
    ಹೆಂಗೂಸು ನೆಲಕ್ಕೆ ಬಿದ್ದು ಸತ್ತಡೆ,
    ಪ್ರಾಣಲಿಂಗವ ಕಾಣಬಹುದು ಕಾಣಾ ಗುಹೇಶ್ವರಾ./189

  190. ಅರಿತು ಜನ್ಮವಾದವರಿಲ್ಲ ಸತ್ತು ಮರಳಿ ತೋರುವರಿಲ್ಲ.
    ದುರಬಿಮಾನವ ಹೊತ್ತು ಅಘಟಿತ ಘಟಿತವ ನುಡಿವಿರಿ.
    ಈ ದೇಹವಿಡಿದು ನುಡಿವ ಪ್ರಪಂಚಿಗಳನೇನೆಂಬೆ ಗುಹೇಶ್ವರಾ./190

  191. ಅರಿದ ಶರಣಂಗೆ ಆಚಾರವಿಲ್ಲ, ಆಚಾರವುಳ್ಳವಂಗೆ ಲಿಂಗವಿಲ್ಲ.
    ಲಿಂಗವಿಲ್ಲದ ಶರಣನ ಸುಳುಹು ಜಗಕ್ಕೆ ವಿಪರೀತ,
    ಚರಿತ್ರವದು ಪ್ರಕಟವಲ್ಲ ನೋಡಾ !
    ಸಂಸಾರಿ ಬಳಸುವ ಬಯಕೆಯನೆಂದೂ ಹೊದ್ದನು.
    ಸಟೆಯ ಹಿಡಿದು ದಿಟವ ಮರೆದು,
    ಇಲ್ಲದ ಲಿಂಗವನು ಉಂಟೆಂದು ಪೂಜಿಸುವರಾಗಿ ಆಚಾರವುಂಟು,
    ಆಚಾರವುಳ್ಳವಂಗೆ ಗುರುವುಂಟು, ಗುರುವುಳ್ಳವಂಗೆ ಲಿಂಗವುಂಟು,
    ಲಿಂಗಪೂಜಕಂಗೆ ಭೋಗವುಂಟು.
    ಈ ಬರಿಯ ಬಾಯ ಬಣ್ಣಕರೆಲ್ಲರೂ ಪೂಜಕರಾದರು.
    ಗುಹೇಶ್ವರಲಿಂಗವು ಅಲ್ಲಿ ಇಲ್ಲವೆಂಬುದನು;
    ಈ ವೇಷಲಾಂಛನರೆತ್ತಬಲ್ಲರು ಹೇಳಾ ಸಂಗನಬಸವಣ್ಣ./191

  192. ಅರಿದಡೆ ಸುಖವಿಲ್ಲ; ಮರದಡೆ ದುಃಖವಿಲ್ಲ ! ಸತ್ತಡೆ ಚೇಗೆಯಿಲ್ಲ;
    ಬದುಕಿದಡೆ ಆಗಿಲ್ಲವೆಂಬ ! ನಿರ್ಣಯದಲ್ಲಿ ನಿಶ್ಚಯಿಸಿ ನಿಲ್ಲದೆ !
    ನಾನು ನೀನೆಂಬ ಉಭಯವಳಿದು ಕೂಡುವ ಯೋಗದ ಹೊಲಬನರಿಯದೆ !
    ಬರಿಯ ಮರವೆಯ ಪ್ರೌಡಿಕೆಯಲ್ಲಿ ಕೆಟ್ಟರಯ್ಯ ಗುಹೇಶ್ವರ./192

  193. ಅರಿದರಿದು ಅರಿವು ಬಂಜೆಯಾಯಿತ್ತು.
    ಮರೆ ಮರೆದು ಮರಹು ಬಂಜೆಯಾಯಿತ್ತು.
    ಗುಹೇಶ್ವರನೆಂಬ ಶಬ್ದ ಸಿನೆ ಬಂಜೆಯಾಯಿತ್ತು./193

  194. ಅರಿದರಿದು ಅರಿವು ಬರುದೊರೆವೋಯಿತ್ತು.
    ಕುರುಹ ತೋರಿದೊಡಿಂತು ನಂಬರು.
    ತೆರಹಿಲ್ಲದ ಘನವ ನೆನೆದು
    ಗುರು ಶರಣು ಶರಣೆಂಬುದಲ್ಲದೆ,
    ಮರಹು ಬಂದಿಹುದೆಂದು, ಗುರು ಕುರುಹ ತೋರಿದನಲ್ಲದೆ
    ಅರಿಯಬಲ್ಲಡೆ ಗುಹೇಶ್ವರನೆಂಬ ಲಿಂಗವು, ಹೃದಯದಲೈದಾನೆ. /194

  195. ಅರಿದರಿದು ನಿಮ್ಮ ನೆನೆವ ಪರಿಕರ ಹೊಸತು
    ಅಲಗನೇರಿ ಹೂವ ಕೊಯ್ದು ಇಳಿದು ಬರುವಂತೆ,
    ಗುಹೇಶ್ವರಾ ನಿಮ್ಮ ಶರಣ ಚನ್ನಬಸವಣ್ಣಂಗಲ್ಲದೆ./195

  196. ಅರಿದು ನೆನೆಯಲಿಲ್ಲ, ಮರೆದು ಪೂಜಿಸಲಿಲ್ಲ.
    ತೆರಹಿಲ್ಲದ ಘನಕ್ಕೆ ಕುರುಹು ಮುನ್ನಿಲ್ಲ.
    ತನಗೆ ಗುರುವಿಲ್ಲ, ಗುರುವಿಗೆ ತಾನಿಲ್ಲ
    ಗುರುವಿಗೆ ಶಿಷ್ಯನು ಹೊಡವಡುವ ಕಾರಣ ಮುನ್ನಿಲ್ಲ.
    ಬಯಲ ಬಿತ್ತಲಿಲ್ಲ, ಬೆಳೆಯಲಿಲ್ಲ, ಒಕ್ಕಲಿಲ್ಲ, ತೂರಲಿಲ್ಲ,
    ಗುಹೇಶ್ವರನೆಂಬ ಲಿಂಗಕ್ಕೆ ಕುರುಹು ಮುನ್ನಿಲ್ಲ./196

  197. ಅರಿದು ಮರೆದು ಬೆರಗು ಹತ್ತಿತ್ತು.
    ಏನಂದರಿಯದೆ ಅದೆಂತೆಂದರಿಯದೆ
    ಗುಹೇಶ್ವರಾ ಗುಹೇಶ್ವರಾ ಎನುತ ಅಲ್ಲಿಯೆ ನಿಂದಿತ್ತು/197

  198. ಅರಿದೆನೆಂಬುದು ತಾ ಬಯಲು,
    ಅರಿಯೆನೆಂಬುದು ತಾ ಬಯಲು,
    ಅರುಹಿನ ಕುರುಹಿನ ಮರಹಿನೊಳಗೆ
    ಗುಹೇಶ್ವರನೆಂಬುದು ತಾ ಬಯಲು !/198

  199. ಅರಿದೆವರಿದೆವೆಂಬಿರಿ ಅರಿದ ಪರಿಯೆಂತು ಹೇಳಿರೆ ?
    ಅರಿದವರು ಅರಿದೆವೆಂಬರೆ ?
    ಅರಿಯಬಾರದ ಘನವನರಿದು,
    ಅರಿಯದಂತಿಪ್ಪರು ಗುಹೇಶ್ವರಾ./199

  200. ಅರಿದೆಹೆ ಅರಿದೆಹೆನೆಂದಡೆ ಅದೇಕೊ ಮುಂದೆ ಮರವೆ?
    ನೀನರಿದೆನೆಂಬುದು ನಿನ್ನಲ್ಲಿ ಲೇಸಾಗಿ ಉಳ್ಳಡೆ, ನಿನ್ನರಿವೆಲ್ಲವ ಹರಿಹಂಚ ಮಾಡಿ ಹೋದಡರಿ ಮರುಳೆ ! ಸ್ವತಂತ್ರ ಘನದೊಳಗಿರ್ದು, ನಿಜವನರಿದಿಹೆನೆಂದಡೆ ಮೂರ್ತಿ ಕಿರಿದಲ್ಲ, ನಿಲ್ಲು ಮಾಣು. ಗುಹೇಶ್ವರನೆಂಬ ಲಿಂಗದ ಘನಘಟ್ಟಿಯನರಿವಡೆ ನಿನ್ನರಿವೆಲ್ಲವ ಹರಿಹಂಚು ಮಾಡಿ, ನೀನರಿ ಮರುಳೇ-ಅನುಭಾವಿಯಾದಡೆ /200

  201. ಅರಿಯದ ಕಾರಣ ಕುರುಹುವಿಡಿವೆನಲ್ಲದೆ
    ಅರಿದ ಬಳಿಕ ಇನ್ನೇನೊ ?
    ಬಿಟ್ಟಡೆ ಸಮಯವಿರೋಧ, ಬಿಡದಿದ್ದರೆ ಜ್ಞಾನವಿರೋಧ.
    ಗುಹೇಶ್ವರಲಿಂಗವು ಉಭಯ ದಳದ ಮೇಲೈದಾನೆ ಕಾಣಾ
    ಸಿದ್ಧರಾಮಯ್ಯಾ/201

  202. ಅರಿಯದಂತಿರಲೊಲ್ಲದೆ, ಅರಿದು ಕುರುಹಾದೆಯಲ್ಲಾ !
    ಹಿರಿಯರೆಲ್ಲರು ನೆರೆದು ನಿಮ್ಮ ಕಟ್ಟಿದರೆ ಅಯ್ಯಾ,
    ಉಪಚಾರಕ್ಕೋಸುಗ !
    ಸಾವಿಂಗೆ ಸಂಗಡವಾದೆಯಲ್ಲಾ-ಗುಹೇಶ್ವರಾ !/202

  203. ಅರಿಯದೆ [ಅರಿದು?] ಅರಸಿದಡೆ ಮನದ ವಿಕಾರ,
    ಸುಳಿದರಸಿದಡೆ ಪವನವಿಕಾರ, ನಿಂದರಸಿದಡೆ ದೇಹವಿಕಾರ,
    ಒಳಗನರಸಿದಡೆ ಜ್ಞಾನವಿಕಾರ.
    ಅರಸದೆ ಬೆರಸಿದಡೆ ಆತನೆ ಶರಣ ಗುಹೇಶ್ವರಾ./203

  204. ಅರಿವ ಆತ್ಮ;
    ಕಂಗಳ ಮರೆಯಲ್ಲಿ ಕಾಂಬಂತೆ,
    ಕಿವಿಯ ಮರೆಯಲ್ಲಿ ಕೇಳುವಂತೆ-
    ಕಂಗಳು ನಷ್ಟವಾದಲ್ಲಿ ಕರ್ಣ ಬದಿರವಾದಲ್ಲಿ
    ಕಾಂಬುದು ಕೇಳುವುದು ಅಲ್ಲಿಯೆ ನಿಂದಿತ್ತು.
    ಆತ್ಮನ ಅರಿವಾವುದು ? ಗುಹೇಶ್ವರನೆಂಬ ಕುರುಹಾವುದು;
    ಅಂಬಿಗರ ಚೌಡಯ್ಯ ?/204

  205. ಅರಿವ ಬಲ್ಲೆನೆಂದು ಬರುನುಡಿಯ ನುಡಿವರೆ ?
    ಸತ್ಯವನರಿದವಂಗೆ ಮಿಥ್ಯಾಭಾವವುಂಟೆ ?
    ತಥ್ಯ ಮಿಥ್ಯ ಉಭಯಭಾವವಳಿದಿರಬೇಕು.
    ಸಮಯವೆಂಬುದು ಸಂಪದ. ಅದು ನಿನಗನ್ಯವೆ ?
    ಸರ್ವಮಯ ಸಂಪದವಾದಲ್ಲಿ
    ಗುಹೇಶ್ವರಲಿಂಗಕ್ಕೆ ತಥ್ಯಮಿಥ್ಯವಿಲ್ಲ ಘಟ್ಟಿವಾಳಯ್ಯ/205

  206. ಅರಿವನರಿದಹೆನೆಂಬುದು ಮರವೆ,
    ಮರಹ ಮರೆದಹೆನೆಂಬುದು ಮರವೆ,
    ಸಾಕಾರ ನಷ್ಟ ನಿರಾಕಾರ ದೃಷ್ಟವೆಂಬುದು ಭಾವದ ಬಳಲಿಕೆ.
    ಗುರುವೆಂಬುದು ಶಿಷ್ಯನೆಂದಲ್ಲಿಯೆ ಹೋಯಿತ್ತು.
    ಶಿಷ್ಯನೆಂಬುದು ಗುರುವೆಂದಲ್ಲಿಯೆ ಹೋಯಿತ್ತು.
    ನಿರ್ಣಯದಲ್ಲಿ ನಿಜೈಕ್ಯನಾದಹೆನೆಂದಡೆ, ಎಚ್ಚರಿಕೆಯಲ್ಲಿ ತಪ್ಪಿತ್ತು.
    ಸಹಜ ಸಂಬಂಧಕ್ಕೆ ಗುರುವಲ್ಲದೆ ಅಸಹಜಕ್ಕೆ ಗುರುವುಂಟೆ ?
    ಗುಹೇಶ್ವರಲಿಂಗದಲ್ಲಿ ಪರವೆಂದಲ್ಲಿ ಗುರುವುಂಟಲ್ಲದೆ
    ಸ್ವಯವೆಂದಲ್ಲಿ ನುಡಿಯಲಿಲ್ಲ./206

  207. ಅರಿವನರಿದು ಮರಹ ಮರೆದು,
    ಸಂಕಲ್ಪ ಸಂಶಯವಳಿದ ನಿಲವನು, ಅರಿದ ಪರಿ ಎಂತು ಹೇಳಾ ?
    ಅರಿದೆನೆಂದಡೆ ಜ್ಞಾನಕ್ಕೆ ದೂರ, ಮರೆದೆನೆಂದಡೆ ಮನಕ್ಕೆ ದೂರ.
    ನಿರ್ಭಾವದ ಹೊಲಿಗೆಯಲ್ಲಿ ಭಾವಸಂಕಲ್ಪ ಬಿಡದು.
    ನಮ್ಮ ಗುಹೇಶ್ವರಲಿಂಗದಲ್ಲಿ ಮನಮಗ್ನಯೋಗ,
    ನಿನಗೆಂತು ಸಾಧ್ಯವಾಯಿತ್ತು ಹೇಳಾ ಸಿದ್ಧರಾಮಯ್ಯಾ ?/207

  208. ಅರಿವರತು ಬೆರಗುಹೊಡೆದು, ಕುರುಹುಗೆಟ್ಟವನ,
    ಬಂದ ಬಟ್ಟೆಯಲ್ಲಿ ಬಾರದೆ ಹೋದವನ,
    ಕಂಗಳಲುಂಡವನ, ಮನದಲ್ಲಿ ದಣಿದವನ,
    ಕಿಚ್ಚಿಲ್ಲದೆ ಬೆಂದವನ, ಅಚ್ಚಲಿಂಗೈಕ್ಯನ,
    ಕೈಯಿಲ್ಲದೆ ಕೊಂಡವನ, ಬಾಯಿಲ್ಲದೆ ಉಂಡವನ,
    ಒಡಲಿಲ್ಲದೆ ಅವಗ್ರಹಿಸಿದವನ-ನಂಬು ಗುಹೇಶ್ವರಲ್ಲಮನ !/208

  209. ಅರಿವರತು ಮರಹುಗೆಟ್ಟು ತನ್ನಲ್ಲಿ ತಾನು ಸನ್ನಹಿತನಾದವಂಗೆ
    ದುಃಖಿಸುವರೆ ಹೇಳಾ ? ಶೋಕಿಸುವರೆ ಹೇಳಾ ?
    ಒಡಲಿಲ್ಲದಾತಂಗೆ ಎಡೆಯಲೊಂದು ಅಳಿವುಂಟೆಂದು
    ನುಡಿದು ಹೇಳುವ ಮಾತು ಭ್ರಾಂತು ನೋಡಾ !
    ಎರಡಿಲ್ಲದ ಐಕ್ಯಂಗೆ ಒಳಹೊರಗಿಲ್ಲ ನೋಡಾ,
    ಗುಹೇಶ್ವರನ ಶರಣ ಅಜಗಣ್ಣಂಗೆ !/209

  210. ಅರಿವರಿತು ಬೆರಗು ಹತ್ತಿತೆಂಬ ಜ್ಞಾನವಿದೇನೊ ?
    `ನಾಹಂ’ ಎಂಬಲ್ಲಿ ತಾನಾರೊ ?
    `ಕೋಡಿಹಂ’ ಎಂಬಲ್ಲಿ ಮುನ್ನಾರೊ ?
    `ಪರಬ್ರಹ್ಮ ಸೋಡಿಹಂ’ ಎಂಬಲ್ಲಿ ಮುನ್ನ ತಾನೇನಾಗಿದ್ದನೊ ?
    ಚಿದಹಂ ಎಂಬ ಹಮ್ಮಿನ ಮಾಲೆ ಇದೇನು ಹೇಳಾ ?
    “ನಿಃಶಬ್ದಂ ಬ್ರಹ್ಮ ಉಚ್ಯತೇ” ಎಂಬ ಶಬ್ದವಿಡಿದು
    ಬಳಲುವ ಕಾರಣವಿದೇನು ಹೇಳು ಗುಹೇಶ್ವರಾ ?/210

  211. ಅರಿವಿಂಗಸಾಧ್ಯ, ಉಪಮೆಗೆ ಕಡೆ ಮುಟ್ಟದು !
    ಗುಹೇಶ್ವರನ ಕರುಣಪ್ರಸಾದಿ ಮರುಳುಶಂಕರದೇವ
    ಎಂತಿಪ್ಪನೆಂಬುದ ತಿಳಿದು ನೋಡಾ, ಸಂಗನಬಸವಣ್ಣ./211

  212. ಅರಿವಿಂದರಿಯಬಾರದು, ಕುರುಹುವಿಡಿದ ಪರಿಯೆಂತಯ್ಯಾ ?
    ತೆರಹಿಲ್ಲದ ಘನವನರಿದೆಹೆನೆಂದಡೆ, ಅರಹು ಮರಹು ನಷ್ಟವಾದ
    ಮಹದರಿವು ತಾನಾಗಿ ಗುಹೇಶ್ವರಲಿಂಗವನರಿಯದಂತಿರಬೇಕು
    ಕಾಣಾ ಸಿದ್ಧರಾಮಯ್ಯ./212

  213. ಅರಿವಿನ ಕುರುಹಿದೇನೊ ಒಳಗೆ ಅನು(ನಿ?)ಮಿಷ ನಂದಿನಾಥನಿರಲು ?
    ಪೂಜಿಸುವ ಭಕ್ತನಾರೊ? ಪೂಜೆಗೊಂಬ ದೇವನಾರೊ ?
    ಮುಂದು ಹಿಂದು, ಹಿಂದು ಮುಂದಾಡದೆ,
    ಗುಹೇಶ್ವರ ನೀನು ನಾನು, ನಾನು ನೀನಾದೊಡೆ ?/213

  214. ಅರಿವಿನ ನಿರಿಗೆಗಾಣದೆ ಗಿರಿಯ ಕೋಡುಗಲ್ಲ ಮೇಲೆ
    ತಲೆಯೂರಿ ತಪಸ್ಸು ಮಾಡಿದಡಿಲ್ಲ, ಇಲ್ಲದ ಕಾಲಕ್ಕಿಲ್ಲ,
    ಗಾತ್ರವ ದಂಡಿಸಿದಡಿಲ್ಲ ಪೃಥ್ವಿಯ ತಿರುಗಿದಡಿಲ್ಲ,
    ತೀರ್ಥಂಗಳ ಮಿಂದು ನಿತ್ಯನೇಮಂಗಳ ಮಾಡಿ
    ಜಪಸಮಾದಿಯಲ್ಲಿ ನಿಂದಡಿಲ್ಲ,
    “ಪೂಜಾಕೋಟಿಸಮಂ ಸ್ತೋತ್ರಂ, ಸ್ತೋತ್ರಕೋಟಿಸಮಂ ಜಪಃ
    ಜಪಕೋಟಿ ಸಮಂ ಧ್ಯಾನಂ, ಧ್ಯಾನಕೋಟಿರ್ಮನೋ ಲಯಃ-
    ಎಂದುದಾಗಿ,
    ಸುತ್ತಿಸುಳಿವ ಮನವ ಚಿತ್ತಿನಲ್ಲಿರಿಸಿ, ಚಿತ್ತು ಲಯವಾದಡೆ ನಿತ್ಯಪ್ರಕಾಶ !
    ಗುಹೇಶ್ವರಲಿಂಗವ ಮತ್ತೆ ಅರಸಲುಂಟೆ ?/214

  215. ಅರಿವಿನ ಬಲದಿಂದ ಕೆಲಬರು
    ಅರಿಯದವರ ಗೆಲಬೇಕೆಂದು,
    ಬರುಮಾತಿನ ಉಯ್ಯಲೆಯನೇರಿ, ಒದೆದು ಒರಲಿ ಕೆಡೆವ ದರಿದ್ರರು !
    ಅರಿವು ತೋರದೆ ಇರಬೇಕು-ಕಾಯನಿರ್ಣಯ ನಿಃಪತಿಯೆಂಬಾತನು.
    ಸೋಂಕಿನ ಸೋಜಿಗವೆಂಬ ಪರಿಣತೆ ಫಲಿಸಬೇಕು,
    ಅರಿವು ತೋರದೆ ಎರಡೆಂಬ ಬಿನ್ನವೇಷವ ತೊಟ್ಟು
    ಡಂಬಕವ ನುಡಿದೆಹೆವೆಂಬ ಉದ್ದಂಡರ
    ಗುಹೇಶ್ವರ ಕಂಡರೆ ಕನಲುವ./215

  216. ಅರಿವಿನ ಹೃದಯ ಕಂದೆರೆಯಬೇಕೆಂದು
    ಗುರುವೆಂದು ಕಲ್ಪಿಸಿಕೊಂಬರಲ್ಲದೆ,
    ಗುರುವೆಂದೆನಲುಂಟೆ ಶಿಷ್ಯಂಗೆ ?
    ಶಿಷ್ಯನೆಂದೆನಲುಂಟೆ ಗುರುವಿಂಗೆ ?
    ಗಮನಾಗಮನ ನಾಸ್ತಿಯಾದ ಲಿಂಗಕ್ಕೆ
    ಅಂಗವೆಲ್ಲಿಯದು ಹೇಳಾ ಗುಹೇಶ್ವರಾ ?/216

  217. ಅರಿವಿನಲ್ಲಿ ಉದಯಿಸಿ ಮರಹು ನಷ್ಟವಾಗಿರ್ದ
    ಶರಣನ ಪರಿಯನರಸಲುಂಟೆ ? ಗತಿಯ ಹೇಳಲುಂಟೆ ?
    ಶಿಶು ಕಂಡ ಕನಸಿನಂತಿಪ್ಪರು ಗುಹೇಶ್ವರಾ ನಿಮ್ಮ ಶರಣರು !/217

  218. ಅರಿವಿನೊಳಗಣ ಮರಹು, ಮರಹಿನೊಳಗಣ ಅರಿವು !
    ಅರಿದು ಮರೆದು ನೆನೆದಡೆ ನೆಲೆಗೊಳ್ಳದು.
    ಅರಿವರಾರಯ್ಯ ಆಗಮ್ಯಲಿಂಗವನು ?
    ಕೊಟ್ಟು ಕೊಂಡಾಡುವ ವ್ಯವಹಾರಕ್ಕೆಲ್ಲಿಯದೊ ?
    ನೀರಲೊದಗಿದ ಬೆಣ್ಣೆ ಮುಗಿಲಲೊದಗಿದ ಕಿಚ್ಚು
    ಪವನನ ಶಬ್ದಸಂಚಕ್ಕೆ ಬಣ್ಣವುಂಟೆ ?
    ಗುಹೇಶ್ವರಲಿಂಗದ ನಿಲವ ತೋರಬಾರದು-ಕೇಳಾ ಸಂಗನಬಸವಣ್ಣಾ./218

  219. ಅರಿವಿನೊಳಗೊಂದು ಮರವೆಯದೆ, ಮರವೆಯೊಳಗೊಂದು ಅರಿವದೆ.
    ಅರಿವು ಮರವೆಯೆಂಬೆರಡೂ ಅಳಿದಡೆ ನಿರ್ಣಯವದೆ (ನಿರ್ವಯಲಿದೆ?).
    ತಾನೆಂಬಲ್ಲಿ ನಿಷ್ಪತಿಯಿದೆ-ಇದೇನು ಹೇಳಾ ಗುಹೇಶ್ವರಾ?/219

  220. ಅರಿವು ಅರಿವು ಎನುತಿಪ್ಪಿರಿ, ಅರಿವು ಸಾಮಾನ್ಯವೆ ?
    ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ
    ನಿಂದ ಹೆಜ್ಜೆಯನರಿಯಬಾರದು.
    ಮುಂದಣ ಹೆಜ್ಜೆಯಳಿದಲ್ಲದೆ, ಒಂದು ಪಾದ ನೆಲೆಗೊಳ್ಳದು.
    ನೆಲನ ಬಿಟ್ಟು ಆಕಾಶದಲ್ಲಿ ನಿಂದು ಮುಗಿಲೊಳಗೆ ಮಿಂಚಿದಲ್ಲದೆ
    ತಾನಾಗಬಾರದು.-ಗುಹೇಶ್ವರನೆಂಬುದು ಬರಿದೆ ಬಹುದೆ ಹೇಳಿರೆ ?/220

  221. ಅರಿವು ಉದಯವಾದಲ್ಲದೆ ಮರಹು ನಷ್ಟವಾಗದು.
    ಮರಹು ನಷ್ಟವಾದಲ್ಲದೆ ಅರಿವು ಸಯವಾಗದು.
    ಅರಿವು ಸಯವಾಗಿ ದೊರೆಕೊಂಡ ಬಳಿಕ;-
    ಗುರುವಾರು ? ಲಿಂಗವಾರು ? ಆವುದು ಘನ, ಆವುದು ಕಿರಿದು ಹೇಳಾ ?
    ಗುಹೇಶ್ವರಲಿಂಗದಲ್ಲಿ ಅರಿದು ಮರೆದು ಉಪದೇಶವ ಹಡೆದಡೆ
    ಮುಂದೆ ನಿಜವೆಂತು ಸಾಧ್ಯವಪ್ಪುದು,
    ಹೇಳಾ ಮಡಿವಾಳ ಮಾಚಯ್ಯಾ ?/221

  222. ಅರಿವು ಮರವೆಯನರಿದು ನೆರೆನಿಂದ ನಿಜವನಾರು ಬಲ್ಲರೊ ?
    ಭಾವ ನಿರ್ಭಾವವ ಮೀರಿದ ಮಹಾಘನವ ಭಾವಿಸುವರಿನ್ನಾರೊ ?
    ಅದು ಭಾವಕ್ಕತೀತವಾಗಿ ಭಾವಿಸಲಿಲ್ಲ, ಮನಕ್ಕೆ [ಅ]ಗೋಚರವಾಗಿ ನೆನೆಯಲಿಲ್ಲ.
    ಅರಿವುದಕ್ಕೆ ಕುರುಹಿಲ್ಲ, ಮರೆವುದಕ್ಕೆ ತೆರಹಿಲ್ಲ.
    ಜ್ಞಾತೃ, ಜ್ಞಾನ, ಜ್ಞೇಯವಳಿದು ನಿಃಪತಿ,
    ಗುಹೇಶ್ವರಾ ನಿಮ್ಮ ಶರಣ, ನಿಶ್ಚಿಂತನಿವಾಸಿಯಾದನು/222

  223. ಅರಿವುಗೆಟ್ಟು ಮರ[ಕುರು ?]ಹಳಿದು
    ಭಾವಭ್ರಾಂತು ನಿಭ್ರಾಂತವಾದವರ ಕೈಯಲ್ಲಿ
    ಕರುಹನರಸುವರೆ ಹೇಳಾ ?
    ತಾನಳಿದು ತಾನುಳಿದು ತಾನುತಾನಾದ ನಿಜಶರಣಂಗೆ
    ಅಂತರಂಗದಲ್ಲಿ ಒಂದು ಅರಿವುಂಟೆ ?
    ಗುಹೇಶ್ವರನ ಶರಣರ ನಿಲವು
    ಕಾಯಗೊಂಡವರ ಕಣ್ಣಿಂಗೆ ಸಂದೇಹವಾಗಿಪ್ಪುದು,
    ನಿಸ್ಸಂದೇಹಿಗಳಿಗೆ ನಿಜವಾಗಿಪ್ಪುದು ನೋಡಾ ಮರುಳೆ/223

  224. ಅರುವೆಯನು ಒಂದು ಒರಲೆ ಕೊಂಡಡೆ,
    ಆಕಾಶವನು ಉಡು ಮೇಯಿತ್ತಲ್ಲಾ ! ಕತ್ತಲೆಯ ಬೆಳಗುವ ತಾನೆ ನುಂಗಿತ್ತಲ್ಲಾ ! ಗುಹೇಶ್ವರಾ ಸತ್ತವರು ಬದುಕಿದವರ ಹೊತ್ತರು ! /224

  225. ಅರೂಪು ಕಾಣಬಾರದು, ಪೂಜಿಸುವ ಪರಿ ಇನ್ನೆಂತೊ ?
    ರೂಪಿಂಗೆ ಕೇಡುಂಟು ಪೂಜಿಸುವ ಪರಿ ಇನ್ನೆಂತೊ ?
    ಸಕಲ ನಿಷ್ಕಲ ಪೂಜೆಗೆ ಕಾರಣವಲ್ಲ !
    ಇನ್ನೆಂತಯ್ಯಾ ಲಿಂಗವಂತರಿಗೆ ಪೂಜಿಸುವ ಪರಿ ?
    ಲಿಂಗದ ಪರಿ ಇನ್ನೆಂತಯ್ಯಾ ?
    ಅರಿಯಬಾರದ ಲಿಂಗವನು ಅರಿವಂತೆ ಮಾಡಿಕೊಟ್ಟನು ಶ್ರೀಗುರು.
    ಈ ಎರಡುವನರಿದು ಪೂಜಿಸಬೇಕು ಗುಹೇಶ್ವರಾ./225

  226. ಅರೆಯ ಮೇಲಣ ಹುಲ್ಲೆಗೆ ಕೆಂಗರಿಯ ಬಾಣವ ತೊಟ್ಟವನೆ (ತೊಟ್ಟಡೆ ?)
    ತಪ್ಪದೆ ತಾಗಿತ್ತಲ್ಲಾ ! ಅದು ಒಂದೆ ಬಾಣದಲ್ಲಿ ಅಳಿಯಿತ್ತಲ್ಲಾ !
    ನಾರಿ ಹರಿಯಿತ್ತು, ಬಿಲ್ಲು ಮುರಿಯಿತ್ತು.
    ಹುಲ್ಲೆ ಎತ್ತ ಹೋಯಿತ್ತು ಗುಹೇಶ್ವರಾ?/226

  227. ಅರ್ಕನ ಅದ್ಭುತದಲ್ಲಿ ಕೆಟ್ಟರು ಹಲಬರು,
    ತಪ್ಪುಕರಾದರು ಹಲಬರು.
    ಬಿಂದು ಬಿಂದುವನೆ ಕೂಡಿ ಲಿಂಗಲೀಯವಾಯಿತ್ತು.
    ನಿಂದನು ಗುಹೇಶ್ವರನೆನ್ನೊಳಗೆ ಭರಿತನಾಗಿ./227

  228. ಅರ್ಚನೆ ಪೂಜನೆಯ ನಿಮಗೆ ನಾನು ಹಂಗು ಹರಿಯಿಲ್ಲದೆ ಮಾಡುವೆನಯ್ಯಾ
    ನಾ ಮಾಡುವ ಕ್ರೀಯೆಲ್ಲವು ನೀವೆಯಾದ ಕಾರಣ,
    ನಿಮ್ಮಲ್ಲಿ ತದ್ಗತನಾಗಿದ್ದೆ ಕಾಣಾ ಗುಹೇಶ್ವರಾ./228

  229. ಅರ್ಧನಾರೀಶ್ವರನೆಂಬರು ಅನುವನರಿಯದವರು.
    ತ್ರಿಪುರವಿಜಯನೆಂಬರು ವಿರೋದಿಗಳಾದವರು.
    ಕಾಮಾರಿಯೆಂಬರು ಕಣ್ಕಾಣದವರು.
    ಜಟಾಜೂಟಕೋಟೀರಭಾರನೆಂಬರು ಜಾಣರಲ್ಲದವರು.
    ನಮ್ಮ ಗುಹೇಶ್ವರಲಿಂಗ ಇಂತಹ ಬಹುರೂಪದವನಲ್ಲ !/229

  230. ಅರ್ಪಿತ ಅನರ್ಪಿತವನಾರುಬಲ್ಲರಯ್ಯಾ ?
    ಅರ್ಪಿಸಿ ಕೊಂಬುದು ಅನರ್ಪಿತ
    ಅರ್ಪಿಸದೆ ಕೊಂಬುದೂ ಮುನ್ನವೆ ಅನರ್ಪಿತ.
    ಅರ್ಪಿಸಿ ಅರ್ಪಿಸದೆ ಕೊಳಬಲ್ಲ
    ಗುಹೇಶ್ವರಾ ನಿಮ್ಮ ಶರಣ./230

  231. ಅಲ್ಪಜ್ಞಾನಿ ಪ್ರಕೃತಿ ಸ್ವಭಾವಿ, ಮಧ್ಯಮಜ್ಞಾನಿ ವೇಷಧಾರಿ,
    ಅತೀತಜ್ಞಾನಿ ಆರೂಢ. ಆರೂಢನಾದರೂ ಅರಿಯಬಾರದಯ್ಯಾ.
    ಜ್ಞಾನವನರಿಯದಾತ ಅಜ್ಞಾನಿ, ನಾಮನಷ್ಟ.
    ಈ ಚತುರ್ವಿಧದೊಳಗೆ ಆವಂಗವೂ ಇಲ್ಲ,
    ಗುಹೇಶ್ವರಾ-ನಿಮ್ಮ ಶರಣ./231

  232. ಅವದಿ ಅಳಿಯಿತ್ತು ವ್ಯವಧಾನ ಉಳಿಯಿತ್ತು.
    ನಿಜವೆ ನಿಜವನೊಡಗೂಡಿತ್ತು ಕೇಳಾ ಬಸವಣ್ಣ.
    ಕಲಿಯುಗದಲ್ಲಿ ಮುಂದೆ ಇರಬಾರದು ನಿಜ ಶರಣಂಗೆ
    ನಡೆ ನೀನು ಕಪ್ಪಡಿಯ ಸಂಗಯ್ಯನಲ್ಲಿ ಒಡಗೂಡು.
    ಉಳುಮೆಯಲ್ಲಿ ನಿಜವನೆಯ್ದು ನಡೆ, ಚೆನ್ನಬಸವಣ್ಣಾ.
    ಮಹವನೊಡಗೂಡು ಮಡಿವಾಳಯ್ಯ.
    ಸೊಡ್ಡಳ ಬಾಚರಸರು ಮೊದಲಾದ ಪ್ರಮಥರೆಲ್ಲರು
    ನಿಜವನೆಯ್ದುವುದು ನಿರ್ವಯಲ ಸಮಾದಿಯಲ್ಲಿ.
    ಬಗಿದು ಹೋಗಿ ಲಿಂಗದೊಳಗೆ ಹೊಗುವರೆಲ್ಲರೂ !
    ನಡೆಯಿರಿ ಕಾಯವೆರಸಿ ಕೈಲಾಸಕ್ಕೆ, ಕಾಯಸಹಿತ ಎಯ್ದುವುದು.
    ನಿಮಗೆಲ್ಲರಿಗೆಯೂ ಉಪದೇಶಮಂತ್ರ ತಪ್ಪದು.
    ನಮಗೆ ಕದಳಿಯಲ್ಲಿ ಹೊಕ್ಕು ನಿಜದಲ್ಲಿ ಒಡಗೂಡುವ ಪರಿಣಾಮ.
    ಇದು ನಮ್ಮ ಗುಹೇಶ್ವರಲಿಂಗದ ಅಣತಿ ನಿಮಗೆಲ್ಲರಿಗೆಯೂ./232

  233. ಅವನು ಜಗವ ನುಂಗಿ, ಜಗವವನ ನುಂಗಿ,
    ಸೀಮೆಯ ನಿಸ್ಸೀಮೆ ನುಂಗಿ,
    ಗುಹೇಶ್ವರನೆಂಬ ನಾಮವ ಲಿಂಗವು ನುಂಗಿತ್ತು./233

  234. ಅವಸ್ಥಾತ್ರಯಮಂ ಬಿಟ್ಟು ಇಷ್ಟಲಿಂಗದ ಗರ್ಭದಲ್ಲಿ
    ಕಾಯವ ನಿಕ್ಷೇಪವಂ ಮಾಡಿದ ಬಳಿಕ ಕಾಲನ ಭಯವಿಲ್ಲ.
    ನೇತ್ರದಲ್ಲಿರ್ದ ಪ್ರಾಣಲಿಂಗದ ಮೇಲೆ ಮನವ ನಿಲಿಸಿದ ಬಳಿಕ ಕಾಮನ ಭಯವಿಲ್ಲ.
    ಏಕಾಂತ ಸ್ಥಾನವಾಗಿ, ಅಂತರಂಗದ ಭಾವ
    ಜ್ಯೋತಿರ್ಲಿಂಗದಲ್ಲಿ ಅರಿವು ಸಂಧಾನದಿಂ ಸಮರಸವಾಗಲು, ಕರ್ಮದ ಭಯವಿಲ್ಲ.
    ಈ ತ್ರಿಲಿಂಗ ಸಂಬಂಧದಿಂದ ಕಾಲಕಾಮಕರ್ಮವನೊತ್ತಿ ಮೆಟ್ಟಿ ನಿಲ್ಲದೆ,
    ವಿಷಯಸುಖಕ್ಕೆ ಮೆಚ್ಚಿ ಆ ಮೂವರ ಕಾಲ ಕೆಳಗೆ ಬಿದ್ದು,
    ಮಹಾದುಃಖಕ್ಕೊಳಗಾದರು, ನರರು.
    ಈ ವಿಷಯಗಾಳಿ ಸೋಂಕಲು ಹರಿ ಹತ್ತು ಭವವೆತ್ತಿದ.
    ಅಜ/234

  235. ಅವಸ್ಥೆ ಅವಸ್ಥೆಯ ಕೂಡಿ, ಬಿಂದು ನಾದವ ಕೂಡಿ,
    ಕಳೆಕಳೆಗಳು ಒಂದಾದ ಪರಿಯ ನೋಡಾ !
    ಅದು ಲಿಂಗದಲನಿಮಿಷ, ಆನೆಂಬ ಗುರುಪದವಾದೆನಯ್ಯಾ.
    ಹಿಂದು ಮುಂದ ಒಂದು ಮಾಡಿ ಮೂರ್ತಿಯಾಗಿ
    ಲಿಂಗ ಜಂಗಮವಾದ ಪರಿಯ ನೋಡಾ !
    ಗುಹೇಶ್ವರನ ಅಮಳೋಕ್ಯವಾದ ಸಂಗನಬಸವಣ್ಣನ
    ಶ್ರೀಪಾದಕ್ಕೆ ನಮೋ ನಮೋ ಎಂಬೆನು/235

  236. ಅವಿರಳ ವಿಟನ ಮದುವೆಗೆ ನಿಬ್ಬಣಗಿತ್ತಿಯರೆಲ್ಲ ಬಂದು
    ಕೆಂಡದ ದಂಡೆಯನೆ ಮುಡಿದು, ಅಂಡಜವೆಂಬ ಅರಿಷಿಣವ ಮಿಂದು,
    ಉರಿಯೆಂಬ ಹಚ್ಚಡದ ಹೊಂದಿಕೆ (ಹೊದಿಕೆ?)ಯಲ್ಲಿ-
    ನಿಬ್ಬಣಗಿತ್ತಿಯರು ಬಪ್ಪ ಭರವ ಕಂಡು ನೀರಲಡಿಗೆಯ ಮಾಡಿ;
    ವಾಯದ ಕೂಸಿಂಗೆ ಮಾಯದ ಮದವಣಿಗ;
    ಸಂಗ ಸಂಯೋಗವಿಲ್ಲದೆ ಬಸುರಾಯಿತ್ತು.
    ಕೂಸೆದ್ದು ಕುಣಿದಾಡಿ ಸೂಲಗಿತ್ತಿಯನವಗ್ರಹಿಸಿತ್ತು.
    ಗುಹೇಶ್ವರಾ ಒಬ್ಬ ಇಬ್ಬ ಮೂವರು
    ತ್ರಿದೇವತೆಗಳು ಬಲ್ಲರೆ ಆ ಲಿಂಗದ ಘನವನು?/236

  237. ಅಶನಕ್ಕಂಜಿ ವೇಷವನೆ ಹೊತ್ತು ದೇಶವ ತೊಳಲುವ
    ಹಿರಿಯರ ಗಂಡ, ಕಾಲನ ಗಂಡ ಕರ್ಮದ ಗಂಡ
    ಲಿಂಗವಿಡಿದು ಸಾವ ಹಿರಿಯರ ಗಂಡ
    ಗುಹೇಶ್ವರಾ ನಿಮ್ಮ ಶರಣ ಘಟ್ಟಿವಾಳ
    ಅಲ್ಲಮನಂತಿಂತೆಂಬವರ ಗಂಡ./237

  238. ಅಷ್ಟದಳಕಮಲದ ಮೇಲಿಪ್ಪ ನಿಶ್ಶೂನ್ಯನ ಮರ್ಮವನರಿಯದೆ,
    ಪ್ರಾಣಲಿಂಗವೆಂದೆಂಬರು, ಸಂತೆಯ ಸುದ್ದಿಯ ವಂಚಕರು.
    ಅಂಗದ ಆಪ್ಯಾಯನಕ್ಕೆ ಲಿಂಗವನರಸುವ,
    ಭಂಗಿತರನೇನೆಂಬೆ ಗುಹೇಶ್ವರಾ./238

  239. ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ
    ಹಂಗು ಹರಿಯಿಲ್ಲದೆ ಮಾಡುವೆನು.
    ನಾ ಮಾಡುವ ಕ್ರೀಗಳೆಲ್ಲವು ನೀವೆಯಾದ ಕಾರಣ
    ಗುಹೇಶ್ವರಾ ನಿಮ್ಮಲ್ಲಿ ತದ್ಗತವಾಗಿದ್ದೆನು./239

  240. ಅಷ್ಟಾಂಗಯೋಗದಲ್ಲಿ;
    ಯಮ ನಿಯಮಾಸನ ಪ್ರಾಣಾಯಾಮ ಪ್ರತ್ಯಾಹಾರ[ವೆಂಬ]
    ಧಾನ್ಯ ಧಾರಣ ಸಮಾದಿ[ಯೆಂಬ], ಎರಡು ಯೋಗ [ವುಂಟು],
    ಅಲ್ಲಿ ಅಳಿದು ಕೂಡುವುದೊಂದು ಯೋಗ,
    ಅಳಿಯದೆ ಕೂಡುವುದೊಂದು ಯೋಗ.
    ಈ ಎರಡು ಯೋಗದೊಳಗೆ,
    ಅಳಿಯದೆ ಕೂಡುವ ಯೋಗವು ಅರಿದು ಕಾಣಾ ಗುಹೇಶ್ವರಾ. /240

  241. ಅಸ್ಥಿಗೆ ಚರ್ಮವಾಧಾರವಾಗಿ, ಪ್ರಾಣಕ್ಕೆ ಪ್ರಸಾದ ಮೃತ್ತಿಕೆಯಾಗಿ(ಗೆ?)
    ಪ್ರಾಣ ಲಿಂಗವಲ್ಲೊ!
    ಪ್ರಾಣಲಿಂಗವೆಂಬುದು ಕರಕಷ್ಟ ನೋಡಾ.
    ಪ್ರಾಣಲಿಂಗವೆಂಬುದು ಕರನಾಚಿಕೆ ನೋಡಾ.
    ಒಡೆದ ಮಡಕೆಗೆ ಒತ್ತಿ ಮಣ್ಣ ಮೆತ್ತಿದಡೆ,
    ಅದು ತರಹರವಾಗಬಲ್ಲುದೆ ಗುಹೇಶ್ವರಾ?/241

  242. ಅಹಂಕಾರವನೆ ಮರೆದು, ದೇಹಗುಣಂಗಳನೆ ಜರೆದು,
    ಇಹ ಪರವು ತಾನೆಂದರಿದ ಕಾರಣ, ಸೋಹಂ ಭಾವ ಸ್ಥಿರವಾಯಿತ್ತು.
    ಸಹಜದುದಯದ ನಿಲವಿಂಗೆ,
    ಮಹಾಘನಲಿಂಗದ ಬೆಳಗು ಸ್ವಾಯತವಾದ ಕಾರಣ
    ಗುಹೇಶ್ವರಾ ನಿಮ್ಮ ಶರಣನು ಉಪಮಾತೀತನು./242

  243. ಅಹುದಹುದು ಕಿಂಕುರ್ವಾಣ ! ಮಝ ಭಾಪು !
    ಬಲ್ಲವರು ಬಲ್ಲೆವೆಂದೆಂಬರೆ ?
    ಲಿಂಗವಂತರ ಮಹಿಮೆ ಈ ಹೀಂಗಿರಬೇಡಾ ?
    ಗುಹೇಶ್ವರನ ಅಪ್ಯಾಯನವಡಗಿಸುವ ಅನುವನು
    ನೀನಲ್ಲದೆ ಮಹೀತಳದೊಳು ಮತ್ತೆ ಬಲ್ಲವರಾರು ?
    ಹೇಳಾ ಸಂಗನಬಸವಣ್ಣಾ./243

  244. ಅಹುದಹುದು ಬಸವಣ್ಣಾ ನೀನೆಂದುದನಲ್ಲೆನಬಹುದೆ ?
    ಎನ್ನ ಮನದ ಕಪ್ಪ ಕಳೆದು ನಿಲರ್ೆಪನ ಮಾಡಿ
    ಎನ್ನ ನಿರವಯಲಲ್ಲಿ ನಿಲಿಸಿ ಪ್ರತಿಷ್ಠೆಯ ಮಾಡುವಾತನು
    ನೀನೆಂಬುದು ಸತ್ಯವಚನ ನೋಡಾ.
    ಗುಹೇಶ್ವರನ ಮಹಾಗಣಂಗಳಿದ್ದಲ್ಲಿಗೆ ಹೋಗಿ
    ತಿಳುಹಿಕೊಂಡು ಬಾರಾ ಸಂಗನಬಸವಣ್ಣಾ./244

  245. ಅಹುದಹುದು,
    ಭಕ್ತಿಭಾವದ ಭಜನೆ ಎಂತಿರ್ದುದಂತೆ ಅಂತರಂಗದಲ್ಲಿ ಅರಿವು.
    ಆ ಅಂತರಂಗದ ಅರಿವಿಂಗೆ ಆಚಾರವೆ ಕಾಯ.
    ಆಚಾರವೆಂಬ ಕಾಯವಿಲ್ಲದಡೆ ಅರಿವಿಂಗೆ ಆಶ್ರಯವಿಲ್ಲ.
    ಅರಿವು ಆಚಾರದಲ್ಲಿ ಸಮವೇದಿಸಿದ ಲಿಂಗೈಕ್ಯನ
    ಕ್ರಿಯಾಬದ್ಧನೆಂದು ನುಡಿದಡೆ ಪಂಚಮಹಾಪಾತಕ.
    ನಿನ್ನ ಅರಿವಿಂಗೆ ಆಚಾರವಾಗಿ, ಆಚಾರಕ್ಕೆ ಆಳಾಗಿ
    ನಮ್ಮ ಗುಹೇಶ್ವರನು ನಿನ್ನ ಕೈವಶಕ್ಕೆ ಒಳಗಾದನು
    ನಿನ್ನ ಸುಖಸಮಾದಿಯ ತೋರು, ಬಾರಾ ಸಿದ್ಧರಾಮಯ್ಯ/245

  246. ಅಳಿಯ, ಬಳಿಯೆ ಸುಳಿವನಲ್ಲ ಪ್ರಳಯವಿಲ್ಲದ ವಿಜಯನು.
    ಕುಳಾಕುಳದ ಆತ್ಮನ ಅಂಗದ ಸಂಗಿಯಲ್ಲ.
    ಸುಳುಹಿನೊಳಗಣ ಸೂಕ್ಷ್ಮವ ತಿಳಿದು ನೋಡುವಡೆ
    ಅಣಿಮಾದಿ ಗುಣರಹಿತನು, ಅಕಲ್ಪಿತಮಹಿಮನನೇನೆಂಬೆ ?
    ನೆಳಲ ಕಳವಳದ ಬಳಿಯ ಭಾವರೂಪನಲ್ಲ !
    ಬೆಳಗಿನೊಳಗಣ ಬೆಳಗು,
    ಗುಹೇಶ್ವರಾ ನಿಮ್ಮ ಶರಣನ ನಿಲವು !/246

  247. ಅಳಿವನಲ್ಲ ಉಳವನಲ್ಲ ಘನಕ್ಕೆ ಗಮನನಲ್ಲ ಮನಕ್ಕೆ ಸಾಧ್ಯನಲ್ಲ
    ತನ್ನ ತಪ್ಪಿಸಿ ಇದಿರನೊಪ್ಪಿಸಿಹೆನೆಂಬ ಬಿನ್ನಭಾವಿಯಲ್ಲ,
    ಗುಹೇಶ್ವರನ ಶರಣ.
    ಅಜಗಣ್ಣನ ಅಂತಿಂತೆನಬಾರದು ಕೇಳಾ ತಾಯೆ./247

  248. ಅಳಿವರ ಉಳಿವರ ಸುಳಿವರ ನಿಲವ ನೋಡಿ ಕಂಡು
    ಸೋಂಕಿಲ್ಲದ ರೂಪಿಲ್ಲದ ನಿಜವ ಬಯಸುತ್ತಿದ್ದೆ,
    ಕಾಲಿಲ್ಲದೆ ನಡೆಯುತ್ತಿದ್ದೆ, ಕಣ್ಣಿಲ್ಲದೆ ನೋಡುತ್ತಿದ್ದೆ ಗುಹೇಶ್ವರಾ./248

  249. ಆ ಮಾತು, ಈ ಮಾತು, ಹೋ ಮಾತು-ಎಲ್ಲವೂ ನೆರೆದು ಹೋಯಿತ್ತಲ್ಲಾ
    ಭಕ್ತಿ ನೀರಲ್ಲಿ ನೆರೆದು ಜಲವ ಕೂಡಿ ಹೋಯಿತ್ತಲ್ಲಾ.
    ಸಾವನ್ನಕ್ಕ [ಸರಸ] ಉಂಟೇ ಗುಹೇಶ್ವರಾ?/249

  250. ಆ ಮೂಲಮಂತ್ರಮೂರ್ತಿಯ ನಿಲುಕಡೆಯ ಕೇಳಿರಯ್ಯ ಶರಣಗಣಂಗಳೆ;
    ಬ್ರಹ್ಮಾಂಡ ಮಧ್ಯದಲ್ಲಿ ಪಿಂಡಾಕೃತಿಯ ಧರಿಸಿ, ಆ ಪೂರ್ವಾಶ್ರಯ ಸ್ವರೂಪವಾದ
    ಪಿಂಡಬ್ರಹ್ಮಾಂಡಗಳ ಜೀವನವರ್ತನ-
    ದುರ್ಮಾರ್ಗ-ದುರ್ನಡತೆ-ದುರಾಚಾರ-ದುರ್ಗುಣಂಗಳ ತ್ಯಜಿಸಿ,
    ಗುರು ಲಿಂಗ ಜಂಗಮ ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ,
    ಶರಣ ಐಕ್ಯಗಣಂಗಳಲ್ಲಿ
    ಒಪ್ಪುತಿರ್ಪರು ನೋಡಾ,-
    ನಿರವಯ ಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು ಚೆನ್ನಬಸವಣ್ಣ./250

  251. ಆ ಶಿಷ್ಯನ ಕರಣದ ಮೇಲಣ ಪೂರ್ವಾಶ್ರಯವ ಕಳೆದೆವೆಂದು
    ಹೂಸಿ ಹುಂಡನ ಮಾಡಿ ಗುರುವಿನ ಕೈ ಮುಟ್ಟೆ
    ಹೋಯಿತ್ತೆಂಬ ಸಂದಣಿಯಲ್ಲಿ ಹೋಗದು ನಿಲ್ಲು.
    ಪಂಚೇಂದ್ರಿಯದ ಮೇಲಣ ಇಂದ್ರಿಯಲಿಕ್ತವ ತೊಡೆದು,
    ಲಿಂಗಲಿಕ್ತವ ಮಾಡುವಡೆ ಶಿಷ್ಯನ ಕೈಯಲಲ್ಲದೆ,
    ಗುರವಿನ ಕೈಯಲಾಗದು ನಿಲ್ಲು.
    ಪಂಚೇಂದ್ರಿಯ ಪ್ರಾಣ ಸಂಯೋಗದಲ್ಲಿ ಭವಿಗೆ ಮಾಡಿದ ಬೋನವನು
    ಭಕ್ತನ ಕಾಣಲೀಯದೆ ಮಾಡುವುದು ಸಯಿದಾನ.
    ಲಿಂಗವಿಲ್ಲದ ಗುರು, ಗುರುವಿಲ್ಲದ ಶಿಷ್ಯ,
    ಒಂದಕ್ಕೊಂದಿಲ್ಲದ ಗುಹೇಶ್ವರ ನಿಮ್ಮ ಶರಣನ ನಿಲವ
    ಚೆನ್ನಬಸವಣ್ಣ ಬಲ್ಲನು./251

  252. ಆಕಾರ ನಿರಾಕಾರವೆಂಬೆರಡೂ ಸ್ವರೂಪಂಗಳು ;
    ಒಂದು ಆಹ್ವಾನ, ಒಂದು ವಿಸರ್ಜನ,
    ಒಂದು ವ್ಯಾಕುಳ, ಒಂದು ನಿರಾಕುಳ.
    ಉಭಯಕುಳರಹಿತ ಗುಹೇಶ್ವರಾ-ನಿಮ್ಮ ಶರಣ ನಿಶ್ವಿಂತನು./252

  253. ಆಕಾರನಿರಾಕಾರವೆಂಬೆರಡೂ ತಾನೆ;
    ದಿಟ ದಿಟ ತಪ್ಪದು ಕೇಳಾ.
    ಆಕಾರಕ್ಕೆ ಭಾವವೆ ಪ್ರಾಣ (ಪ್ರಮಾಣ?)
    ನಿರಾಕಾರಕ್ಕೆ ಮಹಾಜ್ಞಾನವೆ ಪ್ರಾಣ (ಪ್ರಮಾಣ?)-
    ಇಂತೀ ಉಭಯಕುಳಕ್ಕೆ ಇದು ಲಕ್ಷಣ ಕೇಳಾ.
    ಎರಡರೊಳಗೆ ಆವ ಮುಖದಲ್ಲಿ ಇಪ್ಪಾತನು,
    ಆ ಮುಖದಲ್ಲಿ ಶುದ್ಧನಾಗದನ್ನಕ್ಕರ
    ಗುಹೇಶ್ವರಲಿಂಗಕ್ಕೆ ದೂರ ಕೇಳಾ ಸಂಗನಬಸವಣ್ಣಾ./253

  254. ಆಕಾಶ ಒಂದಂಡಜ, ಪೃಥ್ವಿ ಒಂದಂಡಜ (ಒಂದು ಪಿಂಡಜ?)
    ಆ ಎರಡರ ಮಧ್ಯದಲ್ಲಿ ಪಕ್ಷಿ ಮರಿಗಳನಿಕ್ಕಿತ್ತ ಕಂಡೆ.
    ತುಪ್ಪುಳು ಬಾರದು ಅದರೊಪ್ಪವನೇನೆಂಬೆನು ಗುರುವೆ ?
    ಬಯಲನೆ ಉಡುಗಿತ್ತು ನಿರ್ವಯಲನೆ ಗೂಡು ಮಾಡಿತ್ತು,
    ಉರಿಯನೆ ಉಂಡಿತ್ತು ಮಧುರಸವನೆ ಹಿಂಡಿತ್ತ ಕಂಡೆ.
    ಪಕ್ಷಿಗೆ ಪಕ್ಕ ಬಂದಿತ್ತು ಗಗನಕ್ಕೆ ಹಾರಿತ್ತು !
    ಹಾರಿ ಹೋಗುತ್ತ ನಮ್ಮ ಗುಹೇಶ್ವರಲಿಂಗವ ಕೂಡಿತ್ತ ಕಂಡೆ !/254

  255. ಆಕಾಶದ ಬೀಜ ಅಗ್ನಿಯಲೊದಗಿ, ಶಾಖವಿಲ್ಲದೆ ಮೊಳೆತು ಪಲ್ಲವಿಸಿತ್ತು.
    ಅರಿದೆಹೆನೆಂಬವನನಾರಡಿಗೊಂಡಿತ್ತು.
    ಈ ನಿರ್ಣಯವನರಿಯದ ಮಾನವಾ,
    ಗುಹೇಶ್ವರನೆಂಬುದು ಬಯಲ ವಿಕಾರ/255

  256. ಆಕಾಶದಂತರಂಗದಲ್ಲಿ ತೋರುವ ಸಕಲ ವರ್ಣಂಗಳ ವರ್ಣಿಸುವರು,
    ನಿರವಯದ ನಿಲವನೆತ್ತ ಬಲ್ಲರು ?
    ಅರಿವನಾಶ್ರಯಿಸಿ ಮನವ ಮುಂದುಗೊಂಡು
    ನೆನಹಿಂಗೆ ಗುರಿಯಾದವರೆಲ್ಲರೂ ನಿರವಯದ ನಿಲವನೆತ್ತ ಬಲ್ಲರು ?
    ವರ್ಣನಾಮವಳಿಯದಾಗಿ.
    ಆಕಾಶದಂತರಂಗ ಬಹಿರಂಗವೆನಲಿಲ್ಲದ ನಿರವಯವು !
    ಗುಹೇಶ್ವರನೆನಲಿಲ್ಲದ ನಿಲವಿಗೆ ಸೊಲ್ಲು ಸಲ್ಲುವುದೆ ?/256

  257. ಆಕಾಶದಲ್ಲಾಡುವ ಪಕ್ಷಿ ಆಕಾಶವ ನುಂಗಿ ಮಹದಾಕಾಶದಲ್ಲಾಡುತ್ತಿದ್ದಿತ್ತು.
    ಆಡುವ ಪಕ್ಷಿಯೊಳಗಾದ ಆಕಾಶದ ಪಕ್ಷಿಗೆ ತೆರಪುಗೊಟ್ಟ ಮಹದಾಕಾಶವನೊಂದು
    ಶಂಕೆಯಲ್ಲಿ ಷಡಾಂಗವಾ ಎಲೆಯುದುರಿದ ವೃಕ್ಷದಂತುಲುಹಡಗಿದ ಶರಣ,
    ಗಗನದ ಪರಿ.
    ಬೆಳಗಿನೊಳಗೆಂಬುದು ಮುನ್ನಿಲ್ಲವೋ ವಾಯುರೂಪಿನ ಪರಿಯಂತುಟಲ್ಲವೊ,
    ಪ್ರಾಣಲಿಂಗ ಲಿಂಗಪ್ರಾಣವೆಂಬುದು ಮುಂದಿಲ್ಲವೊ.
    ಯಥಾಲಿಂಗ ತಥಾ ಶರಣನೆಂಬುದು ಮುನ್ನಿಲ್ಲವೋ.
    ನಾನೂ ಇಲ್ಲ ನೀನೂ ಇಲ್ಲ ಮತ್ತೇನೂ ಏನೂ ಇಲ್ಲವೋ
    ಗುಹೇಶ್ವರನೆಂಬ ಲಿಂಗ ನಿಶ್ಚಿಂತ ನಿರ್ವಯಲವೋ/257

  258. ಆಕಾಶವ ಕಪ್ಪೆ ನುಂಗಿದಡೆ ಆಗಳೆ ಹತ್ತಿತ್ತು ರಾಹು!
    ನೋಡಿರೆ; ಅಪೂರ್ವ ಅತಿಶಯವ!
    ಅಂಧಕ ಹಾವ ಹಿಡಿದ.-
    ಇದು ಕಾರಣ; ಲೋಕಕ್ಕೆ ಅರುಹದೆ,
    ನಾನು ಅರಿದೆನು ಗುಹೇಶ್ವರಾ./258

  259. ಆಕಾಶವ ನುಂಗಿದ ಸರ್ಪನ ಫಣಿಯ ಮಣಿಯೊಳಗಣ ಕಪ್ಪೆ,
    ವಾಯುವನಲನ ಸಂಚವ ನುಂಗಿತ್ತದೇನೊ ?
    ರೂಹಿಲ್ಲದ ತಲೆಗೆ, ಮೊಲೆ ಮೂರಾಯಿತ್ತ ಕಂಡೆ !
    ಉಂಡಾಡುವ ಶಿಶುವಿನ ಕೈಯಲ್ಲಿ ಮಾಣಿಕದಾರತಿಯ ಕಂಡೆ !
    ಕಾಯವಿಲ್ಲದ ಹೆಣನ ವಾಯುವಿಲ್ಲದೆ ಜವನೆಳೆದೊಯ್ದನೆಂಬ
    ವಾಯಕ್ಕೆ ವಾಯವನೇನೆಂಬೆ ಗುಹೇಶ್ವರಾ ! /259

  260. ಆಕಾಶವ ಮೀರುವ ತರುಗಿರಿಗಳುಂಟೆ ?
    ನಿರಾಕಾರವ ಮೀರುವ ಸಾಕಾರವುಂಟೆ ?
    ಗುಹೇಶ್ವರಲಿಂಗವ ಮೀರುವ ಒಡೆತನವುಂಟೆ, ಸಂಗನಬಸವಣ್ಣಾ ?/260

  261. ಆಕಾಶವನಡರುವಂಗೆ ಅಟ್ಟಗೋಲ ಹಂಗೇಕೊ ?
    ಸಮುದ್ರವ ದಾಟುವಂಗೆ ಹರಿಗೋಲ ಹಂಗೇಕೊ ?
    ಸೀಮೆಯ ಮೀರಿದ ನಿಸ್ಸೀಮಂಗೆ ಸೀಮೆಯ ಹಂಗೇಕೊ ?
    ಗುಹೇಶ್ವರಲಿಂಗದಲ್ಲಿ ನಿಸ್ಸೀಮ ಸಿದ್ಧರಾಮಯ್ಯದೇವರಿಗೆ
    ಲಿಂಗವೆಂದೇನು ಹೇಳಾ ಚನ್ನಬಸವಣ್ಣಾ ?/261

  262. ಆಗ ಹುಟ್ಟಿ ಬೇಗ ಸಾವ ಕಾಯಗೊಂಡ ಮಾನವಾ,
    ನೀ ದೇವರೆನಿಸಿಕೊಂಬುದೊಂದು ಆವುದಂತರ ಹೇಳಾ ?
    ದೇವರು ಸಾವಡೆ, ದೇವರಿಗೂ ಸಾವರಿಗೂ ಆವುದಂತರ ಹೇಳಾ ?
    ದೇವರಿಗೆ ದೇವಲೋಕ, ಮಾನವರಿಗೆ ಮತ್ರ್ಯಲೋಕ,
    ಗುಹೇಶ್ವರ ಅಲ್ಲಯ್ಯಂಗೆ ಇನ್ನಾವ ಲೋಕವೂ ಇಲ್ಲ./262

  263. ಆಗದಂತೆ ಆದೆನು, ಜಗದ ಆಗುವ ಕಂಡು ಬಲ್ಲೆನಾಗಿ ಒಲ್ಲೆನು
    ಜಗ ನಿಲ್ಲದು ಕಂಡಯ್ಯಾ.
    ಮಾಡಿ ಮಾಡಿ ಕೆಡಿಸದಿರಾ, ನೀ ನಾಡಿಂಗೆ ಮರುಳಾಗದಿರಾ !
    ಬೇಡು ಗುಹೇಶ್ವರಾ ನಿರಾಳವನೆನ್ನಲ್ಲಿ./263

  264. ಆಗಮಪುರುಷರಿರಾ,
    ನಿಮ್ಮ ಆಗಮ ವಾಯವಾಗಿ ಹೋಯಿತ್ತಲ್ಲಾ.
    ವಿದ್ಯಾಪುರುಷರಿರಾ ನಿಮ್ಮ ವಿದ್ಯೆ ಅವಿದ್ಯೆಯಾಗಿ ಹೋದಲ್ಲಿ,
    ಬರುಮುಖರಾಗಿ ಇದ್ದಿರಲ್ಲಾ.
    ವೇದಪುರುಷರಿರಾ ನಿಮ್ಮ ವೇದ ಹೊಲಬುದಪ್ಪಿ ಹೋದಲ್ಲಿ,
    ವೇದವೇ ದೈವವೆಂದು ಕೆಟ್ಟಿರಲ್ಲಾ.
    ಪುರಾಣಪುರುಷರಿರಾ ನಿಮ್ಮ ಪುರಾಣ ವಿಚಾರಭ್ರಷ್ಟವಾಗಿ ಹೋದಲ್ಲಿ,
    ನೀವು ಒಡನೆ ಭ್ರಷ್ಟರಾಗಿ ಹೋದಿರಲ್ಲಾ.
    ಶಾಸ್ತ್ರಪುರುಷರಿರಾ, ನಿಮ್ಮ ಶಾಸ್ತ್ರದ ಮಹಾಪಥ ಹೊನಲಲ್ಲಿ ಹೋದಲ್ಲಿ
    ಭಕ್ತದೇಹಿಕದೇವನೆಂದರಿಯದೆ ಕೆಟ್ಟಿರಲ್ಲಾ.
    `ಯತ್ರ ಶಿವಸ್ತತ್ರ ಮಾಹೇಶ್ವರ’ನೆಂದು ಹೇಳಿತ್ತು ಮುನ್ನ,
    ಅಂತು ಭಕ್ತ, ನಿತ್ಯ ಸತ್ಯ ಸನ್ನಹಿತ ಗುಹೇಶ್ವರಾ-ನಿಮ್ಮ ಶರಣ./264

  265. ಆಗಮ್ಯ ಅಗೋಚರನೆನಿಸಿಕೊಂಡು, ಅವರಿವರ ಕೈಗೆ ಎಂತು ಬಂದೆ ?
    ಉಗುರುಗಳೆಲ್ಲ ಸುತ್ತಿದವೆ? ಅಗ್ಘವಣಿ ಪತ್ರೆ ಅರತವೆ ಅಯ್ಯಾ ?
    ಎನ್ನ ಕರಸ್ಥಲದೊಳಗಿರ್ದು ಎನ್ನೊಡನೆ ನುಡಿಯೆ,
    ನಿನ್ನ ಹಲ್ಲ ಕಳೆದಡೆ ಒಡೆಯರುಂಟೆ ಗುಹೇಶ್ವರಾ?/265

  266. ಆಗ್ಘವಣಿ ಪತ್ರೆ ಪುಷ್ಪ ಧೂಪ ದೀಪ ನಿವಾಳಿಯಲ್ಲಿ
    ಪೂಜಿಸಿ ಪೂಜಿಸಿ ಬಳಲುತ್ತೈದಾರೆ.
    ಏನೆಂದರಿಯರು ಎಂತೆಂದರಿಯರು.
    ಜನ ಮರುಳೊ ಜಾತ್ರೆ ಮರುಳೊ ಎಂಬಂತೆ;
    ಎಲ್ಲರೂ ಪೂಜಿಸಿ, ಏನನೂ ಕಾಣದೆ,
    ಲಯವಾಗಿ ಹೋದರು ಗುಹೇಶ್ವರಾ./266

  267. ಆಚಾರ ಅನಾಚಾರವೆಂದಡೆ ಹೇಳಿಹೆ ಕೇಳಿರಣ್ಣಾ :
    ಸರ್ವಪದಾರ್ಥಂಗಳ ಇದಿರಿಟ್ಟಲ್ಲಿ ಇಷ್ಟಲಿಂಗಕ್ಕೆ ಕೊಟ್ಟು
    ಪ್ರಸಾದವೆಂದು ಕೊಂಡು ಸುಯಿಧಾನವಿಲ್ಲದೆ ಸೂಸಿದಲ್ಲಿ, ದೂಷಿಸಿ
    ಪ್ರಸಾದದಲ್ಲಿ ಒಳ್ಳಿತು ಹೊಲ್ಲಹ ವಿಷ ಸಿಹಿ ಹುಳಿ ಸಪ್ಪೆಯೆಂದು
    ಜರೆದು ಝಂಕಿಸಿ ಬಿಡುವ ಕರ್ಮಿಗಳು ನೀವು ಕೇಳಿರೊ-
    ಜ್ಯೋತಿಯ ತಂದು ಬತ್ತಿಯ ಮುಟ್ಟಿಸಲು ಜ್ಯೋತಿಯಪ್ಪಂತೆ ಕಾಣಿರೊ
    ಒಂದು ವೇಳೆ ಪ್ರಸಾದವೆಂದು ಕೊಂಡು, ಮತ್ತೊಂದು ವೇಳೆಯಲ್ಲಿ
    ಎಂಜಲೆಂದು ನಿಂದಿಸುವ
    ಪ್ರಸಾದದ್ರೋಹಿಗಳಿಗೆ ದೇವಭಕ್ತರೆನ್ನಲಾಗದು.
    ಅವರಿಗೆ ಸೂರ್ಯಚಂದ್ರರುಳ್ಳನ್ನಕ್ಕ ನರಕ.
    ಎಕ್ಕಲನರಕದಲ್ಲಿ ಮುಳುಗಾಡುತ್ತಿಪ್ಪವರ ಮುಖವನೆನಗೆ ತೋರದಿರಾ
    ಗುಹೇಶ್ವರ./267

  268. ಆಚಾರ ಅನಾಚಾರವೆಂದು ಎರಡು ಪ್ರಕಾರವಾಗಿಪ್ಪುದು.
    ಆಚಾರವೆಂದಡೆ ಹೇಳಿಹೆ ಕೇಳಿರೊ:
    ಸರ್ವಪದಾರ್ಥಂಗಳು ಇದಿರಿದ್ದಲ್ಲಿ ಆ ಪದಾರ್ಥಂಗಳ ಶುದ್ಧವ ಮಾಡಿ
    ಲಿಂಗಕ್ಕೆ ಸಮರ್ಪಿಸುವಲ್ಲಿ ಭೋಜ್ಯಭೋಜ್ಯಕ್ಕೆ
    ಶಿವಮಂತ್ರಯುಕ್ತನಾಗಿ ಪ್ರಸಾದಗ್ರಾಹಕನಾಗಿರಬಲ್ಲಡೆ
    ಆತನೆ ಪ್ರಸಾದಿ, ವೀರಮಾಹೇಶ್ವರನೆಂಬೆ.
    ತಟ್ಟುವ ಮುಟ್ಟುವ ತಾಗು[ವ] ನಿರೋಧವೆಲ್ಲವನು
    ಹಲ್ಲುಕಡ್ಡಿ ದರ್ಪಣ ಮೊದಲಾದ ಸರ್ವವ್ಯವಹಾರದಲ್ಲಿ
    ಆವುದಾನೊಂದು ಭೋಗಿಸಲು, ಆವುದಾನೊಂದು ಕ್ರೀಡಿಸಲು
    ಲಿಂಗವೆ ಪ್ರಾಣವಾಗಿರಬಲ್ಲಡೆ ಆ ಮಹಾಂತನೆ ಸರ್ವಾಚಾರಸಂಪನ್ನನೆಂಬೆ.
    ಅಂತಪ್ಪ ಮಹಾತ್ಮನ ತ್ರಿವಿಧಮುಖವನರಿದು ಕರುಣಪೂರಿತನಾಗಿ
    ಪ್ರಸಾದವ ಕೊಂಡಡೆ ಪಾವನವೆಂಬೆ
    ಆತನ ಕೇವಲ ಮಹಾನುಭಾವ ಪರಮಜ್ಞಾನಪರಿಪೂರ್ಣನೆಂಬೆ,
    ಆ ಮಹಾತ್ಮನೆ ತ್ರೈಜಗದೊಡೆಯನೆಂಬೆ ಗುಹೇಶ್ವರಾ./268

  269. ಆಚಾರ ಸನ್ನಹಿತವಾಗಿ ಬಂದಡೆ,
    ಜಂಗಮ ಬೇರಲ್ಲದಿರ್ದಡೆ ಭೂತಪ್ರಾಣಿ ಎಂಬೆ.
    ಅರ್ತಿಯಲ್ಲಿ ಲಿಂಗವೆ ಜಂಗಮವೆಂದರಿದು ಮಾಡುವಲ್ಲಿ,
    ಭಕ್ತನಲ್ಲದಿರ್ದಡೆ ಫಲದಾಯಕನೆಂಬೆ.
    ಸ್ಥಾವರ ಜಂಗಮ ಒಂದೆ ಎನಬಲ್ಲಡೆ, ಶರಣ ಸಂಬಂದಿ,
    ಅಲ್ಲದಿರ್ದಡೆ ಪೂಜಕನೆಂಬೆ.
    ಇಂತೀ ತ್ರಿವಿಧ ನಿರ್ಣಯದ ಸೋಂಕಿನ ಸುಖವ,
    ಗುಹೇಶ್ವರ ಲಿಂಗದಲ್ಲಿ ಬಸವಣ್ಣನೊಬ್ಬನೆ ಬಲ್ಲನು/269

  270. ಆಚಾರಲಿಂಗವಿಡಿದು ಗುರುಲಿಂಗವ ಕಾಣಬೇಕು.
    ಗುರುಲಿಂಗವಿಡಿದು ಶಿವಲಿಂಗವ ಕಾಣಬೇಕು.
    ಶಿವಲಿಂಗವಿಡಿದು ಜಂಗಮಲಿಂಗವ ಕಾಣಬೇಕು.
    ಜಂಗಮಲಿಂಗವಿಡಿದು ಪ್ರಸಾದಲಿಂಗವ ಕಾಣಬೇಕು.
    ಪ್ರಸಾದಲಿಂಗವಿಡಿದು ಮಹಾಲಿಂಗವ ಕಾಣಬೇಕು.
    ಇಂತೀ ಷಡುಸ್ಥಲದ ಧಾತುವ ಸಂಬಂದಿಸಿ
    ಒಂದು ಮಾಡಿಕೊಂಡಿಪ್ಪ ಈ ಕರಸ್ಥಲದ ಅನುವ
    ಗುಹೇಶ್ವರನ ಶರಣ ಸಂಗನಬಸವಣ್ಣ ಬಲ್ಲ,
    ಬೆಸಗೊಂಬ ಬಾರಾ ಸಿದ್ಧರಾಮಯ್ಯಾ/270

  271. ಆಚಾರವಂಗಲೇಪವಾಗಿ, ಕಾಯಮುಕ್ತನು ನೀನು ನೋಡಯ್ಯಾ.
    ಅರಿವು ಅಂತರಂಗದಲ್ಲಿ ಭರಿತವಾಗಿಪ್ಪುದಾಗಿ,
    ಮನೋಮುಕ್ತನು ನೀನು ನೋಡಯ್ಯಾ.
    ಅರ್ಪಿತ ಪರಿಣಾಮದಲ್ಲಿ ಅವಿರಳವಾಗಿಪ್ಪುದಾಗಿ
    ಸರ್ವಾಂಗಲಿಂಗೈಕ್ಯನು ನೀನು ನೋಡಯ್ಯಾ.
    ಮುಕ್ತನಲ್ಲೆಂಬ ಬಳಕೆಯ ಮಾತಂತಿರಲಿ,
    ಬಯಲ ಭ್ರಮೆಯ ಕಳೆದು ಭವದ ಬಟ್ಟೆಯ ಹರಿದಿಪ್ಪುದ
    ನಮ್ಮ ಗುಹೇಶ್ವರಲಿಂಗ ಬಲ್ಲನು
    ನೀನು ಮರೆಯಾಗಿ ನುಡಿವರೆ ಸಂಗನಬಸವಣ್ಣಾ./271

  272. ಆಚಾರವರಿಯದೆ, ವಿಭವವಳಿಯದೆ,
    ಕೋಪವಡಗದೆ ತಾಪ ಮುರಿಯದೆ,
    ಬರಿದೆ ಭಕ್ತರಾದೆವೆಂದು ಬೆಬ್ಬನೆ ಬೆರೆಯುವ ಕೇಡಿಂಗೆ
    ನಾನು ಮರುಗುವೆ ಕಾಣಾ ಗುಹೇಶ್ವರಾ./272

  273. ಆಚಾರವೆ ಲಿಂಗ, ಆ ಆಚಾದರಿವೆ ಜಂಗಮ
    ಅಂಗವೆ ಲಿಂಗ, ಚೈತನ್ಯವೆ ಜಂಗಮ
    ಆ ಜಂಗಮದ ಸೇವೆಯೆ ಲಿಂಗ, ಕೈಕೊಂಬುದೆ ಜಂಗಮ.
    ನಮ್ಮ ಗುಹೇಶ್ವರನ ಶರಣರು ಮಚ್ಚುವಂತೆ,
    ಮಡಿವಾಳನ ಕಾಯಕದಂತೆ, ನಿರೂಪಿಸಿದ
    ಚನ್ನಬಸವಣ್ಣನ ಕರುಣದಲ್ಲಿ ಬದುಕಾ ಚಂದಯ್ಯಾ./273

  274. ಆಚಾರವೆ ಸ್ವರೂಪವಾದ ಕುರುಹಿನ ಅಂಗವಿಡಿದು
    ಅಂಗ ಅನಂಗವೆಂಬವೆರಡನೂ ಹೊದ್ದದ ಮಹಿಮ
    ನೀನು ನೋಡಾ, ಚೆನ್ನಬಸವಣ್ಣಾ !
    ಅಂಗವೆ ಆಚಾರವಾಗಿ ಇರಬಲ್ಲೆ
    ಆಚಾರವೆ ಅಂಗವಾಗಿ ಇರಬಲ್ಲೆಯಾಗಿ
    ಅಂಗವಿಲ್ಲದ ಅಪ್ರತಿಮನು ನೀನು ನೋಡಾ.
    ಆಚಾರವೆ ಆಯತ ಆಚಾರವೆ ಸ್ವಾಯತ
    ಆಚಾರವೆ ಸನ್ನಿಹಿತ ಆಚಾರವೆ ಪ್ರಾಣವಾಗಿಪ್ಪೆಯಾಗಿ
    ಎನ್ನ ಗುಹೇಶ್ವರಲಿಂಗದಲ್ಲಿ ನಿನ್ನ ಆಚಾರ ಬಿಕ್ಷವನಿಕ್ಕು
    ಚೆನ್ನಬಸವಣ್ಣಾ./274

  275. ಆಡಂಬರದೊಳಗಾಡಂಬರವಿದೇನೊ?
    ಹಾರಿತ್ತು ಬ್ರಹ್ಮನೋಲಗ, ಕೆದರಿತ್ತಿದೇನಯ್ಯಾ ?
    `ಸಾರು ಸಾರು’ ಎನ್ನುತ್ತ ವಿಷ್ಣು ಅಜರ ನುಂಗಿ
    ರುದ್ರಯೋನಿಯೊಳಡಗಿತ್ತಿದೇನೊ !
    ಬೇರಿಲ್ಲದ ಮರ, ನೀರಿಲ್ಲದ ನೆಳಲೊಳಗೆ
    ತೋರಿದ ಪ್ರತಿಬಿಂಬವ ನಾನೇನೆಂಬೆನು ಗುಹೇಶ್ವರಾ ?/275

  276. ಆಡಾಡ ಬಂದ ಕೋಡಗ ಹಂದರವನೇರಿತ್ತಲ್ಲಾ !
    ನೋಡಬಂದವರ ಕಣ್ಣೆಲ್ಲಾ ಒಡೆದವು.
    ಬೆಣ್ಣೆಯ ತಿಂದವರ ಹಲ್ಲೆಲ್ಲಾ ಹೋದವು !
    ಇದೇನು ಸೋಜಿಗ ಹೇಳಾ ಗುಹೇಶ್ವರಾ?/276

  277. ಆಡಿಂಗೆ ದಾಯಾದ್ಯರಾದಿರಲ್ಲಾ.
    ಕಾಡ ಗಿಡುವಿಂಗೆ ಮ್ಯತ್ಯುವಾದಿರಲ್ಲಾ.
    ಅರಿವನರಿಯ ಹೇಳಿ,
    ಶ್ರೀಗುರು ಕುರುಹ ಕೈಯಲ್ಲಿ ಕೊಟ್ಟಡೆ
    ಅರಿವನೆ ಮರೆದು ಕುರುಹ ಪೂಜಿಸುವ
    ಕುರಿಗಳ ನೋಡಾ ಗುಹೇಶ್ವರಾ/277

  278. ಆಡು ಮಂದರಗಿರಿಯ ಕೋಡು ಬ್ರಹ್ಮಶಿಖಿಯ,
    ಬೇಡಿತ್ತನೀವ ವರದಾನಿಯನೇನೆಂಬೆನು?
    ಆಡುತ್ತಾಡುತ್ತ ಅನಲನುರಿದು ಎರಡೊಂದಾದ ಪರಿಯ ನೋಡಾ!
    ನೋಡುತ್ತ ನೋಡುತ್ತ ಅನಲನಲ್ಲಿಯೆ ಅರತು ಕೂಡಿದ,
    ಮಹಾಘನವನೇನೆಂಬೆನು ಗುಹೇಶ್ವರಾ ?/278

  279. ಆಡುತಾಡುತ ಬಂದ ಕೋಡಗ,
    ಜಪವ ಮಾಡುವ ತಪಸಿಯ ನುಂಗಿತ್ತಲ್ಲಾ !
    ಬೇಡ ಬೇಡೆಂದಿತ್ತು, ಮುಂದಣ ಕೇರಿಯ ಮೊಲನೊಂದು !
    ಮುಂದಣ ಮೊಲನ ಹಿಂದಣ ಕೋಡಗವ
    ಕಂಬಳಿ ನುಂಗಿತ್ತು ಗುಹೇಶ್ವರಾ./279

  280. ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ
    ಮಲತ್ರಯಂಗಳಳಿದು ನಿರ್ಮಲನಾದ ಶಿಷ್ಯ;-
    ಕಾಯಜೀವದ ಭ್ರಾಂತುಸೂತಕ ಹಿಂಗಿ
    ನಿಶ್ಯಂಕನಾದ ಗುರು-
    ಈ ಉಭಯ ಭಾವದೊಳಗೆ
    ಆವುದು ಮುಂದು ಆವುದು ಹಿಂದೆಂದರಿಯಬಪ್ಪುದು ?
    ಕರಸ್ಥಲಕ್ಕೆ ಕಾರುಣ್ಯವ ಮಾಡಿದಡೆ ಮನಸ್ಥಲಕ್ಕೆ ಹಂಗಿಲ್ಲ.
    ಮನಸ್ಥಲದಲ್ಲಿ ಸೆರಗೊಡ್ಡಿ ಬೇಡಿರ್ದಡೆ
    ಕರಸ್ಥಲದ ಲಿಂಗ ಕೈಸಾರಿತ್ತು !
    ಗುರುಸ್ಥಲದ ನಿಲವು ಪರಸ್ಥಲದಲಡಗಿದರೆ
    ಭಾವ ಬಳಲಿತ್ತಿದೇನೊ (ಬೆರಗಾಯಿತ್ತು?) ಗುಹೇಶ್ವರಾ. ?/280

  281. ಆತ್ಮನೆಂಬ ಹುತ್ತಿನೊಳಗೆ
    ನಿದ್ರೆಯೆಂಬ ಕಾಳೋರಗನಟ್ಟಿ ಕಚ್ಚೆ,
    ಅಂಜನಸಿದ್ಧರ [ಅಂಜನ]ಹೋಯಿತ್ತು.
    ಘುಟಿಕಾಸಿದ್ಧರ ಘುಟಿಕೆಯುರುಳಿ ಬಿದ್ದಿತ್ತು.
    ಮಂತ್ರಸಿದ್ಧರ ಮಂತ್ರ ಮರೆದು ಹೋದವು.
    ಇದರ ವಿಷವ ಪರಿಹ [ರಿಸಿದವರ ಕಾ]ಣೆ.
    ಈ ರಾಹುವಿನ ವಿಷದಿಂದ ಮೂರು ಲೋಕದವರೆಲ್ಲರೂ
    ಮೂಛರ್ಾಗತವಾದುದ ಕಂಡು
    ನಾನು ಪರಮಭಕುತಿಬಿಕ್ಷೆಯನುಂಡು
    ಮಂಡೆ ಬೋಳಾದೆನು ಕಾಣಾ ಗುಹೇಶ್ವರಾ./281

  282. ಆತ್ಮಸಂಗವಾದವರ್ಗೆ ಬಹಿರ್ಭಾವವಿಲ್ಲ.
    ಇಂದ್ರಿಯಂಗಳು ಲಿಂಗವಾದವರ್ಗೆ ವಿಷಯಸೂತಕವಿಲ್ಲ.
    ಕರಣಂಗಳು ಲಿಂಗವಾದವರ್ಗೆ ಹಿಂದು ಮುಂದೆಂಬ ಸಂದೇಹವಿಲ್ಲ.
    ಲಿಂಗಾಲಯವು ಮನವಾದವರ್ಗೆ ಇಹಪರವೆಂಬ ಸಂಶಯವಿಲ್ಲ.
    ಲೋಕದಂತೆ ನಡೆವರು ಲೋಕದಂತೆ ನುಡಿವರು,
    ಮನವು ಮಹಾಲಿಂಗದಲ್ಲಿ ಪರಿಣಾಮಿಗಳು !
    ಅಂತಪ್ಪ ಮಹಾನುಭಾವಿಗಳ ಲೋಕದ ಪ್ರಪಂಚಿಗಳೆಂದಡೆ
    ಮನೋಮಧ್ಯದಲ್ಲಿಪ್ಪ ಜ್ಯೋತಿರ್ಲಿಂಗವು ನಗದಿಪ್ಪನೆ ಗುಹೇಶ್ವರಾ ?/282

  283. ಆದಿ ಅನಾದಿ ಎಂಬೆರಡರ ಮೂಲವನೆತ್ತಿ ತೋರಿದನಯ್ಯಾ ಬಸವಣ್ಣನು.
    ಆದಿ ಲಿಂಗ ಅನಾದಿ ಜಂಗಮವೆಂಬ (ಶರಣನೆಂಬ?) ಭೇದವ,
    ವಿವರಿಸಿ ತೋರಿದನಯ್ಯಾ ಬಸವಣ್ಣನು.
    ಕಾಯದ ಜೀವದ ಸಂಬಂಧವ,
    ಅಸಂಬಂಧವ ಮಾಡಿ ತೋರಿದನಯ್ಯಾ ಬಸವಣ್ಣನು.
    ಎನ್ನ ಆದಿ ಅನಾದಿಯನು ಬಸವಣ್ಣನಿಂದರಿದು
    ಗುಹೇಶ್ವರಲಿಂಗದಲ್ಲಿ ಸುಖಿಯಾದೆನು ಕಾಣಾ ಚನ್ನಬಸವಣ್ಣ./283

  284. ಆದಿ ಅನಾದಿ ಒಂದಾದಂದು, ಚಂದ್ರಸೂರ್ಯರೊಂದಾದಂದು,
    ಧರೆ ಆಕಾಶ ಒಂದಾದಂದು;
    ಗುಹೇಶ್ವರಲಿಂಗನು ನಿರಾಳನು./284

  285. ಆದಿ ಅನಾದಿ ಷಡುದೇವತೆಗಳಿಲ್ಲದಂದು,
    ಒಬ್ಬ ಶರಣ ಷಡಕ್ಷರವನು ಷಡುಸ್ಥಲವನು
    ಒಳಕೊಂಡು ಇರ್ದನಯ್ಯಾ.
    ಆ ಶರಣನ ನೆನಹಿನ ಲೀಲೆಯಿಂದ
    ಪರಶಿವನ ಮೂಲಜ್ಞಾನ ಪಂಚಶಕ್ತಿಗಳಾಗಿ
    ತೋರಿ ಬೆರಸಿದ್ದವಯ್ಯಾ,
    ಇದ್ದ ಕಾರಣ ಶರಣನ ಪರಮಶಾಂತಿ
    ಭಕ್ತ್ಯಂಗನೆಯಾಗಿ ತೋರಿ ಬೆರಸಿದ್ದಳಯ್ಯ.
    ಇದ್ದ ಕಾರಣ ಶರಣನ ಮಹಾಬೆಳಗು
    ಷಡುಸ್ಥಲಬ್ರಹ್ಮಿಗಳಾಗಿದ್ದಿತಯ್ಯಾ.
    ಇದ್ದ ಕಾರಣ ಶರಣನ ಪರಶಿವನ ಶಕ್ತಿಗಳ ಮಹಾಬೆಳಗು
    ಷಡುಭಕ್ತ್ಯಂಗನೆಯಾಗಿ ಷಡುಸ್ಥಲ ಭಕ್ತರ ಬೆರಸಿದ್ದವಯ್ಯಾ.
    ಇದ್ದ ಕಾರಣ ಶರಣನೊಳಡಗಿದ ಸುವಾಕುವಕ್ಷರ
    ಲಿಂಗ ಪ್ರಣಮ ಮಂತ್ರ ಚಕ್ರ ಕಮಲ ಸತ್ಕ್ರೀ ಭಸಿತ ರುದ್ರಾಕ್ಷಿ
    ಇಂತಿವೆಲ್ಲಾ ಇವರೊಳಗಡಗಿದ್ದವಯ್ಯಾ.
    ಇದ್ದ ಕಾರಣ ಶರಣನಿವರು ಸಹಿತ ಕೋಟಾನುಕೋಟಿ ಕಾಲವು
    ಪ್ರಮಥಗಣೇಶ್ವರನೆಂಬ ನಾಮವಾಗಿರುತ್ತಿರ್ದನಯ್ಯಾ,
    ನಿಮ್ಮ ಶರಣ ಗುಹೇಶ್ವರಾ/285

  286. ಆದಿ ಅನಾದಿ ಸಂಗದಿಂದಾದವನಲ್ಲ.
    ಸಂಗಸುಖದೊಳಗಿರ್ದವನಲ್ಲ.
    ಇಬ್ಬರ ಸಂಗದಿಂದಾದವನಲ್ಲ.
    ರವಿ ಶಶಿಯ ಬೆಳಗಿನಿಂದ ಬೆಳೆದವನಲ್ಲ.
    ನಾದ ಬಿಂದು ಕಳೆ ಹುಟ್ಟದ ಮುನ್ನ
    ಅಲ್ಲಿಂದತ್ತತ್ತ ಗುಹೇಶ್ವರಾ ನಿಮ್ಮ ಶರಣ/286

  287. ಆದಿ ಅನಾದಿ ಹದಿನಾಲ್ಕುಲೋಕ ಕಾಲ ಕಲ್ಪಿತ ಮಂತ್ರ ತಂತ್ರ
    ಓದು, ನೇಮ, ಸಂಧ್ಯಾ ಸಮಾದಿ ಮೌಂಜಿ ಕರ್ಮ
    ನೀರು ನೇಣು ಯಜ್ಞೋಪವೀತ ಹುಟ್ಟದಂದು
    ಒಬ್ಬ ಶರಣ ಭಕ್ತಿಯ ಮಾಡುತ್ತಿಪ್ಪುದ ಕಂಡೆನಯ್ಯಾ.
    ಆ ಶರಣನ ಭಕ್ತಿಯೆಂಬ ಚಿತ್ಪಿಂಡದೊಳಗೆ
    ಎರಡುಸಾವಿರದೆಂಟುನೂರು ಕೋಟಿ ಯೋಜನದುದ್ದದೊಂದು
    ಮಹಾಲೋಕದಿಂದತ್ತಲರಿಯದಿಪ್ಪ
    ಷಡುಸಾದಾಖ್ಯನಾಯಕರ ಹೆಂಡಿರೆಲ್ಲಾ
    ಮೊಲೆದೆಗೆದು (ಓಲೆದೆಗೆದು?) ಹೋಯಿತ್ತ ಕಂಡೆ ಗುಹೇಶ್ವರಾ./287

  288. ಆದಿ ಅನಾದಿಗಳಿಲ್ಲದಂದಿನ ಕೂಗು;
    ನಾದ ಬಿಂದುಗಳಿಲ್ಲದಂದಿನ ಕೂಗ ಕಂಡು ಕೂಗಿದೆ !
    ಇಡಾ ಪಿಂಗಳ ಸುಷುಮ್ನನಾಳಮಧ್ಯದ ಕೂಗ ಕಂಡು ಕೂಗಿದೆ.
    ಗುಹೇಶ್ವರನೆಂಬ ತಲೆವೊಲನ ದಾಂಟಿ
    ಅಲ್ಲಮ ಕೂಗಿದ ಕೂಗು/288

  289. ಆದಿ ಅನಾದಿಯೆಂಬ (ಯೆಂಬುದ?) ಅಂತರಾತ್ಮನಲ್ಲಿ ತಿಳಿಯಲರಿಯದೆ
    ಆದಿ ದೈವವೆಂದು ಬರಿಯ ಬಹಿರಂಗದ ಬಳಕೆಯನೆ ಬಳಸಿ,
    ಅನ್ಯ ದೈವಂಗಳನಾರಾದಿಸಿ ಕೆಡುತ್ತಿಪ್ಪರು ನೋಡಾ.
    ಅದಕೆ ತಪ್ಪೇನು, ಮಕ್ಕಳಿಗೆ ತಮ್ಮ ಮಾತೆಯೇ ದೈವ.
    ಮಾತೆಗೆ ತನ್ನ ಪುರುಷನೆ ದೈವ, ಪುರುಷಂಗೆ ತನ್ನ ಪ್ರಭುವೆ ದೈವ.
    ಪ್ರಭುವಿಗೆ ತನ್ನ ಪ್ರಧಾನನೆ ದೈವ, ಪ್ರಧಾನಂಗೆ ತನ್ನ ರಾಯನೆ ದೈವ.
    ರಾಯಂಗೆ ತನ್ನ ಲಕ್ಷ್ಮಿಯೆ ದೈವ, ಲಕ್ಷ್ಮಿಗೆ ತನ್ನ ವಿಷ್ಣುವೆ ದೈವ.
    ವಿಷ್ಣುವಿಗೆ ತನ್ನ ರುದ್ರನೆ ದೈವ, ಆ ರುದ್ರಂಗೆ ತನ್ನ ಈಶ್ವರನೆ ದೈವ.
    ಈಶ್ವರಂಗೆ ತನ್ನ ಸದಾಶಿವನೆ ದೈವ, ಸದಾಶಿವಂಗೆ ತನ್ನ ಸರ್ವಗತ ಶಿವನೆ ದೈವ.
    ಸರ್ವಗತ ಶಿವನಿಗೆ ಆಕಾಶಮಹಿಪತಿಯೆಂಬ ಮಹಾಲಿಂಗಕ್ಕೆ
    ಆದಿ ದೇವರುಳ್ಳಡೆ ಹೇಳಿರೆ, ಇಲ್ಲದಿರ್ದಡೆ ಸುಮ್ಮನೆ ಇರಿರೆ.
    ಇದು ಕಾರಣ ಷಡುದರುಶನದ ಚರಾಚರಾದಿಗಳೆಲ್ಲರೂ
    ತಮ ತಮಗಿಷ್ಟ ಕಾಮ್ಯವ ಕೊಡುವುದಕ್ಕೆ
    ವರವುಳ್ಳ ದೇವರೆಂದು ಬೆರವುತ್ತಿಹರು.
    ಅದಕ್ಕೆ ತಪ್ಪೇನು ಅವರಿಗಪ್ಪಂಥ,
    ವರವೀವುದಕ್ಕೆ ಸತ್ಯವುಳ್ಳವನಹುದು.
    ಆದಡೇನು, ಪ್ರಾಣಕ್ಕೆ ಪರಿಣಾಮವ ಕೊಡಲರಿಯವು.
    ಅವರ ಕೈಯಲ್ಲಿ ಆರಾದಿಸಿಕೊಂಬ ದೈವಂಗಳೆಲ್ಲವು.
    ಪೃಥ್ವಿ ಅಪ್ಪು ತೇಜ ವಾಯು ಆಕಾಶ ಮನವೆಂಬಾರರ ಹಂಗಿನಲ್ಲಿ ಸಿಕ್ಕಿ,
    ವಿಭೂತಿಯನ್ನಿಟ್ಟು, ರುದ್ರಾಕ್ಷೆಯಂ ತೊಟ್ಟು
    ಜಪತಪ ಹೋಮ ನೇಮಂಗಳ ಮಾಡಿ
    ಮಾರಣ ಮೋಹನ ಸ್ತಂಭನ ಉಚ್ಚಾಟನ
    ಅಂಜನ ಸಿದ್ಧಿ, ಘುಟಿಕಾ ಸಿದ್ಧಿ, ಮಂತ್ರಸಿದ್ಧಿ, ದೂರದೃಷ್ಟಿ
    ದೂರ ಶ್ರವಣ, ಕಮಲದರ್ಶನ, ತ್ರಿಕಾಲಜ್ಞಾನ,
    ಪರಕಾಯಪ್ರವೇಶವೆಂಬ
    ಅಷ್ಟಮಹಾಸಿದ್ಧಿಗಳಂ ಲಿಂಗದಲ್ಲಿ ವರಂಬಡೆದು
    ತಮ್ಮ ಬೇಡಿದವರಿಗೆ ಕೊಟ್ಟು ತಮ್ಮಿಂದ ಹಿರಿಯರಿಗೆ ನಮಸ್ಕರಿಸಿ,
    ತಮ್ಮಿಂದ ಕಿರಿಯರಿಗೆ ದೇವರೆಂದು ಬೆರವುತ್ತಿಹರು.
    ಕಿರಿದುದಿನ ಅವರ ದೇವರೆನ್ನಬಹುದೆ ?
    ದೇಹಕೇಡಿಗಳ ಸತ್ಯರೆಂದೆನಬಹುದೆ ?
    ಅಸತ್ಯದಲ್ಲಿ ಅಳಿದವರ ಭಕ್ತರೆಂದೆನಬಹುದೆ ?
    ಬಹುರೂಪಿನ ಕಪಟಿಗಳ ನಿತ್ಯರೆನಬಹುದೆ ?
    ದಿನದಿನಕ್ಕೆ ಸತ್ತು ಸತ್ತು ಹುಟ್ಟುವವರ.
    ಅದೆಂತೆಂದಡೆ:
    ಬ್ರಹ್ಮನ ಜಾವವೊಂದಕ್ಕೆ ಒಬ್ಬ ಇಂದ್ರನಳಿವ
    ವಿಷ್ಣುವಿನ ಜಾವವೊಂದಕ್ಕೆ ಒಬ್ಬ ಬ್ರಹ್ಮನಳಿವ
    ರುದ್ರನ ಜಾವವೊಂದಕ್ಕೆ ಒಬ್ಬ ವಿಷ್ಣುವಳಿವ
    ಈಶ್ವರನ ಜಾವವೊಂದಕ್ಕೆ ಒಬ್ಬ ರುದ್ರನಳಿವ
    ಸದಾಶಿವನ ಜಾವವೊಂದಕ್ಕೆ ಒಬ್ಬ ಈಶ್ವರನಳಿವ
    ಸರ್ವಗತನ ಜಾವವೊಂದಕ್ಕೆ ಒಬ್ಬ ಸದಾಶಿವನಳಿವ
    ಲಿಂಗ ಶರಣರ ಒಂದು ನಿಮಿಷಕ್ಕೆ ಒಬ್ಬ ಸರ್ವಗತನಳಿವ
    ಲಿಂಗ ಶರಣರಿಗೆ ಅಳಿವುಳ್ಳಡೆ ಹೇಳಿರೆ ?
    ಇಲ್ಲದಿರ್ದಡೆ ಸುಮ್ಮನಿರಿರೆ.
    ಅಂತಪ್ಪ ಮಹಾಲಿಂಗವನು ಶರಣರನು ಅರಿಯದೆ
    ಷಡುದೇವತೆಗಳು ಮುಖ್ಯವಾದ ಮನು ಮುನಿ ದೇವ ದಾನವ
    ಮಾನವರೆಲ್ಲರೂ ಆರಿಸಿ ತೊಳಲಿ ಬಳಲುತ್ತಿಪ್ಪರು.
    ಅದು ಹೇಗೆಂದಡೆ:
    ಬ್ರಹ್ಮವೇದದಲ್ಲರಸುವನು.
    ವಿಷ್ಣು ಪೂಜೆಯಲ್ಲರಸುವನು.
    ರುದ್ರ ಜಪದಲ್ಲರಸುವನು.
    ಈಶ್ವರ ನಿತ್ಯನೇಮದಲ್ಲರಸುವನು.
    ಸದಾಶಿವನು ನಿತ್ಯ ಉಪಚಾರದಲ್ಲರಸುವನು.
    ಸರ್ವಗತ ಶೂನ್ಯದಲ್ಲರಸುವನು.
    ಗೌರಿ ತಪದಲ್ಲರಸುವಳು, ಗಂಗೆ ಉಗ್ರದಲ್ಲರಸುವಳು.
    ಚಂದ್ರ ಸೂರ್ಯರು ಹರಿದರಸುವರು.
    ಇಂದ್ರ ಮೊದಲಾದಷ್ಟದಿಕ್ಪಾಲಕರು ಆಗಮ್ಯದಲ್ಲರಸುವರು
    ಸಪ್ತ ಮಾತೃಕೆಯರು `ಓಂ ಪಟು ಸ್ವಾಹಾ’ ಎಂಬ ಮಂತ್ರದಲ್ಲರಸುವರು.
    ಸತ್ಯಋಷಿ ದದಿಚಿ ಗೌತಮ ವಶಿಷ್ಠ ವಾಲ್ಮೀಕಿ ಅಗಸ್ತ್ಯ ವಿಶ್ವಾಮಿತ್ರ
    ಇವರು ಮೊದಲಾದ ಸಪ್ತಋಷಿಯರುಗಳೆಲ್ಲಾ
    ತಪ, ಯೋಗ, ಆಗಮಂಗಳಲ್ಲಿ ಅರಸುವರು.
    ಇಂತಿವರೆಲ್ಲರಿಗೆಯೂ ಸಿಕ್ಕಿಯೂ ಸಿಕ್ಕದ ಘನವು
    ಶುಕ್ಲ ಶೋಣಿತವಿಲ್ಲದ ಕಾಮಿ, ಒಡಲಿಲ್ಲದ ರೂಪು,
    ತಲೆಯಿಲ್ಲದ ಗಜ, ಬಾಲವಿಲ್ಲದ ಸಿಂಹ, ನಿದ್ರೆಯಿಲ್ಲದ ನಿರಾಳ.
    ಇಂತೀ ಭೇದಮಂ ಭೇದಿಸಿ ನೋಡಬಲ್ಲಡೆ ಕಣ್ಣ ಮೇಲೆ ಕಣ್ಣುಂಟು.
    ಮತ್ತಾ ಕಣ್ಣ ತೆರೆದು
    ಅಮೃತಕಾಯದೃಷ್ಟಿಯಲ್ಲಿ ನೋಡಿದಡೊಂದೂಯಿಲ್ಲ.
    ನಮ್ಮ ಗುಹೇಶ್ವರ ಲಿಂಗವು ಬಚ್ಚಬರಿಯ ಬಯಲು
    ನಿಶ್ಚಿಂತ ನಿರಾಳನು/289

  290. ಆದಿ ಆಧಾರವಿಲ್ಲದಂದು, ಹಮ್ಮುಬಿಮ್ಮುಗಳಿಲ್ಲದಂದು
    ಸುರಾಳನಿರಾಳವಿಲ್ಲದಂದು, ಸಚರಾಚರವೆಲ್ಲ ರಚನೆಗೆ ಬಾರದಂದು,
    ಗುಹೇಶ್ವರಾ ನಿಮ್ಮ ಶರಣನುದಯಿಸಿದನಂದು./290

  291. ಆದಿ ಇಲ್ಲದಿರ್ದಡೆ ಲಿಂಗಪ್ರಸಾದಿಯೆಂಬೆನು,
    ವ್ಯಾದಿ ಇಲ್ಲದಿರ್ದಡೆ ಜಂಗಮಪ್ರಸಾದಿಯೆಂಬೆನು.
    ಲಾಕಿಕವ ಸೋಂಕದಿರ್ದಡೆ ಸಮಯಪ್ರಸಾದಿಯೆಂಬೆನು.
    -ಇಂತೀ ತ್ರಿವಿಧ ಪ್ರಸಾದಸಂಬಂದಿಯಾದಡೆ
    ಆತನ ಅಚ್ಚಪ್ರಸಾದಿಯೆಂಬೆನು ಕಾಣಾ-ಗುಹೇಶ್ವರಾ/291

  292. ಆದಿ ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ
    ಪ್ರಸಾದಸ್ಥಲ ಪಾದೋದಕಸ್ಥಲಂಗಳನಾರು ಬಲ್ಲರಯ್ಯಾ ?
    ಆದಿಯ ತೋರಿದ, ಅನಾದಿಯನರುಪಿದ,
    ನಾದ ಬಿಂದು ಕಳೆಗಳ ಭೇದಮಂ ಭೇದಿಸಿ ತೋರಿದ,
    ಹುಟ್ಟುವುದ ಮುಟ್ಟದೆ ತೋರಿದ
    ಹುಟ್ಟದೆ ಇದ್ದುದ ಮುಟ್ಟಿ ತೋರಿದ.
    ಎನ್ನ ಅಂತರಂಗವನನುಮಾಡಿ ನಿಜಲಿಂಗವ ನೆಲೆಗೊಳಿಸಿದ.
    ಗುಹೇಶ್ವರನ ಶರಣ ಸಂಗನಬಸವಣ್ಣನಿಂದ
    ಸಕಲಸನುಮತವನರಿದೆನಯ್ಯಾ./292

  293. ಆದಿ ಜಂಗಮ ಅನಾದಿ ಭಕ್ತನೆಂಬುದನಾರು ಬಲ್ಲರು
    ಹೇಳಾ ಬಸವಣ್ಣಾ ನೀನಲ್ಲದೆ ?
    ನಿತ್ಯನಿರಾಕಾರ ಘನವು ಶಕ್ತಿಯಿಲ್ಲದೆ ಇದ್ದಡೆ,
    ಆಗಲೆ ಬಯಲಾದಹುದೆಂದು,
    ನೀನು ಘನಚೈತನ್ಯವೆಂಬ ಕಾಯವ ಧರಿಸಿದಡೆ,
    ಆ ಬಯಲು ಪರಬ್ರಹ್ಮವೆಂಬ ನಾಮವನೆಯ್ದಿತ್ತು.
    ಆ ಮಹಾಘನವು ತನ್ನ ವಿನೋದದಿಂದ ಸಾಕಾರವನೆಯ್ದಿದಡೆ,
    [ನೀನು] ಧರ್ಮವೆಂಬ ಕಾಯವ ಧರಿಸಿ, ಆ ಮೂರ್ತಿಗೆ ಆಧಾರವಾದೆಯಾಗಿ
    ಜಗದ ಕರ್ತ ಶಿವನೆಂಬ ನಾಮವಾಯಿತ್ತಲ್ಲಾ ಬಸವಣ್ಣಾ.
    ಜಂಗಮವೆ ಲಿಂಗವೆಂದು ನೀನು ಭಾವಿಸಲಾಗಿ,
    ನಿನ್ನ ಸನ್ನಿದಿಯಿಂದ ಪ್ರತಿನಿದಿಯಾಯಿತ್ತು ನೋಡಾ ಬಸವಣ್ಣಾ.
    ಲಿಂಗವ ಹಿಡಿದು ನೀನು ಪೂಜಿಸಲಾಗಿ,
    ಲಿಂಗವು ಹೆಸರುವಡೆಯಿತ್ತು ನೋಡಾ ಬಸವಣ್ಣಾ.
    ಪ್ರಸಾದವನು ನೀನು ಕೊಂಡು ಪಥವ ತೋರಿದೆಯಾಗಿ
    ಪ್ರಸಾದವು ಹೆಸರಾಯಿತ್ತು ನೋಡಾ ಬಸವಣ್ಣಾ.
    ಇದು ಕಾರಣ ನೀನೆ ಅನಾದಿ ಭಕ್ತ, ನಾನೆ ಅನಾದಿಯಿಂದತ್ತತ್ತ !
    ನೀನು ಮಾಡಲಾಗಿ ಆನಾದೆನೆಂಬುದ
    ನಮ್ಮ ಗುಹೇಶ್ವರಲಿಂಗವು ಬಲ್ಲ ಕಾಣಾ ಸಂಗನಬಸವಣ್ಣ. /293

  294. ಆದಿ ತ್ರೈಯುಗದಲ್ಲಿ ದೇವ ದಾನವ ಮಾನವರು
    ಮಾಯಾಮೋಹದಲ್ಲಿ ಹುಟ್ಟಿ ತೊಳಲಿ ಬಳಲುತ್ತೈದಾರೆ !
    ಆವ ವೇಷವಾದಡೇನು? ತಾಮಸಧಾರಿಗಳು,
    ಕಾಮ ಕ್ರೋಧ ಲೋಭ ಬಿಡದ ನಾನಾ ವಿಧದ ಡಂಬಕರು !
    ಹೂಳದ ಹುಣ್ಣಿಂಗೆ ಆರಯ್ಯಾ ಮದ್ದನಿಕ್ಕುವರು ?
    ಇದೇನು ಗುಹೇಶ್ವರ? ಸೋರೆಯ ಬಣ್ಣದ ಹಿರಿಯರು !/294

  295. ಆದಿ ಸ್ವಯಂಭುವಿಲ್ಲದ ಮುನ್ನ, ಸಂಗನಿಸ್ಸಂಗವಿಲ್ಲದ ಮುನ್ನ,
    ನಕ್ಷತ್ರಗ್ರಹಂಗಳಿಲ್ಲದ ಮುನ್ನ, ಯೋಗ ಕರಣಂಗಳಿಲ್ಲದ ಮುನ್ನ,
    ಖೇಚರ ಭೂಚರರಿಲ್ಲದ ಮುನ್ನ, ಆರಾರೂ ಇಲ್ಲದ ಮುನ್ನ,
    ಆಕಾಶ ಮಾರುತರಿಲ್ಲದ ಮುನ್ನ, ಅಂಬುದಿ ಕಮಠರಿಲ್ಲದ ಮುನ್ನ-
    ಹರಿಬ್ರಹ್ಮಾದಿಗಳಾರ ನಿಲವಿಲ್ಲದ ಮುನ್ನ
    ಹಿಮಕರದಿನಕರ ಸುಳುಹಿಲ್ಲದ ಮುನ್ನ-
    ಹಿಂದಿಲ್ಲ ಮುಂದಿಲ್ಲ ಒಂದೂ ಇಲ್ಲದ ಮುನ್ನ,
    ಗುಹೇಶ್ವರನಿರ್ದ ತನ್ನ ತಾನರಿಯದಂತೆ/295

  296. ಆದಿಗೆ ಅನಾದಿಗೆ ಭೇದವುಂಟೆ ?
    ಆದಿ ಲಿಂಗ ಅನಾದಿ ಶರಣನೆಂಬುದು,
    ತನ್ನಿಂದ ತಾ ಮಾಡಲಾಯಿತ್ತು.
    ಧರೆಯಾಕಾಶ ಭುವನ ಭವನಂಗಳು ಹುಟ್ಟದ ಮುನ್ನ
    ಅನಾದಿ ಪರಶಿವನು ತಾನೆ ತನ್ನ ಲೀಲೆಗೆ ಸಾಕಾರವ ಧರಿಸಿದಡೆ
    ಆ ಸಾಕಾರವೆ ಈ ಸಾಕಾರವಾಯಿತ್ತು.
    ಎನ್ನ ಸಾಕಾರದ ಆದಿಯನೂ, ಎನ್ನ ನಿರಾಕಾರದ ಆದಿಯನೂ
    ಬಸವಣ್ಣ ಬಲ್ಲವನಾಗಿ,
    ಗುಹೇಶ್ವರಲಿಂಗದ ಘನವು ಬಸವಣ್ಣನಿಂದೆನಗೆ ಸಾಧ್ಯವಾಯಿತ್ತು
    ಕಾಣಾ ಚನ್ನಬಸವಣ್ಣಾ !/296

  297. ಆದಿತ್ಯವಾರ ಸೋಮವಾರ ಮಂಗಳವಾರವೆಂದು,
    ಏಳು ವಾರವ ಹೆಸರಿಟ್ಟು ನುಡಿವರು, ನಾವಿದನರಿಯೆವು.
    ಗುಹೇಶ್ವರನ ಶರಣ ಚೆನ್ನಬಸವಣ್ಣಂಗೆ ಮೂರೇ ವಾರ/297

  298. ಆದಿಪುರ ವೇದಪುರ ಹಿಮಪುರ ಖಂಡಿತ ಅಖಂಡಿತ-
    ಶಿವಶಿವಾ ಗಗನವ ಮನ ನುಂಗಿತ್ತು.
    ಆದಿ ವೇದವ ನುಂಗಿ, ವೇದ ಸ್ವಯಂಭುವ ನುಂಗಿ,
    ಕಾಲ ಕರ್ಮ ಹಿಂಗಿತ್ತು-ಗುಹೇಶ್ವರಾ ನಿಮ್ಮ ಶರಣಂಗೆ/298

  299. ಆದಿಯ ಅಂಗಮುಖಕ್ಕರ್ಪಿಸಿ, ಅನಾದಿಯ ಪ್ರಾಣ ಮುಖಕ್ಕರ್ಪಿಸಿ,
    ಮನವೆಂಬುದ ಅರಿವಿನ ಮುಖಕ್ಕರ್ಪಿಸಿ,
    ತಾನೆಂಬುದ ನಿರಾಕಾರದಲ್ಲಿ ನಿಲಿಸಿ,
    ಪರಿಣಾಮಪ್ರಸಾದದಲ್ಲಿ ತದ್ಗತವಾಗಿ,
    ಪ್ರಸಾದವೆ ಪ್ರಾಣವಾಗಿ ಪ್ರಸಾದವೆ ಕಾಯವಾಗಿ,
    ಪ್ರಸಾದವೆ ಜ್ಞಾನವಾಗಿ ಪ್ರಸಾದವೆ ಧ್ಯಾನವಾಗಿ,
    ಪ್ರಸಾದವೆ ಲಿಂಗಭೋಗೋಪಭಾಗವಾಗಿಪ್ಪ,
    ನಮ್ಮ ಗುಹೇಶ್ವರಲಿಂಗದಲ್ಲಿ ನಿಜಪ್ರಸಾದಿ
    ಮರುಳಶಂಕರದೇವರ ನಿಲವ ನೋಡಾ ಸಂಗನಬಸವಣ್ಣಾ./299

  300. ಆದಿಯ ಕಂಡೆ, ಅನಾದಿಯ ಕಂಡೆ
    ಘನವ ಕಂಡೆ, ಮನವ ಕಂಡೆ, ಅನುವ ಕಂಡೆ
    ಆಯತ ಸ್ವಾಯತ ಸನ್ನಹಿತವ ಕಂಡೆ.
    ಗುಹೇಶ್ವರಲಿಂಗದಲ್ಲಿ ಬಸವಣ್ಣನ ಕೃಪೆಯಿಂದ,
    ನಿನ್ನ ಕಂಡೆ ಕಾಣಾ ಮಡಿವಾಳ ಮಾಚಯ್ಯಾ./300

  301. ಆದಿಯ ತೋರಿದೆ, ಅನಾದಿಯನರುಹಿದೆ.
    ಇಹವ ಕೆಡಿಸಿದೆ ಪರವ ನಿಲಿಸಿದೆ
    ಕಾಯಪ್ರಸಾದ ಭಾವಪ್ರಸಾದ ಜ್ಞಾನಪ್ರಸಾದವನು
    ಏಕವ ಮಾಡಿ ತೋರಿದೆ.
    ಪರವನೊಳಕೊಂಡು ಪರಿಣಾಮದಲ್ಲಿರಿಸಿದೆ.
    ಗುಹೇಶ್ವರನ ಶರಣ ಸಂಗನಬಸವಣ್ಣನ ಪೂರ್ವಾಪರವ ಹೇಳಿ
    ಎನ್ನನುಳಿಹಿಕೊಳ್ಳಾ ಚನ್ನಬಸವಣಾ/301

  302. ಆದಿಯ ಮುಟ್ಟಿಬಂದ ಶರಣಂಗೆ ಬದ್ಧ(ಬಂಧ?)ವಿಲ್ಲಯ್ಯಾ.
    ಜನ್ಮಕೋಟಿ ಕ್ರೂರಕರ್ಮವ ಮಾಡಿದವಂಗೆ, ಸೋಂಕಿನ ಸೊಬಗ
    ಹೇಳಲಿ(ಲೇ?)ಕೆ ?
    ಅಂಗದಲ್ಲಿ ಲಿಂಗ ಸೋಂಕಿದ ಶರಣಂಗೆ,
    ಕಾಯದೊಳಗುಳ್ಳ ಕರಣಂಗಳು ಕಳಾಕುಳ ಕಳಾಭೇದವಯ್ಯಾ
    ಸುಖದ ಸೋಂಕಿನ ಸೊಬಗ, ಇನ್ನಾರಿಗೆಯೂ ಹೇಳಲಿಲ್ಲ ಗುಹೇಶ್ವರ./302

  303. ಆದಿಯ ಲಿಂಗ ನಿನ್ನಿಂದ ಎನಗಾಯಿತ್ತು.
    ಅನಾದಿಯ ಜ್ಞಾನ ನಿನ್ನ ನೆನೆದಡೆ ಎನಗಾಯಿತ್ತು.
    ನಿನ್ನ ಕೃಪೆಯಿಂದ ಪ್ರಾಣ ಲಿಂಗವೆಂದರಿದೆನೆಂಬುದ,
    ನಿಮ್ಮ ಪ್ರಮಥರೆ ಬಲ್ಲರು.
    ಗುಹೇಶ್ವರ ಸಾಕ್ಷಿಯಾಗಿ, ಸಂಗನಬಸವಣ್ಣ
    ನಿನ್ನ ಪ್ರಸಾದದ ಶಿಶು ನಾನು ನೋಡಯ್ಯಾ./303

  304. ಆದಿಯ ಲಿಂಗವ ತೋರಿದ ಅನಿಮಿಷನ ಕಂಡೆನಯ್ಯಾ ಇಂದು.
    ಕೃತಯುಗದ ಸ್ಕಂದನೆಂಬ ಗಣೇಶ್ವರನ ಕಂಡೆನಯ್ಯಾ ಇಂದು.
    ತ್ರೇತಾಯುಗದ ನೀಲಲೋಹಿತನೆಂಬ ಗಣೇಶ್ವರನ ಕಂಡೆನಯ್ಯಾ ಇಂದು.
    ದ್ವಾಪರಯುಗದ ವೃಷಭನೆಂಬ ಗಣೇಶ್ವರನ ಕಂಡೆನಯ್ಯಾ ಇಂದು.
    ಕಲಿಯುಗದಲ್ಲಿ ಅನಿಮಿಷಬಸವನೆಂಬ ಗಣೇಶ್ವರನ ಕಂಡೆನಯ್ಯಾ ಇಂದು.
    ಎನ್ನ ಕಂಡವರನೂ, ನಿನ್ನ ಕಂಡವರನೂ,
    ಇಂದು ಕಂಡೆ ಕಾಣಾ ಗುಹೇಶ್ವರಾ/304

  305. ಆದಿಯ ಲಿಂಗವ ಮೇದಿನಿಗೆ ತಂದು,
    ಮರ್ತ್ಯಲೋಕದಲ್ಲಿ ಮಹಾಮನೆಯ ಕಟ್ಟಿದನಯ್ಯಾ ಸಂಗನಬಸವಣ್ಣನು.
    ಆ ಮನೆಯ ನೋಡಲೆಂದು ಹೋದಡೆ,
    ಆ ಗೃಹ ಹೋಗದ ಮುನ್ನವೆ ಎನ್ನ ನುಂಗಿತ್ತಯ್ಯಾ !
    ಅದಕ್ಕೆ ಕಂಭ ಒಂದು, ತೊಲೆ ಆರು, ಜಂತೆವಲಗೆ ಮೂವತ್ತಾರು
    ಧರೆಯಾಕಾಶವ ಹೊದ್ದದ ಕೆಸರುಗಲ್ಲು
    ಒಂಬತ್ತು ಬಾಗಿಲು, ಬಿಯ್ಯಗವಿಕ್ಕಿಹವು.
    ಬೇರೊಂದು ಬಾಗಿಲು ಉರಿಯನುಗುಳುತಿರ್ಪುದು.
    ಮುತ್ತಿನ ಕಂಭದ ಮೇಲುಕಟ್ಟಿನ ಮೇಲೆ ಮಾಣಿಕ್ಯದ ಶಿಖರಿ !
    ಆ ಶಿಖರಿಯ ತುದಿಯಲ್ಲಿ ಬಿಳಿಯ ಹೊಂಗಳಸವಿಪ್ಪುದು.
    ಅದು ಕಾಬವರಿಗೆ ಕಾಣಬಾರದು.
    ಕಾಣಬಾರದವರಿಗೆ ಕಾಣಬಪ್ಪುದು.
    ಅಲ್ಲಿ ಹತ್ತು ಮಂದಿ ಪರಿಚಾರಕರು ಎಡೆಯಾಡುತಿಪ್ಪರು.
    ಇಬ್ಬರು ದಡಿಕಾರರು ಬಾಗಿಲ ಕಾಯ್ದಿಪ್ಪರು.
    ಒಬ್ಬಾಕೆ ಎಡೆಯಾಡುತ್ತಿಪ್ಪಳು.
    ಒಬ್ಬಾಕೆ ಲಿಂಗಾರ್ಚನೆಗೆ ನೀಡುತ್ತಿಪ್ಪಳು.
    ಒಬ್ಬಾಕೆ ಸುಯಿಧಾನಂಗಳೆಲ್ಲವನು ಶೋದಿಸಿ ತಂದುಕೊಡುತ್ತಿಪ್ಪಳು.
    ಒಬ್ಬಾಕೆ ಉರಿಯಿಲ್ಲದಗ್ನಿಯಲಿ ಪಾಕವ ಮಾಡುತ್ತಿಪ್ಪಳು.
    ಒಬ್ಬಾಕೆ ಲಿಂಗಜಂಗಮಕ್ಕೆ ಮಾಡಿ, ನೀಡಿ, ಊಡಿ, ಉಣಿಸಿ
    ತೃಪ್ತಿಯ ಮಾಡುತ್ತಿಪ್ಪಳು-
    ಒಂದಡ್ಡಣಿಗೆಯ ಮೇಲೆ,
    ಐದು ಅಗಲೊಳಗೆ ಇಟ್ಟ ಬೋನವನು ಒಬ್ಬನುಂಡಡೆ,
    ಪ್ರಮಥಗಣಂಗಳೆಲ್ಲರೂ ಆತನ ಒಕ್ಕುದ ಕೊಳಲೆಂದು ಬಂದು,
    ಆ ಮನೆಯ ಹೊಕ್ಕು ನಿಶ್ಚಿಂತನಿವಾಸಿಗಳಾದರು.
    ಗುಹೇಶ್ವರನ ಶರಣ ಸಂಗನಬಸವಣ್ಣನ ಮಹಾಮನೆಯ ಕಂಡು
    ಧನ್ಯನಾದೆನು ಕಾಣಾ ಸಿದ್ಧರಾಮಯ್ಯಾ./305

  306. ಆದಿಯ ಶರಣನೊಬ್ಬನ ಮದುವೆಯ ಮಾಡಲು,
    ಯುಗ ಜುಗದವರೆಲ್ಲಾ ನಿಬ್ಬಣ ಹೋದರು,
    ಹೋದ ನಿಬ್ಬಣಿಗರು ಮರಳರು !
    ಮದುವಣಿಗನ ಸುದ್ದಿಯನರಿಯಲು ಬಾರದು.
    ಹಂದರವಳಿಯದು, ಹಸೆ ಮುನ್ನಲುಡುಗದು !
    ಬಂದಬಂದವರೆಲ್ಲಾ ಮಿಂದುಂಡು ಹೋದರು.
    [ಇದರಂತುವನರಿಯದೆ ಜಗವೆಲ್ಲ ಬರಡಾಯಿತ್ತು]
    ಇದರಂತುವನರಿದಡೆ-
    ಗುಹೇಶ್ವರಶಬ್ದವನೊಳಕೊಂಡ ಮಹಂತ ಬಯಲು !/306

  307. ಆದಿಯನರಿಯದೆ,
    ಅನಾದಿಯಿಂದತ್ತತ್ತ ತಾನಾರೆಂಬುದ ವಿಚಾರಿಸಿ ತಿಳಿದು ನೋಡದೆ;
    ಮಾಡಿದಡೆ ಫಲವೇನಯ್ಯಾ ಬಸವಯ್ಯಾ ?
    ಸಾವನ್ನಕ್ಕ ಸಾಧನೆಯ ಮಾಡಿದಡೆ,
    ಕಾದುವ ದಿನ ಇನ್ನಾವುದಯ್ಯಾ ಬಸವಯ್ಯಾ ?
    ಬಾಳುವನ್ನಕ್ಕ ಭಜನೆಯ ಬಾಡಿದಡೆ
    ತಾನಹ ದಿನ ಇನ್ನಾವುದಯ್ಯಾ ಬಸವಯ್ಯಾ ?-
    ಇದು ಕಾರಣ,
    ಮರ್ತ್ಯಲೋಕದ ಭಕ್ತರುಗಳೆಲ್ಲರು, ತಥ್ಯವನರಿಯದೆ,
    ಮಿಥ್ಯವನೆ ಹಿಡಿದು ಮಿಥ್ಯವನೆ ಪೂಜಿಸಿ ವ್ಯರ್ಥರಾಗಿ ಹೋದರು,
    ತಮ್ಮ ತಾವರಿಯದೆ ಕೆಟ್ಟರು.
    ತಲೆಯ ಕೊಯಿದು ದೇಹವ ಕಡಿದು, ಕಣ್ಣ ಕಳೆದು
    ಹೊಟ್ಟೆಯ ಸೀಳಿ, ಮಗನ ಕೊಂದು ಬಾಣಸವ ಮಾಡಿ,
    ವಾದಿಗೆ ಪುರಂಗಳನೊಯ್ದು,
    ಕಾಯವೆರಸಿ ಕೈಲಾಸಕ್ಕೆ ಹೋದವರೆಲ್ಲರು ಭಕ್ತರಪ್ಪರೆ ?
    ಅವರಿಗೆ ಶಿವಪಥವು ಸಾಧ್ಯವಾಯಿತ್ತೆ ? ಭವ ಹಿಂಗಿತ್ತೆ ?
    ಅದು ಸಹಜವೆ ?-ಅಲ್ಲಲ್ಲ ನಿಲ್ಲು ಮಾಣು.
    ನರಲೋಕದವರೆಲ್ಲರು ನರಸಂಸಾರಕ್ಕೊಳಗಾದರು,
    ಸುರಲೋಕದ ಸುರರುಗಳೆಲ್ಲ ಸುರಸಂಸಾರಕ್ಕೊಳಗಾದರು,
    ರುದ್ರಲೋಕದ ರುದ್ರರುಗಳೆಲ್ಲ ರುದ್ರಸಂಸಾರಕ್ಕೊಳಗಾದರು,
    ಮುನಿಜನಂಗಳೆಲ್ಲರು ತಪವೆಂಬ ಸಂಸಾರಕ್ಕೊಳಗಾದರು,
    ಜಂಗಮವ ಹಿಡಿದವರೆಲ್ಲರು ಸಾಯುಜ್ಯವೆಂಬ ಸಂಸಾರಕ್ಕೊಳಗಾದರು,
    ಲಿಂಗವ ಹಿಡಿದವರೆಲ್ಲರು ಫಲ-ಪದಗಳೆಂಬ ಸಂಸಾರಕ್ಕೊಳಗಾದರು,
    ಇಂತೀ ಸಂಸಾರಕ್ಕೊಳಗಾದವರೆಲ್ಲ ಮಾಯೆಯ ಹೊಡೆಗಿಚ್ಚ ಗೆಲಬಲ್ಲರೆ ?
    ಇದು ಕಾರಣ; ನಿತ್ಯ ನಿಜತತ್ವ ತಾನೆಂದರಿಯದೆ, `ತತ್ವಮಸಿ’ ವಾಕ್ಯವ
    ಹೊರಹೊರಗನೆ ಬಳಸಿ ಕೆಟ್ಟರಲ್ಲಾ ಹಿರಿಯರು, ಸತ್ತರಲ್ಲಾ ನಾಯಿ ಸಾವ !
    ಸತ್ತವರ ಹೆಸರ ಪತ್ರವ ನೋಡಿದಡೆ (ಓದಿದಡೆ?)
    ಅದೆತ್ತಣ ಮುಕ್ತಿಯೊ ಗುಹೇಶ್ವರಾ ?/307

  308. ಆದಿಯನರಿಯರು ಅನಾದಿಯನರಿಯರು,
    ಒಂದರೊಳಗಿಪ್ಪ ಎರಡನರಿಯರು,
    ಎರಡರೊಳಗಿಪ್ಪ ಮೂರರ ಕೀಲನರಿಯರು,
    ಮೂರರ ಸಂದು ಆರಾದುದನರಿಯರು.
    ಆರೆಂದು ನುಡಿವ ಗಾರು ಮಾತು ತಾನಲ್ಲ
    ಗುಹೇಶ್ವರ[ನ] ನಿಲವನರಿದಡೆ, -ಒಂದೂ ಇಲ್ಲ.
    ಅರಿಯದಿರ್ದಡೆ ಬಹುಮುಖವಯ್ಯಾ./308

  309. ಆದಿಯಲ್ಲಿ ಗುರುಬೀಜವಾದ ಪಿಂಡಕ್ಕೆ,
    ಅನಾದಿಯೆಂಬುದನೊಬ್ಬರು ತಿಳುಹಲುಂಟೆ ?
    ಆದಿ ಕಾಯ ಅನಾದಿ ಪ್ರಾಣವಾಗಿಪ್ಪ ಯೋಗವ ಭೇದಿಸಿ
    ತನ್ನೊಳಗೆ ತಾನೆ ತಿಳಿದು ನೋಡಲು
    `ಸ್ಯೋಹಂ’ ಎಂಬುದು ತಾನೆ ಸತ್ಯ ನೋಡಾ !
    (`ಕೋಹಂ’ ಎಂಬುದು ತಾನಸತ್ಯ ನೋಡಾ?)/309

  310. ಆದಿಯಲ್ಲಿ ನೀನೆ ಗುರುವಾದ ಕಾರಣ ನಿನ್ನಿಂದ ಹುಟ್ಟಿತ್ತು ಲಿಂಗ.
    ಆದಿಯಲ್ಲಿ ನೀನೆ ಲಿಂಗವಾದ ಕಾರಣ ನಿನ್ನಿಂದ ಹುಟ್ಟಿತ್ತು ಜಂಗಮ.
    ಆದಿಯಲ್ಲಿ ನೀನೆ ಜಂಗಮವಾದ ಕಾರಣ ನಿನ್ನಿಂದ ಹುಟ್ಟಿತ್ತು ಪ್ರಸಾದ.
    ಆದಿಯಲ್ಲಿ ನೀನೆ ಪ್ರಸಾದಿಯಾದ ಕಾರಣ ನಿನ್ನಿಂದ ಹುಟ್ಟಿತ್ತು ಪಾದೋದಕ.
    ಇಂತೀ-ಗುರು ಲಿಂಗ ಜಂಗಮ ಪ್ರಸಾದ ಪಾದೋದಕ ಸ್ವರೂಪ
    ನೀನೆಯಾದ ಕಾರಣ;
    ಜಂಗಮ ಪ್ರಾಣಿಯಾಗಿ ಸದಾಚಾರಿಯಾದೆ,
    ಅದು ಕಾರಣ ನೀನೆ ಸರ್ವಾಚಾರಸಂಪನ್ನನಾಗಿ,
    ಪೂರ್ವಾಚಾರಿ[ಯೂ] ನೀನೆಯಾದೆ,
    [ಅದು] ಕಾರಣ, ಗುಹೇಶ್ವರಲಿಂಗದಲ್ಲಿ ಚಂದಯ್ಯಂಗೆ.
    ಲಿಂಗದ ನಿಜವ ತಿಳುಹಾ ಸಂಗನಬಸವಣ್ಣಾ !/310

  311. ಆದಿಯಲ್ಲಿ ಬಸವಣ್ಣನುತ್ಪತ್ಯವಾದ ಕಾರಣ
    ನಾಗಲೋಕದ ನಾಗಗಣಂಗಳಿಗೆಯೂ ಬಸವಣ್ಣನ ಪ್ರಸಾದ.
    ಮತ್ರ್ಯಲೋಕದ ಮಹಾಗಣಂಗಳಿಗೆಯೂ ಬಸವಣ್ಣನ ಪ್ರಸಾದ.
    ದೇವಲೋಕದ ದೇವಗಣಂಗಳಿಗೆಯೂ ಬಸವಣ್ಣನ ಪ್ರಸಾದ.
    ಗುಹೇಶ್ವರಾ ನಿಮ್ಮಾಣೆ,
    ಎನಗೆಯೂ ನಿನಗೆಯೂ ಬಸವಣ್ಣನ ಪ್ರಸಾದ./311

  312. ಆದಿಯಲ್ಲಿ ಶಿವದಾರವ ಕಂಡೆ; ಬೀದಿಯಲ್ಲಿ ಬಿದ್ದ ಸೆಜ್ಜೆಯ ಕಂಡೆ.
    ಪ್ರಾಣಲಿಂಗವ ಬೈಚಿಟ್ಟುಕೊಂಡೆ.
    ಕಾಯವಳಿದು ಜೀವ ನಿಮ್ಮಲ್ಲಿಗೆ ಬಂದಡೆ
    ಎನ್ನಿಂದ ವ್ರತಗೇಡಿಗಳಿಲ್ಲ ಗುಹೇಶ್ವರಾ./312

  313. ಆದಿಯಾಧಾರ ತನುಗುಣವುಳ್ಳನ್ನಕ್ಕರ ಸಮತೆಯೆಂಬುದೇನೊ ?
    ಕಾಲಕಲ್ಪಿತ ಉಪಾದಿಯುಳ್ಳನ್ನಕ್ಕರ ಶೀಲವೆಂಬುದು ಭಂಗ.
    ಕಾಮವೆಂಬುದರ ಬೆಂಬಳಿಯ ಕೂಸಿನ ಹುಸಿಯೆ ತಾನೆಂದು
    ತಿಳಿಯದನ್ನಕ್ಕರ,
    ಗುಹೇಶ್ವರಾ ನಿಮ್ಮ ನಾಮಕ್ಕೆ ನಾಚದವರನೇನೆಂಬೆನು ?/313

  314. ಆದಿಯಾಧಾರಮಂ ಮಾಡಿ, ಅಜಕೋಟಿ ಬ್ರಹ್ಮಾಂಡಂಗಳ ಮಾಡಿ
    ಈರೇಳು ಭುವನಂಗಳಂ ಮಾಡಿ ಹರ ಲೀಲೆಯಾಡುವಲ್ಲಿ-
    ಹರಿವಿರಿಂಚಿಗಳ ಸುರಾಸುರರ ಶಿರೋಮಾಲೆಯನಿಕ್ಕಿ ಕುಣಿದಾಡುವಲ್ಲಿ
    ಪಾದ ರಸಾತಳಕ್ಕಿಳಿದು ಭುವನ ಜಲಮಯವಾದಲ್ಲಿ
    ಹಸ್ತ ಮಕುಟ ತಾಗಿ ಸಕಲಲೋಕಂಗಳೆಲ್ಲವೂ ನಿರವಯಲಾದಲ್ಲಿ
    ನಿಜದ ಬೆಳಗಿನ ಬೆಳಗಿನೊಳು `ಸ್ಯೋಹಂ’ ಎನಲು,
    ವಿಚಾರದಿಂದ ಘನಮನವಾದಂದು,
    ಗುಹೇಶ್ವರಾ ನೀನೆ ಲಿಂಗ, ನಾನೆ ಜಂಗಮ, ಬಸವಣ್ಣನೇ ಭಕ್ತ !/314

  315. ಆದಿಯಾಧಾರವಿಲ್ಲದ ಆಗಮನಾಸ್ತಿಯಾಗಿಪ್ಪ
    ಸಾಗಾರ (ಆಗರ?) ವಿರಹಿತನನಾರೂ ಅರಿಯರಲ್ಲಾ !
    ದಶಮುಖಮಾಣಿಕದೆಸಳಗಂಗಳು ಪರ್ಬಿಪಸರಿಸಿದುದನಾರೂ ಅರಿಯರಲ್ಲಾ !
    ಪಿರಿದೊಂದು ವೃಕ್ಷವು ಅತಿಶಯದ ರೂಪಾಗಿ
    ಪೃಥ್ವಿಗಿಂಬಾದುದನಾರೂ ಅರಿಯರಲ್ಲಾ !
    ಅಂತರಂಗದ ಭುವನವ ಮೆಟ್ಟಿ ನೋಡುತ್ತಿಪ್ಪ,
    ಬೆಡಗಿನ ತಾವರೆಯ ಮಧ್ಯದ ತಾರಕಿಯನಾರೂ ಅರಿಯರಲ್ಲಾ !
    ರವಿ-ಶಶಿಗಳಿಬ್ಬರು,
    ನಯನ ನೋಟದ ಪುಷ್ಪಪರಿಮಳವಾಗಿರ್ದುದನಾರೂ ಅರಿಯರಲ್ಲಾ !
    ಇಂಬು ನಯನದಲ್ಲಿ ಸಂಭ್ರಮವಿಲ್ಲದ ರೂಪು, ಮಹತ್ತಾಗಿರ್ದುದನಾರೂ
    ಅರಿಯರಲ್ಲಾ !
    ಸಾಗರದೊಳಗಣ ಜ್ಯೋತಿಯಂತೆ,
    ಗುಹೇಶ್ವರಲಿಂಗದೊಳಗೆ ಎನ್ನ ಪರಮಾರಾಧ್ಯ ಸಂಗನಬಸವಣ್ಣ[ನು],
    ನಿಂದ ನಿಲವ ಉಪಮಿಸಬಾರದು ಕಾಣಾ ಸಿದ್ಧರಾಮಯ್ಯಾ./315

  316. ಆದಿಯಾಧಾರವುಳ್ಳನ್ನಕ್ಕರ ಉಪಚಾರ,
    ಎರಡೂ ಒಂದಾದಡೆ ಶಿವಾಚಾರ.
    ಆ ಶಿವಾಚಾರ ಸಯವಾದಡೆ ಬ್ರಹ್ಮಾಚಾರ,
    ಗುಹೇಶ್ವರನನರಿದಡೆ ಅನಾಚಾರ ! /316

  317. ಆದಿಯಿಂದತ್ತತ್ತಲೆನಗೆ ನೀನೆ ಗುರುವಯ್ಯಾ.
    ಅನಾದಿಯಿಂದತ್ತತ್ತಲೆನಗೆ ನೀನೆ ಗುರುವಯ್ಯಾ.
    ಈ ಎರಡು ನಾಮ ಹುಟ್ಟದ ಮುನ್ನ
    ನಿಮಗೆ ನಾನು ಶಿಷ್ಯನಯ್ಯಾ.
    ಎನ್ನ ಭಾವಕಾಯದೊಳಗಣ ಭ್ರಮೆಯ ಕಳೆದು,
    ಎನ್ನ ಜ್ಞಾನಕಾಯದೊಳಗಣ ಮರಹ ಕಳೆದು,
    ಎನ್ನೊಳಗೆ ತಿಳಿವಿನ ಬಗೆಯ ತೋರುತ್ತ,
    ಹೊರಗೆ ನುಡಿಯದಂತಿರ್ದಡೆ ಬಿಡೆನು ನೋಡಾ ನಿಮ್ಮ ಶ್ರೀಚರಣವನು.
    ಮಾಡಿದಡೆ ಅಂತು ಮಹಾಪ್ರಸಾದವೆಂದು ಕೈಕೊಂಬೆ.
    ಮಾಡದಿರ್ದಡೆ ನೀವೆ ನಾನಾಗಿ ಮಹಾಪ್ರಸಾದವೆಂದು ಕೈಕೊಂಬೆನು,
    ಇಂತು ಆವತೆರದಿಂದಲಾದಡೂ
    ಎನ್ನೊಡಲ ನಿಮ್ಮಲ್ಲಿ ಸವೆದು ಪಡೆವೆನು ನಿಮ್ಮ ಕರುಣವ
    ಗುಹೇಶ್ವರಾ ಎನ್ನ ಇರವಿನ ಪರಿ ಇಂತುಟು ನೋಡಾ/317

  318. ಆದಿಯಿಲ್ಲದೆ, ಕರ್ತೃವಿಲ್ಲದೆ, ಕರ್ಮಂಗಳಿಲ್ಲದೆ
    ನಿನ್ನಿಂದ ನೀನೇ ಸಗುಣನಯ್ಯಾ.
    ನಿನ್ನ ಸ್ವಲೀಲೆವಿಡಿದಾಡಿ ನಿನ್ನಿಂದ ನೀನೇ ನಿರ್ಗುಣನಯ್ಯಾ.
    ಅದೆಂತೆಂದಡೆ:
    “ಅನಾದಿಸಿದ್ಧಸಂಸ್ಕಾರಃ ಕರ್ತೃಕರ್ಮವಿವರ್ಜಿತಃ
    ಸ್ವಯಮೇವ ಭವೇದ್ದೇಹೇ ಸ್ವಯಮೇವ ವಿಲೀಯತೇ”
    ಎಂದುದಾಗಿ,
    ಗುಹೇಶ್ವರಾ, ನಿನ್ನ ಲೀಲೆಯ ಘನವ ನೀನೇ ಬಲೆ/318

  319. ಆದಿವಿಡಿದು ಬಹಾತ ಭಕ್ತನಲ್ಲ, ಅನಾದಿವಿಡಿದು ಬಹಾತ ಮಾಹೇಶ್ವರನಲ್ಲ.
    ಸ್ಥಲವಿಡಿದು ಬಹಾತ ಪ್ರಸಾದಿಯಲ್ಲ,
    ಇಷ್ಟಲಿಂಗದಲ್ಲಿ ಪ್ರಸಾದವ ಕೊಂಬಾತ ಪ್ರಾಣಲಿಂಗಿಯಲ್ಲ,
    ಲಿಂಗವಿಡಿದು ಬಹಾತ ಶರಣನಲ್ಲ,
    ಬಿನ್ನಭಾವವಿಡಿದು ಬಹಾತ ಐಕ್ಯನಲ್ಲ,
    ಶೂನ್ಯಕಾಯವ ನಿಶ್ಶೂನ್ಯಂಗಿಕ್ಕಿ, ಪ್ರಾಣಲಿಂಗಪ್ರಸಾದವ ಕೊಳಬಲ್ಲನಾಗಿ
    ಗುಹೇಶ್ವರಲಿಂಗದಲ್ಲಿ ಚೆನ್ನಬಸವಣ್ಣಂಗೆ ನಮೋ ನಮೋ ಎಂಬೆನು/319

  320. ಆದಿಶಕ್ತಿ ಅನಾದಿಶಕ್ತಿಯೆಂಬರು ಅದನಾರು ಬಲ್ಲರಯ್ಯಾ ?
    `ಆದಿ’ ಎಂದಡೆ ಕುರುಹಿಂಗೆ ಬಂದಿತ್ತು.
    `ಅನಾದಿ’ ಎಂದಡೆ ನಾಮಕ್ಕೆ ಬಂದಿತ್ತು.
    ಆದಿಯೂ ಅಲ್ಲ ಅನಾದಿಯೂ ಅಲ್ಲ,
    ನಾಮವಿಲ್ಲದ ಸೀಮೆಯಿಲ್ಲದ ನಿಜಭಕ್ತಿಯೆ
    ಚಿಚ್ಛಕ್ತಿಯಾಯಿತ್ತು ನೋಡಾ.
    ಅಂತರಂಗದ ಪ್ರಭೆ ಬಹಿರಂಗವೆಲ್ಲಾ ತಾನೆಯಾಗಿ
    ಗುಹೇಶ್ವರಲಿಂಗದಲ್ಲಿ ಸಂದಿಲ್ಲದಿಪ್ಪ
    ಮಹಾದೇವಿಯಕ್ಕನ ಶ್ರೀಪಾದಕ್ಕೆ ನಮೋ ನಮೋ ಎಂಬೆನು/320

  321. ಆದ್ಯರಲ್ಲ ವೇದ್ಯರಲ್ಲ ಸಾಧ್ಯರಲ್ಲದ ಹಿರಿಯರ ನೋಡಾ.
    ತನುವಿಕಾರ ಮನವಿಕಾರ ಇಂದ್ರಿಯವಿಕಾರದ ಹಿರಿಯರ ನೋಡಾ.
    ಶಿವಚಿಂತೆ ಶಿವಜ್ಞಾನಿಗಳ ಕಂಡಡೆ, ಆಳವಾಡಿ ನುಡಿವರು,
    ಗುಹೇಶ್ವರನರಿಯದ ಕರ್ಮಿಗಳು./321

  322. ಆಧಾರ ಲಿಂಗ ನಾಬಿ ಹೃದಯ ಕಂಠ ಭ್ರೂಮಧ್ಯದ ಮೇಲೆ
    ನಿಂದುದದೇನೊ?
    ನಿತ್ಯ ನಿರಂಜನ ನಿರುಪಾದಿಕರೇಖೆಯಾಗಿ,
    ಇರ್ದುದದೇನೊ?
    ವಿದ್ರುಮಕುಸುಮಚಕ್ಷು ಪರಿಮಳದಿಂದತ್ತತ್ತಲೆ,-
    ಗುಹೇಶ್ವರನೆಂಬುದದೇನೊ?/322

  323. ಆಧಾರ ಸ್ವಾಧಿಷ್ಠಾನ ಮಣಿಪೂರಕಸ್ಥಾನವರಿಯರು.
    ಅಷ್ಟದಳ ಕಮಲದಲ್ಲಿ ಸೂಕ್ಮ ನಾಳವೈದುವದೆ?
    ಇನ್ನೇನನರಿವರಾರೊ? ಬೇರೆ ಮತ್ತೆ ಅರಿಯಲುಂಟೆ ಹೇಳಾ?
    ಸಹಸ್ರದಳಕಮಲದ ಬ್ರಹ್ಮರಂಧ್ರದಲ್ಲಿಪ್ಪ
    ಅಮೃತಸ್ವರವನರಿದು, ಹಿಡಿದುಕೊಂಬುದು, ಅರಿದು!-ಗುಹೇಶ್ವರಾ./323

  324. ಆಧಾರದಲ್ಲಿ ಅಭವನು ಸ್ವಾಯತ,
    ಸ್ವಾದಿಷ್ಠಾನದಲ್ಲಿ ರುದ್ರನು ಸ್ವಾಯತ,
    ಮಣಿಪೂರಕದಲ್ಲಿ ಮೃಡನು ಸ್ವಾಯತ,
    ವಿಶುದ್ಧಿಯಲ್ಲಿ ಸದಾಶಿವನು ಸ್ವಾಯತ.
    ಆಜ್ಞಾಚಕ್ರದಲ್ಲಿ ಶಾಂತ್ಯಾತೀತನು ಸ್ವಾಯತ.
    ಗುಹೇಶ್ವರಲಿಂಗವು, ವ್ಯೋಮ ವ್ಯೋಮವ ಕೂಡಿದಂತೆ !/324

  325. ಆಧಾರದಲ್ಲಿ ಬ್ರಹ್ಮ ಸ್ವಾಯತವಾದ, ಸ್ವಾದಿಷ್ಠಾನದಲ್ಲಿ ವಿಷ್ಣು ಸ್ವಾಯತವಾದ.
    ಮಣಿಪೂರಕದಲ್ಲಿ ರುದ್ರ ಸ್ವಾಯತವಾದ, ಅನಾಹತದಲ್ಲಿ ಈಶ್ವರ ಸ್ವಾಯತವಾದ.
    ವಿಶುದ್ಧಿಯಲ್ಲಿ ಸದಾಶಿವ ಸ್ವಾಯತವಾದ,
    ಆಜ್ಞೆಯಲ್ಲಿ ಉಪಮಾತೀತ ಸ್ವಾಯತವಾದ.-
    ಇವರೆಲ್ಲರು; ಬಯಲಲ್ಲಿ ಹುಟ್ಟಿ ಬಯಲಲ್ಲಿ ಬೆಳೆದು,
    ಬಯಲಲಿಂಗವನೆ ಧರಿಸಿಕೊಂಡು, ಬಯಲನೆ ಆರಾದಿಸಿ
    ಬಯಲಾಗಿ ಹೋಯಿತ್ತ ಕಂಡೆ ಗುಹೇಶ್ವರಾ/325

  326. ಆಧಾರಲಿಂಗ ಕುಂಡಲಿವಿಡಿದು; ಹೃದಯಕಮಲದಲ್ಲಿ ಬ್ರಹ್ಮ,
    ನಾಳದಲ್ಲಿ ವಿಷ್ಣು, ನಾಳಾಗ್ರದಲ್ಲಿ ರುದ್ರ,
    ಭ್ರೂಮಧ್ಯದ ಮೇಲೆ ಈಶ್ವರನು, ಬ್ರಹ್ಮರಂಧ್ರದ ಮೇಲೆ ಸದಾಶಿವನು.
    ಶಿಖಾಗ್ರದಲ್ಲಿ ಸರ್ವಗತ ಶಿವನು.-
    ಆದಿ ಅನಾದಿಯಿಲ್ಲದಂದು ಗುಹೇಶ್ವರಲಿಂಗ ನಿರಾಳನು./326

  327. ಆನು ನೀನೆಂದ ಬಳಿಕ, ಮತ್ತೆ ಏನೂ ಇಲ್ಲ
    ಇಲ್ಲಾದುದಿಲ್ಲಾದುದೆಂತಿಪ್ಪುದೊ ?
    ತನು ಮರೆದು ಘನವ ಬೆರೆದಡೆ,
    ಭವರಹಿತನು ಗುಹೇಶ್ವರಯ್ಯ ತಾನೆ/327

  328. ಆನೆಯ ಹೆಣ ಬಿದ್ದಡೆ ಕೋಡಗ ಮುದ್ದಾಡಿಸಿತ್ತ ಕಂಡೆನಯ್ಯಾ,
    ಕಾಡೊಳಗೊಬ್ಬ ಸೂಳೆ ಕರೆದು ಒತ್ತೆಯ ಕೊಂಬುದ ಕಂಡೆನಯ್ಯಾ,
    ಹಾಳೂರೊಳಗೆ ನಾಯ ಜಗಳವ ಕಂಡೆ:
    ಇದೇನು ಸೋಜಿಗವೊ ಗುಹೇಶ್ವರಾ !/328

  329. ಆಯತ ಸ್ವಾಯತ ಸನ್ನಹಿತನಾಗಿ,
    ಆರಾಧ್ಯಲಿಂಗದಲ್ಲಿ ಅನುಭಾವಿಯಾಗಿಪ್ಪನು ಬಸವಣ್ಣನು.
    ಜಂಗಮಲಿಂಗ ಪ್ರಾಣಿಯಾಗಿ ನಿಷ್ಪ್ರಾಣವಾಗಿಪ್ಪನು ಬಸವಣ್ಣನು.
    ಗುಹೇಶ್ವರಲಿಂಗದಲ್ಲಿ,
    ಸಂಗನಬಸವಣ್ಣನ ಆಚಾರದ ಪರಿ ನಿನಗಲ್ಲದೆ ಅರಿಯಬಾರದು.
    ಎನಗೊಮ್ಮೆ ತಿಳುಹಿಕೊಡಾ ಚೆನ್ನಬಸವಣ್ಣಾ. /329

  330. ಆಯತದಲ್ಲಿ ಪೂರ್ವಾಚಾರಿಯ ಕಂಡೆ.
    ಸ್ವಾಯತದಲ್ಲಿ ಪೂರ್ವಾಚಾರಿಯ ಕಂಡೆ.
    ಸನ್ನಹಿತದಲ್ಲಿ ಪೂರ್ವಾಚಾರಿಯ ಕಂಡೆ.
    ಗುಹೇಶ್ವರಲಿಂಗದಲ್ಲಿ ಪೂರ್ವಾಚಾರಿ ಸಂಗನಬಸವಣ್ಣನ,
    ಶ್ರೀಪಾದಕ್ಕೆ ನಮೋ ನಮೋ ಎಂಬೆನು./330

  331. ಆಯತಲಿಂಗವಿಡಿದು ಸ್ವಾಯತಲಿಂಗವ ಕಾಣಬೇಕು ಸಿದ್ಧರಾಮಯ್ಯಾ.
    ಸ್ವಾಯತಲಿಂಗವಿಡಿದು ಸನ್ನಹಿತಲಿಂಗವ ಕಾಣಬೇಕು ಸಿದ್ಧರಾಮಯ್ಯಾ.
    ಸನ್ನಹಿತಲಿಂಗವಿಡಿದು ಮಹಾಲಿಂಗವ ಕಾಣಬೇಕು ಸಿದ್ಧರಾಮಯ್ಯಾ.
    ಮಹಾಲಿಂಗವಿಡಿದು ಜಂಗಮಲಿಂಗವ ಕಾಣಬೇಕು ಸಿದ್ಧರಾಮಯ್ಯಾ.
    ಜಂಗಮಲಿಂಗವಿಡಿದು ಶಿವಲಿಂಗವ ಕಾಣಬೇಕು ಸಿದ್ಧರಾಮಯ್ಯಾ.
    ಶಿವಲಿಂಗವಿಡಿದು ಗುರುಲಿಂಗವ ಕಾಣಬೇಕು ಸಿದ್ಧರಾಮಯ್ಯಾ.
    ಗುರುಲಿಂಗವಿಡಿದು ಆಚಾರಲಿಂಗವ ಕಾಣಬೇಕು ಸಿದ್ಧರಾಮಯ್ಯಾ-
    ಇಂತೀ ಆಚಾರಲಿಂಗವಿಡಿದು ಷಟ್ಸ್ಥಲದ ಆದಿ ಮಧ್ಯಾಂತವರಿದು, ಸಂಬಂದಿಸಿ,
    ಒಂದು ಮಾಡಿಕೊಂಡಿಪ್ಪ ಈ ಕರಸ್ಥಲದನುವ,
    ಗುಹೇಶ್ವರನ ಶರಣ ಸಂಗನಬಸವಣ್ಣ ಬಲ್ಲ.
    ಬೆಸಗೊಂಬ ಬಾರಾ ಸಿದ್ಧರಾಮಯ್ಯಾ./331

  332. ಆಯತವಾಯಿತ್ತು ಅನುಭಾವ, ಸ್ವಾಯತವಾಯಿತ್ತು ಶಿವಜ್ಞಾನ,
    ಸಮಾಧಾನವಾಯಿತ್ತು ಸದಾಚಾರ.-
    ಇಂತೀ ತ್ರಿವಿಧವು ಏಕಾರ್ಥವಾಗಿ,
    ಅರುಹಿನ ಹೃದಯ ಕಂದೆರೆದು,
    ಅನಂತಲೋಕಾಲೋಕದ ಅಸಂಖ್ಯಾತ ಮಹಾಗಣಂಗಳೆಲ್ಲರು
    ಲಿಂಗಭಾವದಲ್ಲಿ ಭರಿತರಾಗಿ, ಗಗನಸಿದ್ಧಾಂತದಿಂದ ಉಪದೇಶಕ್ಕೆ ಬಂದು
    ಭಕ್ತಿರಾಜ್ಯವನೆ ಹೊಕ್ಕು, ನಿಜಲಿಂಗಸುಕ್ಷೇತ್ರವನೆ ಕಂಡು,
    ಅಮೃತಸರೋವರದೊಳಗಣ ವಿವೇಕವೃಕ್ಷ ಪಲ್ಲವಿಸಲು
    ವಿರಕ್ತಿಯೆಂಬ ಪುಷ್ಪ ವಿಕಸಿತವಾಗಲು,
    ಪರಮಾನಂದವೆಂಬ ಮಠದೊಳಗೆ, ಪರಿಣಾಮ ಪಶ್ಚಿಮಜ್ಯೋತಿಯ ಬೆಳಗಿನಲ್ಲಿ
    ಪರುಷದ ಸಿಂಹಾಸನವನಿಕ್ಕಿ ಪ್ರಾಣಲಿಂಗ ಮೂರ್ತಿಗೊಂಡಿರಲು,
    ದಕ್ಷಿಣವ ದಾಂಟಿ ಉತ್ತರಾಬ್ಧಿಯಲ್ಲಿ ನಿಂದು
    ಅಖಂಡ ಪರಿಪೂರ್ಣಪೂಜೆಯ ಮಾಡುವವರಿಗೆ
    ನಮೋನಮೋ ಎಂಬೆ ಗುಹೇಶ್ವರಾ./332

  333. ಆಯಿತ್ತು ಬಸವಾ ನಿನ್ನಿಂದ ಗುರುಸ್ವಾಯತವೆನಗೆ.
    ಆಯಿತ್ತು ಬಸವಾ ನಿನ್ನಿಂದ ಲಿಂಗಸ್ವಾಯತವೆನಗೆ.
    ಆಯಿತ್ತು ಬಸವಾ ನಿನ್ನಿಂದ ಜಂಗಮಸ್ವಾಯತವೆನಗೆ.
    ಆಯಿತ್ತು ಬಸವಾ ನಿನ್ನಿಂದ ಪ್ರಸಾದಸ್ವಾಯತವೆನಗೆ.
    ಇಂತೀ ಚತುರ್ವಿಧ ಸ್ವಾಯತವನು ನೀನೆ ಮಾಡಿದೆಯಾಗಿ
    ನಮ್ಮ ಗುಹೇಶ್ವರಲಿಂಗಕ್ಕೆ ವಿಳಾಸವಾದೆಯಲ್ಲಾ ಸಂಗನಬಸವಣ್ಣಾ./333

  334. ಆಯಿತ್ತೆ ಉದಯಮಾನ, ಹೋಯಿತ್ತೆ ಅಸ್ತಮಾನ.
    ಅಳಿದವಲ್ಲಾ ನೀರಲಾದ ನಿರ್ಮಿತಂಗಳೆಲ್ಲವು !
    ಕತ್ತಲೆಗವಿಯಿತ್ತು ಮೂರು ಲೋಕದೊಳಗೆ.
    ಇದರಚ್ಚುಗವೇನು ಹೇಳಾ ಗುಹೇಶ್ವರಾ ?/334

  335. ಆರಕ್ಕೆಯ ಸಿರಿಗೆ ಆರಕ್ಕೆ ಚಿಂತಿಸುವರು.
    ಆರಕ್ಕೆಯ ಬಡತನಕ್ಕೆ ಆರಕ್ಕೆ ಮರುಗುವರು.
    ಇದಾರಕ್ಕೆ ? ಏನಕ್ಕೆ ?-ಮಾಯದ ಬೇಳುವೆ ಹುರುಳಿಲ್ಲ.
    ಕೊಂದು ಕೂಗಿತ್ತು ನೋಡಾ ಗುಹೇಶ್ವರಾ/335

  336. ಆರಾದಿಸಿ ವಿರೋದಿಸುವರೆ ? ಪೂಜಿಸಿ ಪೂಜೆಯ ಮರೆಯುವರೆ ?
    ಜಂಗಮಲಿಂಗವೆಂದರಿದವರು ಸಂಚ ತಪ್ಪುವರೆ ?
    ಗಾಳಿಯೂ ಗಂಧವೂ ಕೂಡಿದಂತೆ ಜಗದೊಳಗೆ ಇದೆ !
    ಕೀರ್ತಿವಾರ್ತೆಯ ಹಡೆದೆಯಲ್ಲಾ ಬಸವಣ್ಣಾ.
    ನಿನ್ನ ಶಿಶುವಿನೊಡತಣ ತೆರಹುಮರಹ ಪ್ರಮಥರು ಮೆಚ್ಚುವರೆ ?
    ತಿಳಿದು ನೋಡುವಡೆ ಗುಹೇಶ್ವರನ ಶರಣ ಅಲ್ಲಯ್ಯಂಗೆ
    ನೀನು ಪರಮಾರಾಧ್ಯ ಕಾಣಾ ಸಂಗನಬಸವಣ್ಣ./336

  337. ಆರಾರ ನೇಮಕ್ಕೆ ಸಂದಿತ್ತು,
    ಇಚ್ಛಾಭೋಜನಕ್ಕೆ ಕೃತ್ಯವಾಯಿತ್ತು.
    ಮನಘನದೊದಗ ಕಂಡೆಯಾ ಸಂಗನಬಸವಣ್ಣಾ,
    ಗುಹೇಶ್ವರಲಿಂಗಕ್ಕೆ ಆಶ್ಚರ್ಯವಾಯಿತ್ತು./337

  338. ಆರಾರ ಭಾವಕ್ಕೆ ತೋರಿದಂತೆ ಆ ಕುಳಕ್ಕೆ ಸುಖವಾಗಿಪ್ಪನು.
    ಹಿಡಿದ ವ್ರತನೇಮಂಗಳಲ್ಲಿ ಬಿಡುಗಡೆ ಇಲ್ಲದಿರಬೇಕು.
    ತಾ ಮಾಡುವ ನಿತ್ಯನೇಮಂಗಳಲ್ಲಿ ಭಾವಶುದ್ಧವಾಗಿಪ್ಪಡೆ
    ಗುಹೇಶ್ವರಲಿಂಗಕ್ಕೆ ಅನ್ಯಬಿನ್ನವಿಲ್ಲ ಮಡಿವಾಳ ಮಾಚಯ್ಯಾ/338

  339. ಆರು ಅಂಕಣದೊಳಗಾರು ದರುಶನ ಪೂಜೆ,
    ಆರೂಢರೂಢಾದಿಯೋಗಿಗಳಿರುತ್ತಿರಲು,
    ಆರಾರಿಂದತ್ತತ್ತ ವಿೂರಿ ತೋರುವ ಸ್ವಯಂಜ್ಯೋತಿ ಇರಲು,
    ಬೇರೆಯರಸಲುಂಟೆ ಶಿವಯೋಗವು ?
    ಆರು ಅಂಕಣದೊಳಗೆ ಆರು ಮಂದಿಯ
    ಸಂದಣಿಯ ಓಲಗದ ಸಡಗರವೆಂದು
    ಆರೂಢ ಯೋಗಿಗಳದನೆಣಿಕೆಗೊಳರು.
    ಮೂರು ಮನೆಯ ಮತ್ತೆ ದಾಳಿಗೊಳುವ ಕಾರಣಿಕರವಲ್ಲವಾಗಿ
    ವಿೂರಿ ಒಂಬತ್ತು ಗೊಪೆಯೊಳು
    ಲಯ ಗಮನ ಸ್ಥಿತ್ಯರ್ಥಂಗಳ ಹಂಗಿಲ್ಲದ ಹಂಗಿನಲ್ಲಿ
    ನೀನು ನಿನ್ನಲ್ಲಿ ಪತಂಗನ್ಯಾಯದಂತೆ
    ಗುಹೇಶ್ವರನೊಳೊಂದು ಕಂಡಾ./339

  340. ಆರು ಚಕ್ರದಲ್ಲಿ ಅರಿದಿಹೆನೆಂಬ ಅಜ್ಞಾನ ಜಡರುಗಳು ನೀವು ಕೇಳಿರೊ !
    ಅದೆಂತೆಂದಡೆ :
    ಆಧಾರಚಕ್ರ ಪೃಥ್ವಿ ಸಂಬಂಧ, ಅಲ್ಲಿಗೆ ಬ್ರಹ್ಮನದಿದೇವತೆ,
    ಆಚಾರ ಲಿಂಗವ ಪಿಡಿದು ಯೋಗಿಯಾಗಿ ಸುಳಿದ !
    ಸ್ವಾದಿಷ್ಠಾನ ಚಕ್ರ ಅಪ್ಪುವಿನ ಸಂಬಂಧ, ಅಲ್ಲಿಗೆ ವಿಷ್ಣು ಅದಿದೇವತೆ,
    ಗುರುಲಿಂಗವ ಪಿಡಿದು ಜೋಗಿಯಾಗಿ ಸುಳಿದ !
    ಮಣಿಪೂರಕಚಕ್ರ ಅಗ್ನಿಯ ಸಂಬಂಧ, ಅಲ್ಲಿಗೆ ರುದ್ರನದಿದೇವತೆ,
    ಶಿವಲಿಂಗವ ಪಿಡಿದು ಶ್ರವಣನಾಗಿ ಸುಳಿದ !
    ಅನಾಹತಚಕ್ರ ವಾಯು ಸಂಬಂಧ, ಅಲ್ಲಿಗೆ ಈಶ್ವರನದಿದೇವತೆ,
    ಜಂಗಮಲಿಂಗವ ಪಿಡಿದು ಸನ್ಯಾಸಿಯಾಗಿ ಸುಳಿದ !
    ವಿಶುದ್ಧಿಚಕ್ರ ಆಕಾಶ ಸಂಬಂಧ, ಅಲ್ಲಿಗೆ ಸದಾಶಿವನದಿದೇವತೆ,
    ಪ್ರಸಾದಲಿಂಗವ ಪಿಡಿದು ಕಾಳಾಮುಖಿಯಾಗಿ ಸುಳಿದ !
    ಆಜ್ಞಾಚಕ್ರ ಪರತತ್ತ್ವ ಸಂಬಂಧ ಅಲ್ಲಿಗೆ ಪರಶಿವನದಿದೇವತೆ,
    ಮಹಾಲಿಂಗವ ಪಿಡಿದು ಪಾಶುಪತಿಯಾಗಿ ಸುಳಿದ !
    ಇಂತೀ ಆರುದರುಶನಂಗಳು ಬಂದಡೆ ಅಂಗಳವ ಹೋಗಲೀಸಿರಿ !
    ಆ ಲಿಂಗ ನಿಮಗೆಂತಪ್ಪವು ?
    ಇದು ಕಾರಣ, ಮುಂದಿರ್ದ ಗುರುಲಿಂಗಜಂಗಮದ ತ್ರಿವಿಧ ಸಂಬಂಧವನರಿಯದೆ
    ಷಟ್ಸ್ಥಲದಲ್ಲಿ ತೃಪ್ತರಾದೆವೆಂಬ ಭ್ರಷ್ಟರ ನೋಡಾ ಗುಹೇಶ್ವರಾ !/340

  341. ಆರು ಚಕ್ರದೊಳಗೆ ಆರುಭೂತಂಗಳೇರಿಪ್ಪವಯ್ಯಾ
    ಅವರೊಳಗೆ ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಆತ್ಮತತ್ವವೆಂಬ
    ಆರು ಅದಿದೇವತೆಗಳಿಪ್ಪವಯ್ಯಾ.
    ಇಂತಪ್ಪ ಷಟ್ಕರ್ಮ ಸಾದಾಖ್ಯರ
    ಹಾನಿ ಮಾಡಿ ದಾಟುವರನೆ ಭಕ್ತಜಂಗಮವೆಂಬೆನು ಕಾಣಾ ಗುಹೇಶ್ವರಾ. /341

  342. ಆರು ದರುಶನ ಅನಾಚಾರವ ನಡೆದವು,
    ಸುರೆಯ ಕುಡಿದವು, ಮಾಂಸವ ತಿಂದವು.
    ಆರು ದರುಶನಕ್ಕೆ ಅನಾಚಾರವಾದುದೆಂದು
    ನಾನು ಗುರುವಾದೆ ಕಾಣಾ ಗುಹೇಶ್ವರಾ./342

  343. ಆರು ಬಣ್ಣದ ಮೃಗವು ತೋರಿಯಡಗಿತ್ತು.
    ಬಯಲ ಮೂರು ಲೋಕದೊಳಗೆ ಸಾರಿ, ಹೆಜ್ಜೆಯ ನೋಡಿ
    ತೊರೆಯ ಬೆಂಬಳಿವಿಡಿದು ತೋಹಿನಲ್ಲಿಗೆ ಬಂದಿತ್ತು, ಮೃಗವು.
    “ಸ್ಯೋಹಂ ಸ್ಯೋಹಂ” ಎನ್ನುತ್ತಿದ್ದಿತ್ತು, ಇಹಪರವ ಮೀರಿ ನಿಂದಿತ್ತು.
    ತೋರಲಿಲ್ಲದ ಬಿಲ್ಲು ಬೇರೆನಿಸದ ಬಾಣ,
    ಅರುಹಿನ ಕೈಯಲ್ಲಿ ಕುರುಹ ಬಾಣಸವ ಮಾಡಿ
    ತೆರಹಿಲ್ಲದ ಪಾದಕದಲ್ಲಿ (ಶಾಖದಲ್ಲಿ?) ಅಡಿಗೆಯ ಮಾಡಿದ ಬೋನವ
    ಅರ್ಪಿತವ ಮಾಡಿದ ಪ್ರಸಾದದಿಂದ ಸುಖಿಯಾದೆ ಗುಹೇಶ್ವರಾ./343

  344. ಆರುಲಿಂಗದಲ್ಲಿ ಅರಿದಿಹೆನೆಂಬ ಆರುಹುಗೇಡಿಗಳು ನೀವು ಕೇಳಿರೊ !
    ಆರುಲಿಂಗ ನಿಮಗೆಲ್ಲಿಹವು ?
    ಅದೆಂತೆಂದಡೆ:ಆಚಾರಲಿಂಗ ಬ್ರಹ್ಮಂಗೆ ಸಂಬಂಧ,
    ಗುರುಲಿಂಗ ವಿಷ್ಣುವಿಂಗೆ ಸಂಬಂಧ,
    ಶಿವಲಿಂಗ ರುದ್ರಂಗೆ ಸಂಬಂಧ,
    ಜಂಗಮಲಿಂಗ ಈಶ್ವರಂಗೆ ಸಂಬಂಧ,
    ಪ್ರಸಾದಲಿಂಗ ಸದಾಶಿವಂಗೆ ಸಂಬಂಧ,
    ಮಹಾಲಿಂಗ ಪರಶಿವಂಗೆ ಸಂಬಂಧ,
    ಇಂತಾರುಲಿಂಗ ಆರುದರುಶನಕ್ಕೆ ಸಂಬಂಧ.
    ನಿಮ್ಮ ಸಂಬಂಧವ ನೀವು ಬಲ್ಲಿರೆ ಹೇಳಿರೊ ! ಅರಿಯದಿರ್ದಡೆ ಕೇಳಿರೊ !
    ಗುರುಲಿಂಗ ಜಂಗಮವೆಂಬ ತ್ರಿವಿಧ ಸಂಬಂಧವ ತಿಳಿದು !
    ಆರು ಪರಿಯ ಶಿಲೆಯಂ ಮೆಟ್ಟಿ ! ಮೂರುಬಾಗಿಲ ತೆರೆದು !
    ಶ್ರೀ ಗುರುವಿನ ಪ್ರಸಾದವ ಸವಿದು ! ಮುಂದಿರ್ದ ಲಿಂಗಸಂಗವ ಮಾಡಿ !
    ಆ ಪ್ರಥಮಶಿವನೆಂಬ ಜಂಗಮವ ನೋಡುತ್ತಾ ನೋಡುತ್ತಾ ನಿಬ್ಬೆರಗಾಗಬೇಕು !
    ಇದು ಕಾರಣ ಆರುಮೂರುಗಳೆಂಬ ಮರವೆಯ ಹರಿದು,
    ತಟ್ಟುಮುಟ್ಟುಗಳೆಂಬ ಭ್ರಮೆಯ ಜರೆದು ! ಅಂಗಲಿಂಗವೆಂಬ ದ್ವಂದ್ವವ ಹಿಂಗಿ
    ನಿಸ್ಸಂಗಿಯಾಗಿರ್ದೆನಯ್ಯಾ ಗುಹೇಶ್ವರಾ !/344

  345. ಆರುಸ್ಥಲದಲ್ಲಿ ಅರಿತಿಹೆನೆಂದು
    ಸಹಭೋಜನದಲ್ಲಿ ಉಂಬ ಅಣ್ಣಗಳು ನೀವು ಕೇಳಿರೊ !
    ಅಂಗದ ಮೇಲೆ ಲಿಂಗಸಂಬಂದಿಯಾದಡೇನಯ್ಯ,
    ಆ ಲಿಂಗವ ತನ್ನ ಪ್ರಾಣಕ್ಕೆ ಅವಧರಿಸದನ್ನಕ್ಕ !
    ಆ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರ
    ಬಾಹ್ಯಕ್ರೀಯ ಮಾಡಿದಡೇನಯ್ಯ ನೈಷ್ಠೆಇಲ್ಲದನ್ನಕ್ಕ
    ಅಷ್ಟಮದಂಗಳ ನಷ್ಟವಮಾಡಿ ಪಂಚೇಂದ್ರಿಯಂಗಳ ಲಿಂಗಮುಖವ ಮಾಡಿ
    ದೇಹೇಂದ್ರಿಯ ಮನ ಪ್ರಾಣಾದಿಗಳ ಪ್ರಕೃತಿಯನಳಿದು !
    ಇಷ್ಟ ಪ್ರಾಣ ಭಾವವೆಂಬ ತ್ರಿವಿಧ ಲಿಂಗಕ್ಕೆ
    ರೂಪು ರುಚಿ ತೃಪ್ತಿಯನೀವ ವರ್ಮಾದಿವರ್ಮಂಗಳ ಭೇದವನರಿಯದೆ !
    ಕರಸ್ಥಲದಲ್ಲಿ ಲಿಂಗವಿಡಿದು ಸಹಭೋಜನವೆಂದು ಒಂದಾಗಿ ಉಂಡು
    ತಮ್ಮ ಒಡಲ ಹೊರೆವ ಲಿಂಗದ್ರೋಹಿಗಳ ನೋಡಿ ನಗುತ್ತಿರ್ದೆನಯ್ಯಾ
    ಗುಹೇಶ್ವರಾ./345

  346. ಆರೂ ಇಲ್ಲದ ಅರಣ್ಯದೊಳಗೆ ಮನೆಯ ಕಟ್ಟಿದರೆ,
    ಕಾಡುಗಿಚ್ಚು ಎದ್ದುಬಂದು ಹತ್ತಿತ್ತಲ್ಲಾ !
    ಆ ಉರಿಯೊಳಗೆ ಮನೆ ಬೇವಲ್ಲಿ, ಮನೆಯೊಡೆಯನೆತ್ತ ಹೋದನೊ?
    ಆ ಉರಿಯೊಳಗೆ ಬೆಂದ ಮನೆ, ಚೇಗೆಯಾಗುದದ ಕಂಡು,
    ಮನೆಯೊಡೆಯನಳಲುತ್ತ ಬಳಲುತ್ತೈದಾನೆ.
    ಗುಹೇಶ್ವರಾ, ನಿಮ್ಮ ಒಲವಿಲ್ಲದಠಾವ ಕಂಡು,
    ಮನದಲ್ಲಿ ಹೇಸಿ ತೊಲಗಿದೆನಯ್ಯಾ./346

  347. ಆಲಿಕಲ್ಲ ನಡುವೆ ಆರಯ್ಯಾ ಅಗ್ನಿಯನಿರಿಸಿದವರು ?
    ಅದು ನಂದದೆ ಉರಿಯದೆ ನಿಂದ ಪರಿಯ ನೋಡಾ !
    ಮನಪವನಗಳ ಅಡುಗಬ್ಬನಿಕ್ಕಿ,
    ಅಗ್ನಿಯ ಪಟುಮಾಡಬಲ್ಲವರನೊಬ್ಬರನೂ ಕಾಣೆ !
    ಹಸಿಯಡಗನೆ ಹಿಡಿದು ಹಸಿದು ಸತ್ತರು.
    ಗುಹೇಶ್ವರಲಿಂಗದಲ್ಲಿ ಪ್ರಾಣಲಿಂಗಿಗಳಪೂರ್ವ !/347

  348. ಆವ ಕಾಯಕವಾದಡೂ ಒಂದೇ ಕಾಯಕವಯ್ಯಾ.
    ಆವ ವ್ರತವಾದಡೂ ಒಂದೇ ವ್ರತವಯ್ಯಾ.
    ಆಯ ತಪ್ಪಿದಡೆ ಸಾವಿಲ್ಲ; ವ್ರತ ತಪ್ಪಿದಡೆ ಕೂಡಲಿಲ್ಲ.
    ಕಾಕಪಿಕದಂತೆ ಎಡೆಯಾಡಲು ನಾಯಕನರಕ ಗುಹೇಶ್ವರ./348

  349. ಆವ ಜಾತಿಯಾದಡೂ ಆಗಲಿ;
    ಪುರಾತನ ಚಾರಿತ್ರದಲ್ಲಿ ನಡೆದು,
    ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಬಿಮಾನಮಂ ಕೊಟ್ಟು,
    ಅಹಂಕಾರವಳಿದಿಹಂತಹ ಮಹಾತ್ಮರ
    ಬಾಯ ತಂಬುಲವ ಮೆಲುವೆ, ಬೀಳುಡಿಗೆಯ ಹೊದಿವೆ.
    ಅವರ ಪಾದರಕ್ಷೆಗಳೆರಡನೂ,
    ಮಂಡೆಯ ಮೇಲೆ ಹೊತ್ತುಕೊಂಡು ಬದುಕುವೆನಯ್ಯಾ.
    ಆ ಗಣಂಗಳ ದಾಸನ ದಾಸ ನಾನು,
    ಜನ್ಮ ಜನ್ಮದಲ್ಲಿ ಆಗುವೆ ಕಾಣಾ ಗುಹೇಶ್ವರಾ/349

  350. ಆವನಾದಡೇನಯ್ಯಾ ಮಾನವನಪ್ಪುದು ಅರಿದಯ್ಯಾ.
    ಮಾನವನಾಗಿ ಕಿಂಚಿನ್ಮಾತ್ರ ಶಿವಜ್ಞಾನವಿಲ್ಲದಿದ್ದಡೆ
    ಶ್ವಾನ ಶರೀರವ ಹೊರೆದಂತೆ.
    ಅವರನರಿದಡೆ ಸುಖವಿಲ್ಲ ಮರೆದಡೆ ದುಃಖವಿಲ್ಲ.
    ಬದುಕಿದಡೆ ಆಗಿಲ್ಲ ಸತ್ತಡೆ ಚೇಗಿಲ್ಲ.
    `ಏನೋ’ ಎಂಬ ಸಂದೇಹವಿಲ್ಲ/350

  351. ಆಶೆಯ ವೇಷವ ಧರಿಸಿ ಭಾಷೆ ಪಲ್ಲಟವಾದರೆ
    ಎಂತಯ್ಯಾ ಶರಣಪಥ ವೇದ್ಯವಹುದು ?
    ತ್ರಿಭುವನದ ಮಸ್ತಕದ ಮೇಲಿಪ್ಪ ಮೂರು ಗಿರಿಯ ಹುಡಿಗುಟ್ಟದನ್ನಕ್ಕರ
    ಎಂತಯ್ಯಾ ಶಿವಪಥ ಸಾಧ್ಯವಹುದು ?
    ಭದ್ರೆ ನಿಭದ್ರೆಯೆಂಬವರ ಮೂಲವ ನಾಶಮಾಡದನ್ನಕ್ಕರ,
    ಎಂತಯ್ಯಾ ಲಿಂಗೈಕ್ಯವು?
    ಅತಳಲೋಕದಲ್ಲಿ ಕುಳ್ಳಿರ್ದು, ಬ್ರಹ್ಮಲೋಕವ ಮುಟ್ಟಿದೆನೆಂಬವರೆಲ್ಲ
    ಭವಭಾರಕ್ಕೊಳಗಾದುದ ಕಂಡು
    ನಾನು ಬೆರಗಾದೆನು ಗುಹೇಶ್ವರಾ./351

  352. ಆಸನಬಂಧನರು ಸುಮ್ಮನಿರರು.
    ಭಸ್ಮವ ಹೂಸಿ ಸ್ವರವ ಹಿಡಿದವರು ಸಾಯದಿಪ್ಪರೆ?
    ಸತ್ಯವನೆ ಮರೆದು, ಅಸತ್ಯವನೆ ಹಿಡಿದು,
    ಸತ್ತುಹೋದರು ಗುಹೇಶ್ವರಾ./352

  353. ಆಸುರವಾದುದು ಬೀಸರವಾಯಿತ್ತು.
    ಬಲ್ಲೆನೊಲ್ಲೆ ನೀ ಕೊಡುವ ವರವನು.
    ನಾ ಬೇಡಿತ್ತು ನಿನ್ನ ಮುಖದಲಿಲ್ಲ ಗುಹೇಶ್ವರಾ./353

  354. ಆಸೆಗೆ ಸತ್ತುದು ಕೋಟಿ, ಆಮಿಷಕ್ಕೆ ಸತ್ತುದು ಕೋಟಿ,
    ಹೊನ್ನು ಹೆಣ್ಣು ಮಣ್ಣಿಂಗೆ ಸತ್ತುದು ಕೋಟಿ.
    ಗುಹೇಶ್ವರಾ ನಿಮಗಾಗಿ ಸತ್ತವರನಾರನೂ ಕಾಣೆ./354

  355. ಆಸೆಯೆಂಬ ಕೂಸನೆತ್ತಲು,
    ರೋಷವೆಂಬ ತಾಯಿ ಮುಂದೆ ಬಂದಿಪ್ಪಳು ನೋಡಾ-
    ಇಂತೀ ಎರಡಿಲ್ಲದ ಕೂಸನೆತ್ತ ಬಲ್ಲಡೆ
    ಆತನೇ ಲಿಂಗೈಕ್ಯನು ಗುಹೇಶ್ವರಾ. /355

  356. ಆಸೆಯೆಂಬ ಶೂಲದ ಮೇಲೆ, ವೇಷವೆಂಬ ಹೆಣನ ಕುಳ್ಳಿರಿಸಿ;
    ಧರೆಯ ಮೇಲುಳ್ಳ ಹಿರಿಯರು ಹೀಂಗೆ ಸವೆದರು ನೋಡಾ !
    ಆಸೆಯ ಮುಂದಿಟ್ಟುಕೊಂಡು ಸುಳಿವ ಹಿರಿಯರ ಕಂಡು,
    ಹೇಸಿಕೆಯಾಗಿತ್ತು ಗುಹೇಶ್ವರಾ/356

  357. ಆಹಾ ಮನವೆ, ಮರೆದೆಯಲ್ಲಾ ನಿನ್ನ ಪೂರ್ವಾಪರವ,
    ಘನ ಮನದೊಳಡಗಿ, ಆ ಮನ ಲಿಂಗದೊಳಡಗಿ,
    ಆ ಲಿಂಗವೆನ್ನ ಕರಸ್ಥಲಕ್ಕೆ ಬಂದ ಬಳಿಕ
    ಅಳಿಯಿತ್ತು ಅಗಲಿತ್ತು ಎಂಬ ಭಾವಭ್ರಾಂತಿ ಇದೇನೊ ?
    ಜನನವಿಲ್ಲದ ಘನಕ್ಕೆ ಮರಣವುಂಟೆ ?
    ತೆರಹಿಲ್ಲದ ನಿಜವು ತನ್ನಲ್ಲಿ ತಾನು ವೇದ್ಯವಾಗಿಪ್ಪುದಲ್ಲದೆ
    ಇದಿರಿಟ್ಟು ತೋರದೆಂಬ ಅಜ್ಞಾನವಿದೇನೊ ?
    `ನೀ’ `ನಾ’ ಎಂಬುದು ಮಾದು.
    `ತಾನೆ’ ಆಗೆ ಸಾಧ್ಯವಾಯಿತ್ತು ! ಇದೇನೆಂಬೆ ಗುಹೇಶ್ವರಾ./357

  358. ಆಳವರಿಯದ ಭಾಷೆ, ಬಹುಕುಳವಾದ ನುಡಿ-
    ಇಂತೆರಡರ ನುಡಿ ಹುಸಿಯಯ್ಯಾ.
    ಬಹು ಭಾಷಿತರು; ಸುಭಾಷಿತ ವರ್ಜಿತರು.
    `ಶರಣಸತಿ ಲಿಂಗಪತಿ’ ಎಂಬರು ಹುಸಿಯಯ್ಯಾ.
    ಇಂತಪ್ಪವರ ಕಂಡು ನಾನು ನಾಚಿದೆನಯ್ಯಾ ಗುಹೇಶ್ವರಾ./358

  359. ಆಳುದ್ದಿಯದೊಂದು ಬಾವಿ ಆಕಾಶದ ಮೇಲೆ ಹುಟ್ಟಿತ್ತು ನೋಡಾ !
    ಆ ಬಾವಿಯ ನೀರನೊಂದು ಮೃಗ ಬಂದು ಕುಡಿಯಿತ್ತು.
    ಕುಡಿಯ ಬಂದ ಮೃಗವು ಆ ನೀರೊಳಗೆ ಮುಳಿಗಿದಡೆ
    ಉರಿಯ ಬಾಣದಲೆಚ್ಚು ತೆಗೆದೆ ನೋಡಾ !
    ಒಂದೆ ಬಾಣದಲ್ಲಿ ಸತ್ತ ಮೃಗವು,
    ಮುಂದಣ ಹೆಜ್ಜೆಯನಿಕ್ಕಿತ್ತ ಕಂಡೆ !
    ಅಂಗೈಯೊಳಗೊಂದು ಕಂಗಳು ಮೂಡಿ,
    ಸಂಗದ ಸುಖವು ದಿಟವಾಯಿತ್ತು !
    ಲಿಂಗಪ್ರಾಣವೆಂಬುದರ ನಿರ್ಣಯವನು ಇಂದು ಕಂಡೆನು ಗುಹೇಶ್ವರಾ./359

  360. ಇಂತೀ ಮರ್ತ್ಯಲೋಕದ ಮಹಾಗಣಂಗಳು
    ಅನಂತ ಪರೀಕ್ಷಣೆಯಿಂದ ಲಕ್ಷಣಾಲಕ್ಷಣಂಗಳಿಂದ ವಿಚಾರಿಸಿ
    ಮಾರ್ಗಕ್ರಿಯೆವಿಡಿದು ಭಕ್ತಗಣ ಮಧ್ಯದಲ್ಲಿ ಸಾಕಾರಕಂಥೆಯ ನಡೆನುಡಿಗಳ,
    ಪರಶಿವ ಗುರುಲಿಂಗಜಂಗಮಕ್ಕೆ ಸಮರ್ಪಿಸಿ
    ನಿರ್ಮಾಲ್ಯವಾದ ಪುಷ್ಪವ
    ಮಾರ್ಗಕ್ರಿಯಾಸ್ವರೂಪ ಸಮಾದಿಯಲ್ಲಿ ಬಿಟ್ಟು
    ನಿರವಯವಾದರು ನೋಡ !
    ಇಂತು ಮಾರ್ಗಾಚರಣೆಯನರಿದು ಅದರಲ್ಲಿ ಸಂತೃಪ್ತರಾಗಿ
    ಅದರಿಂದ ಮೀರಿತೋರುವ ಮೀರಿದ ಕ್ರಿಯಾಚರಣೆಯನರಿದು
    ಇದ್ಧು ಇಲ್ಲದಂತೆ, ಹೊದ್ದಿ ಹೊದ್ದದಂತೆ ನಿರಾಕಾರಕಂಥೆಯ ಪರಿಮಳ
    ನಡೆನುಡಿಗಳ
    ನಿರಾಕಾರ ಪರಶಿವ ಗುರುಲಿಂಗಜಂಗಮಕ್ಕೆ ಸಮರ್ಪಿಸಿ
    ನಿರ್ಮಾಲ್ಯವಾದ ಪುಷ್ಪವ
    ಮೀರಿದ ಕ್ರಿಯಾಸ್ವರೂಪ ಸಮಾದಿಯಲ್ಲಿ ಬಿಟ್ಟು
    ನಿರವಯ ನಿರಂಜನರಾದರು ನೋಡ !
    ಇಂತು ಮಾರ್ಗಕ್ರಿ[ಯೆ]ಯ ಮೀರಿದ ಕಿ[ಯೆ]ಯ
    ನಡೆ-ನುಡಿ-ಪರಿಣಾಮ-ತೃಪ್ತಿಯಲ್ಲಿ ತಾವೆ ತಾವಾಗಿರ್ಪರು ನೋಡ !
    ಗುಹೇಶ್ವರಲಿಂಗಪ್ರಭುವೆಂಬ ನಾಮರೂಪುಕ್ರಿಯವಳಿದು
    ಸಂಗನಬಸವಣ್ಣನ ಬೆಳಗಿನೊಳಗೆ
    ಮಹಾಬಯಲಾದರು ನೋಡ !/360

  361. ಇಂದು ನಾಳೆ ಮುಕ್ತಿಯ ಪಡೆವೆನೆಂಬ ಶಿಷ್ಯಂಗೆ
    ಮುಂದಳ ಮುಕ್ತಿಯ ತೋರಿಹೆನೆಂಬ ಗುರುಗಳ ನೋಡಿರೆ !
    ಹೋಮ, ನೇಮ, ಜಪ, ತಪಗಳ ಮಾಡಿ ತಾನುಂಡು
    ಫಲವುಂಟೆಂದ ಗುರು ಹುಸಿದು ಸತ್ತ, ಶಿಷ್ಯ ಹಸಿದು ಸತ್ತ.
    ಹಿಂದಣ ಕಥೆಯ ಹೇಳುವಾತ ಹೆಡ್ಡ, ಮುಂದಣ ಕಥೆಯ ಹೇಳುವಾತ ಮೂಢ,
    ಇಂದಿನ ಘನವ ಹೇಳುವಾತನೆ ಹಿರಿಯನಯ್ಯಾ.
    ತಾ ಹುಟ್ಟಿದಂದೆ ಯುಗಜುಗಂಗಳು ಹುಟ್ಟಿದವು, ತಾನಳಿದಲ್ಲೆ ಯುಗಜುಗಂಗಳಳಿದವು.
    ತನ್ನ ನೇತ್ರಕ್ಕಿಂಪಾದುದೆ ಸುವರ್ಣಸುವಸ್ತು,
    ತನ್ನ ಶ್ರೋತಕ್ಕೆ ಸೊಂಪಾದುದೆ ವೇದಶಾಸ್ತ್ರ, ಪುರಾಣ.
    ತನ್ನ ಘ್ರಾಣಕ್ಕಿಂಪಾದುದೆ ಪರಿಮಳ, ತನ್ನ ಜಿಹ್ವೆಗಿಂಪಾದುದೆ ರುಚಿ,
    ತನ್ನ ಮನ ಮುಳುಗಿದುದೆ ಲಿಂಗ.
    ತನ್ನ ನೆತ್ತಿಯಲ್ಲಿ ಸತ್ಯರ್ಲೊಕ, ಪಾದದಲ್ಲಿ ಪಾತಾಳಲೋಕ,
    ನಡುವೆ ಹನ್ನೆರಡು ಲೋಕ.
    ಅಂಡಜ ಪಿಂಡಜ ಉದ್ಭಿಜ ಜರಾಯುಜವೆಂಬ
    ಎಂಬತ್ತು ನಾಲ್ಕುಲಕ್ಷ ಜೀವರಾಶಿಗಳು.
    ತನ್ನಲ್ಲಿ ಕಾಯವು, ತನ್ನಲ್ಲಿ ಜೀವವು, ತನ್ನಲ್ಲಿ ಪುಣ್ಯವು,
    ತನ್ನಲ್ಲಿ ಪಾಪವು, ತನ್ನಲ್ಲಿ ಶಬ್ದವು, ತನ್ನಲ್ಲಿ ನಿಶ್ಯಬ್ದವು.
    ಒಂದು ಒಡಲೆಂಬ ಊರಲ್ಲಿ ಒಂಬತ್ತು ಶಿವಾಲಯವು
    ಆ ಶಿವಾಲಯದ ಶಿಖರದ ಮೇಲೆ ಶಿವಲಿಂಗದೇವರು
    ಪೂರ್ವಭಾಗದಲ್ಲಿ ಚಂದ್ರಾದಿತ್ಯರು, ಪಶ್ಚಿಮ ಭಾಗದಲ್ಲಿ ಪರಶಿವನು
    ಉತ್ತರ ಭಾಗದಲ್ಲಿ ಮಹೇಶ್ವರನು, ದಕ್ಷಿಣ ಭಾಗದಲ್ಲಿ ರುದ್ರನು
    ಇಂತೀ ಪಂಚೈವರ ಮನದ ಕೊನೆಯ ಕೀಲಿನ ಸಂಚವನರಿದು
    ತುರ್ಯಾವಸ್ಥೆಯಲ್ಲಿ ನಿಲಿಸಿ ಒಡಲುವಿಡಿದು ಕಾಂಬುದೆ ಉಪಮೆ.
    ಈ ಘಟದೇವತೆಯ ಸಟೆಯೆಂದು ಬಿಸುಟು ಮುಂದೆ ತಾ
    ದಿಟವಪ್ಪುದಿನ್ನೆಲ್ಲಿಯದೊ ?
    ಪೃಥ್ವಿಯಳಿದಂದೆ ಭೋಗಾದಿ ಭೋಗಂಗಳಳಿದವು.
    ಅಪ್ಪುವಳಿದಂದೆ ಮಾಯಾಮೋಹಾದಿಗಳಳಿದವು.
    ತೇಜವಳಿದಂದೆ ಹಸಿವು ತೃಷೆಗಳಳಿದವು.
    ವಾಯುವಳಿದಂದೆ ನಡೆನುಡಿ ಚೈತನ್ಯಂಗಳಳಿದವು.
    ಆಕಾಶವಳಿದಂದೆ ಅವು ಅಲ್ಲಿಯೆ ಲೀಯವಾಯಿತ್ತು.
    ಇದು ಕಾರಣ ಉರಿಕೊಂಡ ಕರ್ಪುರದ ಕರಿ ಕಂಡವರುಂಟೆ ?
    ಅಪ್ಪುವುಂಡ ಉಪ್ಪಿನ ಹರಳ ಮರಳಿ ಹೊರೆಯ ಕಟ್ಟಿ ಹೊತ್ತವರುಂಟೆ ?
    ವಾಯುಕೊಂಡ ಜ್ಯೋತಿಯ ಬೆಳಗ ಕಂಡವರುಂಟೆ ?
    ಹರಿ ಬ್ರಹ್ಮಾದಿಗಳ್ಗೆಯು ಕಾಣಬಾರದಾಗಿ.
    ಮಣ್ಣಿನ ಸಾರಾಯದಿಂದ ಮರನುತ್ಪತ್ಯ.
    ಮರದ ಸಾರಾಯದಿಂದ ಎಲೆಯುತ್ಪತ್ಯ
    ಎಲೆಯ ಸಾರಾಯದಿಂದ ಹೂವ ಉತ್ಪತ್ಯ
    ಹೂವ ಸಾರಾಯದಿಂದ ಕಾಯಿ ಉತ್ಪತ್ಯ
    ಕಾಯ ಸಾರಾಯದಿಂದ ಹಣ್ಣು ಉತ್ಪತ್ಯ
    ಹಣ್ಣಿನ ಸಾರಾಯದಿಂದ ರುಚಿ ಉತ್ಪತ್ಯ
    ರುಚಿಯಿಂದತ್ತ ಇಲ್ಲವೆಂಬ ತತ್ವ.
    ಮಣ್ಣು ಮರನು ಅಳಿದ ಬಳಿಕ ಬೇರೆ ರುಚಿಯಿಪ್ಪಠಾವುಂಟೆ ?
    ದೇಹವಳಿದ ಬಳಿಕ ಪ್ರಾಣವಿಪ್ಪುದಕ್ಕೆ ಠಾವುಂಟೆ ? ಇಲ್ಲವಾಗಿ;
    ಇದು ಕಾರಣ, ಗುಹೇಶ್ವರನೆಂಬ ಲಿಂಗವ ಒಡಲು ವಿಡಿದು ಕಂಡೆ ಕಾಣಾ.
    ಸಿದ್ಧರಾಮಯ್ಯ./361

  362. ಇಂದು ಸಾವ ಹೆಂಡತಿಗೆ, ನಾಳೆ ಸಾವ ಗಂಡನವ್ವಾ !
    ಗಳಿಗೆಗಳಿಗೆಗೆ ಮಗು ಹುಟ್ಟಿ ಕೈ ಬಾಯ್ಗೆ ಬಂದಿತ್ತವ್ವಾ !
    ಅರಿವು ಕುರುಹನು ಮರವೆ ನುಂಗಿತ್ತು;
    ಗುಹೇಶ್ವರನುಳಿದನವ್ವಾ !/362

  363. ಇಂದುವಿನ ಬೆಳಗಿನ ಸಂಪತ್ತನಿಂಬುಗೊಂಡ, ಚಕೋರನ
    ಧ್ಯಾನವೆಂತಿಪ್ಪದು,-ಅಂತಾಗಿದ್ದೆ ನಾನು.
    ಮಾತೆ ವಿಯೋಗವಾದ ಶಿಶುವಿನ
    ಧ್ಯಾನವೆಂತಿಪ್ಪುದು-ಅಂತಾಗಿದ್ದೆ ನಾನು.
    ಬಂಧನದಲ್ಲಿ ಸಿಕ್ಕಿದ ಫಣಿಯ
    ಧ್ಯಾನವೆಂತಿಪ್ಪುದು-ಅಂತಾಗಿದ್ದೆ ನಾನು.
    ರಾತ್ರಿಯೊಳು ಮುಗಿದ ಪದ್ಮದ ಭ್ರಮರನ
    ಧ್ಯಾನವೆಂತಿಪ್ಪುದು-ಅಂತಾಗಿದ್ದೆ ನಾನು.
    ಸ್ವಪ್ನದಲ್ಲಿ ದುಷ್ಟ ಕೇಸರಿಯ ಧ್ಯಾನದ
    ಮದಹಸ್ತಿ ಎಂತಿಪ್ಪುದು-ಅಂತಾಗಿದ್ದೆ ನಾನು.
    ನೋಟವಗಲಿದ ನೇಹದ
    ಧ್ಯಾನವೆಂತಿಪ್ಪುದು-ಅಂತಾಗಿದ್ದೆ ನಾನು.
    ಬ್ರಹ್ಮಪಾಶ ವಿಷ್ಣುಮಾಯವನತಿಗಳೆದ ಛಲದಲ್ಲಿ ಏನೆಂದರಿಯದಿದ್ದೆ ನಾನು.
    ಗುಹೇಶ್ವರಲಿಂಗವೆ ಸಂಗನಬಸವಣ್ಣನೊಳಗೆ ಲೀಯವಹ ಭರದಲ್ಲಿ
    ಏನೆಂದರಿಯದಿದ್ದೆ ನಾನು./363

  364. ಇಂದ್ರನಂತೆ ಮಾಡುವೆ, ಚಂದ್ರನಂತೆ ಮಾಡುವೆ,
    ಮಾಣಿಕ್ಯದ ಹೊಳಹಿನಂತೆ ಮಾಡುವೆನಯ್ಯಾ.
    ನೀ ನೋಡದಿರಯ್ಯಾ.
    ಮಾಡುವೆನು ಸೂರ್ಯನ ಪ್ರಭೆಯಂತೆ,
    ನೀ ನೋಡಿ ಮತ್ತಡಗುವ ಕೃತಕವ ನಾನು ಬಲ್ಲೆ.
    ಬೆಡಗು ನಿರಾಳ ಗುಹೇಶ್ವರಾ./364

  365. ಇಕ್ಷುದಂಡಕ್ಕೆ ಕೀಳು ಮೇಲಲ್ಲದೆ
    ಸಕ್ಕರೆಯ ದಂಡಕ್ಕೆ ಕೀಳು ಮೇಲುಂಟೆ ?
    ಪರುಷಪಾಷಾಣಕ್ಕೆ ಕೀಳು ಮೇಲಲ್ಲದೆ
    ಕಡೆಯಾಣಿಗುಂಟೆ ಒರೆಗಲ್ಲು ?
    `ಉಂಟು’ `ಇಲ್ಲ’ ಎಂಬ ಸಂದೇಹ ನಿಂದಲ್ಲಿ
    ಗುಹೇಶ್ವರಲಿಂಗವು ತಾನೆ ಸಿದ್ಧರಾಮಯ್ಯಾ./365

  366. ಇತ(ದಿ?)ರ ಭ್ರಮಿತನು ಭಕ್ತನಲ್ಲ, ಲೋಕೋಪಚಾರಿ ಜಂಗಮವಲ್ಲ.
    ಹೇಳಿಹೆನು ಕೇಳಿರಣ್ಣಾ:
    ಜಂಗಮ ಪ್ರೇಮಿಯಾದರೆ ಭಸಿತ ರುದ್ರಾಕ್ಷೆ ಸಹ ಶಿವಸ್ವರೂಪ ಕಾಣುತ್ತ,
    ನಮಸ್ಕರಿಸಿ ಬಿಜಯಂ ಮಾಡಿಕೊಂಡು ಬಂದು
    ಮನಹರುಷದಲ್ಲಿ ಭೋಜನವ ಮಾಡಿಸೂದೀಗ ಭಕ್ತಂಗೆ ಲಕ್ಷಣ.
    ಕಾಡೊಳಗಿರಲಿ ಊರೊಳಗಿರಲಿ ಮಠದಲ್ಲಿರಲಿ ಮನೆಯಲ್ಲಿರಲಿ
    ಲಿಂಗವಂತರು ಕರೆಯಬಂದರೆ, ಹೋಗಬೇಕೆಂಬ ಅಬಿಲಾಷೆಯುಳ್ಳಡೆ,
    ತಾನಿದ್ದಲ್ಲಿ ತಾ ಮಾಡುವಂಥ ಅಷ್ಟವಿಧಾರ್ಚನೆ ಷೋಡಶೋಪಚಾರ
    ಲಿಂಗಕ್ರಿಯೆಗಳು ನಿತ್ಯನೇಮವು ಆದ ಬಳಿಕ
    ಮತ್ತೆ ತಾ ಹೋಗಿ ತನ್ನ ಗುಂಪ ತೋರದೆ, ಭಕ್ತರಾಶ್ರಯದಲ್ಲಿ
    ಭೋಜನವ ಮಾಡುವುದೀಗ ಜಂಗಮಕ್ಕೆ ಲಕ್ಷಣ.
    ಅಂತಲ್ಲದೆ ಗ್ರಹಸ್ಥಾಶ್ರಮದಲ್ಲಿ ಕ್ರಿಯೆ ಮಾಡಿದರೆ
    ಜಂಗಮಕ್ಕೆ ಹೇಳುವ ಅರಿವು ಕೊರಮಜೀವಿಯಂತಾಯಿತ್ತಾಗಿ-
    ಇದು ಕಾರಣ ಲೋಕೋಪಚಾರಿಗಳಾಗಿ ಒಡಲ ಹೊರೆವವರ
    ನಮ್ಮ ಗುಹೇಶ್ವರಲಿಂಗವು ಬಲ್ಲನಾಗಿ ಅವರ ಒಲ್ಲನಯ್ಯಾ./366

  367. ಇದರ ಒಲೆಯಡಿಯನರುಹಿದಡೆ,
    ಹೊಗೆ ಗೋಳಕನಾಥನ ಕೊರಳ ಸುತ್ತಿತ್ತು,
    ಮಹೀತಳನ ಜಡೆ ಹತ್ತಿತ್ತು, ಮರೀಚನ ಶಿರ ಬೆಂದಿತ್ತು,
    ರುದ್ರನ ಹಾವುಗೆ ಉರಿಯಿತ್ತು, ದೇವಗಣಂಗಳೆಲ್ಲ ವಿತಾಪವಾದರು.
    ಮಡದಿಯರು ಮುಡಿಯ ಹಿಡಿದುಕೊಂಡು ಹೋದರು.
    ಭಸ್ಮಧಾರಿಯಾದೆ ಕಾಣಾ ಗುಹೇಶ್ವರ./367

  368. ಇದು ಎನಗೆ ಆಶ್ಚರ್ಯ; ಹೇಳವ್ವಾ !
    ಕಾಯವಿಲ್ಲದ ಸುಖವ ಜೀವವಿಲ್ಲದ ಭವವ !
    ಆಠಾವ ಹೇಳಾ ಗುಹೇಶ್ವರಲಿಂಗಕ್ಕೆ ?/368

  369. ಇದು ಲೇಸಾಯಿತ್ತು:
    ತುಂಬಿದ ಲೆಕ್ಕಕ್ಕೆ ಮತ್ತೊಂದೆಂದು ಕಡೆಗಾಣಿಸುವಂತೆ,
    ಸ್ಥಾಣುವಿನ ಮರೆಯ ಚೋರನಂತೆ,
    ಅಂಬುದಿಯ ಕೊಂಬಿನಲ್ಲಿದ್ದ ವಿಹಂಗನಂತೆ,
    ಎಲ್ಲಿ ಬಂದಡೂ ಗುಹೇಶ್ವರನೆಂಬ ಭಾವ ಒಂದಾಯಿತ್ತು !/369

  370. ಇದ್ದಿತ್ತೆಂದರಿಯೆ, ಇಲ್ಲವೆಂದರಿಯೆ, ಏನೆಂದರಿಯೆ.
    ಪಂಚಭೂತಪ್ರಾಣಿಯ ಏಕಭೂತಪ್ರಾಣಿ ಬಂದು ಸೋಂಕಿದಡೆ
    ಎಹಂಗೆ ಇದ್ದಿತ್ತು ಅಹಂಗೆ ಇದ್ದಿತ್ತಾಗಿ-ಇದೇನೆಂದರಿಯೆ.
    ಗುಹೇಶ್ವರಲಿಂಗವು ತನ್ನಂತೆ ಮಾಡಿದನಾಗಿ-ಇದೇನೆಂದರಿಯೆ/370

  371. ಇದ್ದುದ ಹೇಳಲಿಲ್ಲ, ಇದ್ದುದ ತೋರಲಿಲ್ಲ,
    ಹೊದ್ದಿದ ಆಶ್ರಮವ ನಾನೇನೆಂಬೆನು ಶಿವನೆ?
    ಭದ್ರಕಾಳಿಯ ಬಸಿರೊಳಗಿರ್ದ ಬಾವಿಯ ಸರ್ಪನು,
    ಸಿದ್ಧರಸದ ಘಟಿಕೆಯ ನುಂಗಿ ಎದ್ದು ಆಡಿತ್ತು ನೋಡಾ !
    ಹದ್ದಿನ ಹೆಡೆಯಲ್ಲಿ ಮಾಣಿಕವಿದ್ದುದು
    ಇಲ್ಲೆಂಬ ಎದ್ದು ಹೇಳುವ ಕನಸು ತಾನಲ್ಲ ಗುಹೇಶ್ವರ./371

  372. ಇನ್ನೇವೆ ಇನ್ನೇವೆ ?
    ಇದು ಮುನ್ನ ಮಾಯದಲಾದ ಭೂತದ ಲಿಂಗ.
    ಅಗಲಲಾಗದ ಮುನ್ನ ಆರೋಗಣೆಯಾಯಿತ್ತು,
    ಕೈದೊಳೆಯದ ಮುನ್ನ ! (ಎಂಜಲು ಹೋಯಿತ್ತು)
    ನಾನಾಗದ ಮುನ್ನ ತಾನೆಯಾಯಿತ್ತು.
    ಗುಹೇಶ್ವರನೆಂಬ ಲಿಂಗ ಎನ್ನೊಳಗಡಗಿತ್ತು./372

  373. ಇಪ್ಪತ್ತೆ ದು ತತ್ವದ ಹತ್ತೆಂಬ ದ್ವಾರದಲ್ಲಿ ಬಳಲುವ
    ವ್ಯರ್ಥಗೇಡಿ ಮನವ ನಾನೇನೆಂಬೆನಯ್ಯಾ?
    ತನ್ನ ತಾ ತಿಳಿಯಲು ತನಗೆ ತಾನನ್ಯವಿಲ್ಲ ಮರುಳೆ
    ಮುತ್ತಯ್ಯನ ಬೆಣ್ಣೆಯ, ಶಿಶು ನುಂಗಿತ್ತು.
    ಮತ್ತೆ ಶಿಶುವಿನ ಸುಖವನೇನೆಂಬೆ ಗುಹೇಶ್ವರಾ?/373

  374. ಇಪ್ಪತ್ತೈದು ತಲೆಯೊಳಗೆ, ಏಳು ಮೊಲೆ ಮುಖವೆಂಟು,
    ಹದಿನಾಲ್ಕು ಬಾಯಿ ನೂರಿಪ್ಪತ್ತು ಕೋರೆದಾಡೆ.
    ಹೃದಯದಲ್ಲಿ ಹುದುಗಿದ ಅಗ್ನಿಯ ತೆಗೆದು ಮುದ್ದಾಡಿಸಿ (ಸೆ ?)
    ದನಿಯ ಧರ್ಮವ ನುಂಗಿ ಮನದ ಬಣ್ಣಗಳಡಗಿ
    ಹೆತ್ತ ತಾಯಿ ಮಗನ ನುಂಗಿ, ಶಿಶು ತಾಯ ಬೆಸಲಾಗಿ
    ಗುಹೇಶ್ವರನೆಂಬ ನಿಲವ ಅಂಗಯ್ಯ ಮೊಲೆ ನುಂಗಿತ್ತು./374

  375. ಇಬ್ಬರ ಮಧ್ಯದಲೊಂದು ಮಗುವು ಹುಟ್ಟಿತ್ತು.
    ಆ ಮಗುವಿನ ಹುಟ್ಟ ತಾಯಿಯೂ ಅರಿಯಳು,
    ತಂದೆಯೂ ಅರಿಯನು !
    ಹೆಸರಿಟ್ಟು ಕರೆದು ಜೋಗುಳವಾಡುತ್ತೈದಾರೆ.
    ಕೈ ಬಾಯಿಗೆ ಬಂದ ಶಿಶು ಮೈದೋರದಿದ್ದಡೆ,
    ಕಂಡು ನಾನು ನಾಚಿದೆನು ಕಾಣಾ ಗುಹೇಶ್ವರಾ./375

  376. ಇಬ್ಬರ ಮಧ್ಯದಲ್ಲಿ ಒಂದು ವಸ್ತುವುಂಟು,
    ಕಂಡಿರೆ ಗಣಂಗಳಿರಾ ? ಕಂಡಿರೆ ಅಣ್ಣಗಳಿರಾ ?
    ಗುರುವಿನ ಗುರು ಇದ ಬೇಗಲ(ನ?)ರಿಯೆ
    ಗುಹೇಶ್ವರಲಿಂಗದಲ್ಲಿ-ಸಂಗನಬಸವಣ್ಣಾ./376

  377. ಇಬ್ಬರ ಹಿಡಿವಡೆ ಒಬ್ಬನ ಕೊಲಬೇಕು,
    ಒಬ್ಬನ ಕೊಂದರೆ ಎಲ್ಲರೂ ಸಾವರು.
    ಎಲ್ಲರೂ ಸತ್ತು ಹಿಡಿದವರಿಬ್ಬರು ಉಳಿದಡೆ,
    ಆ ಇಬ್ಬರ ನಂಬಿ ಬಯಲಾದೆ ಗುಹೇಶ್ವರಾ./377

  378. ಇರುಳ ನುಂಗಿತ್ತು, ಇರುಳಿಲ್ಲ; ಹಗಲ ನುಂಗಿತ್ತು ಹಗಲಿಲ್ಲ.
    ಅರಿವ ನುಂಗಿತ್ತು ಅರಿವಿಲ್ಲ, ಮರಹ ನುಂಗಿತ್ತು ಮರಹಿಲ್ಲ.
    ಕಾಯವ ನುಂಗಿತ್ತು ಕಾಯವಿಲ್ಲ, ಜೀವವ ನುಂಗಿತ್ತು ಜೀವವಿಲ್ಲ.
    ಇವೆಲ್ಲವ ನುಂಗಿತ್ತು-ಇದೇನಯ್ಯಾ, ಸಾವ ನುಂಗದು ಗುಹೇಶ್ವರಾ ?/378

  379. ಇರುಳಿನ ಮುಖದೊಳಗೊಂದು ನವರತ್ನದಖಂಡಿತ ಹಾರವಡಗಿತ್ತು.
    ಹಗಲಿನ ಮುಖದೊಳಗೊಂದು ನವಚಿತ್ರಪತ್ರದ ವೃಕ್ಷವಡಗಿತ್ತು.
    ರತ್ನದ ಹಾರವ ವೃಕ್ಷಕ್ಕಾಹಾರವನಿಕ್ಕಿದಡೆ,
    ಗುಹೇಶ್ವರಲಿಂಗದಲ್ಲಿ ಪ್ರಾಣಲಿಂಗಕ್ಕೆ ಸುಖವಾಯಿತ್ತು./379

  380. ಇರುಳಿನ ಸಂಗವ ಹಗಲೆಂದರಿಯರು
    ಹಗಲಿನ ಸಂಗವನಿರುಳೆಂದರಿಯರು.
    ವಾಯಕ್ಕೆ ನಡೆವರು, ವಾಯಕ್ಕೆ ನುಡಿವರು,
    ವಾಯುಪ್ರಾಣಿಗಳು.
    ಗುಹೇಶ್ವರನೆಂಬ ಅರುಹಿನ ಕುರುಹು
    ಇನ್ನಾರಿಗೆಯೂ ಅಳವಡದು./380

  381. ಇರುಳೊಂದು ಮುಖ ಹಗಲೊಂದು ಮುಖ
    ಕಾಯವೊಂದು ಮುಖ ಜೀವವೊಂದು ಮುಖ,
    ಬುದ್ಧಿಯನರಿಯದಿದೆ ನೋಡಾ !
    ಪ್ರಾಣಲಿಂಗವೆಂಬ ಭ್ರಾಂತು ನೋಡಾ !
    ಇದು ಕಾರಣ-ಮೂರುಲೋಕವೆಯ್ದೆ
    ಬರುಸೂರೆವೋಯಿತ್ತು ಗುಹೇಶ್ವರಾ/381

  382. ಇಲ್ಲದ ಶಂಕೆಯನು ಉಂಟೆಂದು ಭಾವಿಸಿದಡೆ
    ಅದು ಕಣ್ಣ ಮುಂದೆ ರೂಪಾಗಿ ಕಾಡುತ್ತಿಪ್ಪುದು.
    ಇಲ್ಲದ ತನುವ ಉಂಟೆಂಬನ್ನಕ್ಕರ,
    ಅದೇ ಮಾಯೆಯಾಗಿ ಕಾಡುತ್ತಿಪ್ಪುದು.
    ನಿಃಕ್ರಿಯಾಲಿಂಗಕ್ಕೆ ಕ್ರಿಯಾಂತಲ್ಲದೆ ಆಗದೆಂಬವರ
    ಸಂದು ಸಂಶಯ ಮುಂದುಗೆಡಿಸುತ್ತಿಪ್ಪುದು ಕೇಳಾ.
    ಮನವ ಮನೆಯ ಮಾಡಿಕೊಂಡಿಪ್ಪ
    ಲಿಂಗದ ಅನುವನರಿಯಬಲ್ಲಡೆ,
    ಗುಹೇಶ್ವರಲಿಂಗ ದೂರವಿಲ್ಲ ಕೇಳಾ ಮರುಳೆ./382

  383. ಇಲ್ಲದಲ್ಲಿ ಇಲ್ಲವಿದ್ದಿತ್ತು.
    ಇಲ್ಲವೆಂಬುದು ಉಂಟು ನೋಡಾ.
    ಉಂಟೆಂದಲ್ಲಿ `ಇಲ್ಲ’ ಉಂಟಾಯಿತ್ತು.
    ಉಂಟೆಂದು ತಿಳಿದಡೆ ಅದೆ `ಇಲ್ಲ’.
    ಆ `ಇಲ್ಲ’ದಲ್ಲಿ ಒಂದು ತಲೆ ಉದಿಸಿತ್ತು.
    ಆ ತಲೆಯೊಳಗೆ ಮೂರು ಲಿಪಿಯ ಕಂಡೆ.
    ಲಿಪಿಯೊಳಗೊಂದು ಧ್ವನಿಯ ಕಂಡೆ.
    ಧ್ವನಿಯ ಬಣ್ಣ ತಲೆಯೆತ್ತದ ಮುನ್ನ,
    ಐದು ಬಾಯ ರಕ್ಕಸಿ ಆಗುಳಿಸಿ ನುಂಗಿದಳು.
    ಆ ರಕ್ಕಸಿಗೆ ಕೋಡಗ ಹುಟ್ಟಿ, ಕೋಣನ ಕೊರಳ ಕಚ್ಚಿತ್ತ ಕಂಡೆ.
    ಕೋಣನ ಕೋಡಗ ಮುರಿದು ಈಡಾಡಿದಡೆ ಕೋಡಗ ಸಿಕ್ಕಿತ್ತು.
    ಅಡವಿಯ ಸುಟ್ಟು ಆಕಾಶವ ಹೊಕ್ಕು
    ಗುಹೇಶ್ವರಲಿಂಗದಲ್ಲಿ ಗುರುಕಾರುಣ್ಯವ ಪಡೆದನು/383

  384. ಇಲ್ಲವೆಂದು ಸಂದೇಹಿಸಿದವಂಗೆ
    ಉಂಟೆಂದು ತೋರಿದನಲ್ಲದೆ,
    ಶ್ರೀಗುರು ಖೇಚರತ್ವವ ಬಿಟ್ಟು
    ಭೂಚರನಾಗಬಹುದೆ ?
    ಮಹಾಘನಲಿಂಗವನು ಅರಿದು ನಂಬಿದ ಬಳಿಕ
    ಮುಚ್ಚುಮರೆಯುಂಟೆ ಗುಹೇಶ್ವರ ?/384

  385. ಇಲ್ಲವೆಯ ಮೇಲೊಂದು ಉಂಟೆಂಬ ಪರಿಭಾವ,
    ಅಲ್ಲಿ ಇಲ್ಲಿ ಎನ್ನದೆ ತಾನೆ ನಿಂದಿತ್ತು ನೋಡಾ !
    ತನ್ನಲ್ಲಿಯ ಪ್ರಕೃತಿಯ ತಾನೆ ಹಿಂಗಿಸಲು;
    ಅಲ್ಲಿಯೆ ಜ್ಞಾನ ಉದಯಿಸಿತ್ತು !
    ಎಲ್ಲಾ ಎಡೆಯಲ್ಲಿ ನಿಂದ ನಿಜಪದವ
    ಗುಹೇಶ್ವರಾ ನಿಮ್ಮ ಶರಣ ಬಲ್ಲ./385

  386. ಇವಳ (ಅವಳ?) ನೋಟವೆನ್ನ ಮತ್ರ್ಯಕ್ಕೆ ತಂದಿತ್ತಯ್ಯಾ.
    ಇವಳ ಕೂಟ ಸವಿಯನವಗಡಿಸಿ ಕಾಡಿತ್ತಯ್ಯಾ.
    ಇವಳ ಬೇಟದ ಬೇರ ಹರಿದಲ್ಲಿ
    ತ್ರಿಪುರ ಹಾಳಾದುದ ಕಂಡೆನು.
    ಉರಿಯ ಮೇಲೆ ಉರಿ ಎರಗಿದಡೆ
    ತಂಪು ಮೂಡಿತ್ತ ಕಂಡೆನು.
    ಕರಿಯ ಬೇಡನ ಕಸ್ತುರಿಯ ಮೃಗ ನುಂಗಿದಡೆ
    ಹಿರಿಯ ಹೆಂಡತಿ ಓಲೆಗಳೆದುದ ಕಂಡೆನು.
    ಕಾರಿರುಳ ಕೋಟೆಯಲಿ ಕಲಿಯ ಕಾಳೆಗವ ಗೆಲಿದು
    ಹೂಳಿರ್ದ ನಿಧಾನವ ಕಂಡೆನು ಕಾಣಾ ಗುಹೇಶ್ವರಾ./386

  387. ಇಷ್ಟತನುವಿನ ಘಟ್ಟಿಯ ಕರಗಿಸಿ,
    ಕಟ್ಟುಗ್ರದ ಕಾಮ ಕ್ರೋಧ ಲೋಭ ಮೋಹ
    ಮದ ಮತ್ಸರಂಗಳೆಂಬವ ಸುಟ್ಟುರುಹಿ,
    ತನುವಿನ ಅವಗುಣವ ಕೆಡಿಸಿ, ಮನದ ಸಂಚಲವ ನಿಲಿಸಿ
    ಸಕಲ ಕರಣಂಗಳ ಅರಿವಿಂಗೆ ಆಹುತಿಯನಿಕ್ಕಿ
    ಸುಜ್ಞಾನಪ್ರಭೆಯನುಟ್ಟು ಸುಜ್ಞಾನಪ್ರಭೆಯ ಹೊದೆದು,
    ಸುಜ್ಞಾನಪ್ರಭೆಯ ಸುತ್ತಿ ಸುಜ್ಞಾನಪ್ರಭೆಯ ಹಾಸಿ,
    ಮಹಾಜ್ಞಾನದಲ್ಲಿ ನಿರ್ಭಾವ ಸಂಪನ್ನನಾದ
    ಮಡಿವಾಳನ ಮಡಿಯ ಪ್ರಸಾದವ ನಾನು ಹೊದ್ದ ಕಾರಣ
    ನಿರ್ಮಳನಾದೆನು, ನಿಜೈಕ್ಯನಾದೆನು, ನಿಶ್ಚಿಂತನಾದೆನು.
    ಇದು ಕಾರಣ-
    ಗುಹೇಶ್ವರಲಿಂಗದಲ್ಲಿ ತೆರಹಿಲ್ಲದಿಪ್ಪ
    ಮಡಿವಾಳನ ಪ್ರಸಾದದಿಂದ ನಿಮ್ಮ ಘನವನರಿದು
    ಬದುಕಿದೆನು ಕಾಣಾ ಸಂಗನಬಸವಣ್ಣಾ./387

  388. ಇಷ್ಟಲಿಂಗ ಪ್ರಾಣಲಿಂಗವೆಂಬ ಭೇದವನಾರು ಬಲ್ಲರು ಹೇಳಾ ?
    ಅಂತರಂಗವೆಂಬ ಶಬ್ದಕ್ಕೆ ಬಹಿರಂಗ ಮುಂದುಗೊಂಡಿಪ್ಪುದು.
    ಬಹಿರಂಗವೆಂಬ ಶಬ್ದಕ್ಕೆ ಅಂತರಂಗ ಮುಂದುಗೊಂಡಿಪ್ಪುದು.
    ಮನವನೆಡೆಗೊಂಡ ಲಿಂಗದ ಅರಿವು,
    ವಿಚಾರ ವ್ಯಾಕುಲಕ್ಕೊಳಗಾಗಬಾರದೆಂದು
    ಮನ ಭಾವ ಜ್ಞಾನ ನೋಟಕ್ಕೆ ತಂದು, ಕರಸ್ಥಲದಲ್ಲಿ ನಿಕ್ಷೇಪಿಸಿ
    ಅಂತರಂಗ ಬಹಿರಂಗವೆಂದರಿಯದೆ, ಅನಿಮಿಷನಾಗಿಪ್ಪನು ಶರಣನು.
    ಪ್ರಾಣಲಿಂಗದ ಪ್ರಸನ್ನಮುಖವ ನೋಡಿ ಪರಿಣಾಮಿಸಲೋಸುಗ
    ತೇಜ (ಜಂಗಮ?)ವೆಂಬ ದರ್ಪಣವ ಹಿಡಿದಿಪ್ಪ ನೋಡಯ್ಯಾ.
    ಗುಹೇಶ್ವರಲಿಂಗದಲ್ಲಿ ನಿಜವನೆಯ್ದಿಹೆನೆಂದಡೆ,
    ಕುರುಹುವಿಡಿದು ಕುರುಹುಗೆಡಬೇಕು ನೋಡಾ ಸಿದ್ಧರಾಮಯ್ಯಾ./388

  389. ಇಷ್ಟಲಿಂಗಕ್ಕೆ ಅಂಗದಲ್ಲಿಯೆ ಮಜ್ಜನ, ಲಲಾಟದಲ್ಲಿಯೆ ಗಂಧಾಕ್ಷತೆ.
    ತುರುಬಿದ ಪುಷ್ಪಚಯವೆ ಲಿಂಗಕ್ಕೆ ಪೂಜೆ.
    ಜಿಹ್ವೆ ಸೋಂಕಿದ ಷಡುರಸಾನ್ನವೆ ಲಿಂಗಕ್ಕೆ ನೈವೇದ್ಯ.
    ತಾಂಬೂಲ ಸವಿಹವೆ ಲಿಂಗಕ್ಕೆ ವೀಳೆಯ.
    ಅಂಗಚ್ಛಾದನವಸ್ತ್ರವೆ ಲಿಂಗಕ್ಕೆ ವಸ್ತ್ರ,
    ಕಂಡು ಕೇಳಿದ ಗೀತ ವಾದ್ಯ ನೃತ್ಯಾದಿಗಳೆ ಲಿಂಗದ ಕೇಳಿಕೆ
    ಇಂತೀ ಅಂಗದಲ್ಲಿ ಇಷ್ಟಲಿಂಗಪೂಜೆಯ ಮಾಡುವ
    ಲಿಂಗಸಂಪನ್ನರ ತೋರಾ ಗುಹೇಶ್ವರಾ./389

  390. ಇಷ್ಟಲಿಂಗಕ್ಕೆ ರೂಪನರ್ಪಿಸಿ ದ್ರವ್ಯಶುದ್ಧವಾಯಿತ್ತೆಂದು
    ಪ್ರಾಣಲಿಂಗಕ್ಕೆ ಆರೋಗಣೆಯನಿಕ್ಕುವಾಗ,
    ನಿಚ್ಚನ[ಕ್ಕೆ] ನಿಚ್ಚ ಕಿಲ್ಬಿಷವೆಂದರಿಯರು.
    ಇಷ್ಟಲಿಂಗ ಪ್ರಾಣಲಿಂಗದ, ಆದಿ ನಅಂತುವಫ ನಾರೂ ಅರಿಯರು-
    ಇದು ಕಾರಣ, ಗುಹೇಶ್ವರಾ ನಿಮ್ಮ ಶರಣರು
    ಹಿಂದುಗಾಣದೆ ಮುಂದುಗೆಟ್ಟರು. /390

  391. ಇಷ್ಟಲಿಂಗದ ಕೂಟ, ಪ್ರಾಣಲಿಂಗದ ಸಂಗ,
    ಭಾವಲಿಂಗದ ಸಮರಸವ ಬಲ್ಲವರಾರೊ
    ಅವರನೆನ್ನ ಸದ್ಗುರು ಅನುಮಿಷೇಶ್ವರನೆಂಬೆ.
    ಆ ನಿಜಶಿವಯೋಗವ ಮರೆಯದವರಿಗೆ ಅಣಿಮಾದಿ ಅಷ್ಟೈಶ್ವರ್ಯದೊಡನೆ
    ಕೂಡಿದ ಸಕಲ ಲಕ್ಷಣ ಸಂಪನ್ನರು ಸರಿಯಲ್ಲ. /391

  392. ಇಷ್ಟಲಿಂಗದಲ್ಲಿ ವಿಶ್ವಾಸ ಬಲಿದರೆ ಆಯತಲಿಂಗ.
    ಆ ಇಷ್ಟಲಿಂಗದಲ್ಲಿ ಭಾವಮನೋವೇದ್ಯವಾದಲ್ಲಿ ಸ್ವಾಯತಲಿಂಗ.
    ಆ ಇಷ್ಟಲಿಂಗದ ಭಾವ ಮನೋವೇದ್ಯವಾದ ಸುಖವು
    ಬಿನ್ನವಾಗಿ ತೋರದೆ, ಅನುಪಮ ಪರಿಣಾಮ ಭರಿತವಾದಲ್ಲಿ ಸನ್ನಹಿತಲಿಂಗ.
    ಇಂತು, ಇಷ್ಟಲಿಂಗ ಪ್ರಾಣಲಿಂಗ ತೃಪ್ತಿಯ ಭಾವಲಿಂಗಂಗಳೆಂಬ ಲಿಂಗತ್ರಯಂಗಳು,
    ತನುತ್ರಯಂಗಳ ಮೇಲೆ ಆಯತ ಸ್ವಾಯತ ಸನ್ನಹಿತಂಗಳಾದ
    ಶರಣನ ಪಂಚಭೂತಂಗಳಳಿದು ಲಿಂಗ ತತ್ವಂಗಳಾಗಿ,
    ಆತನ ಜೀವ ಭಾವವಳಿದು ಪರಮಾತ್ಮನೆನಿಸಿದಲ್ಲಿ
    ಷಡಂಗಯೋಗವಾದುದು ಕಾಣಾ ಗುಹೇಶ್ವರಾ. /392

  393. ಇಷ್ಟಲಿಂಗವ ತೋರಿ ಮೃಷ್ಟಾನ್ನವ ಹಾರುವವರಿಗೆ
    ಇಷ್ಟಾರ್ಥಸಿದ್ಧಿ ಇನ್ನೆಲ್ಲಿಯದೊ ?
    ಅದೆಲ್ಲಿಯದೊ ಲಿಂಗ ಅದೆಲ್ಲಿಯದೊ ಜಂಗಮ ?
    ಅದೆಲ್ಲಿಯದೊ ಪಾದೋದಕ ಪ್ರಸಾದ ?
    ಅಲ್ಲದಾಟವನಾಡಿ ಎಲ್ಲರೂ ಮುಂದುಗೆಟ್ಟರು,-
    ಗುಹೇಶ್ವರಾ ನಿಮ್ಮಾಣೆ./393

  394. ಇಷ್ಟಲಿಂಗವ ಪೂಜಿಸಿದರಾಗಿ ನಿಷ್ಠೆ ನೆಲೆಗೊಳ್ಳದು.
    ಬಹುಲಿಂಗವ ಪೂಜಿಸಿ ಭ್ರಮಿತರಾದರು.
    ಅನ್ಯಲಿಂಗವ ಪೂಜಿಸಿ ಬಿನ್ನರಾದರು.
    ಸ್ಥಾವರ ಲಿಂಗವ ಪೂಜಿಸಿ ಸಾವಿಗೊಳಗಾದರು
    ಬಳ್ಳ ಲಿಂಗವೆಂದು ಪೂಜಿಸಿ ಏನುವನರಿಯದೆ ಹೋದರು.
    ಗುಹೇಶ್ವರನೆಂಬ ಲಿಂಗವ ಪೂಜಿಸಿ
    ನಿಮ್ಮ ಶರಣರು ಅಲ್ಲಿಗಲ್ಲದೆ ಇಲ್ಲಿಗಲ್ಲದೆ ಹೋದರು ನೋಡಾ./394

  395. ಇಷ್ಟಲಿಂಗವನು ಪ್ರಾಣಲಿಂಗವೆಂಬ ಕಷ್ಟವೆಲ್ಲಿಯದೊ?
    ಇಷ್ಟಲಿಂಗ ಹೋದಡೆ ಪ್ರಾಣಲಿಂಗ ಹೋಗದು ನೋಡಾ.
    ಇಷ್ಟಲಿಂಗ ಪ್ರಾಣಲಿಂಗದ ಭೇದವನು
    ಗುಹೇಶ್ವರಾ, ನಿಮ್ಮ ಶರಣ ಬಲ್ಲ./395

  396. ಇಷ್ಟಲಿಂಗವೆ ಅಂಗಲಿಂಗ ಪ್ರಾಣಲಿಂಗವೆ ಮನಲಿಂಗವಾಯಿತ್ತು ನೋಡಾ.
    ಅಂಗಲಿಂಗವಾಗಿ ನಡೆನುಡಿಗತಿಯನರಿಯದು,
    ಪ್ರಾಣಲಿಂಗವಾಗಿ ನವನಾಳದ ಸುಳುಹನರಿಯದು.
    ಮನ ಲಿಂಗವಾಗಿ ನೆನಹುಗೆಟ್ಟಿತ್ತು,
    ಅನುಭಾವ ಲಿಂಗವಾಗಿ ವಿಚಾರವರತಿತ್ತು.
    ಭಾವಲಿಂಗವಾಗಿ ನಿರ್ಭಾವವಳವಟ್ಟಿತ್ತು.
    ಸರ್ವಕ್ರೀಗಳೆಲ್ಲ ಲಿಂಗವಾಗಿ ಮಾರ್ಗಕ್ರೀಯ ಹೊಲಬನರಿದು
    ಅರಿವು ಲಿಂಗವಾಗಿ ಮರಹುಗೆಟ್ಟಿತ್ತು.
    ಅಂತರಂಗ ಲಿಂಗವಾಗಿ ಬಹಿರಂಗವೆಂದರಿಯದು
    ಬಹಿರಂಗ ಲಿಂಗವಾಗಿ ಅಂತರಂಗದ ಶುದ್ಧಿಯನರಿಯದು.
    ಇಂತು ಸರ್ವಾಂಗಲಿಂಗವಾಗಿ ಸರ್ವೆಂದ್ರಿಯ ಗಮನ ಕೆಟ್ಟಿತ್ತು.
    ಮಹಾಘನವಿಂಬುಗೊಂಡಿತ್ತಾಗಿ ನಿಷ್ಪತಿ ಕರಿಗೊಂಡಿತ್ತು.
    ಗುಹೇಶ್ವರಲಿಂಗದಲ್ಲಿ ಪ್ರಾಣಲಿಂಗ ಸಂಬಂಧ ಸ್ವಯವಾಯಿತ್ತು ನೋಡಾ
    ಸಿದ್ಧರಾಮಯ್ಯಾ./396

  397. ಇಷ್ಟಲಿಂಗವೆ ಪ್ರಾಣಲಿಂಗವೆಂಬ
    ಮಿಟ್ಟಿಯ ಭಂಡರು ನೀವು ಕೇಳಿರೆ.
    ಇಷ್ಟಲಿಂಗವನೂ ಕಾಯವನೂ ಮೆಟ್ಟಿ ಹೂಳುವಲ್ಲಿ,
    ಬಿಟ್ಟು ಹೋಹ ಪ್ರಾಣಕ್ಕೆ
    ಇನ್ನಾವುದು ಲಿಂಗ ಹೇಳಾ ಗುಹೇಶ್ವರಾ ?/397

  398. ಇಹಲೋಕ ಪರಲೋಕ ತಾನಿರ್ದಲ್ಲಿ,
    ಗಗನ ಮೇರುಮಂದಿರ ತಾನಿರ್ದಲ್ಲಿ,
    ಸಕಲಭುವನ ತಾನಿರ್ದಲ್ಲಿ,
    ಸತ್ಯ ನಿತ್ಯ ನಿರಂಜನ ಶಿವತತ್ವ ತಾನಿರ್ದಲ್ಲಿ,
    ಅಂತರ ಮಹದಂತರ ತಾನಿರ್ದಲ್ಲಿ,
    ಸ್ವತಂತ್ರ ಗುಹೇಶ್ವರಲಿಂಗ ತಾನಿರ್ದಲ್ಲಿ./398

  399. ಇಹವ ತೋರಿದನು ಶ್ರೀಗುರು; ಪರವ ತೋರಿದನು ಶ್ರೀಗುರು.
    ಎನ್ನ ತೋರಿದನು ಶ್ರೀಗುರು; ತನ್ನ ತೋರಿದನು ಶ್ರೀಗುರು.
    ಗುರು ತೋರಿದಡೆ ಕಂಡೆನು ಸಕಲ ನಿಷ್ಕಲವೆಲ್ಲವ.
    ಗುರು ತೋರಿದಡೆ ಕಂಡೆನು ಗುರುಲಿಂಗಜಂಗಮ ಒಂದೆ ಎಂದು.
    ತೋರಿ ಕರಸ್ಥಲದಲ್ಲಿದ್ದನು ಗುಹೇಶ್ವರಲಿಂಗನು./399

  400. ಈರೈದು ತಲೆಯನರಿದು, ಧಾರೆವಟ್ಟಲನಿಕ್ಕಿ,
    ಧಾರುಣಿಯ ಮೇಲೆ ತಂದಿರಿಸಿದವರಾರೊ ?
    ಸೋಮ ಸೂರ್ಯರ ಹಿಡಿದೆಳೆತಂದು,
    ವಾರಿದಿಯ ತಡೆಯಲ್ಲಿ ಓಲೆಗಳೆದವರಾರೊ ?
    ಊರಿಲ್ಲದ ಊರಿನಲ್ಲಿ[ಹೆ]ಮ್ಮಾರಿ ಹೊಕ್ಕುದ ಕಂಡು
    ಆರೈಯ ಹೋಗಿ [ನೀ] ನಾನಿಲ್ಲ ಗುಹೇಶ್ವರಾ: /400

  401. ಈಶ್ವರ ನುಡಿದ ನುಡಿಯನರಿದೆಹೆವೆಂದು,
    ಬೀಸರವೋದರು ಅಣ್ಣಗಳೆಲ್ಲಾ.
    ಪ್ರಾಣಲಿಂಗವೆಂಬರಯ್ಯಾ.
    ಮನ ಘನವೆಂದರಿಯದೆ ಮರುಳುಗೊಂಡರು.
    ಈಶ್ವರನನರಿದಡೆ ತಾ ಶಿವನು.
    ಗುಹೇಶ್ವರನೆಂಬುದು ಬೇರಿಲ್ಲ./401

  402. ಈಶ್ವರನ ದ್ರೋಣವ ಮಾಡಿ, ಪದ್ಮನಾಭನ ನಾರಿಯ ಮಾಡಿ,
    ಕಮಲಜನೆಂಬ ಬಾಣವ ತೊಟ್ಟು, ತ್ರಿಭುವನವನೆಚ್ಚವರಾರೊ ?
    ಚಂದ್ರಸೂರ್ಯರ ಬೆನ್ನ ಮೆಟ್ಟಿ, ಸುವರ್ಣದ ಮಳೆಯ ಕರಸಿದವರಾರೊ ?
    ದೇವದಾನವ ಮಾನವರೆಲ್ಲ, ಈ ಬಾಣಕ್ಕೆ ಗುರಿಯಾಗಿ ಬಿದ್ದರು.
    ಗುಹೇಶ್ವರ ಶೂನ್ಯ ನಿಶ್ಶೂನ್ಯದೊಳಗೆ !/402

  403. ಉಂಡಡೇನೊ ? ಉಣದೆ ಇರ್ದಡೇನೊ?
    ಸೋಂಕಿತವೇನೊ ? ಅಸೋಂಕಿತವೇನೊ?
    ಹುಟ್ಟೂದಿಲ್ಲಾಗಿ ಹೊಂದೂದಿಲ್ಲ
    ಸತ್ತು ಬದುಕಿ ನಿಶ್ಚಿಂತವಾಯಿತ್ತು ಗುಹೇಶ್ವರಾ./403

  404. ಉಂಡೆನುಟ್ಟೆನೆಂಬ ಸಂದೇಹ ನಿನಗೇಕಯ್ಯಾ?
    ಉಂಬುದೆ ಅಗ್ನಿ? ಉಡುವುದೆ ಪೃಥ್ವಿ?
    ನೀನೆಂದು ಉಂಡೆ? ನಾನೆಂದು ಕಂಡೆ?
    ಉಣ್ಣದೆ ಉಡದೆ ಹೊಗೆಯ ಕೈಯಲ್ಲಿ ಸತ್ತೆನೆಂಬ ಅಂಜಿಕೆ
    ನಿನಗೆ ಬೇಡ, ಅಂಜದಿರು,-
    ಗುಹೇಶ್ವರಾ ನಿನಗಾವ ನಾಚಿಕೆಯೂ ಇಲ್ಲ./404

  405. ಉಂಡೆಹೆನೆಂದೆಡೆ ಹಸಿವಿಲ್ಲ, ಕಂಡೆಹೆನೆಂದಡೆ ಪ್ರತಿಯಿಲ್ಲ.
    ನೋಡಿಹೆನೆಂದಡೆ-ಉದಕದೊಳಗಣ ಜ್ಯೋತಿಯಂತಾದವು (ಜ್ಯೋತಿಯಂತೆ ?)
    ಗುಹೇಶ್ವರಾ, ನಿಮ್ಮ ನಾಮವ ಹಿಡಿದು ಬಿಟ್ಟಡೆ ಭಂಗವಯ್ಯಾ./405

  406. ಉಂಬುವುದ ಉಣಲೆ ಬೇಕು, ಮುಟ್ಟುವುದ ಮುಟ್ಟಲೆ ಬೇಕು,
    ಮಾಡುವುದ ಮಾಡಲೆ ಬೇಕು, ನೋಡುವುದ ನೋಡಲೆ ಬೇಕು,
    ಕೂಡುವುದ ಕೂಡಲೆ ಬೇಕು.
    ಉಂಡು ಉಟ್ಟು ಕಂಡು ಕೇಳಿ ಹೇಳಿ
    ಬಿಟ್ಟು-ಬಿಡದಾತ ಕಾಣಾ ಗುಹೇಶ್ವರಾ./406

  407. ಉಗುಳ ನುಂಗಿ, ಹಸಿವ ಕಳೆದು, ತೆವರ ಮಲಗಿ ನಿದ್ರೆಗೆಯ್ದು
    ನೋಡಿ ನೋಡಿ ಸುಖಂಬಡೆದೆನಯ್ಯಾ.
    ಗುಹೇಶ್ವರಾ ನಿಮ್ಮ ವಿರಹದಲ್ಲಿ ಕಂಗಳೇ ಕರುವಾಗಿರ್ದೆನಯ್ಯಾ./407

  408. ಉಚ್ಚೆಯ ಜವುಗಿನ ಬಚ್ಚಲ ತಂಪಿನಲ್ಲಿ:
    ನಿಚ್ಚಕ್ಕೆ ಹೊರಳುವ ಹೀಹಂದಿಯಂತೆ,
    ಶಿವನ ಇಚ್ಛೆಯನರಿಯದೆ ಮಾತನಾಡುವರ
    ಮೆಚ್ಚುವನೆ ನಮ್ಮ ಗುಹೇಶ್ವರಲಿಂಗವು ?/408

  409. ಉಚ್ಛಿಷ್ಟಕಾಯ ಚಾಂಡಾಲದೊಳಗೆ ಜನಿಸಿದ
    ಹದಿನಾಲ್ಕು ಭುವನದೊಳಗೆಲ್ಲಾ,
    `ನಾವು ಬಲ್ಲೆವು, ನಾವು ಹಿರಿಯರು, ನಾವು ಘನಮಹಿಮರು’ ಎಂಬರೆಲ್ಲಾ
    ಮತ್ತೆ ಸಾವರೆ, ಇದೇನೊ ಇದೆಂತೊ ?
    ಗುಹೇಶ್ವರನೊಬ್ಬ ತಪ್ಪಿಸಿ
    ಮಿಕ್ಕಾದವರೆಲ್ಲ ಪ್ರಳಯಕ್ಕೆ ಒಳಗು !/409

  410. ಉತ್ತರಾಪಥದ ಮೇಲೆ ಮೇಘವರ್ಷ ಕರೆಯಲು,
    ಆ ದೇಶದಲ್ಲಿ ಬರನಾಯಿತ್ತು !
    ಆ ದೇಶದ ಪ್ರಾಣಿಗಳೆಲ್ಲರೂ ಮೃತವಾದರು!
    ಅವರ ಸುಟ್ಟ ರುದ್ರಭೂಮಿಯಲ್ಲಿ,
    ನಾ ನಿಮ್ಮನರಸುವೆ ಗುಹೇಶ್ವರಾ./410

  411. ಉದಕ ಮಜ್ಜನವಲ್ಲ ಪತ್ರೆ ಪೂಜೆಯಲ್ಲ.
    ಧೂಪ ಪರಿಮಳವಲ್ಲ, ಕಂಚು ಬೆಳಗಲ್ಲ, ಸಯಧಾನ ಅರ್ಪಿತವಲ್ಲ !
    ಅದೆಂತೆಂದಡೆ:
    ಸಜ್ಜನವೆ ಮಜ್ಜನ, ಸತ್ಯಸದಾಚಾರವೆ ಪತ್ರೆ ಪುಷ್ಪ.
    ಅಷ್ಟಮದಂಗಳ ಸುಟ್ಟುದೆ ಧೂಪ, ನಯನವೆ ಸ್ವಯಂ ಜ್ಯೋತಿ,
    ಪರಿಣಾಮವೆ ಅರ್ಪಿತ ಕಾಣಾ ಗುಹೇಶ್ವರಾ./411

  412. ಉದಕ ಮೂರುತಿಯಾಗಿ ಉದಯವಾಯಿತ್ತು ಪಿಂಡಿಗೆಯಲ್ಲಿ.
    ಅಲ್ಲಿಯೆ ಮೂಲಸ್ಥಾನ ಸ್ಥಾಪ್ಯವಾಯಿತ್ತು ಸ್ವದೇಹ ಶಿವಪುರದಲ್ಲಿ.
    ವಾಯು ಪೂಜಾರಿಯಾಗಿ, ಪರಿಮಳದಿಂಡೆಯ ಕಟ್ಟಿ,
    ಪೂಜಿಸುತಿರ್ದುದು-ಓ ನವದ್ವಾರಶಿವಾಲಯದ ಆದಿ ಮಧ್ಯಸ್ಥಾನದಲ್ಲಿ!
    ಗುಹೇಶ್ವರನೆಂಬುದಲ್ಲಿಯೇ ನಿಂದಿತ್ತು./412

  413. ಉದಕಕ್ಕೆ ನೆಲೆಯುಂಟೆ ?
    ವಾಯುವಿಂಗೆ ಶಿರ ಉಂಟೆ ? ಶಬ್ದಕ್ಕೆ ಕಡೆಯುಂಟೆ ?
    ಗುರುವಿನ ಗುರು ಜಂಗಮಕ್ಕೆ ಬೇರೆ ಗುರು ಉಂಟೆ ?
    ಈ ಶಬ್ದವ ಕೇಳಿ ನಾನು ಬೆರಗಾದೆ ಕಾಣಾ ಗುಹೇಶ್ವರಾ./413

  414. ಉದಕದ ಕೈಕಾಲ ಮುರಿದು, ಅಗ್ನಿಯ ಕಿವಿಮೂಗನರಿದು,
    ವಾಯುವ ತಲೆಯ ಕೊಯ್ದು, ಆಕಾಶವ ಶೂಲದಲಿಕ್ಕಿದ
    ಬಲ್ಲಿದ ತಳವಾರನೀತನು !
    ಅರಸು ಪ್ರಧಾನ ಮಂತ್ರಿ ಮೂವರ ಮುಂದುಗೆಡಿಸಿದ
    ಬಲ್ಲಿದ ತಳವಾರನೀತನು !
    ಒಂಬತ್ತು ಬಾಗಿಲ ಕದವನಿಕ್ಕಿ ಬಲಿದು ಬಿಯ್ಯಗವ ಹೂಡಿ
    ನವಸಾಸಿರ ಮಂದಿಯ ಕೊಂದುಳಿದನು ಗುಹೇಶ್ವರ./414

  415. ಉದಕದ ಕೊಡನ ಹೊತ್ತಾಡುವ ಗೊರವಿತಿಯ ಕೈಯಲ್ಲಿ ಕಂಕಣ,
    ಉಲಿವ ಗೆಜ್ಜೆ ಚರಣದಲ್ಲಿ.
    ಉರಿಯ ಗೊರವನ ನೆರೆವ ಭರವಸದಿಂದ ಬಂದಿರಲು
    ಬಹಳ ಮುಳ್ಳಡ್ಡಲಾದವಲ್ಲಾ !
    ಕಂಕಣದುಲುಹು ನಂದಿ, ಕಣ್ಣುದೆರೆದಾ ಮುಳ್ಳಳಿಯಲು
    ಕಾಡುಗಿಚ್ಚೆದ್ದು ಕರಡವ ಸುಟ್ಟಂತೆ
    ಪ್ರಾಣಗುಣ ಪ್ರಧ್ವಂಸಕಂಗೆ ಅನ್ಯೋನ್ಯ ಭಾವತ್ರಯವುಂಟೆ ?
    ಶರಣಲಿಂಗಕ್ಕೆ ಸಂದಿಲ್ಲ ಗುಹೇಶ್ವರಾ./415

  416. ಉದಕದಲುತ್ಪತ್ಯವಾದ ಶತಪತ್ರದಂತೆ
    ಸಂಸಾರಸಂಗವ ತಾ ಹೊಗ(ದ್ದ?)ದಿರಬೇಕು.
    ಕಾಯವೇ ಪೀಠ, ಮನವೇ ಲಿಂಗವಾದಡೆ,
    ಕೊರಳಲ್ಲಿ ನಾಗವತ್ತಿಗೆ ಏಕೊ ಶರಣಂಗೆ ?-ಗುಹೇಶ್ವರಾ/416

  417. ಉದಕದೊಳಗಣ ಕಿಚ್ಚು ನನೆಯಿತ್ತು,
    ಕಿಚ್ಚಿನೊಳಗಣ ತೇಜ ಬೆಂದಿತ್ತು;-ತಿಳಿದು ನೋಡಾ
    ಅದೇನೊ ಅದೆಂತೊ ? ಸಂಬಂದಿಗಳು ತಿಳಿಯರು ನೋಡಾ.
    ಬೆಳಗಿನೊಳಗಣ ಕತ್ತಲೆಯಡಗಿತ್ತು;
    ಗುಹೇಶ್ವರನೆಂಬುದು ಅಲ್ಲಿಯೆ ಲಿಂಗೈಕ್ಯವು. /417

  418. ಉದಕದೊಳಗೆ ಕಿಚ್ಚು ಹುಟ್ಟಿ ಸುಡುತಿರ್ದುದ ಕಂಡೆ,
    ಗಗನದ ಮೇಲೆ ಮಾಮರನ ಕಂಡೆ,
    ಪಕ್ಕವಿಲ್ಲದ ಹಕ್ಕಿ ಬಯಲ ನುಂಗಿತ್ತ [ಕಂಡೆ] ಗುಹೇಶ್ವರಾ./418

  419. ಉದಕದೊಳಗೊಂದು ಸೆಜ್ಜೆಯಾಯಿತ್ತು.
    ಸೆಜ್ಜೆಯೊಳಗೊಂದು ಕಿಚ್ಚು ಹುಟ್ಟಿತ್ತು.
    ಇದೇನೊ ಇದೆಂತೊ ? ನೀನರಸಿಹೆನೆಂಬ ಸಂಬಂಧವಿಲ್ಲ.
    ಇದೇನೊ ಇದೆಂತೊ ? ನೀನರಿದಿಹೆನೆಂಬ ಸಂಬಂಧವಿಲ್ಲ.
    ಇದೇನೊ ಇದೆಂತೊ ? ನೀನೊಲಿಸಿಹೆನೆಂಬ ಸಂಬಂಧವಿಲ್ಲ.
    ಉದಯಮುಖದಲ್ಲಿ ಕತ್ತಲೆಯಡಗಿತ್ತು.
    ಗುಹೇಶ್ವರನೆಂಬ ನಾಮವಲ್ಲಿಯೆ ನಿಂದಿತ್ತು./419

  420. ಉದಮದದ ಯೌವನವನೊಳಕೊಂಡ ಸತಿ,
    ನೀನು ಇತ್ತಲೇಕೆ ಬಂದೆಯವ್ವಾ
    ಸತಿ ಎಂದಡೆ ಮುನಿವರು ನಮ್ಮ ಶರಣರು.
    ನಿನ್ನ ಪತಿಯ ಕುರುಹ ಹೇಳಿದಡೆ ಬಂದು ಕುಳ್ಳಿರು,
    ಅಲ್ಲದಡೆ ತೊಲಗು ತಾಯೆ.
    ನಮ್ಮ ಗುಹೇಶ್ವರನ ಶರಣರಲ್ಲಿ
    ಸಂಗಸುಖಸನ್ನಹಿತವ ಬಯಸುವಡೆ
    ನಿನ್ನ ಪತಿ ಯಾರೆಂಬುದ ಹೇಳಾ ಎಲೆ ಅವ್ವಾ ?/420

  421. ಉದಯ ಮುಖದಲ್ಲಿ ಪೂಜಿಸ ಹೋದರೆ,
    ಹೃದಯ ಮುಖದಲ್ಲಿ ಕತ್ತಲೆಯಾಯಿತ್ತು,
    ಹಾರಿ ಹೋಯಿತ್ತು ಪ್ರಾಣಲಿಂಗ, ಹರಿದು ಬಿದ್ದಿತ್ತು ಸೆಜ್ಜೆ.
    ಕಟ್ಟುವ ಬಿಡುವ ಸಂಬಂದಿಗಳ ಕಷ್ಟವ ನೋಡಾ ಗುಹೇಶ್ವರಾ./421

  422. ಉದಯಬಿಂದು ರೂಪಾಯಿತ್ತು.
    ಅಂತರಬಿಂದು ನಿರೂಪಾಯಿತ್ತು.
    ಊಧ್ರ್ವಬಿಂದು ನಿಶ್ಶೂನ್ಯವಾಯಿತ್ತು.
    ತ್ರಿವಿಧಲಿಂಗವ ಕೂಡಿ ಬಯಲಾಯಿತ್ತು.
    ಗುಹೇಶ್ವರಲಿಂಗದಲ್ಲಿ./422

  423. ಉದಯಮುಖದಲ್ಲಿ ಹುಟ್ಟಿದ ಪ್ರಾಣಿಗಳು
    ಅಸ್ತಮಾನಕ್ಕೆ ಅಳಿದರಲ್ಲಾ !
    ಅಂದಂದಿನ ಘಟಜೀವಿಗಳು ಬಂದ ಬಟ್ಟೆಯಲ್ಲಿ ಹೋದರಲ್ಲಾ !
    ಗುಹೇಶ್ವರನೆಂಬ ಲಿಂಗವು ಆರಿಗೆಯೂ ಇಲ್ಲವಯ್ಯಾ. /423

  424. ಉದಯವಾಯಿತ್ತ ಕಂಡು ಉದರಕ್ಕೆ ಕುದಿವರಯ್ಯಾ
    ಕತ್ತಲೆಯಾಯಿತ್ತ ಕಂಡು ಮಜ್ಜನಕ್ಕೆರೆವರಯ್ಯಾ.
    ಲಿಂಗಕ್ಕೆ ನೇಮವಿಲ್ಲ.
    ಇರುಳಿಗೊಂದು ನೇಮ, ಹಗಲಿಗೊಂದು ನೇಮ ?
    ಲಿಂಗಕ್ಕೆ ನೇಮವಿಲ್ಲ.
    ಕಾಯ ಒಂದು ದೆಸೆ, ಜೀವ ಒಂದು ದೆಸೆ,
    ಗುಹೇಶ್ವರನೆಂಬ ಲಿಂಗ ತಾನೊಂದು ದೆಸೆ./424

  425. ಉಪಚಾರದ ಗುರುವಿಂಗೆ ಉಪಚಾರದ ಶಿಷ್ಯನು,
    ಉಪಚಾರದ ಲಿಂಗ ಉಪಚಾರದ ಜಂಗಮವು,
    ಉಪಚಾರದ ಪ್ರಸಾದವ ಕೊಂಡು, ಗುರುವಿಂಗೆ ಭವದ ಲೆಂಕನಾಗೆ,
    ಅಂಧನ ಕೈಯ ಅಂಧಕ ಹಿಡಿದಂತೆ-
    ಇಬ್ಬರೂ ಹೊಲಬುಗೆಟ್ಟರು ಕಾಣಾ ಗುಹೇಶ್ವರಾ./425

  426. ಉಪಪಾತಕ ಮಹಾಪಾತಕಂಗಳ ಮಾಡಿದ ಕರ್ಮಂಗಳು ಕೋಟ್ಯನುಕೋಟಿ,
    ಒಬ್ಬ ಶಿವಶರಣನ ಅಂಗಳವ ಕಂಡಲ್ಲಿ ಅಳಿದು ಹೋಹುದು ನೋಡಯ್ಯಾ.
    ಅದೇನು ಕಾರಣವೆಂದಡೆ:
    ಆ ಶಿವಶರಣನ ಅಂತರಂಗದಲ್ಲಿ ಶಿವನಿಪ್ಪನು.
    ಶಿವನಿದ್ದಲ್ಲಿ ಕೈಲಾಸವಿಪ್ಪುದು
    ಕೈಲಾಸವಿದ್ದಲ್ಲಿ ಸಮಸ್ತ ರುದ್ರಗಣಂಗಳಿಪ್ಪರು.
    ಅಲ್ಲಿ ಅಷ್ಟಾಷಷ್ಟಿ ತೀರ್ಥಂಗಳಿಪ್ಪವು.
    ಇಂತಪ್ಪ ಶರಣಬಸವಣ್ಣನ ಅಂಗಳವ ಕಂಡೆನಾಗಿ
    ಗುಹೇಶ್ವರಲಿಂಗದ ಕಂಗಳಿಗೆ ತೃಪ್ತಿಯಾಯಿತ್ತು ಕಾಣಾ
    ಸಿದ್ಧರಾಮಯ್ಯಾ./426

  427. ಉಪಮೆ ಉಪಮಿಸಲರಿಯದೆ ಉಪಮಾತೀತವೆನುತ್ತಿದ್ದಿತ್ತು.
    ಅರಿವು, ಅರಿವಿನ ಮರೆಯಲ್ಲಿರ್ದುದನರಿಯಲರಿಯದೆ,
    ಪರಾಪರವೆಂದು ನುಡಿಯುತ್ತಿದ್ದಿತ್ತು.
    ಧ್ಯಾನ ಧ್ಯಾನಿಸಲರಿಯದೆ, ಧ್ಯಾನರೂಪಾತೀತನೆಂದು, ತದ್ಧ್ಯಾನಗೊಂಡಿತ್ತು.
    ಜ್ಞಾತೃ ಜ್ಞಾನ ಜ್ಞೇಯಕ್ಕೆ ಇನ್ನಾವ ಜ್ಞಾನವೊ?
    ವೇದವಿಜ್ಞಾನವೆಂದುದಾಗಿ, `ತತ್ತ್ವಮಸಿ’ ವಾಕ್ಯಂಗಳೆಲ್ಲವೂ
    ಹುಸಿಯಾಗಿ ಹೋದವು.
    ಸಚ್ಚಿದಾನಂದವೆಂದುದಾಗಿ
    ದ್ವೈತಾದ್ವೈತಿಗಳೆಲ್ಲ ಸಂಹಾರವಾಗಿ ಹೋದರು.
    ಬಂದೂ ಬಾರದ, ನಿಂದ ನಿರಾಳ ಗುಹೇಶ್ವರ./427

  428. ಉಪಮೆಗುಪಮಾನ ಮನುದೇವತಾದಿಗಳೆಲ್ಲಾ
    ಜಪತಪ ಮಹಾ ದಿವ್ಯ ಧ್ಯಾನ ಮಂತ್ರಗಳಿಂದ
    ಪರಿಮಿತ ಸೇವನಿರತರಾಗಿ
    ನಿಮ್ಮ ಪದನುತಿಯಿಂ ಕೃತಾರ್ಥರಾಗಿ
    ತೃಪ್ತಿಪಟ್ಟಿಪ್ಪರಲ್ಲದೆ, ನಿಚ್ಚಯದ ಮಹಿಮೆಯ,
    ಪರಾಪರಂ ಪರಮಗಮ್ಯಭಾವಾತೀತ ವಿಪುಳ
    ಜ್ಯೋತಿರ್ಲಿಂಗ ವಿಶ್ವತೋಮುಖ ಮುಸಿಗಿರ್ದ ಘನವಾವುದು ?
    ತಿಳಿಯದೆ ಹೋದರಲ್ಲಾ ಗುಹೇಶ್ವರಾ./428

  429. ಉಪಾದಿಕ ಮನವು !
    ಉಪಾದಿಕರಹಿತನ ಮನ ನಿಂದಲ್ಲಿ ನಿವಾತವಾಗಿತ್ತು.
    ಆನಂದದ ಭಾವವು !
    ಬಿಂದು ತಾನುಳಿದು ನಿಂದಲ್ಲಿ ನಿವಾತವಾಯಿತ್ತು.
    ಲಿಂಗೋದಯ ಪ್ರಜ್ವಲಿಸುತ್ತಿದೆ,
    ಗುಹೇಶ್ವರಲಿಂಗವು ತಾನೆಯಾಗಿ ! /429

  430. ಉಪಾದಿಯಿಲ್ಲದೆ ಬೇಡಬಲ್ಲಡೆ, ಗಮನವಿಲ್ಲದೆ ಸುಳಿಯಬಲ್ಲಡೆ,
    ನಿರ್ಗಮನಿಯಾಗಿರಬಲ್ಲಡೆ, ಅದು ವರ್ಮ,
    ಅದು ಸಂಬಂಧ, ಅವರ ನಡೆ ಪಾವನ,
    ಅವರ ನುಡಿ ಸತ್ಯ, ಅವರ ಜಗದಾರಾಧ್ಯರೆಂಬೆನು ಕಾಣಾ
    ಗುಹೇಶ್ವರಾ./430

  431. ಉಭಯದೃಷ್ಟಿ ಏಕದೃಷ್ಟಿಯಲ್ಲಿ ಕಾಬಂತೆ
    ದಂಪತಿ ಏಕಭಾವವಾಗಿ ನಿಂದಲ್ಲಿ,
    ಗುಹೇಶ್ವರಲಿಂಗಕ್ಕೆ ಅರ್ಪಿತವಾಯಿತ್ತು,-ಸಂಗನಬಸವಣ್ಣ./431

  432. ಉರವಣಿಸುವ ಮನ ಮುಟ್ಟುವನ್ನಬರ ಕಾಡುವುದು
    ಘನ ಘನದಲ್ಲಿ ಮನ ನಂಬುವನ್ನಬರ ಕಾಡುವುದು.
    ಮಹಂತ ಗುಹೇಶ್ವರನೆಂಬ ಶಬ್ದವುಳ್ಳನ್ನಬರ ಕಾಡುವುದು./432

  433. ಉರಿಗೆ ಉರಿಯನೆ ತೋರುವೆನು, ಅಮೃತದ ಕಳೆಯಲ್ಲಿ ನಿಲಿಸುವೆನು.
    ನಾನು ಬ್ರಹ್ಮಸ್ಥಾನದಲ್ಲಿ ಗುಹೇಶ್ವರಾ-ನಿರಂತರವಾಗಿರ್ದೆನಯ್ಯಾ. /433

  434. ಉರಿವ ಕಿಚ್ಚಿನೊಳಗೆ ಹಾಯ್ಕಿದಡೆ,
    ಬೆಂದಿತ್ತೆಂದರಿಯಬಾರದು ಬೇಯದೆಂದರಿಯಬಾರದು.
    ಹಿಡಿದು ಸುಟ್ಟು ಬೂದಿಯ ಹೂಸಿಕೊಂಡಡೆ
    ಮರಳಿ ಹುಟ್ಟಲಿಲ್ಲ ಕಾಣಾ ಗುಹೇಶ್ವರಾ./434

  435. ಉಲಿವ ಉಯ್ಯಲೆಯ ಹರಿದು ಬಂದೇರಲು,
    ತಾಗದೆ ತೂಗುವುದು, ಭವಸಾಗರ ಮರಳಿ ಬಾರದಂತೆ !
    ಹಂಸೆಯ ಮೇಲೆ ತುಂಬಿ ಕುಳ್ಳಿರ್ದು ಸ್ವರ ಗೆಯ್ಯುವ ಘೋಷವಿದೇನೊ ?
    ಆತನಿರ್ದ ಸರ ಹರಿಯದೆ ಇದ್ದಿತ್ತು.
    ದೇಹಿಗಳೆಲ್ಲ ಅರಿವರೆ, ಗುಹೇಶ್ವರನ ಆಹಾರಮುಖವ ?/435

  436. ಉಲಿವ ತರುವಲಿಗಳೆಲ್ಲ ಗಿಳಿವಿಂಡುಗೆಡೆದಿಹರು
    ಅರಿಯದ ಮೌನಿಯ ಮುಕ್ತಿಯಿದೇನೊ ?
    ಅರಿದಡೇನು ಅರಿಯದಿದ್ದಡೇನು,
    ತನ್ನಲ್ಲಿದ್ದ ವಸ್ತುವ ತಾನರಿಯದನ್ನಕ್ಕ ?
    ಅಂಗದಲ್ಲಿ ಒದಗಿದ ಲಿಂಗವನರಿಯದೆ
    ಭಂಗಬಟ್ಟರು ಕಾಣಾ ಗುಹೇಶ್ವರಾ. /436

  437. ಉಲಿವ ಮರದ ಪಕ್ಷಿಯಂತೆ, ದೆಸೆದೆಸೆಯನಾಲಿಸುತ್ತಿರ್ದೆ.
    ಅರಿವರಿಲ್ಲ ಅರಿವರಿಲ್ಲ ಅರಿದು ಮರೆಯಿತ್ತಯ್ಯಾ.
    ಮಡುವಿನೊಳಗೆ ಬಿದ್ದ ಆಲಿಕಲ್ಲಿನಂತೆ
    ತನ್ನ ತಾನಿರ್ದನು ಗುಹೇಶ್ವರಯ್ಯನು./437

  438. ಉಲುಹಿನ ವೃಕ್ಷದ ನೆಳಲಡಿಯಲಿರ್ದು,
    ಗಲಭೆಯನೊಲ್ಲೆನೆಂಬುದೆಂತಯ್ಯಾ?
    ಪಟ್ಟದರಾಣಿಯ ಮುಖವ ಮುದ್ರಿಸಿ, ಮೆಟ್ಟಿ ನಡೆವ ಸತಿಯ ಶಿರವ,
    ಮೆಟ್ಟಿ ನಿಲುವ ಪರಿಯೆಂತಯ್ಯಾ?
    ಆದಿಯ ಹೆಂಡತಿಯನುಲ್ಲಂಘಿಸಿದ ಕಾರಣ,
    ಮೇದಿನಿಯ ಮೇಲೆ ನಿಲಬಾರದು.
    ಸಾಧಕರೆಲ್ಲರು ಮರುಳಾದುದ ಕಂಡು
    ನಾಚಿ ನಗುತ್ತಿರ್ದೆನು ಗುಹೇಶ್ವರಾ./438

  439. ಉಳ್ಳವರು ಹಗೆಹ ತೆಗೆವನ್ನಕ್ಕರ,
    ಇಲ್ಲದವರ ಹರಣ ಹೋಯಿತ್ತೆಂಬ ಗಾದೆ ಎನಗಾಯಿತ್ತು.
    ಮಾತು ಬಣ್ಣಿಸಲು ಹೊತ್ತು ಹೋಯಿತ್ತಯ್ಯಾ.
    ನಿನಗೆ ಅದೆ, ಹರಿನುಡಿಗೆ ಕಡೆಯಿಲ್ಲ.
    ಒಬ್ಬರ ನೋಡುವಾಗ,
    ಅರುವತ್ತು ಮನುಷ್ಯರ ನೋಡುವ ಹಾಂಗೆ ಆಗುತ್ತಿದೆ.
    ಶೂನ್ಯಸಿಂಹಾಸನ ಬವರಿಗೊಡುತ್ತಿದೆ.
    ಪ್ರಾಣ ಹೆಡತಲೆಯಲ್ಲಿ ಹೋಗುತ್ತಿದೆ.
    ಗುಹೇಶ್ವರ ಹಸಿದನು,
    ಪದಾರ್ಥವ ನೀಡಯ್ಯಾ ಸಂಗನಬಸವಣ್ಣಾ./439

  440. ಊರ ಮಧ್ಯದ ಕಣ್ಣ ಕಾಡಿನೊಳಗೆ, ಬಿದ್ದೈದಾವೆ ಐದು ಹೆಣನು.
    ಬಂದು ಬಂದು ಅಳುವರು.
    ಬಳಗ ಘನವಾದ ಕಾರಣ-ಹೆಣನೂ ಬೇಯದು ಕಾಡೂ ನಂದದು.
    ಮಾಡ ಉರಿಯಿತ್ತು ಗುಹೇಶ್ವರಾ./440

  441. ಊರ ಹೊರಗೊಂದು ದೇಗುಲ,
    ದೇಗುಲದೊಳಗೊಬ್ಬ ಗೊರತಿ ನೋಡಯ್ಯಾ.
    ಗೊರತಿಯ ಕೈಯಲ್ಲಿ ಸೂಜಿ, ಸೂಜಿಯ ಮೊನೆಯಲ್ಲಿ ಹದಿನಾಲ್ಕು ಲೋಕ !
    ಗೊರತಿಯ, ಸೂಜಿಯ, ಹದಿನಾಲ್ಕು ಲೋಕವ;
    ಒಂದಿರುಹೆ ನುಂಗಿತ್ತ ಕಂಡೆ !- ಗುಹೇಶ್ವರಾ./441

  442. ಊರಕ್ಕಿ ಊರೆಣ್ಣೆ;-`ಮಾರಿಕವ್ವ ತಾಯೆ ಬಾರೆ,
    ಕುಮಾರನ ತಲೆಗಾಯಿ’ ಎಂಬಂತೆ;
    ಕಾಡ ಹೂ ಕೈಯ ಲಿಂಗವ ಪೂಜಿಸುವಾತನ ಭಕ್ತನೆಂಬರು, ಅಲ್ಲ.
    ತಾನು ಲಿಂಗ ತನ್ನ ಮನವೆ ಪುಷ್ಪ.
    ಪೂಜೆಯ ಪೂಜಿಸುವಾತನೆ ಸದ್ಭಕ್ತನು-ಗುಹೇಶ್ವರಾ./442

  443. ಊರದ ಚೇಳಿನ ಏರದ ಬೇನೆಯಲ್ಲಿ, ಮೂರುಲೋಕವೆಲ್ಲಾ ನರಳಿತ್ತು !
    ಹುಟ್ಟದ ಗಿಡುವಿನ ಬಿಟ್ಟ ಎಲೆಯ ತಂದು ಮುಟ್ಟದೆ ಹೂಸಲು;
    ಮಾಬುದು-ಗುಹೇಶ್ವರಾ/443

  444. ಊರೊಳಗಣ ಕಿಚ್ಚು ಕಾನನದಲ್ಲಿ ಉರಿಯಿತ್ತು.
    ಕಾನನದ ಕಿಚ್ಚು ಬಂದು ಊರೊಳಗೆ ಉರಿಯಿತ್ತು.
    ಆರಿಸಿರೊ ಆರಿಸಿರೊ ನಾಲ್ಕು ದಿಕ್ಕಿನ ಬೇಗೆಯ.
    ಆ ಭೂಭೂಕಾರವ ದೃಷ್ಟಿ ಮುಟ್ಟಿದಡೆ
    ಅಟ್ಟೆ ಸಹಸ್ರವಾಡಿತ್ತು ! ಲೆಕ್ಕವಿಲ್ಲದ ಮರಣ ಮಡಿಯಿತ್ತು ಗುಹೇಶ್ವರಾ./444

  445. ಊರೊಳಗಣ ಘನಹೇರಡವಿಯೊಳೊಂದು
    ಬೇರು ಮೇಲು, ಕೊನೆ ಕೆಳಗಾಗಿ ಸಸಿ [ಹುಟ್ಟಿತ್ತು]
    ಆರೈದು ನೀರನೆರೆದು ಸಲುಹಲಿಕ್ಕೆ,
    ಅದು ಸಾರಾಯದ ಫಲವಾಯಿತ್ತಲ್ಲಾ !
    ಬಾರುಗೊಂಬಿನಲುದುರಿದ ಹಣ್ಣ ಮೆಲಿದವ
    ಘೋರ ಸಂಸಾರಭವಕ್ಕೆ ಸಿಕ್ಕಿದ.
    ಬೇರಿಂದಲಾದ ಫಲವ ದಣಿದುಂಡವ, ಊರಿಂದ ಹೊರಗಾದ
    ಕಾಣಾ ಗುಹೇಶ್ವರಾ./445

  446. ಊರೊಳಗೊಬ್ಬ ದೇವ, ಮಡುವಿನಲೊಬ್ಬ ದೇವ,
    ಅಡವಿಯಲೊಬ್ಬ ದೇವ, ಮಡಿಲಲೊಬ್ಬ ದೇವ.
    ನೀರು ನೀರ ಕೂಡಿ, ಬಯಲು ಬಯಲ ಕೂಡಿ
    ನರನೆಂಬ ದೇವ ತಾ ನಿರಾಳವೊ!
    ಲಿಂಗವೆಂಬುದೊಂದು ಅನಂತ[ದ] ಹೆಸರು,
    ಗುಹೇಶ್ವರನೆಂಬುದದೇನೊ ?/446

  447. ಎಂಟು ನೆಲೆಯ ಮಣಿಮಾಡದ ಮಂಟಪದ ಮೇಲೆ,
    ಏಳು ವಶ್ಯ ಕನ್ನಿಕೆಯರು,
    ಮಹಾಲಿಂಗಕ್ಕೆ ಮಾಣಿಕದಾರತಿಯನೆತ್ತಿದರಲ್ಲಾ !
    ಚಾಮರಂಗಳು ಬೀಸದೆ, ಮಾಣಿಕಸೂಸಕ ಕೆದರದೆ
    ಅಧರಪಟಂಗಳು ಹಳಚದೆ, ಸ್ವಯಲಿಂಗಾರ್ಚನೆಯ ಮಾಡುವಲ್ಲಿ
    ಪ್ರಸಾದಕ್ಕೆ ಕರುಣದಿಂ ದಯಮಾಡೈ (ದಯಮಾಡಿಸೈ?) ಗುಹೇಶ್ವರಾ./447

  448. ಎಂತಯ್ಯಾ ?
    ನೊಸಲಲ್ಲಿ ಕಣ್ಣು, ಮನದಲ್ಲಿ ವಿರಸ, ನುಡಿವುದೆಲ್ಲ ಭಕ್ತಿರಸ-
    ಜ್ಞಾನವೆಂತು ಹೇಳಾ ? ನಿರಹಂಕಾರವೆಂತು ಹೇಳಾ ?
    ಅರುಹಿನ ಕುರುಹಿನ ಮರವೆ ಮಾತಿನೊಳಗದೆ.
    ನಿನ್ನಿಂದ ನಿಜಪದವೆಂತು ಸಾಧ್ಯವಪ್ಪುದು ಹೇಳಾ ?
    ಕುರುಹಳಿದು ಕುರುಹನರಿಯ ಬಲ್ಲಡೆ
    ಗುಹೇಶ್ವರಲಿಂಗದಲ್ಲಿ ಉಭಯಗೆಟ್ಟಲ್ಲದೆ
    ಪ್ರಸಾದವಿಲ್ಲ ಕಾಣಾ ಮಡಿವಾಳ ಮಾಚಯ್ಯಾ./448

  449. ಎಂಬತ್ತು (ಎರಡೆಂಬತ್ತು?) ಕೋಟಿ ವಚನವ ಹಾಡಿ
    ಹಲವ ಹಂಬಲಿಸಿತ್ತೆನ್ನ ಮನವು,
    ಮನ ಘನವನರಿಯದು, ಘನ ಮನವನರಿಯದು.
    ಗುಹೇಶ್ವರನೆಂಬ ಲಿಂಗವನರಿದ ಬಳಿಕ
    ಗೀತವೆಲ್ಲ ಒಂದು ಮಾತಿನೊಳಗು !/449

  450. ಎಂಬತ್ತುನಾಲ್ಕು ಲಕ್ಷ ಒಟ್ಟೆ ಮೂರು ತತ್ತಿಯನಿಕ್ಕಿತ್ತ ಕಂಡೆ.
    ಆನೆ ಆಡ ಹೋದಡೆ ಒಂದು ಚಿಕ್ಕಾಡು ನುಂಗಿತ್ತ ಕಂಡೆ,
    ನಾರಿಯಾಡ ಹೋದಡೆ ಒಂದು ಚಂದ್ರಮತಿಯ ಕಂಡೆನು.
    ಪೃಥ್ವೀಮಂಡಲವನೊಂದು ನೊಣ ನುಂಗಿತ್ತ ಕಂಡೆನು.
    ಗುಹೇಶ್ವರನೆಂಬ ಲಿಂಗವ ಕಂಡವರುಳ್ಳಡೆ ನೀವು ಹೇಳಿರೆ/450

  451. ಎಂಬತ್ತುನಾಲ್ಕು ಲಕ್ಷ ಜೀವರಾಶಿಗೂ ನೆಲನೊಂದೆ, ಜಲವೊಂದೆ,
    ಲೋಕಸಂಬಂದಿಗೂ ಲಿಂಗಸಂಬಂದಿಗೂ
    ನೆಲನೊಂದೆ ಜಲವೊಂದೆ,
    ವಿರಕ್ತರ ಹಸ್ತಮುಟ್ಟಿ ಬಂದ ಕಾರಣ
    ಅಗ್ಗವಣಿಯೆನಸಿತ್ತು, ಸಿತಾಳವೆನಸಿತ್ತು.
    ಇಂತಪ್ಪ ಸುಪವಿತ್ರದ ಅಗ್ಗವಣಿಯನೊಲ್ಲದೆ,
    ಅ[ನೇಕ] ಒರತೆಯ ನೀರಿಂಗೆರಗಿ
    ಬರುದೊರೆ ಹೋಹರಿಗೆ ಮರಳಿ ಭಕ್ತರ ಪಿಠವೇಕೆ
    ಹೇಳಾ ಗುಹೇಶ್ವರಾ ?/451

  452. ಎಡದ ಕಾಲಲೊದ್ದಡೆ ಬಲದ ಕಾಲ ಹಿಡಿವುದು
    ಬಲದ ಕಾಲಲೊದ್ದಡೆ ಎಡದ ಕಾಲ ಹಿಡಿವುದು.
    `ತ್ರಾಹಿ ತ್ರಾಹಿ ತಪ್ಪೆನ್ನದು’ ಎಂದು
    ಗುಹೇಶ್ವರನ ಶರಣರನೊಡಗೊಂಡು ಬಾರಯ್ಯಾ ಸಂಗನಬಸವಣ್ಣಾ./452

  453. ಎಡದ ಕೈಯ ಲಿಂಗವ ಬಲದ ಕೈಯಲ್ಲಿ ಮುಟ್ಟಿ,
    ಸ್ಪರ್ಶನವ ಮಾಡುವ ಕರ್ಮಿಯ ನಾನೇನೆಂಬೆ !
    ಭವಭವದಲ್ಲಿ ಬಹ ಕರ್ಮಿಯ ನಾನೇನೆಂಬೆ !
    ಸತ್ಯವೇನವದಿರ, ಮಿಥ್ಯವೇನವದಿರ
    ಹಿಡಿದ ಕೈ ತಾನೆ ಎಂದರಿಯರಾಗಿ.
    ಗುಹೇಶ್ವರಲಿಂಗವು ಬೆರಗಾದನು !/453

  454. ಎಡೆಬಿಡಾರಕ್ಕೆ ಕರ್ತರೆಂಬರಯ್ಯಾ, ಎಡೆ ಬಿಡಾರದ ಘನವನೆತ್ತಬಲ್ಲರೊ ?
    ಆದಿ ಅನಾದಿಯಿಲ್ಲದಂದು ಶೂನ್ಯ ನಿಶ್ಶೂನ್ಯವಿಲ್ಲದಂದು
    ನಾದ ಬಿಂದು ಕಳೆ ಹುಟ್ಟದಂದು ಬ್ರಹ್ಮವಿಷ್ಣ್ವಾದಿಗಳಿಲ್ಲದಂದು
    ಅಷ್ಟದಿಕ್ಕು ನವಖಂಡಗಳಿಲ್ಲದಂದು
    ನಿರಾಳ ನಿಶ್ಶೂನ್ಯ ನಿರ್ಭೆದ್ಯವಾದ ಪರಮಚಿತ್ಕಲೆಯೆಂಬ ಕೋಣದಲ್ಲಿಪ್ಪ
    ಪರಮಾಮೃತವನು ಸುಯಿಧಾನವೆಂಬ ಹಸ್ತದಿಂದ
    ಸುಜ್ಞಾನವೆಂಬ ಗಿಣಿಲಿನಲ್ಲಿ ಗಡಣಿಸಿಕೊಂಡು
    ನಿರ್ಮಳ ಸದ್ಭಾವ ಹಸ್ತದಿಂದ ಚಿನ್ಮಯ ಮಹಾಲಿಂಗಕ್ಕರ್ಪಿಸಿ
    ಚಿದ್ಘನಪ್ರಸಾದವ ಸವಿದು
    ಅಸಂಖ್ಯಾತ ಬ್ರಹ್ಮಾಂಡ ಪಿಂಡಾಂಡದೊಳಗೆ ಪರಿಪೂರ್ಣವಾಗಿ
    ತನ್ನ ನಿಲವ ತಾನರಿಯ ಬಲ್ಲಡೆ ಎಡೆಬಿಡಾರಕ್ಕೆ ಕರ್ತನೆಂಬೆನಯ್ಯಾ.
    ಹಾಂಗಲ್ಲದೆ; ಹೊನ್ನಿಂಗೆ ಮಣ್ಣಿಂಗೆ ಹೆಣ್ಣಿಂಗೆ ಕೂಳಿಂಗೆ
    ಮಣ್ಣಮನೆ, ದೇಗುಲಕೆ ಹೊಡೆದಾಡಿ
    ಭವಾಂಬುದಿಯಲ್ಲಿ ತೇಂಕಾಡುವಂಥ ಕುನ್ನಿಮಾನವರು
    ಎಡೆಬಿಡಾರಕ್ಕೆ ಸಲ್ಲರು ಕಾಣಾ ಗುಹೇಶ್ವರಾ./454

  455. ಎಣ್ಣೆ ಬತ್ತಿ ಪ್ರಣತೆ ಕೂಡಿ ಜ್ಯೋತಿಯ ಬೆಳಗಯ್ಯಾ.
    ಅಸ್ಥಿ ಮಾಂಸ ದೇಹ ಪ್ರಾಣ ನಿಃಪ್ರಾಣವಾಯಿತ್ತು.
    ದೃಷ್ಟಿ ಪರಿದು ಮನಮುಟ್ಟಿದ ಪರಿಯೆಂತೊ ?
    ಮುಟ್ಟಿ ಲಿಂಗವ ಕೊಂಡಡೆ, ಕೆಟ್ಟತ್ತು ಜ್ಯೋತಿಯ ಬೆಳಗು !
    ಇದು ಕಷ್ಟವೆಂದರಿದೆನು ಗುಹೇಶ್ವರಾ./455

  456. ಎಣ್ಣೆ ಬೇರೆ ಬತ್ತಿ ಬೇರೆ:ಎರಡೂ ಕೂಡಿ ಸೊಡರಾಯಿತ್ತು.
    ಪುಣ್ಯ ಬೇರೆ ಪಾಪ ಬೇರೆ:ಎರಡೂ ಕೂಡಿ ಒಡಲಾಯಿತ್ತು.
    ಮಿಗಬಾರದು, ಮಿಗದಿರಬಾರದು, ಒಡಲಿಚ್ಛೆಯ ಸಲಿಸದೆ ನಿಮಿಷವಿರಬಾರದು.
    ಕಾಯಗುಣವಳಿದು ಮಾಯಾಜ್ಯೋತಿ ವಾಯುವ ಕೂಡುವ ಮುನ್ನ,
    ಭಕ್ತಿಯ ಮಾಡಬಲ್ಲಡೆ ಆತನೆ ದೇವ ಗುಹೇಶ್ವರಾ./456

  457. ಎತ್ತಣ ಮಾಮರ ಎತ್ತಣ ಕೋಗಿಲೆ, ಎತ್ತಣಿಂದೆತ್ತ ಸಂಬಂಧವಯ್ಯಾ ?
    ಬೆಟ್ಟದ ಮೇಲಣ ನೆಲ್ಲಿಯ ಕಾಯಿ ಸಮುದ್ರದೊಳಗಣ ಉಪ್ಪು,
    ಎತ್ತಣಿಂದೆತ್ತ ಸಂಬಂಧವಯ್ಯಾ ?
    ಗುಹೇಶ್ವರಲಿಂಗಕ್ಕೆಯೂ ನಮಗೆಯೂ ಎತ್ತಣಿಂದೆತ್ತ ಸಂಬಂಧವಯ್ಯಾ. /457

  458. ಎತ್ತೆತ್ತ ನೋಡಿದಡೆ ಬಸವಣ್ಣನೆಂಬ ಬಳ್ಳಿ,
    ಆ ಬಳ್ಳಿಯ ಹಿಡಿದೆತ್ತಿದಡೆ ಲಿಂಗವೆಂಬ ಗೊಂಚಲು.
    ಆ ಲಿಂಗದ ಗೊಂಚಲ ಹಿಡಿದೆತ್ತಿದಡೆ, ಭಕ್ತಿರಸಮಯವಾಯಿತ್ತಯ್ಯಾ.
    ಇದಾರಯ್ಯಾ ಅಮಳೋಕ್ಯವ ಮಾಡಬಲ್ಲವರು ?
    ಇದಾರಯ್ಯಾ ಹೊರಗೆ ಪ್ರಜ್ವಲಿಸಿ ತೋರಬಲ್ಲವರು ?
    ಬಸವಗುರು[ವೆ] ಎನ್ನ ಕರಸ್ಥಲದ ಲಿಂಗದ
    ಆದಿಯನರುಹಿ ತೋರಿದ ಕಾರಣ,
    ಗುಹೇಶ್ವರಲಿಂಗದ ನಿಲವ ನಿನ್ನಿಂದಲರಿದೆ,
    ಈ ಲೋಕಾದಿಲೋಕಂಗಳೆಲ್ಲವು
    ಎನ್ನ ಮುಖದಲ್ಲಿ ಕಿಂಚಿತ್ತು./458

  459. ಎನಗೊಂದು ಲಿಂಗ ನಿನಗೊಂದು ಲಿಂಗ ಮನೆಗೊಂದು ಲಿಂಗವಾಯಿತ್ತು.
    ಹೋಯಿತ್ತಲ್ಲಾ ಭಕ್ತಿ ಜಲವ ಕೂಡಿ.
    ಉಳಿ ಮುಟ್ಟದ ಲಿಂಗವ ಮನ ಮುಟ್ಟಬಲ್ಲುದೆ ಗುಹೇಶ್ವರಾ./459

  460. ಎನ್ನ ಕಂಗಳೊಳಗಣ ರೂಹಿಂಗೆ ಅನು ಬೇಟಗೊಂಡು ಬಳಲುವಂತೆ,
    ಹಿಡಿದು ನೆರೆಯಲಿಲ್ಲಯ್ಯಾ.
    ತುರೀಯದ ತವಕವನೇನೆಂಬೆನಯ್ಯಾ.
    ಸಂಗಸಂಯೋಗವಿಲ್ಲದ ರತಿಸುಖವನರಸಲುಂಟೆ?
    ಗುಹೇಶ್ವರಲಿಂಗದ ಕೃತಕದಾಳಿಯನೇನೆಂಬೆ?/460

  461. ಎನ್ನ ಕರಸ್ಥಲದ ಲಿಂಗದೊಳಗೆ
    ಒಂದು ಮಹಾಬೆಳಗ ಕಂಡೆನಯ್ಯಾ !
    ಮಹಾ ಮಂಗಳನಿಳಯವಾಗಿ ತೋರುತ್ತಿದೆ !
    ಗುಹೇಶ್ವರನೆಂಬ ಲಿಂಗದ ಕಂಗಳ ಕಾಂತಿಗಳು
    ಸಂಗನಬಸವಣ್ಣನ ನಿವಾಳಿಸುತ್ತಿದ್ದವಯ್ಯಾ !/461

  462. ಎನ್ನ ಕಾಯವ ಬಸವಣ್ಣನಳವಡಿಸಿಕೊಂಡ.
    ಎನ್ನ ಮನವ ಚನ್ನಬಸವಣ್ಣನಳವಡಿಸಿಕೊಂಡ.
    ಎನ್ನ ಭಾವವ ಮಡಿವಾಳಯ್ಯನಳವಡಿಸಿಕೊಂಡ.-
    ಇಂತೀ ಮೂವರು ಒಂದೊಂದನಳವಡಿಸಿಕೊಂಡ ಕಾರಣ
    ಗುಹೇಶ್ವರಾ, ನಿಮ್ಮ ಶರಣರೆಂಬ ತ್ರಿಮೂರ್ತಿಗಳಿಗೆ
    ನಮೋ ನಮೋ ಎನುತಿರ್ದೆನು. /462

  463. ಎನ್ನ ಕಾಯವೆಂಬ ಸಿಂಹಾಸನದಲ್ಲಿ
    ಪ್ರಾಣವೆಂಬ ಲಿಂಗವ ಮೂರ್ತಗೊಳಿಸಿ,
    ಧ್ಯಾನವೆಂಬ ಹಸ್ತದಲ್ಲಿ ಮುಚ್ಚಿ ಪೂಜಿಸುತಿರಲು,
    ಮೆಲ್ಲಮೆಲ್ಲನೆ ಸುತ್ತಿ ಮುತ್ತಿದ ಸಂಸಾರ, ಬಯಲ ಬೆರಸಿ,
    ನಾ ನೀನೆಂಬ ಭೇದವಳಿದು,
    ಮಹಾದಾನಿ ಗುಹೇಶ್ವರನ ನೋಡಲಾಗಿ ನಿಜಲಿಂಗವಾಯಿತ್ತು./463

  464. ಎನ್ನ ತನುವೆ ಚನ್ನಬಸವಣ್ಣನಯ್ಯಾ, ಎನ್ನ ಮನವೆ ಮಡಿವಾಳನಯ್ಯಾ,
    ಎನ್ನ ಪ್ರಾಣವೆ ಸಂಗನಬಸವಣ್ಣನಯ್ಯಾ,
    ಗುಹೇಶ್ವರಾ-ನಿಮ್ಮ ಶರಣರ ಘನವನು
    ಎನ್ನ ಸರ್ವಾಂಗದಲ್ಲಿ ಕಂಡು ಪರಮಸುಖಿಯಾಗಿರ್ದೆನು./464

  465. ಎನ್ನ ನಾನರಿಯದಂದು ಮುನ್ನ ನೀನೇನಾಗಿರ್ದೆ ಹೇಳಾ?
    ಮುನ್ನ [ನೀ] ಬಾಯ ಮುಚ್ಚಿಕೊಂಡಿರ್ದೆ ಎಂಬುದ,
    ನಾ ನಿನ್ನ ಕಣ್ಣಿಂದ ಕಂಡೆನು,
    ಎನ್ನ ನಾನರಿದ ಬಳಿಕ ಇನ್ನು ನೀ ಬಾಯಿದೆರೆದು ಮಾತನಾಡಿದಡೆ
    ಅದನೆನ್ನ ಕಣ್ಣಿಂದ ಕಂಡು ನಾಚಿದೆ ನೋಡಾ.
    ಎನ್ನ ಕಾಬ ನಿನಗೆ, ನಿನ್ನ ಕಾಬ ಎನಗೆ, ಸಂಬಂಧ ಒಂದೇ ನೋಡಾ!
    ಗುಹೇಶ್ವರಾ ನಿನ್ನ ಬೆಡಗಿನ ಬಿನ್ನಾಣವ ನಾನರಿದೆ ನೋಡಾ./465

  466. ಎನ್ನ ಮನದ ಕೊನೆಯ ಮೊನೆಯ ಮೇಲೆ
    ಅಂಗವಿಲ್ಲದ ರೂಪನ ಕಂಡು ಮರುಳಾದೆನವ್ವಾ.
    ಆತನ ಕಂಡು ಬೆರಗಾದೆನವ್ವಾ.
    ಎನ್ನಂತರಂಗದ ಆತುಮನೊಳಗೆ
    ಅನು(ನಿ?)ಮಿಷ ನಿಜೈಕ್ಯ ಗುಹೇಶ್ವರನ ಕಂಡು !/466

  467. ಎನ್ನ ಮನದ ಮರವೆ ಬಿನ್ನವಾಗದು.
    ಮರೆದು ಅರಿದೆನೆಂದಡೆ ಅರುಹಿನ ಮರವೆಯ ಮಧ್ಯದಲ್ಲಿ ಎಡೆದೆರಪಿಲ್ಲ.
    ಕೋಲಿನಲ್ಲಿ ನೀರ ಹೊಯ್ದರೆ ಸೀಳಿ ಹೋಳಾದುದುಂಟೆ ?
    ಅರಿವುದೊಂದು ಘಟ, ಮರೆವುದೊಂದು ಘಟ, ಒಡಗೂಡುವಠಾವಿನ್ನೆಂತೋ.
    ಹುತ್ತದ ಬಾಯಿ ಹಲವಾದಡೆ ಸರ್ಪನೈದುವಲ್ಲಿ ಒಡಲೊಂದೆ ತಪ್ಪದು.
    ತನ್ನ ಚಿತ್ತದ ಭೇದವಲ್ಲದೆ ವಸ್ತುವಿಂಗೆ ಭೇದವುಂಟೆ [ಗುಹೇಶ್ವರ]/467

  468. ಎನ್ನ ಹೃದಯಕಮಲ ಮಧ್ಯದಲ್ಲಿ
    ಮೂರ್ತಿಗೊಂಡಿಪ್ಪ ಎನ್ನ ಪ್ರಾಣೇಶ್ವರಂಗೆ-
    ಎನ್ನ ಕ್ಷಮೆಯೆ ಅಬಿಷೇಕ, ಎನ್ನ ಪರಮವೈರಾಗ್ಯವೆ ಪುಷ್ಪದಮಾಲೆ
    ಎನ್ನ ಸಮಾದಿಸಂಪತ್ತೆ ಗಂಧ, ಎನ್ನ ನಿರಹಂಕಾರವೆ ಅಕ್ಷತೆ,
    ಎನ್ನ ಸದ್ವಿವೇಕವೆ ವಸ್ತ್ರ, ಎನ್ನ ಸತ್ಯವೆ ದಿವ್ಯಾಭರಣ
    ಎನ್ನ ವಿಶ್ವಾಸವೆ ಧೂಪ, ಎನ್ನ ದಿವ್ಯಜ್ಞಾನವೆ ದೀಪ,
    ಎನ್ನ ನಿಭ್ರಾಂತಿಯೆ ನೈವೇದ್ಯ, ಎನ್ನ ನಿರ್ವಿಷಯವೆ ತಾಂಬೂಲ
    ಎನ್ನ ವರಿಾನವೆ ಘಂಟೆ, ಎನ್ನ ನಿರ್ವಿಕಲ್ಪತೆಯೆ ಪ್ರದಕ್ಷಿಣೆ,
    ಎನ್ನ ಶುದ್ಧಿಯೆ ನಮಸ್ಕಾರ,
    ಎನ್ನ ಅಂತಃಕರಣದಿಂದ ಮಾಡುವ ಸೇವೆಯೆ ಉಪಚಾರಂಗಳು-
    ಈ ಪರಿಯಲ್ಲಿ ಎಮ್ಮ ಗುಹೇಶ್ವರಲಿಂಗಕ್ಕೆ ಪ್ರಾಣ (ಲಿಂಗ) ಪೂಜೆಯೆ ಮಾಡಿ
    ಬಾಹ್ಯಕ್ರೀಯ ಮರೆದನು ಕಾಣಾ ಸಂಗನಬಸವಣ್ಣಾ./468

  469. ಎನ್ನಂಗದಲ್ಲಿ ನಿಮಗೆ ಮಜ್ಜನ,
    ಎನ್ನ ತುರುಬಿನಲ್ಲಿ ನಿಮಗೆ ಕುಸುಮ ಪೂಜೆ
    ಎನ್ನ ನೇತ್ರದಲ್ಲಿ ನಿಮಗೆ ನಾನಾರೂಪು ವಿಚಿತ್ರ ನೋಟ.
    ಎನ್ನ ಶ್ರೋತ್ರದಲ್ಲಿ ನಿಮಗೆ ಪಂಚ ಮಹಾವಾದ್ಯದ ಕೇಳಿಕೆ.
    ಎನ್ನ ನಾಸಿಕದಲ್ಲಿ ನಿಮಗೆ ಸುಗಂಧ ಧೂಪ ಪರಿಮಳ.
    ಎನ್ನ ಜಿಹ್ವೆಯಲ್ಲಿ ನಿಮಗೆ ಷಡುರಸಾನ್ನ ನೈವೇದ್ಯ.
    ಎನ್ನ ತ್ವಕ್ಕಿನಲ್ಲಿ ನಿಮಗೆ ವಸ್ತ್ರಾಭರಣಾಲಂಕಾರ ಪೂಜೆ.
    ಎನ್ನ ಆನಂದವೆಂಬ ಸಜ್ಜೆಗೃಹದಲ್ಲಿ ನೀವು ಸ್ಪರುಸನಂಗೈದು ನೆರೆದಿಪ್ಪಿರಾಗಿ,
    ನಾನು ನೀನೆಂಬೆರಡಳಿದು, ತಾನು ತಾನಾದ
    ಘನವನೇನೆಂಬೆ ಗುಹೇಶ್ವರಯ್ಯಾ./469

  470. ಎನ್ನಂತರಂಗವೆಂಬ ಭೂಮಿಯಲ್ಲಿ
    ಮಹಾಜ್ಞಾನವೆಂಬ ನಿಧಾನ ಭೂಗತವಾಗಿದ್ದಿತ್ತಯ್ಯಾ.
    ಶ್ರೀಗುರುವೆಂಬ ಅಂಜನಸಿದ್ಧನು ಬಂದು,
    ಎನ್ನ ಅದಕ್ಕೆ ಬಲೆಯನಿಕ್ಕಿ,
    ತನ್ನ ಕರುಣಾಮೃತವೆಂಬ ಮರುಜವಣಿಯ ಹಿಂಡಿ
    ಆ ನಿಧಾನವನೆನಗೆ ಕರತಳಾಮಳಕವ ಮಾಡಿಕೊಟ್ಟನಯ್ಯಾ.
    ಗುಹೇಶ್ವರಾ-ನಿಮ್ಮ ಶರಣ ಅನಿಮಿಷನೆಂಬ ಶ್ರೀಗುರು./470

  471. ಎನ್ನಲ್ಲಿ ನಾನು ದೃಷ್ಟವೆಂದಡೆ
    ನಿಮ್ಮಲ್ಲಿ ನೀವು ಮೆಚ್ಚುವಿರೆ ?
    ಸಂದೇಹದಿಂದ ಸವೆಯಿತ್ತು ಲೋಕವು.
    ಕನ್ನಡಿಯುಂಡ ಬಿಂಬ, ಕಬ್ಬನವುಂಡ ನೀರು,
    ಕಬ್ಬಿಸಿಲು ಅರಿಸಿನವ ನುಂಗಿದಂತೆ ಗುಹೇಶ್ವರಾ ನಿಮ್ಮ ಶರಣರು./471

  472. ಎನ್ನಲ್ಲಿ ನಾನು ನಿಜವಾಗಿ ನಿಮ್ಮನರಿದೆಹೆನೆಂದಡೆ
    ಅದು ನಿಮ್ಮ ಮತಕ್ಕೆ ಬಪ್ಪುದೆ?
    ಎನ್ನ ನಾನು ಮರೆದು, ನಿಮ್ಮನರಿದಡೆ,
    ಅದು ನಿಮ್ಮ ರೂಪೆಂಬೆ.
    ಎನ್ನ ನಿನ್ನೊಳು ಮರೆದಡೆ, ಕನ್ನಡಿಯೊಳಗಣ ಪ್ರತಿಬಿಂಬದಂತೆ
    ಬಿನ್ನವಿಲ್ಲದೆ ಇದ್ದೆನು ಕಾಣಾ ಗುಹೇಶ್ವರಾ./472

  473. ಎರಡು ಒಂದಾದ ಬಳಿಕ ಅರ್ಚನೆ ಹಿಂಗಿತ್ತು.
    ಎರಡು ಒಂದಾದ ಬಳಿಕ ಅರ್ಪಿತ ಹಿಂಗಿತ್ತು.
    ಎರಡು ಒಂದಾದ ಬಳಿಕ ಆಚಾರ ಹಿಂಗಿತ್ತು.
    ಎರಡು ಒಂದಾದ ಬಳಿಕ ಅವಧಾನ ಹಿಂಗಿತ್ತು.
    ಎರಡು ಒಂದಾದ ಬಳಿಕ ಶಬ್ದಕ್ಕೆ ಇಂಬಿಲ್ಲ
    ರೂಹಿಸಲೆಡೆಯುಂಟೆ ಗುಹೇಶ್ವರಾ ?/473

  474. ಎರಡು ಕಣ್ಣುಳ್ಳಡೆ ಚತುಭರ್ುಜನೆಂಬೆನು.
    ಮೂರು ಕಣ್ಣುಳ್ಳಡೆ ಮಹೇಶ್ವರನೆಂಬೆನು
    ಮೈಯೆಲ್ಲಾ ಕಣ್ಣಾದಡೆ ಸದಾಶಿವನೆಂಬೆನು
    (ಹದಿನೈದು ಕಣ್ಣಾದಡೆ ಪರಶಿವನೆಂಬೆನು?)
    ಗುಹೇಶ್ವರಾ ನಿಮ್ಮ ಶರಣಂಗೆ ಅಂಗಾಲ ಕಣ್ಣು ಮೂಡಿದಡೆ
    ನಿರುಪಮ ಮಹಿಮ ಅಲ್ಲಯ್ಯನೆಂಬೆನು. /474

  475. ಎರಡು ನೇತ್ರ ಒಂದಾದ ಭಾಳನೇತ್ರವು ಇಷ್ಟಲಿಂಗದ ಗೋಳಕಕ್ಕೆ ಕೂಟವು.
    ಒಂದು ಲಿಂಗ ಎರಡಾದುದೆ ಇಷ್ಟ ಪ್ರಾಣಲಿಂಗವು.
    ಆ ಪ್ರಾಣಲಿಂಗದ ಹಸ್ತಂಗಳಿಗೆರಡು ನೇತ್ರಂಗಳೆ ಕುಚಂಗಳು,
    ಆ ಕುಚಂಗಳು ಹಿಡಿಯಲಿಕೆ,
    ಈ ಕುಚವೆರಡು ಗುಹ್ಯ ಒಂದು ಕೂಡಿ ತ್ರಿಕೂಟವೆಂಬ ಹೆಸರಾಯಿತ್ತು.
    ಆ ತ್ರಿಕೂಟವೆಂಬ ಶಾಂಭವಪುರದ ಮಧ್ಯದಲ್ಲಿ
    ಜ್ಯೋತಿರ್ಲಿಂಗವೇಕವಾದ ಬಳಿಕ,
    ತನುತ್ರಯದ ವಿಕಾರವ ಹೊದ್ದಲಾಗದು.
    ವಿಕಾರವ ಹೊದ್ದಿದರೆ ಮೀಸಲೋಗರವ ಶುನಿಮುಟ್ಟಿದಂತಾಯಿತ್ತು
    ಆ ಜೀವಾತ್ಮಪದಾರ್ಥವು ಲಿಂಗಕ್ಕೆ ಸಲ್ಲದು,
    ಅವರ ತೆರನೆಂತಾಯಿತ್ತೆಂದಡೆ ;
    ಜನ್ಮದಾರಿದ್ರನು ನಿಕ್ಷೇಪವಂ ಕಂಡು ಹೋಗಲಾಗಿ ದಿಗಿಲುಬಿದ್ದು ಸತ್ತಂತಾಯಿತ್ತು.
    ಅಂಥ ನಿರ್ಭಾಗ್ಯ ದುರ್ಮರಣನ ಕಂಡು ಹೇಸಿ,
    ತಮ್ಮ ತನುತ್ರಯವಿಕಾರಮಂ ಪೊರ್ದದೆ,
    ಲಿಂಗ ನಿಕ್ಷೇಪದಲ್ಲಿ ನಿರಂಗವಾಗಿ, ಮನ್ಮಥರತಿಯೆಂಬ ನರಕವ ಬೀಳದೆ,
    ಅಕ್ಷಯಸುಖಿಗಳಾದರು ನೋಡಾ ಗುಹೇಶ್ವರಲಿಂಗದಲ್ಲಿ./475

  476. ಎರಡು ಬೆಟ್ಟದ ನಡುವೆ ಕರಡಿಯ ಮಿಳಿಯ ಮಾಡಿ,
    ಹುಲಿಯನೂ ಎತ್ತನೂ ಹೂಡಿ ಹೊಡೆದವರಾರೊ ?
    ಎರಡರ ಎಂಟೆರಡರ, ಆರರ (ಆರೆಡರ?), ನಾಲ್ಕೆರಡರ
    ಶರದಿ ಶರದಿಯ ಕೂಡಿ ಮೊರೆವುದಿದೇನೊ ?
    ಕುರುಡ ಹೆಳವನ ಕೈವಿಡಿದು ನಡೆವಂತೆ,
    ಗುಹೇಶ್ವರನೆಂಬ ಲಿಂಗನಿರಾಳದ ನಿಲುವು./476

  477. ಎರಡು ಬೆಟ್ಟದ ನಡುವೆ ಹಳ್ಳವ ಮಿಳಿಯ ಮಾಡಿ,
    ಬಾವಿಯನುತ್ತೆನೆಂಬ ಮರುಳತನವ ನೋಡಾ !
    ತೊರೆಯ ಮೇಲೆ ಮಾರುಗೋಲನಿಕ್ಕಿ
    ಹುಟ್ಟ ಮುರಿದು ಹೋದ ಅಂಬಿಗನ ನೋಡಾ.
    ಮರೆದು ಮಲಗಿದ ಬೆಕ್ಕಿನ ಕಿವಿಯ ಇಲಿ ಮೇದಂತೆ
    ಗುಹೇಶ್ವರನೆಂಬ ಲಿಂಗ ನಿರಾಳದ ನಿಲವು./477

  478. ಎರಡೆಂಬತ್ತು ಕೋಟಿ ಗೀತವ ಹಾಡಿದರೇನಯ್ಯಾ ?
    ಬೆಟ್ಟಕ್ಕೆ ನಾಯಿ ಬೊಗಳಿದಂತಾಯಿತ್ತಯ್ಯಾ.
    ಮನವು ಘನವ ನೆಮ್ಮದು, ಘನವು ಮನವ ನೆಮ್ಮದು.
    ಹಾಡಿದರೇನು ಓದಿದರೇನು ?
    ಗುಹೇಶ್ವರ ನೀನೊಲಿದ ಕಾಲಕ್ಕೆ
    ಎರಡೆಂಬತ್ತು ಕೋಟಿ ಗೀತವೆಲ್ಲವೂ
    ನಿಮ್ಮದೊಂದು ಮಾತಿನೊಳಡಕವಯ್ಯಾ./478

  479. ಎರಡೆಂಬರಯ್ಯಾ ಕರಣದ ಕಂಗಳಲ್ಲಿ ನೋಡಿದವರು.
    ಎರಡುವನತಿಗಳೆದು ಒಂದೆಂಬರಯ್ಯಾ.
    ಕಾಮಿಸೂದಿಲ್ಲಾಗಿ ಕಲ್ಪಿಸೂದಿಲ್ಲ.
    ಭಾವಿಸೂದಿಲ್ಲಾಗಿ ಬಯಸೂದಿಲ್ಲ.
    ಗುಹೇಶ್ವರನೆಂಬುದಿಲ್ಲಾಗಿ ಮುಂದೆ ಬಯಲೆಂಬುದೂ ಇಲ್ಲ./479

  480. ಎರಡೊಂದು ಮುಕ್ಕೂಟದೊಳು ಲಿಂಗದೆಡೆಯಾಟವಿರಲು,
    ಬೀಜಕ್ಷೇತ್ರದೆರಕ ಹರಿಹರಯೋಗ.
    ವಿರತರತಿ ನಿಕ್ಷೇಪವಿದುವೆ ಗರ್ಭಾದಾನ.
    ಪರಮಬೀಜಾವಾಪವಿದರ ಫಲನಿರ್ವಾಣ !
    ಸರಸಲಿಂಗದ ನಿಷೇಕವನರಿವುದೆ ಸಾಜ,
    ಗುರುವೆ ಕರುಣಿಸಿದ ಶಿವಲಿಂಗಕಮಲಾರ್ಚನೆಯನು.
    ಇದು ಗುಹ್ಯ ಗುಹೇಶ್ವರಾ. /480

  481. ಎಲೆ ಬಸವಣ್ಣ ನಾವು ಬಹುದಕ್ಕೆ ಮುನ್ನವೆ
    ಬಂದಹರೆಂದು ಶುಭಸೂಚನೆ ತೋರಿತ್ತೆಂದೆ.
    ಮನೆಯ ಮೀರಿ ಮಂದದ ದೈವ ಉಂಟೆ ಎಂಬುದ ತಿಳಿ,
    ಗುಹೇಶ್ವರಲಿಂಗದಲ್ಲಿ ಸಂಗನಬಸವಣಾ/481

  482. ಎಲೆ ಮನವೆ,
    ಎಲ್ಲಿ ಹವಣಿಸಬಾರದ ಅಖಂಡ ಬೆಳಗು ತೋರುತ್ತಿಹುದು
    ಅದೀಗ ನಿನ್ನ ನಿಜ.
    ಎಲೆ ಮನವೆ,
    ಆವಲ್ಲಿ ನೀನೆಂಬ ಶಂಕೆ ಹಿಂಗಿ ತಾನೆ ತೋರುತ್ತಿಹುದು
    ಅದೀಗ ನಿನ್ನ ನಿಜ.
    ಎಲೆ ಮನವೆ,
    ನಿನ್ನ ನಿಜವನರಿಯಬಲ್ಲಡೆ ಅದೇ ಬ್ರಹ್ಮಜ್ಞಾನ, ಅದೇ ಕೇವಲಮುಕ್ತಿ,
    ಅದೇ ನಮ್ಮ ಗುಹೇಶ್ವರಲಿಂಗವನರಿವ
    ಸಹಜಭಕ್ತಿಯ ಕುಳ ಕಾಣಾ.
    ಎಲೆ ಮನವೆ-ನೀನಿದ ನಿಶ್ಚಯಿಸಿಕೊ ಮರೆಯದೆ./482

  483. ಎಲೆ ಮನವೆ; ನೀ ನಿನ್ನ ನಿಜವ ತಿಳಿವಡೆ
    ಆ ನಿನ್ನ ನಿಜವ ಹೇಳುವೆ ಕೇಳು:
    ಅದು ಕೇವಲ ಜ್ಯೋತಿ ಅದು ವರ್ಣಾತೀತ.
    ನೀನದನರಸುವಾಗ ನಿನಗಾವಲ್ಲಿ ನಿಶ್ಚಯ ತೋರಿತ್ತು,
    ಅದೀಗ ನಿನ್ನ ಪರಿಪೂರ್ಣತ್ವದ ನೆಲೆ.
    ಆ ನಿನ್ನ ನಿಜವ ನಿಶ್ಚಯಿಸಿ ನೀ ನಿರ್ಗಮನಿಯಾದಲ್ಲಿ
    ಅದೇ ನಿನ್ನ ಸಮ್ಯಕ್ಜ್ಞಾನದ ತೋರಿಕೆ !
    ಆ ತೋರಿಕೆಯ ಅಖಂಡ ಬೆಳಗಿನ ಹೊಳಹಿನೊಳಗೆ
    ನೀ ನಮ್ಮ ಗುಹೇಶ್ವರಲಿಂಗದ ಶ್ರೀಚರಣವನರಸಿಕೊಂಡು
    ನಿಶ್ಚಿಂತನಾಗೆಲೆ ಮನವೆ./483

  484. ಎಲೆಯಿಲ್ಲದ ವೃಕ್ಷ ಉಲಿಯಬಲ್ಲುದೆ ?
    ಜಲವಿಲ್ಲದ ತಟಾಕ ತೆರೆಗೊಡಲುಂಟೆ ?
    ಶಬ್ದಮುಗ್ಧವಾದವಂಗೆ, ನುಡಿಗೆಡೆಯುಂಟೆ ?
    ಸಮಯವ ಸಾದಿಸುವನ್ನಬರ ಎಂತು ನಿಜನಿಃಪತಿಯಪ್ಪುದು ?
    ಭ್ರಾಂತುಮರ್ಕಟನ ವೃಶ್ಚಿಕ ಹೊಯಿದಂತೆ
    ನಮ್ಮ ಗುಹೇಶ್ವರಲಿಂಗದಲ್ಲಿ
    ಮರೆದಾಡಬೇಡವೆಲೆ ಭ್ರಾಂತುಯೋಗಿ ಘಟ್ಟಿವಾಳಯ್ಯ./484

  485. ಎಲ್ಲ ಎಲ್ಲವನರಿಯಬಹುದು; ಸಾವನರಿಯಬಾರದು.
    ಸರ್ವವಿದ್ಯೆ ಸಕಲವ್ಯಾಪ್ತಿಯನರಿಯಬಹುದು; ಸಾವನರಿಯಬಾರದು.
    ಹರಿ ಬ್ರಹ್ಮ ಕಾಲ ಕಾಮ ದಕ್ಷಾದಿ ದೇವ ದಾನವ ಮಾನವರಿಗೆಲ್ಲಗೆಯೂ ಸಾವು !
    ಮಹಾಪುರುಷರಿಗೆಯೂ ಸಾವು !
    ಶಿವ ಶಿವಾ, ಈ ಸಾವನರಿಯದೀ ಲೋಕ !
    ಪ್ರಪಂಚವ ಮರೆದು ಲಿಂಗದಲ್ಲಿ ನೆನಹು ನೆಲೆಗೊಂಡಡೆ
    ಆ ಮಹಿಮಂಗೆ ಸಾವಿಲ್ಲ.
    ಈ ಸಾವನರಿಯದ ಅರೆಮರುಳಗಳ ಅರಿವು
    ಮಾನ (ಮಹಾ?) ಹಾನಿ ಕಾಣಾ ಗುಹೇಶ್ವರಾ./485

  486. ಎಲ್ಲರಂತೆ ನುಡಿದು ಎಲ್ಲರಂತೆ ನಡೆದು
    ಎಲ್ಲರಂತೆ ಸಂಸಾರವ ಬಳಸುತ್ತಿಪ್ಪರೆಂದು
    ಎಲ್ಲರಂತೆ ಕಾಣಬಹುದೆ ನಿಜ ದೊರೆಕೊಂಡ ನಿರ್ಮಲಜ್ಞಾನಿಗಳ ?
    ಅವರ ಮನೋಮಧ್ಯದಲ್ಲಿ ತೊಳಗಿ ಬೆಳಗುವ ಶಿವಜ್ಞಾನಬೀಜವು ಹೊಳ್ಳಪ್ಪುದೆ ?
    ಉರಿಯದಿದ್ದಡೂ ಕಿಚ್ಚನೊರಲೆ ಕೊಂಬುದೆ ಗುಹೇಶ್ವರಾ ?/486

  487. ಎಲ್ಲಿಯೂ ಇಲ್ಲೆಂಬುದ ಹುಸಿ ಮಾಡಿ,
    ಶಿಲಾಲಿಖಿತವು ಗುರುವಿನ ವಶವಾಗಿ,
    ಅಲ್ಲಲ್ಲಿಗೆ ಉಂಟೆಂಬುದನು ನಿಲ್ಲದೆ ತೋರಿ,
    ಮಾಡಿದನು ಶಿಷ್ಯ-ತಾನು ಬಲ್ಲಿದ !
    ಷಡುವಿಧದ ಜವನಿಕೆಯ ಮರೆಯಲ್ಲಿಯೆ
    ಗುಹೇಶ್ವರಲಿಂಗದ ಅರಿವು !/487

  488. ಎಸೆಯದಿರು ಎಸೆಯದಿರು ಕಾಮಾ,
    ನಿನ್ನ ಬಾಣ ಹುಸಿಯಲೇಕೊ?
    ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ-ಇವು ಸಾಲದೆ ನಿನಗೆ ?
    ಗುಹೇಶ್ವರಲಿಂಗದ ವಿರಹದಲ್ಲಿ ಬೆಂದವರ,
    ಮರಳಿ ಸುಡಲುಂಟೆ ಮರುಳು ಕಾಮಾ ?/488

  489. ಎಳ್ಳಿಂಗೆ ಪರಿಮಳವ ಕಟ್ಟಿದಲ್ಲದೆ,
    ಎಣ್ಣೆಗೆ ಪರಿಮಳ ವೇದಿಸದು (ಘಟಿಸದು?)
    ದೇಹದಲ್ಲಿ ಇಷ್ಟಲಿಂಗ ಸ್ಥಾಪಿಸಿದಲ್ಲದೆ ಪ್ರಾಣಲಿಂಗ ಸಂಬಂಧವಾಗದು.
    ಇದು ಕಾರಣ ನಮ್ಮ ಗುಹೇಶ್ವರಲಿಂಗದಲ್ಲಿ
    ಇಷ್ಟಲಿಂಗ ಸಂಬಂದಿಯಾದಲ್ಲದೆ, ಪ್ರಾಣಲಿಂಗ ಸಂಬಂದಿಯಾಗಬಾರದು,-
    ಕಾಣಾ ಸಿದ್ಧರಾಮಯ್ಯಾ./489

  490. ಏನ ಕಂಡಡೇನಯ್ಯಾ, ತನ್ನ ಕಾಣದಾತ ಕುರುಡ.
    ಏನ ಕೇಳಿದಡೇನಯ್ಯಾ ತನ್ನ ಕೇಳದಾತ ಕಿವುಡ.
    ಏನ ಮಾತಾಡಿದಡೇನಯ್ಯಾ ತನ್ನ ಮಾತಾಡದಾತ ಮೂಕ.
    ದಿಟದಿಂತ ತನ್ನ ತಾ ಕಾಣಬೇಕು, ದಿಟದಿಂದ ತನ್ನ ತಾ ಕೇಳಬೇಕು,
    ದಿಟದಿಂದ ತನ್ನ ತಾ ಮಾತಾಡಬೇಕು.
    ಇದೆ ತನ್ನ ನೆಲೆ, ಸ್ವಭೂಮಿ, ಸ್ವಸ್ವರೂಪು ಕಾಣಾ-ಗುಹೇಶ್ವರಾ/490

  491. ಏನೂ ಇಲ್ಲದಠಾವಿನಲ್ಲಿ ನಾ ನೀನೆಂಬುದ ತಾನೆ ತಂದನು.
    ಇಲ್ಲಾದುದ ಉಂಟಾದುದ ಸಾವಿರವನಾಡಿದಡೇನು ?
    ಉಂಟಾದುದನು `ಇಲ್ಲ’ ಮಾಡಬಲ್ಲಡೆ
    ಆ `ಇಲ್ಲ’ವೆ ತಾನೆ ಗುಹೇಶ್ವರ !/491

  492. ಏನೂ ಎನಲಿಲ್ಲದ ಮಹಾಘನದೊಳಗೆ,
    ತಾನೆಂಬುದನಳಿದ ಪರಮಲಿಂಗೈಕ್ಯಂಗೆ,
    ಧ್ಯಾನ ಮೌನದ ಹಂಗುಂಟೆ ಗುಹೇಶ್ವರಾ./492

  493. ಏನೂ ಏನೂ ಇಲ್ಲದ ಬಯಲೊಳಗೊಂದು
    ಬಗೆಗೊಳಗಾದ ಬಣ್ಣ ತಲೆದೋರಿತ್ತು.
    ಆ ಬಣ್ಣವು ಆ ಬಯಲ ಶೃಂಗರಿಸಲು,
    ಬಯಲು ಸ್ವರೂಪಗೊಂಡಿತ್ತು.
    ಅಂತಪ್ಪ ಸ್ವರೂಪಿನ ಬೆಡಗು ತಾನೆ,
    ನಮ್ಮ ಗುಹೇಶ್ವರಲಿಂಗದ ಪ್ರಥಮ ಬಿತ್ತಿ/493

  494. ಏನೆಂದರಿಯರು ಎಂತೆಂದರಿಯರು,
    ಅರಿವನರಿದೆವೆಂಬರು, ಮರಹ ಮರೆದೆವೆಂಬರು.
    ಒಂದನರಿದೆನೆಂದಡೆ ಮುಖ ಮೂರಾಯಿತ್ತು.
    ಮೂರು ಮುಖವ ಏಕಾಗ್ರಹಕವ ಮಾಡಿದಲ್ಲದೆ
    ಶರಣನಲ್ಲ ಗುಹೇಶ್ವರಾ. /494

  495. ಏನೆಂದರಿಯರು ಎಂತೆಂದರಿಯರು,
    ಬರುಮಾತಿನ ಬೊಮ್ಮವನಾಡುತ್ತಿಪ್ಪರು.
    ರುದ್ರನ ನೊಸಲ ಕಣ್ಣ ಕಿಚ್ಚಿನೊಳಗೆ
    ತ್ರಿಪುರವ ಸುಡಲರಿಯದೆ
    ಕಾಮನ ಕಣ್ಣ ಕಿಚ್ಚಿನೊಳಗೆ ತ್ರಿಪುರವ ಸುಡುತ್ತಿಪ್ಪರು.
    ಭೂಮಿಯಾಕಾಶವ ಮೆಟ್ಟಿ,
    ಕಾಮಗುಣಂಗಳ ಕೂಡೆ ಕಾದಿ ಗೆಲಲರಿಯದೆ
    ನೀಲಗಿರಿಯ ಮೇಲೆ ನಿಂದು
    ಉಲಿವದ (ಉಲಿಯ?) ಉಯ್ಯಾಲೆಯನಾಡುತ್ತಿಪ್ಪರಯ್ಯಾ.
    ಗುಹೇಶ್ವರಾ ನಿಮ್ಮನರಿದೆಹೆವೆಂಬವರೆಲ್ಲ
    ಬರುದೊರೆವೋದರಯ್ಯಾ/495

  496. ಏಳು ತಾಳ[ದ] ಮೇಲೆ ಕೇಳುವ ಸುನಾದ,
    ಸ್ಥೂಲ ಸೂಕ್ಷ್ಮ ಕೈಲಾಸದ ರಭಸ,
    ಗಂಗೆವಾಳುಕಸಮಾರುದ್ರರ ತಿಂಥಿಣಿ,
    ಗಗನಗಂಬಿರದ ಶಿವಸ್ತುತಿಯ ನೋಡನಲೊಡನೆಫ
    ಪಿಂಡ ಬ್ರಹ್ಮಾಂಡವಾಯಿತ್ತು-
    ಅಖಂಡ ನಿರಾಳ ಗುಹೇಶ್ವರಾ./496

  497. ಐದ ಕಟ್ಟಿ ಐದ ನೆಗಪಿ,
    ಮನಪವನಧ್ಯಾನ ಭಾವ ದೃಢದಿಂದ
    ಧ್ಯಾನದಿ ನೋಡಿ; ಕಾಯದ ಗಾಳಿಯ ಸಂಚವ ಶೋದಿಸಿ,
    ಒಳಗೆ ಜಾರಿದ ಅಮೃತವನು
    ವಾಯುಮಂಡಲದಲೆತ್ತಿ, ನಾಬಿಮಂಡಲದಲ್ಲಿ ನುಂಗಿ
    ಮಾಯಾಮಂಡಲ ತೋರಲರಿಯ ಬಲ್ಲಡೆ
    ಗುಹೇಶ್ವರಲಿಂಗದಲ್ಲಿ ಆತ ಶಿವಯೋಗಿ/497

  498. ಐದರ ಮಧ್ಯದ ಕಣ್ಣ ಕಾಡಿನೊಳಗೆ ಬಿದ್ದಿದಾವೆ ಈರೈದು ಹೆಣನು
    ಬೆಂಬಳುವರು ಬಳಗ ಘನವಾದ ಕಾರಣ
    ಆ ಹೆಣನು ಬೇಯವು, ಕಾಡೂ ನಂದದು
    ಮಾಡು ಉರಿಯಿತ್ತು ಗುಹೇಶ್ವರಾ/498

  499. ಐದಾನೆಯ ಬೆನ್ನಲ್ಲಿ ಐದು ಒಂಟೆ ಹೋದವು,
    ಒಂಬತ್ತು ಸಾವಿರ ಕುದುರೆಯನು ಒಂದು ಎಳಗ ಎಯ್ದಿಸುತ್ತಿದ್ದಿತ್ತು.
    ಅರೆಮರುಳಾದವನ ನೆರೆ ಮರುಳಾದವ ಬಲ್ಲನೆ ?
    ಕುರುಬ ಕುರಿಯ ಹಾಲ ಕರೆದು ಒಲೆಯ ಮೇಲಿಕ್ಕೆ,
    ಇಕ್ಕಿದ ಹಾಲ ಬೆಕ್ಕು ಕುಡಿಯಿತ್ತು,
    ಬೆಣ್ಣೆಯ ಮುಂದಿಟ್ಟುಕೊಂಡಳುತಿರ್ದ ಕಾಣಾ ಗುಹೇಶ್ವರಾ/499

  500. ಐದಿಂದ್ರಿಯವನರಿತಲ್ಲದೆ, ಒಂದಿಂದ್ರಿಯಕ್ಕೆ ಸಂದ ಗುಣವನರಿಯಬಾರದು.
    ಆ ಗುಣ ಏಕಮೂರ್ತಿ ತ್ರಿವಿಧರೂಪಾದ ಕಾರಣ.
    ಪೂಜೆಯೆಂಬುದ ಪುಣ್ಯವೆಂಬ ಭಾವವಿಲ್ಲದೆ ಮಾಡಿದಡೆ
    ನಮ್ಮ ಗುಹೇಶ್ವರಲಿಂಗಕ್ಕೆ ಅನ್ಯವಿಲ್ಲ ಕಾಣಾ ಚಂದಯ್ಯ/500

  501. ಐದು ಬಣ್ಣದ ಗಿಡುವಿಂಗೆ ಐದೆಲೆ ಐದು ಹೂ, ಐದು ಕಾಯಾಯಿತ್ತು.
    ಮತ್ತೈದರಠಾವಿನಲ್ಲಿ, ಐದು ಹೂವಿನ ಕ್ರಮದಲ್ಲಿ
    ಹಣ್ಣ ಮೆಲಬಲ್ಲಡೆ, ಗುಹೇಶ್ವರನೆಂಬ ಲಿಂಗವು ತಾನೆ ನೋಡಾ !/501

  502. ಐದು ಮುಖದ ಅಂಗನೆಗೆ ಹದಿನೈದು ದೇಹ ನೋಡಾ!
    ಆ ಅಂಗನೆಯ ಮನೆಯೊಳಗಿರ್ದು, ತಾವಾರೆಂಬುದನರಿಯದೆ;
    ಬಾಯ್ಗೆ ಬಂದಂತೆ ನುಡಿವರು,
    ಗುಹೇಶ್ವರಾ ನಿಮ್ಮನರಿಯದ ಜಡರುಗಳು./502

  503. ಐದು ಸರ್ಪಂಗಳಿಗೆ ತನು ಒಂದು, ದಂತವೆರಡು.
    ಸರ್ಪ ಕಡಿದು ಸತ್ತ ಹೆಣನು ಸುಳಿದಾಡುವುದ ಕಂಡೆ.
    ಈ ನಿತ್ಯವನರಿಯದಠಾವಿನಲ್ಲಿ, ಭಕ್ತಿಯೆಲ್ಲಿಯದೊ ಗುಹೇಶ್ವರಾ ?/503

  504. ಐವರ ಸಂಗದಿಂದ ಬಂದೆ ನೋಡಯ್ಯಾ.
    ಐವರ ಸಂಗದಿಂದ ನಿಂದೆ ನೋಡಯ್ಯಾ.
    ಈ ಐವರೂ ತಮ್ಮ ತಮ್ಮ ಬಟ್ಟೆಯಲ್ಲಿ ಹೋದರು.
    ನಾನೊಬ್ಬನೆ ನಿಸ್ಸಂಗಿಯಾಗಿ ಉಳಿದೆನಲ್ಲಾ !
    ಗುಹೇಶ್ವರನೆಂಬ ನಿತ್ಯನಿರಂಜನ ರೂಹಿಲ್ಲದ ಘನವ ಕಂಡೆನಯ್ಯಾ./504

  505. ಒಂದ ಮಾಡ ಹೋದಡೆ ಮತ್ತೊಂದಾಯಿತ್ತೆಂಬ ಮಾತು
    ದಿಟವಾಯಿತ್ತು ನೋಡಾ.
    ನಿಮ್ಮ ಒಡತಣ ಅನುಭಾವದಿಂದ
    ಗುರುಮುಖ ಸಾಧ್ಯವಾದುದಯ್ಯಾ,
    ಗುಹೇಶ್ವರಲಿಂಗದಲ್ಲಿ ನಿನಗೂ ನನಗೂ
    ಉಪದೇಶವ ಒಂದಾದ ಭೇದವ ಹೇಳಾ ಚನ್ನಬಸವಣ್ಣಾ/505

  506. ಒಂದ ಮಾಡಹೋದಡೆ ಮತ್ತೊಂದಾಯಿತ್ತೆಂಬುದು,
    ಎನಗಾಯಿತ್ತು ನೋಡಾ ಬಸವಣ್ಣಾ
    ಮಡಿವಾಳನ ಪೂರ್ವಾಪರವನೊರೆದು ನೋಡಿದಡೆ
    ನಿನ್ನ ಪೂರ್ವಾಪರ ಎನಗೆ ಅರಿಯ ಬಂದಿತ್ತು ನೋಡಾ ಬಸವಣ್ಣಾ.
    ನಿನ್ನ ಪೂರ್ವಾಪರಸಂಗವ ಮಾಡಬಂದಡೆ
    ಎನ್ನ ಪೂರ್ವಾಪರ ಎನಗೆ ಅರಿಯ ಬಂದಿತ್ತು ನೋಡಾ ಬಸವಣ್ಣಾ.
    ಮಹಾಜ್ಞಾನಿಗಳ ಸಂಗದಿಂದ ಉಭಯ ಸಂಗಸಿದ್ಧಿಯೆಂಬುದು
    ದಿಟವಾಯಿತ್ತು ನೋಡಾ ಬಸವಣ್ಣಾ.
    ಗುಹೇಶ್ವರನ ಶರಣ ಮಡಿವಾಳ ಮಾಚಿತಂದೆಗಳ ಶ್ರೀಪಾದಕ್ಕೆ
    ನಮೋ ನಮೋ ಎಂದು ಬದುಕಿದೆನು ಕಾಣಾ ಸಂಗನಬಸವಣ್ಣಾ./506

  507. ಒಂದಡಕೆಯನಿಟ್ಟರೆ ಅಡ್ಡಗೋಡೆ ಬಸುರಾಯಿತ್ತು,
    ನಡುಮನೆಯೊಳಗಣ ಕಂಭ ಗಂಡು ಮಗನ ಹಡೆಯಿತ್ತು.
    ಹೊರಗೆ ಕಿಚ್ಚನಿಕ್ಕಿ ಒಳಗೆ ಅಗ್ನಿ ಪುಟವ ಹಾಕಿ,
    ಹಾದಿ ಹೋಗೋ ಅಣ್ಣ ನಮ್ಮ ಕರುವ ಕಾಣಲಿಲ್ಲವೆ.
    ನಿನ್ನೆ ಬಿತ್ತಿದ ಹೊಲದಾಗೆ ಮೊನ್ನೆ ಮೇಯ್ವುದ ಕಂಡೆ.
    ಕೊರಳ ಕೊಯ್ವುದ ಕಂಡೆ, ರಕ್ತವ ಕಾಣಲಿಲ್ಲ,
    ಸುಡುವುದ ಕಂಡೆ ಬೂದಿಯ ಕಾಣಲಿಲ್ಲ.
    ಇಷ್ಟ ಕಂಡು ಬೆರಗಾದ ನಮ್ಮ ಗುಹೇಶ್ವರಾ/507

  508. ಒಂದರ ಮೋರೆಯನೊಂದು ಮೂಸಿನೋಡಿ
    ಮತ್ತೊಚ್ಚಿ ಬೇಕಿಂಗೆ (ಹೊತ್ತಿಂಗೆ ?) ಕಚ್ಚಿಯಾಡಿ ಹೋದಂತೆಯಾಯಿತ್ತು,
    ನೋಡಿರೆ, ಕಲಿಯುಗದೊಳಗಣ ಮೇಳಾಪವ !
    ಗುರುವೆಂಬಾತ ಶಿಷ್ಯನಂತುವನರಿಯ.
    ಶಿಷ್ಯನೆಂಬಾತ ಗುರುವಿನಂತುವನರಿಯ.
    ಭಕ್ತರೆಂಬವರು ಭಕ್ತರೊಳಗೆ ಸಮವಿಲ್ಲ.
    ಜಂಗಮರೆಂಬವರು ಜಂಗಮದೊಳಗೆ ಸಮವಿಲ್ಲ.
    ಇದು ಕಾರಣ-ಕಲಿಯುಗದೊಳಗೆ ಉಪದೇಶವ ತೋರುವ (ಮಾಡುವ ?)
    ಕಾಳಗುರಿಕೆಯ ಮಕ್ಕಳನೇನೆಂಬೆ ಗುಹೇಶ್ವರಾ ?/508

  509. ಒಂದಾದುದು ಎರಡಪ್ಪುದೆ ? ಎರಡಾದುದು ಒಂದಪ್ಪುದೆ-[ಎಂದ]
    ಪರಿಣಾಮದ ವೇಳೆಯಲ್ಲಿ ಸಂದೇಹ ಹುಟ್ಟಲುಂಟೆ ?
    ಬಂದ ಜಂಗಮದ ನಿಲವನರಿಯದೆ,
    ಹಿಂದನೆಣಿಸಿ ಹಲವ ಹಂಬಲಿಸುವರೆ ?
    ಈ ಒಂದು ನಿಲವಿಂಗೆ ಪರಿಣಾಮವ ಮಾಡಬಲ್ಲಡೆ
    ನಿನ್ನ ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ
    ಪರಿಣಾಮವಹುದು ನೋಡಾ.
    ಗುಹೇಶ್ವರನೆಂಬ ಲಿಂಗದ ನಿಲವನರಿಯದೆ
    ಮರುಳಾದೆಯಲ್ಲಾ ಸಂಗನಬಸವಣ್ಣಾ/509

  510. ಒಂದು ಇಲ್ಲದ ಬಿಂದುವ, ತಂದೆಯಿಲ್ಲದ ಕಂದನ,
    ಮಾತೆ ಇಲ್ಲದ ಜಾತನ, ಗಮನವಿಲ್ಲದ ಗಮ್ಯನ,
    ಮೂವರರಿಯದ ಮುಗ್ಧನಠಾವ ತೋರಿಸು ಗುಹೇಶ್ವರಾ/510

  511. ಒಂದು ದಿಕ್ಕಿನಲ್ಲಿ ಕತ್ತಲೆಯನಿರಿಸಿ,
    ಒಂದು ದಿಕ್ಕಿನಲ್ಲಿ ತನುವನಿರಿಸಿ,
    ಒಂದು ದಿಕ್ಕಿನಲ್ಲಿ ವಚನವನಿರಿಸಿ,
    ಒಂದು ದಿಕ್ಕಿನಲ್ಲಿ ರುಚಿಯನಿರಿಸಿ,
    ನಾಲ್ಕು ದಿಕ್ಕಿನ ನಡುವೆ ನೀನಿರಬಲ್ಲಡೆ,
    ಎನ್ನ ಬೆಸಗೊಳ್ಳಯ್ಯಾ ಗುಹೇಶ್ವರಾ./511

  512. ಒಂದು ಧನುವಿಂಗೆ ಮೂರಂಬ ಹಿಡಿದೆ.
    ಒಂದು ಬಾಣವ ಬಿಡಲಾಗಿ ಪದ್ಮೋದ್ಭವನ ಸೃಷ್ಟಿಯ ಕಟ್ಟಿತ್ತು,
    ಮತ್ತೊಂದು ಬಾಣವ ಬಿಡಲಾಗಿ ಪದ್ಮೋದ್ಭವನ ಹೆಡಗಯ್ಯ ಕಟ್ಟಿತ್ತು.
    ಕಡೆಯ ಬಾಣವು ರುದ್ರನ ಹಣೆಯನೊಡೆದು ಅಲಗು ಮುರಿಯಿತ್ತು.
    ನಾರಿ ಜಾರಿತ್ತು, ನಾರಿಯ ಹೂಳುವ ಹಿಳಿಕು ಹೋಳಾಯಿತ್ತು.
    ಗುಹೇಶ್ವರನ ಶರಣ ಅಲ್ಲಮ ಹಿಡಿದ ಬಿಲ್ಲು ಮುರಿಯಿತ್ತು. /512

  513. ಒಂದು ಪಟ್ಟಣದೊಳಗೆ ಛಪ್ಪನ್ನ ಗೃಹಕ್ಕೆ ಒಂದೆ ಕೀಲಾಗಿ,
    ಆ ಕೀಲಿನ ಸಕೀಲವನಾರಿಗೂ ಕಾಣಬಾರದೆಂದೂ-
    ಭಾವಿಸಿ ಕಂಡರು ಒಂದೆ ಮನದವರು.
    ಉಳಿದವರೆಲ್ಲ ಆ ಕೀಲಿನೊಳಗಾಗಿ ಜೀವ ಜೀರ್ಣವಾಯಿತ್ತು.
    ಹದಿನೆಂಟು ಸ್ಥಾನದ ಕೀಲಗಳ ಸಂಗವನಳಿದು, ಸುಸಂಗವಾಗಿ
    ಶೃಂಗಾರ ಭೃಂಗಾರವಾಗದೆ ಒಂದು ಮುಖದಲ್ಲಿ ನಿಂದು
    ಗುಹೇಶ್ವರಾ-ನಿಮ್ಮ ಶರಣ ಚನ್ನಬಸವಣ್ಣ ಹೊರಗಾದ !/513

  514. ಒಂದು ಮನ;
    ಆ ಮನದಲ್ಲಿ ಲಿಂಗತ್ರಯವನು ಒಂದೆ ಬಾರಿ [ಗೆ] ನೆನೆವ ಪರಿಯೆಂತೊ ?
    ಅರಿದರಿದು ಲಿಂಗಜಾಣಿಕೆ !
    ಮುಂದ ನೆನೆದಡೆ ಹಿಂದಿಲ್ಲ; ಹಿಂದ ನೆನೆದಡೆ ಮುಂದಿಲ್ಲ.
    ಒಂದರೊಳಗೆ ಎರಡೆರಡಿಪ್ಪವೆಂದಡೆ,
    ಅದು ಭಾವಭ್ರಮೆಯಲ್ಲದೆ ಸಹಜವಲ್ಲ.
    ನಿರುಪಾದಿಕಲಿಂಗವನುಪಾದಿಗೆ ತರಬಹುದೆ ?
    ಸ್ವತಂತ್ರಲಿಂಗವ ಪರತಂತ್ರಕ್ಕೆ ತರಬಹುದೆ ?
    ಗುಹೇಶ್ವರಾ-ನಿಮ್ಮ ಬೆಡಗು ಬಿನ್ನಾಣವನರಿದೆನಾಗಿ,
    ಎಂತಿರ್ದುದಂತೆ ಸಂತ ! /514

  515. ಒಂದು ಮುಳ್ಳ ಮೊನೆಯ ಮೇಲೆ ಎಂಬತ್ನಾಲ್ಕು ಲಕ್ಷ ಪಟ್ಟಣವ ಕಟ್ಟಿ,
    ಈ ಎಂಬತ್ನಾಲ್ಕು ಲಕ್ಷ ಪಟ್ಟಣಕ್ಕೆ ತಲೆಯಿಲ್ಲದ ತಳವಾರ,
    ಆ ತಲೆಯಿಲ್ಲದ ತಳವಾರನ ತಂಗಿ ಮಾತಿನಲಿ ಕಡುಜಾಣೆ.
    ಆಕೆ ಸರ್ಪನ ಸಿಂಬೆಯ ಮಾಡಿಕೊಂಡು ತಳವಿಲ್ಲದ ಕೊಡನ ತಕ್ಕೊಂಡು
    ಜಲವಿಲ್ಲದ ಬಾವಿಗೆ ನೀರಿಗೆ ಹೋದಳು.
    ಆ ಜಲವಿಲ್ಲದ ಬಾವಿಯೊಳೊಂದು ಬೇರಿಲ್ಲದ ಸಸಿ ಪುಟ್ಟಿತ್ತು.
    ಆ ಬೇರಿಲ್ಲದ ಸಸಿ ವೃಕ್ಷವಾಗಿರಲಾವೃಕ್ಷವ ಕಾಲಿಲ್ಲದ ಮೃಗ ಏರಿ ಹೋಗುತ್ತಿತ್ತು.
    ಅದ ಕಣ್ಣಿಲ್ಲದ ಕುರುಡ ಕಂಡ.
    ಕೈಯಿಲ್ಲದ ಪುರುಷ ಹೆದೆಯಿಲ್ಲದ ಬಿಲ್ಲ ಪಿಡಿದು,
    ಅಲಗಿಲ್ಲದಂಬಿನಲ್ಲೆಸೆಯಲಾ ಮೃಗವ ತಾಕಲಿಲ್ಲ.
    ಅದರ ಹೊಟ್ಟೆಯೊಳಗಿರ್ದ ಪಿಂಡಕ್ಕೆ ತಾಕಿತ್ತು.
    ಇದ ಕಂಡು ಬೆರಗಾದ ನಮ್ಮ ಗುಹೇಶ್ವರ./515

  516. ಒಂದೆ ಹೂ, ಒಂದೆ ಅಗ್ಘವಣಿ, ಒಂದೆ ಓಗರ,
    ಒಂದೆ ಪ್ರಸಾದ, ಒಂದೆ ಮನ, ಒಂದೆ ಲಿಂಗ.
    ನಂದಾದೀವಿಗೆ, ಕುಂದದ ಬೆಳಗು; ಸ್ವತಂತ್ರ ಪೂಜೆ-ಒಂದೇ.
    ಅನಾಹತವೆರಡಾಗಿ ಬರುಮುಖರಾಗಿ ಕೆಟ್ಟುಹೋದರು ಗುಹೇಶ್ವರಾ./516

  517. ಒಂದೆಂಬೆನೆ ? ಎರಡಾಗಿದೆ; ಎರಡೆಂಬೆನೆ ? ಒಂದಾಗಿದೆ.
    ಒಂದೆರಡೆಂಬ ಸಂದೇಹವಿದೇನೊ ?
    ಅಗಲಲಿಲ್ಲದ ಕೂಟಕ್ಕೆ ಬಿಚ್ಚಿ ಬೇರಾಗದ ಉಪದೇಶ !
    ಗುರು ಶಿಷ್ಯರೆಂಬ ಭಾವಕ್ಕೆ ಭೇದವುಂಟೆ ಗುಹೇಶ್ವರಾ ?/517

  518. ಒಂದೆರಡರ ಮೂರು ನಾಲ್ಕರ ಪರಿವಿಡಿಯ ಭಾವವನರಿಯದೆ
    ಕೆಟ್ಟಿತ್ತು ನೋಡಾ ಲೋಕ, ಕೆಟ್ಟಿತ್ತು ನೋಡಾ ಜಗವು
    ಕೆಟ್ಟಿತ್ತು ನೋಡಾ ಈರೇಳು ಭುವನವೆಲ್ಲವು
    ಇತ್ತ ವಿಸ್ತಾರವಾಯಿತ್ತು, ಸ್ಥಿತಿ ಆಯತವಾಯಿತ್ತು
    ಮಾರಾರಿ ಕಟ್ಟಳೆ ವಿಪರೀತವು ನೋಡಾ
    ನಾದ ಚಕ್ರಂಗಳ, ಬಿಂದು ಚಕ್ರಂಗಳ, ಕಲಾ ಚಕ್ರಂಗಳ
    ನಿಲ್ಲೆಂದು ನಿಲಿಸಿದ ನಿರ್ವಯ ಚೆನ್ನಬಸವಣ್ಣನು
    ಕಾಲಕರ್ಮ ಸ್ಥಿತಿಗುಣವನತಿಗಳೆದು ನಿರ್ಭಾವದಲ್ಲಿ ನಿರ್ವಯ ಚೆನ್ನಬಸವಣ್ಣನು
    ತನ್ನಲ್ಲಿ ತಾನು ಬೆಳಗಾದ ಚೆನ್ನಬಸವಣ್ಣನು
    ಬೆಳಗಪ್ಪ ಬೆಳಗು ಲೀಯವಾಯಿತು ಗುಹೇಶ್ವರಾ
    ಚೆನ್ನಬಸವಣ್ಣನು /518

  519. ಒಂದೆರಡಾದುದ ಬಲ್ಲವರಾರೊ ?
    ಎರಡರೊಳಗಣ ಮೂರ ಬಲ್ಲವರಾರೊ ?
    ಮೂರರ ಮುಖವನರಿದು ಕೂಡಿ ಮಾಡಬಲ್ಲವರಾರೊ ?
    ಗುಹೇಶ್ವರಲಿಂಗದಲ್ಲಿ ಸಂಗನಬಸವಣ್ಣನೊಬ್ಬನೆ./519

  520. ಒಂದೆರಡಾದುದನಾರೂ ಅರಿಯರು:
    ಆ `ಒಂದು’ ಒಂದೆ ಆಯಿತ್ತು, ತ್ರಿತತ್ವವಾಯಿತ್ತು, ವೇದಾತೀತವಾಯಿತ್ತು,
    ಭರಿತವಾಯಿತ್ತು, ಪ್ರಾದೇಶಿಕವಾಯಿತ್ತು, ಭಕ್ತಿಗೆ ಸಾಧ್ಯವಾಯಿತ್ತು.
    ಅದಕ್ಕೆ ಆಧಾರ ದೇಹವಾಯಿತ್ತು.
    ಅದು ಅಷ್ಟವಿಗ್ರಹ ಸ್ವರೂಪವಾಗಿರುತ್ತಿಪ್ಪುದು.
    ಮತ್ತಿರುತಿರ್ದ ಒಂದು ಮಾಯಾಶಕ್ತಿಯಂ ಕೂಡಿ,
    ಗುಣತ್ರಯಂಗಳಂ ಕೂಡಿ, ನಾನಾತ್ಮನೆನಿಸಿಕೊಂಡು-
    ವಿಷಯಾತ್ಮ ಇಂದ್ರಿಯಾತ್ಮ ಭೂತಾತ್ಮ ಜೀವಾತ್ಮ ಪರಮಾತ್ಮನೆನಿಸಿಕೊಂಡು,
    ಪ್ರಾಣಾದಿವಾಯುಗಳಂ ಕೂಡಿಕೊಂಡು ಜಡಪ್ರಕೃತಿಗಳಂ ಹೊತ್ತುಕೊಂಡು
    ಸಂಕಲ್ಪ-ವಿಕಲ್ಪವೆಂಬ ಉಭಯ ಕರ್ಮಂಗಳಂ ಕಲ್ಪಿಸಿ
    ನಾನಾಯೋನಿ ಪ್ರಾಪ್ತವಾಗುತ್ತಿರ್ದು,
    ಲೋಕಾದಿಲೋಕಂಗಳೊಳು ತೊಳಲಿ ಬಳಲಿ
    ತನ್ನ ಮೊದಲ ಕೂಡುವ ಪ್ರಕಾರಮಂ ಬಯಸಿ
    ನಾನಾ ವಿಧದಿಂದ ಅರಸಿ ಹರಿವುತ್ತಿಪ್ಪರು ಅಖಿಳ ಜೀವಿಗಳೆಲ್ಲರು.
    ಇದ ಬೆರಸದೆ; ಬೆರಸಿದ ಸಂಗನಬಸವಣ್ಣನ ನೆನೆನೆನೆದು
    ಶರಣೆಂದು ಶುದ್ಧನಾದೆನು ಕಾಣಾ ಗುಹೇಶ್ವರಾ./520

  521. ಒಂದೆರಡೆಂಬ ಸಂದೇಹಕ್ಕೊಳಗಾದವರೆಲ್ಲರೂ
    ಬಂದರು ನೋಡಾ ನಾನಾ ಭವದಲ್ಲಿ.
    ಕುಂದು ಹೆಚ್ಚಿನ ಹೋರಾಟದಿಂದ ಬಂಧನಕ್ಕೆ ಸಿಕ್ಕಿದರಲ್ಲ !
    ಒಂದೆರಡನೊಳಕೊಂಡು ನಿಂದ ನಿಲವ,
    ಸಂದಿಲ್ಲದೆ ಹೊಂದಿಪ್ಪ ಗುಹೇಶ್ವರ ತನ್ನಲ್ಲಿ./521

  522. ಒಂಬತ್ತು ಒಟ್ಟೆ ನೆರೆದು ಮೂರು ತತ್ತಿಯನಿಕ್ಕತ್ತ ಕಂಡೆ
    ಆನೆ ಆಡಹೋದರೊಂದು ಚಿಕ್ಕಾಡು ನುಂಗಿತ್ತ ಕಂಡೆ
    ನಾರಿಯಾಡಹೋದಲ್ಲಿ ಒಂದು ಚಂದ್ರಮತಿಯ ಕಂಡೆನು
    ಪೃಥ್ವೀ ಮಂಡಲವನೊಂದು ನೊಣ ನುಂಗಿತ್ತು ನೋಡಾ
    ಗುಹೇಶ್ವರನೆಂಬ ಲಿಂಗವ ಕಂಡವರುಳ್ಳರೆ ಹೇಳಿರೆ/522

  523. ಒಕ್ಕು ಮಿಕ್ಕುದ ಕೊಂಬ ನಿಶ್ಚಲಪ್ರಸಾದಿ ನೀ ಕೇಳಾ.
    ಒಕ್ಕುದಾವುದು? ಮಿಕ್ಕುದಾವುದು? ಬಲ್ಲಡೆ ನೀ ಹೇಳಾ.
    ಒಕ್ಕು ಹೋಹುದು ಕಾಯ, ಮಿಕ್ಕು ಹೋಹುದು ಪ್ರಾಣ.
    ಇದು ತಕ್ಕುದೆಂದರಿದು, ಕೊಳಬಲ್ಲಡೆ
    ಸಿಕ್ಕುವನು ನಮ್ಮ ಗುಹೇಶ್ವರನು. /523

  524. ಒಕ್ಕುದು ಪ್ರಸಾದವೆಂಬರು, ಮಿಕ್ಕುದು ಪ್ರಸಾದವೆಂಬರು
    ಒಕ್ಕುದು ಮಿಕ್ಕುದನೆಲ್ಲ ಬೆಕ್ಕು ಕೊಳ್ಳದೆ ?
    ಒಕ್ಕುಮಿಕ್ಕು ಹೋಗುವ ಪಂಚಸಕೀಲವ ಬಲ್ಲಡೆ
    ಗುಹೇಶ್ವರಲಿಂಗದಲ್ಲಿ ಆತನೆ ಪ್ರಸಾದಿ/524

  525. ಒಟ್ಟೆಯ ಮರಿ ಮೂರೊಟ್ಟೆಯನಿಕ್ಕಿತ್ತು.
    ಕಟ್ಟುಗ್ರದಿರುಹೆ ಕತ್ತಲೆಯ ನುಂಗಿತ್ತು.
    ಬೆಟ್ಟವ ಬೆಳ್ಳಕ್ಕಿ ನುಂಗಿತ್ತು.
    ಸುಟ್ಟುದು ಎದ್ದು ಕುಳ್ಳಿದ್ದುದಯ್ಯಾ.
    ಕಟ್ಟಿರ್ದುದು ತೋರದೆ ಗುಹೇಶ್ವರನಲ್ಲಿಯೆ ಅಡಗಿತ್ತು ನೋಡಾ !/525

  526. ಒಡಲಡಗ ಮಚ್ಚಿದಾತನ ಅಚ್ಚಶರಣನೆಂಬೆ.
    ಮಡಿಲಡಗ ಮಚ್ಚಿದಾತನ ಅಚ್ಚಲಿಂಗವಂತನೆಂಬೆ.
    (ಈ ಒಡಲಡಗು ಮಡಿಲಡಗಿನೊಳಗೆ ಒಂದ ಮಚ್ಚದಿದ್ದರೆ ?)
    ಉತ್ಪತ್ತಿ ಪ್ರಳಯ ತಪ್ಪದು.
    ಶ್ರೀಗುರು ಮಹಾಲಿಂಗದಲ್ಲಿ ಒಡಲಡಗ ಮಚ್ಚಿ
    ಅಚ್ಚಭವಿಯಾದ ಶರಣನೊಬ್ಬನೆ-ಗುಹೇಶ್ವರ./526

  527. ಒಡಲಲ್ಲಿ ಹುಟ್ಟಿತ್ತು ಭ್ರಮೆಯಿಂದ ಬೆಳೆಯಿತ್ತು.
    ಒಡನೆ ಹುಟ್ಟಿತ್ತು ತನ್ನನರಿಯದ ಕಾರಣ.
    ಇದು ಒಂದು ಸೋಜಿಗವ ಕಂಡೆ.
    ಕೂಡೆ ಭರಿತವೆಂದರಿಯಲು ಅಂಗದಲಳವಟ್ಟಿತ್ತು ಗುಹೇಶ್ವರಾ./527

  528. ಒಡಲುಗೊಂಡ ಮಾನವರೆಲ್ಲರು ನೀವು ಕೇಳಿರೆ,
    ಬಿಡದೆ ಕಾಡುವುದು ವಿದಿ ಮೂರುಲೋಕವನೆಲ್ಲ.
    ಒಡಲು ಒಡವೆಯನು ಒಲ್ಲೆನೆಂಬವರುಗಳಿಗೆ
    ತೊಡರನಿಕ್ಕಿತ್ತು ಮಾಯೆ.
    ಆರುದರ್ಶನಕ್ಕೆಲ್ಲ ಮಡದಿ ಮಕ್ಕಳನೊಲ್ಲೆನೆಂಬ ಹಿರಿಯರಿಗೆಲ್ಲ
    ತೊಡರನಿಕ್ಕಿತ್ತು ಮಾಯೆ.
    ಮೃಡ ಮೊದಲಾದ ಹರಿ ವಿರಿಂಚಿಗಳನೆಲ್ಲರನು
    ಕೋಡಗದಾಟವ ಆಡಿಸಿತ್ತು,
    ಗುಹೇಶ್ವರಾ ನಿಮ್ಮ ಮಾಯೆ/528

  529. ಒಡಲುವಿಡಿದು ಪಾಷಾಣಕ್ಕೆ ಹಂಗಿಗರಾದಿರಲ್ಲಾ.
    ಅಂಗಸಂಗಿಗಳೆಲ್ಲ ಮಹಾಘನವನರಿಯದೆ ನಿಂದಿರೊ!
    ಹುಸಿಯನೆ ಕೊಯ್ದು ಹುಸಿಯನೆ ಪೂಜಿಸಿ
    ಗಸಣಿಗೊಳಗಾದರು ಗುಹೇಶ್ವರಾ./529

  530. ಒಡಲೊಳಗಿದ್ದು ಒಡಲಿಂಗಾಧಾರವಾಗಿ ಒಡಲ ಸೋಂಕದೆ,
    ಒಡಲ ಬೆಳಗುವ ಪರಿಯ ನೋಡಾ !
    ಬೆಳಗಿಂಗೆ ಬೆಳಗಾಗಿ ಬೆಳಗುವ ಪರಿಯ ನೋಡಾ !
    ಪರಮಚೈತನ್ಯ ನಿರಾಳ ಗುಹೇಶ್ವರಲಿಂಗವ ನೋಡಾ !/530

  531. ಒತ್ತಿ ಹಣ್ಣ ಮಾಡಿದಡೆ ಅದೆತ್ತಣ ರುಚಿಯಪ್ಪುದೊ?
    ಕಾಮಿಸಿ ಕಲ್ಪಿಸಿ ಭಾವಿಸಿದಡೆ ಅದೆ ಭಂಗ.
    ಭಾವಿಸುವ ಭಾವನೆಗಿಂದ ಸಾವು[ದೆ]ಲೇಸು ಕಾಣಾ ಗುಹೇಶ್ವರಾ./531

  532. ಒಲುಮೆಯ ಕೂಟಕ್ಕೆ ಹಾಸಿನ ಹಂಗೇಕೆ ?
    ಬೇಟದ ಮರುಳಗೆ ಲಜ್ಜೆ ಮುನ್ನುಂಟೆ ?
    ನಿಮ್ಮನರಿದ ಶರಣಂಗೆ ಪೂಜೆಯ ಹಂಬಲ, ದಂದುಗವೇಕೆ ?
    ಮಿಸುನಿಯ ಚಿನ್ನಕ್ಕೆ ಒರೆಗಲ್ಲ ಹಂಗೇಕೆ ?
    ಗುಹೇಶ್ವರಲಿಂಗಕ್ಕೆ ಕುರುಹು ಮುನ್ನುಂಟೆ ?/532

  533. ಒಳಗ ತೊಳೆದು ಜಲವ ತುಂಬಲರಿಯದ ಅರೆಮರುಳನೇನಾದ ಹೇಳಿರೆ ?
    ಜಲದ ಸಂಗವ ತೊರೆಯಲರಿಯದೆ ಜಲವ ಬಯಸುವನೆಂತಿರ್ದ ಹೇಳಿರೆ ?
    ನೆಲನ ಶೋದಿಸಿ ನೆಲೆಯನರಿಯದೆ,
    ಕೆರೆಯ ಕಟ್ಟಿಸುವ ಒಡ್ಡ ರಾಮನ ಇರವೆಂತು ಹೇಳಿರೆ ?
    ನಮ್ಮ ಗುಹೇಶ್ವರನ ನಿಲವನರಿಯದ ಮರುಳ
    ಸಿದ್ಧರಾಮನೆಂತಿರ್ದಹ ಹೇಳಿರೆ ?/533

  534. ಒಳಗ ತೊಳೆಯಲರಿಯದೆ ಹೊರಗ ತೊಳೆದು ಕುಡಿವುತ್ತಿರ್ದರಯ್ಯಾ,
    ಪಾದೋದಕ ಪ್ರಸಾದವನರಿಯದೆ.
    ಬಂದ ಬಟ್ಟೆಯಲ್ಲಿ ಮುಳುಗುತ್ತೈದಾರೆ ಗುಹೇಶ್ವರಾ./534

  535. ಒಳಗೆ ನೋಡಿಹೆನೆಂದಡೆ ಒಳಗ ನೋಡಲಿಲ್ಲ.
    ಹೊರಗೆ ನೋಡಿಹೆನೆಂದಡೆ ಹೊರಗ ನೋಡಲಿಲ್ಲ.
    ಜ್ಞಾನವೆಂತುಟೊ? ಅಜ್ಞಾನವೆಂತುಟೊ ?
    ಬಲೆಯ ಬೀಸಿ ಕೊಲುವನ ಮನೆಯಲ್ಲಿ ಸತ್ತಡೆ
    ಏನು ಕಾರಣ ಅಳುವರೊ ಗುಹೇಶ್ವರಾ ?/535

  536. ಒಳಗೆ ನೋಡಿಹೆನೆಂದಡೆ ಒಳಗೆ ನಿರಾಳ.
    ಹೊರಗೆ ನೋಡಿಹೆನೆಂದಡೆ ಹೊರಗೆ ನಿರಾಳ.
    ಹೊಲದಲ್ಲಿ ಆವಿಲ್ಲ ಮನೆಯಲ್ಲಿ ಕರುವಿಲ್ಲ.
    ನೆಲಹಿನ ಮೇಲಣ ಬೆಣ್ಣೆ-ಇದು ದಿಟವೊ?
    ನಾರಿವಾಳದ ಕಾಯೊಳಗಣ ತಿರುಳ
    ಒಡೆಯದೆ ಮೆಲಬಲ್ಲಡೆ ಬೆಡಗು-ಗುಹೇಶ್ವರಾ./536

  537. ಒಳಗೆ ಪ್ರಾಣಲಿಂಗ, ಹೊರಗೆ ಕಾಯಲಿಂಗ
    ಮನಕ್ಕೆ ಮನ ನಾಚದಿದೇನೊ ?
    ಎರಡರ ನಿರಿಗೆಯ ಒಂದೆಂದರಿದಡೆ
    ಅದೇ ಪಥವಯ್ಯಾ ಗುಹೇಶ್ವರಾ./537

  538. ಓಂ’ ಎಂದು ವೇದವನೋದುವ ಮಾದಿಗಂಗೆ ಸಾಧ್ಯವಾಗದು ವಿಭೂತಿ.
    ಪುರಾಣವನೋದುವ ಪುಂಡರಿಗೆ ಸಾಧ್ಯವಗದು ವಿಭೂತಿ
    ಶಾಸ್ತ್ರವನೋದುವ ಸಂತೆಯ ಸೂಳೆಮಕ್ಕಳಿಗೆ ಸಾಧ್ಯವಾಗದು ವಿಭೂತಿ
    ಅಂಗಲಿಂಗಸಂಬಂಧವನರಿದ ಶಿವಜ್ಞಾನಿಗಳಿಗಲ್ಲದೆ ಸಾಧ್ಯವಾಗದು ವಿಭೂತಿ.
    ಅಂಗೈಯೊಳಗೆ ವಿಭೂತಿಯನಿರಿಸಿಕೊಂಡು,
    ಅಗ್ಘಣಿಯ ನೀಡಿ ಗುಣಮರ್ದನೆಯ ಮಾಡಿ
    ಲಿಂಗ ಉಚ್ಛಿಷ್ಟನಂಗೈದು ? ಲಿಂಗ ಸಮರ್ಪಣಂಗೈದು,
    ಷಡಕ್ಷರಿಯ ಸ್ಮರಣೆಯಂಗೈದು
    ಭಾಳದೊಳು ಪಟ್ಟವಂ ಕಟ್ಟಿ, ವಿಭೂತಿಯ ಧಾರಣಂಗೈದು
    ಹಸ್ತವ ಪ್ರಕ್ಷಾಲಿಸುವವ ಗುರುದ್ರೋಹಿ ಲಿಂಗದ್ರೋಹಿ ಜಂಗಮದ್ರೋಹಿ.
    ಶ್ರೀವಿಭೂತಿಯ ಲಲಾಟಕ್ಕೆ ಧರಿಸಿ ಹಸ್ತವ ತೊಳೆವ
    ಪಾತಕರ ಮುಖವ ನೋಡಲಾಗದು.
    ಶ್ರೀವಿಭೂತಿಯನು ಶಿವನೆಂದು ಧರಿಸುವುದು, ಪರಶಿವನು ತಾನೆಂದು ಧರಿಸುವುದು.
    ಸಾಕ್ಷಿ:ಕೃತ್ವೇವ ಜಲಮಿಶ್ರಂತು ಸಮುಧೃತ್ಯಷಡಕ್ಷರಿ
    ಧಾರಯೇತ್ ತ್ರಿಪುಂಡ್ರಂತು ಮಂತ್ರೇಣ ಮಂತ್ರಿತಂ”
    ಶ್ರೀವಿಭೂತಿಯ ಧರಿಸಿ ಹಸ್ತವ ತೊಳದಾತಂಗೆ
    ದೇವಲೋಕ ಮತ್ರ್ಯಲೋಕಕ್ಕೆ ಸಲ್ಲದೆಂದುದಾಗಿ
    ನಿಮ್ಮಾಣೆ ನಿಮ್ಮ ಪ್ರಮಥರಾಣೆ,
    ನಮ್ಮ ಗುಹೇಶ್ವರಲಿಂಗವು ತಾನಾದ ವಿಭೂತಿ ಕಾಣಾ ಸಂಗನಬಸವಣ್ಣ. /538

  539. ಓಂ ನಮಃ ಶಿವಾಯ’ ಎಂಬ ದೇವನಿರಲು
    ಒಡಲುವಿಡಿದು ಪಾಷಾಣಕ್ಕೆ ಹಂಗಿಗರಾದಿರೆ.
    ಶರೀರ, ಶರೀರ ರೂಹಿಸಿದ ರೂಹಿಂಗೆ ಮಾಯದ ಬಲೆಯಲ್ಲಿ ಸಿಲುಕಿ
    ಅಂಗಸಂಗಿಗಳೆಲ್ಲರು ಮಹಾಘನವನರಿಯದೆ ಹೋದಿರೆ.
    ಹುಸಿಯನೆ ಕೊಯ್ದು ಹುಸಿಯನೆ ಪೂಜಿಸೆ-
    ನೇಮದೊಳಗಿದು ಸಲ್ಲದು,
    ಗುಹೇಶ್ವರಾ, ನಿಮ್ಮ ಶರಣರ ಸಂಬಂಧ
    ತೋರದು ತೋರದು ಬಹುಮುಖಿಗಳಿಗೆ !/539

  540. ಓಂ ನಮಃ ಶಿವಾಯಯೆಂಬುದನರಿಯದೆ
    ಜಗವೆಲ್ಲವು ನಾಯಾ[ಯಿತ್ತು]
    ತಮ್ಮ ತಾವರಿಯದವರಿಗೆ, ಇನ್ನು ಹೇಳಿ ಕೇಳಿದಂತೆ ಆಚರಿಸದಿರ್ದಡೆ
    ಆ ನಾಯ ಸಾವು ತಪ್ಪದು.
    ಇನ್ನೆತ್ತಣ ಮುಕ್ತಿ ? ಅವರಿಗೆ ಭೋದಿಸಿದ್ದಾನಗದುಫ
    ಕಾಣಾ ಗುಹೇಶ್ವರಾ./540

  541. ಓಟೆ ಇದ್ದಂತೆ ಕಾಯಿ ಮೆದ್ದವರುಂಟೆ ?
    ಕಾಯದ ಗುಣವಿದ್ದಂತೆ ಲಿಂಗವನರಿದವರುಂಟೆ ?
    ಜೋಡು ಹರಿದಲ್ಲದೆ ಕಾಯವನಿರಿಯಲರಿಯದು ಕೈದು.
    ಆ ಭಾವವ ತಿಳಿದಲ್ಲದೆ ನಮ್ಮ ಗುಹೇಶ್ವರಲಿಂಗವನರಿಯಬಾರದು
    ಕಾಣಾ, ಎಲೆ ಅಂಬಿಗರ ಚಾಡಯ್ಯ./541

  542. ಓಡಿನಲುಂಟೆ ಕನ್ನಡಿಯ ನೋಟ?
    ಮರುಳಿನ ಕೂಟ ವಿಪರೀತಚರಿತ್ರ.
    ನೋಟದ ಸುಖ ತಾಗಿ ಕೋಟಲೆಗೊಂಡೆನು.
    ಗುಹೇಶ್ವರನೆಂಬ ಲಿಂಗವು ಒಬ್ಬನೆ ಅಚಲ.
    ಉಳಿದವರೆಲ್ಲರೂ ಸೂತಕಿಗಳು./542

  543. ಓಡಿನಲೂಟ ಕಾಡಿನಲಾಟ-ವಿಪರೀತ ಚರಿತ್ರ !
    ಮರುಳಿನ ಕೂಟ !
    ಕೋವಿದ ಕೋವಿದ ಅವಿದ ಅವಿದ ಲಿಂಗ
    ಗುಹೇಶ್ವರನೆಂಬಾತನೊಬ್ಬನೆ ಹೊರಗು,
    ಉಳಿದವರೆಲ್ಲರೂ ಸೂತಕರಯ್ಯಾ./543

  544. ಓದಿ ಓದಿ ವೇದ ವಾದಕ್ಕಿಕ್ಕಿತ್ತು.
    ಕೇಳೀ ಕೇಳಿ ಶಾಸ್ತ್ರ ಸಂದೇಹಕ್ಕಿಕ್ಕಿತ್ತು.
    ಅರಿದೆ ಅರಿದೆನೆಂದು ಆಗಮ ಅಗಲಕ್ಕೆ ಹರಿಯಿತ್ತು.
    ನೀನೆತ್ತ ನಾನೆತ್ತಲೆಂದು-
    ಬೊಮ್ಮ ಬಕ್ಕಟ ಬಯಲು ಗುಹೇಶ್ವರಾ/544

  545. ಓಹೋ ನಮಃ ಶಿವಾಯ,-
    ಮಹದಾಕಾಶದ ಮರೆಯಲ್ಲಿರ್ದ ಶಾಂತ್ಯರ್ಕನ ನಿಲವೊ !
    ದಶಮರುತನ ಹೊಯಿಲಿಲ್ಲದೆ,
    ತಾನೆ ಲಿಂಗದ ಜ್ಞಾನಜ್ಯೋತಿಯ ನಿಲವೊ !
    ತನ್ನಿಂದ ತಾನಾಗಿ ಮುಕ್ತಿಯೆ ಕರಿಗೊಂಡ
    ಮುಕ್ತಿಯ ಮುತ್ತಿನ ಧವಳಕಾಂತಿಯ ನಿಲವೊ !
    ರುದ್ರಾಕ್ಷಿಯ ಹಂಗು ಬೇಡವೆಂದು
    ಹೊದ್ದ ಚರ್ಮದ ಹೊದಿಕೆಯಂ ತೆಗೆದ
    ಗಿಟಿ ಗಿಟಿ ಜಂತ್ರದ ನಿಲವೊ !
    ಅಲ್ಲ, ತನ್ನ ನಿಲವನರಿಯದೆ ವಾದಿಸುತ್ತಿರಲು
    ಉರಿಲಿಂಗೋದ್ಭವವಾದ ಉರಿಲಿಂಗದ ನಿಲವೋ !
    ಆವ ನಿಲವೆಂದರಿಯಬಾರದು !
    ಗುಹೇಶ್ವರನ ಕಂಗಳಿಗೆ ಒಂದಾಶ್ಚರ್ಯ ತೋರಿತ್ತು
    ಕಾಣಾ ಸಂಗನಬಸವಣ್ಣಾ !/545

  546. ಕಂಕಳ ತೂಕ (ನೋಟ ?)ಲಿಂಗಕ್ಕೆ ಭಾರ.
    ಅಂಗಜೀವಿಗಳ ಕೂಡೆ ನುಡಿವನೆ ಶರಣನು ?
    ನಡೆನುಡಿ ಮುಗ್ಧ, ಗುಹೇಶ್ವರಾ ನಿಮ್ಮ ಶರಣ./546

  547. ಕಂಕುಳೆಂಬುದು ಕವುಚಿನ ತವರುಮನೆ.
    ಕರಸ್ಥಲವೆಂಬುದು [ಕೈ] ಕೆಟ್ಟ ಹುಣ್ಣು.
    ಅಮಳೋಕ್ಯವೆಂಬುದು ಬಾಯ ಭಗಂದರ (ಬಗದಳ ?).
    ಅಂಗಸೋಂಕೆಂಬುದು ಪಾಪದ ತವರುಮನೆ.
    ಉತ್ತಮಾಂಗವೆಂಬುದು ನೆತ್ತಿಯ ಮೃತ್ಯು.
    ಕಂಠವೆಂಬುದು ಗಂಟಲ ಗಾಣ.
    ಮತ್ತೆ, ಗುಹೇಶ್ವರನ ಮಾತು ನಿಮಗೇಕೆಲವೊ ?/547

  548. ಕಂಗಳ ಕರುಳ ಕೊಯ್ದವರ, ಮನದ ತಿರುಳ ಹುರಿದವರ,
    ಮಾತಿನ ಮೊದಲ ಬಲ್ಲವರ; ಎನಗೊಮ್ಮೆ ತೋರಾ ಗುಹೇಶ್ವರಾ/548

  549. ಕಂಗಳ ಬೆಳಗ ಕಲ್ಪಿಸಬಾರದು, ಕರ್ಣದ ನಾದವ ವರ್ಣಿಸಬಾರದು.
    ಜಿಹ್ವೆಯ ರುಚಿಗೆ ಪ್ರತಿಯಿಲ್ಲವೆಂದಿತ್ತು.
    ಮತಿಗೆ ಮಹಾಘನವಪ್ಪ ಸುಷುಮ್ನನಾಳದ ಸುಯಿಧಾನವ,
    ಪ್ರಮಾಣಿಸಬಾರದು,
    ಅಣು ರೇಣು ತೃಣ ಕಾಷ್ಠದೊಳಗೆ ಭರಿತ ಮನೋಹರ,
    ನಿಂದ ನಿರಾಳ- ಗುಹೇಶ್ವರಾ./549

  550. ಕಂಗಳ ಮುಂದಣ ಗೊತ್ತನರಿದು,
    ಕಾಮ್ಯದ ಮುಂದಣ ಚಿತ್ತವ ಹರಿದು,
    ಮಾಡಿಹೆನೆಂಬ ಮಾಟಕೂಟದ ಚಿತ್ತ ನಿಂದಲ್ಲದೆ ಸ್ವಸ್ಥವಿಲ್ಲ.
    ಹಾಂಗಲ್ಲದೆ ಗುಹೇಶ್ವರಲಿಂಗವ ಕಾಣಬಾರದು-
    ಆಯ್ದಕ್ಕಿಯ ಮಾರಯ್ಯಾ./550

  551. ಕಂಗಳ ಮುಂದೆ ಕತ್ತಲೆ ಇದೇನೊ?
    ಮನದ ಮುಂದಣ ಮರಣ (ಮರವೆ ?) ಇದೇನೊ?
    ಒಳಗಣ ರಣರಂಗ ಹೊರಗಣ ಶೃಂಗಾರ !
    ಬಳಕೆಗೆ ಬಂದ ಬಟ್ಟೆ ಇದೇನೊ ಗುಹೇಶ್ವರಾ ?/551

  552. ಕಂಗಳ ಸೂತಕ ಕಾಮಿಸಲಾಗಿ ಹರಿಯಿತ್ತು.
    ಮನದ ಸೂತಕ ಮುಟ್ಟಲಾಗಿ ಬಿಟ್ಟಿತ್ತು.
    ನಾನೆಂಬ ಭಾವ ಗುಹೇಶ್ವರಲಿಂಗದಲ್ಲಿ ಐಕ್ಯವಾಯಿತ್ತು !/552

  553. ಕಂಗಳಲ್ಲಿ ಜ್ಯೋತಿರ್ಲಿಂಗ, ಕೈಯಲ್ಲಿ ಉಭಯ ಪ್ರತಿಷ್ಠೆಯ ಲಿಂಗ,
    ಬ್ರಹ್ಮರಂಧ್ರದಲ್ಲಿ ಅಮೃತಲಿಂಗ ಉಂಟೆಂಬ
    ತ್ರಿವಿಧ ಸಂದನಳಿಯಬೇಕು; ಸಿದ್ಧರಾಮಯ್ಯಾ,
    ಗುಹೇಶ್ವರಲಿಂಗವನರಿಯಬೇಕು/553

  554. ಕಂಗಳಲ್ಲಿ ನಟ್ಟಗಾಯವನಾರಿಗೆ ತೋರಬಹುದಯ್ಯಾ?
    ಮನ ಸೋಂಕಿದ ಸುಖವ ಮೊಟ್ಟೆಯ ಕಟ್ಟಬಹುದೆ?
    ಆತ ನಿಂದ ನಿಲವಾತಂಗೆ ಸಾಧ್ಯವಾಯಿತ್ತು.
    ಆತ ನಿಂದ ನಿಲವನೇನೆಂಬೆ ಗುಹೇಶ್ವರಾ./554

  555. ಕಂಗಳಾಲಿಯ ಕರಿಯ ನಾಳದಲ್ಲಿ, ಈರೇಳು ಭುವನಂಗಳಡಗಿದವು!
    ನಾಟಕ ನಾಟಕವ ರಚಿಸುತ್ತ, ಆಡಿಸುವ ಸೂತ್ರದ ಪರಿ,
    ಗುಹೇಶ್ವರಲಿಂಗ ನಿರಾಳಚೈತನ್ಯ./555

  556. ಕಂಗಳೇಕೆ `ನೋಡಬೇಡಾ’ ಎಂದರೆ ಮಾಣವು ?
    ಶ್ರೋತ್ರಂಗಳೇಕೆ `ಆಲಿಸಬೇಡಾ’ ಎಂದರೆ ಮಾಣವು ?
    ಜಿಹ್ವೆ ಏಕೆ `ರುಚಿಸಬೇಡಾ’ ಎಂದರೆ ಮಾಣವು (ದು ?)
    ನಾಸಿಕವೇಕೆ `ವಾಸಿಸಬೇಡಾ’ ಎಂದರೆ ಮಾಣವು ? (ದು ?)
    ತ್ವಕ್ಕು ಏಕೆ `ಸೋಂಕಬೇಡಾ’ ಎಂದರೆ ಮಾಣವು ? (ದು ?)-
    ಈ ಭೇದವನರಿದು ನುಡಿಯಲು ಸಮಧಾತುವಾಯಿತ್ತು!
    ಗುಹೇಶ್ವರಲಿಂಗಕ್ಕೆ ಒಲಿದ ಕಾರಣ, ಅಬಿಮಾನ ಲಜ್ಜೆ ಬೇಸತ್ತು ಹೋಯಿತ್ತು./556

  557. ಕಂಗಳೊಳಗಣ ಕಟ್ಟಿಗೆಯ ಮುರಿಯದ,
    ಕೈಯೊಳಗಣ ಕಪ್ಪರವನೊಡೆಯದ,
    ತನ್ನೊಳಗಿಪ್ಪ ನಿಕ್ಷೇಪವ ಭೇದಿಸಿ ಕಾಣಲರಿಯದ ಬಿನುಗರೆಲ್ಲ,
    ಹಲುಗಿರಿವುತ್ತಿಹರು ಕಾಣಾ ಗುಹೇಶ್ವರಾ/557

  558. ಕಂಡುದ ಹಿಡಿಯಲೊಲ್ಲದೆ ಕಾಣದುದನರಸಿ ಹಿಡಿದಿಹೆನೆಂದಡೆ,
    ಸಿಕ್ಕದೆಂಬ ಬಳಲಿಕೆಯ ನೋಡಾ.
    ಕಂಡುದನೆ ಕಂಡು ಗುರುಪಾದವಿಡಿದಲ್ಲಿ,
    ಕಾಣಬಾರದುದ ಕಾಣಬಹುದು ಗುಹೇಶ್ವರಾ./558

  559. ಕಂಡುದೆಲ್ಲ ಪಾವನ ಕೇಳಿತ್ತೆಲ್ಲ ಪರಮಬೋಧೆ,
    ಮುಟ್ಟಿತ್ತೆಲ್ಲ ಪರುಷದ ಸೋಂಕು
    ಒಡನೆ ನುಡಿದವರೆಲ್ಲ ಸದ್ಯೋನ್ಮುಕ್ತರು.
    ಸುಳಿದ ಸುಳುಹೆಲ್ಲ ಜಗತ್ಪಾವನ, ಮೆಟ್ಟಿದ ಧರೆಯೆಲ್ಲ ಅವಿಮುಕ್ತಕ್ಷೇತ್ರ,
    ಸೋಂಕಿದ ಜಲವೆಲ್ಲ ಪುಣ್ಯತೀರ್ಥಂಗಳು.
    ಶರಣೆಂದು ಭಕ್ತಿಯ ಮಾಡಿದವರೆಲ್ಲರು ಸಾಯುಜ್ಯರು.
    ಗುಹೇಶ್ವರಾ ನಿಮ್ಮ ಸುಳುಹಿನ ಸೊಗಸನುಪಮಿಸಬಾರದು./559

  560. ಕಂಡೆನಲ್ಲಾ ಕರುಳಿಲ್ಲದ ಕಲಿಯ !
    ಕಂಡೆನಲ್ಲಾ ಯೌವನವಿಲ್ಲದ ನೇಹವ !
    ಕಂಡೆನಲ್ಲಾ ಕೈದುವಿಲ್ಲದ ಕಲಿತನವ !
    ಕಂಡೆನಲ್ಲಾ ಕುಸುಮವಿಲ್ಲದ ಗಂಧವ !
    ಕಂಡೆನಲ್ಲಾ ಗುಹೇಶ್ವರಲಿಂಗದಲ್ಲಿ
    ಮರುಳಶಂಕರನೆಂಬ ನಾಮವ !/560

  561. ಕಂಡೆನೆಂಬುದು ಕಂಗಳ ಮರವೆ,
    ಕಾಣೆನೆಂಬುದು ಮನದ ಮರವೆ,
    ಕೂಡಿದೆನೆಂಬುದು ಅರುಹಿನ ಮರವೆ,
    ಅಗಲಿದೆನೆಂಬುದು ಮರಹಿನ ಮರವೆ.
    ಇಂತು-ಕಂಡೆ ಕಾಣೆ ಕೂಡಿದೆ ಅಗಲಿದೆ ಎಂಬ,
    ಭ್ರಾಂತಿಸೂತಕವಳಿದು ನೋಡಲು
    ಗುಹೇಶ್ವರಲಿಂಗವನಗಲಲೆಡೆಯಿಲ್ಲ ಕೇಳಾ, ಎಲೆ ತಾಯೆ/561

  562. ಕಂಡೆಯಾ ಬಸವಣ್ಣಾ,
    ಕಣ್ಣಿನೊಳಗಣ ಬೊಂಬೆಯ ಸೂತ್ರದ ಇರವಿನಂತೆ,
    ಕುಂದಣದೊಳಗಡೆಗೆ ತೋರುವ ಮೃದು ಛಾಯದಂತೆ,
    ನವನೀತದೊಳಗಡಗಿದ ಸಾರದ ಸವಿಯಂತೆ
    ಅಂಗವಿಲ್ಲದ ಕುರುಹು, ಭಾವವಿಲ್ಲದ ಬಯಲು,
    ಬೆಳಗನರಿಯದ ಜ್ಯೋತಿಯ ಕಂಡೆಯಾ ಸಂಗನಬಸವಣ್ಣಾ,
    ಗುಹೇಶ್ವರಲಿಂಗದಲ್ಲಿ ಮರುಳು ಶಂಕರದೇವರ ?/562

  563. ಕಂಬವೊಂದೆ, ದೇಗುಲವೊಂದೆ, ದೇವರೊಂದೆ
    ಗುಹೇಶ್ವರ ನಿಮ್ಮ ಮನ್ನಣೆಯ ಶರಣರ ದೇವರೆಂಬೆನು./563

  564. ಕಕ್ಷೆ ಕರಸ್ಥಲ ಕಂಠ ಉತ್ತಮಾಂಗ ಮುಖಸೆಜ್ಜೆ ಅಂಗಂಸೋಂಕೆಂಬದು;
    ಷಡುಸ್ಥಲದರುಶನಾದಿಗಳಿಗೆ, ಬಹಿರಂಗದಲ್ಲಿ ವೇಷಲಾಂಛನವಯ್ಯಾ.
    ಅಂತರಂಗದಲ್ಲಿ ನಾಲ್ಕು ಸ್ಥಲ;
    ಬ್ರಹ್ಮರಂಧ್ರ ಭ್ರೂಮಧ್ಯ ನಾಶಿಕಾಗ್ರ ಚೌಕಮಧ್ಯ,
    -ಇಂತೀ ಸ್ಥಾನಂಗಳನರಿಯರಾಗಿ!
    ಬ್ರಹ್ಮರಂಧ್ರದಲ್ಲಿ ಲಿಂಗಸ್ವಾಯತ, ಭ್ರೂಮಧ್ಯದಲ್ಲಿ ಜಂಗಮಸ್ವಾಯತ,
    ನಾಶಿಕಾಗ್ರದಲ್ಲಿ ಪ್ರಸಾದಸ್ವಾಯತ, ಚೌಕಮಧ್ಯದಲ್ಲಿ ಅನುಭಾವಸ್ವಾಯತ,
    ಅಷ್ಟದಳಕಮಲದಲ್ಲಿ ಸರ್ವಸ್ವಾಯತ.-
    ಇದು ಕಾರಣ ಗುಹೇಶ್ವರಾ ನಿಮ್ಮಶರಣರು ಸದಾ ಸನ್ನಹಿತರು./564

  565. ಕಕ್ಷೆಯಲ್ಲಿ ಲಿಂಗವ ಧರಿಸಿಕೊಂಡಾತನು ಬ್ರಹ್ಮನು.
    ಕರಸ್ಥಲದಲ್ಲಿ ಲಿಂಗವ ಧರಿಸಿಕೊಂಡಾತನು ವಿಷ್ಣುವು.
    ಉತ್ತಮಾಂಗದಲ್ಲಿ ಲಿಂಗವ ಧರಿಸಿಕೊಂಡಾತನು ರುದ್ರನು.
    ಅಮಳೋಕ್ಯದಲ್ಲಿ ಲಿಂಗವ ಧರಿಸಿಕೊಂಡಾತನು ಈಶ್ವರನು.
    ಮುಖಸೆಜ್ಜೆಯಲ್ಲಿ ಲಿಂಗವ ಧರಿಸಿಕೊಂಡಾತನು ಸದಾಶಿವನು.
    ಅಂಗಸೆಜ್ಜೆಯಲ್ಲಿ ಲಿಂಗವ ಧರಿಸಿಕೊಂಡಾತನು ಉಪಮಾತೀತನು-
    ಇವರೆಲ್ಲರೂ ಬಯಲನೆ ಪೂಜಿಸಿ ಬಯಲಾಗಿ ಹೋದರು.
    ನಾನು ನಿತ್ಯವ ಪೂಜಿಸಿ ಮಿಥ್ಯವಳಿದ ಇರವಿನಲ್ಲಿ
    ಸುಖಿಯಾದೆನು ಗುಹೇಶ್ವರಾ./565

  566. ಕಟ್ಟಿದಾತ ಭಕ್ತನಪ್ಪನೆ ? ಕೆಡಹಿದಾತ ದ್ರೋಹಿಯಪ್ಪನೆ ?
    ಲಿಂಗವ ಕಟ್ಟಲಿಕ್ಕೆ ತನ್ನ ಕೈಯೊಳಗಿಪ್ಪುದೆ ?
    ಕೆಡಹಲಿಕ್ಕೆ ಬೀಳಬಲ್ಲುದೆ ?
    ಆ ಲಿಂಗವು ಬಿದ್ದ ಬಳಿಕ ಜಗವು ತಾಳಬಲ್ಲುದೆ ?
    ಪ್ರಾಣಲಿಂಗ ಬಿದ್ದ ಬಳಿಕ ಆ ಪ್ರಾಣ ಉಳಿಯಬಲ್ಲುದೆ ?
    ಲಿಂಗ ಬಿದ್ದಿತ್ತೆಂಬುದು ಸೂತಕದ ಶಬ್ದ, ಭ್ರಾಂತುವಿನ ಪುಂಜ.
    ಅಂತು ಅದ ಕೇಳಲಾಗದು.
    ಯುಗಜುಗಂಗಳು ಗತವಹವಲ್ಲದೆ ಲಿಂಗಕ್ಕೆ ಗತವುಂಟೆ ?
    ಲಿಂಗವು ಬಿದ್ದಿತ್ತೆಂದು ನಿಂದಿಸಿ ನುಡಿವ
    ದ್ರೋಹಿಯ ಮಾತ ಕೇಳಲಾಗದು ಕಾಣಾ ಗುಹೇಶ್ವರಾ./566

  567. ಕಡಲ ನುಂಗಿದ ಕಪ್ಪಿನ ಪರಿಭವ ನವಸಾಸಿರ !
    ಸಿಡಿಲು ಹೊಯ್ದ ಬಯಲಿಂಗೆ ಬಣ್ಣವುಂಟೆ ?
    ಕಂಗಳ ಮುಂದಣ ಕನಸು ಹಿಂಗಿದ ತುಂಬಿಯ ಪರಿಮಳ !
    ಅಂಗವಿಲ್ಲದ ರೂಹಿಂಗೆ ಸಂಗವುಂಟೆ ?-ಇದೇನೋ !
    ಗಗನದ ಹಣ್ಣನೆ ಕೊಯ್ದು, ಮುಗುದೆ ರುಚಿಯನರಿಯಳು !
    ಹಗರಣದಮ್ಮಾವಿನ ಹಯನು ಸಯವಪ್ಪುದೆ ಗುಹೇಶ್ವರಾ ?/567

  568. ಕಡಲ ಮೇಲಣ ಕಲ್ಲು, ಸಿಡಿಲು ಹೊಯ್ದ ಬಾವಿ !
    ತಡದ ರಕ್ಕಸಿಯ ಮಗಳು ಅಡವಿಯಲ್ಲಿ ಮಡಿದಳು.
    ತೊಡೆಯಬಾರದ ಲಿಪಿಯ ಬರೆಯಬಾರದು ನೋಡಾ !
    ನಡುನೀರ ಜ್ಯೋತಿಯ ವಾಯುವ ಕೊನೆಯಲ್ಲಿ ನೋಡಾ !
    ಮೊದಲಿಲ್ಲದ ನಿಜ, ಕಡೆಯಿಲ್ಲದ ನಡು-
    ಏನೂ ಇಲ್ಲದ ಊರೊಳಗೆ ಹಿಡಿದಡೆ
    ನುಂಗಿತ್ತು ನೋಡಾ ಹೆಮ್ಮಾರಿ ಗುಹೇಶ್ವರಾ./568

  569. ಕಡುಜಲಕ್ಕೆ (ಹರಿವ ಜಲಕ್ಕೆ ?) ಇದಿರಾಗಿ ಹರಿವ ಸ್ವಾಮಿಯ ಬರವ ಕಂಡು,
    ಬಿಡದೆ ಬೆಂಬತ್ತಿಸುವ ಪರಿಯ ನೋಡಾ.
    ನಡೆ ನುಡಿ ಚೈತನ್ಯ ಒಡಲನೊಂದನು ಮಾಡಿ
    ಬಿಡದೆ ವೇದಿಸುವ ಬೆಡಗ ಕಂಡೆನಯ್ಯಾ !
    ಕಡೆಗೆ ಸೂಸದ ದೃಷ್ಟಿ, ಹಿಡಿದು ತೊಲಗದ ಹಸ್ತ,
    ಬೇಡ ಬೇಡ ತನಗೆನ್ನದ ಸಜ್ಜನ ಮಡದಿ,
    ತನ್ನ ಗಂಡನ ಅಡಗಿ ಕೂಡುವ ಭೇದ !-
    ನಡುವಿರುಳು ಕೂಡಿ ನಿಮಿರೆ ಬೆಳಗಾಯಿತ್ತು.
    ಮಾಡಿ ನೀಡುವನ ಕಂಡು ನಾಡು ಬೀಡೆಲ್ಲ ನೆರೆದು
    ಕೊಡ ಕೈಯಲ್ಲಿ ಕೊಟ್ಟಡೆ ತೃಪ್ತರಾಗಿ,
    ಮಾಡುವರು ಹರಸುವರು ನೋಡುವರು ಮನದಣಿಯೆ
    ಕೊಡುವರು ಕೋಟಿ, ಸಹಜ ಒಂದೆ ಎಂದು !
    ಜೋಡ ತೊಡದಾತನ ಮೈಯಲ್ಲಿ, ಕೂಡೆ ಘಾಯವಿಲ್ಲದುದ ಕಂಡು,
    ನೋಡಿರೆ ಮಸೆ ಮುಟ್ಟದ ಮಹಾಂತನ !
    ಬೇಡುವೆನು ಕರುಣವನು, ಪಾದ [ವ]ನೊಸಲಲ್ಲಿ ಸೂಡುವೆನು
    ಗುಹೇಶ್ವರನ ಶರಣ ಬಸವಣ್ಣಂಗೆ ನಮೋ ನಮೋ ಎಂಬೆನು./569

  570. ಕಡೆನಾಡಲಿಂಗವ ನಡುನಾಡಿಗೆ ತಂದೆನೆಂಬ ಅಹಂಕಾರವ
    ಮುಂದುಗೊಂಡಿದ್ದೆಯಲ್ಲಾ
    ಎಂಬತ್ತುನಾಲ್ಕುಲಕ್ಷ ಶಿವಾಲಯವೆಂಬ ಬಯಲಭ್ರಮೆ
    ಇದೆಲ್ಲಿಯದು ಹೇಳಾ ?
    ಮಹಾಘನಲಿಂಗಕ್ಕೆ ಜಗದ ಜೀವರಾಶಿಗಳು
    ಶಿವಾಲಯವಾಗಬಲ್ಲವೆ ?
    ನಿನ್ನ ಲಕ್ಷದ ಮೇಲೆ ತೊಂಬತ್ತಾರುಸಾವಿರ ಲಿಂಗವ
    ನಿನ್ನ ಎದೆಯಲ್ಲಿ ಇರಿದುಕೊಳ್ಳಾ.
    ಗುಹೇಶ್ವರಲಿಂಗವು ನಿನ್ನ ತಪ್ಪಿಸಿ ಹೋದುದ
    ಮರೆದೆಯಲ್ಲಾ ಮರುಳ ಸಿದ್ಧರಾಮಯ್ಯಾ/570

  571. ಕಡೆಯಿಲ್ಲದ ದೇಶವ ತಿರುಗಿದೆನು,
    ಹವಣಿಲ್ಲದ ಕಂಥೆಯ ತೊಟ್ಟೆನು,
    ಹಸಿವಿಲ್ಲದ ಕಪ್ಪರವ ಹಿಡಿದು ಭಕ್ತಿಬಿಕ್ಷವ ಬೇಡ ಬಂದೆನು.
    ಗುಹೇಶ್ವರ ಹಸಿದನು, ಉಣಲಿಕ್ಕು ಏಳಾ ಸಂಗನಬಸವಣ್ಣಾ./571

  572. ಕಣ್ಗೆ ಕಾಬಡೆ ರೂಪಲ್ಲ, ಕೈಗೆ ಸಿಲುಕವಡೆ ದೇಹಿಯಲ್ಲ.
    ನಡೆವಡೆ ಗಮನಿಯಲ್ಲ, ನುಡಿವಡೆ ವಾಚಾಳನಲ್ಲ.
    ನಿಂದಿಸಿದಡೆ ಹಗೆಯಲ್ಲ, ಹೊಗಳಿದವರಿಗೆ ಕೆಳೆಯಲ್ಲ.
    ಗುಹೇಶ್ವರನ ನಿಲುವು ಮಾತಿನ ಮಾಲೆಗೆ ಸಿಲುಕುವುದೆ ?
    ಸಿದ್ಧರಾಮಯ್ಯ ನೀನು ಮರುಳಾದೆಯಲ್ಲಾ /572

  573. ಕಣ್ಣ ಮುಂದಿರ್ದವನ ಕಾಣದೆ ಹೋದೆನು.
    ನೋಡೂದ ನೋಡಲರಿಯದೆ ಕೆಟ್ಟಿತ್ತು ಲೋಕವೆಲ್ಲಾ.
    ನೋಡೂದ ನೋಡಬಲ್ಲಡೆ ಕೂಡಲಿಲ್ಲ ಅಗಲಲಿಲ್ಲ.
    ನೋಡದ ಕೂಡದ ಅಗಲದ ಸುಖವನು
    ಗುಹೇಶ್ವರಾ ನಿಮ್ಮ ಶರಣ ಬಲ್ಲನು. /573

  574. ಕಣ್ಣಿಂಗೆ ಕಣ್ಣು, ಕಣ್ಣೊಳು ಕಣ್ಣು, ಕಣ್ಣೇ ನೇತ್ರ,
    ನೇತ್ರವೆ ಸೂತ್ರ, ಸೂತ್ರವೆ ಲಿಂಗ, ಲಿಂಗವೆ ಗುಹ್ಯ.
    ಗುಹ್ಯಕ್ಕೆ ಗುಹ್ಯ, ಗೋಪ್ಯಕ್ಕೆ ಗೋಪ್ಯ, ರಹಸ್ಯಕ್ಕೆ ರಹಸ್ಯ.
    ಈ ನೇತ್ರಮಹಿಮೆಯ ಗುಹೇಶ್ವರ ಬಲ್ಲನಲ್ಲದೆ
    ಕಣ್ಣುಗೆಟ್ಟಣ್ಣಗಳೆತ್ತ ಬಲ್ಲರು ನೋಡಯ್ಯ./574

  575. ಕಣ್ಣಿನೊಳಗಣ ಕಸ, ಕಾಲೊಳಗಣ ಮುಳ್ಳು,
    ಮನದೊಳಗಣ ಶಂಕೆ ಹರಿಯಿತ್ತು,
    ಗುಹೇಶ್ವರನೆಂಬ ಭಾವ ನಿರಾಳವಾದಲ್ಲಿ !/575

  576. ಕಣ್ಣು ಕಂಡಲ್ಲದೆ ಮನ ನೆನೆಯದು.
    ಆ ಮನ ನೆನೆದಲ್ಲಿಗೆ ಕಾಲು ನಡೆವುದು.
    ಕಾಲು ನಡೆದಲ್ಲದೆ ಕಾರ್ಯವಾಗದು.
    ಕಾಲೆಂದಡೆ ನೀ ಚರಿಸುವ ವರ್ತನೆ.
    ಆ ವರ್ತನಾಚಾರವೆಲ್ಲವು ಲಿಂಗವು.
    ಇದು ಕಾರಣ-ಲಿಂಗವ ಹಿಂಗಿದ ಮಾಟ
    ಮೀಸಲಿಲ್ಲದ ಮನೆದೇವರ ಹಬ್ಬದಂತೆ !
    ನಮ್ಮ ಗುಹೇಶ್ವರಲಿಂಗಕ್ಕೆ,
    ಇದೇ ಬೇಹ ಶೌಚ ಕೇಳಾ ಚಂದಯ್ಯಾ. /576

  577. ಕಣ್ಣೆ ಕಟ್ಟಿಗೆಯಾಗಿ, ಕೈಯೆ ಕರ್ಪರವಾಗಿ ,
    ಕಿವಿಯೆ ಸಕಲಪುರಾತನರ ಕಾರುಣ್ಯವೆನುತ,
    ಮನದ ಬಿಕ್ಷವನುಂಡು, ತನು ಪರಿಣಾಮವನೆಯ್ದಿಹ
    ಘನಮಹಿಮರ ತೋರಯ್ಯಾ ಗುಹೇಶ್ವರಾ/577

  578. ಕದನದೊಳಗಣ ಕಣ್ಣ ಕೆಂಪು, ಕದನದೊಳಗಣ ಮನದ ಕೆಂಪು
    ಇದಾವನಾವನ ಕಾಡದಯ್ಯಾ ?
    ಪದುಮದೊಳಗೆ ಬಿಂದು ಸಿಲುಕಿ ಅಲ್ಲಿಯೆ ಅದೆ ನೋಡಿರೆ !
    ಗುಹೇಶ್ವರನೆಂಬ ಅನುಗ್ರಹ ತನ್ನ ನುಂಗಿ ಲಿಂಗವಿಲ್ಲೆನುತ್ತಿರ್ದೆನು(ದ್ದಿತು?)/578

  579. ಕದಳಿಯ ಬನವ ಹೊಕ್ಕು ಹೊಲಬ ತಿಳಿಯದನ್ನಕ್ಕ,
    ಬಯಲ ಗಾಳಿಯ ಹಿಡಿದು ಗಟ್ಟಿ ಮಾಡದನ್ನಕ್ಕ,
    ಬರಿದೆ ಬಹುದೆ ಶಿವಜ್ಞಾನ?
    ಷಡುವರ್ಣ(ರ್ಗ?)ವಳಿಯದನ್ನಕ್ಕ, ಬರಿದೆ ಬಹುದೆ?
    ಅಷ್ಟಮದವಳಿಯದನ್ನಕ್ಕ ನಬರಿದೆ ಬಹುದೆ?
    ಮದಮತ್ಸರ ಮಾಡಲಿಲ್ಲ, ಹೊದಕುಳಿಗೊಳಲಿಲ್ಲ,
    ಗುಹೇಶ್ವರಲಿಂಗ ಕಲ್ಪಿತದೊಳಗಿಲ್ಲ./579

  580. ಕನಕಾಚಲದಲ್ಲಿ ದಿನನಾಯಕ ಎಂಬ ರತ್ನ ಹುಟ್ಟಿ,
    ಅಹುದಲ್ಲ (ಅಹುದು ಅಲ್ಲ?) ಎಂಬ ಕೊಳಗದ ಕೊರಳಿನಲ್ಲಿ ಅಳೆವುತ್ತೈದಾನೆ.
    ಕೊಳಗದ ಕೊರಳು ತುಂಬಿ ಅಳೆವಾತನ ಹೃದಯ ತುಂಬಿ
    ಗುಹೇಶ್ವರಲಿಂಗದ ಕಂಗಳು ತುಂಬಿ ಮಂಗಳಮಯವಾಯಿತ್ತು !/580

  581. ಕನ್ನಡಿಯೊಳಗಣ ರೂಪನರಸಿಯೂ ಕಾಣರು,
    ಹೊಳೆವುತ್ತಿದೆ ಧ್ರುವ (ಭ್ರೂ?) ಮಂಡಲದೊಳಗೆ
    ಇದ ಬಲ್ಲವರೊಳಗಿಪ್ಪ ಗುಹೇಶ್ವರ. /581

  582. ಕಬ್ಬಿನ ಬಿಲ್ಲ ಮಾಡಿ, ಪರಿಮಳದಲದ್ದಿ ಅಂಬ ಮಾಡಿ ನಿಲ್ಲೊ ಬಿಲ್ಲಾಳೆ
    ಎನ್ನ ಮನದಲ್ಲಿ ಎಸೆಯ ಬಲ್ಲೆಯಯ್ಯಾ, ಗುಹೇಶ್ವರನೆಂಬ ಲಿಂಗವನು ! /582

  583. ಕಬ್ಬಿನ ರಸದೊಳಗಣ ಮುತ್ತನೊಡೆದು ನೋಡಲು
    ಹುಬ್ಬಿನ ಮೇಲಣ ನೀಲದ ಪ್ರಭೆಯ ನೋಡಾ !
    ವಜ್ರದ ಚಂಡಿಕೆ (ಚಂದ್ರಿಕೆ?)ಯಲ್ಲಿ ಕಟ್ಟಿ ಆಳುವರು !
    ಉಭಯ ಕವಿಗಳಿಗೆ ಅರಿಯಬಾರದು.
    ಗುಹೇಶ್ವರನ ಸ್ವಾನುಭಾವಿಗಳಿಗಲ್ಲದೆ ತಿಳಿಯಬಾರದು. /583

  584. ಕಬ್ಬು ಬೆಳೆವುದಯ್ಯ ಕರಿಯ ಭೂಮಿಯಿದ್ದಲ್ಲಿ,
    ಉಬ್ಬುಬ್ಬಿ ಬೆಳೆವುದಯ್ಯ ಜಲ ಪ್ರಮಾಣವಿರ್ದಲ್ಲಿ,
    ದಾರಿದ್ರ್ಯವಿದ್ದಲ್ಲಿ ನಿದ್ರೆ ಬೆಳೆವುದಯ್ಯ,
    ನಮ್ಮ ಶಿವನ ಸಲೆ ಸಂದ ಶರಣರಾದ ಹಿರಿಯರಿದ್ದಲ್ಲಿ ಬುದ್ಧಿ ಬೆಳವುದಯ್ಯ,
    ಜಟ್ಟಿ ಮಾಸಾಳರಿರ್ದಲ್ಲಿ ಕಾಳಗ ಘನವನಪ್ಪುದಯ್ಯ,
    ಇಷ್ಟ ಕಂಡು ಬೆರಗಾದ ನಮ್ಮ ಗುಹೇಶ್ವರ. /584

  585. ಕಬ್ಬುನದ ಗುಂಡಿಗೆಯಲ್ಲಿ [ರಸದ] ಭಂಡವ ತುಂಬಿ,
    ಹೊನ್ನ ಮಾಡ ಬಲ್ಲಡೆ ಅದು ಪರುಷ ಕಾಣಿರಣ್ಣಾ.
    ಲಿಂಗ ಬಂದು ಉಂಬಡೆ ಪ್ರಸಾದಕಾಯವಪ್ಪಡೆ,
    ಅಂದಂದಿಂಗೆ ಭವಕರ್ಮ ಮುಟ್ಟಲಮ್ಮದು ಕಾಣಿರೆ.
    ಆದಿಯ ಪ್ರಸಾದಕ್ಕೆ ಬಾಧೆಯಿಲ್ಲ ಕಾಣಿರೆ.
    ಶಶಿಯಲ್ಲಿ ಕರಗದು ಬಿಸಿಲಲ್ಲಿ ಕೊರಗದು,
    ರಸವುಂಡ ಹೊನ್ನು -ಗುಹೇಶ್ವರಾ ನಿಮ್ಮ ಶರಣ !/585

  586. ಕರಗಿಸಿ ನೋಡಿರೆ ಅಣ್ಣಾ ಕರಿಯ ಘಟ್ಟಿಯನು.
    ಆ ಕರಿಯ ಘಟ್ಟಿಯೊಳಗೊಂದು ರತ್ನವಿಪ್ಪುದು.
    ಆ ರತ್ನದ ಪರೀಕ್ಷೆಯ ಬಲ್ಲೆವೆಂಬವರೆಲ್ಲರ ಕಣ್ಣುಗೆಡಿಸಿತ್ತು ನೋಡಾ !
    ಅರುಹಿರಿಯರೆಲ್ಲರೂ ಮರುಳಾಗಿ ಹೋದರು.
    ಕರಿಯ ಘಟ್ಟಿಯ ಬಿಳಿದು ಮಾಡಿ
    ಮುಖದ ಮುದ್ರೆಯನೊಡೆಯಬಲ್ಲವರಿಗಲ್ಲದೆ
    ಗುಹೇಶ್ವರನ ನಿಲವನರಿಯಬಾರದು ನೋಡಿರಣ್ಣಾ./586

  587. ಕರಣಾದಿ ಗುಣಂಗಳಳಿದು ನವಚಕ್ರಂಗಳು ಬಿನ್ನವಾದ ಬಳಿಕ
    ಇನ್ನೇನೊ? ಇನ್ನೇನೊ?
    ಪುಣ್ಯ-ಪಾಪವಿಲ್ಲ ಇನ್ನೇನೊ ? ಇನ್ನೇನೊ ?
    ಸ್ವರ್ಗ-ನರಕವಿಲ್ಲ ಇನ್ನೇನೊ ? ಇನ್ನೇನೊ ?
    ಗುಹೇಶ್ವರಲಿಂಗವ ವೇದಿಸಿ ಸುಖಿಯಾದ ಬಳಿಕ
    ಇನ್ನೇನೊ ? ಇನ್ನೇನೊ ?/587

  588. ಕರಸ್ಥಲದ ಬೆಳಗಿನೊಳಗೊಂದು ಘನಲಿಂಗದ ಬೆಳಗ ಕಂಡೆ.
    ಮಹಾಮಂಗಳನಿಳಯನಾಗಿ ತೋರುತ್ತಿದ್ದಾನೆ.
    ಮಹಾಮಂಗಳನಿಳಯವಾಗಿ ತೋರುತ್ತಿದ್ದಿತ್ತು, ಗುಹೇಶ್ವರಲಿಂಗದ ವಾರ್ತೆ.
    ಸಂಗನಬಸವಣ್ಣನ ನಿವಾಳಿಸುತ್ತಿದ್ದಿತ್ತು./588

  589. ಕರಸ್ಥಲದ ಲಿಂಗ ಮನಸ್ಥಲದಲ್ಲಿ ವೇದ್ಯವಾಗಿ
    ಮನಸ್ಥಲದ ಲಿಂಗ ಸರ್ವಾಂಗದಲ್ಲಿ ವೇದ್ಯವಾದ ಬಳಿಕ
    ಇನ್ನು ಬಿನ್ನಭಾವಕ್ಕೆ ತೆರಹುಂಟೆ ?
    ಗುಹೇಶ್ವರಲಿಂಗವ ಬೆರಸಿ ಸಮರಸವಾದ ಬಳಿಕ
    ಎರಡೆಂಬುದಿಲ್ಲ ನೋಡಾ ಚನ್ನಬಸವಣ್ಣಾ/589

  590. ಕರಸ್ಥಲದ ಲಿಂಗವೆ ಕಾಯಕ್ಕೆ ವೇದಿಸಿದಲ್ಲಿ, ಕಾಯ ಲಿಂಗವಾಯಿತ್ತು.
    ಅಂತಾದ ಮಹಾಘನಲಿಂಗವೆ ಪ್ರಾಣಕ್ಕೆ ವೇದಿಸಿದಲ್ಲಿ ಪ್ರಾಣ ಲಿಂಗವಾಯಿತ್ತು,
    ಅಂತಾದ ಮಹಾಘನಲಿಂಗವೆ ಭಾವಕ್ಕೆ ವೇದಿಸಿದಲ್ಲಿ ಭಾವ ಲಿಂಗವಾಯಿತ್ತು.
    ಅಂತಾದ ಮಹಾಘನಲಿಂಗವೆ ಜ್ಞಾನಕ್ಕೆ ವೇದಿಸಿದಲ್ಲಿ ಜ್ಞಾನ ಲಿಂಗವಾಯಿತ್ತು.
    ಅಂತಾದ ಕಾರಣ-ನಮ್ಮ ಗುಹೇಶ್ವರನ ಶರಣಂಗೆ,
    ಅರಿವರತು ಕುರುಹು ನಿಷ್ಪತಿಯಾಗಿ,
    ತಾನೆಂಬ ಭಾವವು ಉರಿಯುಂಡ ಕರ್ಪುರದಂತಾಯಿತ್ತು/590

  591. ಕರಿಯ ತಲೆಯ ಅರಮನೆಯ ಸುರಧೇನು ಹಯನಾಯಿತ್ತು !
    ಕರೆದುಂಬಾತಂಗೆ ಕೈಕಾಲಿಲ್ಲ !
    ಕರು ನಾಲ್ವೆರಳಿನ ಪ್ರಮಾಣದಲ್ಲಿಹುದು !
    ಇದ, ಕರೆದುಂಬಾತನೆ ದೇವ-ಗುಹೇಶ್ವರಾ./591

  592. ಕರಿಯ ಮುತ್ತಿನ ಹಾರದ ಪರಿಯೊಂದು ಶೃಂಗಾರ,
    ಕರದ ಬಣ್ಣದ ನುಡಿಯ ಬೆಡಗಿನೊಳಗಡಗಿತ್ತು.
    ಸಿಡಿಲ ಬಣ್ಣವನುಟ್ಟು ಮಡದಿ ಒಂದೂರೊಳಗೆ
    ಕಡುಗಲಿಯ ವಿದ್ಯೆಯನು ನೋಡಿ,
    ನೋಡದ ನಿರ್ಭಾವ ವೀರವಿತರಣೆಯಿಂದ,
    ಧಾರುಣಿಯ ರಚನೆಯ, ಗುಹೇಶ್ವರನೆಂಬ ಲಿಂಗವ
    ಬೆಡಗು ನುಂಗಿ ಅಡಗಿತ್ತು./592

  593. ಕರಿಯು ಸ್ಪರ್ಶನೇಂದ್ರಿಯದಿಂದ ಬಂಧನವಡೆದಳಿಯಿತ್ತು.
    ಪತಂಗನು ರೂಪೇಂದ್ರಿಯದಿಂದ ಬಂಧನವಡೆದಳಿಯಿತ್ತು.
    ಭೃಂಗನು ಗಂಧೇಂದ್ರಿಯದಿಂದ ಬಂಧನವಡೆದಳಿಯಿತ್ತು.
    ಕುರಂಗನು ಶಬ್ದೇಂದ್ರಿಯದಿಂದ ಬಂಧನವಡೆದಳಿಯಿತ್ತು.
    ಮತ್ಸ್ಯವು ರಸನೇಂದ್ರಿಯದಿಂದ ಬಂಧನವಡೆದಳಿಯಿತ್ತು.-
    ಇಂತೀ; ಒಂದೊಂದು ಇಂದ್ರಿಯೋದ್ರೇಕದಿಂದ
    ಒಂದೊಂದು ಪ್ರಾಣಿಯು ಪ್ರಳಯವಾಯಿತ್ತು.
    ಪಂಚೇಂದ್ರಿಯಂಗಳ, ಒಂದು ಘಟದಲ್ಲಿ ತಾಳಿಹ ಮನುಷ್ಯ ಪ್ರಾಣಿಗಳಿಗೆ,
    ಮರವೆ ಎಡೆಗೊಂಡು ದೇಹಮೋಹಭ್ರಾಂತು ಮುಸುಕಿ
    ಮಾಯೆಯ ಬಾಯ ತುತ್ತಹುದು
    ಚೋದ್ಯವೇನು ಹೇಳಾ ಗುಹೇಶ್ವರಾ ?/593

  594. ಕರು(ರ?)ಣ ಲಿಂಗಾರ್ಚನೆಯ ಮಾಡಲೆಂದು ಪುಷ್ಪಕ್ಕೆ ಕೈಯ ನೀಡಿದಡೆ
    ಆ ಪುಷ್ಪ ಕರಣದೊಳಗಡಗಿತ್ತಯ್ಯ.
    ಷೋಡಶ ಕಳೆ ಹದಿನಾರರೆಸಳು ವಿಕಸಿತವಾಯ್ತು.
    ಪುರುಷ ಪುಷ್ಪದ ಮರನು,
    ಅದು ಓಗರದ ಗೊಬ್ಬರವನುಣ್ಣದು, ಕಾಮದ ಕಣ್ಣಿರಿಯದು.
    ನಿದ್ರೆಯ ಕಪ್ಪೊತ್ತದು.
    ಅರುಣ ಚಂದ್ರಾದಿಗಳಿಬ್ಬರ ತೆರೆಯುಂಡು ಬೆಳೆಯದ ಪುಷ್ಪ
    ಲಿಂಗವೆ ಧರೆಯಾಗಿ ಬೆಳೆಯಿತ್ತು,
    ಆ ಪುಷ್ಪ ನೋಡಾ !
    ಆ ಪುಷ್ಪವೆಂದಿಗೂ ನಿರ್ಮಾಲ್ಯವಲ್ಲೆಂದು
    ಗುಹೇಶ್ವರ, ನಿಮ್ಮ ಶರಣ ಪ್ರಾಣಲಿಂಗಕ್ಕೆ ಪ್ರಾಣಪೂಜೆಯ ಮಾಡಿದ. /594

  595. ಕರೆಯದೆ ಬಂದುದ, ಹೇಳದೆ ಹೋದುದನಾರೂ. ಅರಿಯರಲ್ಲಾ.
    ಅಂದಂದಿಂಗೆ ಬಂದ ಪ್ರಾಣಿಗಳು, ಆರೂ ಅರಿಯರಲ್ಲಾ.
    ಗುಹೇಶ್ವರನೆಂಬ ಲಿಂಗವು ಉಣ್ಣದೆ ಹೋದುದನಾರೂ ಅರಿಯರಲ್ಲಾ!/595

  596. ಕರ್ಪುರದ ಗಿರಿಯ ಉರಿ ಹಿಡಿದಡೆ ಇದ್ದಿಲುಂಟೆ ?
    ಮಂಜಿನ ಶಿವಾಲಯಕ್ಕೆ ಬಿಸಿಲ ಕಳಸವುಂಟೆ ?
    ಕೆಂಡದ ಗಿರಿಯನರಗಿನ ಬಾಣದಲೆಚ್ಚಡೆ,
    ಮರಳಿ ಬಾಣವನರಸಲುಂಟೆ ?
    ಗುಹೇಶ್ವರನೆಂಬ ಲಿಂಗವನರಿದು
    ಮರಳಿ ನೆನೆಯಲುಂಟೆ ?/596

  597. ಕರ್ಮ ಚರಣಾದಿಗಳು ಬೇರಾದವಲ್ಲದೆ
    ಅರಿದು ಮುಟ್ಟುವುದು ಒಂದೆ ಆತ್ಮ.
    ಬಿಂದುವಿನ ಒಂದು ಸಾರದಲ್ಲಿ,
    ಸಸಿ ಹಲವು ನಾಮ ಬೆಳೆವಂತೆ
    ಗುಹೇಶ್ವರಲಿಂಗದಲ್ಲಿ `ನಾ’ `ನೀ’
    ಎಂಬ ಭಾವವಿಲ್ಲ ಸಿದ್ಧರಾಮಯ್ಯಾ./597

  598. ಕರ್ಮ ನಾಸ್ತಿ ಎಂಬೆ, ಅಸ್ತಿ ನಾಸ್ತಿ (ಅನಾಸ್ತಿ ?) ಎಂಬೆ.
    ಜ್ಞಾನ [ದ] ಕೊಬ್ಬಿನಲಿ ಉಲಿವೆ, ಉಲಿದಂತೆ ನಡೆವೆ.
    ಸಂಗಡ ಸಹಿತ ಕರಸ್ಥಲಕ್ಕೆ ಬಂದು,
    ನೀನು ಬಯಲಾಗೆಯಲ್ಲಾ, ಎನ್ನನೂ ಬಯಲು ಮಾಡೆ-ಗುಹೇಶ್ವರಾ,/598

  599. ಕರ್ಮದ ಕಟ್ಟನೆ ಕೊಯ್ದು ಬ್ರಹ್ಮದ್ವಾರವ ಕಂಡೆ,
    ಮೇಲೊಂದು ಕಂಬವ ಕಂಡೆನಲ್ಲಾ !
    ಕಂಬವ ಖಂಡಣೆಯ ಮಾಡಿ ಮಹಾಬೆಳಗನೆ ಕಂಡೆ
    ಗುಹೇಶ್ವರನೆಂಬ ಲಿಂಗ ಅಲ್ಲಿಯೆ ನಿಂದನು. /599

  600. ಕರ್ಮದ ಗಡಣ ಹಿಂಗಿದುವಿಂದು,
    ಪಾಪದ ಬಲೆ ಬಳಸಿ ಹೋದವು.
    ಬಲ್ಲೆನು ಈ ಸಂಸಾರದಲ್ಲಿ ನೊಂದು ಬೆಂದೆನಾಗಿ,
    ಮಾಯೆಯ ತಲೆಯ ಮೆಟ್ಟಿ ಹೋದೆನು.
    ಇನ್ನು ಮರಳಿ ಬಾರೆನು ಗುಹೇಶ್ವರಾ ನಿಮ್ಮಾಣೆ/600

  601. ಕರ್ಮವಿಲ್ಲದ ಕಾಯ, ಕರಣವಿಲ್ಲದ ಪ್ರಾಣ.
    ಮಥನವಿಲ್ಲದ ಶಬ್ದ, ಗಮನವಿಲ್ಲದ ಮನ.
    ಗುಹೇಶ್ವರಾ ನಿಮ್ಮ ಬರವು ಸಂಗನಬಸವಣ್ಣನ ಮೆಚ್ಚು ನೋಡಾ./601

  602. ಕರ್ಮವೆ ಪ್ರಾಣವೆಂದು ಮಾಡುವಾಗ
    ಜ್ಞಾನವನರಿವ ನೆಲೆ ಶುದ್ಧವಿನ್ನಾವುದು ?
    ಸಾವನ್ನಕ್ಕ ಸಾಧನೆಯ ಮಾಡಿ ಕಾದವಾಠಾವಿನ್ನಾವುದು ?
    ಅರಿದುದ ನೇತಿಗಳೆದು; ಮೇಲರಿದುದ ಕರಿಗೊಳುತ್ತ
    ತುಷವ ನೀಗಿದ ತಂಡುಲದಂತೆ
    ಕಾಯದ ದೆಸೆ ಶುದ್ಧವಾಗಿರಬೇಕು, ಸಿದ್ಧರಾಮಯ್ಯಾ
    ಗುಹೇಶ್ವರಲಿಂಗವನರಿವುದಕ್ಕೆ./602

  603. ಕರ್ಮಾದಿನವೆಂಬ, ಕರ್ಮಿ, ಲಿಂಗಾದಿನವೆಂಬ, ಭಕ್ತ.
    ದೇಹ ಪ್ರಾರಬ್ಧವೆಂಬ, ದ್ವೈತಿ-
    ಈ ತ್ರಿವಿಧವೆನ್ನದವ[ರ], ನೀನೆಂಬೆ ಗುಹೇಶ್ವರಾ./603

  604. ಕಲಿ ತನ್ನ ತಲೆಯನರಿದು ಕೈಯಲ್ಲಿ ಹಿಡಿದು
    ಹಲವು ದ್ವೀಪಕ್ಕೆ ಹೋಗಿ ತೊಳಲುತ್ತೈದಾನೆ !
    ಕಂಡವರು ತೋರಿರೆ, ಕೇಳಿದವರು ಹೇಳಿರೆ,
    ಬುದ್ಧಿಗೆಟ್ಟವ ಸುದ್ಧಿಯ ಬೆಸಗೊಳ್ಳುತ್ತೈದಾನೆ !
    ತಲೆ ತಲೆಯನೆ ನುಂಗಿ ಹಲವು ದ್ವೀಪಕ್ಕೆ ಹೋಯಿತ್ತು.
    ಗುಹೇಶ್ವರಾ-ತಲೆ ಮೊದಲಿಲ್ಲ !/604

  605. ಕಲ್ಪಿತದುದಯ ಸಂಕಲ್ಪಿತದ ಸುಳುಹು.
    ಪವನಭೇದವನರಿಯದೆ,
    ಪ್ರಾಣಲಿಂಗವೆಂಬುದು ಅಂಗಸಂಸಾರಿ,
    ಜಂಗಮವೆಂಬುದು ಲಿಂಗಸಂಸಾರಿ.
    ಪರವಲ್ಲ ಸ್ವಯವಲ್ಲ, ನಿರವಯ,
    ಗುಹೇಶ್ವರನೆಂಬ ಲಿಂಗಕ್ಕೆ ನಾಚರು ನೋಡಾ/605

  606. ಕಲ್ಪಿತವೆಂಬ ಭಕ್ತ ಮಾಡಿದ ಸಯಧಾನವ ನೋಡಾ !
    ಅನಂತಕೋಟಿ ಅಜಾಂಡಗಳೆ ಸಯಧಾನವಾಗಿ
    ಸವಿಕಲ್ಪ ವಿಷಯಂಗಳೆ ಶಾಕವಾಗಿ
    ಸರ್ವವಾಸನೆ ಎಂಬುದೆ ಅಬಿಘಾರವಾಗಿ-
    ಇವೆಲ್ಲವನೂ ಜ್ಞಾನವೆಂಬ ಭಾಜನದಲ್ಲಿ ಎಡೆಮಾಡುತ್ತಿರಲು
    ಉಣ ಬಂದ ಹಿರಿಯರು ಉಣುತ್ತಿದ್ದುದ ನೋಡಿರೆ !
    ನಿರ್ವಿಕಲ್ಪಿತವೆಂಬ ಮಹಂತ ಬರಲು,
    ಸಯಧಾನವಡಗಿತ್ತು, ಭಾಜನ ಉಳಿಯಿತ್ತು.
    ಆ ಭಾಜನವನುತ್ತಮಾಂಗದಲ್ಲಿ ಅಳವಡಿಸಿಕೊಳಲು
    ನಿಶ್ಚಿಂತವಾಯಿತ್ತು ಗುಹೇಶ್ವರಾ./606

  607. ಕಲ್ಯಾಣವರಿಯೆ ಕಟಕವರಿಯೆ ಬೇಂಟೆಯನಾಡುತ್ತಿದ್ದೆ.
    ಎನ್ನ ಕೈ ನೋಡಿ ಭೋ ಕಲಿ ವೀರ ಸುಭಟರು.
    ಎನ್ನ ಕೈ ನೋಡಿ ಭೋ ಅರುಹಿರಿಯರು.
    ಕಾದಿ ಗೆಲಿದು ಗುಹೇಶ್ವರಲಿಂಗದಲ್ಲಿಗೆ ತಲೆವರಿಗೆಯನಿಕ್ಕಿ ಬಂದೆ,
    ಎನ್ನ ಕೈ ನೋಡಿ ಭೋ./607

  608. ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು,
    ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು
    ತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ !
    ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯಾ ಅಸಂಖ್ಯಾತ ಭಕ್ತಗಣಂಗಳು.
    ಶಿವಭಕ್ತರಿರ್ದ ಕ್ಷೇತ್ರವೆ ಅವಿಮುಕ್ತಕ್ಷೇತ್ರವೆಂಬುದು ಹುಸಿಯೆ ?
    ಶಿವಭಕ್ತರಿರ್ದ ದೇಶ ಪಾವನವೆಂಬುದು ಹುಸಿಯೆ ?
    ಗುಹೇಶ್ವರಲಿಂಗದಲ್ಲಿ ಎನ್ನ ಪರಮಾರಾಧ್ಯ ಸಂಗನಬಸವಣ್ಣನ ಕಂಡು
    ಬದುಕಿದೆನು ಕಾಣಾ ಸಿದ್ಧರಾಮಯ್ಯಾ./608

  609. ಕಲ್ಲ ಮನೆಯ ಮಾಡಿ ಕಲ್ಲ ದೇವರ ಮಾಡಿ
    ಆ ಕಲ್ಲು ಕಲ್ಲ ಮೇಲೆ ಕೆಡೆದಡೆ, ದೇವರೆತ್ತ ಹೋದರೊ ?
    ಲಿಂಗಪ್ರತಿಷ್ಠೆಯ ಮಾಡಿದವಂಗೆ ನಾಯಕನರಕ-ಗುಹೇಶ್ವರಾ/609

  610. ಕಲ್ಲ ಹೋರಿನೊಳಗೊಂದು ಕಾರ್ಯವ ಕಾಬಡೆ,
    ಕಲ್ಲ ಬೆದಕದೆ ಕಪ್ಪೆಯ ಸೋಂಕದೆ
    ಅಲ್ಲಿಯ ಉದಕವ ಕುಡಿಯ ಬಲ್ಲಡೆ-ಅದು ಯೋಗ.
    ಬಲ್ಲಡೆ ನಿಮ್ಮಲ್ಲಿ ನೀವೆ ತಿಳಿದು ನೋಡಿರೆ.
    ಅರಿವ ಯೋಗಕ್ಕಿದು ಚಿಹ್ನವಯ್ಯಾ:
    ಕಲ್ಲು ಕಪ್ಪೆಯೊಳಗಣ ಹುಲ್ಲುರಿಯದೆ ಅಟ್ಟುಂಬಂತೆ ಗುಹೇಶ್ವರಾ./610

  611. ಕಲ್ಲ ಹೋರಿನೊಳಗೊಂದು ಕಿಚ್ಚು ಹುಟ್ಟಿತ್ತ ಕಂಡೆ.
    ಹುಲ್ಲ ಮೇವ ಎರಳೆಯ, ಹುಲಿಯ, ಸರಸವ ಕಂಡೆ
    ಎಲ್ಲರೂ ಸತ್ತು ಆಡುತ್ತಿಪ್ಪುದ ಕಂಡೆ.
    ಇನ್ನು ಎಲ್ಲಿಯ ಭಕುತಿ ಹೇಳಾ ಗುಹೇಶ್ವರಾ ?/611

  612. ಕಲ್ಲ, ದೇವರೆಂದು ಪೂಜಿಸುವರು-ಆಗದು ಕಾಣಿರೊ.
    ಅಗಡಿಗರಾದಿರಲ್ಲಾ !
    ಮುಂದೆ ಹುಟ್ಟುವ ಕೂಸಿಂಗೆ
    ಇಂದು ಮೊಲೆಯ ಕೊಡುವಂತೆ ಗುಹೇಶ್ವರ !/612

  613. ಕಲ್ಲೊಣಗಣ ಕಿಚ್ಚು ಉರಿಯದಂತೆ, ಬೀಜದೊಳಗಣ ವೃಕ್ಷ ಉಲಿಯದಂತೆ,
    ತೋರಲಿಲ್ಲಾಗಿ ಬೀರಲಿಲ್ಲಾರಿಗೆಯು,
    ಗುಹೇಶ್ವರ ನಿಂದ ನಿಲವ ಅನುಭ(ಭಾ?)ವ ಸುಖಿ ಬಲ್ಲ./613

  614. ಕವಿತ್ವಸಾಧಕರೆಲ್ಲರು ಕಳವಳಿಸಿ ಕೆಟ್ಟರು.
    ವಿದ್ಯಾಸಾಧಕರೆಲ್ಲರು ಬುದ್ಧಿಹೀನರಾದರು.
    ಪವನ ಸಾಧಕರೆಲ್ಲರು ಹದ್ದು ಕಾಗೆಗಳಾದರು.
    ಜಲಸಾಧಕರೆಲ್ಲರು ಕಪ್ಪೆ ಮೀನಗಳಾದರು.
    ಅನ್ನಸಾಧಕರೆಲ್ಲರು ಭೂತಪ್ರಾಣಿಗಳಾದರು.
    ಬಸವಣ್ಣ, ಸದ್ಗುರುಸಾಧಕನಾಗಿ
    ಸ್ವಯಲಿಂಗವಾದ ಕಾಣಾ ಗುಹೇಶ್ವರಾ./614

  615. ಕಸ್ತೂರಿಯ ಮೃಗ ಬಂದು ಸುಳಿಯಿತ್ತಯ್ಯಾ,
    ಸಕಲ ವಿಸ್ತಾರದ ರೂಹು ಬಂದು ನಿಂದಿತ್ತಯ್ಯಾ,
    ಆವ ಗ್ರಹ ಬಂದು ಸೋಂಕಿತ್ತೆಂದರಿಯೆನಯ್ಯಾ
    ಆವ ಗ್ರಹ ಬಂದು ಹಿಡಿಯಿತ್ತೆಂಬುದ ನಾನರಿಯೆನಯ್ಯಾ.
    ಹೃದಯಕಮಲಮಧ್ಯದಲ್ಲಿ ಗುರುವನರಿದು ಪೂಜಿಸಿ,
    ಗುರು ವಿಖ್ಯಾತನೆಂಬುದ ನಾನರಿದೆನಯ್ಯಾ.
    ಗುಹೇಶ್ವರಲಿಂಗದಲ್ಲಿಹಿಂದಣ ಹುಟ್ಟರತು ಹೋದುದ ಕಂಡೆನಯ್ಯಾ./615

  616. ಕಳಸವುಳ್ಳ ಶಿವಾಲಯವೊಂದಕ್ಕೆ, ಚೌಕದಲ್ಲಿ ಎರಡು ಕಂಬ,
    ಮೂರುಭಾವ-ಪೂಜಕರಾರೊ? ಅನುಭಾವಿಗಳಿನ್ನಾರೊ ?
    ಪೂಜಿಸುವರಿನ್ನಾರೊ ?
    ಇದರ ಸ್ಥಾನದ ನೆಲಗತಿಯನಾರು ಬಲ್ಲರು ಗುಹೇಶ್ವರಾ ?/616

  617. ಕಳ್ಳಗಂಜಿ ಕಾಡ ಹೊಕ್ಕಡೆ ಹುಲಿ ತಿಂಬುದ ಮಾಬುದೆ ?
    ಹುಲಿಗಂಜಿ ಹುತ್ತವ ಹೊಕ್ಕಡೆ ಸರ್ಪ ತಿಂಬುದ ಮಾಬುದೆ ?
    ಕಾಲಗಂಜಿ ಭಕ್ತನಾದಡೆ ಕರ್ಮ ತಿಂಬುದ ಮಾಬುದೆ ?-
    ಇಂತೀ ಮೃತ್ಯುವಿನ ಬಾಯ ತುತ್ತಾದ,
    ವೇಷಡಂಬಕರ ನಾನೇನೆಂಬೆ ಗುಹೇಶ್ವರಾ./617

  618. ಕಾಗೆಯ ತಿಂದವನಲ್ಲದೆ ಭಕ್ತನಲ್ಲ.
    ಕೋಣನ ತಿಂದವನಲ್ಲದೆ ಮಹೇಶ್ವರನಲ್ಲ.
    ಕೋಡಗನ ತಿಂದವನಲ್ಲದೆ ಪ್ರಸಾದಿಯಲ್ಲ.
    ನಾಯ ತಿಂದವನಲ್ಲದೆ ಪ್ರಾಣಲಿಂಗಿಯಲ್ಲ.
    ಹೇಯವ ತಿಂದವನಲ್ಲದೆ ಶರಣನಲ್ಲ.
    ಇಂತೈವರ ತಿಂದವನಲ್ಲದೆ ಲಿಂಗೈಕ್ಯನಲ್ಲ ಗುಹೇಶ್ವರ ! /618

  619. ಕಾಡಿ ಬೇಡಿ ಉಂಬವರೆಲ್ಲರು ಬ್ರಹ್ಮನ ಸಂಪ್ರದಾಯ.
    ಕುಟ್ಟಿ ಕುಟ್ಟಿ ಉಂಬವರೆಲ್ಲರು ವಿಷ್ಣುವಿನ ಸಂಪ್ರದಾಯ.
    ದಳಾದಳಿಯಲುಂಬವರೆಲ್ಲರು ಯಮನ ಸಂಪ್ರದಾಯ.
    ಇವಾವವನೂ ಹೊದ್ದದೆ ಭಕ್ತಿಬಿಕ್ಷವನುಂಬವರೆಲ್ಲ
    ನಿಮ್ಮ ಸಂಪ್ರದಾಯ ಕಾಣಾ ಗುಹೇಶ್ವರಾ./619

  620. ಕಾಡುಗಿಚ್ಚೆದ್ದಡೆ ಅಡವಿಯೆ ಗುರಿ.
    ನೀರುಗಿಚ್ಚೆದ್ದಡೆ ಸಮುದ್ರವೆ ಗುರಿ.
    ಒಡಲುಗಿಚ್ಚೆದ್ದಡೆ ತನುವೆ ಗುರಿ.
    ಕಾಲಾಗ್ನಿಯೆದ್ದಡೆ ಲೋಕಂಗಳೆ ಗುರಿ.
    ಶಿವಶರಣರ ಮನದಲ್ಲಿ ಕೋಪಾಗ್ನಿಯೆದ್ದಡೆ ನಿಂದಕರೆ ಗುರಿ.
    ಗುಹೇಶ್ವರಾ ನಿಮ್ಮ ಮಾಯದ ಹೊಡೆಗಿಚ್ಚಿಂಗೆ
    ನಾನು ಗುರಿಯಲ್ಲ ಕೇಳಾ./620

  621. ಕಾಣದುದ ಕಂಡೆ, ಕೇಳದುದ ಕೇಳಿದೆ-
    ಮುಟ್ಟಬಾರದುದ ಮುಟ್ಟಿದ, ಅಸಾಧ್ಯವ ಸಾದಿಸಿದ,
    ತಲೆಗೆಟ್ಟುದ ತಲೆವಿಡಿದ, ನೆಲೆಗೆಟ್ಟುದ ನಿರ್ಧರಿಸಿದ.
    ಗುಹೇಶ್ವರಾ ನಿಮ್ಮ ಶರಣ ಅಜಗಣ್ಣಂಗೆ
    ಶರಣೆಂದು ಶುದ್ಧನಾದೆನು./621

  622. ಕಾಣದುದನರಸುವರಲ್ಲದೆ ಕಂಡದುದನರಸುವರೆ ಹೇಳಾ !
    ಘನಕ್ಕೆ ಘನವಾದ ವಸ್ತು;
    ತಾನೆ ಗುರುವಾದ, ತಾನೆ ಲಿಂಗವಾದ, ತಾನೆ ಜಂಗಮವಾದ,
    ತಾನೆ ಪ್ರಸಾದವಾದ, ತಾನೆ ಮಂತ್ರವಾದ, ತಾನೆ ಯಂತ್ರವಾದ
    ತಾನೆ ಸಕಲವಿದ್ಯಾರೂಪನಾದ.-
    ಇಂತಿವೆಲ್ಲವನೊಳಕೊಂಡು ಎನ್ನ ಕರಸ್ಥಲಕ್ಕೆ ಬಂದ.
    ಇನ್ನು ನಿರ್ವಿಕಾರ ಗುಹೇಶ್ವರ./622

  623. ಕಾಣಬಹ ತನು, ಕೇಳಬಹ ಧ್ವನಿಯಿಂದ
    ಆಳವಾಡಿ ಕಾಡುತ್ತದೆ ಲೋಕವನು,
    ಅಯ್ಯಾ ಅಯ್ಯಾ ಬೊಮ್ಮವೆ !
    ಅಣಕಿಸಿ ಲೋಕವನು ಕಾಡುತ್ತದೆ,
    ಅಯ್ಯಾ ಅಯ್ಯಾ ಬೊಮ್ಮವೆ !
    ಬೊಮ್ಮ ತಾನೆಂದರಿದು ಸಂಸಾರದ ಬೇರ ಹರಿಯಬಲ[ವ]
    ಶರಣನೊಬ್ಬನೆ ಗುಹೇಶ್ವರಾ./623

  624. ಕಾಣಬಾರದ ಗುರು ಕಣ್ಗೆ ಗೋಚರವಾದಡೆ;-
    ಹೇಳಲಿಲ್ಲದ ಬಿನ್ನಪ್ಪ, ಮುಟ್ಟಲಿಲ್ಲದ ಹಸ್ತಮಸ್ತಕಸಂಯೋಗ.
    ಹೂಸಲಿಲ್ಲದ ವಿಭೂತಿಯ ಪಟ್ಟ, ಕೇಳಲಿಲ್ಲದ ಕರ್ಣಮಂತ್ರ.
    ತುಂಬಿ ತುಳುಕದ ಕಲಶಾಬಿಷೇಕ ಆಗಮವಿಲ್ಲದ ದೀಕ್ಷೆ,
    ಪೂಜೆಗೆ ಬಾರದ ಲಿಂಗ, ಸಂಗವಿಲ್ಲದ ಸಂಬಂಧ.
    ಸ್ವಯವಪ್ಪ ಅನುಗ್ರಹ,
    ಅನುಗೊಂಬಂತೆ ಮಾಡಾ ಗುಹೇಶ್ವರಾ. /624

  625. ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದಡೆ,
    ಎನಗಿದು ಸೋಜಿಗ, ಎನಗಿದು ಸೋಜಿಗ !
    ಅಹುದೆನಲಮ್ಮೆನು, ಅಲ್ಲೆನಲಮ್ಮೆನು,
    ಗುಹೇಶ್ವರಲಿಂಗವು ನಿರಾಳ ನಿರಾಕಾರ ಬಯಲು ಆಕಾರವಾದಡೆ !/625

  626. ಕಾಪ ಕಾಷಾಯಾಂಬರವ ಕಟ್ಟಿ,
    ಮಂಡೆ ಬೋಳಾದಡೇನಯ್ಯಾ.
    ಎನ್ನಲ್ಲಿ ನಿಜವಿಲ್ಲದನ್ನಕ್ಕ ?
    ಹೊನ್ನು ಹೆಣ್ಣು ಮಣ್ಣು ತ್ರಿವಿಧವ ತೊರೆದಡೇನಯ್ಯಾ
    ಮನದಲ್ಲಿ ವ್ರತಿಯಾಗದನ್ನಕ್ಕ ?
    ಹಸಿವು ತೃಷೆ ವ್ಯಸನಾದಿಗಳ ಬಿಟ್ಟಡೇನಯ್ಯಾ
    ಅರ್ಥದಿಚ್ಛೆ ಮನದಲ್ಲಿ ಹಿಂಗದನ್ನಕ್ಕ ?
    ಆನು ಜಂಗಮವೆ ?
    ಆನು ಹಿರಿಯನಾದೆನಲ್ಲದೆ ಆನು ಜಂಗಮವೆ ?
    ಒಡಲಿಲ್ಲದಾತ ಬಸವಣ್ಣ, ಪ್ರಾಣವಿಲ್ಲದಾತ ಬಸವಣ್ಣ.
    [ಎನ್ನ]ಬಸವಣ್ಣನಾಗಿ ಹುಟ್ಟಿಸದೆ
    ಪ್ರಭುವಾಗಿ ಏಕೆ ಹುಟ್ಟಿಸಿದೆ ಗುಹೇಶ್ವರಾ ?/626

  627. ಕಾಮ ಸತ್ಯವ ತಿಂದಿತ್ತು, ಕ್ರೋಧ ಜ್ಞಾನವ ತಿಂದಿತ್ತು,
    ಲೋಭ ಧರ್ಮವ ತಿಂದಿತ್ತು,
    ಮೋಹ ವಿರಕ್ತಿಯ ತಿಂದಿತ್ತು, ಮದ ಭಕ್ತಿಯ ತಿಂದಿತ್ತು,
    ಮತ್ಸರ ಯು(ಮು ?)ಕ್ತಿಯ ತಿಂದಿತ್ತು.
    ಈ ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯವೆಂಬ
    ಅರಿಷಡ್ವರ್ಗಂಗಳಿವು ನಿಮ್ಮ ನೈದಲರಿಯದೆ,
    ಈ ಸತ್ಯ ಜ್ಞಾನ ಧರ್ಮ ವಿರಕ್ತಿ ಭಕ್ತಿ ಯುಕ್ತಿಗಳೆಂಬ ಸದ್ವರ್ತನೆಯ,
    ದುರ್ವರ್ತನೆಯೆಂಬರಿಷಡುವರ್ಗಂಗಳೆಂಬ ನಾಡ ನಾಯಿಗಳೆ ತಿಂದವು.
    ಎನಗೆ ಸದ್ವರ್ತನೆಯಿಲ್ಲದೆ ಅಪ್ರದೇಶಿಕನಾದೆನು ಕಾಣಾ ಗುಹೇಶ್ವರಾ./627

  628. ಕಾಮದಿಂದ ಕಂಡ, ಕ್ರೋಧದಿಂದ ಅಸ್ಥಿ,
    ಲೋಭದಿಂದ ಸಕಲ ವಿಷಯಂಗಳು.
    ಮೋಹದಿಂದ ನೋಡಿಹೆನೆಂಬುದೆಲ್ಲವು ಕಾಮನ ಬಲೆಯೊಳಗು.
    ಕಾಮನ ಗೆದ್ದಠಾವಾವುದು ಹೇಳಾ ಗುಹೇಶ್ವರಲಿಂಗಕ್ಕೆ ?/628

  629. ಕಾಮನ ಕಣ್ಣ ಮುಳ್ಳ ಕಳೆದು
    ಭೂಮಿಯ ತೈಲದ ಸೀಮೆಯ ಕೆಡಿಸಿ
    ಹೋಮವನುರುಹಿ ದಕ್ಷನ ತಲೆಯನರಿದು
    ನಿಸ್ಸೀಮನಾದ ಮಹಿಮನ ನಿಲವನರಿಯಬಹುದೆ ?
    ಅರಿವಿಂಗೆ ಅಸಾಧ್ಯ ಉಪಮೆಗೆ ಕಡೆಮುಟ್ಟದು !
    ಗುಹೇಶ್ವರನ ಕರುಣಪ್ರಸಾದಿ ಮರುಳಶಂಕರದೇವರೆಂತಪ್ಪನೆಂಬುದ
    ತಿಳಿದು ನೋಡಾ ಸಂಗನಬಸವಣ. /629

  630. ಕಾಮನ ಕೈ ಮುರಿದಡೆ ಮೋಹ ಮುಂದುಗೆಟ್ಟಿತ್ತು.
    ಆಮಿಷ ತಾಮಸಧಾರಿಗಳೆಲ್ಲ ಎಳತಟವಾದರು.
    ಅಕ್ಕಟಾ, ಅಯ್ಯಲಾ, ನಿಮ್ಮ ಕಂಡವರಾರೊ?
    ಆಳವಿಲ್ಲದ ಸ್ನೇಹಕ್ಕೆ ಮರಣವೆ ಮಹಾನವಮಿ.
    ಗುಹೇಶ್ವರನನರಿಯದೆ ರಣಭೂಮಿಗಳುಲಿದವು !/630

  631. ಕಾಮನ ಕೊಲುವಲ್ಲಿ ಹೋಮವ ಸುಡುವಲ್ಲಿ
    ತ್ರಿಪುರಸಂಹಾರದ ಕೀಲನರಿವಲ್ಲಿ
    ಆತನ `ಯೋಗಿ’ ಎನಬೇಡ ಆತನ `ಭೋಗಿ’ ಎನಬೇಡ,
    ಆತನೆ ಅಚ್ಚಲಿಂಗೈಕ್ಯನು !
    ಹಸಿವ ಮರೆದಲ್ಲಿ ವ್ಯಸನವರತಲ್ಲಿ
    ಗುಹೇಶ್ವರಲಿಂಗವು, ಸಿದ್ಧರಾಮಯ್ಯದೇವರು ತಾನೆ !/631

  632. ಕಾಮವ ಸುಟ್ಟು ಹೋಮವನುರುಹಿ, ತ್ರಿಪುರಸಂಹಾರದ ಕೀಲ ಬಲ್ಲಡೆ,
    ಯೋಗಿಯಾದಡೇನು ? ಭೋಗಿಯಾದಡೇನು ?
    ಶೈವನಾದಡೇನು ? ಸನ್ಯಾಸಿಯಾದಡೇನು ?
    ಅಶನವ ತೊರೆದಾತ ವ್ಯಸನವ ಮರೆದಾತ-
    ಗುಹೇಶ್ವರಲಿಂಗದಲ್ಲಿ ಅವರ ಹಿರಿಯರೆಂಬೆನು./632

  633. ಕಾಮವಿಲ್ಲ, ಕ್ರೋಧವಿಲ್ಲ, ಲೋಭವಿಲ್ಲ,
    ಮೋಹವಿಲ್ಲ, ಮದವಿಲ್ಲ, ಮತ್ಸರವಿಲ್ಲ, ಹಸಿವು, ತೃಷೆ,
    ವಿಷಯ, ವ್ಯಸನವ್ಯಾಪ್ತಿಗಳಿಲ್ಲ, ಸಂಸಾರ ಬಂಧನ ಮುನ್ನಿಲ್ಲ,
    ಪುಣ್ಯವಿಲ್ಲ, ಪಾಪವಿಲ್ಲ, ಆಚಾರ ಅನಾಚಾರವೆಂಬುದಿಲ್ಲ,
    ಸದಾಚಾರ ಸಂಪೂರ್ಣ, ಗುಹೇಶ್ವರಾ, ನಿಮ್ಮ ಶರಣ./633

  634. ಕಾಮಿಸದೆ ನೆನೆದಡೆ, ಕಲ್ಪಿತವಿಲ್ಲದ ಪುರುಷ ಬಂದನೆನಗೆ ನೋಡಾ !
    ಕಲ್ಪಿತವಿಲ್ಲದೆ ನೆನೆದಡೆ, ಭಾವಿಸಲಿಲ್ಲದ ಸುಖವು ದೊರಕಿತ್ತು ನೋಡಾ !
    ಗುಹೇಶ್ವರನೆಂಬ ಲಿಂಗವನರಿದ ಬಳಿಕ, `ನಾ’ ಎಂಬುದಿಲ್ಲ ನೋಡಾ !/634

  635. ಕಾಮಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ.
    ಕಲ್ಪಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ
    ಭಾವಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ
    ರೂಪಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ
    ಪೂರ್ವಾಚಾರ್ಯ ಸಂಗನಬಸವಣ್ಣನ ಕಂಡು
    ಗುಹೇಶ್ವರಲಿಂಗವು ಅಲ್ಲಿಯೆ ಅನುಶ್ರುತವಯ್ಯಾ !/635

  636. ಕಾಮಿಸುವ ಕಲ್ಪಿಸುವ ಬ್ರಹ್ಮನೆಂಬವ ವ್ರತಗೇಡಿ,
    ವಿಷ್ಣುವೆಂಬವ ಸತ್ತು ಬಿದ್ದ, ರುದ್ರನೆಂಬವ ಅಬದ್ಧಅವಿಚಾರಿ!
    ಅವಿಚಾರದಲ್ಲಿ ಎಲ್ಲರ ಕೊಂದ ಕೊಲೆ, ನಿಮ್ಮ ತಾಗುವುದು ಗುಹೇಶ್ವರಾ. /636

  637. ಕಾಯ ಉಭಯಭೇದವಾಗಿ, ಆತ್ಮನೇಕವಾಗಿ;
    ಕಾಯ ಭಕ್ತನಾಗಿ, ಪ್ರಾಣ ಜಂಗಮವಾಗಿ;
    ನಾ ಹಿಡಿದ ರೂಪು ಬಸವಣ್ಣನಾಗಿ;
    ಅರಿದರಿದು ಗುಹೇಶ್ವರಲಿಂಗವಾಗಿ ನೆನೆವುತ್ತಿದ್ದೆನು./637

  638. ಕಾಯ ಬಿನ್ನವಾಯಿತ್ತೆಂದು ಮುಟ್ಟಿಸುವರು ಲಿಂಗವನು.
    ಮುಟ್ಟಲಾಗದು ಲಿಂಗವನು; ಮುಟ್ಟಿದಾತ ಮುಂದೆ ಹೋದ.
    ಮುನ್ನ ಮುಟ್ಟಿದವರೆಲ್ಲ ಉಪಜೀವಿಗಳಾದರು.
    ಇನ್ನು ಮುಟ್ಟಿದವರಿಗೆ ಗತಿಯುಂಟೆ ಗುಹೇಶ್ವರಾ ?/638

  639. ಕಾಯ ಲಿಂಗೈಕ್ಯವೆ ? ಅಲ್ಲ ನಿಲ್ಲು.
    ಜೀವ ಲಿಂಗೈಕ್ಯವೆ ? ಅಲ್ಲ ನಿಲ್ಲು.
    ಕಾಯದ ಜೀವದ ಸಂದ ಬಲ್ಲಡೆ-ಆತ ಲಿಂಗೈಕ್ಯ.
    ಒಂಬತ್ತು ದ್ವಾರಮಂ ಕಳೆದು, ಹತ್ತನೆಯ ದ್ವಾರದಲ್ಲಿ ನಿಲಬಲ್ಲಡೆ
    ಆತನೆ ಗುರು ಕಾಣಾ ಗುಹೇಶ್ವರಾ. /639

  640. ಕಾಯ ಸತಿಯೆಂದು ಹೇಸಿ ಕಳೆದೆ.
    ವಾಯದ ಮನ ಮಾಯೆಯೆಂದು ಹೇಸಿ ಬಿಟ್ಟೆ.
    ವಾಯದ ಸತಿ ಎಂಬ ಸಂದೇಹವೆಮಗೇಕೆ ?
    ಸತಿಯರ ಗೋಷ್ಠಿ ವಿಷ ಕಾಣವ್ವ.
    ಗುಹೇಶ್ವರಲಿಂಗದಲ್ಲಿ ನಿನ್ನ ಪತಿಯ ಕುರುಹ ಹೇಳಾ ಎಲೆ ಅವ್ವಾ ? /640

  641. ಕಾಯಕ್ಕೆ ಕಾಯವಾಗಿ, ತನುವಿಂಗೆ ತನುವಾಗಿ
    ಮನಕ್ಕೆ ಮನವಾಗಿ ಜೀವಕ್ಕೆ ಜೀವವಾಗಿ ಇದ್ದುದನಾರುಬಲ್ಲರೊ ?
    ಅದು ದೂರವೆಂದು, ಅದು ಸಮೀಪವೆಂದು
    ಮಹಂತ ಗುಹೇಶ್ವರನೊಳಗೆಂದು, ಹೊರಗೆಂದು
    ಬರುಸೂರೆಹೋದರೆಲ್ಲರೂ. /641

  642. ಕಾಯಕ್ಕೆ ಜೀವಕ್ಕೆ ಸಂದು ಮುನ್ನುಳ್ಳಡೆ,
    ಅದು ಪ್ರಾಣಲಿಂಗವಲ್ಲ ಕಾಣಿರೆ.
    ಲೋಕಾಚಾರದ ಕೂಳನುಂಡು, ಲೀಲೆಯೊಳಾಡುತಿಹರಲ್ಲದೆ
    ಸಲೆ ಸಂದವರಪ್ಪರೆ ?
    ಈ ಕಲ್ಲ ಹಿಡಿದಾತ ಆ ಕಲ್ಲನೆತ್ತ ಬಲ್ಲ ?
    ಇವರೊಬ್ಬರ ಕರೆದಡೆ ಒಬ್ಬರು (ಇಬ್ಬರು ?) `ಓ’ ಎಂಬಂತೆ.
    ಇವರಿಬ್ಬರ ಭಾವ ಹುರುಳಿಲ್ಲ ಕಾಣಾ ಗುಹೇಶ್ವರಾ. /642

  643. ಕಾಯಕ್ಕೆ ಮಜ್ಜನ ಪ್ರಾಣಕ್ಕೆ ಓಗರ-
    ಇದ ಮಾಡಲೆ ಬೇಕು.
    ಸುಳಿವ ಸುಳುಹುಳ್ಳನ್ನಕ್ಕ ಇದ ಮಾಡಲೆ ಬೇಕು.
    ಗುಹೇಶ್ವರನೆಂಬ [ಲಿಂಗಕ್ಕೆ] ಆತ್ಮವುಳ್ಳನ್ನಕ್ಕ
    ಭಕ್ತಿಯ ಮಾಡಲೆ ಬೇಕು./643

  644. ಕಾಯಗುಣ ಕೆಟ್ಟ ಮತ್ತೆ ಅರ್ಚನೆ ಹಿಂಗಿತ್ತು.
    ಪ್ರಾಣಗುಣ ಕೆಟ್ಟ ಮತ್ತೆ ಅರ್ಪಿತ ಹಿಂಗಿತ್ತು.
    ಭಾವಗುಣ ಕೆಟ್ಟ ಮತ್ತೆ ಉಭಯ ಜಂಜಡ ಹಿಂಗಿತ್ತು.
    ಇಂತಾದ ಕಾರಣ-ನಮ್ಮ ಗುಹೇಶ್ವರನ ಶರಣರು
    ಲಿಂಗಭೋಗೋಪಭೋಗವೆಂಬ ಖಂಡಿತ ಬುದ್ಧಿಯ ಮೀರಿ,
    ಅಖಂಡಾದ್ವೈತಬ್ರಹ್ಮದಲ್ಲಿ ತಲ್ಲೀಯವಾದರು./644

  645. ಕಾಯಗುಣವಳಿದು ಜೀವನ್ಮುಕ್ತನಾದ ಬಳಿಕ
    ಸಮ್ಯಕ್ಜ್ಞಾನವೆಂಬ ಶಾಂತಿ ದೊರೆಕೊಂಡಿತ್ತು ನೋಡಿರೆ !
    ಅಂತರಂಗ ಬಹಿರಂಗವೆಂಬುದನು ಅರಿಯನಾಗಿ
    ದ್ವೈತಾದ್ವೈತವ ನೀಕರಿಸಿ, ನಿರ್ವಾಣ ನಿಷ್ಪತಿಯಾಗಿ,
    ಗುಹೇಶ್ವರಾ ನಿಮ್ಮ ಶರಣನನುಪಮ ಸುಖಿಯಾಗಿರ್ದನು./645

  646. ಕಾಯಗುಣವಳಿದು ಮಾಯಾಮದ ಮುರಿದು,
    ಕಾಮಕ್ರೋಧಂಗಳೆಲ್ಲವು ಹೆರೆಹಿಂಗಿ ಹೋದವು.
    ಅಂಗವೆಲ್ಲವು ಲಿಂಗಲೀಯವಾಗಿ ಕಂಗಳ ಕಳೆಯ ಬೆಳಗಳಿದು
    ಗುಹೇಶ್ವರನ ವಿರಹದುರಿಯೊಳಗೆ ಬೆಂದವರ
    ಮರಳಿ ಸುಟ್ಟಿಹೆನೆಂಬ ಸಿದ್ಧರಾಮಯ್ಯ ಮರುಳ ನೋಡಾ./646

  647. ಕಾಯಗೊಂಡ ಮಾನವರಂತೆ ಕೈಗೆ ಸಿಲುಕ.
    ಪ್ರಾಣವಿಡಿದ ಜೀವಿಗಳಂತೆ ಎಡೆಯಾಡದಿಪ್ಪ.
    ಕಾಂಬಡೆ ಕಂಗಳತೆಯಲ್ಲ, ಕೇಳುವಡೆ ಕಿವಿಗಳತೆಯಲ್ಲ.
    ಗುಹೇಶ್ವರನ ನಿಲುವು ಬರಿಯ ಸ್ತೋತ್ರಕ್ಕೆ ನಿಲುಕದು.
    ಕಾಣಾ ಸಿದ್ಧರಾಮಯ್ಯಾ./647

  648. ಕಾಯಗೊಂಡು ಹುಟ್ಟಿದವರು;
    ದೇವರಾದಡಾಗಲಿ ಈವರಾದಡಾಗಲಿ
    ಮಾಯೆಯ ಸಾದಿಸಿ ಗೆಲುವದರಿದು ನೋಡಾ !
    ಮನದ ತಮಂಧವ ಗೆಲಿದು,
    ನೆನೆದು ಸುಖಿಯಾದೆಹೆನೆಂಬವರ ಬೆಂಬತ್ತಿ ಕಾಡಿತ್ತು ಕರ್ಮ.
    ಗುಹೇಶ್ವರಲಿಂಗವ ಕಿರಕಿರಿದಾಗಿ ನೆನೆದಡೆ
    ಹಿರಿಹಿರಿದಾಗಿ ಕಾಡುವುದು ನೋಡಾ ಮರಹು !
    ಸಂಗನಬಸವಣ್ಣಾ ನೀ ನೆನೆದ ನೆನಹು ಆರಂತಹುದೂ ಅಲ್ಲ ನೋಡಾ. /648

  649. ಕಾಯದ ಒಲವರದಲ್ಲಿ ನಿಲುವ ಚಿತ್ತ,
    ಕಂಗಳ ಗೊತ್ತಿನಲ್ಲಿ ಕಟ್ಟುವಡೆದು
    ದೃಷ್ಟದ ಇಷ್ಟದಲ್ಲಿ ಕಂಗಳ ಸೂತಕ ಹಿಂಗಿ
    ಮನದ ಸೂತಕ ಹರಿದು
    ಗುಹೇಶ್ವರನೆಂಬ ಭಾವದ ಭ್ರಮೆ ಅಡಗಬೇಕು./649

  650. ಕಾಯದ ಕಳವಳ ಕಾಣೆನೆಂದಲ್ಲಿ ಹೋಯಿತ್ತು.
    ಜೀವದ ದುಷ್ಕೃತ ದೂರವೆಂದಲ್ಲಿ ತಪ್ಪಿತ್ತು.
    ಕಾಯ ಜೀವವೆಂಬ ಸೂತಕ, ಮನ ನಿರ್ಮಲವಾದಲ್ಲಿಯೆ ಅಳಿಯಿತ್ತು.
    ಗುಹೇಶ್ವರನೆಂಬ ಲಿಂಗವನರಿಯ ಬೇಕಾದಡೆ,
    ನಿನ್ನ ಒಳಗ ತೊಳೆದು ನೋಡಾ ಸಿದ್ಧರಾಮಯ್ಯಾ./650

  651. ಕಾಯದ ಕಳವಳಕ್ಕಂಜಿ ಪ್ರಾಣ ಹೋದಲ್ಲಿ,
    ಭವ ಹಿಂಗದು, ಪ್ರಕೃತಿ ಬಿಡದು.
    ವಾಯಕ್ಕಾದಡೆ ಸತ್ತು ದೇವರ ಕೂಡಿಹೆವೆಂಬರು,
    ಈ ವಾಯದ ಮಾತಿಂಗೆ ಆನು ಬೆರಗಾದೆನು.
    ಕಾಯವಿದ್ದಲ್ಲಿ ಸಾಯದ ಸಾವ ಬಲ್ಲಡೆ
    ಬೇರಿಲ್ಲ, ಗುಹೇಶ್ವರ ತಾನೆ ! /651

  652. ಕಾಯದ ಕಳವಳವ ಗೆಲಿದಡೇನೊ, ಮಾಯದ ತಲೆಯನರಿಯದನ್ನಕ್ಕರ ?
    ಮಾಯೆಯ ತಲೆಯನರಿದಡೇನೊ, ಜ್ಞಾನದ ನೆಲೆಯನರಿಯದನ್ನಕ್ಕರ ?
    ಜ್ಞಾನದ ನೆಲೆಯನರಿದಡೇನೊ, ತಾನು ತಾನಾಗದನ್ನಕ್ಕರ ?
    ತಾನು ತಾನಾದ ಶರಣರ ನಿಲವಿಂಗೆ
    ಒಂದು ಧಾರೆ ಮೇರೆಯುಂಟೆ ಗುಹೇಶ್ವರಾ ?/652

  653. ಕಾಯದ ಕೈಯಲ್ಲಿ ಲಿಂಗಕ್ಕೆ ಮಜ್ಜನ,
    ಪ್ರಾಣದ ಕೈಯಲ್ಲಿ ಜಂಗಮಕ್ಕೆ ಭೋಜನ
    ಇವ ಮಾಡಲೆ ಬೇಕು.
    ಸುಳಿವ ಸುಳುಹುಳ್ಳನ್ನಕ್ಕ ಲಿಂಗಜಂಗಮಕ್ಕೆ ಮಾಡಲೆ ಬೇಕು.
    ಗುಹೇಶ್ವರನೆಂಬ ಆತ್ಮನುಳ್ಳನ್ನಕ್ಕ ಸತ್ಕ್ರೀಯ ಮಾಡಲೆ ಬೇಕು./653

  654. ಕಾಯದ ಮೇಲೆ ಕಲ್ಲು ಬೀಳಲಿಕ್ಕೆ
    ಜೀವ ಆಠಾವನರಿದು
    ಕಾವು ಮಾಡಿಸಿಕೊಂಬಾಗ
    ನೋವನರಿವುದು ಕಾಯವೊ ? ಜೀವವೊ ? ಉಭಯ ಸಮವೊ ?
    ಗುಹೇಶ್ವರಲಿಂಗಕ್ಕೆ ಅನ್ಯವಿಲ್ಲ ಸಂಗನಬಸವಣ್ಣಾ. /654

  655. ಕಾಯದ ಮೊದಲಿಗೆ ಬೀಜವಾವುದೆಂದರಿಯದೀ ಲೋಕ.
    ಇಂದ್ರಿಯಂಗಳು ಬೀಜವಲ್ಲ,
    ಆ ಕಳಾಭೇದವಲ್ಲ! ಸ್ವಪ್ನ ಬಂದೆರಗಿತ್ತಲ್ಲಾ!
    ಇದಾವಂಗೂ ಶುದ್ಧ ಸುಯಿಧಾನವಲ್ಲ ಕಾಣಾ ಗುಹೇಶ್ವರಾ./655

  656. ಕಾಯದಲಾದ ಅರ್ಪಿತ ಅರ್ಪಿತವಲ್ಲ.
    ಪ್ರಾಣದಲಾದ ಅರ್ಪಿತ ಅರ್ಪಿತವಲ್ಲ.
    ಭಾವದಲಾದ ಅರ್ಪಿತ ಅರ್ಪಿತವಲ್ಲ.
    ಅರಿವಿನಲಾದ ಅರ್ಪಿತ ಅರ್ಪಿತವಲ್ಲ.
    ನೆನಹಿಲ್ಲದ ಅವಧಾನ ಮರಹಿಲ್ಲದ ಆರೋಗಣೆ
    ತಟ್ಟದ ಮುಟ್ಟದ ಅರ್ಪಿತ !
    ಗುಹೇಶ್ವರಲಿಂಗದ ಆರೋಗಣೆಯನು,
    ಇಂದು ಬಸವಣ್ಣನಿಂದ ಕಂಡೆನು. /656

  657. ಕಾಯದಲಾದ ಮೂರ್ತಿಯಲ್ಲ, ಜೀವದಲಾದ ಮೂರ್ತಿಯಲ್ಲ,
    ಪ್ರಾಣದಲಾದ ಮೂರ್ತಿಯಲ್ಲ, ಪುಣ್ಯದಲಾದ ಮೂರ್ತಿಯಲ್ಲ,
    ಮುಕ್ತಿಯಲಾದ ಮೂರ್ತಿಯಲ್ಲ,
    ಯುಗದಲಾದ ಮೂರ್ತಿಯಲ್ಲ, ಜುಗದಲಾದ ಮೂರ್ತಿಯಲ್ಲ,
    ಇದೆಂತಹ ಮೂರ್ತಿಯೆಂದುಪಮಿಸುವೆ ?
    ಕಾಣಬಾರದ ಕಾಯ ನೋಡಬಾರದ ತೇಜ,
    ಉಪಮಿಸಬಾರದ ನಿಲವು.
    ಕಾರಣವಿಡಿದು ಕಣ್ಗೆ ಗೋಚರವಾದ ಸುಖವನು
    ಏನೆಂದು ಹೇಳುವೆ ಗುಹೇಶ್ವರಾ ?/657

  658. ಕಾಯದಲ್ಲಿ ಕಳವಳವೆಡೆಗೊಂಡ ಬಳಿಕ,
    ಅರಿವಿನಲ್ಲಿ ಮರವೆ ತಾನೆ ನಿಂದಿತ್ತು ನೋಡಾ.
    ಕಾಯದ ಕಳವಳವ ವಾಯವೆಂದರಿಯ ಬಲ್ಲಡೆ
    ದೇವ ಗುಹೇಶ್ವರನ ನಿಲುವು ತಾನೆ ನೋಡಾ/658

  659. ಕಾಯದಲ್ಲಿ ಕಾಯ ಸವೆದು,
    ಪ್ರಾಣದಲ್ಲಿ ಪ್ರಾಣ ಸವೆದು-ನಿಶ್ಚಿಂತವಾದ ಬಳಿಕ
    ಹಸಿವು-ತೃಷೆಗಳೆಂಬವು ಅಳಿದು ಹೋದವು ನೋಡಾ.
    ಉಂಡಿಹೆನೆಂಬ ಬಯಕೆಯಿಲ್ಲ ಒಲ್ಲೆನೆಂಬ ವೈರಾಗ್ಯವಿಲ್ಲ.
    ಇದು ಸ್ವಾನುಭಾವತೃಪ್ತಿಯೊಳಡಗಿತ್ತು.
    ಇದು ಕಾರಣ-ನಮ್ಮ ಗುಹೇಶ್ವರಲಿಂಗಕ್ಕೆ
    ಆರೋಗಣೆ ಇಲ್ಲ ಕಾಣಾ ಸಂಗನಬಸವಣ್ಣಾ./659

  660. ಕಾಯದೊಳಗಣ ಜೀವವ ಮೀರಿ ಹೋಹ ಕಳ್ಳನ ಸಂಗ ಬೇಡ.
    ನಿಮ್ಮ ನಿಮ್ಮ ವಸ್ತುವ ಸುಯಿಧಾನವ ಮಾಡಿಕೊಳ್ಳಿ
    ಗುಹೇಶ್ವರನೆಂಬ ಕಳ್ಳನ ಕೊಂದಡೆ ಅಳುವವರಾರೂ ಇಲ್ಲ!/660

  661. ಕಾಯದೊಳಗೆ ಕರಣವಿಲ್ಲ ಪ್ರಾಣದೊಳಗೆ ಭಾವವಿಲ್ಲ.
    ಭಾವದೊಳಗೆ ಭ್ರಮೆಯಿಲ್ಲ, ನವನಾಳದೊಳಗೆ ಸುಳುಹು ಮುನ್ನಿಲ್ಲ.
    ಬ್ರಹ್ಮರಂಧ್ರದಲ್ಲಿ ಅರಿವು ಅರತ ಶಿವಯೋಗಿ;
    ಗುಹೇಶ್ವರನ ಶರಣ ಸಿದ್ಧರಾಮಯ್ಯಾ
    ನಿನ್ನ ಕಂಡು ಎನ್ನ ಭವಂ ನಾಸ್ತಿಯಾಯಿತ್ತು ಕೇಳಾ. /661

  662. ಕಾಯದೊಳಗೆ ಕರುಳುಳ್ಳನ್ನಕ್ಕರ ಹಸಿವು ಮಾಣದು.
    ಕಾಯದೊಳಗಣ ಕರುಳ ತೆಗೆದು ಕಂಗಳ ಮೇಲಿರಿಸಿ
    ಇದನಡಿಗೆಯ ಮಾಡಿ ಗಡಣಿಸುತ್ತಿದ್ದೆ,
    ಏನೆಂಬೆ ಗುಹೇಶ್ವರಾ ?/662

  663. ಕಾಯದೊಳಗೆ ಕಾಯವಾಗಿ, ಪ್ರಾಣದೊಳಗೆ ಪ್ರಾಣವಾಗಿ,
    ಮನದೊಳಗೆ ಮನವಾಗಿ ಭಾವದೊಳಗೆ ಭಾವವಾಗಿ
    ಅರಿವಿನೊಳಗೆ ಅರಿವಿನ ತಿರುಳಾಗಿ,-ಮರಹು ಮಾರಡೆಯಿಲ್ಲದೆ.
    ನಿಜಪದವು ಸಾಧ್ಯವಾದ ಬಳಿಕ
    ಆವುದು ವರ್ಮ, ಆವುದು ಕರ್ಮ ?
    ಆವುದು ಬೋಧೆ, ಆವುದು ಸಂಬಂಧ ?
    ನಾ ಹೇಳಲಿಲ್ಲ ನೀ ಕೇಳಲಿಲ್ಲ !
    ಅದೇನು ಕಾರಣವೆಂದಡೆ ಬೆಸಗೊಂಬಡೆ ತೆರಹಿಲ್ಲವಾಗಿ !
    ಗುಹೇಶ್ವರಲಿಂಗದಲ್ಲಿ ತೆರೆಮರೆ ಆವುದು ಹೇಳಯ್ಯಾ ಬಸವಣ್ಣಾ ?/663

  664. ಕಾಯವ ಹೊತ್ತು ತಿರುಗಾಡುವನ್ನಬರ
    ನಾನರಿದೆನೆಂಬುದು ಹುಸಿಯಾಯಿತ್ತು.
    ಅರಿದಡೆ ತಾವರೆ ಎಲೆಯ ಬಿಂದುವಿನಂತೆ ಲೇಪವಿಲ್ಲದೆ
    ಗುಹೇಶ್ವರಲಿಂಗವನರಿಯಬೇಕು ಸಂಗನಬಸವಣ್ಣಾ. /664

  665. ಕಾಯವಿಡಿದು ಲಿಂಗವಿದೆ ಲಿಂಗವಿಡಿದು ಕಾಯವಿದೆ.
    ಅರಿವಿಡಿದು ಮರಹಿದೆ, ಮರಹುವಿಡಿದು
    ತೋರುವ ಅರಿವಿದೆ.
    ಲಿಂಗಾಂಗವೆರಡೂ ನಿಮ್ಮಲ್ಲಿ ಐಕ್ಯವಾದ ಪರಿ ಎಂತು ಹೇಳಾ ?
    ಸ್ವರವಿಡಿದು ಸಬುದ ಸಮರಸವಾದ ಪರಿ ಎಂತು ಹೇಳಾ ?
    `ದೇವ’ `ಭಕ್ತ’ ಎಂಬ ನಾಮ ಸೀಮೆಯಡಗಿ
    ಗುಹೇಶ್ವರಲಿಂಗದಲ್ಲಿ ತದುಗತವಾಗಿದ್ದ ಪರಿ ಎಂತು ಹೇಳಾ
    ಸಂಗನಬಸವಣ್ಣಾ ?/665

  666. ಕಾಯವಿಡಿದು ಸುಳಿದಾಡುವನ್ನಕ್ಕ,
    ಕರಣಂಗಳ ಮೀರುವರಾರೈ ಚೆನ್ನಬಸವಣ್ಣಾ ?
    ಕರಣಂಗಳಿಂದ ಕರ್ಮಂಗಳ ಮಾಡುತ್ತಿದ್ದಿತು.
    ಕರ್ಮವ ಕರ್ಮದಿಂದ ಅಳಿದು ಮಲವ ಜಲ ತೊಳೆದಂತೆ,-
    ನಾನು ಕಾಯದ ಕರ್ಮ ಮಾಡುವಲ್ಲಿ,
    ಜೀವವಿಕಾರ ಬಿಡಿಸಿದೆಯಲ್ಲಾ !
    ಗುಹೇಶ್ವರಲಿಂಗಕ್ಕೆ ಒಡಲಿಲ್ಲ ಎಂಬುದನು,
    ಅರುಹಿದೆಯಲ್ಲಾ ಚೆನ್ನಬಸವಣ್ಣಾ. /666

  667. ಕಾಯವಿಡಿದು ಹುಟ್ಟಿದಾತ ಕಾಲಾಗ್ನಿರುದ್ರನಾಗಲಿ,
    ಕಾಯವಿಡಿದು ಹುಟ್ಟಿದಾತ ಕಾಮಸಂಹಾರಿಯಾಗಲಿ,
    ಕಾಯವಿಡಿದು ಹುಟ್ಟಿದಾತ ಅನಾದಿ ಪರಮೇಶ್ವರನಾಗಲಿ,
    ಅರಿವು ಸಾಧ್ಯವಾಗದು ಆರಿಗೆಯು.
    ಗುಹೇಶ್ವರಲಿಂಗದಲ್ಲಿ-ನೀನು
    ಕಾಯವಿಡಿದು ಕಲ್ಪಿತವ ಹೊದ್ದೆಯೆಂಬುದು,
    ಕಾಣ ಬಂದಿತ್ತು ನೋಡಾ ಚೆನ್ನಬಸವಣ್ಣಾ. /667

  668. ಕಾಯವುಳ್ಳನ್ನಕ್ಕ ಶರಣರ ಸಂಗದಿಂದ ಅರಿಯಬೇಕು.
    ಜೀವವುಳ್ಳನ್ನಕ್ಕ ಅರಿವಿನ ಮುಖದಿಂದ ಹರಿಯಬೇಕು.
    ಅರಿವನ್ನಬರ ಗುಹೇಶ್ವರನೆಂಬ ಕುರುಹಾಯಿತ್ತು./668

  669. ಕಾಯವೆ ಕಡವಸವಾಗಿ, ಮನವೆ ಯೋಗವಟ್ಟಿಗೆಯಾಗಿ;
    ಇಂದ್ರಿಯವಿಸಂಚದಿಂದಾದ ಉಪಮೆಯಯ್ಯಾ !
    ಏನೆಂದೆನಬಹುದು ? ಎಂತೆಂದೆನಬಹುದು ?
    ಸುಖದ ಸೋಂಕಿನಲಾದ ಸಮಾದಿಯಯ್ಯಾ !
    ಅಂತರಂಗದ ಕಂಥೆ ಚಿಂತೆಗೆಟ್ಟುದು ಬ್ರಹ್ಮ,
    ಗುಹೇಶ್ವರಲಿಂಗದಲ್ಲಿ ಸಂಗವಯ್ಯಾ./669

  670. ಕಾಯವೆ ಸಕಲ, ಪ್ರಾಣವೆ ಸಕಲ-ನಿಷ್ಕಲ,
    ಭಾವವೆ ನಿಷ್ಕಲಲಿಂಗವಾಗಿದ್ದ ಮತ್ತೆ
    ಬೇರೆ ಆಯತ ಸ್ವಾಯತ ಸನ್ನಹಿತವೆಂಬುದಿಲ್ಲ ನೋಡಾ.
    ಶಿವ-ಶಕ್ತಿ (ಭಕ್ತಿ-ಶಕ್ತಿ ?) ಸಂಬಂಧವೆ ದೇಹದೇಹಿಗಳಾಗಿದ್ದ ಬಳಿಕ
    ಗುಹೇಶ್ವರಲಿಂಗದಲ್ಲಿ,
    ಬೇರೊಂದು ಕುರುಹುವಿಡಿದು ಅರಿಯಲೇಕಯ್ಯಾ ಚನ್ನಬಸವಣ್ಣಾ ?/670

  671. ಕಾಯವೆ ಸತ್ತು ಮಾಯವೆ ಉಳಿಯಿತ್ತು.
    ಎರಡರ ಸುಖದುಃಖವನರಿಯರು ನೋಡಾ.
    ಅದೇನೆಂದರಿಯರು ಅದೆಂತೆಂದರಿಯರು ನೋಡಾ.
    ಹಿರಿಯರೆಲ್ಲಾ ವೃಥಾಯ ಹೋದರು ನೋಡಾ.
    ಕಣ್ಣ ಮುಂದಣ ಕಪ್ಪ ಕಳೆಯಲರಿಯರು ನೋಡಾ.
    ಗುಹೇಶ್ವರನೆಂಬ ಶಬ್ದಕ್ಕೆ ನಾಚರು ನೋಡಾ !/671

  672. ಕಾಯವೆಂಬ ಕಂಥೆಯ ತೊಟ್ಟವರು,
    ಬ್ರಹ್ಮನಾಗಲಿ ವಿಷ್ಣುವಾಗಲಿ ಈಶ್ವರನಾಗಲಿ
    ಅಂಗಾಲ ಕಣ್ಣು ಮೈಯೆಲ್ಲಾ ಕಣ್ಣುಳ್ಳ ನಂದಿವಾಹನ ರುದ್ರನಾಗಲಿ
    ಗಂಗಾಧರನಾಗಲಿ ಗೌರೀಪತಿಯಾಗಲಿ
    ಮಾಯೆ ಕಾಡದೆ ಬಿಡಳು ನೋಡಾ !
    ಕಾಯವೆಂಬ ಕಂಥೆಯ ತೊಟ್ಟು ಕೈಲಾಸದಲ್ಲಿದ್ದಡೆ,
    ಅಗ್ಗದ ರುದ್ರರೆನ್ನ ನುಗ್ಗು ನುಗ್ಗು ಮಾಡಿ ನೆಲಕ್ಕೆ ಹಾಯ್ಕಿದಡೆ,
    ಬಿದ್ದು ಎದ್ದು ಬಂದು ಗುರುವಿನಿಂದ ಭವದ ಬಳ್ಳಿಯ ಹರಿದೆ ನೋಡಾ,
    ಹಿಂದಣ ಭವಕ್ಕಂಜಿ, ಮುಂದೆ ಪರಲೋಕದ ಗತಿಯನೊಲ್ಲೆನೆಂದು
    ಜರೆದು ಕಳೆದಡೆ-ಪುಣ್ಯಪಾಪಂಗಳೆರಡೂ ಹೊರಗಾದವು.
    ಗುಹೇಶ್ವರನೊಡ್ಡಿದ ಸಂಸಾರಸಾಗರವ ದಾಟಿ
    ನಿತ್ಯ ನಿಜನಿವಾಸದ ಮುಂಬಾಗಿಲ ಕಂಡು,
    ತಲೆವಾಗಿ ಹೊಕ್ಕೆನಯ್ಯಾ. /672

  673. ಕಾಯವೆಂಬ ಕದಳಿಯ ಹೊಕ್ಕು; ಪ್ರಾಣವೆಂಬ ಗಂಹರದಲ್ಲಿ;
    ಸಕಲೇಂದ್ರಿಯವೆಂಬ ಕೋಣೆ ಕೋಣೆಗಳಲ್ಲಿ ತಿರುಗಾಡುತ್ತ ಬರಲಾಗಿ
    ಮೇರು ಮಂದಿರದ ತ್ರಿಕೋಣೆಯಲ್ಲಿ ಬೆಳಗಾಯಿತ್ತು !
    ಗುಹೇಶ್ವರಲಿಂಗವೆಂಬುದು ರೂಪಾಯಿತ್ತು ಸಂಗನಬಸವಣ್ಣಾ./673

  674. ಕಾಯವೆಂಬ ಕಲ್ಪಿತವ ಕಳೆದು, ಪ್ರಾಣವೆಂಬ ಸೂತಕವ ಹರಿದು,
    ನಿಜಭಕ್ತಿ ಸಾಧ್ಯವಾದಲ್ಲದೆ ಲಿಂಗಪರಿಣಾಮವನೆಯ್ದಿಸಬಾರದು (ವೇದಿಸಬಾರದು ?)
    ಅನು ಮಾಡಿದೆ, ನೀವು ಕೈಕೊಳ್ಳಿ ಎಂದಡೆ ಅದೇ ಅಜ್ಞಾನ.
    ನಮ್ಮ ಗುಹೇಶ್ವರಲಿಂಗಕ್ಕೆ ಕುರುಹಳಿದು ನಿಜ ಉಳಿದವಂಗಲ್ಲದೆ
    ಪದಾರ್ಥವ ನೀಡಬಾರದು ಕಾಣಾ ಸಂಗನಬಸವಣ್ಣಾ. /674

  675. ಕಾಯವೆಂಬ ಗ್ರಾಮದೊಳಗೊಂದು ಉದರಾಗ್ನಿ
    ಹಸಿವು ತೃಷೆ ಅನ್ನ ಪಾನಾದಿಗಳಾಹುತಿಯೆಂಬ ಹೋಮದ ಕುಳಿಯಿದ್ದು,
    ನೇಮಾನೇಮಂಗಳನೆಲ್ಲ ಉಳಿದು ಆಹುತಿಯನಿಕ್ಕಿದರು.
    ಕೃಚ್ಚ್ರ ಚಾಂದ್ರಾಯಣ ಮೊದಲಾದ ಷೋಡಶ ಕರ್ಮವೆಂಬ ತಪ,
    ಎರಡುನೂರಹದಿನಾರು ತೆರೆದ ನೇಮ ಅರವತ್ತಾರು ಶೀಲ,
    ಎಂಬತ್ತೆಂಟು ವ್ರತವೆಂಬೀ ಚತುರ್ವಿಧ ಪ್ರಾಣಘಾತಕದೊಳಿಲ್ಲ
    ಗುಹೇಶ್ವರ ನಿಮ್ಮ ಶರಣ ಕಂಡೆಯ್ಯ./675

  676. ಕಾಯವೆಂಬ ದೇಗುಲದಲ್ಲಿ ಜೀವವೆಂಬ ದೇವರು,
    ಕರಣೇಂದ್ರಿಯಂಗಳೆಂಬ ಸ್ಥಾನಿಕರ ಕೈಯಲ್ಲಿ ಪೂಜಿಸಿಕೊಂಬುದು
    ಗುಹೇಶ್ವರಲಿಂಗಕ್ಕೆ ದೂರ !/676

  677. ಕಾಯವೆಂಬ ಮಹಾಕದಳಿಯ ಗೆಲಬಲ್ಲವರನಾರನೂ ಕಾಣೆ-
    ಸಂಸಾರವೆಂಬ ಸಪ್ತಸಮುದ್ರ ಬಳಸಿ ಬಂದಿಪ್ಪವು.
    ಭವವೆಂಬ ಮಹಾರಣ್ಯದೊಳು,
    ಪಂಚೇಂದ್ರಿಯವೆಂಬ ವಿಷದ ಮಳೆ ಸುರುವುತ್ತಿಪ್ಪುದು.
    ಕೋಪವೆಂಬ ಪಬರ್ುಲಿ ಮೊರೆವುತ್ತಿಪ್ಪುದು.
    ಅಷ್ಟಮದವೆಂಬ ಮದಗಜಂಗಳು ಬೀದಿವರಿಯುತ್ತಿಪ್ಪುವು.
    ಕಾಮವೆಂಬ ಕೆಂಡದ ಮಳೆ-ಅಡಿಯಿಡಬಾರದು.
    ಮತ್ಸರವೆಂಬ ಮಹಾಸರ್ಪಂಗಳು ಕಿಡಿಯನುಗುಳುತ್ತಿಪ್ಪವು.
    ಆಸೆಯೆಂಬ ಪಾಪಿಯ ಕೂಸು ಹಿಸಿಹಿಸಿದು ತಿನ್ನುತ್ತಿಪ್ಪುದು.
    ತಾಪತ್ರಯವೆಂಬ ಮೂರಂಬಿನಸೋನೆ ಸುರಿವುತ್ತಿಪ್ಪುದು.
    ಅಹಂಕಾರವೆಂಬ ಗಿರಿಗಳು ಅಡ್ಡ ಬಿದ್ದಿಪ್ಪವು.
    ಪಂಚಭೂತಗಳೆಂಬ ಭೂತಂಗಳ ಭಯ-ದಿಟ್ಟಿಸಬಾರದು.
    ಮಾಯೆಯೆಂಬ ರಕ್ಕಸಿ ಹಸಿಯ ತಿನುತಿಪ್ಪಳು
    ವಿಷಯವೆಂಬ ಕೂಪ-ಬಳಸಬಾರದು.
    ಮೋಹವೆಂಬ ಬಳ್ಳಿ-ಕಾಲ ಕುತ್ತಬಾರದು.
    ಲೋಭವೆಂಬ ಮಸೆದಡಾಯುಧ-ಒರೆ ಉಚ್ಚಬಾರದು.
    ಇಂತಪ್ಪ ಕದಳಿಯ ಹೊಗಲರಿಯದೆ
    ದೇವದಾನವ ಮಾನವರೆಲ್ಲರೂ, ಮತಿಗೆಟ್ಟು ಮರುಳಾಗಿ ಹೆರೆದೆಗೆದು ಓಡಿದರು.
    ಅಂಗಾಲ ಕಣ್ಣವರು ಮೈಯೆಲ್ಲ ಕಣ್ಣವರು ತಲೆಬಾಲಗೆಟ್ಟರು.
    ನಾನು ಈ ಕದಳಿಯ ಹೊಕ್ಕು ಹೊಯ್ದಾಡಿ,
    ಮುಳ್ಳು ಮಸೆ ಮುಟ್ಟದೆ ಕಳಿವರಿದು, ಗೆಲಿದು, ಉತ್ತರಿಸಿ;
    ಗುಹೇಶ್ವರನೆಂಬ ಲಿಂಗದ ನಿಜಸಮಾದಿಯಲ್ಲಿ ನಿಂದು,
    ಪರವಶನಾಗಿ ನಿರಾಳಕ್ಕೆ ನಿರಾಳವಾಗಿದ್ದೆನಯ್ಯಾ !/677

  678. ಕಾಯಶುದ್ಧವಾಯಿತ್ತೆಂದಡೆ ಲಿಂಗ ನೆಲೆಗೊಳ್ಳದು.
    ಜೀವ ಶುದ್ಧವಾಯಿತ್ತೆಂದಡೆ ಲಿಂಗ ನೆಲೆಗೊಳ್ಳದು.
    ಭಾವ ಶುದ್ಧವಾಯಿತ್ತೆಂದಡೆ ಲಿಂಗ ನೆಲೆಗೊಳ್ಳದು.
    ಗುಹೇಶ್ವರಲಿಂಗದಲ್ಲಿ ಶುದ್ಧ ಸುಯಿಧಾನಿಯಾದೆನೆಂದಡೆ
    ನಿಜವು ಸಾಧ್ಯವಾಗದು ಕೇಳು ಅವ್ವಾ./678

  679. ಕಾಯಸದೆ ನೆನೆದಡೆ, ಕಲ್ಪಿತವಿಲ್ಲದ ಪುರುಷ ಬಂದನೆನಗೆ ನೋಡಾ,
    ಕಲ್ಪಿತವಿಲ್ಲದೆ ನೆರೆದಡೆ ಭಾವಿಸಲಿಲ್ಲದ ಸುಖವು ದೊರಕಿತ್ತು ನೋಡಾ,
    ಗುಹೇಶ್ವರನೆಂಬ ಲಿಂಗವನರಿದ ಬಳಿಕ ನೀ ನಾನೆಂಬುದಿಲ್ಲ ನೋಡಾ./679

  680. ಕಾರ ಮೇಘವೆದ್ದು ಧಾರಾವರ್ತ ಸುರಿವಾಗ,
    ಧಾರುಣಿಯೆಲ್ಲವೂ ಮುಳುಗಿತ್ತು ನೋಡಾ !
    ಕಾರಿರುಳ ಕಣ್ಣೊಳಗೆ ಸೂರ್ಯರನೇಕರು ಮೂಡಿ
    ದಾರಿಯ ಹೊಲಬೆಂಬುದು ಕೆಟ್ಟಿತ್ತು ನೋಡಾ !
    ಪೂರಾಯ ಗಾಯದಲ್ಲಿ ಸಾಯೆ ಕೊಂದಲ್ಲದೆ
    ಸೂರಿಯ (ಸೂರ್ಯ?)ರನೇಕರು ಮಡಿಯರು ಗುಹೇಶ್ವರಾ./680

  681. ಕಾರಣವಿಲ್ಲ ಕಾರ್ಯವಿಲ್ಲ ಏತಕ್ಕೆ ಭಕ್ತರಾದೆವಿಂಬಿರೊ ?
    ಐವರ ಬಾಯ ಎಂಜಲನುಂಬಿರಿ, ಐವರು ಸ್ತ್ರೀಯರ ಮುಖವನರಿಯಿರಿ.
    ಮೂರು ಸಂಕಲೆಯ ಕಳೆಯಲರಿಯಿರಿ.
    ಕಾಯವಿಡಿದು ಲಿಂಗವ ಮುಟ್ಟಿಹೆನೆಂಬ, ಭ್ರಮೆಯ ನೋಡಾ ಗುಹೇಶ್ವರಾ./681

  682. ಕಾರಿಯ (ಕಾರ್ಯ?)ವನರಿಯರು ಕೊರತೆಯನರಿಯರು.
    ವಾಯಕ್ಕೆ ಬಳಲುವರು ತಾವು ಜ್ಞಾನಿಗಳೆಂದು.
    ತಾಯಿಯಿಲ್ಲದ ಮೂಲನ ತಲೆವಿಡಿಯಲರಿಯದೆ
    ದೇವರಾದೆವೆಂದಡೆ ನಾಚಿದೆನು ಗುಹೇಶ್ವರಾ./682

  683. ಕಾಲ ಸಡಗರ ಕೈಯಲದೆ ಕೈಯ ಸಡಗರ ಕಂಗಳಲದೆ.
    ಅದೇನು ಕಾರಣವೆಂದಡೆ, ಕಂಗಳೇ ಕಾರಣವಾಗಿ,
    ಒಂದು ಮಾತಿನೊಳಗೆ ವಿಚಾರವದೆ; ಕನ್ನಡಿಯೊಳಗೆ ಕಾರ್ಯವದೆ,-
    ಇದೇನು ಕಾರಣ ತಿಳಿಯಲರಿಯರು ಹೇಳಾ ಗುಹೇಶ್ವರಾ ?/683

  684. ಕಾಲ,-ಕಾಲವರವತ್ತು; ಕಾಲ ಕಾಲವನೆ ಅರಿವುದು.
    ಕಾಲ-ಕಾಲವೈವತ್ತು; ಕಾಲ ಕಾಲವನೆ ಅರಿವುದು.
    ಕಾಲ-ಕಾಲ ನಾಲ್ವತ್ತು; ಕಾಲ ಕಾಲವನೆ ಅರಿವುದು.
    ಕಾಲ-ಕಾಲ ಮೂವತ್ತು; ಕಾಲ ಕಾಲವನೆ ಅರಿವುದು.
    ಕಾಲ-ಕಾಲ ಇಪ್ಪತ್ತು; ಕಾಲ ಕಾಲವನೆ ಅರಿವುದು.
    ಕಾಲ-ಕಾಲ ಹತ್ತು; ಕಾಲ ಕಾಲವನೆ ಅರಿವುದು.
    ಇಂತೀ ಕಾಲಂಗಳ ಕಾಲವನರಿವಡೆ
    ಗುಹೇಶ್ವರಲಿಂಗದಲ್ಲಿ ಹೇಳು ಚೆನ್ನಬಸವಣ್ಣಾ ?/684

  685. ಕಾಲಚಕ್ರದ ವಚನ :
    ಏಕಂ ಏಕವಾದ ವಸ್ತುವ ಲೋಕಾಲೋಕಂಗಳರಿಯವು
    ಸ್ಥೂಲ ಸೂಕ್ಷ್ಮವೆನುತಿರ್ಪರೆಲ್ಲರೂ,
    ಆತನೀತ ಬೇರೆ ಮತ್ತೊಬ್ಬಾತನೆಂಬ ಭ್ರಮೆಯಲ್ಲಿ
    ಭೂತಪ್ರಾಣಿಗಳವರೆತ್ತ ಬಲ್ಲರು ಆತನ ಘನವ.
    ಚಿಟುಕು ಮುನ್ನೂರರವತ್ತು ಕೂಡಿದಡೆ ಒಂದು ವಿಘಳಿಗೆ,
    ಆ ವಿಘಳಿಗೆ ಅರುವತ್ತು ಕೂಡಿದೊಡೆ ಒಂದು ಘಳಿಗೆ,
    ಆ ಘಳಿಗೆ ಅರುವತ್ತು ಕೂಡಿದೊಡೆ ಒಂದು ದಿನ.
    ದಿನ ಮೂವತ್ತು ಕೂಡಿದೊಡೆ ಒಂದು ಮಾಸ
    ಮಾಸ ಹನ್ನೆರಡು ಕೂಡಿದೊಡೆ ಒಂದು ವರುಷ
    ವರುಷ ಅರುವತ್ತು ಕೂಡಿದೊಡೆ ಒಂದು ಸಂವತ್ಸರ-
    ಇಂತೀ ಕಾಲಚಕ್ರಂಗಳು ಈ ಪರಿದಿಯಲ್ಲಿ ತಿರುಗಿ ಬರುತ್ತಿಹವು ಕಾಣಿರೆ.
    ನಾಲ್ಕು ಯುಗಂಗಳು ಬೇರೆ ಬೇರೆ ಕಟ್ಟಿದ ಕಟ್ಟಳೆಯೊಳು,
    ತಿರುಗಿ ಬರುತ್ತಿಹವು ಕಾಣಿರೆ.
    ಕೃತಯುಗ ಹದಿನೇಳು ಲಕ್ಷವು ಇಪ್ಪತ್ತೆಂಟುಸಾವಿರವರ್ಷ ವರ್ತಿಸಿ ನಿಂದಿತ್ತು.
    ತ್ರೇತಾಯುಗ ಹನ್ನೆರಡು ಲಕ್ಷವು ತೊಂಬತ್ತಾರುಸಾವಿರ ವರ್ಷ ವರ್ತಿಸಿ ನಿಂದಿತ್ತು.
    ದ್ವಾಪರಯುಗ ಎಂಟು ಲಕ್ಷವು ಅರುವತ್ತುನಾಲ್ಕುಸಾವಿರ ವರ್ಷ ವರ್ತಿಸಿ ನಿಂದಿತ್ತು.
    ಕಲಿಯುಗ ನಾಲ್ಕುಲಕ್ಷವು ಮೂವತ್ತೆರಡುಸಾವಿರ ವರ್ಷ ವರ್ತಿಸಿ ನಿಂದಿತ್ತು.
    -ಇಂತೀ ನಾಲ್ಕು ಯುಗಂಗಳು ಕೂಡಿ ಒಂದಾಗಿ ಮೇಳಯಿಸಿದೊಡೆ,
    ನಾಲ್ವತ್ತು ಮೂರು ಲಕ್ಷವು ಇಪ್ಪತ್ತುಸಾವಿರ ವರುಷ ಕಟ್ಟಳೆಯಾಯಿತ್ತು.
    ಈ ನಾಲ್ಕುಯುಗಂಗಳು ಇಪ್ಪತ್ತೊಂದು ಬಾರಿ ತಿರುಗಿದಡೆ
    ಸುರಪತಿಗೆ ಪರಮಾಯು, ಬ್ರಹ್ಮಂಗೆ ಜಾವ,
    ಅಷ್ಟಾಶಿತಿ ಸಹಸ್ರ ಋಷಿಯರು ಸಾವಿರಬಾರಿ ತಿರುಗಿದಡೆ
    ಬ್ರಹ್ಮಂಗೆ ಆಯುಷ್ಯ ನೂರಪ್ಪುದು, ವಿಷ್ಣುವಿಂಗೆ ಜಾವಪ್ಪುದು.
    ಆ ವಿಷ್ಣುವಿನ ಒಂದು ದಿನ(ಜಾವ?)ದೊಳಗೆ
    ನಾಲ್ಕು ಬಾರಿ ಹುಟ್ಟಿ ನಾಲ್ಕು ಬಾರಿ ಹೊಂದುವ ಬ್ರಹ್ಮನು,
    ಆ(ದಿ) ವಿಷ್ಣುವಿನ ಒಂದು ದಿನವಪ್ಪುದು, (ಅಂಥ ವಿಷ್ಣುವಿನ ಒಂದು ದಿನದಲ್ಲಿ)
    ಸಮಸ್ತ ಈರೇಳು ಭುವನಂಗಳೆಲ್ಲ ಭೂತಸಂಹಾರ ,
    ಅಂಥಾ ಭೂತಸಂಹಾರಗಳು
    ಹದಿನೆಂಟು ಲಕ್ಷವು ಇಪ್ಪತ್ತೆಂಟುಸಹಸ್ರ ವರುಷ ತಿರುಗಲು
    ಪೃಥ್ವಿಯೆಲ್ಲಾ ಜಲಪ್ರಳಯ.
    ಅಂಥಾ ಜಲಪ್ರಳಯವೆಂಟು ಬಾರಿ ತಿರುಗಿದಡೆ ವಿಷ್ಣುವಿಂಗೆ ಮರಣ,
    ರುದ್ರಂಗೆ ನಿಮಿಷ.
    ಅಂಥಾ ರುದ್ರನ ಒಂದು ನಿಮಿಷದಲ್ಲಿ
    ಅತಳ ವಿತಳ ಸುತಳ ಮಹೀತಳ ರಸಾತಳ ತಳಾತಳ ಪಾತಾಳ-
    ಇಂತು ಕೆಳಗೇಳು ಭುವನಂಗಳು,
    ಮೇಲೆ, ಸತ್ಯಲೋಕ ಜನರ್ಲೊಕ ತಪೋಲೋಕ ಮಹರ್ಲೊಕ, ಸ್ವರ್ಲೊಕ
    ಭುವರ್ಲೊಕ ಭೂಲೋಕ ಮೊದಲಾಗಿ-ಇಂತೀ ಲೋಕಾಲೋಕಂಗಳೆಲ್ಲ ಮುಳುಗಿ
    ಮಹಾಪ್ರಳಯವಾದಲ್ಲಿ ರುದ್ರಲೋಕವೊಂದುಳಿಯೆ, ಆ ರುದ್ರಂಗೆ ಒಂದುದಿನ.
    ಅಂಥಾದಿನ ಮುನ್ನೂರರವತ್ತು ಕೂಡಿದಡೆ ಒಂದು ವರುಷ.
    ಅಂಥಾ ವರುಷ ಶತಕೋಟಿ ಕೂಡಿದಡೆ ರುದ್ರಂಗೆ ಪರಮಾಯು.
    ಅಂಥಾ ರುದ್ರರು ಅನೇಕರು ಹೋದರಲ್ಲಾ,
    ಮತ್ತಂ ಪಶುಪತಿ, ಶಂಕರ, ಶಶಿಧರ, ಸದಾಶಿವ, ಗೌರೀಪತಿ, ಮಹಾದೇವ
    ಈಶ್ವರರೆಂಬವರು
    ಆ ದಿನದಲ್ಲಿ ಇವರು ಪ್ರಮಥಗಣೇಶ್ವರರು, ತಪೋರಾಜ್ಯವನುಂಬರು.
    ತಪಕ್ಕೆ ಬಿಜಯಂಗೈವರು ಆ ರುದ್ರರು.
    ಲೋಕಾಲೋಕಂಗಳು ಕೂಡಿ ಭೂತ ವರ್ತಿಸುತ್ತಿದ್ದಿತ್ತೊಂದು ಕೆಲವು ಕಾಲ,
    ಅದು ತೊಡೆದು ಹೋಯಿತ್ತು.
    ಬಳಿಕ ಶೂನ್ಯವರ್ತಿಸುತ್ತಿದ್ದಿತ್ತೊಂದು ಕೆಲವು ಕಾಲ,
    ಅದು ತೊಡೆದು ಹೋಯಿತ್ತು
    ಬಳಿಕ ಕಾಳಾಂಧರ ವರ್ತಿಸುತ್ತಿದ್ದಿತ್ತೊಂದು ಕೆಲವು ಕಾಲ,
    ಅದು ತೊಡೆದು ಹೋಯಿತ್ತು-ಬಳಿಕ ಮಹಾ ಪ್ರಕಾಶದ ಬೆಳಗು.
    ಇಂತಹ ಕಾಲಂಗಳು ಈ ಪರಿಯಲ್ಲಿ ತಿರುಗಿ ಬರುತ್ತಿಹವು ಕಾಣಿರೆ !
    ಅಂತಹ ಕಾಲಂಗಳೂ ಅರಿಯವು, ಅಂತಹ ದಿನಂಗಳೂ ಅರಿಯವು
    ಅಂತಹ ದೇವತೆಗಳೂ ಅರಿಯರು,-
    ಅಪ್ರಮಾಣ ಅಗಮ್ಯ ಅಗೋಚರ ಉಪಮಿಸಬಾರದು
    ಅಂತಿಂತೆನಲಿಲ್ಲ ಗುಹೇಶ್ವರಲಿಂಗ ನಿರಂಜನ ನಿರಾಳ ! ನಿರಾಮಯ !/685

  686. ಕಾಲನ ಕೊಂದಾತನಲ್ಲದೆ ಶುದ್ಧಪ್ರಸಾದಿಯಲ್ಲ.
    ಕಾಮನ ತಿಂದಾತನಲ್ಲದೆ ಸಿದ್ಧಪ್ರಸಾದಿಯಲ್ಲ.
    ತ್ರಿಪುರವ ಸುಟ್ಟಾತನಲ್ಲದೆ ಪ್ರಸಿದ್ಧಪ್ರಸಾದಿಯಲ್ಲ.
    ಕೆಸರಿನಲ್ಲಿ ಕಿಚ್ಚನಿಕ್ಕಿ ಬಸುರ ಬಡಿದುಕೊಂಡಾತಗಲ್ಲದೆ
    ಈ ತ್ರಿವಿಧ ಪ್ರಸಾದವಿಲ್ಲ ಕಾಣಾ ಗುಹೇಶ್ವರಾ./686

  687. ಕಾಲಾಗ್ನಿಯೆಂಬ ಕಾಡುಗಿಚ್ಚೆದ್ದು ಲೋಕವ ಸುಟ್ಟಿತ್ತೆಂದಡೆ
    ಶಿವಶರಣರಂಜರು.
    ಶಶಿಧರ ಮುನಿದು ಬಿಸುಗಣ್ಣ ತೆಗೆದಡೆ
    ಶಿವಶರಣರದ ಮನಸಿಗೆ ತಾರರು.
    ಅಸಮಾಕ್ಷಲಿಂಗವ ತಮ್ಮ ವಶಕ್ಕೆ ತಂದ ಶರಣರು,
    ಮುನಿದು ಉರಿಗಣ್ಣ ತೆಗೆದಡೆ,
    ಚತುರ್ದಶ ಭುವನದೊಳಗೆ ಆರೂ ಗುರಿಯಲ್ಲ.
    ಗುಹೇಶ್ವರಾ ನಿಮ್ಮ ಅರಿವಿನ ಬೆಳಗು ಬಿಸಿಯಾದಡೆ
    ಸಿದ್ಧರಾಮಯ್ಯದೇವರೆಂಬ ಶಿವಯೋಗಿಯ
    ಹೃದಯವೆ ಗುರಿ./687

  688. ಕಾಲಿಲ್ಲದ ಗಮನ, ಕೈಯಿಲ್ಲದ ಸೋಂಕು, ಬಾಯಿಲ್ಲದ ರುಚಿ,
    ಭಾವವೆ ಕರ್ಪರವಾಗಿ `ಪರಮ ದೇಹಿ’ ಎಂದು ಬೇಡುವ
    ಪರಮನ ತೋರಯ್ಯಾ ಗುಹೇಶ್ವರಾ./688

  689. ಕಾಲು ಕರ ಕಾಯ ಜೀವದೊಳಗಾಡುವ
    ಭಾವವೇ ದೈವವೆ ?
    `ನಾನು’ ಎಂಬುದ ತಾನು ಅಳಿದಲ್ಲಿ ಗುಹೇಶ್ವರಲಿಂಗವು ತಾನೆ !/689

  690. ಕಾಲು ಮುಖವ ತೊಳೆದುಕೊಂಡ ಬಳಿಕ ಮಜ್ಜನಕ್ಕೆರೆವಿರಿ,
    ತಾನು ಲಿಂಗವೊ ? ತನ್ನ ಕೈಯದು ಲಿಂಗವೊ ?
    ಆವುದು ಲಿಂಗ ಹೇಳಿರೆ ?
    ಲಿಂಗಸ್ಥಲವನರಿಯದೆ,
    ಎರಡರಿಂದ ಕೆಟ್ಟರು ಗುಹೇಶ್ವರಾ./690

  691. ಕಾಲುಗಳೆಂಬುವು ಗಾಲಿ ಕಂಡಯ್ಯಾ
    ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ.
    ಬಂಡಿಯ ಹೊಡೆವರೈವರು ಮಾನಿಸರು, ಒಬ್ಬರಿಗೊಬ್ಬರು ಸಮವಿಲ್ಲಯ್ಯ.
    ಆದರಿಚ್ಛೆಯನರಿದು ಹೊಡೆಯದಿರ್ದಡೆ,
    ಅದರಚ್ಚು ಮುರಿಯಿತ್ತು, ಗುಹೇಶ್ವರಾ./691

  692. ಕಾಲೇ ಕಂಬಗಳಾದವೆನ್ನ, ದೇಹವೇ ದೇಗುಲವಾಯಿತ್ತಯ್ಯಾ !
    ಎನ್ನ ನಾಲಗೆಯೆ ಗಂಟೆ, ಶಿರ ಸುವರ್ಣದ ಕಳಸ-ಇದೇನಯ್ಯಾ !
    ಸರವೆ ಲಿಂಗಕ್ಕೆ ಸಿಂಹಾಸನವಾಗಿದ್ದಿತ್ತಯ್ಯಾ.
    ಗುಹೇಶ್ವರಾ ನಿಮ್ಮ ಪ್ರಾಣಲಿಂಗಪ್ರತಿಷ್ಠೆ,
    ಪಲ್ಲಟವಾಗದಂತಿದ್ದೆನಯ್ಯಾ/692

  693. ಕಾಳರಕ್ಕಸಿಗೊಬ್ಬ ಮಗ ಹುಟ್ಟಿ,
    ಕಾಯದ ರಾಶಿಯ ಮೊಗೆವುತ್ತ ಸುರಿವುತ್ತಲಿದ್ದನಯ್ಯಾ !
    ಕಾಳರಕ್ಕಸಿಯ ಮೂಗು ಮೊಲೆಯ ಕೊಯ್ದು,
    ದೇವಕನ್ನಿಕೆಯ ಮೊರೆಹೊಕ್ಕು,
    ಬಾಯ ತುತ್ತೆಲ್ಲವನು ಉಣಲೊಲ್ಲದೆ ಕಾರಿದಡೆ,
    ಆತನೆ ಭಕ್ತನೆಂದೆಂಬೆ ಗುಹೇಶ್ವರಾ./693

  694. ಕಿಚ್ಚಿಗೆ ಮೈಹುಗುಳು ಹುಟ್ಟಿತ್ತು,
    ಉದಕಕ್ಕೆ ಚಳಿಯಾಗಿ ಸ್ಫಟಿಕ ಗಿರಿಯಲ್ಲಿ ಹಣ್ಣು ಹುಟ್ಟಿತ್ತು !
    ಅಟ್ಟಿತ್ತೊಂದು ತಲೆ ಹೋ ! ಹಣ್ಣನದ (ನೆಯ್ದೆ ?) ನುಂಗಿತ್ತು ರೆ !
    ಹೆಂಡತಿಯಿಲ್ಲದ ಗಂಡಂಗೆ ಅರುಮಾನಿಸ ಮಕ್ಕಳು.
    ಅಖಂಡಿತ ಗುಹೇಶ್ವರಾ ಹಾ ನಿರಾಳರೆ. /694

  695. ಕಿಚ್ಚಿನ ಕೆಂಡದಂತೆ ಹೊರೆಯಲ್ಲಿಪ್ಪೆಯಯ್ಯಾ,
    ಬೆಂಕಿಯ ಬೆಳಗ ಕಂಡೆ-ಇದು ಕಾರಣ,
    ನಿಮ್ಮ ಕಂಡೆ ಪರಮಜ್ಞಾನಿ ಗುಹೇಶ್ವರಾ./695

  696. ಕಿಚ್ಚಿನ ದೇವನು, ಕೆಂಡದ ದೇವನು,
    ಮಾರಿಯ ದೇವನು, ಮಸಣದ ದೇವನು,
    ತಿರುಕ ಗೊರವನೆಂದು ಅಲ್ಲಲ್ಲಿ ಒಂದೊಂದನಾಡುತ್ತಿಪ್ಪರಯ್ಯಾ.
    ನಾ ನಿಮ್ಮ ಪೂಜಿಸಿ ನಷ್ಟಸಂತಾನವಾಗಿ,
    ಬಟ್ಟಬಯಲಲ್ಲಿ ಬಿದ್ದು ಕೆಟ್ಟೆನು ಗುಹೇಶ್ವರಾ./696

  697. ಕಿಚ್ಚಿನೊಳಗೆ(ನೊಡನೆ?) ಹೋರಿದ ಹುಳ್ಳಿಯಂತಾದೆನಯ್ಯಾ.
    ಬೆಂದ ನುಲಿಯ ಸಂದಿಕ್ಕಿ ಮತ್ತೊಂದ ಮಾಡಬಾರದಯ್ಯಾ.
    ಗುಹೇಶ್ವರಾ-ನಿಮ್ಮ ನಿಲವಿನ ಪರಿ ಇಂತುಟಯ್ಯಾ./697

  698. ಕಿಚ್ಚು ಬಯಲೆಂದಡದು ನಿರವಯವಕೆ ಹತ್ತಿ ಹೊತ್ತಿದುದುಂಟೆ ?
    ಅರಿವು ನಿಜವೆಂದಡೆ ಅಡಗುವುದಕ್ಕೊಂದು ನಾಮ ಉಂಟು.
    ಅಗ್ನಿರೂಪಿನಲ್ಲಿ ಹುಟ್ಟಿ ಆ ರೂಪ ದಗ್ಧವ ಮಾಡಿದಲ್ಲದೆ
    ತನ್ನ ಹೊದ್ದಿಗೆ ಕೆಡದು.
    ಆ ಉಭಯವನರಿವನ್ನಬರ ಕೈಯ ಕುರುಹು,
    ಅರಿವನ ಜ್ಞಾನ ಪರಿಪೂರ್ಣವಾಗಿರಬೇಕು.
    ನಮ್ಮ ಗುಹೇಶ್ವರಲಿಂಗದಲ್ಲಿ ಆ ಉಭಯವ ತಿಳಿವನ್ನಬರ
    ತನ್ನ ಹಿಂಗಿರಬೇಕು ಕಾಣಾ, ಎಲೆ ಅಂಬಿಗರ ಚೌಡಯ್ಯ./698

  699. ಕಿರಿಯರಾದಡೇನು ? ಹಿರಿಯರಾದಡೇನು ?
    ಅರಿವಿಂಗೆ ಹಿರಿದು ಕಿರಿದುಂಟೆ ?
    ಆದಿ ಅನಾದಿ ಇಲ್ಲದಂದು,
    ಅಜಾಂಡ ಬ್ರಹ್ಮಾಂಡ ಕೋಟಿಗಳುದಯವಾಗದಂದು
    ಗುಹೇಶ್ವರಲಿಂಗದಲ್ಲಿ ನೀನೊಬ್ಬನೆ ಮಹಾಜ್ಞಾನಿ ಎಂಬುದು
    ಕಾಣಬಂದಿತ್ತು ಕಾಣಾ ಚೆನ್ನಬಸವಣ್ಣಾ./699

  700. ಕೀರ್ತಿವಾರ್ತೆಗೆ ಮಾಡುವಾತ ಭಕ್ತನಲ್ಲ.
    ಪರರ ಬೋದಿಸಿಕೊಂಡುಂಬಾತ ಜಂಗಮವಲ್ಲ.
    ತ್ರಿಸಂಧ್ಯಾಕಾಲವೆಂದು ಪ್ರಸಾದವನಿಕ್ಕುವಾತ ಗುರುವಲ್ಲ.
    ತ್ರಿಸಂಧ್ಯಾಕಾಲವೆಂದು ಪ್ರಸಾದವ ಕೊಂಬಾತ ಶಿಷ್ಯನಲ್ಲ.
    ಪರಗಮನವಿರಹಿತ ಜಂಗಮ, ಕಾಲಕರ್ಮವಿರಹಿತ ಪ್ರಸಾದಿ,
    ಪ್ರಸಾದವ ಇಕ್ಕಿಯೂ ಇಕ್ಕದಾತ ಗುರು, ಕೊಂಡೂ ಕೊಳ್ಳದಾತ ಶಿಷ್ಯ.
    ಆ ಭಕ್ತನಲ್ಲಿಯೆ ನಿಕ್ಷೇಪಿಸಿ ನಿರ್ಗಮನಿಯಾಗಿ ಹೋದಾತ ಜಂಗಮ.
    ಆ ಜಂಗಮಕ್ಕೆ ಅರ್ಥಪ್ರಾಣಾಬಿಮಾನವಿಡಿದು ಮಾಡುವಾತ ಭಕ್ತ-
    ಇಂತೀ ಚತುರ್ವಿಧದನುವನು, ಗುಹೇಶ್ವರಲಿಂಗದನುವನು
    ವೇಷಧಾರಿಗಳೆತ್ತ ಬಲ್ಲರು ಬಸವಣ್ಣನೊಬ್ಬನೆ ಬಲ್ಲನಲ್ಲದೆ./700

  701. ಕುಂಡಲಿಗನ ಕೀಟದಂತೆ, ಮೈ ಮಣ್ಣಾಗದಂತೆ
    ಇದ್ದೆಯಲ್ಲಾ ಬಸವಣ್ಣಾ.
    ಜಲದೊಳಗಣ ತಾವರೆಯಂತೆ ಹೊದ್ದಿಯೂ ಹೊದ್ದದಂತೆ
    ಇದ್ದೆಯಲ್ಲಾ ಬಸವಣ್ಣಾ.
    ಜಲದಿಂದಲಾದ ಮೌಕ್ತಿಕದಂತೆ,
    ಜಲವು ತಾನಾಗದಂತೆ ಇದ್ದೆಯಲ್ಲಾ ಬಸವಣ್ಣಾ.
    ಗುಹೇಶ್ವರಲಿಂಗದ ಆಣತಿವಿಡಿದು,
    ತನುಗುಣ ಮತ್ತರಾಗಿದ್ದ ಐಶ್ವರ್ಯಾಂಧಕರ
    ಮತವನೇನ ಮಾಡಬಂದೆಯಯ್ಯಾ, ಸಂಗನ ಬಸವಣ್ಣಾ ?/701

  702. ಕುರುಹುಳ್ಳನ್ನಕ್ಕ ಸಮಯದ ಹಂಗು,
    ಅರಿದಹೆನೆಂಬನ್ನಕ್ಕ ಆತ್ಮದ ಹಂಗು,
    `ಅಲ್ಲ’ `ಅಹುದು’ ಎಂಬನ್ನಕ್ಕ ಎಲ್ಲರ ಹಂಗು,
    ಗುಹೇಶ್ವರನೆಂಬನ್ನಕ್ಕ
    ಲಿಂಗದ ಹಂಗು ಬೇಕು ಘಟ್ಟಿವಾಳಣ್ಣಾ./702

  703. ಕುರೂಪಿ ಸುರೂಪಿಯ ನೆನೆದಡೆ ಸುರೂಪಿಯಪ್ಪನೆ ?
    ಆ ಸುರೂಪಿ ಕುರೂಪಿಯ ನೆನೆದಡೆ ಕುರೂಪಿಯಪ್ಪನೆ ?
    ಧನವುಳ್ಳವರ ನೆನೆದಡೆ ದರಿದ್ರ (ದಾರಿದ್ರ್ಯ ?) ಹೋಹುದೆ ?
    ಪುರಾತರನು ನೆನೆದು ಕೃತಾರ್ಥರಾದೆವೆಂಬರು,
    ತಮ್ಮಲ್ಲಿ ಭಕ್ತಿ ನಿಷ್ಠೆಯಿಲ್ಲದವರ ಕಂಡಡೆ ಮೆಚ್ಚನು ಗುಹೇಶ್ವರನು./703

  704. ಕುಲದಲದಿಕನು ಹೋಗಿ ಹೊಲೆಗೇರಿಯಲ್ಲಿ ಮನೆಯ ಕಟ್ಟಿದಡೆ,
    ಕುಲ ಕೆಡದಿಪ್ಪ ಈ ಪರಿಯ ನೋಡಾ !
    ಆತನ ಕುಲದವರೆಲ್ಲರು ಮುಖವ ನೋಡಲೊಲ್ಲದಡೆ
    ಕುಲವುಳ್ಳವರೆಲ್ಲರೂ ಕೈವಿಡಿದರು.
    ಕುಲಗೆಟ್ಟವನೆಂದು ತಿಳಿದು ವಿಚಾರಿಸಲು,
    ಹೊಲೆಗೆಟ್ಟು ಹೋಯಿತ್ತು ಕಾಣಾ ಗುಹೇಶ್ವರಾ./704

  705. ಕುಲದೊಳಗೆ ಹುಟ್ಟಿ ಕುಲವ ಬೆರಸದೆ
    ತಮ್ಮ ನಿಲವ ಬಲಿದಿಪ್ಪವರು ಇನ್ನಾರು ಹೇಳಾ ?
    ಹಬ್ಬಿದ ಮೂರು ಬೆಟ್ಟಕ್ಕೆ ತನ್ನ ಮನವ ಹಬ್ಬಲೀಯದೆ
    ಲಿಂಗ ಜಂಗಮಕ್ಕೆ ಸವೆಸಿ ಸ್ವಯಲಿಂಗವಪ್ಪರಿನ್ನಾರು ಹೇಳಾ ?
    ಸ್ವಯೋ ಲಿಂಗ ಸ್ವಯೋ ಶರಣ ಸ್ವಯೋ ಭೋಗವೆಂದುದಾಗಿ,
    ಗುಹೇಶ್ವರಾ-ನಿಮ್ಮ ಶರಣ ಸಂಗನಬಸವಣ್ಣಂಗೆ
    ನಮೋ ನಮೋ ಎಂಬೆನು./705

  706. ಕುಲಮದ ಛಲಮದ ವಿದ್ಯಾಮದದವರ ತೋರದಿರಾ.
    ಅವರ ಅರೂಢಪದವಿಯನೆನಗೆ ತೋರದಿರಾ.
    ಅವರ ಗರುವ ಗಂಬಿರವನೆನಗೆ ತೋರದಿರಾ.
    ಶಮೆದಮೆಯುಳಿದು ದಶಮುಖ ನಿಂದು
    ಲಿಂಗದಲ್ಲಿ ಲೀಯವಾದವರನಲ್ಲದೆ, ಎನಗೆ ತೋರದಿರಾ ಗುಹೇಶ್ವರಾ./706

  707. ಕೂಡಲಿಲ್ಲದ ಅಗಲಲಿಲ್ಲದ ಘನವ,
    ಕೂಡುವ ಪರಿ ಎಂತವ್ವಾ ?
    ಗುಹೇಶ್ವರಲಿಂಗವ ಬೇರೆ ಮಾಡಿ
    ಬೆರಸಬಾರದು ಕೇಳಾ ಕೆಳದಿ./707

  708. ಕೂರಹ ಮುಟ್ಟದೆ, ಕೂದಲು ಹರಿಯದೆ, ಬೋಳಾಗಬೇಕು.
    ಕಾಯ ಬೋಳೋ ? ಕಪಾಲ ಬೋಳೊ ?
    ಹುಟ್ಟುವುದು ಬೋಳೊ ? ಹುಟ್ಟದೆ ಹೋಹುದು ಬೋಳೊ ?
    ಗುಹೇಶ್ವರಾ./708

  709. ಕೂರ್ಮನ ಶಿಶುವಿನ ಸ್ನೇಹದಂತಿರಬೇಡಾ ಸಂಗನಬಸವಣ್ಣಾ ?
    ಕಾಕಪಿಕಸಂಧಾನದಂತಿರಬೇಡಾ ಸಂಗನಬಸವಣ್ಣಾ ?
    ಕೊಂಬ ತಪ್ಪದೆ ಹಾಯ್ವ ಕಪಿಯಂತಿರಬೇಡಾ ಸಂಗನಬಸವಣ್ಣಾ ?
    ನೀರು ಕ್ಷೀರವ ಭೇದಿಸಿ ತೆಗೆವ ಹಂಸೆಯಂತಿರಬೇಡಾ ಸಂಗನಬಸವಣ್ಣಾ ?
    ಗುಹೇಶ್ವರಲಿಂಗದಲ್ಲಿ ಅವಧಾನ ತಪ್ಪಿ,
    ಮರಳಿ ಅರಸಿದಡುಂಟೆ ಹೇಳಾ ಸಂಗನಬಸವಣ್ಣಾ ? /709

  710. ಕೃತಯುಗದಲ್ಲಿ ನಾನು ಭಕ್ತಿ ಕಾರಣ
    ಸ್ಥೂಲಕಾಯನೆಂಬ ಗಣೇಶ್ವರನಾಗಿರ್ದೆನಯ್ಯಾ.
    ತ್ರೇತಾಯುಗದಲ್ಲಿ ನಾನು ಭಕ್ತಿ ಕಾರಣ
    ಶೂನ್ಯಕಾಯನೆಂಬ ಗಣೇಶ್ವರನಾಗಿರ್ದೆನಯ್ಯಾ.
    ದ್ವಾಪರದಲ್ಲಿ ನಾನು ಭಕ್ತಿ ಕಾರಣ
    ಅನಿಮಿಷನೆಂಬ ಗಣೇಶ್ವರನಾಗಿರ್ದೆನಯ್ಯಾ.
    ಕಲಿಯುಗದಲ್ಲಿ ನಾನು ಭಕ್ತಿ ಕಾರಣ
    ಅಲ್ಲಮಪ್ರಭುವೆಂಬ ಗಣೇಶ್ವರ (ಜಂಗಮ ?)ನಾಗಿರ್ದೆ
    ಕಾಣಾ ಗುಹೇಶ್ವರಾ. /710

  711. ಕೃತಯುಗದಲ್ಲಿ ನೀನು
    ಸ್ಕಂದನೆಂಬ ಗಣೇಶ್ವರನಾಗಿರ್ದುದ ಬಲ್ಲೆ ನಾನು.
    ತ್ರೇತಾಯುಗದಲ್ಲಿ ನೀನು
    ನೀಲಲೋಹಿತನೆಂಬ ಗಣೇಶ್ವರನಾಗಿರ್ದುದ ಬಲ್ಲೆ ನಾನು.
    ದ್ವಾಪರದಲ್ಲಿ ನೀನು
    ವೃಷಭನೆಂಬ ಗಣೇಶ್ವರನಾಗಿರ್ದುದ ಬಲ್ಲೆ ನಾನು.
    ಕಲಿಯುಗದಲ್ಲಿ ನೀನು
    ಬಸವನೆಂಬ ಗಣೇಶ್ವರನಾಗಿ, ಸರ್ವಾಚಾರ ಸಂಪನ್ನನಾಗಿ,
    ಭಕ್ತಿಜ್ಞಾನವ ಕಂದೆರವೆಯ ಮಾಡಿ,
    ಶಿವಾಚಾರದ ಘನದ ಬೆಳವಿಗೆಯ ಮಾಡಿ,
    ಶಿವಭಕ್ತಿಯ ಧ್ವಜವನೆತ್ತಿಸಿ ಮರ್ತ್ಯಲೋಕದೊಳಗೆ
    ಹರಹಿದ ಭೇದವ ಭೇದಿಸಿ ನೋಡಿ ಆನು ಅರಿದೆ.
    ಗುಹೇಶ್ವರ ಸಾಕ್ಷಿಯಾಗಿ ನಿನ್ನ ಮಹಾತ್ಮೆಗೆ
    ನಮೋ ನಮೋ ಎನುತಿರ್ದೆನು ಕಾಣಾ ಸಂಗನಬಸವಣ್ಣಾ. /711

  712. ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದಡೆ
    ಆಗಲಿ ಮಹಾಪ್ರಸಾದವೆಂದೆನಯ್ಯಾ
    ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದಡೆ
    ಆಗಲಿ ಮಹಾಪ್ರಸಾದವೆಂದೆನಯ್ಯಾ.
    ದ್ವಾಪರದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ ಬುದ್ಧಿಯ ಕಲಿಸಿದಡೆ
    ಆಗಲಿ ಮಹಾಪ್ರಸಾದವೆಂದೆನಯ್ಯಾ.
    ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದಡೆ
    ಆಗಲಿ ಮಹಾಪ್ರಸಾದವೆಂದೆನಯ್ಯಾ
    ಗುಹೇಶ್ವರಾ ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾನು ಬೆರಗಾದೆನು./712

  713. ಕೃತ್ಯಕ್ಕೆ ಬಾರದ ಲಿಂಗವ ಕೃತ್ಯಕ್ಕೆ ತಂದವರಾರೊ ?
    ವಾಙ್ಮನಕ್ಕಗೋಚರ ಲಿಂಗ, ಬೊಟ್ಟಿಡಲೆಡೆದೆರಹಿಲ್ಲದ ಲಿಂಗ !
    ಪರಾತ್ಪರಗುರು ಕೊಟ್ಟ, ಶಿಷ್ಯ ತೆಗೆದುಕೊಂಡ ಎಂಬ
    ರಚ್ಚೆಯ ಭಂಡರ ನೋಡಾ ಗುಹೇಶ್ವರಾ. /713

  714. ಕೆಂಡದ ಗಿರಿಯ ಅರಗಿನ ಬಾಣದಲೆಚ್ಚಡೆ
    ಮರಳಿ ಆ ಬಾಣವನರಸಲುಂಟೆ ?
    ಮಂಜಿನ ಶಿವಾಲಯಕ್ಕೆ ಬಿಸಿಲ ಕಳಸವುಂಟೆ ?
    ಗುಹೇಶ್ವರನೆಂಬ ಲಿಂಗವನರಿದ ಬಳಿಕ
    ಮತ್ತೆ ಮರಳಿ ನೆನೆಯಲುಂಟೆ ? /714

  715. ಕೆಂಡದ ಗಿರಿಯ ಮೇಲೊಂದು, ಅರಗಿನ ಕಂಬವಿದ್ದಿತ್ತು ನೋಡಯ್ಯಾ.
    ಅರಗಿನ ಕಂಬದ ಮೇಲೆ ಹಂಸೆಯಿದ್ದಿತ್ತು.
    ಕಂಭ ಬೆಂದಿತ್ತು ಹಂಸೆ ಹಾರಿತ್ತು ಗುಹೇಶ್ವರಾ/715

  716. ಕೆಂಡದ ಮಳೆ ಕರೆವಲ್ಲಿ ಉದಕವಾಗಿರಬೇಕು.
    ಜಲಪ್ರಳಯವಾದಲ್ಲಿ ವಾಯುವಿನಂತಿರಬೇಕು.
    ಮಹಾಪ್ರಳಯವಾದಲ್ಲಿ ಆಕಾಶದಂತಿರಬೇಕು.
    ಜಗತ್ಪ್ರಳಯವಾದಲ್ಲಿ ತನ್ನ ತಾ ಬಿಡಬೇಕು,
    ಗುಹೇಶ್ವರನೆಂಬ ಲಿಂಗ ತಾನಾಗಿರಬೇಕು./716

  717. ಕೆಟ್ಟ ಒಡವೆಯನರಸ ಹೋಗಿ,
    ಆ ಕೆಟ್ಟ ಒಡವೆಯ ಕಂಡ ಬಳಿಕ, ಆರನೂ ಕೇಳಲಿಲ್ಲ ಹೇಳಲಿಲ್ಲ,
    ಅದು ಮುನ್ನಲಿದ್ದ ಹಾಂಗೆ ಆಯಿತ್ತು.
    ಅಂತು ಶರಣನು ಆ ಪರಿಯಲೆ ತನ್ನ ಸ್ವಯಾನುಭಾವದಿಂದ
    ತನ್ನ ನಿಜವ ತಾ ಕಂಡು ಸೈವೆರಗಾಗಿರಲು,
    ಅದನ್ನು ಅಜ್ಞಾನಿಗಳು ಬಲ್ಲರೆ ಗುಹೇಶ್ವರಾ ?/717

  718. ಕೆಟ್ಟುದನರಸ ಹೋಗಿ ತಾನೆ ಕೆಟ್ಟಿತ್ತು.
    ಹೇಳಲೆಂತೂ ಬಾರದು ಕೇಳಲೆಂತೂ ಬಾರದು.
    ಎಂತಿರ್ದುದಂತೆ !
    ಸಹಜ ಸ್ವಾನುಭಾವದ ಸಮ್ಯಕ್ ಜ್ಞಾನವ, ಅಜ್ಞಾನಿ ಬಲ್ಲನೆ
    ಗುಹೇಶ್ವರಾ ?/718

  719. ಕೆರೆ ದೇಗುಲಂಗಳೆಲ್ಲವು ಹಿಂದಣ ಅಡಿವಜ್ಜೆಗೆ ಒಳಗು.
    ಕರ್ಮಕಾಂಡ ಯೋಗಂಗಳೆಲ್ಲವು ಭವದ ತೆಕ್ಕೆಗೆ ಒಳಗು.
    ಹಿಂದಣ ಮುಂದಣ ಸಂದನಳಿದು
    ಗುಹೇಶ್ವರಲಿಂಗದಲ್ಲಿ ಸಲೆ ಸಂದಿರಬೇಕು ಸಿದ್ಧರಾಮಯ್ಯಾ./719

  720. ಕೆರೆಯ ಕಟ್ಟಿಸುವ ಒಡ್ಡನ ಪ್ರತಾಪವನೇನೆಂಬೆನಯ್ಯಾ.
    ನೆಲನನಗಿದು ಜಲವ ಮೊಗೆದಿಹೆನೆಂಬ ಬಳಲಿಕೆಯ ನೋಡಾ.
    ಒಂದು ಕಲ್ಲನು ಕಡಿದು ಮತ್ತೊಂದು ಕಲ್ಲಿಗೆ
    ಭೋಗವ ಕೊಟ್ಟಿಹೆನೆಂಬ ಅಜ್ಞಾನವಿದೇನೊ ?
    ಗುಹೇಶ್ವರಾ ಈ ಇರವಿನ ಪರಿಗೆ ಬೆರಗಾದೆನು ! /720

  721. ಕೆರೆಯಲುಂಡು ತೊರೆಯ ಹೊಗಳುವರು.
    ಅತ್ಯುತ್ಕಟದ ಪರಬ್ರಹ್ಮವನೆ ನುಡಿವರು.
    ಸಹಜ ಪಿನಾಕಿಯ ಬಲೆಯಲ್ಲಿ ಸಿಲುಕಿ
    ಭವವ ಹರಿಯಲರಿಯರು.
    ರುದ್ರನ ಛತ್ರವನುಂಡು ಇಲ್ಲವೆಯ ನುಡಿವ ಹಿರಿಯರಿಗೆ
    ಮಹದ ಮಾತೇಕೋ ಗುಹೇಶ್ವರಾ?/721

  722. ಕೆಲಬರು ಕಂಡೆವೆಂಬರು, ಕೆಲಬರು ಕಾಣೆವೆಂಬರು.
    ತಾರಾಮಂಡಲವೆ ? ಸೂರ್ಯಮಂಡಲವೆ ?
    ಗುಹೇಶ್ವರನಿಪ್ಪುದು ಚಂದ್ರಗಿರಿಪಟ್ಟಣವು ! /722

  723. ಕೆಳಗೇಳು ಭುವನಂಗಳಿಲ್ಲದಂದು, ಮೇಲೇಳು ಭುವನಂಗಳಿಲ್ಲದಂದು,-
    ಅಂದು ಆದ ಗುರು, ಅಂದು ಆದ ಲಿಂಗ, ಅಂದು ಆದ ಜಂಗಮ,
    ಅಂದು ಆದ ಪ್ರಸಾದ, ಅಂದು ಆದ ಪಾದೋದಕ.
    ಇಂದಿನದಾವುದೂ ಹೊಸತಿಲ್ಲಯ್ಯಾ.
    ಶಶಿಧರಂಗೆ ವೃಷಭನಾಗಿದ್ದಂದು
    ಗುಹೇಶ್ವರನ ಶರಣ ಸಂಗನಬಸವಣ್ಣನಂದೆ ಸಾಹಿತ್ಯನು./723

  724. ಕೆಳಗೇಳು ಲೋಕಂಗಳಿಲ್ಲದ ಮುನ್ನ, ಮೇಲೇಳು ಲೋಕಂಗಳಿಲ್ಲದ ಮುನ್ನ
    ಸಹಸ್ರ (ಸಮಸ್ತ ?) ಬ್ರಹ್ಮಾಂಡಗಳಿಲ್ಲದ ಮುನ್ನ, ಅಲ್ಲಿಂದತ್ತತ್ತ;
    ಬಸವಣ್ಣಾ ನೀನು ಲಿಂಗಭಕ್ತ, ಜಂಗಮಪ್ರಾಣಿ !
    ಶಶಿಧರನ ಶರಣಂಗೆ ವೃಷಧರ ಸ್ವಾಯತವಾಗಿ,
    ನಮ್ಮ ಗುಹೇಶ್ವರಲಿಂಗಕ್ಕೆ ಸಂಗನಬಸವಣ್ಣನೆ ಭಕ್ತನೆಂದರಿದು
    ನಾನು ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು. /724

  725. ಕೈಯಲ್ಲಿ ಕಟ್ಟುವರು ಕೊರಳಲ್ಲಿ ಕಟ್ಟುವರು,
    ಮೈಯಲ್ಲಿ ಕಟ್ಟುವರು ಮಂಡೆಯಲ್ಲಿ ಕಟ್ಟುವರು,
    ಮನದಲ್ಲಿ ಲಿಂಗವ ಕಟ್ಟರಾಗಿ !
    ಆದ್ಯರು ಹೋದರೆಂದು ವಾಯಕ್ಕೆ ಸಾವರು.
    ಸಾವುದು ವಿಚಾರವೆ ಗುಹೇಶ್ವರಾ ?/725

  726. ಕೈಯಲ್ಲಿ ಕರಸ್ಥಲ ಮನದಲ್ಲಿ ಪರಸ್ಥಲ,
    ತನುವೆಲ್ಲ ಹುಸಿಸ್ಥಲ-ಶರಣನೆಂತೆಂಬೆ?
    ಮಾತಿನಂತುಟಲ್ಲ ಕ್ರಿಯಾಸಮ (ಕ್ರಿಯಾಗಮ?) ಸ್ಥಲ.
    ಊತ್ಪತ್ಯ-ಸ್ಥಿತಿ-ಲಯರಹಿತ ನಿಜಸ್ಥಲ,
    ಗುಹೇಶ್ವರನೆಂಬ ಲಿಂಗೈಕ್ಯವೈಕ್ಯ./726

  727. ಕೈಯಲ್ಲಿ ಡಾಣೆ ಮನದಲ್ಲಿ ಕ್ರೋಧ ವಚನದಲ್ಲಿ ಕಿಂಕಲ,
    ಲಿಂಗದ ವಾರ್ತೆ ನಿನಗೇಕೆ ಹೇಳಾ ಬಸವಾ ?
    ಜಂಗಮವೆ ಲಿಂಗವೆಂಬ ಶಬ್ದಸಂದೇಹಸೂತಕಿ ನೀನು,
    ಸಜ್ಜನ ಸದ್ಭಕ್ತಿಯ ಮಾತು ನಿನಗೇಕೆ ಹೇಳಾ ಬಸವಾ ?
    ಕಬ್ಬುನದ ರೂಪು ಪರುಷವ ಮುಟ್ಟಿದಡೆ ಹೊನ್ನಾಯಿತ್ತಲ್ಲದೆ
    ಪರುಷವಪ್ಪುದೆ ಹೇಳಾ ಬಸವಾ ?
    ಗುಹೇಶ್ವರನೆಂಬ ಪರುಷದ ಪುತ್ಥಳಿಯನರಿಯಬಲ್ಲಡೆ
    ನಿನ್ನ ನೀನೆ ತಿಳಿದು ನೋಡಾ ಸಂಗನಬಸವಣ್ಣಾ. /727

  728. ಕೈಲಾಸಕ್ಕೆ ಹೋದವರೆಲ್ಲ ಕೈಸೆರೆಯಾದರು.
    ಲಿಂಗದಲ್ಲಿ ಲೀಯವಾದವರೆಲ್ಲ ಬಂಧನಕ್ಕೊಳಗಾದರು.
    ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯದವರೆಲ್ಲ
    ಎಡೆಯಾಡುತ್ತಿದ್ದರು.
    ಗುಹೇಶ್ವರಾ ನಿಮ್ಮ ಶರಣ ಸಂಗನಬಸವಣ್ಣ
    ಜಂಗಮಪ್ರಸಾದಿಯಾದನಾಗಿ ಸ್ವಯಲಿಂಗವಾದ !/728

  729. ಕೈಲಾಸವೆಂಬುದೊಂದು ಬೆಳ್ಳಿಯ ಬೆಟ್ಟ,
    ಅಲ್ಲಿದ್ದಾತ ರುದ್ರನೊಬ್ಬ.
    ಆ ಬೆಟ್ಟಕ್ಕೂ ಆ ರುದ್ರಂಗೆಯೂ
    ಪ್ರಳಯವುಂಟೆಂಬುದ
    ಗುಹೇಶ್ವರಾ ನಿಮ್ಮ ಶರಣ ಬಲ್ಲನು/729

  730. ಕೊಂಕಣ ದ್ವೀಪದಲ್ಲಿ ಒಂದು ಕಪಿ ಹುಟ್ಟಿತ್ತು
    ತಪವ ಮಾಡುವ ಸಪ್ತ ಋಷಿಯರ ನುಂಗಿತ್ತು
    ನವನಾಥಸಿದ್ಧರ ತೊತ್ತಳದುಳಿಯಿತ್ತು,
    ಅರುಹಿರಿಯರ ತಲೆಯ ಮೆಟ್ಟಿ ಅರಿಯಿತ್ತು.
    ಕಪಿಜನ ವೈರಿ ಸರ್ಪನ ಹೇಳಿಗೆಯಲ್ಲಿ ನಿದ್ರೆಗೆಯ್ಯಿತ್ತು.
    ಯೋಗಿಗಳ ಭೋಗಿಗಳ ಕೊಲ್ಲದ ಕೊಲೆಯ ಕೊಂದಿತ್ತು.
    ಕಾಮನ ಅರೆಯ ಮೆಟ್ಟಿ ಕೂಗಿತ್ತು,
    ಕೋಳಿಯ ಹಂಜರನನಾಸಿಕ ಬೆಕ್ಕ ನುಂಗಿತ್ತು,
    ಕೋಳಿಯ ಅರ್ಕಜದ ಅರಿವನರಿವ ಅರುಹಿರಿಯರ ಮಿಕ್ಕು ;
    ಭಾವಸೊಕ್ಕನುಂಡು ಕೊಕ್ಕರನಾಯಿತ್ತು.
    ಹಿಂದಿರ್ದ ಕೋಳಿಯ ಕೊಕ್ಕರನ ಕಪಿಯ, ಭಾವವ ಅರಿಯದಿರ್ದ ಕಾರಣ-
    ಕೆದರಿದ ಚರಣ ಉಡುಗಿ, ಮರಣವರಿಯದೆ, ಕರಣದೇಹತ್ವವಿಲ್ಲದೆ,
    ಲಿಂಗೈಕ್ಯ-ತಾನೆ ಪ್ರಾಣ ಪುರುಷ.
    ಇದನರಿದು ನುಂಗಿದಾತನೆ ಪರಮಶಿವಯೋಗಿ-
    ಭಂಗವರಿಯದ, ಜನನದ ಹೊಲಬರಿಯದ, ಭಾವದ ಜೀವವರಿಯದ !
    -ಇದು ಕಾರಣ ನಿಮ್ಮ ಶರಣನು ಲಿಂಗಸ್ವಯಶಕ್ತಿಶರಣ ತಾನೆ. /730

  731. ಕೊಂಡ ಆಹಾರದ ರಸವ ಕಟ್ಟಿ,
    ಯೋಗಿಗಳಾದೆವೆಂಬ
    ಭಂಡರು ನೀವು ಕೇಳಿರೊ.
    ಜೋಡು ದೇಹದ ಮಲಿನವ ಕಟ್ಟಿ ಮಾಯೆಯ ಗೆದ್ದಿಹೆವೆಂಬರು.
    ಬಿಂದುವಿನ ಸಂಚವನಿವರೆತ್ತ ಬಲ್ಲರು ?
    ಮನದ ಮಲಿನವೆ ಮಾಯೆ, ಮನದ ಸಂಚವೆ ಬಿಂದು.
    ಇಂತಪ್ಪ ಬಿಂದುವ ಕಟ್ಟಿ ಮಾಯೆಯ ಗೆಲಲರಿಯದವರು
    ಅವರೆತ್ತಣ ಯೋಗಿಗಳು ಗುಹೇಶ್ವರಾ ?/731

  732. ಕೊಟ್ಟ ಕುದುರೆಯನೇರಲರಿಯದೆ
    ಮತ್ತೊಂದು ಕುದುರೆಯನೇರ ಬಯಸುವರು,
    ವೀರರೂ ಅಲ್ಲ, ದಿರರೂ ಅಲ್ಲ, ಇದು ಕಾರಣ-
    ನೆರೆ ಮೂರು ಲೋಕವೆಲ್ಲವೂ ಹಲ್ಲಣವ ಹೊತ್ತುಕೊಂಡು,
    ತೊಳಲುತ್ತ ಇದ್ದಾರೆ.
    ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರು ?/732

  733. ಕೋಣನ ಕೊಂಬಿನ ತುದಿಯಲ್ಲಿ, ಏಳುನೂರೆಪ್ಪತ್ತು ಸೇದೆಯ ಬಾವಿ.
    ಬಾವಿಯೊಳಗೊಂದು ಬಗರಿಗೆ, ಬಗರಿಗೆಯೊಳಗೊಬ್ಬ ಸೂಳೆ ನೋಡಯ್ಯಾ.
    ಆ ಸೂಳೆಯ ಕೊರಳಲ್ಲಿ ಏಳುನೂರೆಪ್ಪತ್ತು
    ಆನೆ ನೇರಿತ್ತ ಕಂಡೆ ಗುಹೇಶ್ವರಾ./733

  734. ಕೋಣನನೂ ಕುದುರೆಯನೂ; ಹಾವನೂ ಹದ್ದನೂ;
    ಮೊಲನನೂ ನಾಯನೂ, ಇಲಿಯನೂ ಬೆಕ್ಕನೂ,
    ಹುಲಿಯನೂ ಹುಲ್ಲೆಯನೂ-ಮೇಳೈಸುವಂತೆ
    ಮೇಳವಿಲ್ಲದವನ ಒಕ್ಕತನ, ಅಳಿಯ ಬಾಳುವೆ,
    ಕಾಡಬೆಕ್ಕಿಂಗೆ ತುಯ್ಯಲನಿಕ್ಕುವಂತೆ !-ಕೇಳು ಗುಹೇಶ್ವರಾ
    ನಿರಾಳ ಬೋಳಿಂಗೆ ತೊಂಡಿಲ ಮುಡಿಸುವಂತೆ/734

  735. ಕೋಪ-ತಾಪವ ಬಿಟ್ಟು ಭ್ರಾಂತಿಭ್ರಮೆಯಂ ಬಿಟ್ಟು
    ಜಂಗಮವಾಗಬೇಕು ಕಾಣಿರೆ ಮರುಳುಗಳಿರಾ
    ಇಂತೀ ಕಡುಲೋಭದ ರುಚಿ ಹಿಂಗಿ
    ಜಂಗಮವಾದಲ್ಲದೆ, ಭವ ಹಿಂಗದು ಕಾಣಾ ಗುಹೇಶ್ವರ./735

  736. ಕೋಪತಾಪವೆಂಬುದು ಅರಿವಿನೊಳಗೆ,
    ಭಕ್ತಿ ಯುಕ್ತಿ ಎಂಬುದು ನಿತ್ಯದೊಳಗೆ.
    ಭಾವದ ಬಗೆಗೆ ಬಣ್ಣವಿಟ್ಟುಕೊಂಡಡೆ
    ನಿರ್ಭಾವಿಕಂಗೆ ಅದು ಸಹಜವೆ ?
    ಬಂದ ಶರಣರ ನಿಲವನರಿದು,
    ಸಂದುಸಂಶಯವಳಿದು ನಂಬದಿದ್ದಡೆ,
    ಹಿಂದು ಮುಂದಾಗಿ ಹೋಹನು ಕಾಣಾ
    ನಮ್ಮ ಗುಹೇಶ್ವರಲಿಂಗವು. /736

  737. ಕ್ರಿಯಾದೀಕ್ಷೆ ಮಂತ್ರದೀಕ್ಷೆ ಹೀನರಿಗೆ
    ಜಂಗಮ ಪಾದೋದಕ ಪ್ರಸಾದವ ಕೊಡುವನೊಬ್ಬ ಜಂಗಮದ್ರೋಹಿ ನೋಡ !
    ಗುಹೇಶ್ವರಲಿಂಗವೆ ! /737

  738. ಕ್ರಿಯಾಮಥನವಿಲ್ಲದೆ ಕಾಣಬಂದುದೆ ಇಕ್ಷುವಿನೊಳಗಣ ಮಧುರ ?
    ಕ್ರಿಯಾಮಥನವಿಲ್ಲದೆ ಕಾಣಬಂದುದೆ ತಿಲದೊಳಗಣ ತೈಲ ?
    ಕ್ರಿಯಾಮಥನವಿಲ್ಲದೆ ಕಾಣಬಂದುದೆ ಕ್ಷೀರದೊಳಗಣ ಘೃತ ?
    ಕ್ರಿಯಾಮಥನವಿಲ್ಲದೆ ಕಾಣಬಂದುದೆ ಕಾಷ್ಠದೊಳಗಣ ಅಗ್ನಿ ?
    ಇದು ಕಾರಣ,
    ನಮ್ಮ ಗುಹೇಶ್ವರಲಿಂಗವ ತನ್ನೊಳರಿದೆನೆಂಬ ಮಹಂತಂಗೆ
    ಸತ್ಕ್ರಿಯಾಚರಣೆಯೆ ಸಾಧನ ಕಾಣಿಭೋ. /738

  739. ಕ್ಷೀರಕ್ಕೆ ತವರಾಜವ ಹೊಯ್ದಲ್ಲಿ, ಬೇರೆ ಲೇಸು ಕಷ್ಟವನರಸುವರೆ ?
    ಅಂಗಕ್ಕೆ ತಿಮಿರವಾದಲ್ಲಿ ಅಂಗುಲ ಮುಟ್ಟಿ ತಿಮಿರದ ಅಂಗವ ಕೆಡಿಸಿದಡೆ,
    ಅಂಗಕ್ಕೆ ಮಿಥ್ಯವುಂಟೆ ?
    ಎನ್ನಂಗವು ತಾನಾದ ಕಾರಣ, `ನೀನು’ ಎಂಬ ನಾಮ ಬೇರಿಲ್ಲ
    ಗುಹೇಶ್ವರಲಿಂಗವು ನೀನಾದ ಕಾರಣ./739

  740. ಕ್ಷೀರಸಾಗರದೊಳಗಿರ್ದ ಹಂಸೆಗೆ ಹಾಲ ಬಯಸಲುಂಟೆ ?
    ಪುಷ್ಪದೊಳಗಿರ್ದ ತುಂಬಿಗೆ ಪರಿಮಳವನರಸಲುಂಟೆ ?
    ತಾವು ಲಿಂಗದೊಳಗಿರ್ದು,
    ಬೇರೆ ಇತರ ಕಾಮ್ಯಾರ್ಥದೊಳಗಿರ್ಪ
    ಭ್ರಾಂತರನೇನೆಂಬೆನಯ್ಯಾ ಗುಹೇಶ್ವರಾ./740

  741. ಕ್ಷೀರಸಾಗರದೊಳಗಿರ್ದು ಆಕಳ ಚಿಂತೆಯೇಕೆ ?
    ಮೇರುಮಂದಿರದೊಳಗಿರ್ದು ಜರಗ ತೊಳೆವ ಚಿಂತೆಯೇಕೆ ?
    ಶ್ರೀಗುರುವಿನೊಳಗಿರ್ದು ತತ್ವವಿದ್ಯೆಯ ಚಿಂತೆಯೇಕೆ ?
    ಪ್ರಸಾದದೊಳಗಿರ್ದು ಮುಕ್ತಿಯ ಚಿಂತೆಯೇಕೆ ?
    ಕರಸ್ಥಲಕೆ ಲಿಂಗ ಬಂದ ಬಳಿಕ
    ಇನ್ನಾವ ಚಿಂತೆ ಹೇಳಾ, ಗುಹೇಶ್ವರಾ./741

  742. ಖಂಡಾಖಂಡ ಸಂಯೋಗವಿಲ್ಲದ ಅಖಂಡಿತನ ನಿಲವು,
    ತನ್ನಲ್ಲಿ ಅಲ್ಲದೆ ಮತ್ತೆಲ್ಲಿಯೂ ಇಲ್ಲ.
    ಬಯಲ ಹಿರಿಯರು ಬಯಲನೆ ಅರಸುವರು.
    ಅಲ್ಲಿ ಉಂಟೆ ಹೇಳಾ ಗುಹೇಶ್ವರಾ?/742

  743. ಖಂಡಿತವಿಲ್ಲಾಗಿ ಸರ್ವಾಂಗವೆಲ್ಲವೂ ನಾಸಿಕವಾಯಿತ್ತು.
    ತಾನಲ್ಲದೆ ಅನ್ಯ ವಾಸನೆ ಇಲ್ಲವಾಗಿ,
    ಅಲ್ಲಿಯೆ ಮಹತ್ತಪ್ಪ ಪೃಥ್ವಿಯಡಗಿತು.
    ಖಂಡಿತವಿಲ್ಲಾಗಿ ಸರ್ವಾಂಗವೆಲ್ಲವೂ ಜಿಹ್ವೆಯಾಯಿತ್ತು.
    ತಾನಲ್ಲದೆ ಅನ್ಯ ರುಚಿ ಇಲ್ಲವಾಗಿ,
    ಅಲ್ಲಿಯೆ ಮಹತ್ತಪ್ಪ ಅಪ್ಪು ಅಡಗಿತ್ತು.
    ಖಂಡಿತವಿಲ್ಲಾಗಿ ಸರ್ವಾಂಗವೆಲ್ಲವೂ ನೇತ್ರವಾಯಿತ್ತು.
    ತಾನಲ್ಲದೆ ಅನ್ಯ ರೂಪಿಲ್ಲವಾಗಿ,
    ಅಲ್ಲಿಯೆ ಮಹತ್ತಪ್ಪ ಅಗ್ನಿ ಅಡಗಿತ್ತು.
    ಖಂಡಿತವಿಲ್ಲಾಗಿ ಸರ್ವಾಂಗವೆಲ್ಲವೂ ತ್ವಕ್ಕಾಯಿತ್ತು.
    ತಾನಲ್ಲದೆ ಅನ್ಯ ಸೋಂಕಿಲ್ಲವಾಗಿ,
    ಅಲ್ಲಿಯೆ ಮಹತ್ತಪ್ಪ ವಾಯು ಅಡಗಿತ್ತು.
    ಖಂಡಿತವಿಲ್ಲಾಗಿ ಸರ್ವಾಂಗವೆಲ್ಲವೂ ಶ್ರೋತ್ರವಾಯಿತ್ತು.
    ತಾನಲ್ಲದೆ ಅನ್ಯ ಶಬ್ದವಿಲ್ಲಾಗಿ,
    ಅಲ್ಲಿಯೆ ಮಹತ್ತಪ್ಪ ಆಕಾಶವಡಗಿತ್ತು.
    ಇಂತು ಪಂಚಭೂತಂಗಳಡಗಿದಡೆ,
    ಪಂಚಬ್ರಹ್ಮಮಯವಾಯಿತ್ತು.
    ಅದರೊಳಗೆ ಜಗತ್ತಡಗಿದ ಭೇದವದೆ.
    ಪಂಚವರ್ಣಾತೀತವಾಗಿ ಮಹತ್ತನೊಳಕೊಂಡ
    ಶರಣನ ಭೇದವನು ಏನೆಂದುಪಮಿಸುವೆನಯ್ಯಾ ಗುಹೇಶ್ವರಾ. /743

  744. ಖೇಚರಪವನದಂತೆ ಜಾತಿಯೋಗಿಯ ನಿಲುವು !
    ಮಾತಿನೊಳು ಧಾತು ನುಂಗಿ ಉಗುಳದಿನ್ನೆಂತೊ ?
    ಭೂಚಕ್ರವಳಯವನು ಆಚಾರ್ಯ ರಚಿಸಿದ.
    ಗ್ರಾಮವೆಲ್ಲವ ಸುಟ್ಟು, ನೇಮ ನಾಮವ ನುಂಗಿ
    ಗ್ರಾಮದ ಪ್ರಭುವನೆ ನುಂಗಿ,
    `ಗುಹೇಶ್ವರ ಗುಹೇಶ್ವರ’ ಎನುತ ನಿರ್ವಯಲಾಗಿತ್ತು./744

  745. ಖೇಚರರಾಗಲಿ ಭೂಚರರಾಗಲಿ ಲಾಂಛನಧಾರಿಯಾಗಲಿ,
    ಮರಣವಾರಿಗೂ ಮನ್ನಣೆಯಿಲ್ಲ!
    ಸನಕ ಸನಂದಾದಿಗಳಿಗೂ ಮರಣ ಮನ್ನಣೆಯಿಲ್ಲ.
    ಇದು ಕಾರಣ – ಗುಹೇಶ್ವರಾ ನಿಮ್ಮ ಶರಣರು
    ಕಾಲನ ಬಾರಿಗೆ ಕಲ್ಪಿತರಾಗರು !/745

  746. ಗಂಗಾದೇವಿ ಮುಂಡೆಯಾದಳು,
    ಗಾರೀದೇವಿ ಓಲೆಯ ಕಳೆದಳು.
    ಚಂದ್ರಸೂರ್ಯರಿಬ್ಬರೂ ನೀರಿಳಿದರು.
    ವಾಯುದೇವ ವಿಮಾನವ ಹೊತ್ತ,
    ವಾಸುದೇವ ತಲೆಗೂಳ್ಳಿಯನಿರಿದ.
    ಅಲ್ಲಿಂದತ್ತ ಗುಹೇಶ್ವರ ಸತ್ತನೆಂಬ ಸುದ್ದಿ ! /746

  747. ಗಂಗಾದೇವಿಯ ಹುಳಿಯ ಕಾಸಿ, ಗೌರಿದೇವಿಯ ಕೂಳನಟ್ಟು,
    ಭಕ್ತನ ಬಾಡನಟ್ಟು, ದೇವನ ಸಾಸವೆಗಲಸಿ,
    ಬ್ರಹ್ಮನಡ್ಡಣಿಗೆ, ವಿಷ್ಣು ಪರಿಯಾಣ, ರುದ್ರನೋಗರ,
    ಈಶ್ವರ ಮೇಲೋಗರ, ಸದಾಶಿವ ತುಪ್ಪ;
    ಉಣಲಿಕ್ಕಿ ಕೈಕಾಲು ಮುರಿಯಿತ್ತು ಗುಹೇಶ್ವರಾ./747

  748. ಗಂಗೆಯ ತಡಿಯಲೊಂದು ಐವಾಗಿಲಪಟ್ಟಣದ ಕಾಲುವಳ್ಳಿಯಲ್ಲಿ
    ಹುಟ್ಟಿ ಬೆಳೆದೆ ನಾನು.
    ತರುವಕ್ಕಳ ಕೂಡಿ ನೀರಾಟವ ಹೊಕ್ಕು,
    ಉಟ್ಟುವ ಹೋಗಾಡಿಹಳೆಂದು
    ಬಾಯ ಬಾಯ ಕುಟ್ಟಿ,
    ಬ್ರಹ್ಮ ಪಾಶವೆಂಬ ಕಿರಿಗೆಯನುಗಿದುಕೊಂಡಳು ನಮ್ಮವ್ವೆ.
    ಇಂತಪ್ಪ ತಾಯಿತಂದೆಯರ ಕೂಡೆ ಮುನಿದು ಹೋಗಿ,
    ಗುಹೇಶ್ವರನಲ್ಲಯ್ಯನ ಮೊರೆಹೊಕ್ಕೆ.
    ಇನ್ನು ಮರಳಿ ಬಂದು ಆ ಕಿರಿಗೆಯನುಟ್ಟೆನಾದಡೆ
    ನಿಮ್ಮಾಣೆ ನಿಮ್ಮ ಪ್ರಮಥರಾಣೆ./748

  749. ಗಂಡಂಗಿಂದ ಹೆಂಡತಿ ಮುನ್ನವೆ ಹುಟ್ಟಿ,
    ಗಂಡಂಗಿಂದ ಕಿರಿಯಳಾದಳು
    ಆ ಹೆಂಡತಿಯೆ ಒಡಹುಟ್ಟಿದಳಾದಳೆಂಬುದ ಕೇಳಿ,
    ಆ ಗಂಡ ಸಂಗವ ಮಾಡಿದಡೆ
    ಇಬ್ಬರಿಗೊಂದು ಮಗು ಹುಟ್ಟಿತ್ತಲ್ಲಾ!
    ಆ ಹುಟ್ಟಿದ ಮಗುವ ತಾಯಿ ಮುದ್ದಾಡಿಸಿದಡೆ
    ತಾಯ ತಕ್ಕೈಸಿತ್ತಿದೇನು ಹೇಳಾ?
    ತಾಯಿಯೆದ್ದು ಪತಿಭಕ್ತಿಯ ಮಾಡಿತ್ತ ಕಂಡು
    ಗುಹೇಶ್ವರಲಿಂಗಕ್ಕೆ ಭಕ್ತಿ ಪರಿಣಾಮವಾಯಿತ್ತು./749

  750. ಗಗನ ಮಂಡಳದ ಸೂಕ್ಷ್ಮನಾಳದಲ್ಲಿ
    `ಸೋಹಂ ಸೋಹಂ’ ಎನುತ್ತಿರ್ದತ್ತದೊಂದು ಬಿಂದು,
    ಅಮೃತದ ವಾರಿದಿಯ ದಣಿಯುಂಡ ತೃಪ್ತಿಯಿಂದ.
    ಗುಹೇಶ್ವರಾ ನಿಂದ(ನಿಮ್ಮ?)ಲ್ಲಿಯೆ ಎನಗೆ ನಿವಾಸವಾಯಿತ್ತು./750

  751. ಗಗನಕ್ಕೆ ನಿಚ್ಚಣಿಕೆಯನಿಕ್ಕಿದವರುಂಟೆ ?
    ವಾಯುವಿನ ಸ್ಥಳವನರಿದವರುಂಟೆ ?
    ಅಂಬುದಿಯ ಗುಣ್ಪವನಳೆದವರುಂಟೆ ?
    ಲಿಂಗದ ಪ್ರಮಾಣ ಹೇಳಬಹುದೆ ?
    ಚಂದ್ರಮಂಡಲ ತಾರಾಮಂಡಲ ಸೂರ್ಯಮಂಡಲ ಇತ್ತಿತ್ತಲಯ್ಯಾ !
    ಪಂಚಮುಖವಾಗಿ, ನೊಸಲಕಣ್ಣು ಚತುಭರ್ುಜ ಅಣುಮಾತ್ರವೆ ?
    ಒಬ್ಬ ಶರಣನಾಗಿ ಗುಹೇಶ್ವರನೆಂಬ ಘನನೆಲೆಯ ಬಲ್ಲಡೆ
    ಅಲ್ಲಿಂದತ್ತ ಶರಣು ಶರಣು. /751

  752. ಗಗನದ ಮೇಘಂಗಳು ಸುರಿದಲ್ಲಿ ಒಂದು ಹಿರಿಯ ಕೆರೆ ತುಂಬಿತ್ತು.
    ಆ ಕೆರೆಗೆ ಏರಿ ಮೂರು;
    ಅಲ್ಲಿ ಒಳಗೆ ಹತ್ತು ಬಾವಿ ಹೊರಗೆ ಐದು ಬಾವಿ !
    ಆ ಏರಿಯೊಳಗೆ ಒಂಬತ್ತು ತೂಬನುಚ್ಚಿದಡೆ
    ಆಕಾಶವೆಲ್ಲ ಜಲಮಯವಾಗಿತ್ತು !
    ತುಂಬಿದ ಜಲವನುಂಡುಂಡು ಬಂದು
    ಅಂಜದೆ ನುಡಿವ ಭಂಡಯೋಗಿಗಳನೇನೆಂಬೆ ಗುಹೇಶ್ವರಾ/752

  753. ಗಗನದ ಮೇಘಂಗಳೆಲ್ಲ ಸುರಿದು[ವು] ಭೂಮಿಯ ಮೇಲೆ.
    ಭೂಮಿ ದಣಿಯುಂಡು ಸಸಿಗಳೆಲ್ಲಾ ಬೆಳೆದವು.
    ಬಹುವಿಕಾರದಿಂದ ಬೆಳೆದ ಸಸಿ[ಯ], ವಿಕಾರದಿಂದ ಗ್ರಹಿಸುವ
    ಕಾಮವಿಕಾರಿಗಳು, ಲಿಂಗವನೆತ್ತ ಬಲ್ಲರು ಗುಹೇಶ್ವರಾ. /753

  754. ಗಗನದ ಮೇಲೊಂದು ಅಭಿನವ ಗಿಳಿ ಹುಟ್ಟಿ
    ಸಯ ಸಂಭ್ರಮದಲ್ಲಿ ಮನೆಯ ಮಾಡಿತ್ತು
    ಬ್ರಹ್ಮನಾ ಗಿಳಿಗೆ ಹಂಜರವಾದ, ವಿಷ್ಣು ಆ ಗಿಳಿಗೆ ಕೊರೆವ ಕೂಳಾದ
    ರುದ್ರನಾ ಗಿಳಿಗೆ ತಾ ಕೋಳಾದ (ಕೋಳುವೋದ ?)
    ಇಂತೀ ಮೂವರ ಮುಂದಣ ಕಂದನ ನುಂಗಿ
    ದೃಷ್ಟನಾಮ ನಷ್ಟವಾಯಿತ್ತು-ಇದೆಂತೊ ಗುಹೇಶ್ವರಾ ?/754

  755. ಗಗನದ ಮೇಲೊಂದು ಸರೋವರ;
    ಆ ಜಲದಲ್ಲಿ ಮುಖವ ತೊಳೆದು ಹೂವ ಕೊಯ್ವವರೆಲ್ಲರೂ;
    ದೇವರಿಗೆ ಮುಖಮಜ್ಜನವನೆರೆದು, ಪೂಜಿಸಿ ಹೊಡವಂಟಡೆ
    ಒಮ್ಮೆ ನಾಯಕನರಕ ತಪ್ಪದಲ್ಲಾ!
    ದೇವಲೋಕದ ಪ್ರಮಥರ ಲಜ್ಜೆಯನೇನ ಹೇಳುವೆ ಗುಹೇಶ್ವರಾ/755

  756. ಗಗನಪವನದ ಮೇಲೆ ಉದಯಮುಖದನುಭಾವ,
    ಸದಮದದ ಗಜವ ನಿಲಿಸುವ ಮಾವತಿಗ ಬಂದ.
    ಅಷ್ಟದಳಕಮಲದೊಳು ಸೃಷ್ಟಿಯಂಕುರ ಭಜನೆ;
    ಮೆಟ್ಟಿ ನಿಂದಾತ ಪರಮಯೋಗಿಯಾಗದೆ ಮಾಣ !
    ಬಯಲ ಬಣ್ಣವ ತುಂಬಿ, ನೆಳಲ ಶೃಂಗಾರವ ಮಾಡಿದ
    ಗುಹೇಶ್ವರನ ಶರಣ ಚನ್ನಬಸವಣ್ಣಂಗೆ ಶರಣೆನುತಿರ್ದೆನು./756

  757. ಗಗನವೆ ಗುಂಡಿಗೆ ಆಕಾಶವೆ ಅಗ್ಘವಣಿ,
    ಚಂದ್ರ, ಸೂರ್ಯರಿಬ್ಬರು ಪುಷ್ಪ, ಬ್ರಹ್ಮ ಧೂಪ, ವಿಷ್ಣು ದೀಪ,
    ರುದ್ರನೋಗರ !-ಸಯಧಾನ ನೋಡಾ !
    ಗುಹೇಶ್ವರಲಿಂಗಕ್ಕೆ ಪೂಜೆ ನೋಡಾ !/757

  758. ಗತಿಗೆಟ್ಟೆ ಧೃತಿಗೆಟ್ಟೆ ಮತಿಗೆಟ್ಟೆ ನಾನಯ್ಯಾ.
    ನಡೆವಡೆ ಶಕ್ತಿಯಿಲ್ಲ ನುಡಿವಡೆ ಜಿಹ್ವೆಯಿಲ್ಲ.
    ಇದಿರಲೊಬ್ಬರ ಉಪಚಾರ ಸೇರದು ನೋಡಾ ಎಮಗೆ.
    ಬಂದ ಬರವನರಿದು ನಿಂದ ನಿಲವನರಿದು ಕೂಡಬಲ್ಲ ಶರಣಂಗೆ,
    ಬೇರೊಂದು ಏಕಾಂತವೆಂಬ ಸಂದೇಹ ಉಂಟೆ ?
    ತೆರಹಿಲ್ಲದ ಘನವನೊಳಕೊಂಡ ಬಳಿಕ
    ಬರಲೆಡೆಯುಂಟೆ ನಮ್ಮ ಗುಹೇಶ್ವರಲಿಂಗಕ್ಕೆ ?/758

  759. ಗತಿವಿರಹಿತನೇನೆಂಬೆ, ಎಂತೆಂಬೆ ?
    ಅಘಟಿತಘಟಿತ ಅಖಂಡಿತಮಹಿಮನನೇನೆಂಬೆನೇನೆಂಬೆ ?
    ಆದಿಯಿಂದತ್ತತ್ತ ಗುಹೇಶ್ವರ !
    ಅಲ್ಲಯ್ಯನ ಸುಳುಹು ಜಗಕ್ಕೆ ಪಾವನ./759

  760. ಗಿಡುವಿನ ಮೇಲಣ ತುಂಬಿ ಕೂಡೆ ವಿಕಸಿತವಾಯಿತ್ತು,
    ತುಂಬಿ ನೋಡಾ !
    ಆತುಮ ತುಂಬಿ ತುಂಬಿ ಪರಮಾತುಮ ತುಂಬಿ ತುಂಬಿ ನೋಡಾ!
    ಗುಹೇಶ್ವರನೆಂಬ ಲಿಂಗಕ್ಕೆ ಎರಗಿ ನಿಬ್ಬೆರಗಾಯಿತ್ತು
    ತುಂಬಿ ನೋಡಾ !/760

  761. ಗಿಡುವಿಲ್ಲದ ಪುಷ್ಪಕ್ಕೆ ಕುಸುಮವಿಲ್ಲದ ಪರಿಮಳವಿದ್ದಿತ್ತಯ್ಯಾ !
    `ಕ್ಷಂ ಕ್ಷಂ’ ಎನುತ್ತಿದ್ದಿತಯ್ಯಾ.
    `ಹಂ ಹಂ’ ಎನುತ್ತಿದ್ದಿತಯ್ಯಾ.
    ಬಯಲುವಿಡಿದು ಹೋದಡೆ,
    ಪಿಂಡಕ್ಕೆ ಹೆಣನ ಸುಡುವರಿಲ್ಲ ಗುಹೇಶ್ವರಾ ! /761

  762. ಗಿರಿಗಳ ಗುಹೆಗಳ ಕಂದರದಲ್ಲಿ, ನೆಲಹೊಲನ ಮುಟ್ಟದೆ ಇಪ್ಪೆ ದೇವಾ !
    ಮನಕ್ಕೆ ಅಗಮ್ಯ ಅಗೋಚರನಾಗಿ, ಅಲ್ಲಲ್ಲಿ ಎಲ್ಲೆಲ್ಲಿಯೂ ನೀನೆ ಇಪ್ಪೆಯಯ್ಯಾ !
    ಗುಹೇಶ್ವರಾ ನಿಮ್ಮನು ಅಗಲಕ್ಕೆ ಹರಿವರಿದು ಕಂಡೆ ನಾನು. /762

  763. ಗುದ ಲಿಂಗ ನಾಬಿಕಮಲದಿಂದ ಮೇಲೆ ಷಡಂಗುಲವನೊತ್ತಿದಡೆ
    ಕಣ್ಣಿಲ್ಲದೆ ಕಾಣಬಹುದು ಲಿಂಗಪ್ರಕಾಶವ,
    ಕಿವಿಯಿಲ್ಲದೆ ಕೇಳಬಹುದು ಮಹಾನಾದ ಸುನಾದವ
    ಕಂಡು ಕೇಳಿದ ಬಳಿಕ ಮನ ನಂಬದಿದ್ದಡೆ
    ಮಕ್ಕಳಾಟಿಕೆ ತಪ್ಪದು ಗುಹೇಶ್ವರಾ. /763

  764. ಗುದಸ್ಥಾನದಲ್ಲಿ ಆಧಾರಚಕ್ರ, ಪೃಥ್ವಿಯೆಂಬ ಮಹಾಭೂತ,
    ಚತುಃಕೋಣೆ ಚೌದಳ ಪದ್ಮ, ಅಲ್ಲಿ ಇಹ ಅಕ್ಷರ ನಾಲ್ಕು-ವ, ಶ, ಷ, ಸ,
    ಅದರ ವರ್ಣ ಸುವರ್ಣ, ಅದಕ್ಕೆ ಅದಿದೇವತೆ ದಾಕ್ಷಾಯಣಿ.ಲಿಂಗಸ್ಥಾನದಲ್ಲಿ ಸ್ವಾಧಿಷ್ಠಾನಚಕ್ರ, ಅಪ್ಪುವೆಂಬ ಮಹಾಭೂತ,
    ಧನುರ್ಗತಿ, ಷಡುದಳ ಪದ್ಮ, ಅಲ್ಲಿ ಇಹ ಅಕ್ಷರವಾರು-ಬ, ಭ, ಮ, ಯ, ರ, ಲ,
    ಅದರ ವರ್ಣ ಪಚ್ಚೆಯ ವರ್ಣ, ಅದಕ್ಕೆ ಅದಿದೇವತೆ ಬಹ್ಮನು.ನಾಬಿಸ್ಥಾನದಲ್ಲಿ ಮಣಿಪೂರಕವೆಂಬಚಕ್ರ, ತೇಜವೆಂಬ ಮಹಾಭೂತ,
    ತ್ರಿಕೋಣೆ, ದಶದಳ ಪದ್ಮ ಅಲ್ಲಿ ಇಹ ಅಕ್ಷರ ಹತ್ತು-
    ಡ, ಢ, ಣ, ತ, ಥ, ದ, ಧ, ನ, ಪ, ಫ,
    ಅದರ ವರ್ಣ ಕೃಷ್ಣವರ್ಣ, ಅದಕ್ಕೆ ಅದಿದೇವತೆ ವಿಷ್ಣು.ಹೃದಯಸ್ಥಾನದಲ್ಲಿ ಅನಾಹತಚಕ್ರ, ವಾಯುವೆಂಬ ಮಹಾಭೂತ,
    ಷಟ್ಕೋಣೆ, ದ್ವಾದಶಗಳ ಪದ್ಮ ಅಲ್ಲಿ ಇಹ ಅಕ್ಷರ ಹನ್ನೆರಡು-
    ಕ, ಖ, ಗ, ಘ, ಙ, ಚ, ಛ, ಜ, ಝ, ಞ, ಟ,ಠ,
    ಅದರ ವರ್ಣ ಕುಂಕುಮವರ್ಣ, ಅದಕ್ಕೆ ಅದಿದೇವತೆ ಮಹೇಶ್ವರನು.</p>
    <p>ಕಂಠಸ್ಥಾನದಲ್ಲಿ ವಿಶುದ್ಧಿಚಕ್ರ, ಆಕಾಶವೆಂಬ ಮಹಾಭೂತ,
    ವರ್ತುಲಾಕಾರ, ಷೋಡಶದಳ ಪದ್ಮ ಅಲ್ಲಿ ಇಹ ಅಕ್ಷರ ಹದಿನಾರು-
    ಅ, ಆ, ಇ, ಈ, ಉ, ಊ, ಋ, ಋೂ,ಎ,ಏ, ಐ, ಓ, ಔ, ಅಂ, ಅಃ,
    ಅದರ ವರ್ಣ ಶ್ವೇತವರ್ಣ, ಅದಕ್ಕೆ ಅದಿದೇವತೆ ಸದಾಶಿವನು.</p>
    <p>ಭ್ರೂಮಧ್ಯಸ್ಥಾನದಲ್ಲಿ ಆಜ್ಞಾಚಕ್ರ, ಮನವೆಂಬ ಮಹಾಭೂತ,
    ತಮಂಧಾಕಾರ, ದ್ವಿದಳಪದ್ಮ ಅಲ್ಲಿ ಇಹ ಅಕ್ಷರವೆರಡು- ಹಂ, ಕ್ಷಂ,
    ಅದರ ವರ್ಣ ಮಾಣಿಕ್ಯವರ್ಣ, ಅದಕ್ಕೆ ಅದಿದೇವತೆ ಶ್ರೀಗುರು.</p>
    <p>ಉನ್ಮನೀಜ್ಯೋತಿ ಬ್ರಹ್ಮರಂಧ್ರದ ಮೇಲೆ. ಸಹಸ್ರದಳ ಪದ್ಮ,
    ಅಲ್ಲಿ ಅಮೃತವಿಹುದು ಅಲ್ಲಿ `ಓಂ’ ಕಾರಸ್ವರೂಪವಾಗಿ
    ಗುಹೇಶ್ವರಲಿಂಗವು ಸದಾಸನ್ನಹಿತನು./764

  765. ಗುರು ಶಿಷ್ಯರಿಬ್ಬರ ಮಧ್ಯದಲ್ಲಿ ಒಂದು ಮಗು ಹುಟ್ಟಿತ್ತು ನೋಡಾ !
    ಗುರುವಿಂಗೆ ಗುರುವಾದ ಪರಿಯೆಂತೊ ?
    ಶಿಷ್ಯಂಗೆ ಶಿಷ್ಯನಾದ ಪರಿಯೆಂತೊ ?
    ಆದಿಯ ಲಿಂಗವ ಸಾಧ್ಯವ ಮಾಡಿ ತೋರಿದ
    ಗುಹೇಶ್ವರನ ಚನ್ನಬಸವಣ್ಣಂಗೆ
    ಶರಣೆಂದು ಬದುಕಿದೆನು ಕಾಣಾ ಸಂಗನಬಸವಣ್ಣಾ. /765

  766. ಗುರು, ಶಿಷ್ಯ ಸಂಬಂಧವನರಸಲೆಂದು ಹೋದಡೆ,
    ತಾನೆ ಗುರುವಾದ ತಾನೆ ಶಿಷ್ಯನಾದ, ತಾನೆ ಲಿಂಗವಾದ.
    ಗುಹೇಶ್ವರಾ-ನಿಮ್ಮ ಶರಣನ ಕಾಯದ ಕೈಯಲ್ಲಿ ಲಿಂಗವ ಕೊಟ್ಟಡೆ,
    ಭಾವ ಬತ್ತಲೆಯಾಯಿತ್ತು !/766

  767. ಗುರುತತ್ವದಲ್ಲಿ ಹುಟ್ಟಿ, ಶಿವತತ್ವದಲ್ಲಿ ಬೆಳೆದು
    ಪರತತ್ವದಲ್ಲಿ ಮಗ್ನವಾದ ಶರಣಂಗೆ
    ಕಾಯವಿಡಿದಡೇನು ? ಕಾಯವಳಿದು ನಿರ್ವಯಲಾದಡೇನು ?
    ಕಾಯಸಮಾದಿ ಕರಣಸಮಾದಿ ಭಾವಸಮಾದಿಯಾದ ಬಳಿಕ,
    ಗುಹೇಶ್ವರಲಿಂಗದಲ್ಲಿ ಬಯಲಭ್ರಮೆಯ ಕಳೆದು
    ಸುಜ್ಞಾನಸಮಾದಿಯನೆಯ್ದಬಲ್ಲಡೆ
    ಅದೇ ನಿಜಸಮಾದಿ ಕೇಳಾ ಸಿದ್ಧರಾಮಯ್ಯಾ./767

  768. ಗುರುವ ನೆನೆದೆಹೆನೆಂದು ನೆನೆಯುತ್ತಿದ್ದಡೆ
    ನೆನೆವ ಮನವು ತಾನು ಗುರುವಾಯಿತು ನೋಡಾ.
    ಆಹಾ ! ಮಹಾದೇವ,
    ಇನ್ನಾವುದರಿಂದ ? ಆವುದನು ? ಏನೆಂದು ನೆನೆವೆ ?
    ಮನವೆ ಗುರುವಾದ ಕಾರಣ,-
    ಮನವೆ ಗುರುವಾಗಿ ನೆನಹನಿಂಬುಗೊಂಡನು
    ಗುಹೇಶ್ವರಲಿಂಗ ಚೋದ್ಯಚರಿತ್ರನು !/768

  769. ಗುರುವಿಂಗೂ ಶಿಷ್ಯಂಗೂ,-
    ಆವುದು ದೂರ ? ಆವುದು ಸಾರೆ ? ಎಂಬುದನು, ಆರುಬಲ್ಲರು ?
    ಗುರುವೆ ಶಿಷ್ಯನಾದ ತನ್ನ ವಿನೋದಕ್ಕೆ, ಶಿಷ್ಯನೆ ಗುರುವಾದ ತನ್ನ ವಿನೋದಕ್ಕೆ.
    ಕರ್ಮವೆಂಬ ಕೌಟಿಲ್ಯ ಎಡೆವೊಕ್ಕ ಕಾರಣ, ಬಿನ್ನವಾಗಿ ಇದ್ದಿತ್ತೆಂದಡೆ,
    ಅದು ನಿಶ್ಚಯವಹುದೆ ?
    ಆದಿ ಅನಾದಿಯಿಂದತ್ತತ್ತ ಮುನ್ನಲಾದ
    ಪರತತ್ವಮಂ ತಿಳಿದು ನೋಡಲು,
    ನೀನೆ ಸ್ವಯಂ ಜ್ಯೋತಿಪ್ರಕಾಶನೆಂದರಿಯಲು,
    ನಿನಗೆ ನೀನೆ ಗುರುವಲ್ಲದೆ ನಿನ್ನಿಂದದಿಕವಪ್ಪ ಗುರುವುಂಟೆ ?
    ಇದು ಕಾರಣ ಗುಹೇಶ್ವರಲಿಂಗವು ತಾನೆ ಎಂಬುದನು
    ತನ್ನಿಂದ ತಾನೆ ಅರಿಯಬೇಕು ನೋಡಾ./769

  770. ಗುರುವಿಡಿದ ಅರಿವು ಅರಿವಲ್ಲ,
    ಲಿಂಗವಿಡಿದ ಅರಿವು ಅರಿವಲ್ಲ.
    ಇಲ್ಲದ ಗುರು ಇಲ್ಲದ ಲಿಂಗ !
    ಕಲ್ಪಿತಕ್ಕೆ ಅರಿವಹುದೆ ?
    ತನ್ನಿಂದ ತಾನರಿವುದೆ ಅರಿವು ಗುಹೇಶ್ವರಾ. /770

  771. ಗುರುವಿದು ಲಿಂಗವಿದು ಜಂಗಮವಿದು ಎಂಬ ಭೇದವ
    ಏಕವ ಮಾಡಿ ನಿನಗೆ ತೋರಿದವರಾರು ಹೇಳಾ ?
    ಆದಿ ಅನಾದಿಯನು ಒಂದು ಮಾಡುವ,
    ಭಾವ ನಿರ್ಭಾವವನು ಅರುಹಿದವರಾರು ಹೇಳಾ ?
    ದೀಕ್ಷೆ ಶಿಕ್ಷೆ ಸ್ವಾನುಭಾವದ ಪರಿಯ ತೋರಿ
    ನಿಜಪದದಲ್ಲಿ ನಿಲಿಸಿದವರಾದು ಹೇಳಾ ?
    ಗುಹೇಶ್ವರಲಿಂಗದಲ್ಲಿ
    ನಿನ್ನ ಆಯತವ ಹೇಳಾ ಮಡಿವಾಳ ಮಾಚಯ್ಯಾ ? /771

  772. ಗುರುವಿನ ಪರಿ ವಿಪರೀತವಾಯಿತ್ತಯ್ಯಾ,
    ಭ್ರಮರ-ಕೀಟ ನ್ಯಾಯದಂತಾಯಿತ್ತು.
    ಗುರು ತನ್ನ ನೆನೆವನ್ನಬರ ಎನ್ನನಾ ಗುರುವ ಮಾಡಿದನು.
    ಇನ್ನು ಶಿಷ್ಯನಾಗಿ ಶ್ರೀಗುರುವ ಪೂಜಿಸುವರಾರು
    ಹೇಳಾ ಗುಹೇಶ್ವರಾ ?/772

  773. ಗುರುವಿನ ಪ್ರಾಣ ಲಿಂಗದಲ್ಲಿ ಲೀಯವಾದ ಬಳಿಕ
    ಆ ಲಿಂಗವೆನ್ನ ಕರಸ್ಥಲಕ್ಕೆ ಬಂದಿತ್ತು ನೋಡಾ.
    ಇದ್ದಾನೆ ನೋಡಾ ಎನ್ನ ಗುರು ಅನಿಮಿಷನು ಎನ್ನ ಕರಸ್ಥಲದಲ್ಲಿ.
    ಇದ್ದಾನೆ ನೋಡಾ ಎನ್ನ ಗುರು ಅನಿಮಿಷನು ಎನ್ನ ಜ್ಞಾನದೊಳಗೆ.
    ಇದ್ದಾನೆ ನೋಡಾ ಎನ್ನ ಗುರುವಿನ ಗುರು ಪರಮಗುರು
    ಬಸವಣ್ಣ ಎನ್ನ ಕಂಗಳ ಮುಂದೆ !
    ಗುಹೇಶ್ವರ ಸಾಕ್ಷಿಯಾಗಿ,
    ಎನ್ನ ಮೇಲೆ ದ್ರೋಹವಿಲ್ಲ ಕಾಣಾ ಚನ್ನಬಸವಣ್ಣಾ ! /773

  774. ಗುರುವಿನಿಂದಾದ ಕಾಯವ ಬೆರಸಿ, ಗುರುವನರಿಯದಾದೆನಯ್ಯಾ.
    ಲಿಂಗದಿಂದಾದ ಜೀವ ಬೆರಸಿ, ಲಿಂಗವನರಿಯದಾದೆನಯ್ಯಾ.
    ಜಂಗಮದಿಂದಾದ ಮನವ ಬೆರಸಿ ಜಂಗಮವನರಿಯದಾದೆನಯ್ಯಾ.
    ಈ ತ್ರಿವಿಧ ಭಕ್ತಿಯುಕ್ತಿಯ ಅರುಹಿಸಿ ಕೊಟ್ಟ
    ಸಂಗನಬಸವಣ್ಣನ ಬೆರಸಿ-ನೀನು ನಾನು
    ಬದುಕಿದೆವು ಕಾಣಾ ಗುಹೇಶ್ವರಾ. /774

  775. ಗುರುವೆಂದರಿಯರು, ಹಿರಿಯರೆಂದರಿಯರು;
    ದೇವರೆಂದರಿಯರು, ಭಕ್ತರೆಂದರಿಯರು.
    ಲಿಂಗವೆಂದರಿಯರು, ಜಂಗಮವೆಂದರಿಯರು;
    ಬಂದ ಬರವನರಿಯರು ನಿಂದ ನಿಲವನರಿಯರು.
    ಶಿವಶರಣರ ನೋಯಿಸುವ ಪಾತಕರನೇನೆಂಬೆ ?
    ಗುಹೇಶ್ವರಾ, ನಿಮ್ಮ ಮನ ನೊಂದ ನೋವು ಬರಿದೆ ಹೋಗದು./775

  776. ಗುರುವೆಂಬಾತ ಶಿಷ್ಯನಂತುವನರಿಯ,
    ಶಿಷ್ಯನೆಂಬಾತ ಗುರುವನಂತುವನರಿಯ.
    ಗುರುವಿನಲ್ಲಿ ಸಮವಿಲ್ಲ, ಶಿಷ್ಯನಲ್ಲಿ ಸಮವಿಲ್ಲ,
    ಜಂಗಮ ಜಂಗಮದಲ್ಲಿ ಸಮವಿಲ್ಲ, ಭಕ್ತ ಭಕ್ತನಲ್ಲಿ ಸಮವಿಲ್ಲ.
    ಇದು ಕಾರಣ ಕಲಿಯುಗದಲ್ಲಿ ಉಪದೇಶವ ಮಾಡುವ
    ಕಾಳುಕುರಿಕೆಯ ಮಕ್ಕಳನೇನೆಂಬೆ ಗುಹೇಶ್ವರಾ. /776

  777. ಗುರುವೊಂದೆ ಬಸಿರು, ಲಿಂಗ ಒಂದೆ ಬಸಿರು
    ಜಂಗಮ ಒಂದೆ ಬಸಿರು ಪ್ರಸಾದ ಒಂದೆ ಬಸಿರು-
    ಇದನಾರಯ್ಯಾ ಅಮಳೋಕ್ಯವ ಮಾಡಿ ತೋರಿದವರು ?
    ಇದನಾರಯ್ಯಾ ಪ್ರಜ್ವಲಿತವ ಮಾಡಿ ಬೇರೆ ತೋರಿದವರು ?
    ಪೂರ್ವಾಚಾರಿ ಭಕ್ತಿಭಾಂಡಾರಿ ಬಸವಣ್ಣಾ
    ಎನಗೆ ನೀನು ಗುಹೇಶ್ವರಲಿಂಗವ ತೋರಿದೆಯಾಗಿ
    ಲೋಕಾದಿಲೋಕವೆಲ್ಲವು ಎನಗೆ ಕಿಂಚಿತ್./777

  778. ಗುರುಶಿಷ್ಯಸಂಬಂಧಕ್ಕೆ ಲಿಂಗವ ಧರಿಸುವರಯ್ಯಾ.
    ನಿಮ್ಮ ಬಂಧನಕ್ಕಿಕ್ಕಿ ಆಳುವರಯ್ಯಾ.
    ಆನು ಕಂಡು ಮರುಗಿ `ಅಕಟಕಟಾ’ ಎಂದೆನಲ್ಲಾ !
    ಕೂಗಿಲ್ಲ ಬೊಬ್ಬೆಯಿಲ್ಲ ಹೋದ ಹೊಲಬನರಿಯರು
    ದೇವಾ ಗುಹೇಶ್ವರಾ ಬಾಳುದಲೆಯ ಹಿಡಿದೆನು./778

  779. ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಪ್ರಸಾದಸ್ಥಲ-
    ಬಸವಣ್ಣನ ಕರಸ್ಥಲದೊಳಗೆ ಅಡಗಿತ್ತಲ್ಲ !
    ಇನ್ನಾರಿಗೆ ಭಕ್ತಿಸ್ಥಲ, ಇನ್ನಾರಿಗೆ ಸಾರುವುದೀ ಲಿಂಗಸ್ಥಲ ?
    ಗುಹೇಶ್ವರಾ ಸಂಗನಬಸವಣ್ಣನ ಮೊರೆಹೊಕ್ಕು ಬದುಕಿದೆನು./779

  780. ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಪ್ರಸಾದಸ್ಥಲವಡಗಿದ ಕರಸ್ಥಲ
    ಇನ್ನಾರಿಗೆ ಸಾರಿತ್ತು ?
    ನಿರ್ವಂಚಕತ್ವ ನಿತ್ಯನಿಜಸ್ಥಲವಾದ ಭಕ್ತಿಸ್ಥಲ
    ಇನ್ನಾರಿಗೆ ಸಾರಿತ್ತು ಬಸವಣ್ಣಂಗಲ್ಲದೆ ?
    ಗುಹೇಶ್ವರಾ ನಿಮ್ಮ ಶರಣ ಸಂಗನಬಸವಣ್ಣನ
    ಮೊರೆಯ ಹೊಕ್ಕು ನಾನು ಬದುಕಿದೆನು./780

  781. ಗುರುಸ್ಥಲಭಕ್ತರ ಮೂಲ ಜ್ಞಾನಶಕ್ತಿಗಳಾರು ಗುರುಸ್ವರೂಪವಾದವು.
    ಆ ಗುರುಸ್ವರೂಪವನುಳ್ಳ ಶಕ್ತಿಗಳಿಂದ,
    ಪರಮಚೈತನ್ಯವೆಂಬ ಮಂಟಪ ಉದಯಿಸಿ
    ಸಕಲಲೋಕಕ್ಕೆ ಆದಿಯಾಯಿತ್ತು.
    ಆ ಮಂಟಪದ ಮೇಲೆ ನಾನು ಕುಳಿತು ಸಂತೋಷದಿಂದ
    ಗುಹೇಶ್ವರಲಿಂಗವ ಕಣ್ಣು ತುಂಬಿ ನೋಡಿದ ನೋಟ
    ಸಕಲಭಕ್ತರಿಗೆ ಕೂಟವಾಯಿತ್ತು ಕಾಣಾ ಸಂಗನಬಸವಣ್ಣಾ. /781

  782. ಗುರುಸ್ವಾಯತವಾಯಿತ್ತು ಲಿಂಗಸ್ವಾಯತವಾಯಿತ್ತು,
    ಜಂಗಮಸ್ವಾಯತವಾಯಿತ್ತು ಬಸವಣ್ಣನಿಂದಲೆಂದಡೆ-
    ತನುವಿಲ್ಲದಿರಬೇಕು ಮನವಿಲ್ಲದಿರಬೇಕು ಧನವಿಲ್ಲದಿರಬೇಕು;
    ಅರಿವರಿತು ಮರಹು ನಷ್ಟವಾಗಿರಬೇಕು.
    ಗುಹೇಶ್ವರಲಿಂಗದಲ್ಲಿ.
    ನಿಲರ್ೆಪಿಯಾದಲ್ಲದೆ ಇಲ್ಲ ಕಾಣಾ ಮಡಿವಾಳ ಮಾಚಯ್ಯಾ. /782

  783. ಗ್ರಾಮಮಧ್ಯದ ಮೇಲಣ ಮಾಮರ,
    ಸೋಮಸೂರ್ಯರ ನುಂಗಿತ್ತಲ್ಲಾ!
    ಅಮರಗಣಂಗಳ ನೇಮದ ಮಂತ್ರ,
    ಬ್ರಹ್ಮಾಂಡಕೋಟಿಯ ಮೀರಿತ್ತಲ್ಲಾ!
    ಸುಮನ ಸುಜ್ಞಾನದೊಳಗಾಡುವ ಮಹಾಮಹಿಮಂಗೆ,
    ನಿರ್ಮಳವಾಯಿತ್ತು-ಗುಹೇಶ್ವರಾ./783

  784. ಘಟಪಟದ ಬಿತ್ತಿಯಂತೆ ಬಿನ್ನವೆಂಬ ಹಾಂಗೆ ಇಹುದು.
    ತಿಳಿದು ನೋಡಿದಡೆ ಬಿನ್ನವುಂಟೆ ?
    ಘಟದೊಳಗಣ ಬಯಲು, ಪಟದೊಳಗಣ ನೂಲು;
    ಬಿತ್ತಿಯ ಮೃತ್ತಿಕೆಯಂತೆ ಒಂದಲ್ಲದೆ ಎರಡಿಲ್ಲ.
    ದೇಹಿಗಳೊಳಗೆ ಗುಹೇಶ್ವರನಲ್ಲದೆ ಮತ್ತಾರೂ ಇಲ್ಲ. /784

  785. ಘಟಸರ್ಪನಂತೆ ಅತಿಶಯವು !
    ನಾಬಿಸರವರಸ್ಥಾನಕವೆ ದಳವೆಂಟು !
    ನವದಳಕಮಲ ಊಧ್ರ್ವಮಂಡಲದ ಅಮೃತಸೇವನೆಯಾಗಿ,
    ಶಿವಯೋಗಿಯಾದೆವೆಂಬರು.
    ಗುಹೇಶ್ವರಲಿಂಗವು ಪವನವಿಯೋಗ !/785

  786. ಘನಚೈತನ್ಯಜಂಗಮದ ಕಾರಣಾಂಗವಾದಾತ ಗುರು,
    ನಿಜಚೈತನ್ಯವನುಳ್ಳ ಜಂಗಮದ ಸೂಕ್ಷ್ಮಾಂಗವಾದಾತ ಗುರು,
    ಸುಚೈತನ್ಯಜಂಗಮದ ಚರವಿಗ್ರಹವಾದಾತ ಗುರು,
    ಭಕ್ತಾಚಾರವನುಳ್ಳ ಸ್ಥೂಲಾಂಗವಾದಾತ ಗುರು,
    ಇಂತೀ ಘನಚೈತನ್ಯ ಜಂಗಮದ ಸ್ವರೂಪನಾದಾತ ಗುರು.
    ಅಂತಪ್ಪ ಜಂಗಮದ ಸಂಬಂಧವಾದ ಶ್ರೀಗುರುವಿಂಗೆ,
    ನಮೋ ನಮೋ ಎಂಬೆನು ಕಾಣಾ ಗುಹೇಶ್ವರಯ್ಯಾ. /786

  787. ಘನತರವಾದ ಚಿತ್ರದ ರೂಪ ಬರೆಯಬಹುದಲ್ಲದೆ,
    ಪ್ರಾಣವ ಬರೆಯಬಹುದೆ ಅಯ್ಯಾ?
    ದಿವ್ಯಾಗಮಂಗಳು ಹೇಳಿದ ಕ್ರೀಯಲ್ಲಿ ದೀಕ್ಷೆಯ ಮಾಡಬಹುದಲ್ಲದೆ,
    ಭಕ್ತಿಯ ಮಾಡಬಹುದೆ ಅಯ್ಯಾ?
    ಪ್ರಾಣವಹ ಭಕ್ತಿಯ ತನ್ಮಯ ನೀನು.
    ಈ ಗುಣವುಳ್ಳಲ್ಲಿ ನೀನಿಹೆ, ಇಲ್ಲದಲ್ಲಿ ನೀನಿಲ್ಲ ಗುಹೇಶ್ವರಾ./787

  788. ಘನವ ಕಂಡು ಮನ ಅವಗ್ರಾಹಕವಾಯಿತ್ತು.
    ಕಂಡು ಕಂಡು ಮನ ಮಹಾಘನವಾಯಿತ್ತು,
    ತಲ್ಲೀಯವಾಯಿತ್ತು !-ತದುಗತ ಶಬ್ದ ಮುಗ್ಧವಾದುದನೇನೆಂಬೆ
    ಗುಹೇಶ್ವರಾ ?/788

  789. ಘನವ ನೆನೆವ ಮನದಲ್ಲಿ ತನುವಿನಾಸೆ ಮುನ್ನಿಲ್ಲ,
    ನೆನೆವ ಮನವನೊಳಕೊಂಡ ಘನವನೇನೆಂಬೆನಯ್ಯಾ !
    ತನ್ನಲ್ಲಿ ತಾನೆಯಾಗಿತ್ತು !
    ನೆನಹಳಿದ ನಿರಾಳವ ಕಂಡು ಬೆರಗಾದೆ !
    ಅಂತು ಇಂತು ಎನಲಿಲ್ಲ.
    ಚಿಂತೆಯಿಲ್ಲದ ಘನಗುಹೇಶ್ವರಯ್ಯನ ಬೆರಸಲಿಲ್ಲ./789

  790. ಘನವ ಮನ ಕಂಡು ಆದನೊಂದು ಮಾತಿಂಗೆ ತಂದು ನುಡಿದಡೆ
    ಅದಕ್ಕದೇ ಕಿರಿದು ನೋಡಾ.
    ಅದೇನೂ ಇಲ್ಲದ ನಿಸ್ಸಂಗದ ಸುಖವು ಗುಹೇಶ್ವರ !/790

  791. ಘನವಪ್ಪ ಪರಿಯಾಣದಲ್ಲಿ ಒಂದನುವಿನ ಬೋನವನಳವಡಿಸಿ,
    ಪರಿಪರಿಯ ಪದಾರ್ಥಂಗಳು ಬಗೆಬಗೆಯಿಂದ ಬರಲು,
    ನೋಡದ ಮುನ್ನವೆ ರೂಪವರ್ಪಿತವಾಯಿತ್ತು.
    ಮುಟ್ಟದ ಮುನ್ನವೆ ಸೋಂಕರ್ಪಿತವಾಯಿತ್ತು.
    ರುಚಿಸದ ಮುನ್ನವೆ ಸುಖವರ್ಪಿತವಾಯಿತ್ತು.
    ಅವಧಾರು ಅವಧಾರು ಲಿಂಗವೆ,
    ನಿನ್ನ ಮನಕ್ಕೆ ಬಂದ ಪದಾರ್ಥವ ನಿನ್ನ ಘನಕ್ಕೆ ನೀನರ್ಪಿಸಿದಡೆ
    ಎನ್ನ ಮನಕ್ಕೆ ಬಂದ ಪದಾರ್ಥವ ನಾ ನಿನಗರ್ಪಿಸುವೆನು.
    ಗುಹೇಶ್ವರಾ ನಿನಗೆ ಭರಿತ ಬೋನವನಳವಡಿಸಿ ನೀಡಬಲ್ಲವನಾಗಿ
    ಎನಗೂ ನಿನಗೂ ಸಂಗನಬಸವಣ್ಣನ ಪ್ರಸಾದ-
    ಆರೋಗಿಸು ದೇವಾ./791

  792. ಘನವಪ್ಪ ಬೋನವನು ಒಂದು ಅನುವಿನ ಪರಿಯಾಣದಲ್ಲಿ ಹಿಡಿದು,
    ಗುರುಲಿಂಗವಾರೋಗಣೆಯ ಮಾಡಿ ಮಿಕ್ಕುದು ಪ್ರಸಾದ.
    ಈ ತೆರೆದ ಘನವಪ್ಪ ಲಿಂಗವನು,
    ಒಂದನುವಿನಲ್ಲಿ ತಂದಿರಿಸಿ,
    ಘನವಪ್ಪ ಬೋನವನು ಲಿಂಗವಾರೋಗಣೆಯ ಮಾಡಿ,
    ಮಿಕ್ಕುದ ಕೊಳ್ಳಬಲ್ಲಡೆ ಪ್ರಸಾದಿ.-
    ಇಂತೀ ತೆರನ ಬೆಸಗೊಳ್ಳಬಲ್ಲಡೆ,
    ಎನ್ನ ಬೆಸಗೊಳ್ಳೈ-ಗುಹೇಶ್ವರಾ./792

  793. ಘುಟಿಕಾಸಿದ್ಧರ ಘುಟಿಕೆಯುರುಳಿತ್ತು
    ಯಂತ್ರಿಗಳ ಯಂತ್ರ ಎದ್ದು ಹೋಯಿತ್ತು
    ಮಂತ್ರಿಗಳ ಮಂತ್ರ ಮರೆತುಹೋಯಿತ್ತು
    ಔಷದಿಗರ ಔಷಧವನಾರಡಿಗೊಂಡಿತ್ತು
    ಸರ್ವವಿದ್ಯಾಮುಖದ ಜ್ಯೋತಿ ನಂದಿತ್ತು
    ಈ ವಿಷಯದ ಲಹರಿಯಲ್ಲಿ ಮೂರುಲೋಕದವರೆಲ್ಲರು
    ಮೂಛರ್ಿತರಾದರು ಕಾಣಾ ಗುಹೇಶ್ವರ./793

  794. ಚಂದ್ರಕಾಂತದ ಗಿರಿಗೆ ಉದಕದ ಸಂಚ,
    ಸೂರ್ಯಕಾಂತದ ಗಿರಿಗೆ ಅಗ್ನಿಯ ಸಂಚ,
    ಪರುಷದ ಗಿರಿಗೆ ರಸದ ಸಂಚ.
    ಬೆರಸುವ ಭೇದವಿನ್ನೆಂತೊ?
    ಅಪ್ಪುವನು ಅಗ್ನಿಯನು ಪಕ್ವಕ್ಕೆ ತಂದು
    ಅಟ್ಟುಂಬ ಭೇದವನು ಗುಹೇಶ್ವರ ಬಲ್ಲ./794

  795. ಚಂದ್ರಮನ ಕಾಂಬಡೆ ಆ ಚಂದ್ರನಿಂದೊದಗಿದ ಬೆಳಗೆ ಮುಖ್ಯ.
    ಸೂರ್ಯನ ಕಾಂಬಡೆ ಆ ಸೂರ್ಯನಿಂದೊದಗಿದ ಬೆಳಗೆ ಮುಖ್ಯ.
    ಜ್ಯೋತಿಯ ಕಾಂಬಡೆ ಆ ಜ್ಯೋತಿಯಿಂದೊದಗಿದ ಬೆಳಗೆ ಮುಖ್ಯ.
    ರತ್ನವ ಕಾಂಬಡೆ ಆ ರತ್ನದಿಂದೊದಗಿದ ಬೆಳಗೆ ಮುಖ್ಯ.
    ನಮ್ಮ ಗುಹೇಶ್ವರಲಿಂಗವ ಕಾಂಬಡೆ
    ಆ ಮಹಾವಸ್ತುವಿನ ಪರಮ ಪ್ರಕಾಶದಿಂದೊದಗಿದ
    ಭಸಿತವೇ ಮುಖ್ಯ ಕಾಣಿರಣ್ಣಾ. /795

  796. ಚಂದ್ರಮನೊಳಗಣ ಎರಳೆಯ ನುಂಗಿದ ರಾಹುವಿನ ನೋಟವು,
    ಅಂದಂದಿಗೆ ಬಂದು ಕಾಡಿತ್ತು ನೋಡಾ.
    ಒಂದರ ತಲೆ, ಒಂದರ ಬಸುರು-ಅಂದಂದಿಗೆ ಬಂದು ಕಾಡಿತ್ತು ನೋಡಾ.
    ನಂದಿ ನಂದಿಯ ನುಂಗಿ ಬಂದುದು ಮಹೀತಳಕ್ಕಾಗಿ,
    ಇಂದು, ರವಿಗಡಣವ ನಾನೇನೆಂಬೆ ಗುಹೇಶ್ವರಾ/796

  797. ಚಿತ್ತ ಶುದ್ಧವಿಲ್ಲದವರಲ್ಲಿ ಮನ ಸಂಚಲ ನಿಲ್ಲದು.
    ಮನ ಸಂಚಲ ನಿಲ್ಲದವರಲ್ಲಿ ಶಿವಧ್ಯಾನ ಕರಿಗೊಳ್ಳದು.
    ಶಿವಧ್ಯಾನ ಕರಿಗೊಳ್ಳದವನ ಮಾತು ಸಟೆ.
    ಗುಹೇಶ್ವರಲಿಂಗವನರಿಯದ ಭ್ರಾಂತಿಯೋಗಿಗಳ ಮನ
    ಬೇತಾಳನಂತೆ ಕಾಡುವುದು./797

  798. ಚಿತ್ತದ ಸ್ನೇಹವ ಸಜ್ಜನಕ್ಕರ್ಪಿತವ ಮಾಡೆ;
    ನಟ್ಟಿದ್ದ ಬೇಟಕ್ಕೆ ತಾಗು-ತಡೆಯುಂಟೆ ಎಲೆ ಮರುಳೆ ?
    ಆತುರದಲ್ಲಿ ಕಳವಳಿಸಿ, ವ್ಯಾಕುಳದಲ್ಲಿ ಡಾವರಿಸುತ್ತಿಪ್ಪುದೀ ಮನವು.
    ಈ ಮನವು ಚಿಹ್ನೆದೋರದ ಘನಕ್ಕೆ ಬೆಂಬತ್ತಿ ಬಿಡದಿರಬಲ್ಲಡೆ,
    ತನ್ಮೂರ್ತಿ ತನ್ನಲ್ಲಿ ಗುಹೇಶ್ವರಲಿಂಗವು !/798

  799. ಚಿತ್ತುವೆಂಬ ಬಿತ್ತು ಬಲಿದು ಎರಡಾದಲ್ಲಿ,
    ಲಿಂಗವೆಂಬ ಕಳೆ ಅಂಕುರಿಸಿ ಮೂರ್ತಿಯಾಯಿತ್ತು.
    ಆ ಮೂರ್ತಿಯ ಘನತೆಯ ಏನೆಂದೂ ಉಪಮಿಸಬಾರದು !
    ನೋಡಿದಡೆ ಮೂರ್ತಿ ಹಿಡಿದಡೆ ಬಯಲು !
    ಆ ಮೂರ್ತಿಯೊಳಗದೆ ಈರೇಳು ಲೋಕದ ಪ್ರಾಣಕಳೆ.
    ಆ ಕಳೆಯ ಬೆಳಗು ತಾನೆ ನಮ್ಮ ಗುಹೇಶ್ವರಲಿಂಗದಲ್ಲಿ
    ಲೀಲಾಮೂಲದ ಪ್ರಥಮ ಬಿತ್ತಿ./799

  800. ಚಿನ್ನವನೊರೆಯಬಹುದಲ್ಲದೆ ಬಣ್ಣವನೊರೆಯಬಹುದೆ ?
    ಹೂವ ಮುಡಿಯಬಹುದಲ್ಲದೆ ಗಂಧವ ಮುಡಿಯಬಹುದೆ ?
    ಕರ್ಮವ ಮಾಡಬಹುದಲ್ಲದೆ ವಸ್ತುವನರಿಯಬಹುದೆ ?
    ಗುಹೇಶ್ವರನೆನಬಹುದಲ್ಲದೆ,
    ಲಿಂಗವು ತಾನಾಗಬಾರದು ಸಿದ್ಧರಾಮಯ್ಯಾ. /800

  801. ಚೌದಂತ ಮದಕರಿಯೊಳಡಗಿತ್ತು.
    ಬೆಳಗಿನ ಬಳಗದ ನವಪಂಜರವೊ !
    ಮದಾಳಿಯ ಸುಳುಹಿನ ಸೂಕ್ಷ್ಮಂಗಲ್ಲದೆ.
    ಭಾವ ಪರಿಮಳವ ಭೇದಿಸಬಾರದು.
    ಅಳಿ ರತುನವ ನುಂಗಿದ ಪರಿಯೆಂತೊ ?
    ಸಾಧ್ಯವಾಯಿತ್ತು ಸುಖಸಂಭಾಷಣೆ
    ಗುಹೇಶ್ವರಲಿಂಗದಲ್ಲಿ ಚನ್ನಬಸವಣ್ಣಂಗೆ./801

  802. ಜಂಗಮ ಘನವೆಂಬೆನೆ? ಬೇಡಿ ಕಿರಿದಾಯಿತ್ತು.
    ಲಿಂಗ ಘನವೆಂಬೆನೆ? ಕಲುಕುಟಿಗನ ಕೈಯಲ್ಲಿ
    ಮೂಡಿಸಿಕೊಂಡು ಕಿರಿದಾಯಿತ್ತು.
    ಭಕ್ತ ಘನವೆಂಬೆನೆ? ತನು-ಮನ-ಧನದಲ್ಲಿ ವಂಚಕನಾಗಿ ಕಿರಿದಾದ.
    ಇಂತೀ ತ್ರಿವಿಧದಲ್ಲಿ ಪರಿಣಾಮವಿಲ್ಲ ಪರಮಾರ್ಥವಿಲ್ಲ.
    ಘನವ ಬಲ್ಲವರಾರೊ ಗುಹೇಶ್ವರಾ ? /802

  803. ಜಂಗಮ ಜಂಗಮವೆಂಬ ಭಂಗಿತರ ಮುಖವ ನೋಡಲಾಗದು.
    ಅದೇನು ಕಾರಣವೆಂದಡೆ-ನಿರಾಳಜಂಗಮವನರಿಯದೆ ನಾನೆ ಜಂಗಮವೆಂಬರು.
    ಗ್ರಂಥ “ಜಕಾರಂ ಜನನಂ ನಾಸ್ತಿ ಗಕಾರಂ ಗಮನವರ್ಜಿತಂ
    ಮಕಾರಂ ಮರಣಂ ನಾಸ್ತಿ ಏತದ್ಭವ್ಜೇಂಗಮಂ –
    ಎಂದುದಾಗಿ, ಇಂತಪ್ಪ ನಿರ್ದೆಹಿ ಜಂಗಮವ ಕರ-ಮನ-ಭಾವದಲ್ಲಿ ಆರಾದಿಸಿ
    ಜನನ ಮರಣಂಗಳ ಗೆಲಿದು ಕರ್ಪುರದ ಜ್ಯೋತಿಯಂತೆ ಇರಬಲ್ಲಡೆ
    ಆ ಮಹಾತ್ಮನೆ ತ್ರೈಜಗದೊಡೆಯನೆಂಬೆ,
    ಆ ಮಹಾತ್ಮನೆ ವಿಶ್ವಪರಿಪೂರ್ಣನೆಂಬೆನು ಗುಹೇಶ್ವರಾ. /803

  804. ಜಂಗಮಕ್ಕೆ ಲಕ್ಷಣವಾವುದೆಂದಡೆ :
    ಲಿಂಗರೂಪಾಗಿ ಪಾದಾರ್ಚನೆಯ ಮಾಡಿಸಿಕೊಳ್ಳಬೇಕು.
    ಭಕ್ತಂಗೆ ಲಕ್ಷಣವಾವುದೆಂದಡೆ:
    ಭೃತ್ಯರೂಪಾಗಿ ಪಾದಾರ್ಚನೆಯ ಮಾಡಬೇಕು.
    ಜಂಗಮವು ಲಿಂಗರೂಪವಹ ವಿವರವೆಂತೆಂದಡೆ:
    ಮಾತಿನಲ್ಲಿ ನಾನು ಲಿಂಗರೂಪೆಂದಡೆ ಹರಿಯದು
    ತನು-ಮನ-ಧನತ್ರಯಂಗಳ ಹಿಡಿದೂ ಹಿಡಿಯದೆ
    ಮಾಡಿಸಿಕೊಂಬುದೀಗ ಜಂಗಮಕ್ಕೆ ಲಕ್ಷಣ.
    ಆ ನಿಲವಿಂಗೆ ಭವಂನಾಸ್ತಿ.
    ಭಕ್ತನು ಭೃತ್ಯರೂಪವಹ ವಿವರವೆಂತೆಂದಡೆ:
    ಮಾತಿನಲ್ಲಿ ನಾನು ಭ್ಯತ್ಯರೂಪೆಂದಡೆ ಹರಿಯದು.
    ತನು-ಮನ-ಧನತ್ರಯಂಗಳ ಜೀವನ ಗುಣಕ್ಕಿಕ್ಕದೆ
    ಗುರುಲಿಂಗಜಂಗಮಕ್ಕೆ ಸಂದಳಿದು ದಾಸೋಹವ ಮಾಡುವುದೀಗ ಭಕ್ತಂಗೆ ಲಕ್ಷಣ.
    ಆ ನಿಲವಿಂಗೆ ಭವಂನಾಸ್ತಿ.
    ಇಂತೀ ಉಭಯಕುಳಸ್ಥಳದ ಸಂದಳಿದು
    ಒಂದಾಗಿ ನಿಂದ ನಿಲವು ಗುಹೇಶ್ವರಲಿಂಗದಲ್ಲಿ ಐಕ್ಯವು !/804

  805. ಜಂಗಮದಿಂಗಿತಾಕಾರವ ನೋಡಿ ಲಿಂಗವೆಂದರಿದ ಭಕ್ತರು
    ಮನ ಮನ ಬೆರಸಿದಡೆ,
    ಕೂರ್ಮದ ಶಿಶುವಿನ ಸ್ನೇಹದಂತೆ ಮುನ್ನವೆ ತೆರಹಿಲ್ಲದಿರಬೇಕು ನೋಡಾ.
    ಬಂದ ಬರವನರಿಯದೆ ನಿಂದ ನಿಲವ ನೋಡದೆ
    ಕೆಮ್ಮನೆ ಅಹಂಕಾರವ ಹೊತ್ತಿಪ್ಪವರ
    ನಮ್ಮ ಗುಹೇಶ್ವರಲಿಂಗನು ಒಲ್ಲ ಕಾಣಾ. /805

  806. ಜಂಗಮವೆ ಲಿಂಗವೆಂದು ನಂಬಿದ ಬಳಿಕ
    ಸಂದೇಹವಿಲ್ಲದೆ ಇರಬೇಕು ನೋಡಾ.
    ಸಂದುಸಂಶಯವಳಿದು ಸಯವಾದ ಭಕ್ತಿ,
    ಹಿಮ್ಮೆಟ್ಟಿದಡೆ ಹೋಯಿತ್ತಲ್ಲಾ.
    ಒಪ್ಪಚ್ಚಿ ಬಳಿಕ ಕಿಂಕಿಲನಾಗಿ, ಮತ್ತೊಪ್ಪಚ್ಚಿ ಬಳಿಕ ಅಹಂಕಾರಿಯಾದಡೆ
    ಹೋಗ ನೂಕುವ ಕಾಣಾ ನಮ್ಮ ಗುಹೇಶ್ವರಲಿಂಗವು./806

  807. ಜಂಗಮವೆ ಲಿಂಗವೆಂದು ನಂಬಿದ ಭಕ್ತನ ಕಣ್ಣ ಮುಂದೆ
    [ಜಂಗಮ] ನಿಂದು ಹೋದಡೆ,
    ಹಿಂದೆ ಮಾಡಿದ ಭಕ್ತಿಯೆಲ್ಲವೂ ನೀರಲ್ಲಿ ನೆನೆಯಿತ್ತು
    ಮಂದಮತಿಯಾಗಿ ಕಂಡೂ ಕಡೆಗಣಿಸಿ
    ಹೋಹವನು ಅಂಗವಿಕಾರಿ ನೋಡಾ.
    ಮುಂದುವರಿದು ಅವನ ಮನೆಯ ಹೊಗುವ
    ಜಂಗಮಕ್ಕೆ ಭವ ಹಿಂಗದು.
    ನಮ್ಮ ಗುಹೇಶ್ವರಲಿಂಗವು
    ಅರಿದು ಬರುದೊರೆವೋದವರ ಒಲ್ಲನು ಹೋಗಾ ಮರುಳೆ./807

  808. ಜಂಗಮವೆ ಹೊರಗಿರಲು ಲಿಂಗಾರ್ಚನೆ ಏವುದಯ್ಯಾ ?
    ಪ್ರಾಣನ ಹೊರಗಿರಿಸಿ ಎಡೆಯಾಡುವ ದೇಹವುಂಟೆ ?
    ಶರಣರು ಬಂದು ಬಾಗಿಲಲ್ಲಿ ನಿಂದಿರಲು
    ತನ್ನ ತಾ ಮರೆದಿಪ್ಪವರ ಕಂಡಡೆ
    ನಮ್ಮ ಗುಹೇಶ್ವರಲಿಂಗ ಒಡೆಯ ಹಾಯ್ಕದೆ ಮಾಣ್ಬನೆ ?/808

  809. ಜಂಗಮಸ್ಥಲಕ್ಕೆ ಲಕ್ಷಣವಾವುದೆಂದಡೆ ಹೇಳಿಹೆ ಕೇಳಿರಣ್ಣಾ :
    ಮೂರರ ಹೊಲಿಗೆಯ ಬಿಚ್ಚಿ ಆರ ಮಾಡಬೇಕು.
    ಆರರ ತಿರುಳ ತೆಗೆದು ಒಂದರೊಳಗೆ ನಿಲಿಸಬೇಕು,
    ಐದರ ಮುಸುಕನುಗಿದು, ಐದರ ಕಳೆಯ ಕೆಡಿಸಿ
    ಐದರ ನಿಲವನಡಗಿಸಿ, ಮೂರರ ಮುದ್ರೆಯನೊಡೆದು
    ನಾಲ್ಕರೊಳಗೆ ನಿಲ್ಲದೆ, ಮೂರು ಮುಖವು ಒಂದು ಭಾಗವಾಗಿ ಇರಬೇಕು !
    ಈ ಭೇದವನರಿಯದೆ ಸುಳಿವರ ಕಂಡು
    ಬೆರಗಾದೆ ಕಾಣಾ ಗುಹೇಶ್ವರಾ./809

  810. ಜಂಬೂದ್ವೀಪದ ವ್ಯವಹಾರಿ ಖಂಡ ಭಂಡವ ತುಂಬಿ
    ಕುಂಬಿನಿಯುದರದ ಮೇಲೆ ಪಸರವನಿಕ್ಕಿದ.
    ಉಷ್ಣ ತೃಷ್ಣೆ ಘನವಾಗಿ, ಕಡಲೇಳು ಸಮುದ್ರವ ಕುಡಿದು
    ನೀರಡಿಸಿದಾತ ಅರಲುಗೊಂಡು ಬೆರಗಾದ.
    ಶಿಶು ತಾಯ ಹೆಣನ ಹೊತ್ತುಕೊಂಡು ಹೆಸರ ಹೇಳುತ್ತೈದಾನೆ !
    ಗುಹೇಶ್ವರನೆಂಬ ನಿಲವ ವಸುಧೆಯಾಕೃತಿ ನುಂಗಿತ್ತು./810

  811. ಜಗ[ದ್]ವಂದ್ಯರೆಂದು ನುಡಿದು ನಡೆವರು ನೋಡಾ.
    ಭವಬಂಧನದ ಕುಣಿಕೆಯ ಕಳೆಯಲರಿಯರು ನೋಡಾ.
    ಭವ ತಮ್ಮ ತುಳಿ ತುಳಿದು ಕೊಂದಿತ್ತು ನೋಡಾ !
    ಶಬ್ದವೇದಿಗಳೆಂದು ನುಡಿದು ನಡೆವರು ನೋಡಾ,
    ನಿಃಶಬ್ದ ವೇದಿಸದಿರ್ದಡೆ, ಗುಹೇಶ್ವರ ನೋಡಿ ನಗುತ್ತಿಪ್ಪನೋಡಾ !/811

  812. ಜಗತ್ತಿನ ಹೊಲೆಯನೆಲ್ಲವನು ಉದಕ ಕೊಳುವುದು,
    ಆ ಉದಕದ ಹೊಲೆಯ ಕಳೆದಲ್ಲದೆ
    ಲಿಂಗಕ್ಕೆ ಮಜ್ಜನಕ್ಕೆರೆವ ಲಿಂಗದ್ರೋಹಿಗಳ ಮಾತಕೇಳಲಾಗದು.
    ಮೇಘಬಿಂದುವಿನಿಂದಾದ ಉದಕ, ಸೂರ್ಯನ ಮುಖದಿಂದಾಗಿ ದ್ರವ್ಯ,
    ಅಗ್ನಿಯ ಮುಖದಿಂದಾದ ಪಾಕ-ಇಂತಿವರ ಪೂರ್ವಾಶ್ರಯವ ಕಳೆದಲ್ಲದೆ
    ಭಕ್ತ ಮಾಹೇಶ್ವರರೂ ಶೀಲಪರರೂ ಮೊದಲಾದ
    ನಾನಾ ವ್ರತಿಗಳು ಲಿಂಗಕ್ಕೆ ಮಜ್ಜನವ ಮಾಡಲಾಗದು,
    ಅರ್ಪಿಸಲಾಗದು, ಅದೆಂತೆಂದಡೆ:
    ಉದಕದ ಪೂರ್ವಾಶ್ರಯವನು, ದ್ರವ್ಯದ ಪೂರ್ವಾಶ್ರಯವನು,
    ಕಳೆದಲ್ಲದೆ ಲಿಂಗಕ್ಕೆ ಅರ್ಪಿಸಬಾರದು.
    ಇಂತೀ ತ್ರಿವಿಧದ ಪೂರ್ವಾಶ್ರಯವ ಕಳೆವ ಪರಿಯೆಂತೆಂದಡೆ:
    ಉದಕದ ಪೂರ್ವಾಶ್ರಯವ ಮಂತ್ರಯುಕ್ತವಾಗಿ
    ಜಂಗಮದ ಪಾದೋದಕದಿಂದ ಕಳೆದು
    ಪಾಕಪ್ರಯತ್ನವ ಮಾಡುವುದು.
    ದ್ರವ್ಯದ ಪೂರ್ವಾಶ್ರಯ ಜಂಗಮದ ಹಸ್ತ ಪರುಷದಿಂದ ಹೋದುದಾಗಿ
    ಅಗ್ನಿಯಲಾದ ಪಾಕದ ಪೂರ್ವಾಶ್ರಯವು
    ಜಂಗಮದ ಪ್ರಸಾದದಿಂದ ಹೋಯಿತ್ತು.
    ಈ ಶಿವನ ವಾಕ್ಯಗಳನರಿದು, ಮತ್ತೆ
    ಜಂಗಮದ ಪಾದೋದಕದಿಂದ ಪಾಕಪ್ರಯತ್ನವ ಮಾಡಲಾಗದು,
    ಲಿಂಗಕ್ಕೆ ಮಜ್ಜನಕ್ಕೆರೆಯಲಾಗದೆಂಬ ಶೈವ ಬೌದ್ಧ
    ಚಾರ್ವಾಕ ಚಾಂಡಾಲ ಶಿವದ್ರೋಹಿಯ ಮಾತಕೇಳಿ,
    ಬಿಟ್ಟನಾದರೆ,-ಅವ ವ್ರತಭ್ರಷ್ಟ ಅವನ ಮುಖವ ನೋಡಲಾಗದು.
    ಸಾಕ್ಷಿ:“ಸರ್ವಾಚಾರಪರಿಭ್ರಷ್ಟಃ ಶಿವಾಚಾರೇನ ಶುಧ್ಯತಿ
    ಶಿವಾಚಾರ ಪರಿಭ್ರಷ್ಟಃ ರೌರವಂ ನರಕಂ ವ್ರಜೇತ್”-
    ಇಂತೆಂದುದಾಗಿ, ಸಮಸ್ತವಾದ ವ್ರತಂಗಳಲ್ಲಿ ಭ್ರಷ್ಟರಾದವರ
    ಶಿವಾಚಾರದಲ್ಲಿ ಶುದ್ಧನ ಮಾಡಬಹುದು,
    ಶಿವಾಚಾರದಲ್ಲಿ ಭ್ರಷ್ಟರಾದವರಿಗೆ ರೌರವ ನರಕ ತಪ್ಪದು.
    ಅವಗೆ ಪ್ರಾಯಶ್ಚಿತ್ತವಿಲ್ಲಾಗಿ
    ಅವನ ಮುಖವ ನೋಡಲಾಗದು, ಮತ್ತಂ
    “ವ್ರತಭ್ರಷ್ಟಮುಖಂ ದೃಷ್ಟ್ವಾಶ್ವಾನಸೂಕರವಾಯಸಂ
    ಅಶುದ್ಧಸ್ಯ ತಥಾದೃಷ್ಟಂ ದೂರತಃ ಪರಿವರ್ಜಯೇತ್”-ಇಂತೆಂದುದಾಗಿ,
    ವ್ರತಶೀಲಗಳಲ್ಲಿ ನಿರುತನಾದ ಶಿವಶರಣನು ಪಥದಲ್ಲಿ ಆಚಾರಭ್ರಷ್ಟನ ಕಂಡಡೆ
    ಮುಖವ ನೋಡಿದಡೆ ನಾಯ ಕಂಡಂತೆ ಸೂತಕನ ಕಂಡಂತೆ ಕಾಗೆಯ ಕಂಡಂತೆ
    ಹೇಸಿಗೆಯ ಕಂಡಂತೆ ತೊಲಗುವುದು.
    ಆ ವ್ರತವ ಬಿಡಿಸಿದವನು, ಅವನ ಮಾತ ಕೇಳಿ ಬಿಟ್ಟವನು
    ಇಬ್ಬರಿಗೂ ಗುರುಲಿಂಗಜಂಗಮ ಪಾದೋದಕ ಪ್ರಸಾದಕ್ಕೆ ಹೊರಗಾಗಿ
    ಅನಂತಕಾಲ ನರಕವನೈದುವರು. ಆ ಪಾಪಿಗಳ ಮುಖವ ನೋಡಲಾಗದು,
    ನುಡಿಸಲಾಗದು ವ್ರತನಿಷ್ಠೆಯುಳ್ಳವರು ಕಾಣಾ ಗುಹೇಶ್ವರಾ./812

  813. ಜಗತ್ಸೃಷ್ಟನಹ ಅಜನ ಕೊಂಬು ಮುರಿಯಿತ್ತು.
    ಧರೆಯ ಚಂದ್ರಸೂರ್ಯರಿಬ್ಬರೂ ನೆಲಕ್ಕೆ ಬಿದ್ದರಲ್ಲಾ !
    ಉದಯ ನಿಂದಡೆ ಅಸ್ತಮಾನವಹುದು.
    ಊರು ಬೆಂದು ಉಲುಹಳಿದುದು. -ಇದೇನು ಸೋಜಿಗವೊ !
    ದೇವ ಸತ್ತ ದೇವಿ ಕೆಟ್ಟಳು, ಆನು ಬದುಕಿದೆನು ಗುಹೇಶ್ವರಾ./813

  814. ಜಗತ್ಸ್ವಯಂಭು’ ಎಂಬ ಗುಹೇಶ್ವರನ
    ಕರಸ್ಥಲದಲ್ಲಿ ಹಿಡಿದಾಡುತ್ತಿರ್ದಡೆ
    ಆದಿಲಿಂಗವೆಂದು ಬಗೆಯದು ಲೋಕವೆಲ್ಲ.
    ಗುಹೇಶ್ವರಾ-ನಿಮ್ಮ ಶರಣ ಬಸವಣ್ಣ,
    ಅಚ್ಚಲಿಂಗವ ಹಿಡಿದ ಕಾರಣ,
    ಬರಿಯ ಲಿಂಗದ ಮಸ್ತಕವಾಯಿತ್ತು ತ್ರಿಜಗದೊಳಗೆ ! /814

  815. ಜಗದ ಕರ್ತನ ಕೈಯಲ್ಲಿ ಹಿಡಿದುಕೊಂಡು
    ಮನೆಮನೆ ತಪ್ಪದೆ ತಿರುಗುವ ತುಡುಗುಣಿಯಂತೆ
    ಕಾಡಲಾಗದು ಭಕ್ತನ, ಬೇಡಲಾಗದು ಭವಿಯ.
    ಕಾಡಿ ಬೇಡಿ ನೀವು ಒಲಿಸಿಕೊಂಡಡೆ,
    ಬೇಂಟೆಯ ಶ್ವಾನ ಮೊಲಕ್ಕೆ ಬಾಯಿದೆರೆದಂತೆ ಗುಹೇಶ್ವರಾ/815

  816. ಜಗದ ಜನವ ಹಿಡಿದು ಉಪದೇಶವ ಮಾಡಿದ ಗುರುವಿಂಗೆ,
    ಆ ಉಪದೇಶ ಕೊಟ್ಟುಕೊಂಡ ಮಾರಿಗೆ ಹೋಹುದಲ್ಲದೆ
    ಅಲ್ಲಿ ನಿಜವಳವಡುವುದೆ ?
    ತೆರನನರಿಯದ ಸಂಸಾರ ಜೀವಿಗಳು ಮಾಡಿದ ದೋಷ
    ತಮ್ಮನುಂಗಿ, ಆ ಗುರುವಿಂಗೆ ಉಪಹತಿಯ ಮಾಡುವುದು ನೋಡಾ.
    ಗುಹೇಶ್ವರಾ-ತಾನಿಟ್ಟ ಬೇತಾಳ ತನ್ನನೆ ತಿಂದಡೆ
    ಬೇಕು ಬೇಡ ಎನಲುಂಟೆ ?/816

  817. ಜಗದಗಲದ ಗಗನದ ಆನೆ ಕನಸಿನಲ್ಲಿ ಬಂದು ಮೆಟ್ಟಿತ್ತ ಕಂಡೆ
    ಅದೇನೆಂಬೆ ಹೇಳಾ ? ಮಹಾಘನವನದೆಂತೆಂಬೆ ಹೇಳಾ ?
    ಗುಹೇಶ್ವರನೆಂಬ ಲಿಂಗವನರಿದು ಮರೆದಡೆ,
    ಲೋಯಿಸರದ ಮೇಲೆ ಬಂಡಿ ಹರಿದಂತೆ !/817

  818. ಜಗದಗಲದ ಮಂಟಪಕ್ಕೆ, ಮುಗಿಲಗಲದ ಮೇಲುಕಟ್ಟಿನಲ್ಲಿ
    ಚಿತ್ರ [ವಿಚಿತ್ರ]ವ ನೋಡುತ್ತ ನೋಡುತ್ತ;
    ಧ್ಯಾನವಿಶ್ರಾಮದಲ್ಲಿ ದಿಟದಿಟವೆಂಬುದೊಂದು ದರುಶನವ ನೋಡುತ್ತ ನೋಡುತ್ತ,
    ಗಗನಗಂಬಿರದಲ್ಲಿ ಉದಯವಾಯಿತ್ತ ಕಂಡೆ !
    ಗುಹೇಶ್ವರನೆಂಬ ಲಿಂಗವು ತಾನೆಯಾಗಿ/818

  819. ಜಗದಗಲದಲ್ಲಿ ಹಬ್ಬಿದ ಬಲೆ, ಯುಗಜುಗಕ್ಕೆ ತೆಗೆಯದು ನೋಡಾ !
    [ಅದು] ಬಗೆಯಲ್ಲಿ ಭ್ರಮೆಗೊಳ್ಳದು;-ತನ್ನ ಇರವಿನ ಪರಿ ಇಂತುಟಾಗಿ !
    ಜಗದ ಪ್ರಾಣಿಗಳುಲಿದುಲಿದು ಮರಳಿ ಮತ್ತಲ್ಲಿಯೆ ಬೀಳಲು;
    ಬಲೆಯ ನೇಣು ಬಗ್ಗುರಿಯ ಕೈಯಲಿರಲು,-
    ಬಲೆಯ ನೇಣ ಕಣ್ಣಿ ಕಳಚಿ,
    ಲಿಂಗಕ್ಕೆ ಪ್ರಾಣ ಶರಣೆನ್ನುತ್ತವೆ ನಿಂದು,
    ಒಡಲುಪಾದಿಯನರಿಯದೆ ಬೆಳಗಿನಲ್ಲಿ ನಿಂದು,
    ಬೇಡಿದವರಿಗೆ ಅಣಿಮಾದಿ ಗುಣಂಗಳನಿತ್ತು,
    ಮನೋಮಧ್ಯದಲ್ಲಿ ನಿಲಿಸಿ ನೆನೆವುತ್ತಿರ್ದು ಸುಖಿಯಾದ;
    ಪ್ರಾಣನಾಥನ ಕಾಯ ಶೂನ್ಯಲಿಂಗಕ್ಕೆ, ಪ್ರಾಣಶೂನ್ಯಶರಣ.
    ಗುಹೇಶ್ವರಲಿಂಗವ ಬೆರಸಿ ಬೇರಿಲ್ಲ. /819

  820. ಜಲ ಕೂರ್ಮ ಗಜ ಫಣಿಯ ಮೇಲೆ ಧರೆ ವಿಸ್ತರಿಸಿ ನಿಲ್ಲದಂದು,
    ಗಗನವಿಲ್ಲದಂದು ಪವನನ ಸುಳುಹು ಇಲ್ಲದಂದು,
    ಅಗ್ನಿಗೆ ಕಳೆ ಮೊಳೆದೋರದಂದು, ತರು ಗಿರಿ ತೃಣಕಾಷ್ಠಾದಿಗಳಿಲ್ಲದಂದು,
    ಯುಗಜುಗ ಮಿಗಿಲೆನಿಸಿದ ಹದಿನಾಲ್ಕು ಭುವನ ನೆಲೆಗೊಳ್ಳದಂದು,
    ನಿಜವನರಿದಿಹೆನೆಂಬ ತ್ರಿಜಗಾದಿಪತಿಗಳಿಲ್ಲದಂದು-
    ತೋರುವ ಬೀರುವ ಪರಿ ಇಲ್ಲದಂದು,
    ಆ ಭಾವದಲ್ಲಿ ಭರಿತ ಅಗಮ್ಯ ಗುಹೇಶ್ವರ ನಿರಾಳವು ! /820

  821. ಜಲದ ಸತ್ವ ಜಲಚರಾದಿಗಳಿಗಲ್ಲದೆ ಬಲುಹಿಲ್ಲ
    ವಾಗದ್ವೈತಿಗಳ ಅದ್ವೈತ, ಸ್ವಯವ ಮುಟ್ಟಬಲ್ಲುದೆ ?
    ಗುಹೇಶ್ವರಲಿಂಗಕ್ಕೆ [ಅವರು] ದೂರ ಸಂಗನಬಸವಣ್ಣಾ./821

  822. ಜಲದೊಳಗಿರ್ದ ಕಿಚ್ಚು ಜಲವ ಸುಡದೆ,
    ಜಲವು ತಾನಾಗಿಯೆ ಇದ್ದಿತ್ತು ನೋಡಾ,
    ನೆಲೆಯನರಿದು ನೋಡಿಹೆನೆಂದಡೆ, ಅದು ಜಲವು ತಾನಲ್ಲ,
    ಕುಲದೊಳಗಿರ್ದು ಕುಲವ ಬೆರಸದೆ, ನೆಲೆಗಟ್ಟುನಿಂದುದನಾರು ಬಲ್ಲರೊ?
    ಹೊರಗೊಳಗೆ ತಾನಾಗಿರ್ದು-ಮತ್ತೆ ತಲೆದೋರದಿಪ್ಪುದು,
    ಗುಹೇಶ್ವರಾ ನಿಮ್ಮ ನಿಲವು ನೋಡಾ./822

  823. ಜಲದೊಳಗೆ ಹುಟ್ಟಿ ನೆಲದೊಳಗೆ ಹುದುಗಿರ್ದುದ,
    ಕೆಲಬಲದೊಳಗಿರ್ದವರೆಲ್ಲಾ ಬಲ್ಲರೆ ?
    ಗಾಳಿಯೊಳಗಿಪ್ಪ ಜ್ಯೋತಿ ಕೆಡದೆ ಇದ್ದುದ ಕಂಡು -ನಾನು ಬೆರಗಾದೆ !
    ಬಾಲಕ್ರೀಡೆಯೊಳಗಾಡುತ್ತಿಪ್ಪ ನಾರಿಯ ಮಕ್ಕಳೈವರು,
    ಆರೂ ಕಾಣದ ಬಾವಿಯೊಳಗೆ ಬಿದ್ದಿರಲು,
    ಬೇರೆ ಮತ್ತೆ ಜ್ಞಾನವೆಲ್ಲಿಯದೊ ?
    ಗುಹೇಶ್ವರಾ, ನಿಮ್ಮನರಿಯದ, ಬರಿಯರಿವಿನ ಹಿರಿಯರ ಕಂಡಡೆ,
    ನಾನು ನಾಚುವೆನಯ್ಯಾ./823

  824. ಜಲದೊಳಗೆ ಹುಟ್ಟಿದ ಹಲವು ಬಣ್ಣದ ವೃಕ್ಷ,
    ಕೊಂಬಿಲ್ಲದೆ ಹೂವಾಯಿತ್ತು, ಇಂಬಿನಲ್ಲಿ ಫಲದೋರಿತ್ತು !
    ಜಂಬೂದ್ವೀಪದ ಮುಗ್ಧೆಯ ಅಂಗೈಯ ಅರಳುದಲೆ
    ಇಂದ್ರನ ವಾಹನವ ನುಂಗಿ,
    ಬ್ರಹ್ಮರಂಧ್ರದೊಳಗೆ ಆಸನ ಪವನವ ದೃಢಸೂಸಿ
    ಬೀಸರವೋಗದ ಶಿವಯೋಗ !
    ಸಾಕ್ಷೀಭೂತಾತ್ಮದ ಮಾತು ಮಥನವ ನುಂಗಿ
    ಜ್ಯೋತಿಯೊಳಗಣ ಕರ್ಪುರದ ಬೆಳಗಿನಂತಿದ್ದಿತ್ತು
    ಗುಹೇಶ್ವರಲಿಂಗದಲ್ಲಿ ಯೋಗ ! /824

  825. ಜಲವಿಲ್ಲದ ಕೆರೆ, ಫಲವಿಲ್ಲದ ಬನ,
    ಭಕ್ತನಿಲ್ಲದ ಗ್ರಾಮ ಸುಡುಗಾಡಯ್ಯಾ,
    ಅಲ್ಲಿ ಶಿವನಿಲ್ಲ,
    ಪ್ರೇತಜಡಾರಣ್ಯದಲ್ಲಿ ಹೋಗಬಹುದೆ ಗುಹೇಶ್ವರಾ ?/825

  826. ಜವನ ಕದ್ದ ಕಳ್ಳನು ಆಗಲಿ ಮಿಕ್ಕು ಹೋದಡೆ,
    ಅಗಲಕ್ಕೆ ಹಬ್ಬಿತ್ತು ಅಲ್ಲಲ್ಲಿ ನೋಡಲು.
    ಶರಣರ ಸಂಗವನರಸುವರೆಲಾ ್ಲಅಲ್ಲಲ್ಲಿ ನೋಡಿರೆ !
    ಸಾಧಕರೆಲ್ಲರೂ ಸಾದಿಸ ಹೋಗಿ,
    ಅಭೇದ್ಯವನರಿಯದೆ ಕೆಟ್ಟರು ಗುಹೇಶ್ವರಾ./826

  827. ಜಾತಿಜಂಗಮ ಒಂದು ಕೋಟಾನುಕೋಟಿ,
    ನೀತಿಜಂಗಮ ಒಂದು ಕೋಟಾನುಕೋಟಿ,
    ಸಿದ್ಧಜಂಗಮ ಒಂದು ಕೋಟಾನುಕೋಟಿ,
    ಜ್ಞಾನಜಂಗಮ ತ್ರೈಲೋಕ ದುರ್ಲಭ ಗುಹೇಶ್ವರಾ./827

  828. ಜಾತಿಭೇದಂಗಳನು ಅರಿವುದಯ್ಯಾ.
    ಸಾಕ್ಷಾತ್ ಹಿಂದು ಮುಂದ ಹರಿವುದಯ್ಯಾ.
    ಪ್ರೀತಿಯಿಂದ ಬೆಳಗು ಮತ್ತಪ್ಪುದಯ್ಯಾ.
    ಆದಡೆ,-ಆತ ಗುಹೇಶ್ವರನೆಂದರಿವುದಯ್ಯಾ/828

  829. ಜಾನು ಜಂಗೆಯಲ್ಲಿ ಹುಟ್ಟಿ ಜಂಗಮವೆನಿಸಿಕೊಳಬಹುದೆ ?
    ಆಠಾವು ಹಿಂಗಿದಡೆ ಭಂಗಿತನು ಕಂಡಾ.
    ಅಂತರಂಗದಲೊದಗೂದನರಿಯರು
    ಗುಹೇಶ್ವರನೆಂಬುದು ಮೀರಿದ ಘನವು/829

  830. ಜಾಲಗಾರನ ಕಾಲು ಮುಳ್ಳು ತಾಗಿ ನೊಂದಿತ್ತೆಂಬಂತೆ,
    ಸೂನೆಗಾರನ ಮನೆಯಲ್ಲಿ ಹೆಣ ಹೋಗಿ ಅಳುವಂತೆ,
    ಕನ್ನಗಳ್ಳನ ಮನೆಯಲ್ಲಿ ಬಟ್ಟಲು ಹೋಗಿ ಮರಗುವಂತೆ,-
    ಠಕ್ಕನ ಪೂಜೆಗೆ ಮೆಚ್ಚುವನೆ ನಮ್ಮ ಗುಹೇಶ್ವರನು?/830

  831. ಜಿಹ್ವೆಯ ಮುಖದಿಂದುಂಡು ಗುಹ್ಯದ್ವಾರದಿಂ ಬಿಡುವನೆ ಯೋಗಿ ?
    ಅಲ್ಲ, ನಿಲ್ಲು.
    ಶುಕ್ಲ ಶೋಣಿತಮಲದೇಹಿಯಲ್ಲ-
    ಇಬ್ಬಟ್ಟೆಯಂ ಕಟ್ಟಿದ ಮಹಾಯೋಗಿ !
    ಮೇಲಿಪ್ಪ ಕೈಲಾಸವ ಮರ್ತ್ಯಕ್ಕೆ ತಂದು ನಿಲಿಸಿದ,
    ಸರಿಯಿಲ್ಲದ ಪ್ರತಿಯಿಲ್ಲದ ಗುಹೇಶ್ವರ
    ಸಿದ್ಧರಾಮಯ್ಯದೇವರು ತಾನೆ./831

  832. ಜೀವಕ್ಕೆ ಜೀವವೇ ಆಧಾರ
    ಜೀವತಪ್ಪಿಸಿ ಜೀವಿಸಬಾರದು.
    “ಪೃಥ್ವೀಬೀಜಂ ತಥಾ ಮಾಂಸಂ ಅಪ್ದ್ರವ್ಯಂ ಸುರಾಮಯಂ
    ಆತ್ಮಾ ಜೀವಸಮಾಯುಕ್ತಂ ಜೀವೋ ಜೀವೇನ ಭಕ್ಷಯೇತ್ ಎಂದುದಾಗಿ
    ಅಹಿಂಸಾ ಪರಮೋಧರ್ಮವೆಂಬ ಶ್ರಾವಕರನು ಕಾಣೆ.
    ಲಿಂಗಾರ್ಪಿತವಾದುದೆಲ್ಲ ಶುದ್ಧ; ಉಳಿದುದೆಲ್ಲ ಜೀವನ್ಮಯ ಕಾಣಾ,
    ಗುಹೇಶ್ವರಾ. /832

  833. ಜೀವತಾಮಸದ ಮಾಯದ ಬಲೆಯ ಭ್ರಾಂತಿಂಗೆ ಸೋಲುವ ಶರೀರ !
    ಸಂಸಾರ ಸಂಗವ ಭೇದಿಸಿ ನೋಡುವಡೆ ದೂರ,
    ಚಿಂತೆಯನೆ ಗೆಲಿದು ಸುಳಿದಡೆ,
    ಗುಹೇಶ್ವರನೆಂದರಿದ ಶರಣಸಾರಾಯನು./833

  834. ಜೀವವಿಲ್ಲದ ಹೆಣನ ಹಿಡಿದಾಡುವರಯ್ಯಾ.
    ಪ್ರತಿಯಿಲ್ಲದಪ್ರತಿಗೆ ಪ್ರತಿಯ ಮಾಡುವರಯ್ಯಾ.
    ಶಿರವಿಲ್ಲದ ಮುಂಡಕ್ಕೆ ಸೇಸೆಯನಿಕ್ಕುವರಯ್ಯಾ-ಗುಹೇಶ್ವರ./834

  835. ಜೂಜಿನ ವೇಧೆಯುಂಟು ಜಾಗರದ ಬಲವಿಲ್ಲ;
    ಆಗಲೂ ಗೆಲಲುಂಟೆ ಪ್ರಾಣಪದತನಕ?
    ರತುನದ ಸರ ಹರಿದು ಸೂಸಿ ಬಿದ್ದಡೆ
    ಮಾಣಿಕವ ಬೆಲೆಯಿಟ್ಟು ಬಿಲಿತವರಿಲ್ಲ,
    ಸರ್ಪಿಣಿ ಸರ್ಪನ ನುಂಗಿ [ದೀಪ] ನುಂಗಿತ್ತು
    ಇದು, ಯೋಗದ ದೃಷ್ಟಾಂತ ಗುಹೇಶ್ವರಾ. /835

  836. ಜ್ಞಾತೃವೆ ಅರಸುವುದು ಜ್ಞಾನವೆ ಅರಿವುದು.
    ಜ್ಞೇಯವೆ ನಿಶ್ಚಯಿಸುವುದು.
    ಈ ಜ್ಞಾತೃ ಜ್ಞಾನ ಜ್ಞೇಯವೆಂಬ ತ್ರಿವಿಧಸಾಧನದಿಂದ
    ಲಿಂಗವನರಸಿ ಲಿಂಗವನರಿದು ಲಿಂಗವ ಬೆರಸಿ ಲಿಂಗವಾದ ಮತ್ತೆ,
    ಜ್ಞಾತೃ ಜ್ಞಾನ ಜ್ಞೇಯವೆಂಬ ತ್ರಿವಿಧಭ್ರಾಂತಿಸೂತಕ ಹೋಯಿತ್ತು
    ನಿಜವಾಯಿತ್ತು ಕಾಣಾ ಗುಹೇಶ್ವರಾ/836

  837. ಜ್ಞಾನಚಕ್ರ:
    ಪರಮ ತತ್ವ ಪರಮಜ್ಞಾನ ಪರಮಾರ್ಥ ಪರಾಪರ
    ವಾಙ್ಮನಕ್ಕಗೋಚರ ಶಬ್ದಗಂಬಿರ ಉಪಮಾತೀತ, ಉನ್ನತ ಪರಶಿವ,
    ಜ್ಞಾನಜ್ಯೋತಿ ಸುಜ್ಞಾನದ ಪ್ರಭೆಯ ಬೆಳಗಿನೊಳಗೆ ಸುಳಿದಾಡುವ
    ಪರಮಾನಂದದ ಮಹಾಮಹಿಮಂಗೆ,
    ಶಿವಜ್ಞಾನವೆ ಶೃಂಗಾರ, ಮಹಾಬೆಳಗೆ ವಿಭೂತಿ, ಪಂಚಬ್ರಹ್ಮವೆ ದರ್ಶನ
    ಗಗನಸ್ಥಾನವೆ ಕಂಥೆ, ಆಕಾಶವೆ ಟೊಪ್ಪರ,
    ಅಜಾಂಡ-ಬ್ರಹ್ಮಾಂಡವೆ ಕರ್ಣಕುಂಡಲ,
    ಆದಿ ಆಧಾರವೆ ಕಕ್ಷಪಾಳ ಅನಾಹತವೆ ಒಡ್ಯಾಣ, ಅದ್ವೈತವೆ ಯೋಗವಟ್ಟಿಗೆ,
    ಅಗಮ್ಯವೆ ಯೋಗವಾವುಗೆ, ಅಚಳಿತವೆ ಖರ್ಪರ, ಅಪ್ರಾಮಣವೆ ಲಾಕುಳ,
    ಅವಿಚಾರವೆ ಸುಳುಹು, ಅಕಲ್ಪಿತವೆ ಬಿಕ್ಷೆ, ಕೊಂಡುದೆ ಗಮನ, ನಿಂದುದೆ ನಿವಾಸ,-
    ನಿಶ್ಚಿಂತವೆಂಬ ಆಶ್ರಮದಲ್ಲಿ ನಿರಾಕುಳವೆಂಬ ಸಿಂಹಾಸನವನಿಕ್ಕಿ;
    ಗಗನಗಂಬಿರದ ಬಾವಿಯೊಳಗೆ ಅಗೋಚರದ ಅಗ್ಘಣಿಯ ತಂದು
    ಮಹಾಘನಪ್ರಾಣಲಿಂಗಕ್ಕೆ ಮಂಗಳದ ಬೆಳಗಿನಲ್ಲಿ ಮಜ್ಜನಕ್ಕೆರೆದು;
    ಬಿಂದ್ವಾಕಾಶವೆ ಗಂಧ, ಮಹದಾಕಾಶವೆ ಅಕ್ಷತೆ, ಪರಾಪರವೆ ಪತ್ರೆಪುಷ್ಪ,
    ನಿರ್ಮಳವೆ ಲಿಂಗಾರ್ಚನೆ, ಮಹಾಪ್ರಕಾಶವೆ ಪೂಜೆ,
    ನಿತ್ಯನಿರಂಜನವೆ ಧೂಪದೀಪಾರತಿ,
    ಸಕಲ ಭುವನಾದಿಭುವನಂಗಳೆ ಸಯದಾನ, ಆಚಾರವೆ ಅರ್ಪಿತ, ಮಹತ್ವವೆ ಸಿತಾಳ,
    ಅಖಂಡಿತವೆ ಅಡಕೆ, ಏಕೋಭಾವವೆ ಎಲೆ, ಶುದ್ಧಶಿವಾಚಾರವೆ ಸುಣ್ಣ-
    ವಿವೇಕ ವಿಚಾರದಿಂದ ವೀಳೆಯವನವಧರಿಸೂದು.
    ಮಹಾಲಿಂಗದ ಪರಿಣಾಮವೆ ಪ್ರಸಾದ, ಸಮ್ಯಕ್ ಜ್ಞಾನವೆ ಸಂತೋಷ.
    ಸಹಜ ನಿರಾಭಾರಿಗಳ ಮೇಳದಿಂದ, ನಿಸ್ಸೀಮದ ನಿಭ್ರಾಂತಿನ ಸುಸಂಗದಲ್ಲಿ-
    ನಿರಾಶಾಪದವೆ ಅನುಕೂಲ, ನಿಶ್ಶಬ್ದವೆ ಅನುಭಾವ,
    ಅನುಪಮದ ನಿಶ್ಶೂನ್ಯವೆ ವಿಶ್ರಾಮ, ನಿರಾಕಾರವೆ ಗಮನ.
    ನಿರಂತರ ಪಾತಾಳ ಊಧ್ರ್ವದ ಪವನ;-ತ್ರಿಭುವನಗಿರಿಯೆಂಬ ಪರ್ವತವನೇರಿ,
    ಕಾಯವೆಂಬ ಕದಳಿಯ ಹೊಕ್ಕು ಸುಳಿದಾಡುವ
    ಪರಮಾನಂದದ ಮಹಾಮಹಿಮಂಗೆ;
    ಇಹಲೋಕವೇನು ? ಪರಲೋಕವೇನು ?-
    ಅಲ್ಲಿಂದತ್ತ ಆಗಮ್ಯ ನಿರಾಳ ಪರಮಜ್ಞಾನದ ಸಿದ್ಧಿ ಮಹಾಲಿಂಗದ ಬೆಳಗು,
    ಗುಹೇಶ್ವರಾ, ನಿಮ್ಮ ನಿಜವನರಿದ ಮಹಾಮಹಿಮ ಶರಣಂಗೆ,
    ನಮೋ ನಮೋ ಎಂಬೆನು./837

  838. ಜ್ಞಾನದ ಉಬ್ಬು ಕೊಬ್ಬಿನಲ್ಲಿ ನುಡಿವುತ್ತಿಪ್ಪರೆಲ್ಲರ (ಉಲಿವುತ್ತಿಪ್ಪರೆಲ್ಲರ ?);
    ನಾಮ ನಾಸ್ತಿಯಾಗದು, ತನುಗುಣ ನಾಸ್ತಿಯಾಗದು,
    ಕರಣಾದಿಗುಣಂಗಳು ನಾಸ್ತಿಯಾಗವು, ಕರಸ್ಥಲವು ನಾಸ್ತಿಯಾಗದು.
    ಇದೆತ್ತಣ ಉಲುಹೊ ಗುಹೇಶ್ವರಾ ?/838

  839. ಜ್ಞಾನದಿಂದ ನಿಮ್ಮನರಿದಿಹೆನೆಂದಡೆ:
    ಅರಿವಿಂಗೆ ಬಂದಾಗಲೆ ಕುರುಹು.
    ಕುರುಹಿಂಗೆ ಕೇಡುಂಟು;
    ಜ್ಞಾನವೆಂಬುದೇನು ? ಮನೋಭೇದ !
    ಇಂತಪ್ಪ ಜ್ಞಾನದ ಕೈಯಲ್ಲಿ,
    ಅರುಹಿಸಿಕೊಂಡಡೆ ನೀ ದೇವನಲ್ಲ,
    ಅರಿಯದಿದ್ದಡೆ ನಾ ಶರಣನಲ್ಲ.
    ನೀ ದೇವ, ನಾ ಶರಣನೆಂತಾದೆ ಹೇಳಾ ಗುಹೇಶ್ವರಾ ?/839

  840. ಜ್ಞಾನದುದಯವೇ ಭಕ್ತ,
    ಜ್ಞಾನದ ಶೂನ್ಯವೇ ಐಕ್ಯ.
    ಇಂತೀ ಜ್ಞಾನದಾದ್ಯಂತವನರಿವರಿವೆ ಸರ್ವಜ್ಞನಾದ ಈಶ್ವರ ನೋಡಾ.
    ಅದೆಂತೆಂದಡೆ:
    “ಚಿದೋದಯಶ್ಚ ಸದ್ಭಕ್ತೋ ಚಿತ್ಯೂನ್ಯಂಚೈಕ್ಯಮೇವ ಚ
    ಉಭಯೋರೈಕ್ಯ ವಿಜ್ಞೇಯಾತ್ಸರ್ವಜ್ಞಮೀಶ್ವರಃ” (?)
    ಎಂದುದಾಗಿ
    ಇಂತೀ ಷಟ್ಸ್ಥಲದೊಳಗಾದ್ಯಂತವಡಗಿಹ ಭೇದವ
    ನೀ ನಲ್ಲದನ್ಯರೆತ್ತ ಬಲ್ಲರು ಗುಹೇಶ್ವರಾ./840

  841. ಜ್ಞಾನೋದಯವಾಗಿ ಷಟ್ಸ್ಥಲದ ನಿರ್ಣಯವೆಂತುಟೆಂದು ವಿಚಾರಿಸೆ:
    ಮೊದಲಲ್ಲಿ ಭಕ್ತಸ್ಥಲವೆಂತು ಹೇಳಿತ್ತು-
    ಅಂತೆ ನಡೆದು ಪೂರೈಸಿ ಮಾಹೇಶ್ವರಸ್ಥಲಕ್ಕೆ ಬಂದು,
    ಮಾಹೇಶ್ವರಸ್ಥಲವೆಂತು ಹೇಳಿತ್ತು-
    ಅಂತೆ ನಡೆದು ಪೂರೈಸಿ ಪ್ರಸಾದಿಸ್ಥಲಕ್ಕೆ ಬಂದು,
    ಪ್ರಸಾದಿಸ್ಥಲವೆಂತು ಹೇಳಿತ್ತು-
    ಅಂತೆ ನಡೆದು ಪೂರೈಸಿ ಪ್ರಾಣಲಿಂಗಿಸ್ಥಲಕ್ಕೆ ಬಂದು,
    ಪ್ರಾಣಲಿಂಗಿಸ್ಥಲವೆಂತು ಹೇಳಿತ್ತು-
    ಅಂತೆ ನಡೆದು ಪೂರೈಸಿ ಶರಣಸ್ಥಲಕ್ಕೆ ಬಂದು,
    ಶರಣಸ್ಥಲವೆಂತು ಹೇಳಿತ್ತು-
    ಅಂತೆ ನಡೆದು ಪೂರೈಸಿ ಐಕ್ಯಸ್ಥಲಕ್ಕೆ ಬಂದು,
    ಐಕ್ಯಸ್ಥಲವೆಂತು ಹೇಳಿತ್ತು-
    ಅಂತೆ ನಡೆದು ಪೂರೈಸಿ ನಿರವಯಸ್ಥಲಕ್ಕೆ ಬಂದು
    ನಿರಾಳಕ್ಕೆ ನಿರಾಳನಾದೆನಯ್ಯಾ ಗುಹೇಶ್ವರಾ./841

  842. ಜ್ಯೋತಿ ಕಂಡಾ, ಇರಲು ಕತ್ತಲೆ ಕಂಡಾ !
    ನಿಧಾನ ಕಂಡಾ, ಇರಲು ಬಡತನ ಕಂಡಾ !
    ಪ್ರಸಾದ ಕಂಡಾ, ಕೊಂಡಡೆ ಪ್ರಳಯ ಕಂಡಾ !
    ಗುಹೇಶ್ವರ ಕಂಡಾ, ಇದು ಭ್ರಾಂತು ಕಂಡಾ !/842

  843. ಜ್ಯೋತಿಯೊಳಗಣ ಕರ್ಪುರಕ್ಕೆ, ಅಪ್ಪುವಿನ ಕೈಯಲಿಪ್ಪ ಉಪ್ಪಿಂಗೆ,
    ಶ್ರೀಗುರುವಿನ ಹಸ್ತದೊಳಗಿಪ್ಪ ಶಿಷ್ಯಂಗೆ-ಈ ಮೂರಕ್ಕೆಯೂ
    ಬೇರೆ ಕ್ರಿಯಾವರ್ತನೆಯುಂಟೆ ಗುಹೇಶ್ವರಾ ?/843

  844. ಡೊಂಕನ ಕೊಂಡು ಡೊಂಕನ ಕಾಡುವಡೆ
    ನಮ್ಮ ಡೊಂಕನೆ ಸಾಲದೆ ?
    ಕೆಮ್ಮುವನಾದಡೆ ನಮ್ಮವನೆ ಸಾಲದೆ ?
    ಎಂಬ ಲೋಕದ ಗಾದೆಯ ಮಾತಿನಂತೆ;
    ಈ ಡೊಂಕನ ಕೊಂಡು ಸಸಿನವ ಕೊಡಬಲ್ಲಡೆ
    ಅವರ ಹಿರಯರೆಂಬೆ ಗುರುವೆಂಬೆ.
    ಅವರಿಗೆ ನಮೋ ನಮೋ ಎಂಬೆ.
    ಈ ಡೊಂಕನ ಕೊಂಡು ಸಸಿನವ ಕೊಡಲರಿಯದಿದ್ದಡೆ,
    ಆ ಗುರುವಿಂಗೆ ಏಳನೆಯ ನರಕ,
    ಭವಘೋರದಲ್ಲಿ ಓಲಾಡುತ್ತಿಹ.
    ಇದು ಕಾರಣ,
    ಡೊಂಕನ ಕೊಂಡು ಸಸಿನವ ಕೊಡಬಲ್ಲ
    ಗುರು, ಅಪೂರ್ವ ಕಾಣಾ ಗುಹೇಶ್ವರಾ./844

  845. ಭಕ್ತ ಭಕ್ತನೆಂದೇನೊ ? ಭವಿಗಳು ಮನೆಯಲುಳ್ಳನ್ನಕ್ಕ ಭಕ್ತನೆ ?
    ಭಕ್ತ ಭಕ್ತನೆಂದೇನೊ ? ಅನ್ಯದೈವ ಸುರೆ ಮಾಂಸವುಳ್ಳನ್ನಕ್ಕ ಭಕ್ತನೆ ?
    ಭಕ್ತ ಭಕ್ತನೆಂದೇನೊ ? ಹರಕೆ ತೀರ್ಥಯಾತ್ರೆಯುಳ್ಳನ್ನಕ್ಕ ಭಕ್ತನೆ ?
    ಭಕ್ತ ಭಕ್ತನೆಂದೇನೊ ? ತನು ಮನ ಧನ ವಂಚನೆಯುಳ್ಳನ್ನಕ್ಕ ಭಕ್ತನೆ ?
    ಇವರೆಲ್ಲರು ಎದೆಯಲ್ಲಿ ಕಲ್ಲನಿರಿಸಿಕೊಂಡು
    ಸಾವಿಂಗೆ ಸಂಬಳಿಗರು ಕಾಣಾ ಗುಹೇಶ್ವರಾ./845

  846. ಭಕ್ತರ ಮನೆಯೊಳಗೆ ಮನೆಕಟ್ಟಿಕೊಂಡಿಪ್ಪ ಜಂಗಮದ ಇಂಗಿತಾಕಾರವೆಂತೆಂದಡೆ
    ಆ ಭಕ್ತನ ತನುಮನದೆಡೆಯಲ್ಲಿ ಮೋಹಿತನಾಗದೆ,
    ಹೋಹ, ಬಾಹ, ಭಕ್ತ ಜಂಗಮಕ್ಕೆ ಮಾಡುವ ದಾಸೋಹ ನೋಡಿ,
    ಅವರಿಗೆ ಮಾಡುವಡೆ ಎನಗೆ ಮಾಡುವ ಭಕ್ತಿಯೆಂದು ಇದ್ದ ಪರಿಯಲ್ಲಿ ಸುಖಿಸಿ,
    ಬಂದ ಪರಿಯಲ್ಲಿ ಪರಿಣಾಮಿಸಿ,
    ನಿಷ್ಕಾಮ್ಯ, ನಿಸ್ಪೃಹ, ನಿರ್ದೊಷಿಯಾಗಿ,
    ಕೋಪ ತಾಪವಿಲ್ಲದೆ ಭಕ್ತಿ ಜ್ಞಾನಯುಕ್ತನಾಗಿ
    ಆ ಭಕ್ತನ ನಡೆ ನುಡಿಯಲ್ಲಿ ಜಡ ಹುಟ್ಟಿದರೆ ಅದಲ್ಲವೆಂದು ಕಳೆದು,
    ಸತ್ಯದ ಬುದ್ಧಿಗಲಿಸಿ ಸಂತೈಸಿಕೊಂಡು ಇಹುದೆ ಜಂಗಮಲಕ್ಷಣ.
    ಅಂಥ ಜಂಗಮನೆ ಪ್ರಾಣವಾಗಿ,
    ಅದರಾಜ್ಞೆಯ ಮೀರದೆ
    ಮನವಚನಕಾಯದಲ್ಲಿ ಉದಾಸೀನವಿಲ್ಲದೆ,
    ಅವರ ಕೂಡಿಕೊಂಡು ದಾಸೋಹವ ಮಾಡುವುದೆ ಭಕ್ತನ ಲಕ್ಷಣವು.
    ಈ ಎರಡಕ್ಕೂ ಭವಂ ನಾಸ್ತಿಯಹುದು.
    ಇಂತಪ್ಪ ಭಕ್ತ ಜಂಗಮದ ಸಕೀಲಸಂಬಂಧವ
    ಬಸವಣ್ಣ ಮೆಚ್ಚುವನು ಕಾಣಾ ಗುಹೇಶ್ವರಾ./846

  847. ಭಕ್ತಿಯನಾರು ಬಲ್ಲರು ? ಬಲ್ಲವರನಾರನೂ ಕಾಣೆ.
    ತನ್ನ ಮರೆದು ಇದಿರ ಹರಿದು ಇರಬಲ್ಲಡೆ ಆತ ಭಕ್ತ .
    ಆ ಭಕ್ತಂಗೆ ಶಿವನೊಲಿವ.
    ನುಡಿಯಲ್ಲಿ ಭಕ್ತಿಯನಾಡಿ ನಡೆಯಲ್ಲಿ ಇಲ್ಲದಿದ್ದಡೆ
    ಕಡೆಮುಟ್ಟಿ ಶಿವನೊಲಿವುದು ಹುಸಿ.
    ಮರೆದು ಕೋಪದುರಿಯನುಗುಳಿ
    ಅರಿದು ಬಂದೆರಗಿದೆನೆಂಬ ನುಡಿಗೆ
    ಒಲಿವನೆ ನಮ್ಮ ಗುಹೇಶ್ವರಲಿಂಗವು ?/847

  848. ತಂಗಾಳಿ ಪರಿಮಳದೊಡಗೂಡಿ ಸುಳಿವಂತೆ,
    ಆ ಸುಳುಹಾಗಿ ಸುಳಿಯಬೇಕು.
    ನಿಂದಡೆ ನೆಟ್ಟನೆ ಭಕ್ತನಾಗಿ ನಿಂದು
    ಸಹಜ ಮಾಟವ ಮಾಡಬೇಕು.
    ಸುಳಿದಡೆ ನೆಟ್ಟನೆ ಪರಮಜಂಗಮವಾಗಿ ಸುಳಿಯಬೇಕು.
    ನಿಂದು ಭಕ್ತನಾಗಲರಿಯದ, ಸುಳಿದು ಜಂಗಮವಾಗಲರಿಯದ
    ಉಭಯಭ್ರಷ್ಟರನೇನೆಂಬೆನಯ್ಯಾ ಗುಹೇಶ್ವರಾ./848

  849. ತಂದೆಯ ಸದಾಚಾರ ಮಕ್ಕಳೆಂಬರು,
    ಗುರುಮಾರ್ಗಾಚಾರ ಶಿಷ್ಯನದೆಂಬರು.
    ಮೇಲು ಪಂಕ್ತಿಯ ಕಾಣರು ನೋಡಾ.
    ತತ್ವದ ಮೇಲು ಪಂಕ್ತಿ ಅತ್ತಲೆ ಉಳಿಯಿತ್ತು.
    ಕತ್ತಲೆಯ ಮರೆಯಲ್ಲಿ ಕಾಣರು ನೋಡಾ.
    ತತ್ವದ ಹಾದಿಯನು, ಭಕ್ತಿಯ ಭೇದವನು,
    ಇವರೆತ್ತ ಬಲ್ಲರಯ್ಯಾ ಗುಹೇಶ್ವರಾ/849

  850. ತತ್ತಿಯೊಳಗಣ ಹಕ್ಕಿಯ ಪ್ರಾಣವದೆತ್ತಣಿಂದ ತೋರಿತ್ತೊ ?
    ಅದು ಮಾತನಾಡುವ ಬೆಡಗ ಜಡಜೀವಿಗಳೆತ್ತ ಬಲ್ಲರು ?
    ಎತ್ತಿನ ಮರೆಯ ಬೇಟೆಕಾರನ
    ಅಡವಿಯ ಮೃಗವೆತ್ತ ಬಲ್ಲವು ಗುಹೇಶ್ವರಾ ?/850

  851. ತತ್ವವ ನುಡಿವ ಹಿರಿಯರೆಲ್ಲರು.
    ತುತ್ತನಿಕ್ಕುವರ ಬಾಗಿಲಲ್ಲಿ, ಅಚ್ಚುಗಪಡುತ್ತಿದ್ದರು ನೋಡಾ,
    ನಿತ್ಯಾನಿತ್ಯವ ಹೇಳುವ ಹಿರಿಯರು ತಮ್ಮ ಒಡಲ ಕಕ್ಕುಲತೆಗೆ ಹೋಗಿ,
    ಭಕ್ತಿಯ ಹೊಲಬನರಿಯದ, ಜಡಜೀವಿ ಮಾನವರ ಇಚ್ಛೆಯ ನುಡಿದು,
    ಹಲುಬುತ್ತಿಪ್ಪರು ನೋಡಾ !
    ಕತ್ತೆಗೆ ಕಪರ್ೂರವ ಹೇರಿದಂತೆ,
    ಅವರಿಗೆ ಇನ್ನೆತ್ತಣ ಮುಕ್ತಿಯೋ ಗುಹೇಶ್ವರಾ./851

  852. ತತ್ವವೆಂಬುದ ನೀನೆತ್ತ ಬಲ್ಲೆಯೊ ?
    ಸತ್ತು ಮುಂದೆ ನೀನೇನ ಕಾಬೆಯೊ ?
    ಇಂದೆ ಇಂದೆಯೊ ಇಂದೆ ಮಾನವಾ
    ಮಾತಿನಂತಿಲ್ಲ ಶಿವಾಚಾರ, ದಸರಿದೊಡಕು ಕಾಣಿರಣ್ಣಾ.
    ರಚ್ಚೆಯ ಮಾತಲ್ಲ ಬೀದಿಯ ಮಾತಲ್ಲ.
    ಏಕೋ ರಾತ್ರಿಯ ಬಿಂದು ನೋಡಾ !
    ಗುಹೇಶ್ವರನ ಕೂಡಿದ ಕೂಟ
    ಇಂದು ಸುಖ, ಮುಂದೆ ಲೇಸು/852

  853. ತತ್ವಾತತ್ವಂಗಳಿಲ್ಲದಂದು, ಸಾಕ್ಷಿಸಭೆಗಳಿಲ್ಲದಂದು,
    ಏನೇನಿಲ್ಲದಂದು, ಬಯಲು ಬಲಿವಂದು ಈ ಬಿಂದುವಾಯಿತ್ತು.
    ಆ ಬಿಂದು ಅಕ್ಷರತ್ರಯ ಗದ್ದಿಗೆಯಲ್ಲಿ ಕುಳ್ಳಿರಲು ಲೋಕದುತುಪತಿಯಾಯಿತ್ತು.
    ನಾದದ ಬಲದಿಂದ ಮೂರ್ತಿಯಾದನೊಬ್ಬ ಶರಣ.
    ಆ ಶರಣನಿಂದಾದುದು ಪ್ರಕೃತಿ,
    ಆ ಪ್ರಕೃತಿಯಿಂದಾಯಿತು ಲೋಕ ಲೌಕಿಕ
    ಆ ಲೋಕ ಲೌಕಿಕವನತಿಗಳೆದು ನಿಜದಲ್ಲಿ ನಿವಾಸಿಯಾಗಿಪ್ಪ
    ಗುಹೇಶ್ವರ, ನಿಮ್ಮ ಶರಣ ಸಂಗನಬಸವಣ್ಣ. /853

  854. ತನಗುಳ್ಳ ನಿಧಾನ ತನಗಿಲ್ಲದಂತೆ,
    ಬಂಧುಗಳೆಲ್ಲರ ನುಂಗಿ ಅಂಬುದಿ ಬತ್ತಿತ್ತು.
    ಅದುಭುತ ಸತ್ತಿತ್ತು; ರಣರಂಗವತ್ತಿತ್ತು.
    ಇರುಳು ಮಾಣಿಕವ ನುಂಗಿ ಮರಣವಾದ ಬಳಿಕ
    ಅಮೃತದ ಪುತ್ಥಳಿಯ ಹಾಲ ಕುಡಿಯ ಕರೆದಡೆ
    ಗುಹೇಶ್ವರಲಿಂಗಕ್ಕೆ ಊಟವೆಂಬುದಿಲ್ಲ ನೋಡಾ ಸಂಗನಬಸವಣ್ಣಾ./854

  855. ತನು ಉಂಟೆಂದಡೆ ಪಾಶಬದ್ಧ, ಮನ ಉಂಟೆಂದಡೆ ಭವಕ್ಕೆ ಬೀಜ.
    ಅರಿವ ನುಡಿದು ಕೆಟ್ಟೆನೆಂದರೆ ಅದೇ ಅಜ್ಞಾನ.
    ಭಾವದಲ್ಲಿ ಸಿಲುಕಿದೆನೆಂಬ ಮಾತು ಬಯಲ ಭ್ರಮೆ ನೋಡಾ.
    ಒಮ್ಮೆ ಕಂಡೆ, ಒಮ್ಮೆ ಕಾಣೆ, ಒಮ್ಮೆ ಕೂಡಿದೆ, ಒಮ್ಮೆ ಅಗಲಿದೆ
    ಎಂದಡೆ ಕರ್ಮ ಬೆಂಬತ್ತಿ ಬಿಡದು.
    ನಿನ್ನೊಳಗೆ ನೀ ತಿಳಿದುನೋಡಲು ಬಿನ್ನವುಂಟೆ ?
    ಗುಹೇಶ್ವರಲಿಂಗವನರಿವಡೆ ನೀನೆಂದೇ ತಿಳಿದು ನೋಡಾ ಮರುಳೆ ?/855

  856. ತನು ಒಂದು ದ್ವೀಪ, ಮನ ಒಂದು ದ್ವೀಪ,
    ಆಪ್ಯಾಯನ ಒಂದು ದ್ವೀಪ, ವಚನ ಒಂದು ದ್ವೀಪ.-
    ಇಂತೀ ನಾಲ್ಕು ದ್ವೀಪದೆಡೆಯ ಬೆಸಗೊಂಬಡೆ
    ಗುಹೇಶ್ವರಾ-ನಿಮ್ಮ ಸ್ಥಾನಂಗಳು./856

  857. ತನು ತರತರಂಬೋಗಿ, ಮನವು ನಿಮ್ಮಲ್ಲಿ ಸಿಲುಕಿತ್ತಯ್ಯಾ.
    ನೋಟವೇ ಪ್ರಾಣವಾಗಿ ಅಪ್ಯಾಯನ ನಿಮ್ಮಲ್ಲಿ ಆರತುದಯ್ಯಾ.
    ಸಿಲುಕಿತ್ತು ಶೂನ್ಯದೊಳಗೆ, ಗುಹೇಶ್ವರಾ ನಿರಾಳವಯ್ಯಾ !/857

  858. ತನು ದಾಸೋಹ, ಅವಯವಂಗಳೆಲ್ಲವು ಆಚಾರ,
    ಮನ ಪ್ರಾಣವೆಂಬವೆಲ್ಲವು ಅರಿವಿನ ಮೂರ್ತಿ ನೋಡಾ.
    ಒಳಗು ಹೊರಗು, ಹೊರಗು ಒಳಗು ಎಂಬುದನರಿಯದ
    ಸತ್ಯ ಸದಾಚಾರಿ ನೀನು.
    ನಿನ್ನಳವ ಅರಿಯಲು ಆನು ಏತರವನಯ್ಯಾ.
    ಅಂತರಂಗದಲ್ಲಿ ಅರಿವು ಉಂಟಾದಡೇನು ?
    ಎನ್ನ ಕಾಯದಲ್ಲಿ ಭಕ್ತಿ ಸ್ವಾಯತವಿಲ್ಲ, ಆಚಾರವೆಂಬುದು ಅತ್ತತ್ತಲಿಲ್ಲ.
    ಸರ್ವಾಚಾರಸಂಪನ್ನ [ನೀನು], ನಿನ್ನಳವ ನಾನೆತ್ತ ಬಲ್ಲೆನಯ್ಯಾ ?
    ಗುಹೇಶ್ವರ ಸಾಕ್ಷಿಯಾಗಿ,
    ನಿಮ್ಮ ಮಹಾಮನೆಯ ಕಾವಲು ಬಂಟ ನಾನೆಂಬುದ
    ನಿಮ್ಮ ಪ್ರಮಥರೆಲ್ಲಾ ಬಲ್ಲರು ಸಂಗನಬಸವಣ್ಣಾ./858

  859. ತನು ನಿಮ್ಮ ಪೂಜಿಸುವ ಕೃಪೆಗೆ ಸಂದುದು.
    ಮನ ನಿಮ್ಮ ನೆನೆವ ಧ್ಯಾನಕ್ಕೆ ಸಂದುದು.
    ಪ್ರಾಣ ನಿಮ್ಮ ನೆರೆವ ರತಿಸುಖಕ್ಕೆ ಸಂದುದು-
    ಇಂತು, ತನು ಮನ ಪ್ರಾಣ ನಿಮಗೆ ಸಂದಿಪ್ಪ
    ನಿಸ್ಸಂಗಿಯಾದ ನಿಚ್ಚಟ, -ನಿಜಲಿಂಗೈಕ್ಯ ಕಾಣಾ ಗುಹೇಶ್ವರಾ. /859

  860. ತನು ಬತ್ತಲಿದ್ದರೇನೊ ಮನ ಶುಚಿಯಾಗದನ್ನಕ್ಕರ ?
    ಮಂಡೆ ಬೋಳಾದಡೇನೊ, ಭಾವ ಬಯಲಾಗದನ್ನಕ್ಕರ ?
    ಭಸ್ಮವ ಹೂಸಿದಡೇನೊ,
    ಕರಣಾದಿ ಗುಣಂಗಳನೊತ್ತಿ ಮೆಟ್ಟಿ ಸುಡದನ್ನಕ್ಕರ ?
    ಇಂತೀ ಆಶೆಯ ವೇಷದ ಭಾಷೆಗೆ,
    ಗುಹೇಶ್ವರಾ ನೀ ಸಾಕ್ಷಿಯಾಗಿ ಛೀ ಎಂಬೆನು./860

  861. ತನು ಶುದ್ಧವಾಯಿತ್ತು ಬಸವಾ ಇಂದೆನ್ನ.
    ಮನ ಶುದ್ಧವಾಯಿತ್ತು ಬಸವಾ ಇಂದೆನ್ನ.
    ಭಕ್ತಿ ಯುಕ್ತಿ ಮುಕ್ತಿ ಶುದ್ಧವಾಯಿತ್ತು ಬಸವಾ ಇಂದೆನ್ನ.
    ಇಂತೀ ಸರ್ವವೂ ಶುದ್ಧವಾಯಿತ್ತು ಬಸವಾ ಇಂದೆನ್ನ.
    ನಮ್ಮ ಗುಹೇಶ್ವರಲಿಂಗಕ್ಕೆ
    ಆದಿಯಾಧಾರವಾದೆಯೆಲ್ಲಾ ಬಸವಣ್ಣಾ ನೀನಿಂದು. /861

  862. ತನು ಹೊರಗಿರಲು, ಪ್ರಸಾದ ಒಳಗಿರಲು
    ಏನಯ್ಯಾ ನಿಮ್ಮ ಮನಕ್ಕೆ ಮನ ನಾಚದು?
    ಪ್ರಾಣಕ್ಕೆ ಲಿಂಗದಲ್ಲಿ ಪ್ರಸಾದವ ಕೊಂಡಡೆ,
    ವ್ರತಕ್ಕೆ ಭಂಗ ಗುಹೇಶ್ವರಾ./862

  863. ತನುಗುಣನಾಸ್ತಿ ಮನಗುಣನಾಸ್ತಿ ಧನಗುಣನಾಸ್ತಿಯಾದಡೇನು ?
    ಭಾವನಾಸ್ತಿಯಾಗಿರಬೇಕು.
    ಭಾವನಾಸ್ತಿಯಾದಲ್ಲದೆ ಅರಿವು ನೆಲೆಗೊಳ್ಳದು.
    ಅರಿವು ನೆಲೆಗೊಂಡಲ್ಲಿ ಕುರುಹಿಂಗೆ ಹೊರಗು
    ಕುರುಹಳಿದು ಕೂಡುವ ಪರಮಸುಖವು,
    ಗುಹೇಶ್ವರಲಿಂಗದಲ್ಲಿ ನಿನಗೆ ಸಾಧ್ಯವಾದ ಪರಿಯ ಹೇಳಾ
    ಮಡಿವಾಳ ಮಾಚಯ್ಯಾ ?/863

  864. ತನುಗುಣನಾಸ್ತಿಯಾಗಿ ಲಿಂಗಸಂಗಿಯಾದಳು.
    ಮನಗುಣನಾಸ್ತಿಯಾಗಿ ಅರಿವುಸಂಗಿಯಾದಳು.
    ಭಾವಗುಣನಾಸ್ತಿಯಾಗಿ ಮಹಾಪ್ರಭೆ ತಾನಾದಳು.
    `ತಾನು’ `ಇದಿರು’ ಎಂಬ ಎರಡಳಿದು
    ನಮ್ಮ ಗುಹೇಶ್ವರಲಿಂಗದಲ್ಲಿ ಸ್ವಯಲಿಂಗವಾದ
    ಮಹಾದೇವಿಯಕ್ಕಗಳ ನಿಲವಿಂಗೆ ಶರಣೆನುತಿರ್ದೆನು./864

  865. ತನುವ ಗುರುವಿಂಗರ್ಪಿಸಿ, ಮನವ ಲಿಂಗಕ್ಕರ್ಪಿಸಿ,
    ಭಾವವ ಜಂಗಮಕ್ಕರ್ಪಿಸಿ, ನಿಜವ ತೃಪ್ತಿಯಲರ್ಪಿಸಿ,
    ಘನವ ಅರಿವಿಂಗೆ ಅರ್ಪಿಸಿ,
    ಅರ್ಪಿತವೆ ಅನರ್ಪಿತವಾಗಿ, ಅನರ್ಪಿತವೆ ಅರ್ಪಿತವಾಗಿ
    ಅರ್ಪಿತ ಅನರ್ಪಿತಗಳಳಿದು ನಿತ್ಯಪ್ರಸಾದಿಯಾಗಿ
    ಪ್ರಸಾದದ ಹಾದಿಯನೆಲ್ಲರಿಗೆ ತೋರಿ
    ಮಹಾಪ್ರಸಾದದ ಬೆಳವಿಗೆಯ ಮಾಡಿದನು-
    ಗುಹೇಶ್ವರನ ಶರಣ ಚನ್ನಬಸವಣ್ಣನು./865

  866. ತನುವ ಗೆಲಲರಿಯದೆ, ಮನವ ಗೆಲಲರಿಯದೆ
    ಧನವ ಗೆಲಲರಿಯದೆ, ಭ್ರಮೆಗೊಂಡಿತ್ತು ಲೋಕವೆಲ್ಲವು.
    ತನುವ ದಾಸೋಹಕ್ಕೆ ಸವೆಸಿ, ಮನವ ಲಿಂಗಧ್ಯಾನದಲ್ಲಿ ಸವೆಸಿ
    ಧನವ ಜಂಗಮದಲ್ಲಿ ಸವೆಸಿ ಗೆಲಬಲ್ಲಡೆ,
    ಸಂಗನಬಸವಣ್ಣನಲ್ಲದೆ ಮತ್ತಾರನು ಕಾಣೆ.
    ಗುಹೇಶ್ವರಾ-ನಿಮ್ಮ ಶರಣ ಸಂಗನಬಸವಣ್ಣಂಗೆ,
    ನಮೋ ನಮೋ ಎನುತಿರ್ದೆನು./866

  867. ತನುವ ತಾಗದ ಮುನ್ನ, ಮನವ ತಾಗದ ಮುನ್ನ,
    ಅಪ್ಯಾಯನ ಬಂದು ಎಡೆಗೊಳ್ಳದ ಮುನ್ನ-ಅರ್ಪಿತವ ಮಾಡಬೇಕು.
    ಗುರುವಿನ ಕೈಯಲ್ಲಿ ಎಳತಟವಾಗದ ಮುನ್ನ-ಅರ್ಪಿತವ ಮಾಡಬೇಕು.
    ಎಡದ ಕೈಯಲ್ಲಿ ಕಿಚ್ಚು, ಬಲದ ಕೈಯಲ್ಲಿ ಹುಲ್ಲು,
    ಉರಿ ಹತ್ತಿತ್ತು ಗುಹೇಶ್ವರಾ ನಿಮ್ಮ ಪ್ರಸಾದಿಯ !/867

  868. ತನುವ ತೋಂಟವ ಮಾಡಿ ಮನವ ಗುದ್ದಲಿ ಮಾಡಿ
    ಅಗೆದು ಕಳೆದೆನಯ್ಯಾ ಭ್ರಾಂತಿನ ಬೇರ
    ಒಡೆದು ಸಂಸಾರದ ಹೆಂಟೆಯ ಬಗಿದು ಬಿತ್ತಿದೆನಯ್ಯಾ ಬ್ರಹ್ಮಬೀಜವ.
    ಅಖಂಡಮಂಡಲವೆಂಬ ಬಾವಿ, ಪವನವೆ ರಾಟಾಳ
    ಸುಷುಮ್ನನಾಳದಿಂದ ಉದಕವ ತಿದ್ದಿ
    ಬಸವಗಳೈವರು ಹಸಗೆಡಿಸಿಹವೆಂದು
    ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ ,
    ಆವಾಗಳೂ ಈ ತೋಂಟದಲ್ಲಿ ಜಾಗರವಿದ್ದು
    ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ./868

  869. ತನುವರ್ಪಿತವೆಂದಡೆ ಗುರುದ್ರೋಹ.
    ಮನವರ್ಪಿತವೆಂದಡೆ ಲಿಂಗದ್ರೋಹ.
    ಧನವರ್ಪಿತವೆಂದಡೆ ಜಂಗಮದ್ರೋಹ-
    ಇಂತೀ ತನುಮನಧನಗಳೆಂಬ ಅನಿತ್ಯವನು
    ನಿತ್ಯಕ್ಕರ್ಪಿಸಿ ಭಕ್ತನಾದೆನೆಂದಡೆ, ಅದು ಅಜ್ಞಾನ ನೋಡಾ.
    ಒಡೆಯರಿಗೆ ಉಂಡೆಯ ಮುರಿದಿಕ್ಕಿ
    ನಾ ಭಕ್ತನೆಂಬ ಮಾತ ಸಮ್ಯಕ್ ಶರಣರು ಮೆಚ್ಚುವರೆ ?
    ನಮ್ಮ ಗುಹೇಶ್ವರಲಿಂಗಕ್ಕೆ,
    ನೀನು ಆವುದರಲ್ಲಿ ಏನನರ್ಪಿಸಿ ಭಕ್ತನಾದೆ ಹೇಳಾ ಸಂಗನಬಸವಣ್ಣಾ ? /869

  870. ತನುವಿಂಗೆ ತನುವಾಗಿ, ಮನಕ್ಕೆ ಮನವಾಗಿ, ಜೀವಕ್ಕೆ ಜೀವವಾಗಿ,
    ಇದ್ದುದನಾರು ಬಲ್ಲರೊ?
    ಅದು ದೂರವೆಂದು, ಸಮೀಪವೆಂದು,
    ಮಹಂತ ಗುಹೇಶ್ವರ[ನು], ಒಳಗೆಂದು ಹೊರಗೆಂದು,
    ಬರುಸೂರೆವೋದರು./870

  871. ತನುವಿನ ಕೊರತೆಗೆ ಸುಳಿಸುಳಿದು , ಮನದ ಕೊರತೆಗೆ ನೆನೆನೆನೆದು,
    ಭಾವದ ಕೊರತೆಗೆ ತಿಳಿತಿಳಿದು, ಶಬ್ದದ ಕೊರತೆಗೆ ಉಲಿದುಲಿದು,
    ಗುಹೇಶ್ವರನೆಂಬ ಲಿಂಗವು ಮನದಲ್ಲಿ ನೆಲೆಗೊಳ್ಳದಾಗಿ !/871

  872. ತನುವಿನ ಗುಣವ ವಿವರಿಸಿಹೆನೆಂದೆಡೆ, ಮನ ಶುದ್ಧವಾಗಬೇಕು.
    ಮನದ ಗುಣವ ವಿವರಿಸಿಹೆನೆಂದೆಡೆ ಇಂದ್ರಿಯಂಗಳು, ಶುದ್ಧವಾಗಬೇಕು.
    ತನು ಮನ ಇಂದ್ರಿಯಂಗಳು ಶುದ್ಧ ಸುಯಿಧಾನವಾಗಿ
    ಲಿಂಗಮುಖಕ್ಕೆ ವೇದ್ಯವಾದಲ್ಲದೆ
    ಗುಹೇಶ್ವರನ ಬೆರಸಬಾರದು ಕೇಳಾ ತಾಯೆ./872

  873. ತನುವಿನಲ್ಲಿ ತನು ಸವೆಯದು, ಮನದಲ್ಲಿ ಮನ ಸವೆಯದು,
    ಧನದಲ್ಲಿ ಧನ ಸವೆಯದು.
    ಭಕ್ತಿಯುಕ್ತಿಯ ಮಾತು ನಿನಗೇಕೆ ಹೇಳಾ ಬಸವಾ ?
    ಮಾಟಕೂಟವೆಂಬ ಕೀರ್ತಿವಾರ್ತೆಗೆ ಸಿಲುಕಿ
    ಜಂಗಮವೆ ಲಿಂಗವೆಂಬುದ ಮರೆದೆಯೆಲ್ಲಾ ಬಸವಣ್ಣಾ !
    ಗುಹೇಶ್ವರನ ಶರಣರಿಗೆ ತ್ರಿಕರಣವನೊಪ್ಪಿಸಿದಲ್ಲದೆ
    ಭಕ್ತನಾಗಬಾರದು ಕಾಣಾ ಸಂಗನಬಸವಣ್ಣಾ./873

  874. ತನುವಿನಲ್ಲಿಪ್ಪ ಲೋಭವ ಮನವ ಕದ್ದು ಮಾತನಾಡಿದಡೆ
    ಆ ತನುವೆ ಮನೋರೂಪವಾಗಿ ಕಾಣಬರುತ್ತದೆ.
    ಆ ಮನದಲ್ಲಿ ಬಯಕೆ ಸಮರತಿಯಾಗದಾಗಿ;
    ಕಾಮ(ಯ?)ದ ಕರುಳು ಲೋಭದ ಬಯಕೆಯೊಳಗದೆ.
    ಅರಿದೆನೆಂದು ಬರುಮಾತ ನುಡಿದಡೆ
    ನಮ್ಮ ಗುಹೇಶ್ವರಲಿಂಗವು ಮೆಚ್ಚ ನೋಡಾ
    ಮಡಿವಾಳ ಮಾಚಯ್ಯಾ. /874

  875. ತನುವಿಲ್ಲದೆ ಕಂಡು ಕಂಡು ನಿಂದೆ.
    ಬೆರಗಿಲ್ಲದೆ ಕಂಡು ಕಂಡು ಬೆರಗಾದೆ.
    ರೂಹಿಲ್ಲದೆ ಕಂಡರಿದೆ ಗುಹೇಶ್ವರನೆಂಬ ಲಿಂಗವ !/875

  876. ತನುವೆಂಬ ಏರಿಗೆ ಮನವೆಂಬ ಕಟ್ಟೆಯ ಮಾಡಿ,
    ಬಲಿದು ಷಡ್ವಿಧಭಕ್ತಿಯೆಂಬ ಸೋಪಾನದಿಂದ
    ಪರಮಾನಂದವೆಂಬ ಜಲವ ತುಂಬಿ
    ಕೆರೆಯ ಕಟ್ಟಬಲ್ಲವರನಾರನೂ ಕಾಣೆ !
    ನಾನು ಕಟ್ಟಿದ ಕೆರೆ ಸ್ಥಿರವಾಯಿತ್ತು ಗುಹೇಶ್ವರಾ ನಿಮ್ಮಾಣೆ./876

  877. ತನುವೆಂಬ ದೇವಸ್ಥಾನದೊಳಗೆ ಮಸ್ತಕಾಗ್ರವೆಂಬ ಸೆಜ್ಜಾಗೃಹದಲ್ಲಿ
    ಪ್ರಾಣಲಿಂಗಸ್ವಯಂಬ ಪ್ರತಿಷ್ಠೆಯಾಗಿರಲು,
    ಗುರುವೆಂಬ ಆರ್ಚಕನು ಮಂತ್ರವೆಂಬ ಆಗಮಿಕನು ಸಹ
    ಲಿಂಗವೆಂಬ ಉಚ್ಚಾಯ ವಿಗ್ರಹವನು ಕರಸ್ಥಲವೆಂಬ ರಥದಲ್ಲಿ
    ಮೂರ್ತಿಗೊಳಿಸಿ-
    ಆ ಕರಸ್ಥಲವೆಂಬ ರಥಕ್ಕೆ ಜ್ಞಾನಕ್ರಿಯೆ ಎರಡು ಪಾದದ್ವಯ ಎರಡು ಕೂಡಿ
    ನಾಲ್ಕು ಗಾಲಿಗಳಂ ಹೂಡಿ, ಪಂಚೇಂದ್ರಿಯಗಳೆಂಬ ಪತಾಕೆಗಳಂ ಧರಿಸಿ
    ಏಕೋಭಾವವೆಂಬ ಕಳಸವನಿಟ್ಟು, ದಶವಾಯುಗಳೆಂಬ ಪಾಶವಂ ಬಂದಿಸಿ
    ಷಡಂಗಗಳೆಂಬ ಮೊಳೆಗಳಂ ಬಲಿದು, ಸಪ್ತಧಾತುವೆಂಬ
    ಝಲ್ಲಿ ಪಟ್ಟೆಯನಲಂಕರಿಸಿ
    ಅಷ್ಟಮದ ಸಪ್ತವ್ಯಸನಂಗಳೆಂಬ ಆನೆ ಕುದುರೆಗಳು ಸಹ
    ಮಹಾನಾದವೆಂಬ ಭೇರಿ ವಾದ್ಯಂಗಳಿಂ
    ಷೋಡಶವಿಕಾರಂಗಳೆಂಬ ನರ್ತಕೀಮೇಳದಾರತಿಯಿಂ
    ಅಂತಃಕರಣ ಚತುಷ್ಟಯಗಳೆಂಬ ಚಾಮರಧಾರಕರಿಂ
    ಮನವೆಂಬ ಹೊರಜೆಯಿಂ ಕರಣಂಗಳೆಂಬ ಕಾಲಾಳ್ಗಳಿಂ-ಪಿಡಿಸಿ,-
    ಸುಬುದ್ಧಿಯೆಂಬ ಭೂಮಿಯಲ್ಲಿ ಆನಂದವೆಂಬರಸು ರಥಮಂ ನಡೆಸಿ
    ನೆನಹು ನಿಷ್ಪತ್ತಿಯೆಂಬ ಸ್ಥಾನದಲ್ಲಿ ನಿಲಿಸಿ-
    ಇಷ್ಟಲಿಂಗವೆಂಬ ಉಚ್ಚಾಯ ವಿಗ್ರಹವನ್ನು
    ಹೃದಯಕಮಲವೆಂಬ ಅಂತರಾಳದಲ್ಲಿ ಮೂರ್ತಿಗೊಳಿಸಿ
    ಆನಂದವೆಂಬ ಅರಸು ನಿರಾಳವೆಂಬ ಅಪರಿಮಿತ ಪಟ್ಟಣವ
    ಪ್ರವೇಶವಾದನು ಕಾಣಾ ಗುಹೇಶ್ವರಾ. /877

  878. ತನ್ನ ಕಣ್ಣಿನಲ್ಲಿ ಕಾಣದಂತೆ ಇದ್ದಿತ್ತು ದರ್ಪಣದೊಳಗಣ ಬೆಳಗು.
    ಬೆಳಗಿನೊಳಗಣ ಬೆಳಗು ಗುಹೇಶ್ವರನಿಪ್ಪೆಡೆಯ ತಿಳಿದು ನೋಡಯ್ಯಾ.
    ಸಂಗನಬಸವಣ್ಣಾ./878

  879. ತನ್ನ ತಾನರಿತ ಬಳಿಕ ಅನ್ಯವಿಲ್ಲ.
    ಕಾಬ ಮರಹು ನಷ್ಟವಾಯಿತ್ತು.
    ಆ ಮರವೆ ನಷ್ಟವಾದ ಬಳಿಕ
    ಅರಿವಿನ ಮರವೆಯ ನೆರೆ ಮರೆದ ಬಳಿಕ
    ಅಲ್ಲಿ ನಿಶ್ಶಬ್ದವಾಯಿತ್ತು ಗುಹೇಶ್ವರಾ./879

  880. ತನ್ನ ತಾನರಿದಡೆ ನುಡಿಯೆಲ್ಲ ತತ್ವ ನೋಡಾ !
    ತನ್ನ ತಾ ಮರೆದಡೆ ನುಡಿಯೆಲ್ಲ ಮಾಯೆ ನೋಡಾ !
    ಅರಿದು ಮರೆದ ಶಿವಯೋಗಿಯ ಶಬ್ದವೆಲ್ಲವು
    ಉಪದೇಶವಲ್ಲದೆ ಬಿನ್ನವುಂಟೆ ?
    ನಿನ್ನ ಮನದ ಕಳವಳವ ತಿಳುಹಲೆಂದು ಮಾತನಾಡಿಸಿ ನೋಡಿದಡೆ,
    ಎನ್ನ ಮನದೊಳಗೆ ಕಂದು ಕಲೆ ಎಂಬುದಿಲ್ಲ ನೋಡಾ !
    ನಮ್ಮ ಗುಹೇಶ್ವರಲಿಂಗಕ್ಕೆ ನೀನು ಕರುಣದ ಶಿಶುವಾದ ಕಾರಣ
    ಬಾಯ್ದೆಗೆದೆನಲ್ಲದೆ, ಬಿನ್ನವುಂಟೆ ಹೇಳಾ ಮರುಳೆ ?/880

  881. ತನ್ನ ತಾನರಿದೆನೆಂಬವನ ಮುನ್ನ ನುಂಗಿತ್ತು ಮಾಯೆ.
    ನಿನ್ನೊಳಗೆ ಅರಿವು ಬಿನ್ನವಾಗಿರುತ್ತಿರಲು
    ಮುನ್ನವೆ ನೀನು ದೂರಸ್ಥ ನೋಡಾ !
    ಬಿನ್ನವಿಲ್ಲದ ಅಜ್ಞಾನವ ಬಿನ್ನವ ಮಾಡಬಲ್ಲಡೆ
    ತನ್ನಲ್ಲಿ ಅರಿವು ನಿಜವಪ್ಪುದು ಗುಹೇಶ್ವರಾ/881

  882. ತನ್ನ ತಾನರಿದೆಹೆನೆಂದಡೆ ತನಗೆ ತಾನನ್ಯನೆ ?
    ನಿಮ್ಮ ನಾನರಿದೆಹೆನೆಂದಡೆ ನಿಮ್ಮಿಂದಲಾನನ್ಯನೆ ?
    ತನ್ನ ನಿಮ್ಮನರಿದೆಹೆನೆಂಬ ಅರಿವಿನ ಬೆನ್ನಲ್ಲಿಪ್ಪುದು
    ತನ್ನ ತನ್ನಿಂದಿನ್ನೇತರಿಂದರಿವೆ ಹೇಳಾ ಗುಹೇಶ್ವರಾ./882

  883. ತನ್ನ ಮುಟ್ಟಿ ನೀಡಿದುದೆ ಪ್ರಸಾದ,
    ತನ್ನ ಮುಟ್ಟ[ದೆ] ನೀಡಿದುದೆ ಓಗರ.
    ಲಿಂಗಕ್ಕೆ ಕೊಟ್ಟು ಕೊಂಡಡೆ ಪ್ರಸಾದಿ.
    ಇದು ಕಾರಣ-ಇಂತಪ್ಪ ಭೃತ್ಯಾಚಾರಿಗಲ್ಲದೆ
    ಪ್ರಸಾದವಿಲ್ಲ ಗುಹೇಶ್ವರಾ. /883

  884. ತನ್ನನರಿಯದ ಅರಿವೆಂತುಟೊ ? ತನ್ನ ಮರೆದ ಮರಹೆಂತುಟೊ ?
    ಅರಿದವರು ಮರೆದವರು
    ನಿಮ್ಮ ಪ್ರತಿಬಿಂಬದಂತಿಪ್ಪರು ಕಾಣಾ ಗುಹೇಶ್ವರಾ./884

  885. ತನ್ನನರಿಯೆನೆಂಬುದು ಅಜ್ಞಾನ ನೋಡಾ.
    ಅರಿಯದ ಅಜ್ಞಾನವ ಅಗಳೆದು
    ಜ್ಞಾನವ ಕಾಣೆನೆಂಬುದು ವಿಪರೀತ ಭಾವ ನೋಡಾ !
    ಎಲ್ಲವನು ತೋರುವ ಘನವನು ಎಲ್ಲಿಯೂ ಕಾಣಬಾರದು.
    ಕಾಣಬಾರದ ನಿಜವ ತೋರಬಾರದು,
    ತೋರಬಾರದ ನಿಜವ ತಿಳಿಯಬಾರದು,.
    ಗುಹೇಶ್ವರಲಿಂಗದಲ್ಲಿ ಬಯಕೆಯುಳ್ಳನ್ನಕ್ಕ
    ತವಕ ಎಡೆಗೊಂಡಿಪ್ಪ ಕಾರಣ
    ತಿಳುಹಲಿಲ್ಲವೆಂಬುದ ನಿನ್ನ ನೀ ತಿಳಿದು ನೋಡಾ ಸಿದ್ಧರಾಮಯ್ಯಾ./885

  886. ತನ್ನರಿದವಂಗೆ ಇದಿರೆಂಬುದಿಲ್ಲ, ತನ್ನರಿಯದವಂಗೆ ಇದಿರೆಂಬುದುಂಟು.
    ಅರುಹು ಮರಹು ಕುರುಹಳಿಯಿತ್ತು, ಬೆರಗಾಯಿತ್ತು.
    ಬೆರಗು ಬೆರಗಿನೊಳಗೆ ಕರಿಗೊಂಡಿತ್ತು ಇದೇನೊ?
    ಭ್ರಾಂತು ಭ್ರಾಂತನೆ ನುಂಗಿ
    ಗುಹೇಶ್ವರ ಭವಿಯ ಬೆಂಬತ್ತಿ ಭವಿಯಾದ ಕಾರಣ/886

  887. ತನ್ನಿಂದ ತನ್ನ ನೋಡಲು, ತನಗೆ ತಾ ಪ್ರತ್ಯಕ್ಷನಾಗೆ
    ಆ ಪ್ರತ್ಯಕ್ಷವೆಂಬುದೆ ಭ್ರಾಂತು ನೋಡಾ !
    ಅದೇನು ಕಾರಣವೆಂದಡೆ;
    ತನಗೆ ತಾನು ಅನ್ಯವಲ್ಲಾಗಿ, ಎನಗೆ ಅನ್ಯವಿಲ್ಲ.
    ಅನ್ಯ ನಾನಲ್ಲ ಎಂದು; `ಬ್ರಹ್ಮವು ನಾನು’ ಎಂಬೆಡೆ-
    ಅದು ಅತಿಶಯದಿಂದ ಭ್ರಾಂತು-ಎಂಬುದನು ತಿಳಿದು ನೋಡಾ.
    ಅದೇನು ಕಾರಣವೆಂದಡೆ:
    `ಬ್ರಹ್ಮಕ್ಕೆ ನಾ ಬ್ರಹ್ಮ’ ಎಂಬುದು ಘಟಿಸದಾಗಿ !
    ಅತಿಶಯದ ಸುಖವಳಿದ ನಿರಂತರ ಸುಖವೆಂತುಟೆಂದಡೆ
    ಗುರು ಮುಗ್ಧನಾದೆಡೆಯ ತಿಳಿಯಲು ನೋಡಲು
    ಗುಹೇಶ್ವರಲಿಂಗದ ನಿಲವು ತಾನೆ./887

  888. ತಪವೆಂಬುದು ತಗಹು, ನೇಮವೆಂಬುದು ಬಂಧನ,
    ಶೀಲವೆಂಬುದು ಸೂತಕ, ಭಾಷೆಯೆಂಬುದು ಪ್ರಾಣ ಘಾತಕ.-
    ಇಂತೀ ಚತುರ್ವಿಧದೊಳಗಲ್ಲ
    ಗುಹೇಶ್ವರಾ ನಿಮ್ಮ ಶರಣರು ಅಗ್ರಗಣ್ಯರು.
    ತಿ/888

  889. ತಪ್ಪ ಹೊರಿಸಿ ಹೊರಟೆಹೆನೆಂಬುದು ಸತ್ಯವೆ ?
    ತನು, ಸೀರೆಯನುಳಿದು ನಿರ್ವಾಣವಾದಲ್ಲಿ
    ಮನದ ಭ್ರಾಂತು ನಿಶ್ಚಯವಾಗದು !
    ಕೇಶವೆಂಬ ಸೀರೆ ಅಂಗಕ್ಕೆ ಮರೆಯಾಯಿತ್ತು.
    ಅಪಮಾನವೆಂತು ಹರಿಯಿತ್ತು ?
    ಅದು ಗುಹೇಶ್ವರಲಿಂಗಕ್ಕೆ ಸಲ್ಲದ ವೇಷ !/889

  890. ತಪ್ಪಿ ನೋಡಿದಡೆ ಮನದಲ್ಲಿ ಅಚ್ಚೊತ್ತಿದಂತಿತ್ತು .
    ಇಪ್ಪೆಡೆಯ ವಿಚಾರಿಸಿ ನೋಡಿದಡೆ ಇಲ್ಲದಂತಾಯಿತ್ತು,
    ಲೆಪ್ಪದ ಜಲದ ಪಾದಘಾತದಂತೆ.
    ಕರ್ತೃತ್ವವೆಲ್ಲಿಯದೊ ಗುಹೇಶ್ವರಾ./890

  891. ತಮ್ಮ ತಮ್ಮ ಭಾವಕ್ಕೆ, ಉಡಿಯಲ್ಲಿ ಕಟ್ಟಿಕೊಂಡ(ಬ?)ರು.
    ತಮ್ಮ ತಮ್ಮ ಭಾವಕ್ಕೆ, ಕೊರಳಲ್ಲಿ ಕಟ್ಟಿಕೊಂಡ(ಬ?)ರು,
    ನಾನೆನ್ನ ಭಾವಕ್ಕೆ ಪೂಜಿಸ ಹೋದಡೆ,
    ಕೈತಪ್ಪಿ ಮನದಲ್ಲಿ ಸಿಲುಕಿತ್ತೆನ್ನ ಲಿಂಗ.
    ಸಾಧಕನಲ್ಲ ಭೇದಕನಲ್ಲ-ಗುಹೇಶ್ವರಲ್ಲಯ್ಯ ತಾನೆ ಬಲ್ಲ./891

  892. ತಮ್ಮ ತಮ್ಮ ಮುಖದಲ್ಲಿ;
    ಲಿಂಗವನೊಲಿಸಿದರು, ಆರಾದಿಸಿದರು, ಬೇಡಿತ್ತ ಪಡೆದರು ಎಲ್ಲಾ-
    ಲಿಂಗಭೋಗೋಪಭೋಗಿಗಳಾಗಿ ಭೋಗಿಸುವವರಿಲ್ಲ.
    ಗಂಗೆವಾಳುಕರೆಲ್ಲ ವರಮುಖಿಗಳಾಗಿ
    ಮೂರ್ತಿಯಳಿದು ಹೋದರು ಗುಹೇಶ್ವರಾ./892

  893. ತಮ್ಮ ತಾವರಿದೆಹೆವೆಂಬರು, ತಮ್ಮ ತಾವರಿವ ಪರಿಯೆಂತೋ ?
    ಎಲ್ಲರನೂ ಕಾಬ ಕಣ್ಣು ತನ್ನ ಕಾಬುದೆ ?
    ತನ್ನರಿವಿಂದ ತಾ ಬಿನ್ನವಾಗಲರಿವನೆ ?
    ತನ್ನ ತಾನಿದಿರಿಟ್ಟು ಕಾಬಾತನೊಬ್ಬನುಂಟೆ ?
    ತನ್ನ ತಾನರಿವ ಪರಿಯ ಗುಹೇಶ್ವರಾ ನಿಮ್ಮ ಶರಣ ಬಲ್ಲ./893

  894. ತಮ್ಮ ತಾವರಿಯರು ಹೇಳಿದಡೂ ಕೇಳರು.
    ಆರರ ಹೊಲಬ ಏನೆಂದರಿಯರು.
    ಎಂಟರ ಕಂಟಕವ ಮುನ್ನರಿಯರು.
    ಏರಿದ ಬೆಟ್ಟವ ಇಳಿಯಲರಿಯದವರ ಏನೆಂಬೆ ಗುಹೇಶ್ವರಾ ?/894

  895. ತಲೆ ಇಲ್ಲದ ತಲೆಯಾತಂಗೆ ಕರುಳಿಲ್ಲದ ಒಡಲು ನೋಡಾ!
    ಆ ನಲ್ಲಂಗೆ ಅಂಗವಿಲ್ಲದ ಅಂಗನೆ ಸತಿಯಾಗಿಪ್ಪಳು!
    ಇವರಿಬ್ಬರ ಬಸುರಲ್ಲಿ ಹುಟ್ಟಿದಳೆಮ್ಮ ತಾಯಿ,
    ನಾ ಹುಟ್ಟಿ, ತಾಯ ಕೈವಿಡಿದು ಸಂಗವ ಮಾಡಿ
    ನಿರ್ದೊಷಿಯಾದೆನು ಕಾಣಾ ಗುಹೇಶ್ವರಾ./895

  896. ತಲೆಯ ಮೇಲೆ ತಲೆಯಿದ್ದಿತ್ತಲ್ಲಾ !
    ಆ ತಲೆಯಾತಲೆ ನುಂಗಿತ್ತಲ್ಲಾ !
    ಸತ್ತು ಹಾಲ ಸವಿಯ ಬಲ್ಲಡೆ,
    ರಥದ ಕೀಲ ಬಲ್ಲಡೆ-ಅದು ಯೋಗ !
    ಶಿಶು ಕಂಡ ಕನಸಿನಲುಳ್ಳ ತೃಪ್ತಿ ನಿನ್ನಲ್ಲಿ ಉಂಟೆ ಗುಹೇಶ್ವರಾ?/896

  897. ತಲೆಯಲಟ್ಟುಂಬುದ ಒಲೆಯಲಟ್ಟುಂಡಡೆ ಹೊಗೆ ಘನವಾಯಿತ್ತು.
    ತಲೆಯಲಟ್ಟುಂಡಾತ ಮಹಾಪ್ರಸಾದಿ,
    ಈಶ್ವರಸ್ವರವ ನುಡಿಯಲರಿಯದೆ ಬೀಸರವೋದರಣ್ಣಗಳೆಲ್ಲ.
    ಈಶ್ವರ ಸ್ವರವ ನುಡಿದರೆ ತಾನೆ ಶಿವನು
    ಗುಹೇಶ್ವರನೆಂಬುದು ಬೇರಿಲ್ಲ ಕಾಣಿರೊ. /897

  898. ತಲೆಯಲಟ್ಟುಂಬುದ, ಒಲೆಯಲಟ್ಟುಂಬರು,
    ಒಲೆಯಲುಳ್ಳುದ, ಹೊಟ್ಟೆಯಲುಂಬೈಸಕ್ಕರ
    ಹೊಗೆ ಘನವಾಯಿತ್ತು-
    ಇದ ಕಂಡು ಹೇಸಿಬಿಟ್ಟೆನು ಗುಹೇಶ್ವರಾ/898

  899. ತಲೆಯಿಲ್ಲದ ಅಟ್ಟೆ ಜಗವ ನುಂಗಿತ್ತು.
    ಅಟ್ಟೆಯಿಲ್ಲದ ತಲೆ ಆಕಾಶವ ನುಂಗಿತ್ತು.
    ಅಟ್ಟೆ ಬೇರೆ, ತಲೆ ಬೇರಾದಡೆ-ಮನ ಸಂಚಲಿಸುತ್ತಿದ್ದಿತ್ತು !
    ಅಟ್ಟೆಯನೂ ತಲೆಯನೂ ಬಯಲು ನುಂಗಿದಡೆ,
    ಅನು ನುಂಗಿದೆನು ಗುಹೇಶ್ವರನಿಲ್ಲದಂತೆ !/899

  900. ತಲೆಯಿಲ್ಲದ ಮೃಗ ಒಡಲಿಲ್ಲದೆ ಆಹಾರವ ಕೊಂಡಿತ್ತು,
    ಹೆಜ್ಜೆ ಇಲ್ಲದೆ ಹರಿಯಿತ್ತು !
    ಅದ ಶುದ್ಧಿಯ ಮಾಡ ಹೋದಾತನಿನ್ನೂ ಮರಳನು.
    ವೆಜ್ಜವಿಲ್ಲದ ಮಣಿಯ ದಾರವಿಲ್ಲದೆ ಪವಣಿಸುವ
    ನಿಮ್ಮ ಶರಣನ ಪರಿಯ ನೋಡಾ ಗುಹೇಶ್ವರಾ !/900

  901. ತಾ ಕೇಳಿ, ನೋಡಿ, ಮುಟ್ಟಿ ಮನವರಿದ ಸುಖವ
    ಲಿಂಗಕ್ಕೆ ಕೊಡುವುದೆಂತೊ ಅಂಗ ಮನವೆಂಬವನು ?
    ಲಿಂಗದ ಪರಿಪೂರ್ಣವನು ಕಾಣದಿಹ
    ಅಂಗಹೀನರಿಗೇಕೆ ವ್ರತಾಚಾರದ ಹೊಲಬು ?
    ಜೀರ್ಣಪರ್ಣ-ರವಿರಶ್ಮಿ ಜ್ಞೇಯದಂತೆ (ನ್ಯಾಯದಂತೆ?)
    ಜಗದೊಳಗೆ ಏತರಲ್ಲಿಯೂ ಖಂಡಿತವಿಲ್ಲದೆ ಗುಹೇಶ್ವರನಿಪ್ಪ
    ಭಕ್ತದೇಹಿಕನಾಗಿ !/901

  902. ತಾ ನಡೆವಡೆ ನಡೆಗೆಟ್ಟ ನಡೆಯ ನಡೆವುದಯ್ಯಾ.
    ತಾ ನುಡಿವಡೆ ನುಡಿಗೆಟ್ಟ ನುಡಿಯ ನುಡಿವುದಯ್ಯಾ.
    ರೂಹಿಲ್ಲದ ಸಂಗವ ಮಾಡಬೇಕು,
    ಭವವಿಲ್ಲದ ಭಕ್ತಿಯ ಮಾಡಬೇಕು.
    ತಾನಾವನೆಂದರಿಯದಂತಿಹುದು, ಗುಹೇಶ್ವರಾ./902

  903. ತಾ ಬಾಳಲಾರೆ ವಿದಿಯ ಬೈದನೆಂಬ ನಾಣ್ಣುಡಿ
    ದಿಟವಾಯಿತ್ತಲ್ಲಾ ಬಸವಣ್ಣಾ.
    ಅವಧಾನ ತಪ್ಪಿ ಆಚಾರಗೆಟ್ಟು ನಡೆದು
    ಶಿವನಾದಿನವೆಂದಡೆ ಹೋಹುದೆ ?
    ಗುಹೇಶ್ವರಲಿಂಗದಲ್ಲಿ ಈ ಬಣ್ಣಿಗೆಯ ಮಾತು ಸಲ್ಲದು ಕೇಳಾ
    ಸಂಗನಬಸವಣ್ಣಾ./903

  904. ತಾ ಸುಖಿಯಾದಡೆ ನಡೆಯಲು ಬೇಡ.
    ತಾ ಸುಖಿಯಾದಡೆ ನುಡಿಯಲು ಬೇಡ.
    ತಾ ಸುಖಿಯಾದಡೆ ಪೂಜಿಸಲು ಬೇಡ,
    ತಾ ಸುಖಿಯಾದಡೆ ಉಣಲು ಬೇಡಫ ಗುಹೇಶ್ವರಾ./904

  905. ತಾ ಹೆಳವ; ಎಡಹೊತ್ತಿನ ಪಯಣ;
    ಒಡ್ಡಿದ ಮಳೆಯ ಮುಗಿಲು,
    ಸೋರುವ ಮನೆ, ನೆಲದ ಹಾಸಿಕೆ,
    ಕೊರಳಲ್ಲಿ ಮೂರು ಮಣ್ಣ ಮಣಿ,
    ಹಿಂದೆ ಕಲ್ಲೊರಳು, ಮೇಣದೊನಕೆ,
    ಹಳೆ ಅಕ್ಕಿ, ಹೊಸ ಭಾಂಡ-
    ಹಸಿಯ ಬೆರಣಿಯ ತಾಳಿಯನಿಕ್ಕಿ,
    ಕಿಚ್ಚಿಲ್ಲದೆ ಒಲೆಯನುರುಹಿ ಓಗರವನಡಲು,
    ಗುಹೇಶ್ವರಲಿಂಗವು ಒಡೆದ ತಳಿಗೆಯ [ಲಿ?]
    ಆರೋಗಣೆಯ ಮಾಡಿದನು./905

  906. ತಾನಿಟ್ಟ ಬೇತಾಳ ತನ್ನನೆ ತಿಂದಿತ್ತೆಂಬಂತೆ,
    ನಿನ್ನ ಭವಾವಳಿಯನೆತ್ತುವನ್ನಕ್ಕ
    ಎನ್ನ ಮರವೆ ಎನಗೆ ಎಚ್ಚರಿಕೆಯಾಯಿತ್ತು,
    ಎನ್ನ ಪೂರ್ವ ನಿರ್ವಾಹವಾಯಿತ್ತು !
    ನಿಮ್ಮ ವರ್ಮ ತಿಳಿಯದೆನಗೆ,-ಅದೆಂತೆಂದಡೆ:
    ಹಿಂದೆ ನೀನೇನಾಗಿದ್ದೆ ಎಂಬುದನು ಅರಿಯೆನಾಗಿ.
    ಇಂದು ನಿಮ್ಮ ಮನೆಯಲಿ ಆರೋಗಣೆಯಾಗದು ಕಾಣಾ
    ಸಂಗನಬಸವಣ್ಣ ನಮ್ಮ ಗುಹೇಶ್ವರಲಿಂಗಕ್ಕೆ ! /906

  907. ತಾನಿರ್ದು ತನ್ನನರಿಯದೆ ಇನ್ನೆಂದಿಗೆ ಶರಣನಪ್ಪನಯ್ಯಾ ?
    ಪವನಸ್ಥಾನವನರಿದ ಬಳಿಕ, ಬಂದು ಬಂದು ಸುಳಿಯಲಿಲ್ಲ.
    ಇದರಂತುವನಾರು ಬಲ್ಲರು ಗುಹೇಶ್ವರಾ-ನಿಮ್ಮ ಶರಣರಲ್ಲದೆ ?/907

  908. ತಾನು ಮಿಂದು ಕಾಲ ತೊಳೆದ ಬಳಿಕ
    ಲಿಂಗಕ್ಕೆ ಮಜ್ಜನಕ್ಕೆರೆವರು.
    ತಾನು ಲಿಂಗವೊ ಲಿಂಗ ಲಿಂಗವೊ ?
    ಏನು ಲಿಂಗನವುಫ? ಬಲ್ಲಡೆ ನೀವು ಹೇಳಿರೆ.
    ಲಿಂಗಸಂಬಂಧವನರಿಯದೆ ಕೆಟ್ಟರು ಗುಹೇಶ್ವರಾ./908

  909. ತಾನೆಂದೆನಲೊಲ್ಲದೆ ಗುರುವೆಂದು ಹಿಡಿದವನ,
    ಗುರುವೆಂದಲ್ಲಿಯೆ ನೀನೆಂದು ನಡೆದವನ,
    ನೀನೆಂದಲ್ಲಿಯೆ ಲಿಂಗಜಂಗಮದ ಸಕೀಲಸಂಬಂಧವ ನೆಲೆಗೊಳಿಸಿದವನ,
    ಲಿಂಗಜಂಗಮದಲ್ಲಿ ತನ್ನ ಮರೆದು ಕರಿಗೊಂಡ ಲಿಂಗೈಕ್ಯನ,
    ಗುಹೇಶ್ವರಲಿಂಗದಲ್ಲಿ ಚನ್ನಬಸವಣ್ಣನ
    ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು. /909

  910. ತಾಪತ್ರಯದಲ್ಲಿ ಬೇವ ಒಡಲ ಹಿಡಿದು ತಂದು
    ಜ್ಞಾನವೆಂಬ ಉರಿಗೆ ಆಹುತಿಯ ಕೊಟ್ಟವನ,
    ಜ್ಞಾನವೆಂಬ ಕಾಯವ ಹಿಡಿದು ತಂದು
    ನಿಶ್ಶೂನ್ಯವೆಂಬ ತೇಜದಲ್ಲಿ ಸುಟ್ಟವನ,
    ನಿಶ್ಶೂನ್ಯವೆಂಬ ಶಬ್ದವ ಸುಟ್ಟು, ಭಸ್ಮವ ಧರಿಸಿದ ಲಿಂಗೈಕ್ಯನ,
    ಲೋಕದ ಸ್ಥಿತಿ-ಗತಿಯ ಮರೆದು, ನಿರ್ವಾಣದಲ್ಲಿ ನಿಂದವನ,
    ಗುಹೇಶ್ವರಲಿಂಗದಲ್ಲಿ ತನ್ನ ಮರೆದ ಅಲ್ಲಯ್ಯನ ಕೋಪದಲ್ಲಿ ಕಿಚ್ಚಿನಲ್ಲಿ
    ಸುಟ್ಟಿಹೆನೆಂಬ ಸಿದ್ಧರಾಮಯ್ಯನನೇನೆಂಬೆನು ?/910

  911. ತಾಯಿ ಬಂಜೆಯಾದಲ್ಲದೆ ಶಿಶು ಗತವಾಗದು.
    ಬೀಜ ನಷ್ಟವಾದಲ್ಲದೆ ಸಸಿ ಗತವಾಗದು.
    ನಾಮ ನಷ್ಟವಾದಲ್ಲದೆ ನೇಮ ನಷ್ಟವಾಗದು.
    ಮೊದಲು ಕೆಟ್ಟಲ್ಲದೆ ಲಾಭದಾಸೆ ಬಿಡದು.
    ಗುಹೇಶ್ವರನೆಂಬ ಲಿಂಗದ ನಿಜವನೆಯ್ದುವಡೆ,
    ಪೂಜೆಯ ಫಲ ಮಾದಲ್ಲದೆ ಭವಂ ನಾಸ್ತಿಯಾಗದು./911

  912. ತಾಯಿಗಾದ ಸುಖದುಃಖಂಗಳು ಬಸಿರ ಶಿಶುವಿಂಗೆ ನೋಡಯ್ಯಾ.
    ಶಿವಶರಣರಿಗೆ ಮಾಡಿದ ಸುಖದುಃಖಗಳು ಶಿವನ ತಾಗುವುವು.
    ಕರಣವುಳ್ಳವರು ಮರಣವಿಲ್ಲದವಂಗೆ ಮುಳಿದಡೆ
    ತನುವುಳ್ಳವರ ಮುಟ್ಟುವುದಲ್ಲದೆ, ಒಡಲಿಲ್ಲದಾತನ ಮುಟ್ಟಬಲ್ಲುದೆ ?
    ಗುಹೇಶ್ವರಾ ಕೆಂಡವ ಒರಲೆ ಮುಟ್ಟಬಲ್ಲುದೆ ?/912

  913. ತಾಯಿ-ತಂದೆಯಿಲ್ಲದ ಕಂದಾ,
    ನಿನಗೆ ನೀನೆ ಹುಟ್ಟಿ ಬೆಳೆದೆಯಲ್ಲಾ !
    ನಿನ್ನ ಪರಿಣಾಮವೆ ನಿನಗೆ ಪ್ರಾಣತೃಪ್ತಿಯಾಗಿರ್ದೆಯಲ್ಲಾ !
    ಭೇದಕರಿಗೆ ಅಭೇದ್ಯನಾಗಿ ನಿನ್ನ ನೀನೆ ಬೆಳಗುತ್ತಿರ್ದೆಯಲ್ಲಾ !
    ನಿನ್ನ ಚರಿತ್ರ ನಿನಗೆ ಸಹಜ ಗುಹೇಶ್ವರಾ. /913

  914. ತಾಯಿಯಿಲ್ಲದ ಶಿಶುವಿಂಗೆ,
    ಶಿಶುವಿಲ್ಲದ ತಾಯಿ ಮೊಲೆಯನೂಡಿದಳು.
    ಮೊಲೆವಾಲನುಂಡ ಶಿಶು ತಾಯ ತಕ್ಕೈಸಿದಡೆ
    ತಾಯಿ ಆ ಶಿಶುವಿಂಗೆ ಸತಿಯಾದಳಲ್ಲಾ !
    ಸತಿಯ ಸಂಗದ ಸುಖವ ಪತಿಯಿಲ್ಲ (ಯಿಂ?)ದರಿದಲ್ಲಿ
    ಸತಿ ಪತಿ ಎಂಬೆರಡೂ ಅಳಿಯಿತ್ತು ನೋಡಾ !
    ಈ ನಿಜದ ನಿರ್ಣಯವ ಎನಗೆ ತೋರಿದ
    ಗುಹೇಶ್ವರನ ಶರಣ ಮಡಿವಳ ಮಾಚಿತಂದೆಗಳ ಪಾದಕ್ಕೆ
    ನಮೋ ನಮೋ ಎನುತಿರ್ದೆನು./914

  915. ತಾಳಮರದ ಮೇಲೊಂದು ಬಾವಿ ಇದ್ದಿತ್ತಲ್ಲಾ.
    ಆ ಬಾವಿಯ ತಡಿಯ ಹುಲ್ಲನು, ಒಂದು ಮೊಲ ಬಂದು ಮೇಯಿತ್ತಲ್ಲಾ!
    ಕಾಯಸಹಿತಜೀವನ ಬಾಣಸ ಮಾಡಲರಿಯರು
    ಗುಹೇಶ್ವರಾ-ನಿಮ್ಮಾಣೆ./915

  916. ತಾಳು ಬೋಳು ಕಟ್ಟಿಗೆ ಕರ್ಪರವೆಂದೆಂಬರು.
    ತಾಳು ಬೋಳು ಕಟ್ಟಿಗೆ ಕರ್ಪರವಾವುದೆಂದರಿಯರು.
    ತಾಳು:ತನುಗುಣಾದಿಗಳ ಪ್ರಾಣಗುಣಾದಿಗಳ
    ತಾಳಿಕೊಂಡಿರಬಲ್ಲಡೆ ತಾಳು.
    ಬೋಳು:ಭ್ರಮೆಯಿಲ್ಲದೆ ಬಂಧನವಿಲ್ಲದೆ ಸಂಸಾರ ವಿಷಯಗಳ ಬೋಳೈಸಿ
    ತನ್ನಿಚ್ಛೆಗೆ ನಿಲಿಸಿಕೊಂಡಿರಬಲ್ಲಡೆ ಬೋಳು.
    ಕಟ್ಟಿಗೆ:ಕರಣಾದಿ ಗುಣಂಗಳ ನಿಲಿಸಿಕೊಂಡಿರಬಲ್ಲಡೆ ಕಟ್ಟಿಗೆ.
    ಕರ್ಪರ:ಪರವ ಅರಿದಿರಬಲ್ಲಡೆ ಕರ್ಪರ-
    ಇಂತೀ ಚತುರ್ವಿಧವನರಿದವರ ಪರಮಾರಾಧ್ಯರೆಂಬೆ ಕಾಣಾ
    ಗುಹೇಶ್ವರಾ./916

  917. ತಿಂಬ ಗಂದೆಯ ಮೇಲೆ ಉಗುರು ಬಿದ್ದಂತಾಯಿತ್ತು.
    ಅರಸುವ ಬಳ್ಳಿ ಕಾಲ ಸುತ್ತಿದಂತಾಯಿತ್ತು.
    ನಾನು ಬಯಸುವ ಬಯಕೆ ತಾರ್ಕಣೆಗೆ ಬಂದಿತ್ತು.
    ಗುಹೇಶ್ವರಲಿಂಗದಲ್ಲಿ,
    ಎನಗೂ ನಿನಗೂ ಒಂದಾದ ಪರಿ ಎಂತು ಹೇಳಾ
    ಚನ್ನಬಸವಣ್ಣಾ ?/917

  918. ತಿಳಿದಿರ್ದ ಮಡುವಿನೊಳಗೆ ಸುಳಿಸುಳಿದಾಡುತ್ತಿದೆ
    ಒಂದು ಸುವರ್ಣದ ಬಿಂದು !
    ಅದು ಹಿಂದು ಮುಂದಾಗಿ ನೋಡಿದವರಿಗೆಲ್ಲ ಕಾಣಬಾರದು.
    ಮಡುವ ತುಳುಕದೆ ದಡವ ಸೋಂಕದೆ ಹಿಡಿಯಬಲ್ಲಡೆ
    ಗುಹೇಶ್ವರನೆಂಬ ಲಿಂಗವು ಈಗಳೆ ಸಾಧ್ಯ./918

  919. ತುಂಬಿ ಪರಿಮಳವನುಂಡಿತೊ, ಪರಿಮಳ ತುಂಬಿಯ ನುಂಡಿತೊ ?
    ಲಿಂಗ ಪ್ರಾಣವಾಯಿತೊ ? ಪ್ರಾಣ ಲಿಂಗವಾಯಿತೊ ?
    ಗುಹೇಶ್ವರಾ, ಇವರ ಈ ಉಭಯದ ಭೇದವ ನೀನೆ ಬಲೆ/919

  920. ತುಂಬಿ ಬಂದಡೆ ಪರಿಮಳ ಓಡಿತ್ತ ಕಂಡೆ !
    ಇದೇನು ಸೋಜಿಗ ಹೇಳಾ ?
    ಮನ ಬಂದಡೆ ಬುದ್ಧಿ ಓಡಿತ್ತ ಕಂಡೆ,
    ದೇವ ಬಂದಡೆ ದೇಗುಲ ಓಡಿತ್ತ ಕಂಡೆ-ಗುಹೇಶ್ವರಾ. /920

  921. ತುಂಬಿದ ತೊರೆಯ ಹಾಯ್ದಹೆವೆಂದು
    ಹರುಗೋಲನೇರುವ ಅಣ್ಣಗಳು ನೀವು ಕೇಳಿರೆ.
    ತೊರೆಯೊಳಗಣ ನೆಗಳು ಹರುಗೋಲ ನುಂಗಿದಡೆ, ಗತಿಯಿಲ್ಲ.
    ಎಚ್ಚತ್ತು ನಡಿಸಿರೆ.
    ನಡುದೊರೆಯಲ್ಲಿ ಹುಟ್ಟು ಹಾಯ್ಕಿದಡೆ,
    ಹರುಗೋಲು ಮುಳುಗದೆ, ಏರಿದವರು ಸತ್ತರು.
    ಇದರೊಳಹೊರಗನರಿದಾತನಲ್ಲದೆ
    ಗುಹೇಶ್ವರಲಿಂಗದಲ್ಲಿ ಅಚ್ಚ ಶರಣನಲ್ಲ./921

  922. ತೆಗೆದು ವಾಯುವ ನೇಣ ಗಗನದಲ್ಲಿ ಗಂಟಿಕ್ಕಿ,
    ತ್ರಿಜಗಾದಿಪತಿಯ ಕೋಣೆಯಲ್ಲಿ ಹಸುವಿದ್ದು,
    ಕರುವ ಕೊಂದು ಕಂದಲನೊಡೆದು, ಕರೆಯಬಲ್ಲವಂಗಲ್ಲದೆ,
    ಹಯನಾಗದು ನೋಡಾ !
    ಹಯನೆ ಬರಡು, ಬರಡೆ ಹಯನು !
    ಅರುಹಿರಿಯರ ಬಾಯ, ಕರು ಒದೆದು ಹೋಯಿತ್ತು !
    ಎರಡಿಲ್ಲದ ನಿರಾಳ ಗುಹೇಶ್ವರ./922

  923. ತೆರಹಿಲ್ಲದ ಘನ ಕುರುಹಿಂಗೆ ಬಾರದ ಮುನ್ನ
    ತೋರಿದವರಾರು ಹೇಳಾ ಮಹಾ ಘನ ಲಿಂಗೈಕ್ಯವನು ?
    ಆರೂಢದ ಕೂಟದಲ್ಲಿ ನಾನಾರುವ ಸಾಕ್ಷಿಯ ಕಾಣೆನು.
    ಬೇರೆ ಮಾಡಿ ನುಡಿಯಬಹುದೆ ಪ್ರಾಣಲಿಂಗವನು ?
    ಅರಿವು ಸ್ವಯವಾಗಿ ಮರಹು ನಷ್ಟವಾದಲ್ಲಿ
    ಗುಹೇಶ್ವರಾ ನಿಮ್ಮ ಶರಣನುಪಮಾತೀತನು/923

  924. ತೆರಹಿಲ್ಲದ ಘನವ ಅರಸಿಹೆನೆಂದಡೆ ಕಾಣಬಾರದು.
    ಅದೇನು ಕಾರಣವೆಂದಡೆ:
    ಆ ಅರಸುವಾತನು ತಾನೆ ವಸ್ತುವಾದ ಕಾರಣ.
    ವಿಚಾರಕ್ಕೆ ಬಾರದ[ದು]
    ನಿಶ್ಚಲಬ್ರಹ್ಮವೆಂಬುದು ಗುಹೇಶ್ವರಾ. /924

  925. ತೆರಹಿಲ್ಲದ ಘನವ ಮನ ಒಳಕೊಂಡು
    ಆ ತಲೆಯಿಲ್ಲದ (ತಲಹಿಲ್ಲದ?) ಮನವ ಘನ ಒಳಕೊಂಡು
    ತನಗೆ ತಾ ತರಹರವಾದ ಬಳಿಕ
    ಇನ್ನು ಮರಳಿ ಇಂಬುಗೊಡಲುಂಟೆ ?
    ಗುಹೇಶ್ವರನ ಲೀಲೆ ಮಾಬನ್ನಕ್ಕರ
    ಉರಿಯೊಳಗಣ ಕರ್ಪುರದಂತಿರಬೇಕು ಕಾಣಾ ಸಿದ್ಧರಾಮಯ್ಯಾ./925

  926. ತೆರೆಯ ಮರೆಯ ಕುರುಹೆಂಬುದೇನೊ
    ಒಳಗೆ ಲಿಂಗವನನುವಿಡಿದ ಬಳಿಕ ?
    ಪೂಜಿಸುವ ಭಕ್ತನಾರೊ ? ಪೂಜಿಸಿಕೊಂಬ ದೇವನಾರೊ ?
    ಮುಂದು ಹಿಂದು, ಹಿಂದು ಮುಂದಾಯಿತ್ತು
    ಗುಹೇಶ್ವರಾ ನಾನು ನೀನು, ನೀನು ನಾನಾದ ಬಳಿಕ
    ಮತ್ತೇನುಂಟು ಹೇಳಾ ? /926

  927. ತೋಟವ ಬಿತ್ತಿದ[ರೆಮ್ಮ]ವರು, ಕಾಹ ಕೊಟ್ಟವರು ಜವನವರು.
    ನಿತ್ಯವಲ್ಲದ ಸಂಸಾರ ವೃಥಾ ಹೋಯಿತಲ್ಲಾ !
    ಗುಹೇಶ್ವರನಿಕ್ಕಿದ ಕಿಚ್ಚು, ಹೊತ್ತಿಕ್ಕಲುಂಟು ಅಟ್ಟುಣಲಿಲ್ಲ ಗುಹೇಶ್ವರಾ./927

  928. ತೋರಬಾರದ ಘನವ ಹೇಳಲೆಂದೇನಯ್ಯಾ ?
    ಹೇಳಬಾರದ ಘನವ ತೋರಲೆಂದೇನಯ್ಯಾ ?
    ಶರಸಂಧಾನದ ಪರಿಯಲ್ಲ ನೋಡಾ !
    ಗುಹೇಶ್ವರಲಿಂಗವು ಕಲ್ಪಿತವಲ್ಲ ನೋಡಯ್ಯಾ./928

  929. ತೋರಬಾರದಠಾವಿನಲ್ಲಿ ಒಂದು ಹೊಂಬಣ್ಣ ಸುಳಿಯಿತ್ತು.
    `ಸ್ಯೋಹಂ ಸ್ಯೋಹಂ’ಎಂದುದು ಬ್ರಹ್ಮವು.
    ಮುಟ್ಟಿಯೂ ಮುಟ್ಟದ ಬ್ರಹ್ಮವ ನೆಟ್ಟನೆ ಮುಂದರಿದೆ.
    ಕಟ್ಟಳೆಯಿಲ್ಲದ ಇರವು ಗುಹೇಶ್ವರಾ ನಿಮ್ಮ ನಿಲವು./929

  930. ತೋರಿದ ಭೇದವ ತೋರಿದಂತೆ ಕಂಡಾತನಲ್ಲದೆ,
    ದ್ಯಷ್ಟಿವಾಳಕ ತಾನಲ್ಲ.
    ಬೇರೊಂದ ವಿವರಿಸಿಹೆನೆಂದಡೆ,
    ಆರ ಮೀರಿದಲ್ಲದೆ ಅರಿಯಬಾರದು.
    ಅರಿವನರಿದು ಮರಹ ಮರೆಯದೆ,
    ಮನದ ಬೆಳಗಿನೊಳಗಣ ಪರಿಯನರಿಯದೆ
    ವಾದಿಸಿ ಕೆಟ್ಟು ಹೋದರು ಗುಹೇಶ್ವರಾ,
    ಸಲೆ ಕೊಂಡ ಮಾರಿಂಗೆ !/930

  931. ತೋರುವುದೆಲ್ಲ ಬೇರಾಗಿ ಕಾಂಬುದು,
    ಕಂಡುದ ಬಿಡುವುದು ಕಾಣದುದ ಹಿಡಿವುದು.
    ಕಾಣದುದ ಕಂಡೆವೆಂದು ಬಿಟ್ಟಣ್ಣಗಳು
    ನಟ್ಟನಡುನೀರೊಳಗೆ ಕೆಟ್ಟ ಕೇಡ ನೋಡಾ ಗುಹೇಶ್ವರಾ./931

  932. ತ್ರಿನದಿಯ ಮಧ್ಯದಲ್ಲೈದು ಕುದುರೆಯ ಕಟ್ಟಿದ್ದ ಕಂಭ ಮುರಿಯಿತ್ತು.
    ಎಂಟಾನೆ ಬಿಟ್ಟೋಡಿದವು.
    ಹದಿನಾರು ಪ್ರಜೆ ಬೊಬ್ಬಿಡುತ್ತಿದ್ದವು.
    ಶತಪತ್ರಕಮಲಕರ್ಣಿಕಾ ಮಧ್ಯದಲ್ಲಿ
    ಗುಹೇಶ್ವರಲಿಂಗವು ಮುಗ್ಧವಾಗಿರ್ದನು./932

  933. ತ್ರಿಪುರವನುರುಹಿದ ತ್ರಿಣೇತ್ರನಲ್ಲ,
    ಅಂಧಕಾಸುರನ ಮೆಟ್ಟಿ ನಾಟ್ಯವನಾಡಿದಾತನಲ್ಲ,
    ಖಂಡಕಪಾಲಿಯಲ್ಲ ಮುಂಡಧಾರಿಯಲ್ಲ,
    ಮಂಡಲದೊಳಗೆ ಬಂದು ಸುಳಿವಾತನಲ್ಲ,
    ಈಶ್ವರನಲ್ಲ ಮಹೇಶ್ವರನಲ್ಲ,
    ಗುಹೇಶ್ವರನೆಂಬ ಲಿಂಗ ಅಪಾರ ಮಹಿಮನು./933

  934. ತ್ರಿಭುವನವೆಂಬ ಪಂಜರದೊಳಗೆ, ಸಂಸಾರಚಕ್ರದಲ್ಲಿ-
    ಹೊನ್ನು ಪ್ರಾಣವೆ ಪ್ರಾಣವಾಗಿ, ಹೆಣ್ಣು ಪ್ರಾಣವೆ ಪ್ರಾಣವಾಗಿ
    ಮಣ್ಣು ಪ್ರಾಣವೆ ಪ್ರಾಣವಾಗಿ,
    ಆ ಸುಖದ ಸೊಕ್ಕಿನಲ್ಲಿ ಈಸಿಯಾಡುತ್ತಿರ್ದರಲ್ಲಾ,
    ಬಹುವಿಧದ ವ್ಯವಹಾರ ವೇದಿಸಿದವರು ಗುಹೇಶ್ವರಾ./934

  935. ತ್ರಿವಿಧದ ನಿತ್ಯವ, ತ್ರಿವಿಧದ ಅನಿತ್ಯವ ಬಲ್ಲವರಾರೊ?
    ತ್ರಿವಿಧಕ್ಕೆ ತ್ರಿವಿಧವನಿತ್ತು ತ್ರಿವಿಧ ಪ್ರಸಾದವ ಕೊಳ್ಳಬಲ್ಲಡೆ;
    ಆತನು ತ್ರಿವಿಧನಾಥನೆಂಬೆನು, ಆತನು ವೀರನೆಂಬೆನು.
    ಆತನು ದಿರನೆಂಬೆನು,
    ಆತನು ಗುಹೇಶ್ವರಲಿಂಗದಲ್ಲಿ ಅಚ್ಚಪ್ರಸಾದಿಯೆಂಬೆನು./935

  936. ದರ್ಪಣದೊಳಗಣ ರೂಹಿಂಗೆ ಆ ದರ್ಪಣವೆ ಉತ್ಪತ್ತಿ ಸ್ಥಿತಿ ಲಯವಲ್ಲದೆ
    ಮತ್ರ್ಯಲೋಕದೊಳಗಣ ಆಕೃತಿ ಅಲ್ಲಿಲ್ಲವೇಕಯ್ಯಾ ?
    ಆ ಲೋಕದೊಳಗೆ ಉತ್ಪತ್ಯ(ತ್ತಿ ?) ಸ್ಥಿತಿ ಲಯ-ಇದೆಂತಹ ಕರ್ಮಬದ್ಧರು ?
    ಒಂದರ ಪರಿ ಒಂದಕ್ಕಿಲ್ಲ ಕಂಡಿರೆ !
    ದೃಷ್ಟವಹ ಗುರುಹಸ್ತದೊಳಗಣ ಸದ್ಭಕ್ತಂಗೆ,
    ಅಲ್ಲಿಯ ಉತ್ಪತ್ತಿ ಸ್ಥಿತಿ ಲಯ-ಇದೆಂತಹ ಕರ್ಮದ ಪರಿಯೊ ?
    ಮತ್ತಾವ ಪರಿಯೂ ಇಲ್ಲ, ಲಿಂಗದ ಪರಿಯ ಮಾಡಿದ ಗುಹೇಶ್ವರ./936

  937. ದಾರಿಗೊಂಡು ಹೋಹವರೆಲ್ಲರೂ ನೀವು ಕೇಳಿರೆ.
    ಮೂರು ಬಟ್ಟೆ ಕೂಡಿದಠಾವಿನಲ್ಲಿ ಒಬ್ಬ ಹೆಮ್ಮಾರಿ ಐದಾಳೆ.
    ಆ ಮಾರಿಯ ಬಾಯೊಳಗೆ ಮೂರು ಘಟ್ಟವಿಪ್ಪುವು.
    ನಂಜಿನ ಸೊನೆ ಸುರಿವುತ್ತಿಪ್ಪುದು.
    ಕಾಡ ಕೋಣನ ಮುಖದಲ್ಲಿ ಕತ್ತಲೆ ಕಾಣಲೀಸದು.
    ಐದು ಬಾಯ ಹುಲಿ ಆಗುಳಿಸುತ್ತಿಪ್ಪುದು.
    ಇವೆಲ್ಲವ ಗೆದ್ದಲ್ಲದೆ ಗುಹೇಶ್ವರನ ಕಾಣಬಾರದು/937

  938. ದುಷ್ಟನಿಗ್ರಹ ಶಿಷ್ಟಪರಿಪಾಲಕನಪ್ಪ ದಿವ್ಯವಸ್ತು
    ಶಕ್ತಿಗೊಳಗಾಯಿತ್ತಾಗಿ
    ಬಚ್ಚಬಯಲೆಂಬುದಕ್ಕುಪಮಾನವಿಲ್ಲಯ್ಯ [ಗುಹೇಶ್ವರ]. /938

  939. ದೂರದ ತುದಿಗೊಂಬನಾರಯ್ಯ ಗೆಲುವರು ?
    ಮೀರಲಿಲ್ಲದ ನಿರಾಳದ ಘನವನು (ನಿಲವನು ?),
    ಮೀರಿ, ಕಾಬ ಘನವನು ಬೇರೆ ತೋರಲಿಲ್ಲ.
    ತೋರಿ ಕಾಬಡೆ ತನ್ನ ಹಿಡಿಯಲಿಲ್ಲ.
    ಓರೆ ಆವಿನ ಹಾಲನಾರಯ್ಯ ಕರೆವರು ?
    ಮೂರು ಲೋಕದೊಳಗೆ ತಾನಿಲ್ಲ ಗುಹೇಶ್ವರಾ./939

  940. ದೃಷ್ಟಕ್ಕೆ ದೃಷ್ಟ ಮುಂದಿಲ್ಲ, ಇಲ್ಲ.
    ಮಾಡಿದಡೇನಹುದೊ? ಮಾಡದಿರ್ದಡೇನಹುದೊ?
    ಗುಹೇಶ್ವರನೆಂಬ ಅರುಹಿನ ಕುರುಹು ಮಂದಿಲ್ಲ, ಇಲ್ಲ.
    ಮಾಡಿದಡೇನಹುದೊ? /940

  941. ದೇವ ಕಂಡಾ, ಭಕ್ತ ಕಂಡಾ; ಮರಳಿ ಮರಳಿ ಶರಣೆಂಬ ಕಂಡಾ.
    ಹೋಯಿತ್ತಲ್ಲಾ ಭಕ್ತಿ ಜಲವ ಕೂಡಿ !
    ಸಾವನ್ನಕ್ಕ ಸರಸವುಂಟೆ ಗುಹೇಶ್ವರಾ ?/941

  942. ದೇವನೊಲಿದ, ನೀನೊಲಿದೆ-ಎಂಬುದು ಅದಾವುದಕ್ಕಾ ?
    ಭಾವಶುದ್ಧವಾದಲ್ಲಿ ಸೀರೆಯನಳಿದು ಕೂದಲು ಮರೆಸಲೇತಕ್ಕೆ ?
    ಅದು ಅಂತರಂಗದ ನಾಚಿಕೆ ಬಾಹ್ಯದಲ್ಲಿ ತೋರಿತ್ತು.
    ಅದು ಗುಹೇಶ್ವರಲಿಂಗಕ್ಕೆ ಒಲವರವಲ್ಲ./942

  943. ದೇವರೆಲ್ಲರ ಹೊಡೆತಂದು ದೇವಿಯರೊಳಗೆ ಕೂಡಿತ್ತು ಮಾಯೆ,
    ಹರಹರಾ ಮಾಯೆ ಇದ್ದೆಡೆಯ ನೋಡಾ.
    ಶಿವಶಿವಾ ಮಾಯೆ ಇದ್ದೆಡೆಯ ನೋಡಾ.
    ಎರಡೆಂಬತ್ತುಕೋಟಿ ಪ್ರಮಥಗಣಂಗಳು, ಅಂಗಾಲ ಕಣ್ಣವರು
    ಮೈಯೆಲ್ಲಾ ಕಣ್ಣವರು, ನಂದಿ ವಾಹನ ರುದ್ರರು-ಇವರೆಲ್ಲರು,
    ಮಾಯೆಯ ಕಾಲಗಾಹಿನ ಸರಮಾಲೆ ಕಾಣಾ ಗುಹೇಶ್ವರಾ./943

  944. ದೇವಲೋಕದ ದೇವಗಣಂಗಳೆಲ್ಲ ಎನ್ನ ಹೊರಗೆಂಬರು;
    ಅದು ದಿಟವೆ.
    ಸತ್ಯ ಸಾತ್ವಿಕ ಸದ್ಭಕ್ತರು ಎನ್ನ ಹೊರಗೆಂಬರು;
    ಅದು ದಿಟವೆ.
    ಹದಿನಾಲ್ಕು ಭವನದೊಳಗೆ ಅವರು ತಾವಿರಲಿ,
    ನಾ ನಿಮ್ಮೊಳಗು ಗುಹೇಶ್ವರಾ./944

  945. ದೇವಲೋಕದವ[ರೆಲ್ಲರ] ವ್ರತಗೇಡಿಗಳೆಂಬೆ.
    ಮತ್ರ್ಯಲೋಕದವ[ರೆಲ್ಲರ] ಭಕ್ತದ್ರೋಹಿಗಳೆಂಬೆ.
    ದೇವಸಂಭ್ರಮ ಗಣಪದವಿಯ ಕಂಡವರೆಲ್ಲರ
    ಕುಂಭಕರ್ಣನಂತೆ ಅತಿನಿದ್ರಿಗಳೆಂಬೆ.
    ಅನಂತಶೀಲರ ಕಂಡಡೆ ಕೈಕೂಲಿಕಾರರೆಂಬೆ-
    ಗುಹೇಶ್ವರಾ ಲಿಂಗೈಕ್ಯವನರಿಯರಾಗಿ./945

  946. ದೇವಲೋಕದವರ ತೃಣವೆಂಬೆ.
    ಮರ್ತ್ಯಲೋಕದವರ ಕ್ಷಣವೆಂಬೆ.
    ಅಹಂಕಾರವೆಂಬ ಶೃಂಗಾರವ ಮಾಣೆ !
    ಆನಲ್ಲದೆ ಅನ್ಯವ ಅಲ್ಲೆಂಬೆ
    ಗುಹೇಶ್ವರನೆಂಬವನು ತಾನೆ ತಾನಾಗಿ./946

  947. ದೇಶ ಗುರಿಯಾಗಿ ಲಯವಾಗಿ ಹೋದವರ ಕಂಡೆ.
    ತಮಂಧ ಗುರಿಯಾಗಿ ಲಯವಾಗಿ ಹೋದವರ ಕಂಡೆ.
    ಕಾಮ ಗುರಿಯಾಗಿ ಬೆಂದು ಹೋದವರ ಕಂಡೆ.
    ನೀ ಗುರಿಯಾಗಿ ಹೋದವರನಾರನೂ ಕಾಣೆ ಗುಹೇಶ್ವರಾ./947

  948. ದೇಹದೊಳಗೆ ದೇವಾಲಯವಿದ್ದು, ಮತ್ತೆ ಬೇರೆ ದೇಗುಲವೇಕಯ್ಯಾ ?
    ಎರಡಕ್ಕೆ ಹೇಳಲಿಲ್ಲಯ್ಯಾ.
    ಗುಹೇಶ್ವರಾ ನೀನು ಕಲ್ಲಾದಡೆ ನಾನು ಏನಪ್ಪನು ?/948

  949. ದೇಹಭಾವವಳಿದಲ್ಲದೆ ಜೀವಭಾವವಳಿಯದು.
    ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು.
    ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು.
    ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು.
    ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು.
    ಇದು ಕಾರಣ;-
    ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ
    ಗುಹೇಶ್ವರಲಿಂಗದ ಅರಿವು ಸಾಧ್ಯವಪ್ಪುದು ಕಾಣಾ ಸಿದ್ಧರಾಮಯ್ಯಾ. /949

  950. ದೇಹಿಗೆ ದೇಹಿಯಾಗಿರ್ಪುದರ ಭೇದವನು ಆರು ಬಲ್ಲರು ?
    ಹರಿಬ್ರಹ್ಮಾದಿಗಳರಿಯರು, ಮನುಮುನಿಗಳರಿಯರು,
    ಸಿದ್ಧಸಾಧಕರರಿಯರು.
    ಅರಿವಿಂಗೆ ಅರಿವಾಗಿರ್ಪುದನು ನಿನ್ನ ಅರಿವಿಂದ ಅರಿಯಬಹುದೆ ?
    ಗುಹೇಶ್ವರಲಿಂಗವನರಿವಡೆ ನೀನರಿಯದಂತಿರಬೇಕು. /950

  951. ದ್ರವ್ಯ ನೀನು ದ್ರವ್ಯಾರ್ಥ ನೀನು; ಪದ ನೀನು, ಪದಾರ್ಥ ನೀನು.
    ಸಕಲ ನೀನು ನಿಷ್ಕಲ ನೀನು.
    ಸಕಲ ನಿಷ್ಕಲಾತ್ಮಕ ಪರಿಪೂರ್ಣ ಶಿವನಲ್ಲದೆ ಅನ್ಯ ಬಿನ್ನಭಾವ ಉಂಟೆ ?
    ಸಕಲ ನಿಷ್ಕಲ ತತ್ವಂಗಳು; ನಿಮ್ಮೊಳಗೆ ಸಮಾಸವನೆಯ್ದುವೆವೆಂದು
    ತಮ್ಮ ತಮ್ಮ ಅಂಗದ ಮೇಲೆ ಸರ್ವಪದಾರ್ಥಂಗಳ ಹೆಸರಿಟ್ಟು
    ಹೊತ್ತುಕೊಂಡೈದಾವೆ ನೋಡಾ !
    ಅದೆಂತೆಂದಡೆ:
    “ದ್ರವ್ಯಾರ್ಥಂ ಚ ಮಹಾದೇವೋ ದ್ರವ್ಯರೂಪೋ ಮಹೇಶ್ವರಃ
    ಇತಿ ಮೇ ಭೇದನಂ ನಾಸ್ತಿ ಸರ್ವರೂಪಸ್ಸದಾಶಿವಃ” –
    ಇಂತೆಂದುದಾಗಿ-ನಾದ ನೀನು, ಬಿಂದು ನೀನು, ಕಳೆ ನೀನು,
    ಕಳಾತೀತ ನೀನು ಗುಹೇಶ್ವರಾ./951

  952. ಧರೆಯ ಮೇಲಣ ಜನಿತಕ್ಕೆ ಉರಗನ ಅಧರಪಾನ.
    ನಖಕಂಕಣ (ನ ಖ ಕಂ ಕ ಣ ?) ಮುಖ ಮೂವತ್ತೊಂದು ಶಿರವ ನುಂಗಿತ್ತು ನೋಡಾ !
    ಉತ್ತರಾಪಥದ ಕೊಡಗೂಸು ಈಶಾನ್ಯದ ಒಡಲೊಳಗೆ ಅಡಗಿ,
    ಸಾಕಾರದ ಸಂಗವ ನುಂಗಿದ ಭಾಷೆಯನರಿಯದ ಮುಗ್ಧೆ !
    ಅರಿವಿನೊಳಗಣ ಮರಹು, ಮರಹಿನೊಳಗಣ ಅರಿವು
    ಗುಹೇಶ್ವರಲಿಂಗವು ತ್ರಿಕಾಲ ಪೂಜೆಯ ನುಂಗಿತ್ತು./952

  953. ಧರೆಯ ಮೇಲುಳ್ಳ ಅರುಹಿರಿಯರೆಲ್ಲರು ನೆರಹಿ
    ಪರಿಯಾಯಪರೀಕ್ಷೆಯನೊರೆದು, ಬಣ್ಣವ ನೋಡಿ,
    ಸರೋವರದ ಪುಷ್ಪದೊಳು ಭರಿತ ಪರಿಮಳ ತುಂಬಿ,
    ಪರಮಜ್ಞಾನ ಜ್ಯೋತಿ ಪರಬ್ರಹ್ಮವನು ಮೀರಿ
    ಪುರುಷರತ್ನದೊಳಡಗಿ, ಗುಹೇಶ್ವರ ನಿಂದ ನಿಲುವು-
    ಮೇರು ಗಗನವ ನುಂಗಿತ್ತು./953

  954. ಧರೆಯ ಮೇಲುಳ್ಳ ಅರುಹಿರಿಯರೆಲ್ಲರೂ
    ಮರುಳುಗೊಂಡಾಡುತ್ತಿದ್ದಾರೆ ನೋಡಾ.
    ಮಂಜಿನ ಮಡಕೆಯೊಳಗೆ ರಂಜನೆಯ ಭಂಡವ ತುಂಬಿ
    ಅಂಜದೆ ಪಾಕವ ಮಾಡಿಕೊಂಡು ಉಂಡು,
    ಭಂಡವ ಮಾರುತ್ತಿರ್ಪರು ನೋಡಾ.
    ಸಂಜೀವನಿಯ ಬೇರೆ ಕಾಣದೆ ಮರಣಕ್ಕೊಳಗಾದರು
    ಗುಹೇಶ್ವರನನರಿಯದ ಭವಭಾರಕರೆಲ್ಲರು./954

  955. ಧರೆಯ ಮೇಲೊಂದು ಅರಿದಪ್ಪ ರತ್ನ ಹುಟ್ಟಿರಲು,
    ಅದನರಸಲರಸ ಹೋಯಿತ್ತಯ್ಯಾ.
    ನಡುನೀರೊಳಗೆ ಮುಳುಗಿ, ಆಳವರಿದು ನೋಡಿ,
    ಕಂಡೆಹೆನೆಂದಡೆ ಕಾಣಬಾರದು.
    ಧಾರೆವಟ್ಟಲ ಕಳೆದುಕೊಂಡು ನೀರ ಶೋದಿಸಿ ನೋಡಿದಡೆ
    ದೂರದಲ್ಲಿ ಕಾಣಬರುತ್ತಿಹುದು ನೋಡಾ.
    ಸಾರಕ್ಕೆ ಹೋಗಿ ಹಿಡಿದುಕೊಂಡೆನೆಂಬ ದಿರರೆಲ್ಲರ ಮತಿಯ
    ಬಗೆಯ ನುಂಗಿತ್ತು ಗುಹೇಶ್ವರಾ/955

  956. ಧರೆಯ ಮೇಲೊಂದು ಪಿರಿದಪ್ಪ ಸಂತೆಯ ನೆರವಿಗೆ ಬಂದವರನೇನೆಂಬೆನು !
    ಪರಿಪರಿಯ ಭಂಡದ ವ್ಯವಹಾರದೊಳಗೆ ಕೊಡಲಿಲ್ಲ, ಕೊಳಲಿಲ್ಲ.
    ವ್ಯಥಾ ವಿಳಾಸವಿದೇನೊ ?
    ಅರೆಮರುಳೆಂಬ ಶಿವನು,
    ನೆರೆ ಮರುಳೆಂಬ ಜಗವ ಹುಟ್ಟಿಸಿದ ಪರಿಯ ಕಂಡು
    ಬೆರಗಾದೆ ಗುಹೇಶ್ವರಾ./956

  957. ಧರೆಯಗಲದ ಹುಲ್ಲೆ ಹರಿದು ಮೇಯಿತ್ತ ಕಂಡೆ.
    ಬಲೆಯ ಬೀಸುವ ಗಂಡರಾರೂ ಇಲ್ಲ,
    ಹರಿದು ಹಿಡಿದಹೆನೆಂದಡೆ ತಲೆ ಕಾಣಬರುತ್ತಲಿದೆ.
    ಶಿರವ ಹಿಡಿದೆಹೆನೆಂಬವರಿನ್ನಾರೂ ಇಲ್ಲ.
    ಹರಿದಾಡುವ ಹುಲ್ಲೆಯ ಕಂಡು ಹಲವು ಬೇಳಾರ (ಬೆಳ್ಳಾರ?)ವ ಬಿಟ್ಟು,
    ಬೇಟೆಕಾರ ಬಲೆಯ ಬೀಸಿದಡೆ ಹುಲ್ಲೆಯಂಜಿ ಹೋಯಿತ್ತು.
    ಮರುಳುದಲೆಯಲ್ಲಿ ಹುಲ್ಲೆಯನೆಸೆದಯಬೇಕೆಂದು
    ಸರಳ ಬಿಟ್ಟು ಬಾಣವನೊಂದು ಕೈಯಲ್ಲಿ ಹಿಡಿದು (ಹಿಡಿವಡೆ?)
    ಹಳ್ಳಕೊಳ್ಳವ ದಾಂಟಿ ಗಟ್ಟಬೆಟ್ಟವ ಕಳೆದು
    ಅತ್ತ ಬಯಲ ಮರನ ತಾ ಮೊರೆಗೊಂಡಿತ್ತು.
    ಹತ್ತೆ ಸಾರಿದ ಮೃಗವ ತಾನೆಚ್ಚಡೆ
    ನಾರಿ ಹರಿದು ಬಿಲ್ಲು ಮುರಿದು ಹುಲ್ಲೆ ಸತ್ತಿತ್ತು.
    ಅದ ಕಿಚ್ಚಿಲ್ಲದ ನಾಡಿಗೊಯ್ದು ಸುಟ್ಟು ಬಾಣಸವ ಮಾಡಲು
    ಸತ್ತ ಹುಲ್ಲೆ ಕರಗಿ ಶಬ (ಸಬ?) ಉಳಿಯಿತ್ತು.
    ಗುಹೇಶ್ವರಾ ನಿಮ್ಮ ಶರಣ
    ಕಟ್ಟಿದಿರ ಬಾಣಸದ ಮನೆಗೆ ಬಂದನು./957

  958. ಧರೆಯಾಕಾಶ ಕೂಡಿ ಜಗವಾದಂತೆ,
    ಕಾಯ, ಜೀವ ಕೂಡಿ ಸಾವಯವಾದಂತೆ,
    ನಾದ ಬಿಂದು ಕೂಡಿ ಲಿಂಗವಾಯಿತ್ತು.
    ಅದೆಂತೆಂದಡೆ:
    ನಾದ ಬಿಂದು ಶಕ್ತಿ ರೂಪಾಗಿ,
    ಈ ಉಭಯ ಸಂಪುಟದಿಂದ ಲಿಂಗವಾಗಿ,
    ಅದು ಕಾಯ ಜೀವದಂತೆ ಕೂಡಿ ಏಕವಾದಲ್ಲಿ
    ಆ ಕಾಯದಿಂದ ಜೀವ ವಿಯೋಗವಾಗಿಹುದೇ ಗುಹೇಶ್ವರಾ ?/958

  959. ಧರೆಯಾಕಾಶ ತಾರಾಮಂಡಲ ಸಪ್ತಸಮುದ್ರಂಗಳಿಲ್ಲದಂದು,
    ಒಂದು ಮಹಾವೃಕ್ಷವಿದ್ದಿತ್ತಯ್ಯಾ.
    ಆ ವೃಕ್ಷವ ಕಂಡು ನಾನು `ಓಂ ನಮಃ ಶಿವಾಯ’ ಎನುತಿದ್ದೆನು.
    ಆ ವೃಕ್ಷದಿಂದ ಷಡುಸಾದಾಖ್ಯಂಗಳು ಪುಟ್ಟಿದುವು.
    ಆ ಷಡುಸಾದಾಖ್ಯಂಗಳ ನೆಳಲಲ್ಲಿ ಕುಳ್ಳಿರ್ದು
    ನಾನು ಬಸವಾ ಬಸವಾ ಬಸವಾ ಎನುತಿರ್ದೆನು ಕಾಣಾ ಗುಹೇಶ್ವರಾ./959

  960. ಧರೆಯಾಕಾಶವಿಲ್ಲದಂದು, ತ್ರೈಮಂಡಲ ನೆಲೆಗೊಳ್ಳದಂದು,
    ಹೋಮ ನೇಮ ಜಪ ತಪವಿಲ್ಲದಂದು ನಿಮ್ಮನಾರು ಬಲ್ಲರು ?
    ಹರಿ ಬ್ರಹ್ಮಾದಿಗಳಿಗೆ ಅಗೋಚರ, ನಿಲರ್ೆಪ ನಿರಂಜನನಾಗಿ-
    ವೇದಂಗಳರಿಯವು, ಶಾಸ್ತ್ರ ಸ್ಮೃತಿಗಳು ನಿಮ್ಮನರಿಯವು.
    ಗಗನಕಮಲಕುಸುಮ ಪರಿಮಳದಿಂದತ್ತತ್ತಲು
    ಗುಹೇಶ್ವರಾ ನಿಮ್ಮ ನಿಲವನಾರು ಬಲ್ಲರು ?/960

  961. ಧರೆಯೂ ಬ್ರಹ್ಮಾಂಡವೂ ಚಂದ್ರಸೂರ್ಯ ತಾರಾಮಂಡಲವೂ
    ಇಲ್ಲಿಂದತ್ತಲೆ ನೋಡಾ.
    ನರನಲ್ಲ ಸುರನಲ್ಲ ಭ್ರಾಂತನಲ್ಲ ಶರಣನು,
    ಲಿಂಗಸನ್ನಹಿತ ಅಪಾರಮಹಿಮನು.
    ಸುರಾಸುರರೆಲ್ಲರು ನಿಮ್ಮ ವರದಲ್ಲಿ ಸಿಲುಕಿದರು !
    ಸರಸದೊಳಗಲ್ಲ ಹೊರಗಲ್ಲ ಕೇಳು ಭಾವ ಗುಹೇಶ್ವರ. /961

  962. ಧಾತು ಮಾತು ಪಲ್ಲಟಿಸಿದರೆ, ಗಮನವಿನ್ನೆಲ್ಲಿಯದೊ?
    ಧ್ಯಾನ ಮೌನವೆಂಬುದು ತನುಗುಣ ಸಂದೇಹವಯ್ಯಾ.
    ಸುಜ್ಞಾನಭರಿತ, ಅನುಪಮಸುಖಿ-ಗುಹೇಶ್ವರಾ ನಿಮ್ಮ ಶರಣನು./962

  963. ಧೂಪ ದೀಪಾರತಿಯ ಬೆಳಗುವಡೆ, ನೀನು ಸ್ವಯಂಜ್ಯೋತಿಪ್ರಕಾಶನು.
    ಅರ್ಪಿತವ ಮಾಡುವಡೆ, ನೀನು ನಿತ್ಯತೃಪ್ತನು.
    ಅಷ್ಟವಿಧಾರ್ಚನೆಯ ಮಾಡುವಡೆ, ನೀನು ಮುಟ್ಟಬಾರದ ಘನವೇದ್ಯನು.
    ನಿತ್ಯನೇಮಂಗಳ ಮಾಡುವಡೆ ನಿನಗೆ ಅನಂತನಾಮಂಗಳಾದವು
    ಗುಹೇಶ್ವರಾ. /963

  964. ಧ್ಯಾನ ಆಧ್ಯಾತ್ಮಿಕದಲ್ಲಿ ಕಂಡಹೆನೆಂಬುದು
    ಜೀವನಲ್ಲದೆ ಪರಮನಲ್ಲ.
    ಜಪ ತಪ ನೇಮ-ನಿತ್ಯಂಗಳಿಂದ ಕಂಡಹೆನೆಂಬುದು
    ಪ್ರಕೃತಿಯಲ್ಲದೆ ಸುಚಿತ್ತವಲ್ಲ.
    ಭಾವದಿಂದ ಪ್ರಮಾಣಿಸುವುದೆ ಏಕರೂಪು,
    ಗುಹೇಶ್ವರಲಿಂಗವು ತಾನೆ. /964

  965. ಧ್ಯಾನ ಸೂತಕ, ಮೌನ ಸೂತಕ, ಜಪಸೂತಕ, ಅನುಷ್ಠಾನ ಸೂತಕ.
    ಗುಹೇಶ್ವರನೆಂಬ ಲಿಂಗವನರಿದ ಬಳಿಕ ಸೂತಕ ಹಿಂಗಿತ್ತು,
    ಯಥಾ ಸ್ವೇಚ್ಛೆ. /965

  966. ನ ಎಂಬುದೆ ನಂದಿಯಾಗಿ, `ಮ’ ಎಂಬುದೆ ಮಹತ್ತಾಗಿ,
    `ಶಿ’ ಎಂಬುದೆ ರುದ್ರನಾಗಿ, `ವಾ’ ಎಂಬುದೆ ಹಂಸೆಯಾಗಿ,
    `ಯ’ ಎಂಬುದೆ ಅರಿವಾಗಿ, `ಓಂ’ ಕಾರವೆ ಗುರುವಾಗಿ,
    ಸಂಬಂಧವೆ ಅಸಂಬಂಧವಾಗಿ, ಅಸಂಬಂಧವೆ ಸಂಬಂಧವಾಗಿ,
    ಎರಡೂ ಒಂದಾಗಿ ಗುಹೇಶ್ವರಲಿಂಗಸಂಬಂದಿ/966

  967. ನಚ್ಚು ಮಚ್ಚಿನ ಸುಖ ಪರಿಣಾ